ಬೆಂಗಳೂರು; ಜಾತ್ಯತೀತ ಸಂಸ್ಥೆ ಎಂದು ಹೇಳಿಕೊಂಡು ಪರಿಶಿಷ್ಟ ಜಾತಿ (ಎಸ್ಸಿ) ಕೋಟಾದಡಿ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡಿದೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ , ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ.
ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿಯೇ ಸಿದ್ದಾರ್ಥ ವಿಹಾರ ಟ್ರಸ್ಟ್ಗೆ, ಕನ್ನಡ ಸಂಸ್ಕೃತಿ ಇಲಾಖೆಯಿಂದ 2 ಲಕ್ಷ ರು ಅನುದಾನ ಮಂಜೂರು ಮಾಡಿತ್ತು ಎಂದು ಸರ್ಕಾರವು ಸದನಕ್ಕೆ ಉತ್ತರ ಒದಗಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಶೇಷವೆಂದರೇ ಕನ್ನಡ ಸಂಸ್ಕೃತಿ ಇಲಾಖೆಯು 2025ರ ಸೆ.30ರಂದು ಮೊದಲು ಹೊರಡಿಸಿದ್ದ ಆದೇಶವನ್ನು ಎರಡೇ ಎರಡು ತಿಂಗಳಲ್ಲಿ ತಿದ್ದುಪಡಿ ಮಾಡಿ ಆದೇಶ ಹೊರಡಿಸಿತ್ತು. 2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯಡಿ ಎಂಬ ಪದವನ್ನು ಬದಲಿಸಿ, ಸಾಮಾನ್ಯ ಧನಸಹಾಯ ಯೋಜನೆ ಅಡಿ ಎಂದು ಸೇರಿಸಿ ಆದೇಶವನ್ನೇ ತಿದ್ದುಪಡಿ ಮಾಡಿತ್ತು.
ಸಿದ್ದಾರ್ಥ ವಿಹಾರ ಟ್ರಸ್ಟ್, ಪರಿಶಿಷ್ಟ ಜಾತಿ (SC) ಕೋಟಾದಡಿ ಸುಳ್ಳು ಮಾಹಿತಿ ನೀಡಿ ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಸುಮಾರು ₹130 ಕೋಟಿ ಮೌಲ್ಯದ 2 ಎಕರೆ ಸಿಎ (CA) ನಿವೇಶನವನ್ನು ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಲಾಗಿದೆ ಎಂದು ದೂರಿನ ಕುರಿತು ತನಿಖೆ ನಡೆಸಬೇಕು ಎಂಬ ದೂರರ್ಜಿಯು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ಕೂಡ ಲೋಕಾಯುಕ್ತಕ್ಕೆ ನೋಟೀಸ್ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಅನುದಾನ ಮಂಜೂರು ಮಾಡಿ, ನಂತರ ಅದನ್ನು ಸಾಮಾನ್ಯ ಧನಸಹಾಯ ಯೋಜನೆಯಡಿಯಲ್ಲಿ ಸೇರಿಸಿ ಹೊರಡಿಸಿದ್ದ ಆದೇಶವು ಮುನ್ನೆಲೆಗೆ ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2023-24ನೇ ಸಾಲಿನಿಂದ 2025-26 ಸಾಲಿನವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಿರುವ ಅನುದಾನದ ವಿವರಗಳ ಕುರಿತು ವಿಧಾನ ಪರಿಷತ್ನ ಸದಸ್ಯ ರಘು ಆರ್ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೇಳಿದ್ದರು. ಇದಕ್ಕೆ ಸಚಿವ ಶಿವರಾಜ್ ತಂಗಡಗಿ ಅವರು ವಿಧಾನಸಭೆಗೆ 2026ರ ಆಗಸ್ಟ್ 24ರಂದು ವಿಧಾನ ಪರಿಷತ್ಗೆ ಮಂಡಿಸಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ.

ಸೆಪ್ಟಂಬರ್ನಲ್ಲಿ ಹೊರಡಿಸಿದ್ದ ಆದೇಶದಲ್ಲೇನಿತ್ತು?
ಕಲ್ಬುರ್ಗಿ ವಿಶ್ವವಿದ್ಯಾಲಯದ ಸಮೀಪ ಇರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಬುದ್ಧ ವಿಹಾರದಲ್ಲಿ ಪ್ರತಿ ವರ್ಷ ಆಚರಣೆ ಮಾಡುತ್ತಿರುವ ರೀತಿಯಲ್ಲಿಯೇ ಈ ವರ್ಷವೂ 2025ರ ಅಕ್ಟೋಬರ್ 2ರಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮಕ್ಕಾಗಿ ವೆಚ್ಚವಾಗಲಿರುವ 2 ಲಕ್ಷ ರು.ಗಳನ್ನು 2025-26ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ (ಲೆಕ್ಕ ಶೀರ್ಷಿಕೆ 2205-00-102-1-44-422 ಧನಸಹಾಯ ಯೋಜನೆ)ಹಂಚಿಕೆ ಮಾಡಿಕೊಂಡಿರುವ ಅನುದಾನದಿಂದ ಭರಿಸಿ ಸರ್ಕಾರದ ಧನಸಹಾಯ ಮಾರ್ಗಸೂಚಿ ಅನುಸಾರ ಕಾರ್ಯಕ್ರಮದ ನಂತರ ಎಲ್ಲಾ ದಾಖಲೆಗಳನ್ನು ಸಲ್ಲಿಸುವ ಷರತ್ತಿಗೆ ಒಳಪಟ್ಟು ಅನುದಾನ ಬಿಡುಗಡೆ ಮಾಡಬೇಕು ಎಂದು ಇಲಾಖೆಯ ನಿರ್ದೇಶಕರು ಪ್ರಸ್ತಾವ ಸಲ್ಲಿಸಿದ್ದರು.

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಕನ್ನಡ ಸಂಸ್ಕೃತಿ ಇಲಾಖೆಯು ಸಿದ್ದಾರ್ಥ ವಿಹಾರ ಟ್ರಸ್ಟ್ ಬುದ್ಧ ವಿಹಾರದಲ್ಲಿ ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 2 ಲಕ್ಷ ರು. ಅನುದಾನವನ್ನು ಪರಿಶಿಷ್ಟ ಜಾತಿ ಉಪಯೋಜನೆಯ ಲೆಕ್ಕ ಶೀರ್ಷಿಕೆಯಿಂದ ಭರಿಸಲು ಮಂಜೂರು ಮಾಡಿತ್ತು.
ನವೆಂಬರ್ನಲ್ಲಿ ತಿದ್ದುಪಡಿ ಆದೇಶ ಹೊರಡಿಸಿದ್ದೇಕೆ?
ಈ ಆದೇಶ ಹೊರಬಿದ್ದ 2 ತಿಂಗಳಲ್ಲಿ ಈ ಆದೇಶವನ್ನು ತಿದ್ದುಪಡಿ ಮಾಡಿತ್ತು. 2025ರ ಸೆ.30ರಂದು ಹೊರಡಿಸಿದ್ದ ಆದೇಶದ ಭಾಗದಲ್ಲಿದ್ದ ಪರಿಶಿಷ್ಟ ಜಾತಿ ಉಪಯೋಜನೆಯ (ಲೆಕ್ಕ ಶೀರ್ಷಿಕೆ 2205-00-102-1-44-422 ಧನಸಹಾಯ ಯೋಜನೆ) ಭರಿಸಿ ಎಂಬುದರ ಬದಲಾಗಿ ಸಾಮಾನ್ಯ ಧನ ಸಹಾಯ ಯೋಜನೆಯ (ಲೆಕ್ಕ ಶೀರ್ಷಿಕೆ 2205-00-102-1-64-059) ಭರಿಸಿ ಎಂದು ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು 2025ರ ನವೆಂಬರ್ 12ರಂದು ತಿದ್ದುಪಡಿ ಆದೇಶ ಹೊರಡಿಸಿತ್ತು.

ಸಿದ್ದಾರ್ಥ ವಿಹಾರ ಟ್ರಸ್ಟ್ ವಿರುದ್ಧದ ಖಾಸಗಿ ದೂರಿನಲ್ಲಿ ಪ್ರತಿವಾದಿಗಳಾಗಿರುವ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ಮತ್ತಿತರರನ್ನು ವಿಚಾರಣೆ ನಡೆಸಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತನ್ನ ಆದೇಶ ಪ್ರಕಟಿಸಿತ್ತು.

ನಿಯಮ ಉಲ್ಲಂಘಿಸಿ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಕೈಗಾರಿಕೆ ನಿವೇಶನ ಮಂಜೂರಾಗಿದ್ದ ಪ್ರಕರಣವೂ ಸೇರಿದಂತೆ ಟ್ರಸ್ಟ್ನ ಇನ್ನಿತರೆ ವ್ಯವಹಾರಗಳ ಕುರಿತು ತನಿಖೆ ನಡೆಸಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದಾಖಲೆಗಳ ಸಮೇತ ಖಾಸಗಿ ದೂರು (ಪಿಸಿಆರ್ ಸಂಖ್ಯೆ 27/2025 ಮತ್ತು 28/2025) ಸಲ್ಲಿಸಿತ್ತು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಕಾಯ್ದೆಯ ಸೆಕ್ಷನ್ 175(3)ರ ಅಡಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿತ್ತು.
ಭ್ರಷ್ಟಾಚಾರದ ಆರೋಪದ ಬಗೆಗಿನ ದೂರಿನ ವಿಚಾರಣೆ ನಡೆಸಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಆದೇಶ ಪ್ರಕಟಿಸಿತ್ತು.

ಸಿ ಎ ನಿವೇಶನದ ಬೆಲೆ; ರಿಯಾಯಿತಿಗೆ ಸಿದ್ದಾರ್ಥ ವಿಹಾರ ಟ್ರಸ್ಟ್ ಅರ್ಹವಿಲ್ಲ, ಮುನ್ನೆಲೆಗೆ ಬಂದ ಕಾನೂನು ಅಭಿಪ್ರಾಯ
ಬಿಡಿಎ ವ್ಯಾಪ್ತಿಯಲ್ಲಿನ ನಿವೇಶನಕ್ಕೆ ರಿಯಾಯಿತಿ ಕೋರಿದ್ದ ಪ್ರಸ್ತಾವಕ್ಕೆ ಕಾನೂನು ಅಧಿಕಾರಿಯು ವಿರೋಧ ವ್ಯಕ್ತಪಡಿಸಿದ್ದರು.
‘ದಿ ಫೈಲ್’ ಸರಣಿ ವರದಿಗಳ ಪರಿಣಾಮ; 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಹಿಂದಿರುಗಿಸಿದ ಸಿದ್ದಾರ್ಥ ವಿಹಾರ ಟ್ರಸ್ಟ್
ರಿಯಾಯಿತಿ ಅಡಿಯಲ್ಲಿಯೇ ಸಿದ್ದಾರ್ಥ ವಿಹಾರ ಟ್ರಸ್ಟ್ ಕೆಐಎಡಿಬಿ ನಿವೇಶನ ಪಡೆದುಕೊಂಡಿದ್ದನ್ನು ದಿ ಫೈಲ್ ಹೊರಗೆಡವಿತ್ತು. ಈ ವರದಿ ಪ್ರಕಟಗೊಂಡ ನಂತರ ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನವನ್ನು ಕೆಐಎಡಿಬಿಗೆ ವಾಪಸ್ ಮಾಡಿತ್ತು.




