ಬೆಂಗಳೂರು; ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 2026-27ನೇ ಸಾಲಿನಲ್ಲಿ ರಾಜ್ಯಕ್ಕೆ 7,748 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟರೂ ಐದು ಹೊಸ ರೈಲು ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಅಲ್ಲದೇ ರೈಲ್ವೇ ಯೋಜನೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ದೊರೆಯುತ್ತಿಲ್ಲ. ಹೊಸ ಯೋಜನೆಗಳಿಗೆ ಜಮೀನುಗಳನ್ನೇ ನೀಡಿಲ್ಲ ಎಂದು ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರದ ಬೊಟ್ಟು ಮಾಡಿದೆ.
ಲೋಕಸಭೆಯಲ್ಲಿ ಸಂಸದ ಗೋವಿಂದ ಎಂ. ಕಾರಜೋಳ ಅವರು 2026ರ ಜುಲೈ 22ರಂದು ಕೇಳಿರುವ ಚುಕ್ಕಿ ರಹಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕರ್ನಾಟಕದಲ್ಲಿ ಅನುಷ್ಠಾನಗೊಂಡಿರುವ ರೈಲ್ವೇ ಯೋಜನೆಗಳು, ಸೌಲಭ್ಯಗಳ ಕುರಿತಾಗಿ ಒದಗಿಸಿರುವ ಸಮಗ್ರ ವಿವರಗಳ ಮಾಹಿತಿಯಲ್ಲಿ ಕರ್ನಾಟಕ ಸರ್ಕಾರದ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯ ಸರಕಾರದ ಅಸಹಕಾರದಿಂದ ಯೋಜನೆ ಪ್ರಗತಿ ಆಗುತ್ತಿಲ್ಲ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇತ್ತೀಚೆಗೆ ಬೆಳಗಾವಿಯಲ್ಲಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಇದೀಗ ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಅವರೂ ಸಹ ರಾಜ್ಯ ಸರ್ಕಾರದತ್ತಲೇ ಬೊಟ್ಟು ಮಾಡಿ ತೋರಿಸಿರುವುದು ಮುನ್ನೆಲೆಗೆ ಬಂದಿದೆ.

2009-14ರ ಅವಧಿಯಲ್ಲಿ ವಾರ್ಷಿಕವಾಗಿ ರಾಜ್ಯಕ್ಕೆ ನೀಡಲಾಗುತ್ತಿದ್ದ 835 ಕೋಟಿ ರೂಪಾಯಿಯೊಂದಿಗೆ ಹೋಲಿಸಿದರೆ 2014ರಿಂದ 2026ರವರೆಗೆ ಒಟ್ಟು ಒಂಬತ್ತು ಪಟ್ಟು ಹೆಚ್ಚು ಅನುದಾನ ನೀಡಿದೆ ಎಂದು ವಿವರಿಸಿದ್ದಾರೆ.

ಬೆಳಗಾವಿ–ಧಾರವಾಡ ಭೂಸ್ವಾಧೀನ ಆಗಿಲ್ಲ
ರಾಜ್ಯದ ಕೆಲವು ಹೊಸ ರೈಲು ಯೋಜನೆಗಳು ಭೂಸ್ವಾಧೀನ ಸಮಸ್ಯೆಯಿಂದ ವಿಳಂಬವಾಗಿವೆ ಎಂದು ಸಚಿವರು ಒಪ್ಪಿಕೊಂಡಿದ್ದಾರೆ. ಬಹುಕಾಲದ ಬೇಡಿಕೆಯಾದ ಬೆಳಗಾವಿ-ಕಿತ್ತೂರು–ಧಾರವಾಡ ಹೊಸ 73 ಕಿಮೀ. ರೈಲು ಮಾರ್ಗಕ್ಕೆ ಒಂದಿಂಚು ಭೂಸ್ವಾಧೀನವು ಆಗಿಲ್ಲ. ಧಾರವಾಡ –ಬೆಳಗಾವಿ ಸಹಿತ ಐದು ಹೊಸ ಯೋಜನೆಗಳಿಗೆ ರಾಜ್ಯ ಸರಕಾರ ಜಮೀನು ನೀಡಿಲ್ಲ. ಬೆಳಗಾವಿ-ಕಿತ್ತೂರು–ಧಾರವಾಡ ಹೊಸ ರೈಲು ನಿರ್ಮಾಣವಾದರೆ ಧಾರವಾಡ ಬೆಳಗಾವಿಗೆ ಹತ್ತಿರವಾಗಲಿದೆ. ಸದ್ಯ ಧಾರವಾಡದಿಂದ ಬೆಳಗಾವಿಗೆ ಲೋಂಡಾ ಮಾರ್ಗವಾಗಿ ಹೋಗಬೇಕಾಗಿದೆ. ಧಾರವಾಡ ಮತ್ತು ಬೆಳಗಾವಿ ಮಧ್ಯೆ 75 ಕಿ.ಮೀ, ದೂರ ಕಡಿಮೆ ಆಗಲಿದೆ. ಯೋಜನೆ ಪೂರ್ಣಗೊಂಡ ನಂತರ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ತ್ರಿವಳಿ ನಗರವಾಗಿ ಅಭಿವೃದ್ಧಿ ಆಗಲಿದೆ.

ದಿವಂಗತ ಸುರೇಶ ಅಂಗಡಿ ರೈಲ್ವೇ ಇಲಾಖೆ ರಾಜ್ಯ ಸಚಿವರಾಗಿದ್ದಾಗ 2020ರಲ್ಲಿ ಈ ಹೊಸ ರೈಲು ಮಾರ್ಗ ಬೇಡಿಕೆ ಮುನ್ನಲೆಗೆ ಬಂದಿತ್ತು. ಇದುವರೆಗೂ ಭೂಸ್ವಾಧೀನ ಆಗದಿರುವ ಕಾರಣದಿಂದ ಯೋಜನೆ ಪ್ರಗತಿ ಕಂಡಿಲ್ಲ. ಯೋಜನಾ ಪ್ರದೇಶದ ರೈತರು ಪ್ರತಿ ಎಕರೆಗೆ 3 ಕೋಟಿ ರೂಪಾಯಿ ಪರಿಹಾರದ ಬೇಡಿಕೆ ಇರಿಸಿದ್ದಾರೆ. ಬೆಳಗಾವಿಯಲ್ಲಿ ಭೂಸ್ವಾಧೀನ ಆಗುತ್ತಿದೆ. ಆದರೆ, ಧಾರವಾಡ ಜಿಲ್ಲೆಯಲ್ಲಿ ಭೂಸ್ವಾಧೀನ ಮಾಡಲಾಗಿಲ್ಲ ಎಂದು ಸೋಮಣ್ಣ ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು. ಬೆಳಗಾವಿ-ಕಿತ್ತೂರು–ಧಾರವಾಡ ಹೊಸ 73 ಕಿಮೀ. ರೈಲು ಮಾರ್ಗಕ್ಕೆ ಒಟ್ಟು 581 ಹೆಕ್ಟೇರ್ ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಅದೇ ರೀತಿ ಶಿವಮೊಗ್ಗ– ರಾಣೆಬೆನ್ನೂರು 96 ಕಿಮೀ ಹೊಸ ರೈಲು ಮಾರ್ಗಕ್ಕೆ 559 ಹೆಕ್ಟರ್ ಜಮೀನು ಅಗತ್ಯವಿದ್ದು, ಅದರಲ್ಲಿ 283 ಹೆಕ್ಟೇರ್ ಸ್ವಾಧೀನಪಡಿಸಲಾಗಿದೆ ಎಂದು ಕೇದ್ರ ಸಚಿವರು ವಿವರ ಒದಗಿಸಿರುವುದು ಗೊತ್ತಾಗಿದೆ.

ಬೆಳಗಾವಿ–ಧಾರವಾಡ, ಶಿವಮೊಗ್ಗ–ಹರಿಹರ, ವೈಟ್ಫೀಲ್ಡ್ (ಬೆಂಗಳೂರು) –ಕೋಲಾರ 337 ಹೆಕ್ಟೇರ್ ಹಾಗೂ ಹಾಸನ–ಬೇಲೂರು 206 ಹೆಕ್ಟೇರ್ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಇನ್ನೂ ಸಂಪೂರ್ಣವಾಗಿ ಲಭ್ಯವಾಗಿಲ್ಲ. ರಾಜ್ಯದ ಒಟ್ಟು ರೈಲ್ವೆ ಯೋಜನೆಗಳಿಗೆ 10,123 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಇದುವರೆಗೆ 6,134 ಹೆಕ್ಟೇರ್ (61%) ಮಾತ್ರ ಸ್ವಾಧೀನಗೊಂಡಿದೆ. ಉಳಿದ 3,989 ಹೆಕ್ಟೇರ್ (39%) ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿರುವುದು ಉತ್ತರದಿಂದ ತಿಳಿದು ಬಂದಿದೆ.

ಇದರಲ್ಲಿ ಬೆಳಗಾವಿ–ಧಾರವಾಡ, ಶಿವಮೊಗ್ಗ- ಹರಿಹರ 79 ಕಿಮೀ , ವೈಟ್ಫೀಲ್ಡ್–ಕೋಲಾರ 53ಕಿಮೀ. ಹಾಗೂ ಹಾಸನ–ಬೇಲೂರು 32 ಕಿಮೀ. ಹೊಸ ರೈಲು ಲೈನುಗಳಿಗೆ ಭೂಸ್ವಾಧೀನ ಇನ್ನಷ್ಟೇ ಆಗಬೇಕಾಗಿದೆ. 2026ರ ಏಪ್ರಿಲ್ 1ರ ವೇಳೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ 15 ಹೊಸ ರೈಲು ಮಾರ್ಗಗಳು ಹಾಗೂ 10 ಡಬ್ಲಿಂಗ್ ಯೋಜನೆಗಳು ಸೇರಿ ಒಟ್ಟು 25 ಯೋಜನೆಗಳು ಮಂಜೂರಾಗಿವೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ. ಈ ಯೋಜನೆಗಳ ಒಟ್ಟು ಉದ್ದ 2,935 ಕಿಲೋಮೀಟರ್ ಆಗಿದ್ದು, ಅಂದಾಜು ವೆಚ್ಚ 49,272 ಕೋಟಿ ರೂಪಾಯಿ. ಇದರಲ್ಲಿ 746 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು, 13,398 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವಿವರಿಸಿದ್ದಾರೆ.

ರಾಜ್ಯ ಸರಕಾರ ಭೂಸ್ವಾಧೀನ ಮಾಡಿಕೊಡುವುದರಲ್ಲಿ ವಿಳಂಬ, ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ, ಮಾರ್ಗದಲ್ಲಿ ಇರುವ ನಾಗರಿಕ ಸೌಲಭ್ಯಗಳ ಸ್ಛಳಾಂತರ ಇತ್ಯಾದಿಗಳು ರೈಲ್ವೆ ಯೋಜನೆ ಅನುಷ್ಠಾನದಲ್ಲಿ ತೊಡಕುಗಳಿವೆ. ಇದನ್ನು ನಿವಾರಿಸಲು ಕೇಂದ್ರ ಸರಕಾರವು ರಾಜ್ಯ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅನುದಾನದಲ್ಲಿಯೂ ಹೆಚ್ಚಳ ಮಾಡಿದೆ ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.


ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಹಲವು ಪ್ರಮುಖ ರೈಲ್ವೆ ಯೋಜನೆಗಳು ಪೂರ್ಣಗೊಂಡಿವೆ ಎಂದು ಸಚಿವರು ಪಟ್ಟಿಯನ್ನು ನೀಡಿದ್ದಾರೆ. ಕೊಟ್ಟೂರು–ಹರಿಹರ, ಹಾಸನ–ಬೆಂಗಳೂರು ಹಾಗೂ ಬೀದರ್–ಕಲಬುರಗಿ ಹೊಸ ರೈಲು ಮಾರ್ಗಗಳ ಜೊತೆಗೆ, ರಾಮನಗರ–ಮೈಸೂರು, ಹಾಸನ–ತುಮಕೂರು, ಹುಬ್ಬಳ್ಳಿ–ಚಿಕ್ಕಜಜೂರು, ಹಟಗಿ–ಗದಗ ಮತ್ತು ಪುಣೆ–ಮಿರಜ್–ಲೊಂಡಾ ಡಬ್ಲಿಂಗ್ ಕಾಮಗಾರಿಗಳು ಪೂರ್ಣಗೊಂಡಿವೆ.
ಮಂಗಳೂರು ಭಾಗದಲ್ಲೂ ನೇತ್ರಾವತಿ ಕ್ಯಾಬೀನ್–ಮಂಗಳೂರು ಸೆಂಟ್ರಲ್, ಕಂಕನಾಡಿ–ಪಣಂಬೂರು ಮತ್ತು ಜೋಕ್ಕಟ್ಟೆ–ತೋಕೂರು ಡಬ್ಲಿಂಗ್ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೊಂದೆಡೆ, ಮುನಿರಾಬಾದ್–ಮೆಹಬೂಬ್ನಗರ(ಕುಷ್ಟಗಿ, ಸಿಂಧನೂರು, ರಾಯಚೂರು ಮಾರ್ಗ) (247 ಕಿಮೀ.), ಕಡೂರು–ಚಿಕ್ಕಮಗಳೂರು–ಸಕಲೇಶಪುರ (93 ಕಿಮೀ.), ತುಮಕೂರು–ಚಿತ್ರದುರ್ಗ–ದಾವಣಗೆರೆ (182 ಕಿಮೀ.), ಗದಗ–ವಾಡಿ ಹಾಗೂ ಹಾಸನ–ಬೇಲೂರು (32 ಕಿಮೀ.) ಸೇರಿದಂತೆ ಹಲವು ಹೊಸ ಮಾರ್ಗಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಲದೆ, ಹೊಸ ಡಬ್ಲಿಂಗ್ ಮತ್ತು ಮೂರನೇ–ನಾಲ್ಕನೇ ಹಳಿ ಕಾಮಗಾರಿಗಳೂ ವಿವಿಧ ಹಂತಗಳಲ್ಲಿ ನಡೆಯುತ್ತಿವೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ರಾಜ್ಯ ಸರ್ಕಾರದ ಅಸಹಕಾರ?
ಭೂಸ್ವಾಧೀನ, ಅರಣ್ಯ ಅನುಮತಿ, ವಿವಿಧ ಕಾನೂನುಬದ್ಧ ಅನುಮೋದನೆಗಳು, ವಿದ್ಯುತ್ ಹಾಗೂ ಇತರೆ ಸಾರ್ವಜನಿಕ ಉಪಯೋಗಗಳ ಸ್ಥಳಾಂತರ ಸೇರಿದಂತೆ ಹಲವು ಕಾರಣಗಳು ಯೋಜನೆಗಳ ಪೂರ್ಣಗೊಳ್ಳುವಿಕೆಗೆ ಪರಿಣಾಮ ಬೀರುತ್ತವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ ಎಂದು ರೈಲ್ವೆ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಶೇ. 96.8 ರೈಲ್ವೆ ವಿದ್ಯುದೀಕರಣ
ರೈಲ್ವೆ ವಿದ್ಯುದೀಕರಣದಲ್ಲೂ ಕರ್ನಾಟಕ ಉತ್ತಮ ಪ್ರಗತಿ ಸಾಧಿಸಿದ್ದು, ರಾಜ್ಯದ ಬ್ರಾಡ್ಗೇಜ್ ಮಾರ್ಗಗಳ ಶೇಕಡಾ 96.8ರಷ್ಟು ಭಾಗ ಈಗಾಗಲೇ ವಿದ್ಯುದೀಕರಣಗೊಂಡಿದೆ. ಉಳಿದ ಮಾರ್ಗಗಳ ಕಾಮಗಾರಿಯೂ ಮುಂದುವರಿದಿದೆ. ಪ್ರಯಾಣಿಕರ ಸೌಲಭ್ಯಗಳ ಅಭಿವೃದ್ಧಿಯ ಭಾಗವಾಗಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ 61 ರೈಲು ನಿಲ್ದಾಣಗಳನ್ನು ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ.
ಈಗಾಗಲೇ ಆಳ್ನಾವರ, ಬಾಗಲಕೋಟೆ, ಬಂಟ್ವಾಳ, ಧಾರವಾಡ, ಗದಗ, ಹೊಸಪೇಟೆ, ಕೊಪ್ಪಳ, ಮುನಿರಾಬಾದ್, ಸುಬ್ರಹ್ಮಣ್ಯ ರಸ್ತೆ ಸೇರಿದಂತೆ 12 ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಬೆಂಗಳೂರು ಕ್ಯಾಂಟೋನ್ಮೆಂಟ್, ಯಶವಂತಪುರ, ಸಕಲೇಶಪುರ, ಚಿತ್ರದುರ್ಗ ಮತ್ತು ದಾವಣಗೆರೆ ನಿಲ್ದಾಣಗಳಲ್ಲಿ ಪ್ರಮುಖ ಕಾಮಗಾರಿಗಳು ನಡೆಯುತ್ತಿವೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನಿಲ್ಧಾಣ ಪ್ರವೇಶ ದ್ವಾರಗಳ ಅಬಿವೃದ್ಧಿ, ಹೊಸ ಕಟ್ಟಡ ನಿರ್ಮಾಣ, ಫ್ಲಾಟ್ ಫಾರ್ಮುಗಳ ಸುಧಾರಣೆ, ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳು, ಶೌಚಾಲಯ, ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಸನ ದ ಸೌಲಭ್ಯ, ಕುಡಿಯುವ ನೀರಿನ ಸೌಲಭ್ಯ, ಪಾದಚಾರಿ ಮೇಲು ಸೇತುವೆ ಅಥವ ಸಬ್ ವೇ(ಸುರಂಗ ದಾರಿ) ನಿರ್ಮಾಣ, ಲಿಫ್ಟ್, ಎಸ್ಕಲೇಟರ್, ರೇಂಪ್ ಹಾಗೂ ಸ್ಥಳೀಯ ಉತ್ಪನ್ನಗಳ ಅಂಗಡಿಗೆ ಅವಕಾಶ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಪ್ರಯಾಣಿಕರ ಸೌಲಭ್ಯ ಹೆಚ್ಚಿಸಲಾಗುತ್ತದೆ.




