ಮೈಸೂರು; ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಭಗ್ನಾವಶೇಷ ಘಟಕವು ಇನ್ನೂ ಆರಂಭಗೊಂಡಿಲ್ಲ. ಅಷ್ಟೇ ಅಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ 5,000 ರು ದಿಂದ 10,000 ರುವರೆಗೆ ದಂಡ ವಿಧಿಸುವ ತೀರ್ಮಾನವನ್ನೂ ಹಿಂಪಡೆದಿಲ್ಲ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ಈ ತೀರ್ಮಾನಕ್ಕೆ ಮೈಸೂರು ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು 3 ವರ್ಷವನ್ನು ಪೂರ್ಣಗೊಳಿಸಿದ್ದರೂ ಸಹ ಪಾಲಿಕೆ ಕೈಗೊಂಡಿದ್ದ ತೀರ್ಮಾನವನ್ನು ರದ್ದುಗೊಳಿಸಿಲ್ಲ.
ಈ ಸಂಬಂಧ ದಿ ಫೈಲ್ ಆರ್ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ 2026ರ ಮೇ 2ರಂದು ನೀಡಿರುವ ಉತ್ತರದಲ್ಲಿಯೂ ಸಹ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ತೀರ್ಮಾನ ಮತ್ತು ಬೈಲಾ ಪ್ರತಿಯನ್ನು ಒದಗಿಸಿದೆ. ಈ ಉತ್ತರದ ಪ್ರಕಾರ ಹಿಂದಿನ ಸರ್ಕಾರದಲ್ಲಿ ವಿಧಿಸಿದ್ದ ದಂಡವೇ ಚಾಲ್ತಿಯಲ್ಲಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಹಂಚ್ಯಾ-ಸಾತಗಳ್ಳಿ ಪ್ರದೇಶದ ನಂ. 05, ‘ಎ’ ವಿಭಾಗದ ಸಿಎ ನಿವೇಶನದಲ್ಲಿ ದಿನಕ್ಕೆ 100 ಟನ್ (100 TPD) ಸಾಮರ್ಥ್ಯದ ಕಟ್ಟಡ ಭಗ್ನಾವಶೇಷ ತ್ಯಾಜ್ಯ ಸಂಸ್ಕರಣಾ ಘಟಕವೂ ಇನ್ನೂ ನಿರ್ಮಾಣ ಹಂತದಲ್ಲಿದೆ. ಇದುವರೆಗೂ ಈ ಘಟಕವು ಕಾರ್ಯಾರಂಭಗೊಂಡಿರುವುದಿಲ್ಲ. ಆದರೂ ಸಹ ನಿಗದಿತ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡದಿದ್ದರೇ ಈಗಲೂ 5,000 ರು ನಿಂದ 10,000 ರು ವರೆಗೆ ದಂಡ ವಿಧಿಸಲಾಗುತ್ತಿದೆ.

ಕರ್ನಾಟಕ ಪೌರನಿಗಮಗಳ ಅಧಿನಿಯಮ (ಸಂಖ್ಯೆ 55/2013 ರ ಪ್ರಕರಣ 431-ಎ ಷೆಡ್ಯೂಲ್ XIII ರನ್ವಯ) ಪ್ರಕಾರ ಮೊದಲನೇ ಬಾರಿ ಸಾರ್ವಜನಿಕರು ಕಟ್ಟಡ ಭಗ್ನಾವಶೇಷ ತ್ಯಾಜ್ಯವನ್ನು ನಿಗದಿತ ಜಾಗದಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಮೊದಲನೇ ಬಾರಿಗೆ 5000/- ರೂಪಾಯಿಗಳು ಪುನರಾವರ್ತನೆಯಾದಲ್ಲಿ 10,000/- ದಂಡ ವಿಧಿಸಲು ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಮುಂದೆ 2021ರ ನವೆಂಬರ್ 12ರಲ್ಲೇ ಟಿಪ್ಪಣಿ ಮಂಡಿಸಿತ್ತು. ಈ ಕುರಿತು ಚರ್ಚಿಸಿದದ ಪಾಲಿಕೆಯು 2022ರ ಡಿಸೆಂಬರ್ 8ರಂದು ನಡೆಸಿದ್ದ ಸಾಮಾನ್ಯ ಸಭೆಯು ಅನುಮೋದಿಸಿತ್ತು.


ಇನ್ನೂ ಕಾರ್ಯಾರಂಭಗೊಳ್ಳದ 100 ಟಿಪಿಡಿ ಸಾಮರ್ಥ್ಯದ ಘಟಕ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ವತಿಯಿಂದ ಹಂಚ್ಯಾ-ಸಾತಗಳ್ಳಿ ಪ್ರದೇಶದ ನಂ. 05, ‘ಎ’ ವಿಭಾಗದ ಸಿಎ ನಿವೇಶನದಲ್ಲಿ ದಿನಕ್ಕೆ 100 ಟನ್ (100 TPD) ಸಾಮರ್ಥ್ಯದ ಕಟ್ಟಡ ಭಗ್ನಾವಶೇಷ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ. ಆದರೆ ಈ ಘಟಕವು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಕಾರ್ಯಾರಂಭಗೊಂಡಿರುವುದಿಲ್ಲ ಎಂಬುದನ್ನು ಪಾಲಿಕೆಯೇ ಮಾಹಿತಿ ಹಕ್ಕಿನಡಿ ತನ್ನ ಉತ್ತರದಲ್ಲಿ (ನಂ. ಹೆಚ್1/ಘವನಿ-3/56/2025-26 ದಿನಾಂಕ 24.11.2025) ಅಧಿಕೃತವಾಗಿ ಒಪ್ಪಿಕೊಂಡಿದೆ.

ಸಾರ್ವಜನಿಕರಿಗೆ ಕಟ್ಟಡ ತ್ಯಾಜ್ಯವನ್ನು ಅಧಿಕೃತವಾಗಿ ಹಸ್ತಾಂತರಿಸಲು ಯಾವುದೇ ಗುತ್ತಿಗೆದಾರರ ವ್ಯವಸ್ಥೆಯಾಗಲಿ ಅಥವಾ ಸಹಾಯವಾಣಿ ಸಂಖ್ಯೆಯಾಗಲಿ ಲಭ್ಯವಿಲ್ಲದಿರುವುದು ನಾಗರಿಕರನ್ನು ಅಸಹಾಯಕರನ್ನಾಗಿಸಿದೆ. ಪಾಲಿಕೆಯು ಜನವರಿ 2023 ರಿಂದ ಅಕ್ಟೋಬರ್ 2025 ರವರೆಗಿನ ಅವಧಿಯಲ್ಲಿ ಇಡೀ ನಗರದಿಂದ ಒಂದು ಲಕ್ಷ ರು ದಂಡ ವಸೂಲಿ ಮಾಡಿದೆ.

ನಾಗರಿಕರು ಹೊಸ ಮನೆ ಅಥವಾ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸುವಾಗ ಸೃಷ್ಟಿಯಾಗುವ ತ್ಯಾಜ್ಯ ವಿಲೇವಾರಿಗೆ ಇರುವ ನಿಯಮಗಳು ಮತ್ತು ಕಳೆದ ಎರಡು ವರ್ಷಗಳಲ್ಲಿ ನಗರದಲ್ಲಿ ನೀಡಲಾದ ಒಟ್ಟು ಕಟ್ಟಡ ಧ್ವಂಸ ಅನುಮತಿಗಳ ಬಗ್ಗೆ ಕೋರಿದ್ದ ಪ್ರಮುಖ ಮಾಹಿತಿಗೆ ಆರೋಗ್ಯ ಶಾಖೆಯು ಸ್ಪಷ್ಟ ಉತ್ತರ ನೀಡಿಲ್ಲ. ಆರ್ಟಿಐ ನಿಯಮ 6(3) ರ ಅಡಿಯಲ್ಲಿ ಕಡತವನ್ನು ನಗರ ಯೋಜನಾ ವಿಭಾಗಕ್ಕೆ ವರ್ಗಾಯಿಸಿ ಕೈತೊಳೆದುಕೊಂಡಿದೆ. ಇದುವರೆಗೂ ನಗರ ಯೋಜನಾ ವಿಭಾಗವೂ ಈ ಸಂಬಂಧ ಯಾವುದೇ ಮಾಹಿತಿ ಒದಗಿಸಿಲ್ಲ.

ರಾಷ್ಟ್ರೀಯ ಸ್ವಚ್ಛತಾ ಸಮೀಕ್ಷೆಗಳ ಹೊಳಪಿನಿಂದ, ಘನತ್ಯಾಜ್ಯದ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಮೈಸೂರಿನಲ್ಲಿ, ಹೊಸ ಕಟ್ಟಡಗಳ ಹಾಗೂ ಬಡಾವಣೆಗಳ ನಿರ್ಮಾಣದಿಂದಾಗಿ ನಗರದ ಮೂಲೆ ಮೂಲೆಗಳು ಕಾಂಕ್ರೀಟ್ ಅವಶೇಷಗಳ ತಾಣವಾಗಿ ಮಾರ್ಪಡುತ್ತಿವೆ. ಮೈಸೂರು ನಗರವು ದಿನಂಪ್ರತಿ ಉತ್ಪತ್ತಿ ಮಾಡುವ ಘನತ್ಯಾಜ್ಯದ ಪೈಕಿ ಬಹುಪಾಲು ಕಾಂಕ್ರೀಟ್ ಹಾಗೂ ಕಟ್ಟಡ ಭಗ್ನಾವಶೇಷಗಳೇ (C&D Waste) ಆಗಿದ್ದರೂ, ಪಾಲಿಕೆಯ ಆಮೆಗತಿಯ ಆಡಳಿತ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಲಭ್ಯವಿರುವ ದಾಖಲೆಗಳಿಂದ ತಿಳಿದು ಬಂದಿದೆ.

ಕೇಂದ್ರ ಸರ್ಕಾರದ ಅಧಿಸೂಚನೆಗಳು ಮತ್ತು ಪಾಲಿಕೆಯ ನಿಯಮ ಉಲ್ಲಂಘನೆ
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಹೊರಡಿಸಿರುವ ಅಧಿಸೂಚನೆ G.S.R. 219(E) (ಕಟ್ಟಡ ಭಗ್ನಾವಶೇಷ ತ್ಯಾಜ್ಯ ನಿರ್ವಹಣಾ ನಿಯಮಗಳು, 2016) ಪ್ರಕಾರ, ಕಟ್ಟಡ ಭಗ್ನಾವಶೇಷ ತ್ಯಾಜ್ಯ ನಿರ್ವಹಣೆಗೆ ನಗರ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗಿದೆ. ಈ ನಿಯಮದ ಪ್ರಕಾರ 1 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳ ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ವೈಜ್ಞಾನಿಕ ಮರುಬಳಕೆ ಘಟಕಗಳನ್ನು ಸ್ಥಾಪಿಸಬೇಕು. ದಿನಕ್ಕೆ 20 ಟನ್ಗಿಂತ ಹೆಚ್ಚು ತ್ಯಾಜ್ಯ ಸೃಷ್ಟಿಸುವ ದೊಡ್ಡ ಬಿಲ್ಡರ್ಗಳು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗೆ ವಿಲೇವಾರಿ ಯೋಜನೆ (Waste Management Plan) ಸಲ್ಲಿಸಬೇಕು. ಆದರೆ ಹಂಚ್ಯಾ-ಸಾತಗಳ್ಳಿಯ 100 ಟಿಪಿಡಿ ಘಟಕ ಇನ್ನೂ ಕಾರ್ಯಾರಂಭ ಮಾಡದಿರುವುದು ಮತ್ತು ಟೌನ್ ಪ್ಲಾನಿಂಗ್ ವಿಭಾಗದಲ್ಲಿ ಯಾವುದೇ ದತ್ತಾಂಶ ಲಭ್ಯವಿಲ್ಲ. ಇದು ಈ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ.

ಹೊರವಲಯದ ಬಡಾವಣೆಗಳಿಗೆ ಹರಡಿದ ಭಗ್ನಾವಶೇಷದ ವಿಲೇವಾರಿ
ಅಧಿಕೃತ ವಿಲೇವಾರಿ ವ್ಯವಸ್ಥೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮೈಸೂರಿನ ಪ್ರಮುಖ ವಸತಿ ಮತ್ತು ವಾಣಿಜ್ಯ ಬಡಾವಣೆಗಳಾದ ದಟ್ಟಗಳ್ಳಿ, ಇಲವಾಲ ಹಾಗೂ ಸಾತಗಳ್ಳಿ ಸೇರಿದಂತೆ ವಿವಿಧ ಲೇಔಟ್ಗಳ ಸುತ್ತಮುತ್ತ ಅಕ್ರಮವಾಗಿ ಕಟ್ಟಡದ ಅವಶೇಷಗಳನ್ನು ಎಗ್ಗಿಲ್ಲದೆ ಸುರಿಯಲಾಗುತ್ತಿದೆ. ಮನೆ ನವೀಕರಿಸುವ ಅಥವಾ ಹೊಸ ಕಟ್ಟಡ ಕಟ್ಟುವ ನಾಗರಿಕರಿಗೆ ತ್ಯಾಜ್ಯವನ್ನು ಹಸ್ತಾಂತರಿಸಲು ಯಾವುದೇ ಅಧಿಕೃತ ವೇದಿಕೆಯೇ ಇಲ್ಲದಿರುವುದರಿಂದ, ರಾತ್ರೋರಾತ್ರಿ ಟ್ರ್ಯಾಕ್ಟರ್ ಮತ್ತು ಟಿಪ್ಪರ್ಗಳ ಮೂಲಕ ಖಾಲಿ ನಿವೇಶನಗಳು, ಕೆರೆಗಳ ಬಫರ್ ವಲಯಗಳು ಹಾಗೂ ರಾಜಕಾಲುವೆಗಳ ಬದಿಗಳಲ್ಲಿ ಅಪಾಯಕಾರಿ ಕಾಂಕ್ರೀಟ್ ಮತ್ತು ಟೈಲ್ಸ್ ರಾಶಿಯನ್ನು ಸುರಿಯಲಾಗುತ್ತಿದೆ.

ಸ್ವತಃ ಸಂಸ್ಕರಣಾ ಘಟಕಕ್ಕೆ ಜಾಗ ಗುರುತಿಸಲಾಗಿರುವ ಹಂಚ್ಯಾ-ಸಾತಗಳ್ಳಿ ವಲಯದ ಸುತ್ತಮುತ್ತಲಿನ ಪರಿಸರದಲ್ಲೇ (G.S.R. 445(E) ಧೂಳು ನಿಯಂತ್ರಣ ನಿಯಮಾವಳಿಗಳನ್ನು ಗಾಳಿಗೆ ತೂರಲಾಗುತ್ತಿದೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಮುಕ್ತವಾಗಿ ಅಕ್ರಮ ಡಂಪಿಂಗ್ ರಾಜಾರೋಷವಾಗಿ ನಡೆಯುತ್ತಿದೆ. ಇದು ಪಾಲಿಕೆಯ ಆಡಳಿತಾತ್ಮಕ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.




