465 ಕೋಟಿ ಕಾಮಗಾರಿ ಗುತ್ತಿಗೆ; ನಿಯಮ ಉಲ್ಲಂಘಿಸಿರುವ ಅಧಿಕಾರಿಗಳ ಪಟ್ಟಿ ಒದಗಿಸದ ನಿಗಮ

ಬೆಂಗಳೂರು; ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ, ವಿಸ್ತರಣೆ, ನವೀಕರಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂದಾಜಿಸಿದ್ದ ಯೋಜನಾ ಮೊತ್ತಕ್ಕೆ ಸರ್ಕಾರದ ಅನುಮೋದನೆ ಪಡೆಯದೇ ಮತ್ತು ನಿಯಮ ಉಲ್ಲಂಘಿಸಿ 465 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಗುತ್ತಿಗೆ ನೀಡಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಪಟ್ಟಿಯನ್ನು ಕೃಷ್ಣಭಾಗ್ಯ ಜಲನಿಗಮ ಒದಗಿಸಿಲ್ಲ. ಪಟ್ಟಿ ಒದಗಿಸಬೇಕು ಎಂದು ಆರ್ಥಿಕ ಇಲಾಖೆಯ ನಿರ್ದೇಶನವನ್ನೂ ನಿಗಮವು ಉಲ್ಲಂಘಿಸಿದೆ.

 

ಹಾಗೆಯೇ ನಿಗಮದ ಅಧಿಕಾರಿಗಳು ನೀಡಿದ್ದ ಸಮಜಾಯಿಷಿಯನ್ನು ಆರ್ಥಿಕ ಇಲಾಖೆಯು ಒಪ್ಪಿಲ್ಲ. ಅಲ್ಲದೇ ಸಚಿವ ಸಂಪುಟದ ಅನುಮೋದನೆಯನ್ನೇ ಪಡೆಯದೇ ಟೆಂಡರ್‌ ಆಹ್ವಾನಿಸಿದ್ದಲ್ಲದೇ ಕಾಮಗಾರಿಯನ್ನೂ ಕೈಗೆತ್ತಿಕೊಂಡಿರುವುದನ್ನು ‘ದಿ ಫೈಲ್‌’ ಇದೀಗ ದಾಖಲೆ ಸಹಿತ ಬಹಿರಂಗಗೊಳಿಸುತ್ತಿದೆ. ಈ ಕುರಿತು ‘ದಿ ಫೈಲ್‌’ 500 ಕ್ಕೂ ಹೆಚ್ಚು ಪುಟಗಳನ್ನೊಳಗೊಂಡಿರುವ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

465 ಕೋಟಿ ರು ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಯಮಗಳ ಉಲ್ಲಂಘನೆ ಕುರಿತು ಕೃಷ್ಣಭಾಗ್ಯ ಜಲನಿಗಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ‘ ಕಾಮಗಾರಿಗೆ ಸಂಬಂಧಿಸಿದಂತೆ ಕೃಷ್ಣಭಾಗ್ಯ ಜಲನಿಗಮ ನಿಯಮಿತದ ನಿರ್ದೇಶಕರ ಮಂಡಳಿ ಸಭೆಯು ಅನುಮೋದನೆಗಳಿಗೆ ಸಕ್ಷಮ ಪ್ರಾಧಿಕಾರವಾಗಿದ್ದು ಸದರಿ ಮಂಡಳಿ ಅನುಮೋದನೆಯಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿರುತ್ತಾರೆ. ಹಾಗೂ ಇದರಲ್ಲಿ ಯಾವುದೇ ಲೋಪದೋಷವಾಗಿರುವುದಿಲ್ಲ. ಇದಕ್ಕೆ ಯಾವುದೇ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ಪ್ರಮೇಯ ಉದ್ಭವಿಸುವುದಿಲ್ಲ,’ ಎಂದು ಆರ್ಥಿಕ ಇಲಾಖೆಗೆ ಸಮಜಾಯಿಷಿ ನೀಡಿತ್ತು.

 

ಸಮಜಾಯಿಷಿ ಒಪ್ಪದ ಆರ್ಥಿಕ ಇಲಾಖೆ

 

‘ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ ಮೊದಲನೆ ಅನುಸೂಚಿಯ 15(iii) ಪ್ರಕಾರ ಮೂಲ ಅಂದಾಜು 10.00 ಕೋಟಿ ಮೀರಿದಲ್ಲಿ ಮತ್ತು ಪರಿಷ್ಕೃತ ಅಂದಾಜುಗಳು ಮೂಲ ಅಂದಾಜುಗಳಿಗಿಂತ ಶೇ.25ರಷ್ಟು ಅಥವಾ 10.00 ಕೋಟಿಗಳಷ್ಟು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಮೀರಿದರೇ ಅದನ್ನು ಮತ್ತೆ ಸಚಿವ ಸಂಪುಟದ ಮುಂದೆ ಮಂಡಿಸಿ ಆಡಳಿತಾತ್ಮಕ ಅನುಮೋದನೆ ಪಡೆಯಬೇಕಾಗಿರುತ್ತದೆ. ಆದ್ದರಿಂದ ಇಲಾಖೆಯು ನೀಡಿರುವ ಸ್ಪಷ್ಟೀಕರಣವನ್ನು ಒಪ್ಪಲು ಸಾಧ್ಯವಿರುವುದಿಲ್ಲ,’ ಎಂದು ಆರ್ಥಿಕ ಇಲಾಖೆಯ ವಿಶೇಷ ಅಧಿಕಾರಿ ವೈ ಬಿ ಹೊನ್ನಲಿಂಗಪ್ಪ ಅವರು ಟಿಪ್ಪಣಿಯಲ್ಲಿ ದಾಖಲಿಸಿದ್ದಾರೆ.

 

ಅಡಳಿತ ಇಲಾಖೆಯು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ, ಅರ್ಥಿಕ ಇಲಾಖೆಯ ಗಮನಕ್ಕೂ ತರದೇ ರೂ 465.00 ಕೋಟಿ ರು.ಗಳ ಕಾಮಗಾರಿಗಳಿಗೆ ಗುತ್ತಿಗೆ ನೀಡಿ ಕೈಗೆತ್ತಿಕೊಂಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರ್ಥಿಕ ಇಲಾಖೆಯು ಬಲವಾದ ಆಕ್ಷೇಪ ಎತ್ತಿತ್ತು.

 

ಈ ಸಂಬಂಧ ಸದರಿ ಪ್ರಕ್ರಿಯೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಸದರಿ ಪ್ರಸ್ತಾವನೆಗೆ ವೆಚ್ಚ ಭರಿಸಲು ಇಲಾಖೆಯಡಿ ಯಾವ non-grounded ಕಾಮಗಾರಿಗಳನ್ನು ಕಡಿತಗೊಳಿಸಲಾಗುವುದು ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಅರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಗಾಯಿತ್ರಿ ಅವರು 2022ರ ಸೆಪ್ಟಂಬರ್‌ 13ರಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts