ಬೆಂಗಳೂರು; ಸರ್ಕಾರದ ಕಾರ್ಯಕ್ರಮ, ಯೋಜನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುವ ಉದ್ದೇಶದಿಂದ ದರ ಪಟ್ಟಿ ಮೂಲಕ 7.20 ಕೋಟಿ ರು ಗುತ್ತಿಗೆ ಪಡೆದಿರುವ ದ ಪಾಲಿಸಿ ಫ್ರಂಟ್ ಹೆಸರಿನ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಕುರಿತಾದ ಯಾವುದೇ ಮಾಹಿತಿಯನ್ನು ಸರ್ಕಾರವು ವಿಧಾನ ಪರಿಷತ್ಗೆ ಒದಗಿಸಿಲ್ಲ.
ದ ಪಾಲಿಸಿ ಫ್ರಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಮಾಹಿತಿ, ಅವರಿಗೆ ನೀಡುತ್ತಿರುವ ವೇತನ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ವಿಧಾನ ಪರಿಷತ್ನ ಸದಸ್ಯ ಎನ್ ರವಿಕುಮಾರ್ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಆದರೆ ಈ ಪ್ರಶ್ನೆಗೆ ಸರ್ಕಾರವು ಇದುವರೆಗೂ ಉತ್ತರವನ್ನೇ ನೀಡಿಲ್ಲ.
ಸರ್ಕಾರವು ಈ ಕಂಪನಿ ಕುರಿತು ಈ ಹಿಂದೆ ನೀಡಿದ್ದ ಮಾಹಿತಿಯು ಅಪೂರ್ಣವಾಗಿದೆ ಎಂದು ದಾರಿ ತಪ್ಪಿಸುವಂತಿದೆ ಎಂದು ಹಕ್ಕು ಬಾಧ್ಯತಾ ಸಮಿತಿಯ ಮುಂದೆ ಸದಸ್ಯ ಎನ್ ರವಿಕುಮಾರ್ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯು ಇನ್ನೂ ಇತ್ಯರ್ಥವಾಗಿಲ್ಲ. ಈ ಮಧ್ಯೆ ವಿಧಾನ ಪರಿಷತ್ನಲ್ಲಿ ಎನ್ ರವಿಕುಮಾರ್ ಅವರು ಕೇಳಿರುವ ಪ್ರಶ್ನೆಗೆ ಸರ್ಕಾರವು ಉತ್ತರ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕಂಪನಿಯು ಕೇವಲ 1 ಲಕ್ಷ ರು ಬಂಡವಾಳ ಹೊಂದಿತ್ತು. ಇಂತಹ ಕಂಪನಿಗೆ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಕೆಲವೇ ಕೆಲವು ತಿಂಗಳಲ್ಲಿ 7.20 ಕೋಟಿ ಮೊತ್ತದ ಗುತ್ತಿಗೆ ನೀಡಿದ್ದರು. ಈ ಕಂಪನಿಗೆ ಸಂಬಂಧಿಸಿದಂತೆ 2024 ಮತ್ತು 2025ರಲ್ಲಿಯೂ ವಿಧಾನ ಪರಿಷತ್ನಲ್ಲಿ ಇದೇ ಎನ್ ರವಕುಮಾರ್ ಅವರು ಪ್ರಶ್ನೆ ಕೇಳಿದ್ದರು. ಆ ಸಂದರ್ಭದಲ್ಲಿ ಸರ್ಕಾರವು ನೀಡಿದ್ದ ಉತ್ತರವು, ಸದನವನ್ನು ದಾರಿತಪ್ಪಿಸಿತ್ತು. ಇದರಿಂದ ಹಕ್ಕುಚ್ಯುತಿಯಾಗಿದೆ ಎಂದು ಸದಸ್ಯ ಎನ್ ರವಿಕುಮಾರ್ ಅವರು ಹಕ್ಕುಬಾಧ್ಯತೆ ಸಮಿತಿಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಅಂಗೀಕರಿಸಿದ್ದ ಹಕ್ಕುಬಾಧ್ಯತಾ ಸಮಿತಿಯು ಮೂರ್ನಾಲ್ಕು ಬಾರಿ ಸಭೆ ನಡೆಸಿದೆ. ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಮತ್ತಿತರರು ದ ಪಾಲಿಸಿ ಫ್ರಂಟ್ನ ಕಾರ್ಯವೈಖರಿ ಮತ್ತು ಅದರ ಚಟುವಟಿಕೆಗಳ ಕುರಿತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಕೇವಲ 1 ಲಕ್ಷ ರು ಬಂಡವಾಳ ಹೊಂದಿರುವ ಕಂಪನಿಗೆ 7.20 ಕೋಟಿ ರು ಮೊತ್ತದ ಗುತ್ತಿಗೆ ನೀಡಿರುವುದಕ್ಕೆ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಅರ್ಜಿಯು ಇನ್ನೂ ಇತ್ಯರ್ಥವಾಗಿಲ್ಲ.
ಎನ್ ರವಿಕುಮಾರ್ ಅವರು ಕೇಳಿದ್ದ ಪ್ರಶ್ನೆಗಳಲ್ಲೇನಿದೆ?
ಎನ್ ರವಿಕುಮಾರ್ ಅವರು ಪಾಲಿಸಿ ಫ್ರಂಟ್ ಕುರಿತು 2026ರ ಆಗಸ್ಟ್ 20ರಂದು ಚುಕ್ಕೆ ಗುರುತಿಲ್ಲದ ಪ್ರಶ್ನೆ (ಸಂಖ್ಯೆ; 502) ಕೇಳಿದ್ದರು.
ದ ಪಾಲಿಸಿ ಫ್ರಂಟ್ ಎಂಬ ಕಂಪನಿಯು 2023ರ ಮೇ 22ರಂದು ಸಂಜೆ 4 ಗಂಟೆಗೆ ಖರೀದಿಸಿದ ಸ್ಟಾಂಪ್ ಪೇಪರ್ನಲ್ಲಿ ಕೇವಲ 1 ಲಕ್ಷ ಪಾಲು ಬಂಡವಾಳದೊಂದಿಗೆ ಯಾವುದೇ ಕಾರ್ಯಾನುಭವ ಇಲ್ಲದಿರುವ ಕಂಪನಿಗೆ 7 ಕೋಟಿಗೂ ಹೆಚ್ಚು ಮೊತ್ತದ ಆದೇಶವನ್ನು ಯಾವ ಕಾರಣಕ್ಕೆ ನೀಡಲಾಗಿದೆ? (ವಿವರ ನೀಡುವುದು)
ದ ಪಾಲಿಸಿ ಫ್ರಂಟ್ ಯಾವ ರೀತಿಯ ಸೇವೆಗೆ 7 ಕೋಟಿಗೂ ಹೆಚ್ಚು ಮೊತ್ತವನ್ನು ನೀಡಲಾಗುತ್ತಿದೆ, ಟೆಂಡರ್ ಕರೆಯದೇ ಯಾವುದೇ ವಿಳಾಸ ಇಲ್ಲದೇ ಯಾವುದೇ ನೌಕರರನ್ನು ಹೊಂದದಿರುವ ಕಂಪನಿಗೆ ಅಷ್ಟು ಮೊತ್ತ ನೀಡಲು ಕಾರಣವೇನು? (ವಿವರ ನೀಡುವುದು)

ದ ಪಾಲಿಸಿ ಫ್ರಂಟ್ ಕಂಪನಿಯಲ್ಲಿರುವ ನೌಕರರ ಸಂಖ್ಯೆ ಅವರಿಗೆ ಪಾವತಿಸಲಾಗುತ್ತಿರುವ ವೇತನ, ಸದರಿ ನೌಕರರು ಯಾವ ದಿನಾಂಕದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರಿಗೆ ಇರುವ ಜವಾಬ್ದಾರಿಗಳ ಸಮಗ್ರ ಮಾಹಿತಿಯನ್ನು ಸದರಿ ನೌಕರರ ಹೆಸರು, ಅವರ ಹುದ್ದೆ, ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆಯೊಂದಿಗೆ ಮಾಹಿತಿ ನೀಡುವುದು.

ಈ ಪ್ರಶ್ನೆಗೆ ಉತ್ತರ ನೀಡಬೇಕಿದ್ದ ಸರ್ಕಾರವು ಇದುವರೆಗೂ ಉತ್ತರವನ್ನೇ ನೀಡಿಲ್ಲ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕೈಗಾರಿಕೆ ವಾಣಿಜ್ಯ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಸ್ಟೇಟ್ ಮಾರ್ಕೆಂಟಿಂಗ್ ಕಮ್ಯುನಿಕೇಷನ್ಸ್ ಉತ್ತರ ನೀಡಬೇಕಿತ್ತು. ಈ ಹಿಂದೆಯೂ ಕರ್ನಾಟಕ ಸ್ಟೇಟ್ ಮಾರ್ಕೇಟಿಂಗ್ ಕಮ್ಯುನಿಕೇಷನ್ಸ್ ಉತ್ತರ ನೀಡಿರಲಿಲ್ಲ. ಈ ಸಂಬಂಧ ಅಧಿಕಾರಿಗಳು ಸಚಿವ ಎಂ ಬಿ ಪಾಟೀಲ್ ಅವರೊಂದಿಗೆ ಚರ್ಚಿಸಿದ್ದರು.
7.20 ಕೋಟಿ ಮೊತ್ತದ ಗುತ್ತಿಗೆ ಮುಂದುವರಿಕೆ; ಟೆಂಡರ್ ಇಲ್ಲದೇ ‘ದ ಪಾಲಿಸಿ ಫ್ರಂಟ್’ಗೆ ಫಟಾಫಟ್ ಕಾರ್ಯಾದೇಶ
ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ಯಾವುದೇ ಟೆಂಡರ್ ಕರೆಯದೇ ಈ ಕಂಪನಿಗೆ ಸರ್ಕಾರವು ಮತ್ತೊಮ್ಮೆ ಕಾರ್ಯಾದೇಶ ನೀಡಿತ್ತು.
ಪಾಲಿಸಿ ಫ್ರಂಟ್ ಪ್ರಕರಣದಲ್ಲಿ ಸರ್ಕಾರವು ಸದನವನ್ನು ತಪ್ಪುದಾರಿಗೆ ಎಳೆದಿದೆ ಎಂದು ಸದಸ್ಯ ಎನ್ ರವಿಕುಮಾರ್ ಅವರು ಹಕ್ಕುಬಾಧ್ಯತಾ ಸಮಿತಿ ಮುಂದೆ ಅರ್ಜಿ ಸಲ್ಲಿಸಿದ್ದರು.
ದ ಪಾಲಿಸಿ ಫ್ರಂಟ್ ಪಾಲುದಾರನ ಬಂಡವಾಳ ಬಯಲು ಮಾಡಿದ ಕೆಎಸ್ಎಂಸಿಎ; ಹಕ್ಕುಬಾಧ್ಯತಾ ಸಮಿತಿ ನಡವಳಿ ಬಹಿರಂಗ
ಹಕ್ಕುಭಾಧ್ಯತಾ ಸಮಿತಿ ಮುಂದೆ ಈ ಅರ್ಜಿಯ ವಿಚಾರಣೆ ನಡೆದಿತ್ತು. ಈ ವೇಳೆ ಪಾಲಿಸಿ ಫ್ರಂಟ್ ನ ಬಂಡವಾಳವೂ ಬಯಲಾಗಿತ್ತು.
7.20 ಕೋಟಿ ರು ಮೊತ್ತದ ಗುತ್ತಿಗೆ ನೀಡಲು ಈ ಕಂಪನಿಗೆ ಅರ್ಹತೆ ಇದೆಯೋ ಇಲ್ಲವೋ ಎಂದು ನಾವು ಹೇಳುವುದಕ್ಕೆ ಆಗುವುದಿಲ್ಲ ಎಂದು ಇಲಾಖೆಯು ಸಮಿತಿ ಮುಂದೆ ಹೇಳಿಕೆ ನೀಡಿತ್ತು.
ಅಲ್ಲದೇ ಈ ಕಂಪನಿಯೊಂದಿಗೆ ಟರ್ಮ್ಸ್ ಆಫ್ ಕಾಂಟ್ರಾಕ್ಟ್ ನ್ನು ಇಲಾಖೆಯು ಮಾಡಿಕೊಂಡಿರಲಿಲ್ಲ. ಈ ಕುರಿತು ಸಮಿತಿ ಸಭೆಯಲ್ಲಿ ಚರ್ಚೆಯಾಗಿತ್ತು.
ಈ ಕಂಪನಿ ಕುರಿತು ಹಕ್ಕುಬಾಧ್ಯತೆ ಸಮಿತಿ ಮುಂದೆ ಇಷ್ಟೆಲ್ಲಾ ವಿಚಾರಗಳು ಚರ್ಚೆಯಾಗಿದ್ದರೂ ಕಂಪನಿ ನೌಕರರ ಮಾಹಿತಿ, ಅವರಿಗೆ ನೀಡುತ್ತಿರುವ ವೇತನ ಕುರಿತು ವಿಧಾನ ಪರಿಷತ್ಗೆ ಮಾಹಿತಿ ಉತ್ತರವನ್ನೇ ನೀಡಿಲ್ಲ. ಸರ್ಕಾರದ ಈ ನಡೆಯು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಪ್ರಶ್ನೆಗಳಿಗೆ 3 ವರ್ಷಗಳಾದರೂ ಸಹ ಹಲವು ಇಲಾಖೆಗಳು ಉತ್ತರವನ್ನೇ ನೀಡಿಲ್ಲ. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.




