ಅಳೆದೂ ತೂಗಿ ಕೆಎಎಸ್‌ ಅಧಿಕಾರಿಗೆ ಹುದ್ದೆ ತೋರಿಸಿದ ಸರ್ಕಾರ; ಮುಖ್ಯ ಜಾಗೃತಾಧಿಕಾರಿ ಹುದ್ದೆಗೆ ನೇಮಕ

ಬೆಂಗಳೂರು; ಸಕಾರಣಗಳಿಲ್ಲದಿದ್ದರೂ  ಎತ್ತಂಗಡಿ ಶಿಕ್ಷೆಗೆ ಒಳಗಾಗಿ ಹುದ್ದೆ ಇಲ್ಲದೇ ಅತಂತ್ರವಾಗಿದ್ದ ಕೆಎಎಸ್‌ ಅಧಿಕಾರಿ ಶ್ರೀನಿವಾಸ್‌ ಅವರಿಗೆ ಕಡೆಗೂ ರಾಜ್ಯ ಸರ್ಕಾರವು  ಅಳೆದೂ ತೂಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ.

 

ಕೆಎಎಸ್‌ ಅಧಿಕಾರಿ ಶ್ರೀನಿವಾಸ್‌ ಅವರನ್ನು  ಹುದ್ದೆಯೇ ಇಲ್ಲದ ನಿಗಮಕ್ಕೆ ವರ್ಗಾಯಿಸಿತ್ತು. ಹುದ್ದೆಯನ್ನು ತೋರಿಸದೇ ವರ್ಗಾವಣೆ ಮಾಡಿದ್ದರಿಂದಾಗಿ ಆದೇಶವನ್ನು ಮಾರ್ಪಡಿಸಬೇಕು ಎಂದು ಕೋರಿ ಸ್ವತಃ ಪತ್ರ ಬರೆದಿದ್ದರು.  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ತಿಂಗಳಾದರೂ  ಆ ಪತ್ರದತ್ತ ತಿರುಗಿಯೂ ನೋಡಿರಲಿಲ್ಲ. ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕೆ ಆರ್‍‌ ಶ್ರೀನಿವಾಸ್‌ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ.

 

ಕಾರ್ಯನಿರ್ವಹಿಸಿದ ಕಡೆಯೆಲ್ಲೆಲ್ಲಾ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸಿರುವ ಹಿನ್ನೆಲೆ ಇರುವ  ಕೆಎಎಸ್‌ ಅಧಿಕಾರಿ ಕೆ ಆರ್‍‌ ಶ್ರೀನಿವಾಸ್‌ ಅವರಿಗೆ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಅತ್ತ ಹುದ್ದೆಯೂ ನೀಡದೇ ಇತ್ತ ಆದೇಶವನ್ನು ಮಾರ್ಪಡಿಸದೇ ಇದ್ದದ್ದು  ದಕ್ಷ ಅಧಿಕಾರಿಶಾಹಿಯೊಳಗೆ  ಅಸಮಾಧಾನಕ್ಕೆ ಕಾರಣವಾಗಿತ್ತು.

 

‘ಸ್ಥಳ ನಿಯುಕ್ತಿಗೊಳಿಸಿ, ದಯವಿಟ್ಟು ಸಹಾಯ ಮಾಡಿ’; ಸರ್ಕಾರಕ್ಕೆ ಮೊರೆಯಿಟ್ಟ ಅಧಿಕಾರಿಯ ಪತ್ರ ಬಹಿರಂಗ

 

 

ದಾವಣಗೆರೆ ಮಹಾನಗರಪಾಲಿಕೆಯ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ ಆರ್‍‌ ಶ್ರೀನಿವಾಸ ಅವರನ್ನು ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಅವಧಿಪೂರ್ವವಾಗಿ ಎತ್ತಂಗಡಿ ಮಾಡಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು  ಕೆಯುಡಿಎಫ್‌ಸಿನಲ್ಲಿ  ಹುದ್ದೆಯೇ ಇಲ್ಲದಿದ್ದರೂ  ವರ್ಗಾವಣೆ ಮಾಡಿತ್ತು.

 

ಹೀಗಾಗಿ ಅಲ್ಲಿಯೂ ಅವರಿಗೆ ಕಾರ್ಯಭಾರವಿಲ್ಲದಂತಾಗಿತ್ತು. ಹೀಗಾಗಿ ಕೆ ಆರ್‍‌ ಶ್ರೀನಿವಾಸ್‌ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2023ರ ಆಗಸ್ಟ್‌ 19ರಂದು ಪತ್ರವನ್ನು ಬರೆದು ವರ್ಗಾವಣೆ ಆದೇಶ ಮಾರ್ಪಡಿಸಿ ಸ್ಥಳ ನಿಯುಕ್ತಿಗೊಳಿಸಬೇಕು ಎಂದು ಕೋರಿದ್ದರು.

 

ಪತ್ರದಲ್ಲೇನಿದೆ?

 

‘ಸರ್ಕಾರದ ಆದೇಶದಂತೆ (ಆದೇಶ ಸಂಖ್ಯೆ; ಸಿಆಸುಇ 256 ಆಸೇವೆ 2023) ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಹುದ್ದೆಯಿಂದ ಕೆಯುಐಡಿಎಫ್‌ಸಿಗೆ ವರ್ಗಾಯಿಸಿದ್ದು ಸದರಿ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಲು ಹೋದಾಗ ಹುದ್ದೆ ಖಾಲಿ ಇಲ್ಲ ಎಂದು ಪತ್ರ ಬರೆದಿರುತ್ತಾರೆ. ಆದ್ದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಮುಖ್ಯ ಜಾಗೃತಾಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿ ಮಾಡಿಕೊಡಲು ತಮ್ಮಲ್ಲಿ ಕೋರುತ್ತೇನೆ. I Kindly Request you to post as Chief Vigilance Offiecer, Helath and Family Welfare. Please help me sir,’ ಎಂದು ಕೋರಿದ್ದರು.

 

ಸಿಎಂ ಸಚಿವಾಲಯದ ಅಧೀನ ಕಾರ್ಯದರ್ಶಿ ಎತ್ತಂಗಡಿ; ಸಚಿವರ ಒತ್ತಡ, ಹುದ್ದೆಯೇ ಇಲ್ಲದ ಜಾಗಕ್ಕೆ ವರ್ಗಾ

 

ಎತ್ತಂಗಡಿ ಹಿಂದೆ ಸಚಿವರ ಪ್ರಭಾವ?

 

ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆಯಿಂದ ಕೆ ಆರ್‍‌ ಶ್ರೀನಿವಾಸ ಅವರನ್ನು ಎತ್ತಂಗಡಿ ಮಾಡಿರುವುದರ ಹಿಂದೆ ಸಚಿವರೊಬ್ಬರು ಪ್ರಮುಖ ಪಾತ್ರವಹಿಸಿದ್ದರು ಎಂಬ ಮಾತು ಕೇಳಿ ಬಂದಿದೆ. ಕೆ ಆರ್‍‌ ಶ್ರೀನಿವಾಸ ಅವರು ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿ ನೇಮಕವಾಗುವ ಮುನ್ನ ದಾವಣಗೆರೆ ಮಹಾನಗರಪಾಲಿಕೆಯ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.

 

ಯಾರು ಈ ಶ್ರೀನಿವಾಸ್‌

 

ಈ ವೇಳೆಯಲ್ಲಿ ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಪ್ರಾಮಾಣಿಕವಾಗಿ ಶ್ರಮಿಸಿದ್ದರು. ಮತದಾರರಲ್ಲಿ ಈ ಕುರಿತು ಅರಿವು ಮೂಡಿಸಿದ್ದರು. ಒಂದೊಂದು ಮತಕ್ಕೆ 1ರಿಂದ 2 ಸಾವಿರ ರು ಹಣ ನೀಡುತ್ತಿರುವ ಬಗ್ಗೆಯೂ ದೂರುಗಳನ್ನು ಪರಿಶೀಲಿಸಿದ್ದರು. ನೂರಾರು ಕೋಟಿ ರು. ದೋಚಿದರೆ ಇದು ಮತದಾರರಿಗೆ ಮಾಡುವ ಮೋಸ ಎಂದು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಮಾತನಾಡಿದ್ದರು. ಈ ಮೂಲಕ ಮತದಾರರಲ್ಲಿ ಹಣ ಪಡೆದು ಮತ ಚಲಾಯಿಸಬೇಡಿ ಎಂದು ಅರಿವು ಮೂಡಿಸಿದ್ದರು. ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುವವರಿಗೆ ಮತದಾನ ಮಾಡಬೇಡಿ. ಪ್ರಜಾಪ್ರಭುತ್ವ ನಾಶ ಮಾಡುವ ಅಭ್ಯರ್ಥಿಗಳಿಗೆ ಮತದಾನ ಮಾಡಬೇಡಿ. ಕಳ್ಳರನ್ನು ಹಿಡಿದು ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ  ಕೋರಿದ್ದರು.

 

 

ಕೊಣನೂರು ಚುನಾವಣೆ ವೇಳೆ ದೇವರ ಫೋಟೋ ನಡುವೆ ದುಡ್ಡು ಇಟ್ಟು ಜನರಿಗೆ ಹಣ ಹಂಚುತ್ತಿದ್ದಾರೆ ಎಂದು ದೂರು ಸ್ವೀಕರಿಸಿದ್ದ  ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ  ಶ್ರೀನಿವಾಸ್ ಅವರು  ಚುನಾವಣೆ ದಿನ ಮುಂಜಾನೆ ಪರಿಶೀಲನೆ ನಡೆಸಿದ್ದರು. ದಾವಣಗೆರೆ ಜಿಲ್ಲೆಯೊಂದರಲ್ಲೇ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ  ದೂರುಗಳನ್ನಾಧರಿಸಿ 15 ಎಫ್‌ಐಆರ್‍‌ಗಳನ್ನು ದಾಖಲಿಸಿದ್ದರು.

 

ಈ ಅವಧಿಯಲ್ಲಿ ಚುನಾವಣಾ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದರಲ್ಲದೇ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 15 ಎಫ್‌ಐಆರ್‍‌ಗಳನ್ನು ದಾಖಲಿಸಿದ್ದರು. ಇದಕ್ಕೂ ಮುನ್ನ ಅರಕಲಗೂಡುವಿನಲ್ಲಿ ತಹಶೀಲ್ದಾರ್‍‌ ಆಗಿ ಕಾರ್ಯನಿರ್ವಹಿಸಿದ್ದ ಶ್ರೀನಿವಾಸ್‌ ಅವರು ರೈತರ ಮನೆ ಮನೆಗೆ ತೆರಳಿ ಎರಡು ಸಾವಿರ ಪೌತಿ ಖಾತೆ ಮಾಡಿಸುವ ಮೂಲಕ ಆಂದೋಲನವನ್ನೇ ನಡೆಸಿದ್ದರು.

 

 

ಪಟ್ಟಣ ಪ್ರದೇಶಗಳಲ್ಲಿ SC, ST , ವಿಶೇಷ ಚೇತನ ಹಾಗೂ ಇತರೆ ಹಿಂದುಳಿದ ವರ್ಗಗಳ ನಾಗರೀಕರ ಬಡತನ ನಿರ್ಮೂಲನೆಗೆ ಅನೇಕ ಯೋಜನೆಗಳ ಪೈಕಿ  24.10 ಯೋಜನೆ 7.25 ಯೋಜನೆ, 5 % ಯೋಜನೆಯಂತೆ ಅನೇಕ ಕಲ್ಯಾಣ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ್ದಲ್ಲದೇ ಅದು ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಂಡಿದ್ದರು.

 

ಹೊಳೆನರಸೀಪುರ ತಾಲೂಕಿನ ಬೆಟ್ಟದ ಸಾತೇನಹಳ್ಳಿಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದ  ಸುಡುಗಾಡು ಸಿದ್ದರು ಮನೆ ಕಟ್ಟಿಕೊಳ್ಳಲು ಸರಕಾರಿ ಜಮೀನು ಮಂಜೂರಾತಿಗಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿದ್ದರು. ಈ ಕುರಿತು ‘ದಿ ಹಿಂದೂ’ ಪ್ರಕಟಿಸಿದ ವರದಿ ಆಧರಿಸಿ  ಅಲೆಮಾರಿ ಜನರನ್ನು ಭೇಟಿ ಮಾಡಿ, ಅವರ ಕಷ್ಟ, ಸಂಕಷ್ಟಗಳಿಗೆ ತಹಶೀಲ್ದಾರ್‍‌ ಕೆ ಆರ್‍‌ ಶ್ರೀನಿವಾಸ್‌ ಅವರು  ಕಿವಿಯಾಗಿದ್ದರು.  ಇದೇ ತಾಲೂಕಿನ ಇನ್ನೊಂದು ಹಳ್ಳಿಯಲ್ಲಿದ್ದ ಶಿಳ್ಳೇಕ್ಯಾತ ಕುಟುಂಬಗಳಿಗೂ ಜಮೀನು ಕಾಯ್ದಿರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts