ಲೋಹಿಯಾ ವೇದಿಕೆಯ ಶಿವಣ್ಣ ವಿರುದ್ಧ ಆರೋಪ; ವಿಶ್ರಾಂತ ಕುಲಪತಿ ನೇತೃತ್ವದ ಸಮಿತಿಯಿಂದ ತನಿಖೆಗೆ ಆದೇಶ

ಬೆಂಗಳೂರು; ಅಲಯನ್ಸ್‌ ವಿಶ್ವವಿದ್ಯಾಲಯದಿಂದ ಅಕ್ರಮವಾಗಿ ಡಾಕ್ಟರೇಟ್‌ ಪದವಿ ಪಡೆದಿರುವ ಆರೋಪಕ್ಕೆ ಗುರಿಯಾಗಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಿ ಎಸ್‌ ಶಿವಣ್ಣ ಅವರ ವಿರುದ್ಧ ವಿಸ್ತೃತ  ತನಿಖೆ ನಡೆಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು  ತನಿಖಾ ಸಮಿತಿ ರಚಿಸಿದೆ.

 

ಅಲೆಯನ್ಸ್‌ ವಿಶ್ವವಿದ್ಯಾಲಯದಿಂದ ಬಿ ಎಸ್‌ ಶಿವಣ್ಣ ಅವರು ಅಕ್ರಮವಾಗಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ ಎಂದು ಬೆಂಗಳೂರಿನ ಜಯಲಿಂಗನಗೌಡ ಎಂಬುವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ಕುರಿತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಕೂಡ ಸೂಕ್ತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಕ್ರಮವಹಿಸಬಹುದು ಎಂದು 2019ರ ಡಿಸೆಂಬರ್‍‌ 13ರಂದೇ ವರದಿ ಸಲ್ಲಿಸಿತ್ತು.

 

ವರದಿ ಸಲ್ಲಿಕೆಯಾಗಿ 4 ವರ್ಷಗಳಾದರೂ ತನಿಖೆ ನಡೆದಿರಲಿಲ್ಲ. ಆದರೀಗ ರಾಜ್ಯ ಕಾಂಗ್ರೆಸ್‌ ಸರ್ಕಾರವು ತನಿಖಾ ಸಮಿತಿ ರಚಿಸಿದೆ. ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಚಂದ್ರಶೇಖರ್‍‌ ಶೆಟ್ಟಿ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದೆ. ಈ ಸಂಬಂಧ 2024ರ ಮಾರ್ಚ್‌ 26ರಂದು ಆದೇಶ ಹೊರಡಿಸಿದೆ.

 

ಈ ಸಮಿತಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ ಶರತ್‌ ಅನಂತಮೂರ್ತಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ನಿರ್ದೇಶಕ ಡಾ ಕೆ ಜಿ ಚಂದ್ರಶೇಖರ್‍‌ ಅವರೂ ಸದಸ್ಯರನ್ನಾಗಿಸಿದೆ.

 

ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಪ್ರಸ್ತಾಪಿತ ವಿಷಯದ ಗಂಭೀರತೆಯನ್ನು ಪರಿಗಣಿಸಿ ಈ ಪ್ರಕರಣಖದ ಕುರಿತು ಒಂದು ವಿಸ್ತೃತವಾದ ತನಿಖೆ ನಡೆಸಿ ವರದಿ ನೀಡುವ ಸಂಬಂಧ ಒಂದು ತಜ್ಞರ ನೇತೃತ್ವದ ತನಿಖಾ ಸಮಿತಿಯನ್ನು ರಚಿಸಲು ಸರ್ಕಾರವು ತೀರ್ಮಾನಿಸಿದೆ,’ ಎಂದು ಆದೇಶದಲ್ಲಿ ಹೇಳಿದೆ.

 

ಅಲ್ಲದೇ  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ  ಸಮಾರಂಭದ ವೇದಿಕೆಯಲ್ಲಿ ಬಿ ಎಸ್‌ ಶಿವಣ್ಣ ಅವರು ಭಾಗವಹಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದರು. ಈ ಕುರಿತು  ಕ್ರಮ ಜರುಗಿಸುವ ಸಂಬಂಧದ ವರದಿಯನ್ನು ಪೊಲೀಸ್‌ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರಲಿಲ್ಲ ಎಂದು ಗೊತ್ತಾಗಿದೆ.

 

ಈ ಬಗ್ಗೆ  ಬಿ ಎಸ್‌ ಶಿವಣ್ಣ ಅವರು ‘ಇದೇ ವರ್ಷದ ಜೂನ್‌ನಲ್ಲಿ ತೆರವಾಗಲಿರುವ ವಿಧಾನಪರಿಷತ್‌ ಸದಸ್ಯತ್ವ ಸ್ಥಾನಕ್ಕೆ ನಾನು ಸ್ಪರ್ಧಿಸಬಯಸಿದ್ದೆ. ನನ್ನ ರಾಜಕೀಯ ಬೆಳವಣಿಗೆ, ಸಾಮಾಜಿಕ ಸೇವಾ ವಲಯದಲ್ಲಿ ಕೊಡುಗೆಯನ್ನು ಸಹಿಸದ ಶಕ್ತಿಗಳು ನನ್ನ ವಿರುದ್ಧ ನಿರಂತರವಾಗಿ ಪಿತೂರಿ ಮಾಡಿವೆ,’ ಎಂದು ಪ್ರತಿಕ್ರಿಯಿಸಿದ್ದಾರೆ.

 

ವಿಚಾರಣೆ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿರುತ್ತದೆ ಎಂದು ಸಹಾಯಕ ಪೊಲೀಸ್‌ ಕಮಿಷನರ್‌ ಅವರು ವಿಧಾನ ಪರಿಷತ್‌ ಸದಸ್ಯ ಹೆಚ್‌ ವಿಶ್ವನಾಥ್‌ ಅವರಿಗೆ ಹಿಂಬರಹ ನೀಡಿದ್ದರು.  ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ  ರಜನೀಶ್‌ ಗೋಯಲ್‌ ಅವರು ವರದಿ ಸಲ್ಲಿಸಲು ಪೊಲೀಸ್‌ ಆಯುಕ್ತರಿಗೆ  2023ರ ಸೆ.1ರಂದು ಪತ್ರ ಬರೆದಿದ್ದರು.

 

 

ಪೊಲೀಸ್‌ ಆಯುಕ್ತರಿಗೆ ಬರೆದಿರುವ ಪತ್ರದಲ್ಲೇನಿದೆ?

 

ಕಾನೂನು ಉಲ್ಲಂಘನೆ ಮಾಡಿ ಭದ್ರತಾ ಲೋಪವೆಸಗಿ ಕಾಣಿಸಿಕೊಂಡಿದ್ದು ಇವರ ವಿರುದ್ಧ ಕಾನೂನು ಕ್ರಮಜರುಗಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌  ಅವರು  ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಕೋರಿದ್ದರು. ಈ ಸಂಬಂಧ ವರದಿ ಸಲ್ಲಿಸಲು 2023ರ ಜೂನ್‌ 7ರಂದು ಪತ್ರ ಬರೆಯಲಾಗಿತ್ತು. ಆದರೆ ತಮ್ಮಿಂದ ವರದಿಯು ಸ್ವೀಕೃತವಾಗಿರುವುದಿಲ್ಲ. ಕೋರಿರುವ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಪತ್ರದಲ್ಲಿ ನಿರ್ದೇಶಿಸಿರುವುದು ಗೊತ್ತಾಗಿದೆ.

 

ಹಿಂಬರಹದಲ್ಲೇನಿತ್ತು?

 

ಮುಖ್ಯಮಂತ್ರಿಗಳ ಪದಗ್ರಹಣ ವೇದಿಕೆಯ ಸಮಾರಂಭದಲ್ಲಿ ಬಿ ಎಸ್‌ ಶಿವಣ್ಣ ಎಂಬ ಕ್ರಿಮಿನಲ್‌ ಹಿನ್ನೆಲೆಯುಳ್ಳ ವ್ಯಕ್ತಿ ಕಾನೂನುಬಾಹಿರವಾಗಿ ಮತ್ತು ಪೊಲೀಸ್‌ ಅಧಿಕಾರಿಗಳ ಭದ್ರತೆಗಳ ಪಡೆಯನ್ನು ಮರೆ ಮಾಚಿ ಹಾಗೂ ಕಾನೂನು ಶಿಷ್ಟಾಚಾರ ಉಲ್ಲಂಘನೆ ಮಾಡಿರುತ್ತಾರೆ ಎಂದು  ರಾಜ್ಯಪಾಲರಿಗೆ ದೂರು ಅರ್ಜಿ ಸಲ್ಲಿಸಿದ್ದರು. ಈ ದೂರು ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಬಿ ಎಸ್‌ ಶಿವಣ್ಣ ಅವರನ್ನು ವಿಚಾರಣೆ ಮಾಡಲಾಗಿರುತ್ತದೆ. ನೀವು ಆರೋಪಿಸಿರುವ ಆರೋಪಗಳನ್ನು ಅಲ್ಲಗಳೆದಿರುತ್ತಾರೆ. ಹಾಗೂ ವಿಚಾರಣೆ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿರುತ್ತದೆ ಎಂದು ಹಿಂಬರಹದಲ್ಲಿ ತಿಳಿಸಿದ್ದರು.

ಸಿಎಂ ಆಪ್ತ ಶಿವಣ್ಣ ವಿರುದ್ಧದ ಪ್ರಕರಣ; ವರದಿ ಸಲ್ಲಿಸಲು ಪೊಲೀಸ್‌ ಅಧಿಕಾರಿಗಳ ಮೀನಮೇಷ

 

ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ವ್ಯಕ್ತಿ ಮುಖ್ಯಮಂತ್ರಿಗಳ ಪದಗ್ರಹಣ ಪ್ರಮಾಣ ವಚನ ಸ್ವೀಕಾರ ಸಮಾರಂಭದ ರಾಜ್ಯಪಾಲರು ಪ್ರಮಾಣ ವಚನ ಬೋಧಿಸುವ ವೇದಿಕೆಯಲ್ಲಿ ಗಣ್ಯಾತಿಗಣ್ಯರು ಆಸೀನರಾಗಿದ್ದು ಭದ್ರತೆ , ಶಿಷ್ಟಾಚಾರವನ್ನು ಹಾಗೂ ಕಾನೂನನ್ನು ಉಲ್ಲಂಘಿಸಿ ವೇದಿಕೆ ಮೇಲೆ ಕಾಣಿಸಿಕೊಂಡಿರುವ ಆರೋಪ ಕುರಿತು ನಿಯಮಾನುಸಾರ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ನಿಯಮ 72ರ ಅಡಿಯಲ್ಲಿ ವಿಧಾನ ಪರಿಷತ್‌ ಅಧಿವೇಶನದಲ್ಲಿ ಎಚ್‌ ವಿಶ್ವನಾಥ್‌ ಅವರು ಗಮನ ಸೆಳೆದಿದ್ದರು.

 

 

 

ಬಿ ಎಸ್‌ ಶಿವಣ್ಣ ಅವರು ಅಲೆಯನ್ಸ್‌ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದಿದ್ದು ಕೂಡ ವಿವಾದಕ್ಕೀಡಾಗಿತ್ತು. ಅಲ್ಲದೆ ಸಂಬಂಧ ಉನ್ನತ ಶಿಕ್ಷಣ ಇಲಾಖೆಗೆ ಜಯಲಿಂಗನಗೌಡ ಎಂಬುವರು ದೂರು ಸಲ್ಲಿಸಿದ್ದರು.

 

ಸುಳ್ಳು ಮಾಹಿತಿ ನೀಡಿ ಗೌ ಡಾ ಪಡೆದರೆ ಮಳವಳ್ಳಿ ಶಿವಣ್ಣ?; ತನಿಖೆಗೆ ವಿಧಾನಪರಿಷತ್‌ ಸದಸ್ಯ ಪತ್ರ

 

ಲೋಹಿಯಾ ವಿಚಾರ ವೇದಿಕೆಯನ್ನು ಮುನ್ನೆಡೆಸುತ್ತಿರುವ ಬಿ ಎಸ್‌ ಶಿವಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts