ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಭೂ ಸ್ವಾಧೀನಕ್ಕೆ ಅಭಿವೃದ್ದಿ ಹೊಂದಿದ ಜಮೀನುಗಳ ಸರ್ವೆ ನಂಬರ್ಗಳ ವಿವರಣೆಯನ್ನೇ ನೀಡಿಲ್ಲ.
ಹೊಸಕೋಟಿ ಮುಖ್ಯ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನಕ್ಕೊಳಪಡಲಿರುವ ಎಲ್ಲಾ ಜಮೀನುಗಳನ್ನೂ ಖುಷ್ಕಿ ಜಮೀನುಗಳೆಂದು ಪರಿಗಣಿಸಿರುವುದನ್ನು ಕಂದಾಯ ಸಚಿವಾಲಯವು ಪತ್ತೆ ಹಚ್ಚಿದೆ.
ಈ ಸಂಬಂಧ ಹಲವು ಸ್ಪಷ್ಟೀಕರಣಗಳನ್ನು ಕೋರಿರುವ ಕಂದಾಯ ಇಲಾಖೆಯು 2026ರ ಮಾರ್ಚ್ 2ರಂದು ಬೃಹತ್ ನೀರಾವರಿ ಯೋಜನೆಗಳ ವಿಶೇಷ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಗುತ್ತಿಹೊಳಿ ಗ್ರಾಮದಲ್ಲಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯಡಿ ಹೊಸಕೋಟಿ ಮುಖ್ಯ ಕಾಲುವೆಯು 1.244ರಿಂದ 4.485 ಕಿ ಮೀವರೆಗೆ ಹಾದುಹೋಗಲಿದೆ. ಇದಕ್ಕಾಗಿ 17 ಎಕರೆ 11 ಗುಂಟೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಿದೆ. ಭೂ ಸ್ವಾಧೀನ ಕಾಯ್ದೆ 2013ರ ಕಲಂ 23ರ ಅಡಿಯಲ್ಲಿ ಕಲಂ 31ರ ಅಡಿಯಲ್ಲಿ ಐ ತೀರ್ಪು ರಚಿಸಲಾಗಿದೆ. ಇದಕ್ಕೆ ಅನುಮೋದನೆ ನೀಡಬೇಕು ಎಂದು ಬೃಹತ್ ನೀರಾವರಿ ಯೋಜನೆಗಳ ವಿಶೇಷ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವ ಕುರಿತು ಅಧಿಕಾರಿಗಳು ಸಚಿವ ಡಾ ಜಿ ಪರಮೇಶ್ವರ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಸ್ತಾವವನ್ನು ಪರಿಶೀಲಿಸಿರುವ ಕಂದಾಯ ಇಲಾಖೆಯು ಹಲವು ಸ್ಪಷ್ಟೀಕರಣಗಳನ್ನು ಕೋರಿದೆ.
ಸ್ಥಳ ತನಿಖೆ ಮತ್ತು ಐತೀರ್ಪು ವಿಚಾರಣೆ ಕುರಿತು ಚರ್ಚೆ ನಡೆಸಿದೆ. ಅಭಿವೃದ್ಧಿ ಹೊಂದದ ಜಮೀನು ಸರ್ವೇ ನಂಬರ್ಗಳ ವಿವರಣೆ ನೀಡಲಿದೆ. ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್ಗಳ ವಿವರಣೆ ನೀಡಿಲ್ಲ. ಹೀಗಾಗಿ ಈ ಬಗ್ಗೆ ಪರಿಶೀಲಿಸಿ ಪ್ರಸ್ತಾವ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಹಾಗೆಯೇ ಜೆಎಂಸಿ ಹಾಗೂ ಕಲಂ 19(1)ರ ಅಂತಿಮ ಅಧಿಸೂಚನೆಯಲ್ಲಿ ಎಲ್ಲಾ ಜಮೀನುಗಳನ್ನು ಖುಷ್ಕಿ ಎಂದು ಪರಿಗಣಿಸಿದೆ. ಆದರೆ ಐ ತೀರ್ಪಿನಲ್ಲಿ ಕೆಲ ಸರ್ವೆ ನಂಬರ್ಗಳ ಜಮೀನುಗಳನ್ನು ಅಭಿವೃದ್ಧಿ ಹೊಂದದ ಮತ್ತು ಅಭಿವೃದ್ಧಿ ಹೊಂದಿದ ಜಮೀನು ಎಂದು ಪರಿಗಣಿಸಿ ದರವನ್ನು ನಿಗದಿಪಡಿಸಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.
ಕಲಂ 19(1) ಅಂತಿಮ ಅಧಿಸೂಚನೆ ಸಂದರ್ಭದಲ್ಲಿ ಭೂ ಪರಿವರ್ತನೆಗೊಂಡ ಜಮೀನುಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಆದರೆ ಐ ತೀರ್ಪು ರಚನೆ ಸಂದರ್ಭದಲ್ಲಿ ಪರಿಗಣಿಸಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಸೂಚಿಸಿದೆ. ಅದೇ ರೀತಿ ಈ ಐ ತೀರ್ಪಿನಲ್ಲಿ ಎಷ್ಟು ಎಕರೆ ವಿಸ್ತೀರ್ಣಕ್ಕೆ ಖುಷ್ಕಿ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದದ ಜಮೀನನ್ನು (ಭೂ ಪರಿವರ್ತನೆ) ಪರಿಗಣಿಸಿ ದರ ನಿಗದಿ ಮಾಡಿರುವ ಸ್ಪಷ್ಟತೆ ಇಲ್ಲ. ಹೀಗಾಗಿ ತರಹೆವಾರು ವಿಂಗಡಿಸಿ ಐ ತೀರ್ಪು ಲೆಕ್ಕಾಚಾರ ತಃಖ್ತೆಯನ್ನು ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ವಿಶೇಷ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ.

ತುಕ್ಕು ಹಿಡಿದಿದೆಯೇ ಈ ಯೋಜನೆ?
ರಾಮದುರ್ಗ ತಾಲೂಕಿನ 30 ಸಾವಿರ ಹೆಕ್ಟೇರ್ ಪ್ರದೇಶದ ನೀರಾವರಿಗಾಗಿ ರೂಪಿಸಿದ್ದ ಉತ್ತರ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯೂ ಒಂದಾಗಿದೆ. ನಿಗದಿತ ಕಾಲಾವಧಿಯಲ್ಲಿ ಈ ಯೋಜನೆಯು ಪೂರ್ಣಗೊಂಡಿಲ್ಲ. ಹೀಗಾಗಿ ಇಡೀ ಯೋಜನೆಗೆ ತುಕ್ಕು ಹಿಡಿದಂತಾಗಿತ್ತು.

ಕುಡಿಯುವ ನೀರು, ಮತ್ತು ಜಮೀನುಗಳನ್ನು ನೀರಾವರಿಗೊಳಪಡಿಸಿದಲ್ಲಿ ಒಣಭೂಮಿಯಾಗಿರುವ ಈ ತಾಲೂಕಿನಲ್ಲಿ ಹಸಿರು ಮೂಡಲಿದೆ ಎಂದು ಈಗಲೂ ರೈತರು ಕಾಯುತ್ತಲೇ ಇದ್ದಾರೆ. ಈ ಯೋಜನೆ ಆರಂಭಗೊಂಡು ಸುಮಾರು ಒಂದೂವರೆ ದಶಕವೇ ಆಗಿ ಹೋಗಿದೆ. 544 ಕೋಟಿ ರುಪಾಯಿ ವೆಚ್ಚದ ವೀರಭದ್ರೇಶ್ವರ ಏತ ನೀರಾವರಿಗೆ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿಯೇ ಶಂಕುಸ್ಥಾಪನೆ ನೆರವೇರಿಸಿದ್ದರು.

2013ರಲ್ಲಿ ಕಾಂಗ್ರೆಸ್ನಿಂದ ಶಾಸಕರಾಗಿದ್ದ ಅಶೋಕ ಪಟ್ಟಣ ಅವರು 2014-15ನೇ ಸಾಲಿನಲ್ಲಿಯೇ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಘೋಷಿಸಲು ಶ್ರಮಿಸಿದ್ದರು. ಇದಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆಯೂ ದೊರೆತಿತ್ತು. ನಂತರ ಅಧಿಕಾರಕ್ಕೆ ಬಂದ ಶಾಸಕರು ಈ ಬಗ್ಗೆ ಮುಂದುವರೆಯಲಿಲ್ಲ.

ಈ ಯೋಜನೆಗೆ ಯಾವುದೇ ಅಡೆತಡೆ ಮಾಡದೇ ಕಾಲುವೆ ಮತ್ತು ಪೈಪ್ಲೈನ್ ಅಳವಡಿಸಲು ಸುಮಾರು 2,400 ಎಕರೆ ಜಮೀನನ್ನು ನೀಡಲು ರೈತರು ಒಪ್ಪಿಗೆ ಸೂಚಿಸಿದ್ದರು. ಯೋಜನೆ ಆರಂಭಗೊಂಡು ಒಂದೂವರೆ ದಶಕ ಕಳೆದು ಹೋದರೂ ಭೂ ಸ್ವಾಧೀನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ಹೀಗಾಗಿ 220 ಎಕರೆ ಪ್ರದೇಶ ಮಾತ್ರ ಸ್ವಾಧೀನಕ್ಕೊಳಪಟ್ಟಿದೆ.
ಆರಂಭದಲ್ಲೇ ಈ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದರೇ ಪ್ರತಿ ಎಕರೆಗೆ ಜಮೀನಿಗೆ 5 ಲಕ್ಷದಿಂದ 6 ಲಕ್ಷ ನೀಡಬೇಕಿತ್ತು. ಆದರೆ ಭೂಮಿ ಬೆಲೆ ಈಗ ಗಗನಮುಟ್ಟಿದೆ. ಇಂತಹ ಮಹತ್ವದ ಯೋಜನೆಗೆ ತಾಲೂಕಿನ ಉತ್ತರ ಭಾಗದ ರೈತರು ಸ್ವಇಚ್ಛೆಯಿಂದ ಭೂಮಿ ಬಿಟ್ಟುಕೊಟ್ಟಿದ್ದರೂ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿಯೇ ಕಾಲುವೆ ಸುತ್ತಮುತ್ತಲು ಗಿಡಗಂಟಿಗಳು ಬೆಳೆದು ನಿಂತಿರುವುದು ಕಂಡು ಬಂದಿದೆ.

ವೀರಭದ್ರೇಶ್ವರ ಏತನೀರಾವರಿ ಯೋಜನೆಯಿಂದ ರಾಮದುರ್ಗ ತಾಲೂಕಿನ 28 ಗ್ರಾಮಗಳು ಮತ್ತು ಮುಧೋಳ ತಾಲೂಕಿನ 4 ಗ್ರಾಮಗಳಲ್ಲಿನ ಒಟ್ಟಾರೆ 17, 377 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ.
ರಾಮದುರ್ಗ ಕ್ಷೇತ್ರದಲ್ಲಿ ವೀರಭದ್ರೇಶ್ವರ ಏತ ನೀರಾವರಿ ಮಾತ್ರವಲ್ಲ ಬಸವೇಶ್ವರ ಏತ ನೀರಾವರಿ ಯೋಜನೆಯೂ ಒಂದೂವರೆ ದಶಕಗಳಾದರೂ ಪೂರ್ಣಗೊಂಡಿಲ್ಲ. ಇದರಿಂದ ಈ ಭಾಗದ ರೈತರು ನೀರಾವರಿ ಸೌಲಭ್ಯದಿಂದಲೇ ವಂಚಿತರಾಗಿದ್ದಾರೆ. ರಾಮಲಿಂಗೇಶ್ವರ ಏತ ನೀರಾವರಿ ಯೋಜನೆಯು ಪೂರ್ಣಗೊಂಡಿದೆಯಾದರೂ ಕಾಲುವೆ ಅಂತ್ಯದವರೆಗೂ ನೀರು ತಲುಪುತ್ತಿಲ್ಲ. ಹೀಗಾಗಿ ಈ ಯೋಜನೆಯು ಪೂರ್ಣಪ್ರಮಾಣದಲ್ಲಿ ಬಳಕೆಯಾಗಿಲ್ಲ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 444 ಕೋಟಿ ರು ವೆಚ್ಚದಲ್ಲಿ ನವಿಲು ತೀರ್ಥ ಅಣೆಕಟ್ಟೆಯಿಂದ ನೀರು ತಂದು ನಲ್ಲಿಗಳ ಮೂಲಕ ತಾಲೂಕಿನ ಜನರಿಗೆ ಒದಗಿಸಲು ಈ ಯೋಜನೆ ಆರಂಭಿಸಿತ್ತು. ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ನಲ್ಲಿ ಅಳವಡಿಸಿದೆ. ಆದರೆ ಜನರಿಗೆ ಇನ್ನೂ ಯೋಜನೆ ಮುಟ್ಟಿಲ್ಲ.
ವೀರಭದ್ರೇಶ್ವರ ಏತ ನೀರಾವರಿ ಯೋಜನೆಯು ಅತ್ಯಂತ ಪ್ರಮುಖ ಯೋಜನೆ. ಘಟಪ್ರಭಾ ನದಿಯಿಂದ ನೀರನ್ನು ಎತ್ತಿ, ರಾಮದುರ್ಗ ಮತ್ತು ಮುಧೋಳ ತಾಲೂಕುಗಳ ಹಲವಾರು ಹಳ್ಳಿಗಳ (ವೆಂಕಟಾಪುರ, ಗುತ್ತಿಗೊಳಿ, ಗುದಗನಾಳ, ಹೊಸಕೋಟಿ, ಮುಂತಾದವು) ಒಣ ಭೂಮಿಗೆ ನೀರು ಒದಗಿಸುತ್ತದೆ.
ಸಾಲಾಪೂರ ಮತ್ತು ಸುತ್ತಮುತ್ತಲಿನ ಜಮೀನುಗಳಿಗೆ ನೀರುಣಿಸಲು ₹536 ಕೋಟಿ ವೆಚ್ಚದಲ್ಲಿ ಈ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ರೂಪಿಸಲಾಗಿದೆ. ಇದಲ್ಲದೇ ದಡ್ಡಿನಾಗನೂರು, ರುಸ್ತುಂಪುರ, ಮತ್ತು ಕೊಟಬಾಗಿ ಏತ ನೀರಾವರಿ ಯೋಜನೆಗಳು ಕೂಡ ಈ ಭಾಗದಲ್ಲಿ ಜಾರಿಯಲ್ಲಿವೆ




