ಹೊರಗುತ್ತಿಗೆ ನೌಕರರಿಗೆ 46.00 ಲಕ್ಷ ರು ಕಡಿಮೆ ವೇತನ; ಏಜೆನ್ಸಿಗಳ ವಂಚನೆ ಬಯಲು

ಬೆಂಗಳೂರು; ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ನಡೆಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ 46.00 ಲಕ್ಷ ರು. ಕಡಿಮೆ ವೇತನ ನೀಡಲಾಗಿದೆ ಎಂದು ಸರ್ಕಾರವೇ ಖುದ್ದು ಒಪ್ಪಿಕೊಂಡಿದೆ.

 

ವಸತಿ ಶಾಲೆಗಳಲ್ಲಿನ ಹೊರಗುತ್ತಿಗೆ ನೌಕರರಿಗೆ ನಿಗದಿಪಡಿಸಿದ್ದ ವೇತನಕ್ಕಿಂತಲೂ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ‘ದಿ ಫೈಲ್‌’ 2024ರ ಜೂನ್‌ 17ರಂದೇ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಮೂರೇ ಮೂರು ದಿನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಹೊರಗುತ್ತಿಗೆ ನೌಕರರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದಿದ್ದಾರೆ.

 

ಪರಿಶಿಷ್ಟ ಉಪ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ ಅನುದಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಈಚೆಗಷ್ಟೇ ಸಭೆ ನಡೆಸಿದ್ದರು. ಅನುದಾನ ಎಲ್ಲಿಯೂ ದುರ್ಬಳಕೆ ಆಗಬಾರದು ಮತ್ತು ನಿಗದಿತ ಅವಧಿಯೊಳಗೇ ಖರ್ಚು ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

 

ಇದರ ಬೆನ್ನಲ್ಲೇ ಇದೀಗ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಡಿಮೆ ವೇತನ ನೀಡಿರುವ ವಿಚಾರವು ಮುನ್ನೆಲೆಗೆ ಬಂದಿದೆ.

 

ಈ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ ವರದಿ ಆಧರಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸಹ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂಬಂಧ ಎಕ್ಸ್‌ನಲ್ಲಿ ಪ್ರಶ್ನಿಸಿದ್ದರು.

 

46 ಲಕ್ಷ ಕಡಿಮೆ ವೇತನ

 

ವಸತಿ ಶಾಲೆಗಳಲ್ಲಿನ ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಗಳು ಕಡಿಮೆ ವೇತನ ನೀಡುತ್ತಿದೆ ಎಂದು ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘವು ಸರ್ಕಾರದ ಗಮನಕ್ಕೆ ತಂದಿತ್ತು. ಇದನ್ನಾಧರಿಸಿ 2024ರ ಜೂನ್‌ 20ರಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.

 

‘ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಹೊರ ಸಂಪನ್ಮೂಲ ನೌಕರರಿಗೆ ಕಡಿಮೆ ವೇತನವನ್ನು ನೀಡುತ್ತಿರುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ದೂರು ಬಂದಿದ್ದ ಮೇರೆಗೆ ಕಲಬುರಗಿ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖಾ ವತಿಯಿಂದ ತನಿಖೆ ಮಾಡಿ ವರದಿ ನೀಡಿದ್ದು  46.00 ಲಕ್ಷ ರು. ಕಡಿಮೆ ವೇತನ ನೀಡಿರುವುದಾಗಿ ತಿಳಿಸಿರುತ್ತಾರೆ,’ ಎಂದು ಸಭೆ ನಡವಳಿಯಲ್ಲಿ ದಾಖಲಾಗಿದೆ.

 

ಕಾರ್ಮಿಕ ಇಲಾಖೆಯ ಅಧಿಸೂಚನೆ  ಪ್ರಕಾರ 2023ರ ಏಪ್ರಿಲ್‌ 1ರಿಂದ 2024ರ ಮಾರ್ಚ್‌ 31ರವವರೆಗೆ ಅಡುಗೆಯವರಿಗೆ 17,084 ರು ಪಾವತಿಸಬೇಕಾಗಿದ್ದು 14,387 ರು ಪಾವತಿಸಲಾಗಿರುತ್ತದೆ. ವ್ಯತ್ಯಾಸದ ಮೊತ್ತವನ್ನು ಏಕೆ ಪಾವತಿಸಿರುವುದಿಲ್ಲ ಎಂಬುದರ ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಗಳೊಂದಿಗೆ ವಿವರ ಪಡೆದಿದೆ. ಈ ಹಣವನ್ನು  ಕೂಡಲೇ ನಿಯಮಾನುಸಾರ ಬಾಕಿ ವೇತನ ಪಾವತಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

 

ಮೊರಾರ್ಜಿದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ಇನ್ನಿತರೆ ವಸತಿ ಶಾಲೆ, ಕಾಲೇಜು ಮತ್ತು ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರೂ ಸೇರಿದಂತೆ ಕೆಳ ಹಂತದ ಸಿಬ್ಬಂದಿಗಳಿಗೆ ಕಳೆದ ವರ್ಷದಲ್ಲಿ ಕನಿಷ್ಠ ವೇತನವೂ ದೊರೆತಿರಲಿಲ್ಲ.

 

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಂಬೇಡ್ಕರ್‍‌, ಇಂದಿರಾಗಾಂಧಿ ವಸತಿ ಶಾಲೆ, ಕಾಲೇಜು ಮತ್ತು ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಖಾಸಗಿ ಏಜೆನ್ಸಿಯು ಕನಿಷ್ಟ ವೇತನವನ್ನೂ ನೀಡದೇ ವಂಚಿಸಿತ್ತು.

 

ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘವು ಕಲ್ಬುರ್ಗಿ ವಿಭಾಗದಲ್ಲಿ ಆಗಿರುವ ವಂಚನೆಯನ್ನು ಸರ್ಕಾರದ ಗಮನಕ್ಕೆ ತಂದಿದೆ. ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಪಿ ಮಣಿವಣ್ಣನ್‌ ಅವರಿಗೆ 2024ರ ಮೇ 27ರಂದು ದಾಖಲೆ ಸಹಿತ ದೂರು ನೀಡಿತ್ತು.

 

ವಸತಿ ಶಾಲೆಗಳ ಹೊರಗುತ್ತಿಗೆ ಸಿಬ್ಬಂದಿಗೆ ಕಡಿಮೆ ಸಂಬಳ; ಏಜೆನ್ಸಿಗಳ ಶೋಷಣೆ, ಕೈಕಟ್ಟಿ ಕುಳಿತ ಸರ್ಕಾರ

‘ವಸತಿ ಶಾಲೆ, ಕಾಲೇಜುಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಜವಾನರು, ಡಿ ವರ್ಗದ ಸಿಬ್ಬಂದಿಗಳಿಗೆ 2023-24ನೇ ಸಾಲಿನಲ್ಲಿ ಕೊಡಬೇಕಾದ ಕನಿಷ್ಟ ವೇತನವನ್ನು ಸಿಬ್ಬಂದಿಗಳಿಗೆ ಕೊಟ್ಟಿಲ್ಲ. 2023ರ ಏಪ್ರಿಲ್‌ನಿಂದ ಇಲ್ಲಿಲಯವರೆಗೂ ಕಡಿಮೆ ಸಂಬಳವನ್ನು ಗುತ್ತಿಗೆದಾರರು ಹೊರಗುತ್ತಿಗೆ ನೌಕರರ ಖಾತೆಗೆ ಜಮಾ ಮಾಡಿದ್ದಾರೆ,’ ಎಂದು ದೂರಿನಲ್ಲಿ ವಿವರಿಸಿತ್ತು.

 

ಈ ದೂರಿನ ಜೊತೆಗೆ ನೌಕರರಿಗೆ ಕಡಿಮೆ ವೇತನ ಪಾವತಿಯಾಗಿರುವ ಸಂಬಂಧ ನೌಕರರವಾರು ಬ್ಯಾಂಕ್‌ ದಾಖಲೆಯನ್ನೂ ಒದಗಿಸಿದ್ದರು.

 

ಕಲ್ಬುರ್ಗಿಯ ಅನ್ಸಾಬಾಯಿ (ಅಡುಗೆಯವರು) ಅವರಿಗೆ 12, 552 ರು ಪಾವತಿಸಲಾಗಿತ್ತು.

 

ಬಾಲಮ್ಮ ಅವರಿಗೂ 12,552 ರು ಪಾವತಿಸಿತ್ತು.

 

ಗಂಗಮ್ಮ ಅವರಿಗೂ 12,552 ರು ನೀಡಿತ್ತು.

 

ಹಸೀನಾ ಬೇಗಂ ಅವರಿಗೆ 12,552 ರು ಪಾವತಿಸಿತ್ತು.

 

ಸವಿತಾ ಅವರಿಗೂ 12,552 ರು ನೀಡಿತ್ತು.   ಸರಸ್ವತಿ ಅವರಿಗೆ 11,704,

ಕಮಲಾಬಾಯಿ ಅವರಿಗೆ 11,704, ಮಲ್ಲಿನಾಥ್‌ ಅವರಿಗೆ 11,704,

ಅಂಬಿಕಾ ಅವರಿಗೆ 13,231 ರು ಪಾವತಿಸಿರುವುದು ವೇತನ ಪಟ್ಟಿಯಿಂದ ತಿಳಿದು ಬಂದಿತ್ತು.

 

ವಾಸ್ತವದಲ್ಲಿ ಮುಖ್ಯ ಅಡುಗೆಯವರಿಗೆ 14,758 ರು, ಅಡುಗೆಯವರಿಗೆ 14,386 ರು ಮಾಸಿಕ ಕನಿಷ್ಟ ವೇತನ ನೀಡಬೇಕು. ಸಹಾಯಕರಿಗೆ 11,872 ರು ಪಾವತಿಸಬೇಕು ಎಂದು ನಿಯಮದಲ್ಲಿ ಸೂಚಿಸಲಾಗಿದೆ. ಆದರೆ ಕಲ್ಬುರ್ಗಿ ವಿಭಾಗ ಸೇರಿದಂತೆ ಹಲವೆಡೆ ಈ ನಿಯಮವನ್ನು ಪಾಲಿಸುತ್ತಿಲ್ಲ ಎಂಬ ದೂರು ಸಲ್ಲಿಕೆಯಾಗಿತ್ತು,

 

ಹೊರಗುತ್ತಿಗೆ ಉದ್ಯೋಗಿಗಳ ಬದುಕು ಲಾಗಾಯ್ತಿನಿಂದಲೂ ಅತಂತ್ರ ಸ್ಥಿತಿಯಲ್ಲೇ ಇದೆ. ಸರ್ಕಾರ ಟೆಂಡರ್‍‌ ಕರೆದು ಕೆಲಸಗಾರರನ್ನು ಪೂರೈಸುವ ಏಜೆನ್ಸಿಗಳನ್ನು ಮೊದಲೇ ಗೊತ್ತುಪಡಿಸಿರುತ್ತದೆ. ಟೆಂಡರ್‍‌ ಪಡೆಯುವಾಗಲೇ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ವ್ಯವಾಹರಿಕವಾಗಿ ಪೂರ್ವ ನಿರ್ಧರಿತ ಒಪ್ಪಂದಗಳೂ ನಡೆದಿರುತ್ತವೆ. ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸಫಾಯಿ ಕೆಲಸ, ಕಾವಲು, ಅಡುಗೆ ಮಾಡುವ ಸಿಬ್ಬಂದಿ ಮೇಲೆ ಈಗಲೂ ಶೋಷಣೆ ಮುಂದುವರೆದಿದೆ.

the fil favicon

SUPPORT THE FILE

Latest News

Related Posts