ಬೆಂಗಳೂರು; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ 8,660.99 ಕೋಟಿಯನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಿತ್ತು. ಈ ಹೆಚ್ಚುವರಿ ವೆಚ್ಚಕ್ಕೆ ಗೃಹಲಕ್ಷ್ಮಿ ಯೋಜನೆಯೇ ಕಾರಣ. ಹೀಗಾಗಿ ಇಲಾಖೆಯು ಮಾಡಿದ್ದ ಹೆಚ್ಚುವರಿ ವೆಚ್ಚದಲ್ಲಿ ಗೃಹಲಕ್ಷ್ಮಿಯದ್ದೇ ಸಿಂಹಪಾಲು. ಆದರೆ ಈ ವೆಚ್ಚವನ್ನು ಸಕ್ರಮಗೊಳಿಸಿರಲಿಲ್ಲ. ಅಲ್ಲದೇ ಇಲಾಖೆಯೂ ಸಹ ವಿವಿಧ ಯೋಜನೆಗಳಿಗೆ ಮಾಡಿದ್ದ ಹೆಚ್ಚುವರಿ ವೆಚ್ಚಗಳಿಗೆ ಕಾರಣಗಳನ್ನೂ ತಿಳಿಸಿರಲಿಲ್ಲ.
ಗೃಹಲಕ್ಷ್ಮಿ ಹಣ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಪ್ರತಿಪಕ್ಷ ಬಿಜೆಪಿಯು ಸದನದಲ್ಲಿ ಹೆಚ್ಚು ಚರ್ಚೆಗೊಳಪಡಿಸಿತ್ತು. ಅಲ್ಲದೇ ಆಡಳಿತ ಪಕ್ಷದೊಂದಿಗೆ ವಾಗ್ವಾದಕ್ಕೂ ಇಳಿದಿತ್ತು. ಈ ಬೆಳವಣಿಗೆ ನಡುವೆಯೇ ಗೃಹಲಕ್ಷ್ಮಿ ಯೋಜನೆಗೆ ಮಾಡಿರುವ ಹೆಚ್ಚುವರಿ ವೆಚ್ಚದ ವಿವರಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಬಯಲು ಮಾಡಿದ್ದಾರೆ.

ಭಾರತದ ಸಂವಿಧಾನದ 205ನೇ ವಿಧಿ ಪ್ರಕಾರ ರಾಜ್ಯ ಸರ್ಕಾರದ ಅನುದಾನ, ಧನವಿನಿಯೋಗಗಳ ಮೇಲಿನ ಹೆಚ್ಚುವರಿಯನ್ನು ರಾಜ್ಯ ಶಾಸಕಾಂಗವು ಕಡ್ಡಾಯವಾಗಿ ಕ್ರಮಬದ್ಧಗೊಳಿಸಬೇಕು. ಆದರೆ 2024-25ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆಯು 8,660.99 ಕೋಟಿಯಷ್ಟು ಹೆಚ್ಚುವರಿ ವೆಚ್ಚ ಮಾಡಿರುವುದು ಮುನ್ನೆಲೆಗೆ ಬಂದಿದೆ.
ಗೃಹಲಕ್ಷ್ಮಿ ಮಾತ್ರವಲ್ಲ, ಕೇಂದ್ರ ಪ್ರಾಯೋಜಿತ ಯೋಜನೆ-ರಾಜ್ಯದ ಪಾಲು- ಅಂಗನವಾಡಿ ಕಟ್ಟಡಗಳ ಉನ್ನತೀಕರಣ ಯೋಜನೆಯಲ್ಲಿಯೂ ಹೆಚ್ಚುವರಿಯಾಗಿ 65.93 ಕೋಟಿ ರುಪಾಯಿ ವೆಚ್ಚ ಮಾಡಿತ್ತು.
ಹಾಗೆಯೇ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಬೆಂಗಳೂರು ನಗರ ನೀರು ಸರಬರಾಜು ಮಂಡಳಿ ಮತ್ತು ಒಳಚರಂಡಿ ಯೋಜನೆ, ಕಾವೇರಿ ನೀರು ಸರಬರಾಜು ಯೋಜನೆ, ಬಾಹ್ಯ ನೆರವಿನ ಯೋಜನೆ, ಸಾವ್ಜನಿಕ ವಲಯದ ಉದ್ದಿಮೆಗಳು, ಸ್ಥಳೀಯ ಸಂಸ್ಥೆಗಳಿಗೆ ಸಾಲ ನೀಡುವ ಲೆಕ್ಕ ಶೀರ್ಷಿಕೆಯಲ್ಲಿ ಒಟ್ಟಾರೆ 227.59 ಕೋಟಿ ರುಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಿತ್ತು.

ಅದೇ ರೀತಿ ನೀರಾವರಿ ಪಂಪ್ ಸೆಟ್ಗಳಿಗಾಗಿ ಉಚಿತ ವಿದ್ಯುತ್ ಪೂರೈಕೆ ಯೋಜನೆಗೆ ನೀಡಿದ್ದ ಸಹಾಯಧನದ ಪೈಕಿ 4,757.93 ಕೋಟಿ ರು ಹೆಚ್ಚುವರಿಯಾಗಿ ಖರ್ಚು ಮಾಡಿತ್ತು. ಒಟ್ಟಾರೆಯಾಗಿ 13,646.51 ಕೋಟಿಯಷ್ಟು ಹೆಚ್ಚುವರಿ ಖರ್ಚಾಗಿತ್ತು. ಆದರೆ ಈ ಹೆಚ್ಚುವರಿ ವೆಚ್ಚಕ್ಕೆ ಇಲಾಖೆಗಳು ಯಾವುದೇ ಕಾರಣಗಳನ್ನೂ ತಿಳಿಸಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಅದೇ ರೀತಿ ಈ ಮೂರೂ ಇಲಾಖೆಗಳು 2024-25ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಮಾಡಿದ್ದ 4,388.75 ಕೋಟಿ ರುಪಾಯಿಯನ್ನು ಇನ್ನೂ ಕ್ರಮಬದ್ಧಗೊಳಿಸಬೇಕಿದೆ ಎಂದು ಸಿಎಜಿ ವರದಿಯು ಹೇಳಿದೆ. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಒಟ್ಟಾರೆ 106.46 ಕೋಟಿ, ನಗರಾಭಿವೃದ್ಧಿ ಇಲಾಖೆಯು 23.60 ಕೋಟಿ, ಇಂಧನ ಇಲಾಖೆಯು 4,198.69 ಕೋಟಿ ರುಪಾಯಿ ಹೆಚ್ಚುವರಿಯಾಗಿ ಖರ್ಚು ಮಾಡಿತ್ತು.
ಬಿಜೆಪಿ ಅವಧಿಯಲ್ಲಿ 2,323.73 ಕೋಟಿ ವೆಚ್ಚ ಸಕ್ರಮಗೊಳಿಸಿಲ್ಲ
ಹಾಗೆಯೇ 2020-21ರಿಂದ 2023-24ರವರೆಗೆ 10 ಇಲಾಖೆಗಳು ಹೆಚ್ಚುವರಿಯಾಗಿ 5,175.21 ಕೋಟಿ ರುಪಾಯಿಗಳನ್ನು ವೆಚ್ಚ ಮಾಡಿತ್ತು. ಈ ವೆಚ್ಚವನ್ನೂ ರಾಜ್ಯ ಶಾಸಕಾಂಗವು ಸಕ್ರಮಗೊಳಿಸಿಲ್ಲ. ಸಕ್ರಮಗೊಳಿಸಲು 5,175.21 ಕೋಟಿ ರು ಬಾಕಿ ಇದೆ. 2020-21ರಲ್ಲಿ ರಾಜಸ್ವ (ರಾಜಸ್ವ-ಪುರಸ್ಕೃತ)ದಲ್ಲಿ 354.59 ಕೋಟಿ, ರಾಜಸ್ವ (ಬಂಡವಾಳ)ದಲ್ಲಿ 48.01 ಕೋಟಿ ರು ಹೆಚ್ಚುವರಿ ವೆಚ್ಚವನ್ನು ಸಕ್ರಮಗೊಳಿಸಲು ಬಾಕಿ ಇದೆ.
2022-23ರಲ್ಲಿ ಆರ್ಥಿಕ, ಮೂಲಭೂತ ಸೌಕರ್ಯ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಆಹಾರ ನಾಗರೀಕ ಸರಬರಾಜು, ಕಂದಾಯ, ಲೋಕೋಪಯೋಗಿ, ಋಣ ಮೇಲುಸ್ತುವಾರಿ ಇಲಾಖೆಯಡಿಯಲ್ಲಿ ಒಟ್ಟಾರೆ 1,907.83 ಕೋಟಿ ರುಪಾಯಿಗಳ ಹೆಚ್ಚುವರಿ ವೆಚ್ಚವನ್ನು ಸಕ್ರಮಗೊಳಿಸಲು ಬಾಕಿ ಇದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಆರ್ಥಿಕ (ರಾಜಸ್ವ ಪುರಸ್ಕೃತ)ದಲ್ಲಿ 176.96 ಕೋಟಿ, ಮೂಲಭೂತ ಸೌಕರ್ಯ, ಬಂಡವಾಳ ಅಭಿವೃದ್ದಿಯಲ್ಲಿ 54.40 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ನಲ್ಲಿ 148.59 ಕೋಟಿ, ಸಮಾಜ ಕಲ್ಯಾಣ (ಬಂಡವಾಳ ಪುರಸ್ಕೃತ) 207.13 ಕೋಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (ರಾಜಸ್ವ ಪುರಸ್ಕೃತ) 104.28 ಕೋಟಿ, ಕಂದಾಯ (ರಾಜಸ್ವ ಪುರಸ್ಕೃತ)ದಲ್ಲಿ 467.12 ಕೋಟಿ, ಲೋಕೋಪಯೋಗಿ ಕಾಮಗಾರಿಗಳು (ಬಂಡವಾಳ ಪುರಸ್ಕೃತ) ವಿಭಾಗದಲ್ಲಿ 716.55 ಕೋಟಿ ರುಪಾಯಿ ಹೆಚ್ಚುವರಿ ವೆಚ್ಚವನ್ನು ಸಕ್ರಮಗೊಳಿಸಿಲ್ಲ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಕಾಂಗ್ರೆಸ್ ಅವಧಿಯಲ್ಲಿ ಸಕ್ರಮಗೊಳ್ಳದ 2,851.47 ಕೋಟಿ ಹೆಚ್ಚುವರಿ ವೆಚ್ಚ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಸಹ 2,851.47 ಕೋಟಿ ರು ಹೆಚ್ಚುವರಿಯಾಗಿ ವೆಚ್ಚ ಮಾಡಿತ್ತು.

ಈ ವೆಚ್ಚವನ್ನೂ ಸಹ ಸಕ್ರಮಗೊಳಿಸಲು ರಾಜ್ಯ ಶಾಸಕಾಂಗದಲ್ಲಿ ಬಾಕಿ ಇರುವುದು ಗೊತ್ತಾಗಿದೆ. ಕೃಷಿ ಮತ್ತು ತೋಟಗಾರಿಕೆ (ರಾಜಸ್ವ ಪುರಸ್ಕೃತ)ಯಲ್ಲಿ 147.91 ಕೋಟಿ, ಆರ್ಥಿಕ (ರಾಜಸ್ವ-ಪುರಸ್ಕೃತ) ದಲ್ಲಿ 575.89 ಕೋಟಿ, ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ (ರಾಜಸ್ವ ಪುರಸ್ಕೃತ) 12.73 ಕೋಟಿ, ಬಂಡವಾಳ ಪುರಸ್ಕೃತದಲ್ಲಿ 32.59 ಕೋಟಿ, ವಾಣಿಜ್ಯ ಮತ್ತು ಕೈಗಾರಿಕೆಯಲ್ಲಿ (ಬಂಡವಾಳ-ಪುರಸ್ಕೃತ)ದಲ್ಲಿ 87.66 ಕೋಟಿ, ನೀರಾವರಿ (ಬಂಡವಾಳ-ಪುರಸ್ಕೃತ) ಯಲ್ಲಿ 226. 52 ಕೋಟಿ, ಲೋಕೋಪಯೋಗಿ ಕಾಮಗಾರಿಗಳಲ್ಲಿ 128.13 ಕೋಟಿ, ಇಂಧನ (ರಾಜಸ್ವ- ಪುರಸ್ಕೃತ)ದಲ್ಲಿ 1,627.93 ಕೋಟಿ, ಋಣ ಮೇಲುಸ್ತುವಾರಿಯಲ್ಲಿ 12.11 ಕೋಟಿ ಸೇರಿ ಒಟ್ಟಾರೆ 2,851.47 ಕೋಟಿ ಹೆಚ್ಚುವರಿ ವೆಚ್ಚವಾಗಿತ್ತು.

‘ರಾಜ್ಯ ಸಂಚಿತ ನಿಧಿಯಿಂದ ಖರ್ಚಿನ ಮೇಲೆ ಶಾಸಕಾಂಗ ಮೇಲ್ವಿಚಾರಣೆಯನ್ನು ಬಲಪಡಿಸಲು ಈ ಹೆಚ್ಚುವರಿ ವೆಚ್ಚಗಳನ್ನು ಆದಷ್ಟು ಬೇಗ ಸಕ್ರಮಗೊಳಿಸಬೇಕು. ಮತ್ತು ಅಂತಹ ಹೆಚ್ಚುವರಿ ಪುನರಾವರ್ತನೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬಹುದು, ‘ ಎಂದು ಸಿಎಜಿಯು ತನ್ನ ವರದಿಯಲ್ಲಿ ಸಲಹೆ ನೀಡಿರುವುದು ಗೊತ್ತಾಗಿದೆ.
1,353.31 ಕೋಟಿಯಷ್ಟು ಮಿತಿಮೀರಿದ್ದ ವೆಚ್ಚ
ಕೃಷಿ ತೋಟಗಾರಿಕೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್, ಅರಣ್ಯ ಜೀವಿಶಾಸ್ತ್ರ, ಸಮಾಜ ಕಲ್ಯಾಣ, ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆ, ಕಂದಾಯ, ಶಿಕ್ಷಣ, ನಗರಾಭಿವೃದ್ದಿ, ವಸತಿ, ಕಾರ್ಮಿಕ, ಕೌಶಲ್ಯ, ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಲ್ಲಿ 1,353.31 ಕೋಟಿಯಷ್ಟು ಮಿತಿ ಮೀರಿ ವೆಚ್ಚ ಮಾಡಿರುವುದನ್ನು ಸಿಎಜಿಯು ಪರಿಶೋಧನೆ ವೇಳೆಯಲ್ಲಿ ಸಾಬೀತುಪಡಿಸಿದೆ.
ಶಾಸಕಾಂಗದ ಅನುಮೋದನೆಯಿಲ್ಲದೇ 10,035.13 ಕೋಟಿ ವೆಚ್ಚ
ರಾಜ್ಯ ಶಾಸಕಾಂಗದ ಅನುಮೋದನೆಯಿಲ್ಲದೆಯೇ ಹಿಂದಿನ ಬಿಜೆಪಿ ಮತ್ತು ಹಾಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಟ್ಟಾರೆ 10,035.13 ಕೋಟಿ ರು ಮೊತ್ತದ ವೆಚ್ಚಕ್ಕೆ ಕಾರ್ಯಕಾರಿ ಆದೇಶಗಳನ್ನು ಹೊರಡಿಸಿತ್ತು. ಕಾರ್ಯನಿರ್ವಾಹಕ ಆದೇಶ, ಸೂಚನೆಗಳ ಮೂಲಕ ಹೆಚ್ಚುವರಿ ಮಂಜೂರಾತಿಯನ್ನು ತುರ್ತು ಪ್ರಕರಣಗಳಿಗಷ್ಟೇ ಸೀಮಿತಗೊಳಿಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕಟ್ಟುನಿಟ್ಟಾಗಿ ಸೂಚಿಸಿದ್ದರೂ ಸಹ ಸರ್ಕಾರವು ಇದನ್ನು ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಬಯಲು ಮಾಡಿರುವುದು ಗೊತ್ತಾಗಿದೆ.

2020-21ರಲ್ಲಿ 5,281.70 ಕೋಟಿ, 2021-22ರಲ್ಲಿ 8,489.40 ಕೋಟಿ, 2022-23ರಲ್ಲಿ 10,948.60 ಕೋಟಿ, 2023-24ರಲ್ಲಿ 4,850.73 ಕೋಟಿ, 2024-25ರಲ್ಲಿ 10,.035.13 ಕೋಟಿ ರು ವೆಚ್ಚಕ್ಕೆ ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಿತ್ತು. ಕಾರ್ಯನಿರ್ವಾಹಕ ಆದೇಶಗಳ ಮೂಲಕ ಬಿಡುಗಡೆಯಾದ ಹೆಚ್ಚುವರಿ ಮೊತ್ತದ ಪ್ರಕರಣಗಳು 2022-23ರವರೆಗೆ ಹೆಚ್ಚಿದ್ದವು. ನಂತರ 2023-24ರಲ್ಲಿ ಕಡಿಮೆಯಾಯಿತು.
ಆದರೆ 2024-25ರ ಅವಧಿಯಲ್ಲಿ ಬಹುತೇಕ ಹಾಗೇ ಮುಂದುವರೆಯಿತು. 2023-24ರ ಅವಧಿಯಲ್ಲಿ ಗಣನೀಯವಾಗಿ ಕುಸಿದಿದ್ದ ಬಿಡುಗಡೆಯಾದ ಮೊತ್ತವು 2024-25ರ ಅವಧಿಯಲ್ಲಿ ಮತ್ತೊಮ್ಮೆ ಹೆಚ್ಚಾಯಿತು ಎಂದು ಸಿಎಜಿ ವರದಿಯು ವಿಶ್ಲೇಷಿಸಿರುವುದು ತಿಳಿದು ಬಂದಿದೆ.





