ಮೈಕ್ರೋ ಫೈನಾನ್ಸ್‌ ಕಿರುಕುಳ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ದೂರುಗಳ ವಿವರವಿಲ್ಲ, ಪ್ರಕರಣಗಳೂ ದಾಖಲಾಗಿಲ್ಲ

ಬೆಂಗಳೂರು; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ (ಎಸ್‌ಕೆಡಿಆರ್‍‌ಪಿ) ದ ಪ್ರತಿನಿಧಿಗಳು  ಕಿರುಕುಳ ನೀಡಿದ್ದಾರೆ ಎಂದು  ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದರೂ ಸಹ ಈ ಯಾವ ದೂರುಗಳ ವಿವರಗಳನ್ನು ಸರ್ಕಾರವು  ಸದನಕ್ಕೆ ಒದಗಿಸಿಲ್ಲ.

 

ವಿಧಾನಸಭೆಯಲ್ಲಿ ಶಾಸಕ ಡಾ ಸಿ ಎನ್‌ ಅಶ್ವಥ್‌ ನಾರಾಯಣ್ ಅವರು ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಅಂಕಿ ಅಂಶಗಳ ಸಮೇತ ಒದಗಿಸಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

 

 

ದಕ್ಷಿಣ ಕನ್ನಡ ಜಿಲ್ಲೆಯ  ಕಡಬ ತಾಲೂಕಿನ ಬಂತ್ರ ಗ್ರಾಮದ ಕೃಷ್ಣ ರೈ ಎಂಬುವರು ಸೇರಿದಂತೆ ಹಲವರು ವಿವಿಧ ಠಾಣೆಗಳಲ್ಲಿ ದೂರುಗಳನ್ನು ಸಲ್ಲಿಸಿದ್ದಾರೆ.   ಸಂಘವು ಆರ್‍‌ಬಿಐ ನಿಯಮವನ್ನು ಪಾಲಿಸುತ್ತಿಲ್ಲ ಮತ್ತು ಅವ್ಯವಹಾರ ನಡೆಸುತ್ತಿದೆ ಎಂದು ಹಲವರು  ದೂರಿನಲ್ಲಿ ವಿವರಿಸಿದ್ದರು. ಆದರೆ  ಸರ್ಕಾರವು ಸದನಕ್ಕೆ ನೀಡಿರುವ  ಉತ್ತರದಲ್ಲಿ ದೂರುಗಳ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಅಲ್ಲದೇ 2023ರಿಂದ 2025ರವರೆಗೆ ಯಾವ ಪ್ರಕರಣಗಳೂ ದಾಖಲಾಗಿಲ್ಲ ಎಂದು ಮಾಹಿತಿ ಒದಗಿಸಿದೆ.

 

ಮೈಕ್ರೋ ಫೈನಾನ್ಸ್‌ ಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ಜಿಲ್ಲಾವಾರು ಪಟ್ಟಿಯನ್ನು ಒದಗಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು,  ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ‘ಶೂನ್ಯ’ ಎಂದು ಮಾಹಿತಿ ಒದಗಿಸಿದ್ದಾರೆ.   ಅದೇ ರೀತಿ  ಒಬ್ಬರನ್ನೂ ಬಂಧಿಸಿಲ್ಲ ಎಂದು ಉತ್ತರಿಸಿದ್ದಾರೆ.

 

ಈಚೆಗಷ್ಟೇ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಪ್ರತಿನಿಧಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಡಾ ಜಿ ಪರಮೇಶ್ವರ್‌ ಅವರು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

 

 

 

ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮೈಕ್ರೋ ಫೈನಾನ್ಸ್‌ ಕಿರುಕುಳದಿಂದಾಗಿ   ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

 

 

ಮ್ರೈಕ್ರೋ ಫೈನಾನ್ಸ್‌ ಹಾವಳಿ ತಡೆಯಲು ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಟ್ಟಾರೆ  30 ಪ್ರಕರಣಗಳು ದಾಖಲಾಗಿವೆ.   69 ಮಂದಿ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಅದೇ ರೀತಿ ಮೈಕ್ರೋ ಫೈನಾನ್ಸ್‌ ಕಂಪನಿಗಳ ಕಿರುಕುಳ ತಾಳಲಾರದೇ ಕಳೆದ ಮೂರು ವರ್ಷಗಳಲ್ಲಿ 32 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಮೈಕ್ರೋ ಫೈನಾನ್ಸ್‌  ಸಂಸ್ಥೆಗಳ ಕಿರುಕುಳಕ್ಕೆ ಆತ್ಮಹತ್ಯೆ  ಮಾಡಿಕೊಂಡಿರುವ ಪೈಕಿ ಕೆಲವರಿಗಷ್ಟೇ ಸರ್ಕಾರವು ಪರಿಹಾರ ಮೊತ್ತ ವಿತರಿಸಿದೆ. ಮತ್ತು ಇನ್ನು ಹಲವು ಪ್ರಕರಣಗಳಲ್ಲಿ  ಪರಿಹಾರ ವಿತರಣೆ ಸಂಬಂಧ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದಿದೆ.

 

ಮೈಕ್ರೋ ಫೈನಾನ್ಸ್‌ ಹಾವಳಿ ಕುರಿತು ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 118 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಒಟ್ಟು 300 ಮಂದಿಯನ್ನು ಬಂಧಿಸಿದೆ.  2023ರಲ್ಲಿ 6 ಪ್ರಕರಣಗಳಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ. 2024ರಲ್ಲಿ 22 ಪ್ರಕರಣಗಳಲ್ಲಿ   59 ಮಂದಿ, 2025ರಲ್ಲಿ 90 ಪ್ರಕರಣಗಳಲ್ಲಿ 231 ಮಂದಿಯನ್ನು ಬಂಧಿಸಲಾಗಿದೆ ಎಂದು ಸಚಿವ ಜಿ ಪರಮೇಶ್ವರ್‍‌ ಅವರು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ಮೈಕ್ರೋ ಫೈನಾನ್ಸ್‌ ಕಂಪನಿಗಳ ಕಿರುಕುಳ ತಾಳಲಾರದೇ ಕಳೆದ ಮೂರು ವರ್ಷಗಳಲ್ಲಿ  32 ಮಂದಿ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. 2023ರಲ್ಲಿ 8 ಮಂದಿ, 2024ರಲ್ಲಿ 7 ಮಂದಿ, 2025ರಲ್ಲಿ 17 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಮ್ರೈಕ್ರೋ ಫೈನಾನ್ಸ್‌ ಹಾವಳಿ ತಡೆಯಲು ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದ ನಂತರ 30 ಪ್ರಕರಣಗಳು ದಾಖಲಾಗಿವೆ. 69 ಮಂದಿ ವಿರುದ್ಧ ಮೊಕದ್ದಮೆ ದಾಖಲಾಗಿವೆ. 2025ರಲ್ಲಿ ತುಮಕೂರು ಜಿಲ್ಲೆಯಲ್ಲಿ 8, ರಾಮನಗರದಲ್ಲಿ 3, ಮೈಸೂರಿನಲ್ಲಿ 2, ಮಂಡ್ಯದಲ್ಲಿ 3, ಕೊಡಗು 3, ವಿಜಯಪುರದಲ್ಲಿ 5, ಗದಗ ಜಿಲ್ಲೆಯಲ್ಲಿ 5, ಹಾವೇರಿಯಲ್ಲಿ 10, ಉತ್ತರ ಕನ್ನಡದಲ್ಲಿ 19 ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದ್ದಾರೆ.

 

 

2025ರಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 15, ಗದಗ್‌ನಲ್ಲಿ 13, ಹಾವೇರಿಯಲ್ಲಿ  47 ಮಂದಿ, ಉತ್ತರ ಕನ್ನಡದಲ್ಲಿ 61, ಉಡುಪಿಯಲ್ಲಿ 10 ಮಂದಿ ಸೇರಿ ಒಟ್ಟಾರೆ 231 ಮಂದಿಯನ್ನು ಬಂಧಿಸಲಾಗಿದೆ.

 

2025ರಲ್ಲಿ 17 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡದ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ ಶೂನ್ಯಕೆಲವು ಜಿಲ್ಲೆಗಳಲ್ಲಿ ಮಾತ್ರ ಸರ್ಕಾರವು ಪರಿಹಾರ ಒದಗಿಸಿರುವುದು ಉತ್ತರದಿಂದ ತಿಳಿದು ಬಂದಿದೆ.

 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದೇವಿರಮ್ಮ ಅವರ ಕುಟುಂಬಕ್ಕೆ 8,10,000 ರು. , 2025ರಲ್ಲಿ ದಾದಾಪೀರ್‍‌ ಎಂಬುವರು ಆತ್ಮಹತ್ಯೆಮಾಡಿಕೊಂಡಿದ್ದಾರೆ.  ಇವರಿಗೆ  ಪರಿಹಾರ ಒದಗಿಸಿದೆ ಎಂದು ಸರ್ಕಾರವು ಉತ್ತರದಲ್ಲಿ  ಹೇಳಿದೆಯಾದರೂ ಎಷ್ಟು ಮೊತ್ತ ಪಾವತಿಸಿದೆ ಎಂಬ ವಿವರಗಳನ್ನು ಒದಗಿಸಿಲ್ಲ.

 

 

 

ಮಂಡ್ಯ ಜಿಲ್ಲೆಯ ಮಹಾಲಕ್ಷ್ಮಿ ಎಂಬುವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 8,25,000 ರು., ಪ್ರೇಮ ಎಂಬುವರಿಗೆ ಪರಿಹಾರ ನೀಡಬೇಕು ಎಂದು ಪತ್ರ ಬರೆದಿದೆ.

 

 

ಸುಗ್ರೀವಾಜ್ಞೆ ಜಾರಿಗೊಳಿಸಿದ ನಂತರ ಉತ್ತರ ಕನ್ನಡದಲ್ಲಿ 7 ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 19 ಮಂದಿ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಉಳಿದಂತೆ ಕೆಲವು ಜಿಲ್ಲೆಗಳಲ್ಲಿ ಒಂದರೆಡು ಪ್ರಕರಣಗಳು ದಾಖಲಾಗಿವೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಿರುಸಾಲ ನೀಡುವ ಚಟುವಟಿಕೆಗಳ ಕಾರ್ಯಾಚರಣೆ ನಡೆಸುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ನೌಕರರ ವಿರುದ್ಧ ರಾಜ್ಯದ ಹಲವು ಪೊಲೀಸ್‌ ಠಾಣೆಗಳಲ್ಲಿ ದೂರುಗಳು ಸಲ್ಲಿಕೆಯಾಗಿದ್ದವು.

 

ಆರ್‍‌ಬಿಐ ನಿಯಮಗಳನ್ನು ಉಲ್ಲಂಘಿಸಿ ವಾರದ ಬಡ್ಡಿ ವಿಧಿಸುತ್ತಿರುವುದು, ಅರ್ಜಿದಾರರ ಸ್ವ ಸಹಾಯ ಸಂಘದ ಬ್ಯಾಂಕ್‌ ಪಾಸ್‌ ಬುಕ್‌, ಪಿಆರ್‍‌ಕೆ ಬಾಂಡ್‌ ಕೊಡದೇ ಸಂಘವು ಬಡ್ಡಿ ದಂಧೆ ನಡೆಸುತ್ತಿದೆ. ಈ ಸಂಘದ ಅಧ್ಯಕ್ಷರಾದ ಡಾ ವೀರೇಂದ್ರ ಹೆಗ್ಡೆ ಅವರ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂಬ ದೂರು ಸಹ ಸಲ್ಲಿಕೆಯಾಗಿತ್ತು.

 

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಅತೀ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದೆ ಎಂದು ಮಳವಳ್ಳಿ ಕಾಂಗ್ರೆಸ್ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಬಹಿರಂಗವಾಗಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಈ ಸಂಘವು ಮೈಕ್ರೋ ಫೈನಾನ್ಸ್‌ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ಹೇಳಿಕೆ ನೀಡಿದ್ದರು. ಈ ಮಧ್ಯೆ ಮೈಕ್ರೋ ಫೈನಾನ್ಸ್‌  ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತ್ತು.

ಬಡ್ಡಿ ದಂಧೆ, ಮೀಟರ್ ಬಡ್ಡಿ, ಬೆದರಿಕೆ ಆರೋಪ; ಧರ್ಮಸ್ಥಳ ಸಂಘದ ವೀರೇಂದ್ರ ಹೆಗ್ಗಡೆ ಸೇರಿ ಹಲವರ ವಿರುದ್ಧ ದೂರು

 

ಶ್ರೀ ಕ್ಷೇತ್ರ ಎಸ್‌ಕೆಡಿಆರ್‍‌ಡಿಪಿ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರವಣಬೆಳಗೊಳದ ಶಾಖೆಯ ಸುನೀತಾ ಮತ್ತು ಸಿಒ ನಿರ್ವಾಹಕರಾದ ಅನಿಲ್‌ ಕುಮಾರ್‍‌ ಮತ್ತು ಟ್ರಸ್ಟ್‌ನ ಇತರೆ ಸದಸ್ಯರು ಸಿಬ್ಬಂದಿಯು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಹೇಂದ್ರ ಎಂಬುವರ ಕುಟುಂಬದ ಸದಸ್ಯರಿಗೆ ನಿಯಮ ಮೀರಿ ವಿಪರೀತ ಬಡ್ಡಿ ವಿಧಿಸಿದ್ದಾರೆ. ಮತ್ತು ಪ್ರತಿ ವಾರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ (ದೂರಿನ ಸಂಖ್ಯೆ; 1/1623/2025- ದಿನಾಂಕ 02/01/2025) ವಿವರಿಸಿತ್ತು.

 

ದಕ್ಷಿಣ ಕನ್ನಡ ಜಿಲ್ಲೆಯ  ಕಡಬ ತಾಲೂಕಿನ ಬಂತ್ರ ಗ್ರಾಮದ ಕೃಷ್ಣ ರೈ ಎಂಬುವರು ಸಂಘವು ಆರ್‍‌ಬಿಐ ನಿಯಮವನ್ನು ಪಾಲಿಸುತ್ತಿಲ್ಲ ಮತ್ತು ಅವ್ಯವಹಾರ ನಡೆಸುತ್ತಿದೆ ಎಂದು ದೂರಿದ್ದಾರೆ. ಈ ದೂರಿನಲ್ಲಿಯೂ ಸಂಘದ ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷ ಅನಿಲ್‌ಕುಮಾರ್‍‌ ಎಂಬುವರ ಹೆಸರನ್ನು ಉಲ್ಲೇಖಿಸಿತ್ತು.

 

ಅದೇ ರೀತಿ ಇದೇ ಕಡಬ ತಾಲೂಕಿನ ಹಳೆನೆರಂಕಿ ಗ್ರಾಮದ ಎಂ ದಿವಾಕರ ಎಂಬುವರೂ ಸಹ ಸಂಘವು ಆರ್‍‌ಬಿಐ ನಿಯಮವನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ. ಈ ಸಂಘದ ಸಿಬ್ಬಂದಿಯು ಅರ್ಜಿದಾರರಿಗೆ ತೊಂದರೆ ನೀಡಿದ್ದಾರೆ ಎಂದು ದೂರಿನಲ್ಲಿ (ದೂರಿನ ಸಂಖ್ಯೆ 177/ಪಿಟಿನ್‌/ಕೆಪಿಎಸ್‌/2024, ದಿನಾಂಕ 25.12.2024) ವಿವರಿಸಿತ್ತು.

 

 

ಬಂಟ್ವಾಳದ ಕುಕ್ಕಡಕಟ್ಟೆಯ ಬಲಪುನಿ ಗ್ರಾಮದ ನೂರ್‍‌ ಜಾನ್‌ ಎಂಬ ಅರ್ಜಿದಾರರಿಗೆ ಸಂಗದ ನಳಿನಾಕ್ಷಿ ಮತ್ತು ಇತರರು ಕಿರುಕುಳ ನೀಡಿದ್ದಾರೆ ಎಂದು 2024ರ ಫೆ.2ರಂದೇ ದೂರಿತ್ತು.

 

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೆಡುಬೆಲ್ಲದ ಹರೀಶ್‌ ಅಮೀನ್‌ ಎಂಬುವರು ಪಡೆದಿದ್ದ 3.00 ಲಕ್ಷ ರು. ಮೊತ್ತದ ಸಾಲಕ್ಕೆ ನಿಯಮ ಮೀರಿ ಬಡ್ಡಿ ವಿಧಿಸಿದ್ದಾರೆ ಮತ್ತು ಇದಕ್ಕೆ ಮೀಟರ್‍‌ ಬಡ್ಡಿ ವಿಧಿಸಲಾಗಿದೆ. ಪ್ರತಿ ವಾರವೂ 8-10 ಮಂದಿ ಮನೆಗೆ ನುಗ್ಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು (ದೂರಿನ ಸಂಖ್ಯೆ; 377/ಪಿಟಿಎನ್/ಎಸ್‌ಎಚ್‌ಆರ್‍‌/ಯುಡಿ/2024, ದಿನಾಂಕ 23.12.2024) ದೂರಲಾಗಿದೆ. ಈ ದೂರಿನಲ್ಲಿಯೂ ಸಂಘದ ಸಿಓ ಅನಿಲ್‌ ಕುಮಾರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿತ್ತು.

 

ಬೆಳ್ತಂಗಡಿಯ ರೇಖ್ಯಾ ಗ್ರಾಮದ ಜಯಶ್ರೀ ಅವರಿಗೂ ಸಂಘದ ಅಧ್ಯಕ್ಷ , ಸಿಓ ಮತ್ತು ಸದಸ್ಯರು ನಿಯಮ ಮೀರಿ ವಿಪರೀತವಾಗಿ ವಾರದ ಬಡ್ಡಿ ವಿಧಿಸಿದ್ದಾರೆ. ಪ್ರತಿ ವಾರ ಮನೆಗೆ ನುಗ್ಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ (ದೂರಿನ ಸಂಖ್ಯೆ; 355/ಒಪಿಎಸ್‌/2024, ದಿನಾಂಕ 30/12/2024) ವಿವರಿಸಿತ್ತು.

 

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುಂಚಪಡಿ ಗ್ರಾಮದ ಕಮಲ ಎಂಬುವರು ಪಡೆದಿದ್ದ ಸಾಲವನ್ನು ಮರು ಪಾವತಿಸಲು ಬಾಕಿ ಇರಿಸಿಕೊಂಡಿದ್ದರು. ಸಾಲ ಮರುಪಾವತಿಸಲು ಬಾಕಿ ಇದ್ದುದರಿಂದ ಸಂಘದ ಅಧ್ಯಕ್ಷ ಅನಿಲ್‌ಕುಮಾರ್‍‌ ಮತ್ತು ಇತರ ಸದಸ್ಯರು ಕಿರುಕುಳ ನೀಡಿದ್ದಾರೆ ಎಂದು 2024ರ ಡಿಸೆಂಬರ್‍‌ 16ರಂದೇ ದೂರಿತ್ತು.

 

 

ಮಂಡ್ಯ ಜಿಲ್ಲೆಯ ಮೇಲುಕೋಟೆ ತಾಲೂಕಿನ ಎಚ್‌ ಆರ್‍‌ ಉಮಾದೇವಿ ಎಂಬುವರು ಪಡೆದಿದ್ದ ಸಾಲಕ್ಕೆ ಸಂಘದ ಸಿಒ ಅನಿಲ್‌ಕುಮಾರ್ ಮತ್ತು ಇತರೆ ಸದಸ್ಯರು ನಿಯಮ ಮೀರಿ ವಿಪರೀತವಾದ ಬಡ್ಡಿ ವಿಧಿಸಿದ್ದರು ಎಂದು ದೂರಿನಲ್ಲಿ ಆಪಾದಿಸಿದ್ದರು. ಅಲ್ಲದೇ ಪ್ರತಿ ವಾರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದೂ ದೂರಿತ್ತು.

 

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಡಕಪ್ಪ ಬಿ ಎಂಬುವರು ಎಸ್‌ಕೆಡಿಆರ್‍‌ಡಿಪಿ ಸಂಘದಲ್ಲಿ ಹಣ ಪಡೆದಿದ್ದರು. ಇದನ್ನು ಮರು ಪಾವತಿಸಿದ್ದರು. ಆದರೆ ಸಂಘದ ಅನುಮೇಶ ಮತ್ತು ಸಿದ್ದರಾಮ ಎಂಬುವರು ಮಾಹಿತಿ ನೀಡುತ್ತಿಲ್ಲ ಎಂದು ವಡಕಪ್ಪ ಅವರು 2024ರ ಡಿಸೆಂಬರ್‍‌ 19ರಂದು ದೂರಿದ್ದರು.

 

ವಿಜಯನಗರ ಜಿಲ್ಲೆಯ ಹೆಚ್‌ಬಿ ಹಳ್ಳಿ ತಾಲೂಕಿನ ಮೋರಗೇರಿ ಗ್ರಾಮದ ನೀಲಗುಂಡ ಎಂಬುವರು ಸಂಘದಿಂದ ಪಡೆದಿದ್ದ ಸಾಲಕ್ಕೆ ಹಂತಹಂತವಾಗಿ ಮರುಪಾವತಿಸಿದ್ದರು. ಆದರೆ ಸಂಘದ ನಾಗವೇಣಿ, ಪೂಜಾ ಮತ್ತು ಸೂಪರ್‍‌ವೈಜರ್‍‌ ಗುತ್ತೆಪ್ಪ ಎಂಬುವರು ರಸೀದಿ ನೀಡಿಲ್ಲ. ಬದಲಿಗೆ ಬೆದರಿಕೆ ಹಾಕಿದ್ದರು ಎಂದು ನೀಲಗುಂಡ ಅವರು 2024ರ ನವೆಂಬರ್‍‌ 29ರಂದು ( ಸಂಖ್ಯೆ 328/2024) ದೂರು ನೀಡಿದ್ದರು.

 

 

ಉಡುಪಿಯ ತೆಂಕುಬಿರ್ತಿಯ ವಿಮಲ ಎಂಬುವರು ಸಹ ಎಸ್‌ಕೆಡಿಆರ್‍‌ಡಿಪಿಯ ಸಿಬ್ಬಂದಿಯಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಕುರಿತು 2025ರ ಜನವರಿ 3ರಂದು ದೂರು (ಸಂಖ್ಯೆ; 9/1208/2025) ನೀಡಿದ್ದಾರೆ. ಕುಂದಾಪುರದ ಅಂಗಲಿ ಗ್ರಾಮದ ಚಂದ್ರ ಕಾಲಂಜೆ ಎಂಬುವರು ಸಹ ಸಂಘದ ಹಣಕಾಸಿನ ವ್ಯವಹಾರದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿ ದೂರು (ಸಂಖ್ಯೆ; 306/ಪಿಟಿನ್‌/ಕೆಎನ್‌ಡಿ/2024, ದಿನಾಂಕ 02/12/2024) ದಾಖಲಿಸಿದ್ದರು.

 

ಅದೇ ರೀತಿ ಕಾರ್ಕಳದ ಅಬ್ದುಲ್‌ ಎಂಬುವರು ಎಸ್‌ಕೆಡಿಆರ್‍‌ಡಿಪಿ ಸಂಘದಿಂದ 2 ಲಕ್ಷ ರು ಸಾಲ ಪಡೆದಿದ್ದರು. ಇವರು ಪ್ರತಿ ವಾರ 1,500 ರು. ನಂತೆ ಸಾಲವನ್ನು ಮರು ಪಾವತಿಸುತ್ತಿದ್ದರು. ಒಂದು ವರ್ಷದಿಂದ ಸಾಲ ಪಾವತಿಸಿರಲಿಲ್ಲ. ಅದಕ್ಕೆ ಸಂಘದ ರಮ್ಯ ಮತ್ತು ಇತರೆ 8-10 ಮಂದಿ ನಿಯಮ ಮೀರಿ ಬಡ್ಡಿ ವಿಧಿಸಿದ್ದರು. ಅಲ್ಲದೇ ಪ್ರತಿ ವಾರ ಮನೆಗೆ ಬಂದು ಮಾನಸಿಕ ಹಿಂಸೆ, ತೊಂದರೆ ನೀಡಿದ್ದರು ಎಂದು ಅಬ್ದುಲ್‌ ಎಂಬುವರು (ಸಂಖ್ಯೆ; ಪಿಟಿನ್‌/589/ಕೆಟಿಪಿಎಸ್‌ 2024/ ದಿನಾಂಕ 27/12/2024) ದೂರಿನಲ್ಲಿ ವಿವರಿಸಿದ್ದರು.

 

ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್‌ ಟಿ ಕೆ ಎಂಬುವರು ವೀರೇಂದ್ರ ಹೆಗಡೆ, ಅನಿಲ್‌ಕುಮಾರ್, ಜಯರಾಮ್‌ ನೆಲ್ಲಿಕಾಯಿ, ಮಂಡ್ಯ ಜಿಲ್ಲಾ ನಿರ್ದೇಶಕ ಪಾಂಡಿಯನ್‌ ಅವರ ವಿರುದ್ಧ ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ. ‘ ಸಾಲದ ಹಣ ಮರು ಪಾವತಿಗೆ ಸಂಬಂಧಿಸಿದಂತೆ ಅವಾಚ್ಯ ಶಬ್ದಗಳ ನಿಂದನೆ ಸಹಿಸಲಾರದೆ ಮಂಡ್ಯ ಜಿಲ್ಲೆ ಮಳವಳ್ಳಿಯ ತಾಲೂಕು ಮಡಿಯೂರು ಗ್ರಾಮದ ಮಹಾಲಕ್ಷ್ಮಿ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ,’ ಎಂದು ಇ-ಮೇಲ್‌ನಲ್ಲಿ ಸಲ್ಲಿಸಿರುವ ದೂರಿನಲ್ಲಿ ಹೇಳಲಾಗಿತ್ತು.

 

 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಸಂಧ್ಯಾ ಎಂಬುವರು ಸಹ ಸಂಘದ ಭವ್ಯ ಎಂಬುವರ ವಿರುದ್ಧ (ಪಿಟಿಎನ್‌/787/ಬಿಆರ್‍‌ಪಿಎಸ್‌/2024, 26/12/2024) ದೂರಿದ್ದಾರೆ. ಸಾಲ ಮರು ಪಾವತಿ ಮತ್ತು ಬಡ್ಡಿ ವಸೂಲಿಗಾರರು ವಸೂಲಿ ವಿಚಾರದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ್ದರು.

 

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಆನಂದ್‌ ಎಂಬುವರು ಸಂಘದಿಂದ ಪಡೆದಿದ್ದ ಸಾಲವನ್ನು ತೀರಿಸಿದ್ದರು. ಆದರೆ ಉಳಿತಾಯದ ಹಣದ ವಿಚಾರವಾಗಿ ಸಂಘದವರು ಸರಿಯಾಗಿ ಲೆಕ್ಕ ನೀಡಿಲ್ಲ ಎಂದು ದೂರಿನಲ್ಲಿ ಆಪಾದಿಸಿದ್ದಾರೆ. ಹಾಗೆಯೇ ಉಡುಪಿಯ ಕುಂಜಿಗುಡ್ಡದ ಶ್ರೀಕಾಂತ್‌ ಆಚಾರ್ಯ ಅವರು ಸಂಘದಿಂದ 2.50 ಲಕ್ಷ ರು. ಹಣವನು ಸಾಲವಾಗಿ ಪಡೆದಿದ್ದರು. ಈ ಹಣವನ್ನು ಬಡ್ಡಿ ಸಮೇತ ಕಟ್ಟಬೇಕು ಎಂದು ರಮ್ಯ, ಶಾರದ ರೈ ಎಂಬುವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು (ಸಂಖ್ಯೆ; ಪಿಟಿನ್‌/17/1224/2025, 04/01/2025) ದೂರಿನಲ್ಲಿ ಅಳಲು ವ್ಯಕ್ತಪಡಿಸಿದ್ದರು.

 

ಕುಂಜಿಗುಡ್ಡದ ನಾರಾಯಣ ಆಚಾರ್ಯ ಎಂಬುವರು ಸಹ ಸಂಘದಿಂದ 2.00 ಲಕ್ಷ ರು ಸಾಲ ಪಡೆದಿದ್ದರು. ಈ ಹಣವನ್ನು ಬಡ್ಡಿ ಸಮೇತ ಕಟ್ಟಬೇಕು ಎಂದು ಸಂಘದ ರಮ್ಯ ಮತ್ತು ಶಾರದ ರೈ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು (ದೂರಿನ ಸಂಖ್ಯೆ; 18/1224/2025 ದಿನಾಂಕ 04/01/2025) ಎಂದು ಆರೋಪಿಸಿದ್ದರು.

 

ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕ ಅನಿಲ್‌ಕುಮಾರ್‍‌ ಹಾಗೂ ಸದಸ್ಯರು ಮತ್ತು ಸಿಬ್ಬಂದಿಯು ಆರ್‍‌ಬಿಐನ ನಿಯಮಗಳನ್ನು ಪಾಲಿಸದೇ ವ್ಯವಹಾರ ನಡೆಸುತ್ತಿದ್ದಾಋಎ. ಇವರ ನಿರ್ದಶನದ ಮೇರೆಗೆ ಸಂಸ್ಥೆಯ ಪ್ರತಿನಿಧಿಯಾಗಿರುವ ಮೀನಾಕ್ಷಿ ಎಂಬುವರು ಹಣ ಮಾರು ಮರು ಪಾವತಿಸಲು ಗಲಾಟೆ ಮಾಡುತ್ತಿದ್ದಾರೆ ಎಂದು ವಿರಾಜಪೇಟೆಯ ವಿ ಗೀತ ಎಂಬುವರು (ಎಲ್‌ಪಿನಂ 07/2024/ ದಿನಾಂಕ 04/01/2025) ದೂರಿದ್ದರು.

 

 

ಕುಜುಮರುಗುಡ್ಡೆಯ ರತ್ನಾವತಿ ಆಚಾರ್ಯ ಎಂಬುವರು ಸಂಘದ ಅಧಿಕಾರಿಗಳ ವಿರುದ್ಧ ದೂರಿದ್ದಾರೆ. ಧರ್ಮಸ್ಥಳ ಸಂಘದಿಂದ ಪಡೆದಿದ್ದ ಸಾಲಕ್ಕೆ ಸಮರ್ಪಕ ದಾಖಲೆಗಳನ್ನು ನೀಡುತ್ತಿಲ್ಲ ಎಂದು ( ಸಿಎನ್‌ಒ 08/ಪಿಟಿಎನ್/ಕೆಟಿಪಿಎಸ್‌/2025, ದಿನಾಂಕ 05/01/2025) ಆರೋಪಿಸಿದ್ದರು.

 

ಕೊಡಗು ಜಿಲ್ಲೆಯ ಶುಂಠಿಕೊಪ್ಪದ ಜಯಂತ್‌ ಎಸ್‌ ಎಂಬವರು ಸಂಘದ ಚಿತ್ರ ಎಂಬುವರ ವಿರುದ್ಧ ದೂರಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಹಾಗೂ ಮೈಕ್ರೋ ಫೈನಾನ್ಸ್‌ ಸಂಸ್ಥೆಯಿಂದ ಹಾಗೂ ಇತರೆ ಸಂಘದಿಂದ ಜಯಂತ್‌ ಅವರು ಸಾಲ ಪಡೆದಿದ್ದರು. ಎಸ್‌ಕೆಡಿಆರ್‍‌ಪಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಯು ಅರ್ಜಿದಾರರ ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು (ಎಲ್‌ಪಿಟಿಎನ್ 07/2025, ದಿನಾಂಕ 05/01/2025) ಆಪಾದಿಸಿದ್ದರು.

 

ಮಂಡ್ಯದ ಕೆ ಆರ್‍‌ ಪೇಟೆ ಟೌನ್‌ನ ರಾಜೇಶ್ವರಿ ಎಂಬುವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಸಾಲ ಪಡೆದಿದ್ದರು. ಈ ಸಾಲವನ್ನು ಮರು ಪಾವತಿಸಿದ್ದರು. ಆದರೆ ಉಳಿತಾಯ ಪಾಸ್‌ ಬುಕ್‌ ಮತ್ತು ಇತರೆ ದಾಖಲೆಗಳನ್ನು ನೀಡಿರಲಿಲ್ಲ. ಸಂಘದ ಕೆಆರ್‍‌ ಪೇಟೆಯ ಶಾಖೆಯ ಅಧ್ಯಕ್ಷರು ಮತ್ತು ಇತರರು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

 

 

ದಕ್ಷಿಣ ಕನ್ನಡದ ಸಂತೋಷ್‌ ಕುಮಾರ್‍‌ ಎಂಬುವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ ವೀರೇಂದ್ರ ಹೆಗ್ಡೆ ಅವರ ವಿರುದ್ಧವೂ ( ಒಪಿಆರ್‍‌ 11/ಪಿಟಿನ್‌/ಕೆಪಿಎಸ್‌/2025, 17/01/2025) ದೂರಿದ್ದಾರೆ. ಆರ್‍‌ಬಿಐ ನಿಯಮಗಳನ್ನು ಉಲ್ಲಂಘಿಸಿ ವಾರದ ಬಡ್ಡಿ ವಿಧಿಸಲಾಗುತ್ತಿದೆ. ಅರ್ಜಿದಾರರ ಸ್ವ ಸಹಾಯ ಸಂಘದ ಬ್ಯಾಂಕ್‌ ಪಾಸ್‌ ಬುಕ್‌ , ಪಿಆರ್‍‌ಕೆ ಬಾಂಡ್‌ ಕೊಡದೇ ಬಡ್ಡಿ ದಂಧೆ ನಡೆಸಲಾಗುತ್ತಿದೆ. ಈ ಸಂಘದ ಅಧ್ಯಕ್ಷರಾದ ಡಾ ವೀರೇಂದ್ರ ಹೆಗ್ಡೆ ಅವರ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts