Tuesday | July 21, 2026 |

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ ವರ್ಷವೊಂದರಲ್ಲಿಯೇ 47 ಪ್ರಕರಣಗಳಲ್ಲಿ 94 ಕಾರ್ಮಿಕರು ಮೃತರಾಗಿದ್ದರೂ ಸಹ ಕೇಂದ್ರ ಸರ್ಕಾರವು  ಕೇವಲ 12 ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಲೋಕಸಭೆಗೆ ಮಾಹಿತಿ ಒದಗಿಸಿದೆ.   ಹೀಗಾಗಿ  ಮಾನವ ತ್ಯಾಜ್ಯ ವಿಲೇವಾರಿ ಮಾಡುವಾಗ ಮೃತ ಪಟ್ಟಿರುವ ಸಫಾಯಿ ಕಾರ್ಮಿಕರ ಸಂಖ್ಯೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಂಕಿ ಅಂಶಗಳೊಂದಿಗೆ ತಾಳೆಯಾಗುತ್ತಿಲ್ಲ.

ದೇಶದಲ್ಲಿ ಮಲ ಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಆದರೂ ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 332 ಮಂದಿ ಸಫಾಯಿ ಕರ್ಮಚಾರಿಗಳು ಸಾವನ್ನಪ್ಪಿದ್ದಾರೆ.

ಜುಲೈ 21ರಂದು ನಡೆದ ಲೋಕಸಭೆ ಅಧಿವೇಶನದಲ್ಲಿ ತಮಿಳುನಾಡು ಸಂಸದ ಡಿ ರವಿಕುಮಾರ್ ಅವರು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ  ಸಾಮಾಜಿಕ ನ್ಯಾಯ ಮತ್ತುಸಬಲೀಕರಣ ಇಲಾಖೆ ಸಚಿವ ರಾಮದಾಸ್ ಅಠಾವಳೆ ಅವರು ಈ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

 

332 ಮಂದಿ ಸಾವು

ಆಂಧ್ರ ಪ್ರದೇಶದಲ್ಲಿ 5, ಬಿಹಾರ್‍‌ನಲ್ಲಿ 2, ದಾದ್ರಾ ಹವೇಲಿಯಲ್ಲಿ 3, ದೆಹಲಿಯಲ್ಲಿ 29, ಗೋವಾ 1, ಗುಜರಾತ್‌ನಲ್ಲಿ 27, ಹರ್ಯಾಣದಲ್ಲಿ 47, ಜಾರ್ಖಂಡ್‌ನಲ್ಲಿ 1, ಕರ್ನಾಟಕದಲ್ಲಿ 12, ಮಧ್ಯ ಪ್ರದೇಶದಲ್ಲಿ 13, ಮಹಾರಾಷ್ಟ್ರದಲ್ಲಿ 58, ಒಡಿಶಾದಲ್ಲಿ 2, ಪಂಜಾಬ್‌ನಲ್ಲಿ 12, ರಾಜಸ್ಥಾನದಲ್ಲಿ 23, ತಮಿಳುನಾಡಿನಲ್ಲಿ 38, ತೆಲಂಗಾಣದಲ್ಲಿ 9, ಉತ್ತರ ಪ್ರದೇಶದಲ್ಲಿ 37, ಪಶ್ಚಿಮ ಬಂಗಾಳದಲ್ಲಿ 13 ಸೇರಿದಂತೆ ಒಟ್ಟಾರೆ 332 ಮಂದಿ ಸಾವನ್ನಪ್ಪಿದ್ದಾರೆ ಎಂದು ಲೋಕಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

 

ರಾಜ್ಯದಲ್ಲಿ  ತಾಳೆಯಾಗದ ಮರಣದ ಅಂಕಿ ಅಂಶ

ಕರ್ನಾಟಕದಲ್ಲಿ ಶೌಚ ಗುಂಡಿ ಸ್ವಚ್ಚಗೊಳಿಸುವಾಗ ಸಾವನ್ನಪ್ಪಿದವರ ಸಂಖ್ಯೆ 2021ರಿಂದ 2026ರ ಜೂನ್‌ವರೆಗೆ 12 ಮಂದಿ ಮಾತ್ರ ಸಾವನ್ನಪಿದ್ದಾರೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ. ಆದರೆ ರಾಜ್ಯದಲ್ಲಿ ಇದುವರೆಗೂ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಕೆ ಮಾಡದ ಕಾರಣ ಇದುವರೆಗೂ 87 ಮ್ಯಾನುಯಲ್ ಸ್ಕಾವೆಂಜಿಂಗ್‌ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 47 ಪ್ರಕರಣಗಳಲ್ಲಿ 94 ಕಾರ್ಮಿಕರು ಮೃತರಾಗಿದ್ದಾರೆ.

2020ರಿಂದ 2024ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ 19 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗವು ದಾಖಲಿಸಿತ್ತು. ಈ ಅಂಶಗಳನ್ನು ಗಮನಿಸಿದಾಗ ಕೇಂದ್ರ ಸರ್ಕಾರವು 2026ರ ಜುಲೈ 21ರಂದು ನೀಡಿರುವ ಅಂಕಿ ಅಂಶವು, 2024ರಲ್ಲಿಯೇ ರಾಜ್ಯ  ಸರ್ಕಾರ ನೀಡಿರುವ ಮರಣದ ಅಂಕಿ ಅಂಶಗಳೊಂದಿಗೆ ತಾಳೆಯಾಗುತ್ತಿಲ್ಲ.

ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮ್ಯಾನ್‌ಹೋಲ್‌, ಸೆಪ್ಟಿಂಕ್‌ ಟ್ಯಾಂಕ್‌, ಒಳಚರಂಡಿಗಳನ್ನು ಸ್ವಚ್ಛತೆಗೆ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನೂ ಬಳಕೆ ಮಾಡುತ್ತಿಲ್ಲ. ಹೀಗಾಗಿ ವಿಷಪೂರಿತ ಗಾಳಿ ಸೇವಿಸಿ ಸಾವುಗಳು ಸಂಭವಿಸುತ್ತಿವೆ. ರಾಜ್ಯದಲ್ಲಿ 2024ರಲ್ಲೇ  ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಕೆ ಮಾಡದ ಕಾರಣ ಇದುವರೆಗೂ 87 ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಪೈಕಿ 47 ಪ್ರಕರಣಗಳಲ್ಲಿ 94 ಕಾರ್ಮಿಕರು ಮೃತರಾಗಿದ್ದರು.

ಇದುವರೆಗೂ ಮೃತ ಹೊಂದಿದ ಪ್ರಕರಣಗಳಲ್ಲಿ ಕೃತ್ಯಕ್ಕೆ ಸಂಬಂಧಿಸಿದ ಹೊರಗುತ್ತಿಗೆ ಸಂಸ್ಥೆಯ ಮತ್ತು ಇಲಾಖೆಯ ಅಧಿಕಾರಿಗಳ ವಿರುದ್ಧ  ಎಫ್‌ಐಆರ್‌  ದಾಖಲಿಸಿರಲಿಲ್ಲ. ಮ್ಯಾನ್‌ ಹೋಲ್‌ ಮತ್ತು ಸೆಪ್ಟಿಂಕ್‌ ಟ್ಯಾಂಕ್‌ ಸ್ವಚ್ಛ ಮಾಡುವಾಗ ಮೃತಪಡುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ, ನಗರ ಸ್ಥಳೀಯ ಸಂಸ್ಥೆಗಳು ಕೈ ಕಟ್ಟಿ ಕುಳಿತಿದ್ದವು.

 

 

 

ಮ್ಯಾನ್ಯುಯಲ್‌ ಸ್ಕಾವೆಂಜಿಂಗ್‌ ಪದ್ಧತಿಯನ್ನು ನಿಷೇಧಗೊಳಿಸುವುದು, ಬಿಡಬ್ಲ್ಯೂಎಸ್‌ಎಸ್‌ಬಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳ ಬಗ್ಗೆ 2024ರ ಫೆ.3ರಂದು ನಡೆದಿದ್ದ ಸಭೆಯಲ್ಲಿ ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಕುರಿತು ದೀರ್ಘವಾಗಿ ಚರ್ಚೆಯಾಗಿತ್ತು.  ಈ ವರದಿ ಕುರಿತು ಹಿಂದಿನ  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.

ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಸಂದರ್ಭದಲ್ಲಿ ಮೃತಪಟ್ಟ ಪ್ರಕರಣಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಉಳಿದೆಡೆ ನಿಗದಿತ ಅವಧಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿವೆ. ಚಾಮರಾಜನಗರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಯುಡಿಆರ್‌ ಪ್ರಕರಣ ದಾಖಲಾಗಿದೆ. ಕೆಲವು ವರದಿಗಳಲ್ಲಿ ಬಿ ರಿಪೋರ್ಟ್‌ ಸಲ್ಲಿಸಲಾಗಿದೆ. ಹೀಗಾಗಿ ಆರೋಪಿತರು ಖುಲಾಸೆಗೊಂಡಿದ್ದರು ಎಂಬುದು ಸಭೆಯ ನಡವಳಿಯಿಂದ ಗೊತ್ತಾಗಿದೆ.

ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಉಲ್ಲಂಘನೆ ಮತ್ತು ಮೃತ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸುವ ಸಂದರ್ಭದಲ್ಲಿ ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಯು ಎಸ್‌ಸಿ, ಎಸ್‌ಟಿಗೆ ಸೇರಿದ್ದಲ್ಲಿ ಅಂತಹ ಪ್ರಕರಣಗಳನ್ನು ಕಲಂ 3(1) (ಜೆ) ಪಿಒಎ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಬೇಕು.

ಹಾಗೂ ಮೃತ ವ್ಯಕ್ತಿಯು ಬೇರೆ ಜನಾಂಗದವರಾಗಿದ್ದಲ್ಲಿ ಕಲಂ 7.9 ಎಂ ಎಸ್‌ ಕಾಯ್ದೆ 2013ರಡಿ ಪ್ರಕರಣ ದಾಖಲಿಸಬೇಕು. ಈ ಪ್ರಕರಣಗಳನ್ನು ಡಿವೈಎಸ್‌ಪಿ ಹಂತದ ಅಧಿಕಾರಿಗಳು ತನಿಖೆ ಮಾಡಬೇಕು. ಅದೇ ರೀತಿ ಎಂಎಸ್‌ ಕಾಯ್ದೆ 2013ರ ಸೆಕ್ಷನ್‌ 20ರ ಅಡಿ ನೇಮಕಗೊಂಡ ಅಧಿಕಾರಿಗಳು ತನಿಖೆ ಮಾಡಿ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವಿಚಾರಣೆಗೆ ಸಲ್ಲಿಸಬೇಕು.

ಆದರೆ ಎಂ ಎಸ್‌ ಕಾಯ್ದೆ ಉಲ್ಲಂಘನೆಯಾದ ಪ್ರಕರಣಗಳು ನೇರವಾಗಿ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿವೆ. ಎಂಎಸ್‌ ಕಾಯ್ದೆ 20ರಲ್ಲಿ ಕಾಯ್ದೆ ಉಲ್ಲಂಘನೆಯಾಗುವ ಪ್ರಕರಣಗಳನ್ನು ಪೊಲೀಸ್‌ ಠಾಣೆಗಳಲ್ಲಿ ನೇರವಾಗಿ ದಾಖಲಿಸುವ ಬಗ್ಗೆ ಹಾಗೂ ಸೆಕ್ಷನ್‌ 10ರಲ್ಲಿ ಅಪರಾಧವು ಸಂಭವಿಸಿದ ದಿನಾಂಕದಿಂದ 3 ತಿಂಗಳೊಳಗೆ ಯಾರೇ ವ್ಯಕ್ತಿಯು ದೂರನ್ನು ಸಲ್ಲಿಸದ ಹೊರತು ಯಾವುದೇ ನ್ಯಾಯಾಲಯವು ಅದನ್ನು ವಿಚಾರಣೆಗೆ ತೆಗೆದುಕೊಳ್ಳತಕ್ಕದ್ದಲ್ಲ ಎಂದಿದೆ. ಇದನ್ನು ತಿದ್ದುಪಡಿ ಮಾಡುವ ಸಂಬಂಧ ರಾಷ್ಟ್ರೀಯ ಕಾನೂನು ಶಾಲೆಯೊಂದಿಗೆ ಚರ್ಚಿಸಲು ಸಭೆಯು ತೀರ್ಮಾನಿಸಿರುವುದು ತಿಳಿದು ಬಂದಿದೆ.

 

 

 

 

ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಮೃತ ಹೊಂದಿದ ಪ್ರಕರಣಗಳಲ್ಲಿ ಒಂದು ಪ್ರಕರಣ ತನಿಖಾ ಹಂತದಲ್ಲಿದೆ. ಉಳಿದ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಒಂದು ಪ್ರಕರಣದಲ್ಲಿ ನಿಗದಿತ ಅವಧಿಯಲ್ಲಿ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ರಾಜಗೋಪಾಲ ನಗರ ಪೊಲೀಸ್‌ ಠಾಣೆಯಲ್ಲಿ ಒಂದು ಯುಡಿಆರ್‌ ಪ್ರಕರಣ ದಾಖಲಾಗಿದೆ ಎಂದು ಬೆಂಗಳೂರು ನಗರದ ಅಪರಾಧ ವಿಭಾಗದ ಡಿಸಿಪಿ ಅವರು ಸಭೆಯಲ್ಲಿ ಮಾಹಿತಿ ನೀಡಿರುವುದು ಗೊತ್ತಾಗಿದೆ.

ಮತ್ತೊಂದು ಸಂಗತಿ ಎಂದರೇ ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಮೃತ ಹೊಂದುತ್ತಿರುವ ಪ್ರಕರಣಗಳಲ್ಲಿ ಹೊರಗುತ್ತಿಗೆ ಸಂಸ್ಥೆ, ಇಲಾಖೆ ಅಧಿಕಾರಿಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಿಲ್ಲ. ಅವರನ್ನು ಆರೋಪಿಗಳನ್ನಾಗಿಯೂ ಹೆಸರಿಸಿಲ್ಲ ಎಂಬುದು ತಿಳಿದು ಬಂದಿದೆ.

 

ಮ್ಯಾನ್‌ಹೋಲ್‌, ಸೆಪ್ಟಿಂಕ್‌ ಟ್ಯಾಂಕ್‌, ಒಳಚರಂಡಿಗಳಲ್ಲಿ ವಿಷಪೂರಿತ ಗಾಳಿ; 94 ಕಾರ್ಮಿಕರು ಮೃತ

 

ಇದೇ ಅವಧಿಯಲ್ಲಿ ತಪ್ಪಿತಸ್ಥರ ವಿರುದ್ಧ 193 ಎಫ್‌ಐಆರ್ ದಾಖಲಿಸಲಾಗಿತ್ತು.  ಮಲ ಹೊರುವ ಕಾರ್ಮಿಕರು ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 ಪ್ರಕಾರ ಮಲ ಹೊರುವ ಪದ್ಧತಿಗಳನ್ನು ನಿಷೇಧಿಸಲಾಗಿದೆ. ಯಾವನೇ ವ್ಯಕ್ತಿ ಯಾವುದೇ ಸಂಸ್ಥೆ ಇಂತಹ ಕೆಲಸಗಳನ್ನು  ಮಾಡಿಸುವುದು ಕಾನೂನುಬಾಹಿರವಾಗಿದೆ. ಎರಡು ವರ್ಷಗಳ ಶಿಕ್ಷೆ ಮತ್ತು  1 ಲಕ್ಷ ರುಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ವಿವರಿಸಿದ್ದರು.

ಯಾಂತ್ರೀಕೃತ ಮಾನವ ತ್ಯಾಜ್ಯ ವಿಲೇವಾರಿ ಕುರಿತಾಗಿ ದೇಶದಾದ್ಯಂತ ಜಿಲ್ಲೆಗಳಲ್ಲಿ ಮೌಲ್ಹಮಾಪನವನ್ನು ಸರ್ಕಾರವು ನಡೆಸಿಲ್ಲ. ಮಲ ಹೊರುವ ಕಾರ್ಮಿಕರ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ 2013ರಲ್ಲಿ ಬಂದಿದೆಯಾದರೂ ಆಮಾನವೀಯ ಪದ್ದತಿಗಳು ಮಾತ್ರ ಸಂಪೂರ್ಣ ನಿರ್ಮೂಲನೆ ಆಗಿಲ್ಲ ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಈ ಕುರಿತು ದಿ ಫೈಲ್‌ 2024ರ ಮೇ 20ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ವಸತಿ ಬಡಾವಣೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿ, ಬಡ್ಡಿ ಪಾವತಿ; ಲೆಕ್ಕಪತ್ರವನ್ನೇ ನಿರ್ವಹಿಸಿಲ್ಲ, ದಾಖಲೆಗಳನ್ನೂ ಒದಗಿಸಿಲ್ಲ, ಮುಡಾ ದುರಾಡಳಿತ

ಮಂಗಳೂರು: ಕುಂಜತ್‌ ಬೈಲ್ ಸೇರಿದಂತೆ ಹಲವೆಡೆ ವಸತಿ ಬಡಾವಣೆಗಳನ್ನು ರಚಿಸುವ ಉದ್ದೇಶದಿಂದ...

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಕೆ ; ಡಾ ಬೂವನಹಳ್ಳಿ ನಾಗರಾಜ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಬೆಂಗಳೂರು; ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯಾಗಿದ್ದ ಡಾ ಬೂವನಹಳ್ಳಿ...
Please Scan to make Your Contribution

Topics

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಕೆ ; ಡಾ ಬೂವನಹಳ್ಳಿ ನಾಗರಾಜ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಬೆಂಗಳೂರು; ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯಾಗಿದ್ದ ಡಾ ಬೂವನಹಳ್ಳಿ...

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...

Related Articles

Popular Categories

error: Content is protected !!