Monday | July 27, 2026 |

ಖಾಸಗಿ ಬ್ಯಾಂಕ್‌ಗಳಲ್ಲಿ 1,731.16 ಕೋಟಿ ಠೇವಣಿ; ಕಡತ ಬಹಿರಂಗಕ್ಕೆ ನಕಾರ, ಆರ್‍‌ಟಿಐ ಅರ್ಜಿ ತಿರಸ್ಕಾರ

ಬೆಂಗಳೂರು; ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಮಂಡಳಿಗಳು ಖಾಸಗಿ ಮತ್ತು ಸರ್ಕಾರಿ  ಬ್ಯಾಂಕ್‌ಗಳಲ್ಲಿ ಇರಿಸಿರುವ  1,731.16 ಕೋಟಿ ರು.ಗಳನ್ನು ಠೇವಣಿ ವಿವರದ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದೆ.

 

ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳು ಮತ್ತು ಮಂಡಳಿಗಳು ಸರ್ಕಾರದ ಖಜಾನೆಯಲ್ಲಿಯೇ ಖಾತೆಗಳನ್ನು ತೆರೆದು ಅಲ್ಲಿಯೇ ಜಮೆ ಮಾಡುವುದು ಮತ್ತು  ನಿರ್ವಹಿಸಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶ ಹಾಗೂ  ಈ ಸಂಬಂಧ ಆರ್ಥಿಕ ಇಲಾಖೆಯು ಹೊರಡಿಸಿದ್ದ ಸುತ್ತೋಲೆ ಕುರಿತಾದ ಕಡತವನ್ನು ಬಹಿರಂಗಗೊಳಿಸಲು ಸರ್ಕಾರವು ನಿರಾಕರಿಸಿದೆ. ಅಲ್ಲದೇ ಮಾಹಿತಿ ಹಕ್ಕು ಅಧಿನಿಯಮ ಸೆಕ್ಷನ್‌ 8 (ಹೆಚ್‌) ಅಡಿಯಲ್ಲಿ ಅರ್ಜಿಯನ್ನು ತಿರಸ್ಕರಿಸಿದೆ.

 

ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಲ್ಲಿನ  ಆರ್ಥಿಕ ಅಪರಾಧ ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ಅವರು ರಾಜೀನಾಮೆ ನೀಡಿರುವ  ಬೆನ್ನಲ್ಲೇ  ಆರ್ಥಿಕ ಇಲಾಖೆಯು  2024ರ ಮೇ 30ರಂದು ರಾಜ್ಯಮಟ್ಟದ ಬ್ಯಾಂಕರ್‍‌ಗಳ ಸಮಾಲೋಚನ ಮಂಡಳಿಗೆ ಆರ್ಥಿಕ ಇಲಾಖೆಯು ಪತ್ರ ಬರೆದಿತ್ತು.

 

ಈ ಪತ್ರದಲ್ಲಿ ಉಲ್ಲೇಖಿಸಿದ್ದ ಕಡತ (ಸಂಖ್ಯೆ FD 384 EXP-3/2024) ಪಡೆಯಲು ‘ದಿ ಫೈಲ್‌’ 2024ರ ಜೂನ್‌ 6ರಂದು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ  ಅರ್ಜಿ ಸಲ್ಲಿಸಿತ್ತು.

 

ಈ ಅರ್ಜಿಗೆ ಆರ್ಥಿಕ ಇಲಾಖೆಯು 2024ರ ಜೂನ್‌ 24ರಂದು ಉತ್ತರ ಒದಗಿಸಿದೆ.

 

ಉತ್ತರದಲ್ಲೇನಿದೆ?

 

ಸದರಿ ಅರ್ಜಿಯನ್ನು ಪರಿಶೀಲಿಸಲಾಯಿತು. ಮಾಹಿತಿ ಹಕ್ಕು ಅಧಿನಿಯಮ ಸೆಕ್ಷನ್‌ 8 (ಹೆಚ್‌) ರ ಪ್ರಕಾರ ಈ ಅಧಿನಿಯಮದಲ್ಲಿ ಏನೇ ಇದ್ದರೂ ಯಾರೇ ನಾಗರೀಕರಿಗೆ ಈ ಮುಂದಿನ ಮಾಹಿತಿಯನ್ನು ನೀಡುವುದು ಕಡ್ಡಾವಾಗಿರತಕ್ಕದ್ದಲ್ಲ. ಅಂದರೇ ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ತಗಿರಿಗೆ ಅಥವಾ ಪ್ರಾಸಿಕ್ಯೂಷನ್‌ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂತೆ ಮಾಹಿತಿಯಾಗಿದೆ. ಆದ್ದರಿಂದ ತಮ್ಮ ಅರ್ಜಿಯಲ್ಲಿ ಕೋರಿರುವ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಈ ಅರ್ಜಿಯನ್ನು ಪರಿಗಣಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.

 

ಎಸ್‌ಎಲ್‌ಬಿಸಿಗೆ ಬರೆದಿದ್ದ ಪತ್ರದಲ್ಲೇನಿತ್ತು?

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ ಸುಮಾರು 94 ಕೋಟಿ ರು. ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣ ಬೆಳಕಿಗೆ ಬಂದ ನಂತರ ಸರ್ಕಾರವು ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳು ಖಾಸಗಿ ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ಇರಿಸಿದ್ದ ಹಣವನ್ನು ರಾಜ್ಯ ಹುಜೂರ್‍‌ ಖಜಾನೆಗೆ ವಾಪಸ್‌ ಮಾಡಬೇಕು ಎಂದು ಎಲ್ಲಾ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯವಸ್ಥಾಪಕ ನಿರ್ದಶಕರಿಗೆ ಸೂಚಿಸಿತ್ತು. ಇದೇ ಸೂಚನಾ ಪತ್ರವನ್ನು ಎಸ್‌ಎಲ್‌ಬಿಸಿಗೂ ಕಳಿಸಿತ್ತು.

 

2024ರ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಆದೇಶವನ್ನು ಪುನರುಚ್ಛರಿಸಿರುವ ಇಲಾಖೆಯು, ಸಮುದಾಯಗಳ ಅಭಿವೃದ್ಧಿ ನಿಗಮ, ಮಂಡಳಿಗಳು ಖಾಸಗಿ ಬ್ಯಾಂಕ್‌ಗಳಲ್ಲಿ ತೆರೆದಿರುವ ಎಲ್ಲಾ ಬಗೆಯ ಖಾತೆಗಳನ್ನೂ ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅಲ್ಲದೇ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಮಂಡಳಿಗಳು ಯಾವ್ಯಾವ ಬ್ಯಾಂಕ್‌ನಲ್ಲಿ ಎಷ್ಟೆಷ್ಟು ಹಣವನ್ನು ಇರಿಸಿದೆ ಎಂಬ ಪಟ್ಟಿಯನ್ನೂ ಮಾಡಿತ್ತು.

 

 

 

 

 

ಆದರೆ ಈ ಪತ್ರಕ್ಕೆ ಸಂಬಂಧಿಸಿದಂತೆ ತೆರೆದಿದ್ದ ಸಮಗ್ರ ಕಡತವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲು ಸರ್ಕಾರವು ಹಿಂದೇಟು ಹಾಕಿದೆ. ಮಾಹಿತಿ ಹಕ್ಕು ಅಧಿನಿಯಮ ಸೆಕ್ಷನ್‌ 8 (ಹೆಚ್‌)ನ್ನು ನೆಪವಾಗಿರಿಸಿಕೊಂಡು ಈ ಯಾವ ಮಾಹಿತಿಯನ್ನೂ ಒದಗಿಸಿಲ್ಲ. ಬದಲಿಗೆ ಆರ್‍‌ಟಿಐ ಅರ್ಜಿಯನ್ನೇ ತಿರಸ್ಕರಿಸಿದೆ.

 

ಸರ್ಕಾರವು ಎಸ್‌ಎಲ್‌ಬಿಸಿಗೆ ಬರೆದಿರುವ ಪತ್ರದಲ್ಲಿ ಎಲ್ಲಿಯೂ ಗೌಪ್ಯ ಎಂದು ಉಲ್ಲೇಖಿಸಿಲ್ಲ. ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಸರ್ಕಾರವು ಕೋಟ್ಯಂತರ ರುಪಾಯಿ ಅನುದಾನ ನೀಡಿದೆ. ಈ ಅನುದಾನ ಎಲ್ಲಿ, ಯಾವ ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗಿದೆ, ಯಾವ ದಿನಾಂಕದಂದು ಎಷ್ಟು ಹಣ ಡ್ರಾ ಮಾಡಲಾಗಿದೆ, ಬಳಸಿರುವ ಹಣವನ್ನು ಎಲ್ಲಿ, ಹೇಗೆ ಖರ್ಚು ಮಾಡಲಾಗಿದೆ, ಯಾರ್‍ಯಾರಿಗೆ ವರ್ಗಾವಣೆ ಆಗಿದೆ  ಎಂಬ ಮಾಹಿತಿ ಹೊಂದುವುದು ಸಾರ್ವಜನಿಕರ ಹಕ್ಕು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

 

ಆದರೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಈ ಹಕ್ಕನ್ನೂ ಮೊಟಕುಗೊಳಿಸಿದೆ. ಅಲ್ಲದೇ  ಈ ಪತ್ರಕ್ಕೆ ಸಂಬಂಧಿಸಿದಂತೆ ತೆರೆದಿರುವ ಕಡತ ಮತ್ತು ಮತ್ತಿತರೆ ದಾಖಲೆಗಳನ್ನು ಒದಗಿಸದೇ ಇರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಆರ್ಥಿಕ ಇಲಾಖೆಯು ಮಾಡಿರುವ ಪಟ್ಟಿಯ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಬಹುತೇಕ ನಿಗಮಗಳು ಬ್ಯಾಂಕ್‌ ಆಫ್‌ ಬರೋಡಾದಲ್ಲಿಯೇ ಖಾತೆ ತೆರೆದಿವೆ. ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆಗಳಲ್ಲಿ ಈ ನಿಗಮಗಳು ಕೋಟ್ಯಂತರ ರುಪಾಯಿಗಳನ್ನು ಇರಿಸಿದ್ದವು.

ನಿಗಮಗಳಿಂದ ಆದೇಶ ಉಲ್ಲಂಘನೆ; ಬಿಒಬಿ ಸೇರಿ ಖಾಸಗಿ ಬ್ಯಾಂಕ್‌ಗಳಲ್ಲಿ 1,731.16 ಕೋಟಿ ರು ಠೇವಣಿ

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೊಂದೇ ಬ್ಯಾಂಕ್‌ ಆಫ್‌ ಬರೋಡಾ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ 310.99 ಕೋಟಿ ರು.ಗಳನ್ನು ಇರಿಸಿತ್ತು. ಇದೀಗ ಸರ್ಕಾರದ ಸೂಚನೆಯಂತೆ ಈ ಬ್ಯಾಂಕ್‌ನಲ್ಲಿ ಖಾತೆಗಳಲ್ಲಿದ್ದ ಇಷ್ಟೂ ಮೊತ್ತವನ್ನು ಹಿಂಪಡೆದು ರಾಜ್ಯ ಸರ್ಕಾರ ಖಜಾನೆಯಲ್ಲಿನ ಖಾತೆಗಳಿಗೆ ವರ್ಗಾಯಿಸಿದೆ.

 

 

ಉಪ್ಪಾರ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ 7.40 ಕೋಟಿ ರು.,   ವೀರಶೈವ ಲಿಂಗಾಯುತ ಅಭಿವೃದ್ಧಿ ನಿಗಮವು ಸಹ  61.52 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌ನಲ್ಲಿ 10.51 ಕೋಟಿ ರು.ಗಳನ್ನು ಇರಿಸಿದೆ.

 

ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ70.73 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌ನಲ್ಲಿ 15.40 ಲಕ್ಷ ರು.ಗಳನ್ನು ಇರಿಸಿದೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ 8.42 ಕೋಟಿ ರು.ಗಳನ್ನು ಇರಿಸಿದೆ. ಬಾಬು ಜಗಜೀವನ್‌ ಚರ್ಮೋದ್ಯಮ ಅಭಿವೃದ್ಧಿ ಮಂಡಳಿಯು ಯೂನಿಯನ್‌ ಬ್ಯಾಂಕ್‌ನಲ್ಲಿ 1.14 ಕೋಟಿ ರು. ಮೊತ್ತವನ್ನು ಇರಿಸಿದೆ.

 

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮವು ಬ್ಯಾಂಕ್‌ ಆಫ್‌ ಬರೋಡಾದಲ್ಲಿ 1,123.57 ಕೋಟಿ ರು.ಗಳನ್ನು ಇರಿಸಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಯೂನಿಯನ್‌, ಕೆನರಾ ಬ್ಯಾಂಕ್‌ನಲ್ಲಿ 110.64 ಕೋಟಿ ರು.ಗಳನ್ನು ಇರಿಸಿದೆ.

 

ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಕೆನರಾ ಬ್ಯಾಂಕ್‌, ಐಡಿಬಿಐ, 12.85 ಲಕ್ಷ ರು., ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಐಸಿಐಸಿಐ ಮತ್ತು ಎಸ್‌ಬಿಐನಲ್ಲಿ 25.93 ಕೋಟಿ ರು.ಗಳನ್ನು ಇರಿಸಿರುವುದು ಗೊತ್ತಾಗಿದೆ.

 

ಸರ್ಕಾರದ ಖಜಾನೆಯಲ್ಲಿ ತೆರೆದಿರುವ ಖಾತೆಗಳಲ್ಲಿಯೇ ನಿಗಮ ಮಂಡಳಿಗಳು ಹಣವನ್ನು ಜಮಾ ಮಾಡಬೇಕು ಎಂದು ಸರ್ಕಾರವು 2023ರ ಏಪ್ರಿಲ್‌ 17ರಂದು ಆದೇಶದಲ್ಲಿ ಸೂಚಿಸಿತ್ತು. ಆದರೂ ಹಲವು ಅಭಿವೃದ್ಧಿ ನಿಗಮಗಳು ಕ್ರಮ ಜರುಗಿಸಿರಲಿಲ್ಲ. ಅಲ್ಲದೇ ಆದೇಶವನ್ನು ಉಲ್ಲಂಘಿಸಿದ್ದರೂ ಆರ್ಥಿಕ ಇಲಾಖೆಯೂ ಸಹ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ.

Hot this week

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

ದೇಶದಲ್ಲಿ 5.64 ಕೋಟಿ, ರಾಜ್ಯದಲ್ಲಿ 23.21 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ; ನ್ಯಾಯಾಲಯಗಳಲ್ಲಿ ಕೆಲಸದ ಒತ್ತಡ, ನ್ಯಾಯದಾನವೂ ವಿಳಂಬ

ಬೆಂಗಳೂರು: ದೇಶದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 5.64 ಕೋಟಿಗೂ ಅಧಿಕ ಪ್ರಕರಣಗಳು...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...
Please Scan to make Your Contribution

Topics

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಗೆ ಸಚಿವರ ಪಟ್ಟು; ಐಎಎಸ್‌, ಕೆಎಎಸ್‌ಯೇತರ ಅಧಿಕಾರಿ ನೇಮಕಕ್ಕೆ ಮುಂದಾಗಿರುವುದೇಕೆ?

ಬೆಂಗಳೂರು; ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಸರಬರಾಜು ನಿಗಮವನ್ನು ಸ್ಥಾಪಿಸಿರುವ ರಾಜ್ಯ...

Related Articles

Popular Categories

error: Content is protected !!