ರಾಜಕೀಯ ಕಾರ್ಯದರ್ಶಿಗಳ ಸಲಹೆಗಳೂ ‘ಗೌಪ್ಯ ದಾಖಲೆ’; ಮಾಹಿತಿಯನ್ನೇ ಮುಚ್ಚಿಟ್ಟ ಕಾಂಗ್ರೆಸ್‌ ಸರ್ಕಾರ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಗಳು ಇದುವರೆಗೂ ನೀಡಿರುವ ಸಲಹೆಗಳನ್ನು ‘ಗೌಪ್ಯ ದಾಖಲೆ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ಕಚೇರಿಯು ಆರ್‍‌ಟಿಐ ಅಡಿಯಲ್ಲಿ ಹಿಂಬರಹ ನೀಡಿದೆ.

 

ವಿಧಾನ ಪರಿಷತ್‌ ಸದಸ್ಯರಾದ ಡಾ ಕೆ ಗೋವಿಂದರಾಜು ಮತ್ತು ನಸೀರ್‍‌ ಅಹ್ಮದ್‌ ಅವರು ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕವಾದ ದಿನದಿಂದ ಇದುವರೆಗೂ ನೀಡಿರುವ ಸಲಹೆಗಳು, ಪ್ರಯಾಣ ಭತ್ಯೆ, ಸಭೆಗಳ ವಿವರಗಳು, ಭಾರತದ ಸಾರ್ವಭೌಮತ್ವ, ಏಕತೆ, ರಾಷ್ಟ್ರದ ಭದ್ರತೆ, ಕಾರ್ಯ ತಂತ್ರಕ್ಕೆ, ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ತಿಗಳಿಗೆ, ವಿದೇಶದೊಂದಿಗೆ ಸಂಬಂಧ ಇವುಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗುವ ವ್ಯಾಪ್ತಿಗೆ ಒಳಪಡದಿದ್ದರೂ ಅವರಿಬ್ಬರೂ ನೀಡಿರುವ ಸಲಹೆಗಳು ‘ಗೌಪ್ಯತೆ’ ಹೆಸರಿನಲ್ಲಿ ಬಹಿರಂಗಪಡಿಸದೇ ಮುಚ್ಚಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

 

ರಾಜಕೀಯ ಕಾರ್ಯದರ್ಶಿ, ಎಂಬ ಹುದ್ದೆಗಳನ್ನು ಸೃಜಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಕಾನೂನಿನಲ್ಲಿ ಇಂತಹ ಹುದ್ದೆಗಳನ್ನು ಸೃಜಿಸಲು ಅವಕಾಶವಿಲ್ಲ. ಹೀಗಾಗಿ ಇಂತಹ ನೇಮಕಾತಿ ಸಂವಿಧಾನ ವಿರೋಧಿಯಾಗಿದ್ದು ಕೂಡಲೇ ರದ್ದುಗೊಳಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಡಾ ಕೆ ಗೋವಿಂದರಾಜು ಮತ್ತು ನಸೀರ್‍‌ ಅಹ್ಮದ್‌ ಅವರು ನೀಡಿರುವ ಸಲಹೆಗಳು ‘ಗೌಪ್ಯ’ ಎಂದು ನೀಡಿರುವ ಹಿಂಬರಹವು ಮುನ್ನೆಲೆಗೆ ಬಂದಿದೆ.

 

ವಿಧಾನ ಪರಿಷತ್‌ ಸದಸ್ಯರಾದ ಡಾ ಕೆ ಗೋವಿಂದರಾಜು ಮತ್ತು ನಸೀರ್‍‌ ಅಹ್ಮದ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕವಾದ ದಿನದಿಂದ ಇದುವರೆಗೂ ನೀಡಿರುವ ಸಲಹೆಗಳು, ಪ್ರಯಾಣ ಭತ್ಯೆ, ಸಭೆಗಳ ವಿವರಗಳನ್ನು ಕೇಳಿ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಕೋರಿತ್ತು.

 

ಈ ಮಾಹಿತಿಗೆ ಹಿಂಬರಹ ನೀಡಿರುವ ಡಾ ಕೆ ಗೋವಿಂದರಾಜು ಅವರ ಕಛೇರಿಯ ವಿಶೇಷಾಧಿಕಾರಿ ‘ಸದರಿ ಮಾಹಿತಿಯು ಗೌಪ್ಯವಾದ ದಾಖಲೆಯಾಗಿದ್ದು, ಈ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮ 8(1) ಜೆ ರಂತೆ ನೀಡಲು ಅವಕಾಶವಿರುವುದಿಲ್ಲ. ಇದುವರೆವಿಗೂ ಕಚೇರಿ ಹಂತದಲ್ಲಿ ಸಭೆಗಳನ್ನು ಆಯೋಜಿಸಿರುವುದಿಲ್ಲ. ಜೂನ್‌ ಮಾಹೆಯ ವೇತನ ಪಡೆದಿದ್ದು 2023ರ ಜೂನ್‌ 21 ಹಾಗೂ ಜೂನ್‌ 22ರಂದು ಮುಖ್ಯಮಂತ್ರಿಯವರೊಂದಿಗೆ ದೆಹಲಿ ಪ್ರವಾಸವನ್ನು ಕೈಗೊಂಡಿರುತ್ತಾರೆ,’ ಎಂದು ಮಾಹಿತಿ ಒದಗಿಸಿದ್ದಾರೆ. ಆದರೆ ವೇತನ ಎಷ್ಟು ಪಡೆದಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಒದಗಿಸಿಲ್ಲ.

 

ಅದೇ ರೀತಿ ನಸೀರ್‍‌ ಅಹ್ಮದ್‌ ಅವರ ಕಛೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಗೋವಿಂದರಾಜು ಅವರ ಕಚೇರಿಯ ವಿಶೇ‍ಷಾಧಿಕಾರಿ ನೀಡಿರುವ ಮಾಹಿತಿಯನ್ನೇ ಪುನರುಚ್ಛರಿಸಿದ್ದಾರೆ. ‘ಸದರಿ ಮಾಹಿತಿಯು ಗೌಪ್ಯವಾದ ದಾಖಲೆಯಾಗಿದ್ದು, ಈ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮ 8(1) ಜೆ ರಂತೆ ನೀಡಲು ಅವಕಾಶವಿರುವುದಿಲ್ಲ. ಇದುವರೆವಿಗೂ ಕಚೇರಿ ಹಂತದಲ್ಲಿ ಸಭೆಗಳನ್ನು ಆಯೋಜಿಸಿರುವುದಿಲ್ಲ. ಇದುವರೆಗೂ ವೇತನ, ಪ್ರಯಾಣ ಭತ್ಯೆಗಳನ್ನು ಪಾವತಿ ಮಾಡಿರುವುದಿಲ್ಲ,’ ಎಂದು ಉತ್ತರ ನೀಡಿದ್ದಾರೆ.

 

ಯಾವೆಲ್ಲಾ ಮಾಹಿತಿ ಗೌಪ್ಯ?

 

ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಭಾರತದ ಸಾರ್ವಭೌಮತ್ವಕ್ಕೆ ಮತ್ತು ಏಕತೆಗೆ, ರಾಷ್ಟ್ರದ ಭದ್ರತೆಗೆ, ಕಾರ್ಯ ತಂತ್ರಕ್ಕೆ, ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ತಿಗಳಿಗೆ, ವಿದೇಶದೊಂದಿಗೆ ಸಂಬಂಧ ಇವುಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೋ ಅಥವಾ ಒಂದು ಅಪರಾಧಕ್ಕೆ ಪ್ರೇರಣೆ ನೀಡುತ್ತದೋ ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ.

 

ಅದೇ ರೀತಿ ಯಾವುದೇ ನ್ಯಾಯಾಲಯವು ಅಥವಾ ನ್ಯಾಯಾಧೀಕರಣವು ಯಾವ ಮಾಹಿತಿಯ ಪ್ರಕಟಣೆಯನ್ನು ಸ್ಪಷ್ಟವಾಗಿ ನಿಷೇಧಿಸಿದೆಯೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ನ್ಯಾಯಾಲಯ ನಿಂದನೆಯಾಗಬಹದೋ ಅಂಥ ಮಾಹಿತಿ, ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಸಂಸತ್ತು ಅಥವಾ ರಾಜ್ಯ ವಿಧಾನ ಮಂಡಲದ ಹಕ್ಕುಚ್ಯುತಿ ಉಂಟಾಗುವುದೋ ಅಂಥ ಮಾಹಿತಿಯನ್ನು ಕಾಯ್ದೆ ಅನುಸಾರ ಒದಗಿಸಲು ನಿರ್ಬಂಧವಿದೆ.

 

ಇನ್ನು, ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಮೂರನೇ ಪಕ್ಷಕಾರನ ಸ್ಪರ್ಧಾತ್ಮಕ ಸ್ಥಾನಮಾನಕ್ಕೆ ಅಪಾಯವುಂಟಾಗುವುದೋ ಅಂಥ ವಾಣಿಜ್ಯ ರಹಸ್ಯ, ವ್ಯಾಪಾರ ಗೌಪ್ಯತೆಗಳು ಅಥವಾ ಬೌದ್ಧಿಕ ಆಸ್ತಿಯನ್ನೊಳಗೊಂಡ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕರ ಹೆಚ್ಚಿನ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು ಅಂಥ ಮಾಹಿತಿ, ಯನ್ನು ಒದಗಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ.

 

ಹಾಗೆಯೇ ತನ್ನ ವಿಶ್ವಾಸ ಆಧಾರಿತ ಸಂಬಂಧದಲ್ಲಿ ಒಬ್ಬ ವ್ಯಕ್ತಿಗೆ ದೊರಕುವ ಮಾಹಿತಿ, ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕರ ಹೆಚ್ಚಿನ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು ಅಂಥ ಮಾಹಿತಿಯನ್ನು, ವಿದೇಶಿ ಸರ್ಕಾರದಿಂದ ರಹಸ್ಯವಾಗಿ ಪಡೆದ ಮಾಹಿತಿಯನ್ನು, ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಯಾರೇ ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಉಂಟಾಗುತ್ತಿದೆಯೋ ಅಂಥ ಮಾಹಿತಿಯನ್ನು ಅಥವಾ ಕಾನೂನು ಜಾರಿಯ ಅಥವಾ ಭದ್ರತೆ ಉದ್ದೇಶಗಳಿಗಾಗಿ ರಹಸ್ಯವಾಗಿ ನೀಡಿದ ಮಾಹಿತಿಯ ಅಥವಾ ಸಹಾಯದ ಮೂಲವನ್ನು ಗುರುತಿಸುವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಿದೆ.

 

ಇನ್ನು, ತನಿಖಾ ಪ್ರಕ್ರಿಯೆ ಅಥವಾ ಅಪರಾಧಿಗಳ ದಸ್ತಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂಥ ಮಾಹಿತಿಯನ್ನು, ಮಂತ್ರಿಮಂಡಲದ, ಕಾರ್ಯದರ್ಶಿಗಳ ಮತ್ತು ಇತರ ಅಧಿಕಾರಿಗಳ ಚರ್ಚೆಗಳ ದಾಖಲೆಗಳು ಸೇರಿದಂತೆ ಸಚಿವ ಸಂಪುಟದ ಕಾಗದ ಪತ್ರಗಳನ್ನು, ಮಂತ್ರಿ ಮಂಡಳದ ನಿರ್ಣಯಗಳು, ಆ ನಿರ್ಣಯಗಳಿಗೆ ಕಾರಣಗಳು ಮತ್ತು ತೆಗೆದುಕೊಂಡ ನಿರ್ಣಯಗಳಿಗೆ ಆಧರಿಸಿದ ವಿಷಯ ಸಾಮಗ್ರಿ ಇವುಗಳನ್ನು ನಿರ್ಣಯ ತೆಗೆದುಕೊಂಡ ಮತ್ತು ಆ ವಿಷಯ ಪೂರ್ಣಗೊಂಡ ಅಥವಾ ಮುಕ್ತಾಯಗೊಂಡ ತರುವಾ ಸಾರ್ವಜನಿಕರಿಗೆ ತಿಳಿಯಪಡಿಸತಕ್ಕದ್ದು, ಮತ್ತೂ ಪರಂತು, ಬಹಿರಂಗಪಡಿಸಬಾರದೆಂದು ಈ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳನ್ನು ಬಹಿರಂಗಪಡಿಸತಕ್ಕದ್ದಲ್ಲಎಂದು ಕಾಯ್ದೆ ಹೇಳಿದೆ.

 

ಯಾವ ಮಾಹಿತಿಯ ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಯ ಗೌಪ್ಯತೆ ಅನಗತ್ಯ ಅತಿಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ನಿರ್ಬಂಧವಿದೆ.

 

ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭಾನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಅಪೀಲು ಪ್ರಾಧಿಕಾರಿಗೆ ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚಿನ ಹಿತದೃಷ್ಟಿಯಿಂದ ನ್ಯಾಯಸಮ್ಮತ ಎಂಧು ಮನದಟ್ಟಾದ ಹೊರತು ಅಂತ ಮಾಹಿತಿಯನ್ನು ಒದಗಿಸಲು ಯಾವುದೇ ಮಾಹಿತಿಯನ್ನು ಒದಗಿಸಲು ಯಾವುದೇ ಬಾಧ್ಯತೆ ಇರತಕ್ಕದ್ದಲ್ಲ ಎಂದೂ ಹೇಳಿದೆ.

 

‘ಮುಖ್ಯಮಂತ್ರಿಗಳ    ರಾಜಕೀಯ ಕಾರ್ಯದರ್ಶಿ  ಸಾರ್ವಜನಿಕ ಸೇವಕರಾಗಿ ಇರುವುದರಿಂದ ರಾಜ್ಯದ ಆಡಳಿತಕ್ಕೆ ಸಂಬಂಧಪಟ್ಟ ಸಲಹೆ, ಸೂಚನೆಗಳನ್ನು ನೀಡಿರುವುದನ್ನು ಪಾರದರ್ಶಕ ಆಡಳಿತ ನಡೆಸುವರು ಬಹಿರಂಗಪಡಿಸಲೇಬೇಕು. ಇವರು ಕೊಡುವ ಸಲಹೆ ಸೂಚನೆಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಲು ಇವರೇನು  ವಾಯುಪಡೆ, ನೌಕಾಪಡೆ, ಸೇನಾಪಡೆಯ ಮುಖ್ಯಸ್ಥರಲ್ಲ ಮತ್ತು ರಾಜ್ಯ ಗುಪ್ತಚಾರದಳದ  ಮುಖ್ಯಸ್ಥರಲ್ಲ* ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಅಷ್ಟೇ,’ ಎನ್ನುತ್ತಾರೆ ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌.

the fil favicon

SUPPORT THE FILE

Latest News

Related Posts