ಅಕ್ರಮವೆಸಗಿದ ಗಣಿ ಗುತ್ತಿಗೆದಾರರಿಗೂ ಒಟಿಎಸ್‌ ಭಾಗ್ಯ; ನಷ್ಟದ ಲೆಕ್ಕವಿಲ್ಲ, ಆರ್ಥಿಕ ಪರಿಣಾಮದ ಉಲ್ಲೇಖವೂ ಇಲ್ಲ

ಬೆಂಗಳೂರು; ಅಕ್ರಮ ಗಣಿಗಾರಿಕೆ ಮಾಡಿರುವ  ಕಲ್ಲು ಗಣಿ ಉದ್ಯಮಿ, ಕಂಪನಿಗಳ ಪರವಾಗಿ ಒಟಿಎಸ್‌ ಸೌಲಭ್ಯ ನೀಡಲು ನಿಯಮ ರೂಪಿಸಲು ಮುಂದಾಗಿರುವ ಸರ್ಕಾರವು,  ಒಟಿಎಸ್‌ ಸೌಲಭ್ಯ ನೀಡಿದಲ್ಲಿ ಸರ್ಕಾರಕ್ಕೆ ಆಗಲಿರುವ ನಷ್ಟದ ಪ್ರಮಾಣ ಮತ್ತು ಇದರಿಂದ ಸಂಭವಿಸಲಿರುವ ಆರ್ಥಿಕ ಪರಿಣಾಮಗಳ ಕುರಿತು ಸಚಿವ ಸಂಪುಟ ಟಿಪ್ಪಣಿಯಲ್ಲಿ ಯಾವು ಮಾಹಿತಿಯೂ  ಇಲ್ಲ.

 

ಅಲ್ಲದೇ ಒಟಿಎಸ್‌ ಸೌಲಭ್ಯ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ಅಪಾರ ಪ್ರಮಾಣದ ನಷ್ಟವನ್ನೂ ಆರ್ಥಿಕ ಇಲಾಖೆಯು ಅಂದಾಜಿಸಿಲ್ಲ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಸಹ ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿಯೂ ನಷ್ಟದ ಅಂಕಿ ಅಂಶಗಳನ್ನೂ ಒದಗಿಸಿಲ್ಲ.

 

2024ರ ಡಿಸೆಂಬರ್ 6ರಂದು ನಡೆದಿದ್ದ  ಸಚಿವ ಸಂಪುಟ ಸಭೆಯು   ಕಲ್ಲು ಗಣಿ ಗುತ್ತಿಗೆದಾರರಿಗೆ ಒಟಿಎಸ್‌ ಸೌಲಭ್ಯವನ್ನು ಕರುಣಿಸಲು ಸಮ್ಮತಿಸಿತ್ತು.  ಡ್ರೋಣ್‌ ಸರ್ವೆ ಅಪೂರ್ಣಗೊಂಡಿದ್ದರೂ ಸಹ ಗಣಿ ಉದ್ಯಮಿ, ಕಂಪನಿಗಳಿಗೆ ಒಟಿಎಸ್‌ ಭಕ್ಷೀಸು ನೀಡಲು ಅನುಮೋದನೆ ನೀಡಿತ್ತು. ಈ ಟಿಪ್ಪಣಿಯಲ್ಲಿ ಆರ್ಥಿಕ ಇಲಾಖೆಯು  ‘ಸಚಿವ ಸಂಪುಟ ಕೈಗೊಳ್ಳುವ ತೀರ್ಮಾನದ ಹಿನ್ನೆಲೆಯಲ್ಲಿ ಆರ್ಥಿಕ ಪರಿಣಾಮಗಳನ್ನು ನಿರೀಕ್ಷಿಸಿದೆ,’ ಎಂದು ಅಭಿಪ್ರಾಯಿಸಿತ್ತು.

 

2026ರ ಫೆಬ್ರುವರಿ 12ರಂದು ನಡೆದಿದ್ದ ಸಚಿವ ಸಂಪುಟಕ್ಕೆ ಮಂಡಿಸಿದ್ದ ಪ್ರಸ್ತಾವದಲ್ಲೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯೂ ಸಹ ಆರ್ಥಿಕ ಪರಿಣಾಮಗಳನ್ನು ವಿವರಿಸಿರಲಿಲ್ಲ.  2024 ಮತ್ತು 2026ರಲ್ಲಿ ನಡೆದಿದ್ದ ಸಚಿವ ಸಂಪುಟಕ್ಕೆ ಮಂಡಿಸಿದ್ದ ಎಲ್ಲಾ ರಹಸ್ಯ ಹಾಳೆಗಳೂ ‘ದಿ ಫೈಲ್‌’ಗೆ ಲಭ್ಯವಾಗಿವೆ.

 

2024ರಲ್ಲಿ ಸಚಿವ ಸಂಪುಟಕ್ಕೆ ಮಂಡಿಸಿದ್ದ ಪ್ರಸ್ತಾವನೆಯಲ್ಲೇನಿತ್ತು?

 

ಗಣಿ ಉದ್ಯಮಿಗಳಿಗೆ ಒಟಿಎಸ್‌ ಸೌಲಭ್ಯ ನೀಡಲು ಪ್ರಸ್ತಾವನೆಗೆ ಮರು ಜೀವ ಬಂದಿತ್ತು. ಈ ಕುರಿತು 2023ರ ನವೆಂಬರ್‍‌ 27ರಿಂದಲೇ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಸಭೆಗಳು ನಡೆದಿದ್ದವು.

 

 

 

 

 

 

 

ವಿಶೇಷವೆಂದರೇ ಆರ್ಥಿಕ ಇಲಾಖೆಯು ಒಟಿಎಸ್‌ ಸೌಲಭ್ಯ ನೀಡುವುದರಿಂದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗುವುದರ ಬಗ್ಗೆ ಹೆಚ್ಚು ಗಮನವನ್ನೇ ಹರಿಸಿಲ್ಲ. ಬದಲಿಗೆ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಆರ್ಥಿಕ ಪರಿಣಾಮಗಳನ್ನು ನಿರೀಕ್ಷಿಸಬಹುದು ಎಂದು ಒಂದು ಸಾಲಿನ ಅಭಿಪ್ರಾಯವನ್ನು ನೀಡಿತ್ತು.

 

ಗಣಿ ಗುತ್ತಿಗೆದಾರರಿಂದ 6,105 ಕೋಟಿ ರು. ದಂಡ ವಸೂಲು; ಒಟಿಎಸ್‌ ಜಾರಿಗೆ ಸಂಪುಟಕ್ಕೆ ಪ್ರಸ್ತಾವ ಸಲ್ಲಿಕೆ

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 2,145 ಕಲ್ಲು  ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಒಟಿಎಸ್‌ ಜಾರಿಯಾಗಲಿದೆ. 2018-19ನೇ ಸಾಲಿನಲ್ಲಿ ಕಲ್ಲು ಗಣಿ ಗುತ್ತಿಗೆಗಳ ಡ್ರೋನ್‌ ಮತ್ತು ಡಿಜಿಪಿಎಸ್‌ ಸರ್ವೆ ಕಾರ್ಯವನ್ನು ಕೈಗೊಂಡು ಈ ಸಾಲಿನಲ್ಲಿ ಚಾಲ್ತಿಯಲ್ಲಿದ್ದ ರಾಜಧನ 60 ರು.ರಂತೆ ಒಟ್ಟು 5 ಪಟ್ಟು ದಂಡ ವಿಧಿಸಲಾಗಿದ್ದು ಪ್ರಸ್ತುತ ಒಟಿಎಸ್‌ ಅನುಷ್ಠಾನಕ್ಕೆ ಈ ರಾಜಧನ ಮೊತ್ತವನ್ನೇ ಪರಿಗಣಿಸಬೇಕು ಎಂದು ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ್‌ ಅವರು ಅಭಿಪ್ರಾಯಿಸಿದ್ದರು.

 

6,105 ಕೋಟಿ ದಂಡ ವಸೂಲಿ; ಗಣಿ ಉದ್ಯಮಿಗಳಿಗೆ ಕಾಂಗ್ರೆಸ್‌ ಸರ್ಕಾರದಿಂದ ಒಟಿಎಸ್‌ ಭಕ್ಷೀಸು

 

ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ‘ 2006ರ ನಂತರದ ವರ್ಷಗಳಲ್ಲಿ ನಿಗದಿಪಡಿಸಿದ ರಾಜಧನ ಮೊತ್ತಕ್ಕೆ ಕೆಎಂಎಂಸಿಆರ್‍‌ 1994ರ ನಿಯಮ 41 ಅನ್ವಯ ಬಾಕಿ ರಾಜಧನ, ಬಡ್ಡಿ ಮತ್ತು ದಂಡದ ಮೇಲಿನ ಮೊತ್ತಕ್ಕೆ ಶೇ.15ರಷ್ಟು ಬಡ್ಡಿಯನ್ನು ವಿಧಿಸಿದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ರಾಜಧನ 70 ರು.ಗಿಂತ ಹೆಚ್ಚಿನ ಮೊತ್ತವಾಗಲಿದೆ,’ ಎಂದು ಸಭೆಗೆ ವಿವರಿಸಿದ್ದರು.

 

 

ಹೀಗಾಗಿ ಲಭ್ಯವಿರುವ ಕಾರ್ಟ್ಸಾಟ್‌ ಇಮೇಜ್‌ಗಳನ್ನು ಬಳಸಿಕೊಂಡು ಗುತ್ತಿಗೆ ಪ್ರದೇಶದಲ್ಲಿ ತೆಗೆದಿರುವ ಖನಿಜ ಪ್ರಮಾಣವನ್ನು ಅಂಧಾಜಿಸಿ ಒಟಿಎಸ್‌ ಮೂಲಕ ರಾಜಧನ ಸಂಗ್ರಹಿಸಲು ಮೊತ್ತ ನಿಗದಿಪಡಿಸಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

 

‘ಇನ್ನು ಮುಂದೆ ಗುತ್ತಿಗೆ ಪ್ರದೇಶಗಳಲ್ಲಿ ಡ್ರೋನ್‌ ಮತ್ತು ಡಿಜಿಪಿಎಸ್‌ ಸರ್ವೆ ಕಾರ್ಯ ನಡೆಸಿ ತೆಗೆದ ಖನಿಜ ಪ್ರಮಾಣವನ್ನು ನಿಖರವಾಗಿ ಅಂದಾಜಿಸಿ ಸರ್ಕಾರಕ್ಕೆ ರಾಜಧನ ಸೋರಿಕೆಯಾಗದಂತೆ ತಡೆಯಲು ಹಾಗೂ ಈ ಹಿಂದೆ ತೆಗೆದಿರುವ ಖನಿಜವನ್ನು ಒಟಿಎಸ್‌ ಮೂಲಕ ಇತ್ಯರ್ಥಪಡಿಸಲು ಪ್ರಸ್ತಾಪಿಸಲಾಗಿದೆ,’ ಎಂದು ಕೃಷ್ಣಬೈರೇಗೌಡ ಅವರು ಅಭಿಪ್ರಾಯಿಸಿದ್ದರು.

 

 

 

2018-19ನೇ ಸಾಲಿನಲ್ಲಿ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 2438 ಕಟ್ಟಡ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಡ್ರೋನ್‌, ಡಿಜಿಪಿಎಸ್‌ ಉಪಕರಣಖ ಬಳಸಿ ಸರ್ವೆ ಮಾಡಲಾಗಿದೆ. ಈ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಖನಿಜ ರವಾನೆ ಪರವಾನಗಿ ಪಡೆಯದೇ 281.33 ಮಿಲಿಯನ್‌ ಮೆಟ್ರಿಕ್‌ ಟನ್‌, ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿ 75.71 ಮಿಲಿಯನ್‌ ಮೆಟ್ರಿಕ್‌ ಟನ್‌ ಸೇರಿ ಒಟ್ಟಾರೆ 357.07 ಮಿಲಿಯನ್‌ ಮೆಟ್ರಿಕ್‌ ಟನ್‌ ಪ್ರಮಾಣದ ಕಟ್ಟಡ ಕಲ್ಲು ಉಪ ಖನಿಜವನ್ನು ತೆಗೆದಿದೆ ಎಂದು ಅಂದಾಜಿಸಿರುವುದನ್ನು ಸಚಿವ ಸಂಪುಟ ಸಭೆಯ ಟಿಪ್ಪಣಿಯಲ್ಲಿ ದಾಖಲಿಸಿತ್ತು.

 

ಕಲ್ಲು ಗಣಿ ಗುತ್ತಿಗೆ ಮಂಜೂರಾದ ದಿನಾಂಕದಿಂದ ಪ್ರಸ್ತುತ ಸಾಲಿನವರೆಗಿನ ಸಂಚಿತ ಆಡಿಟ್‌ ಪ್ರಮಾಣ 153.50 ಮಿಲಿಯನ್‌ ಮೆಟ್ರಿಕ್‌ ಟನ್‌ನ್ನು ಕಳೆದು ಉಳಿದ ಖನಿಜ ಪ್ರಜಾಣ 203.54 ಮಿಲಿಯನ್‌ ಮೆಟ್ರಿಕ್‌ ಟನ್‌ ಕಟ್ಟಡ ಕಲ್ಲು ಉಪ ಖನಿಜಕ್ಕೆ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 36ರಂತೆ ಪ್ರತಿ ಮೆಟ್ರಿಕ್‌ ಟನ್‌ಗೆ 60 ರು. ಪಾವತಿಸಲು ಕಲ್ಲು ಗಣಿ ಗುತ್ತಿಗೆದಾರರಿಗೆ  ನೋಟೀಸ್‌ ಜಾರಿಗೊಳಿಸಿತ್ತು.

 

ಒಟ್ಟು 1,221.00 ಕೋಟಿ ರಾಜಧನ ಐದು ಪಟ್ಟು ದಂಡ 6,105 ಕೋಟಿಗಳ ದಂಡವನ್ನು ಅಂದಾಜಿಸಿದೆ. ಈ ದಂಡವನ್ನು ಒಟಿಎಸ್‌ ಮೂಲಕ ಅನುಷ್ಠಾನಗೊಳಿಸುವ ಕುರಿತು ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಇಲಾಖೆಯೂ ಸಮರ್ಥಿಸಿಕೊಂಡಿತ್ತು.

 

ಸಮರ್ಥನೆಯಲ್ಲೇನಿತ್ತು?

 

ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 36ರಂತೆ ಪ್ರತಿ ಮೆಟ್ರಿಕ್‌ ಟನ್‌ ಗೆ 60 ರು.ನಂತೆ ರಾಜಧನ ಒಟ್ಟು 1,221 ಕೋಟಿ ರ.ಗಳ ಐದುಪಟ್ಟು ದಂಡದ ರೂಪದಲ್ಲಿ 6,105.98 ಕೋಇಟ ರು.ಗಳ ದಂಡ ವಸೂಲು ಗುತ್ತಿಗೆದಾರರಿಗೆ ನೋಟೀಸ್‌ ಜಾರಿಮಾಡಲಾಗಿದೆ. ಆದರೆ ಈ ನೋಟೀಸ್‌ಗಳನ್ನು ಗುತ್ತಿಗೆದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಹೀಗಾಗಿ ರಾಜಧನ ಸಂಗ್ರಹವಾಗದೇ ಬಾಕಿ ಉಳಿದಿದೆ. ಹೀಗಾಗಿ ಒಟಿಎಸ್‌ ಅನುಷ್ಠಾನಗೊಳಿಸಬಹುದು ಎಂದು ಇಲಾಖೆಯು ಸಮರ್ಥನೆ ಮಾಡಿಕೊಂಡಿತ್ತು.

 

 

 

ಆಡಳಿತ ಇಲಾಖೆಯ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿಸಿತ್ತು. ಆದರೆ ಎಲ್ಲಿಯೂ ಬೊಕ್ಕಸಕ್ಕೆ ಇದರಿಂದ ನಷ್ಟವಾಗಲಿದೆ ಎಂಬ ಕನಿಷ್ಟ ಕಾಳಜಿಯನ್ನೂ ವ್ಯಕ್ತಪಡಿಸಿರಲಿಲ್ಲ.

 

ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿತ್ತು?

 

‘ಉಪ ಖನಿಜಗಳ ಪ್ರಮಾಣಕ್ಕೆ ಅನುಗುಣವಾಗಿ ವಿಧಿಸಬೇಕಾಗಿರುವ ರಾಜಧನ, ದಂಡವನ್ನು ಒಟಿಎಸ್‌ ಮೂಲಕ ಅನುಷ್ಠಾನಗೊಳಿಸುವುದು ಸಮಂಜಸವಾಗಿರುತ್ತದೆ.

 

 

ಗಣಿ ಭೂ ವಿಜ್ಞಾನ ಇಲಾಖೆಯಿಂದ ವಿಧಿಸಿರುವ ದಂಡವನ್ನು ಒಟಿಎಸ್‌ ಮೂಲಕ ಅನುಷ್ಠಾನಗೊಳಿಸಿರುವ ಕುರಿತು ಶಿಫಾರಸ್ಸುಗಳನ್ನು ಮಾಡಲು ರಚಿತವಾಗಿರುವ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳ ಮೇಲೆ ಸಚಿವ ಸಂಪುಟವು ಕೈಗೊಳ್ಳುವ ತೀರ್ಮಾನದ ಹಿನ್ನೆಲೆಯಲ್ಲಿ ಆರ್ಥಿಕ ಪರಿಣಾಮಗಳನ್ನು ನಿರೀಕ್ಷಿಸಿದೆ,’ ಎಂದು ಅಭಿಪ್ರಾಯಿಸಿತ್ತು.

 

2026ರ ಸಚಿವ ಸಂಪುಟ ಟಿಪ್ಪಣಿಯಲ್ಲೇನಿದೆ?

 

ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಘಿ ಉಪ ಖನಿಜವನ್ನು ತೆಗೆದು ರಾಜಧನವನ್ನು ಪಾವತಿಸದೆ ಸಾಗಾಣಿಕೆ ಮಾಡಲಾಗಿದೆ. ಹಾಗೂ ಗುತ್ತಿಗೆ ಪ್ರದೇಶಕ್ಕೆ ಹೊಂದಿಕೊಂಡಂತೆ ಒತ್ತುವರಿ ಮಾಡಿರುವ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದಂಡ ವಿಧಿಸಿತ್ತು. ಇದನ್ನು ಒಂದಾವರ್ತಿ ತೀರುವಳಿ (ಒಟಿಎಸ್‌) ಮೂಲಕ ಅನುಷ್ಠಾನಗೊಳಿಸಲು ನಿಯಮಗಳನ್ನು ರಚಿಸಲು ಸಚಿವ ಸಂಪುಟಕ್ಕೆ ಪ್ರಸ್ತಾವಿಸಿತ್ತು.

 

ಕಾನೂನು ಇಲಾಖೆ ಅಭಿಪ್ರಾಯವೇನು?

 

ಒಂದಾವರ್ತಿ ತೀರುವಳಿ (ಒಟಿಎಸ್‌) ಮೂಲಕ ಅನುಷ್ಠಾನಗೊಳಿಸಲು ನಿಯಮ ರಚಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಲ್ಲಿಸಿದ್ದ ಪ್ರಸ್ತಾವವನ್ನು ಕಾನೂನು ಇಲಾಖೆಯು ಪರಿಶೀಲಿಸಿತ್ತು. ಕೇಂದ್ರ ಸರ್ಕಾರದ ಕಾಯ್ದೆಗೆ ಸಂಬಂಧಿಸಿದ ನಿಯಮಗಳಿಗೆ (ಕೆಎಂಎಂಸಿಆರ್ ನಿಯಮ 1994) ಯಾವುದೇ ತಿದ್ದುಪಡಿ ಮಾಡಲು ಇಲಾಖೆಯು ಇಚ್ಛಿಸಿದಲ್ಲಿ ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಬೇಕಾಗುತ್ತದೆ.

 

 

ಒಟಿಎಸ್‌ ಯೋಜನೆ ಅನುಷ್ಠಾನದ ಕುರಿತು ತಿದ್ದುಪಡಿ ಮಾಡಲು ಸಿದ್ಧಪಡಿಸಿರುವ ಕರಡು ನಿಯಮಾವಳಿಗಳು ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪ ಖನಿಜವನ್ನು ತೆಗೆದು ರಾಜಧನವನ್ನು ಪಾವತಿಸದೇ ಸಾಗಾಣಿಕೆ ಮಾಡಿರುವ ಮತ್ತು ಗುತ್ತಿಗೆ ಪ್ರದೇಶಕ್ಕೆ ಹೊಂದಿಕೊಂಡಂತೆ ಒತ್ತುವರಿ ಮಾಡಿರುವ ಸಂಬಂಧ ಗಣಿ ಭೂ ವಿಜ್ಞಾನ ಇಲಾಖೆಯಿಂದ ವಿಧಿಸಿರುವ ದಂಡವನ್ನು ಒಟಿಎಸ್ ಯೋಜನೆ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲು ಕಾನೂನು ಇಲಾಖೆಯು ಸಹಮತಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

 

 

 

 

 

 

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂಧ ವಿಧಿಸಿರುವ ದಂಡವನ್ನು ಒಟಿಎಸ್‌ ಮೂಲಕ ಅನುಷ್ಠಾನಗೊಳಿಸಿ ಮತ್ತು ಇತ್ಯರ್ಥಪಡಿಸಲು ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 2026 ನಿಯಮ 44-ಎ ಜಾರಿಗೊಳಿಸಲಿದೆ. ಈ ನಿಯಮಗಳ ಮಾರ್ಗಸೂಚಿಗಳನ್ನೂ ಸಹ ಶೀಘ್ರದಲ್ಲಿಯೇ ಹೊರಡಿಸಲಿದೆ.

 

ಮಾರ್ಗಸೂಚಿಗಳಲ್ಲೇನಿದೆ?

 

ಕೆಎಂಎಂಸಿ ನಿಯಮಗಳು 1994ರ ನಿಯಮ 44-ಎ (1)(ಎ) ರ ಪ್ರಕಾರ ಕಟ್ಟಡ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಪರವಾನಗಿ ಪಡೆಯದೇ ಕಟ್ಟಡ ಕಲ್ಲು ಉಪ ಖನಿಜವನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡಿರುವ  ಪ್ರಮಾಣವನ್ನು ಹಾಗೂ ಇಯಮ 44-ಎ (1)(ಬಿ)ರ ಪ್ರಕಾರ ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿರುವ ಕಟ್ಟಡ ಕಲ್ಲಿನ ಪ್ರಮಾಣವನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

 

 

ಈಗಾಗಲೇ ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಖನಿಜ ಸಾಗಾಣಿಕೆ ಪರವಾನಿಗೆ ಪಡೆಯದೇ ಕಟ್ಟಡ ಕಲ್ಲು ಉಪ ಖನಿಜವನ್ನು ಸಾಗಾಣಿಕೆ ಮಾಡಿರುವ ಪ್ರಕರಣಗಳಿಗೆ ನಿಯಮ 44(4)ರಂತೆ ದಂಡ ವಿಧಿಸಿ ಈ ದಂಡದ ಮೊತ್ತವನ್ನು ಕಲ್ಲು ಗಣಿ ಗುತ್ತಿಗೆದಾರರು ಪಾವತಿಸಿದಲ್ಲಿ ಈ ಪ್ರಮಾಣವನ್ನು ಸಂಚಿತ ಆಡಿಟ್ ಪ್ರಮಾಣಕ್ಕೆ ಪರಿಗಣಿಸಿ ಒಟಿಎಸ್ ವ್ಯಾಪ್ತಿ ಪರಿಗಣಿಸಲಿದೆ. ಆದರೆ ಪುನಃ ದಂಡವನ್ನು ವಿಧಿಸಲು ಅವಕಾಶವಿಲ್ಲ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

 

 

ನಿಯಮ 44(4) ಅನ್ವಯ ದಂಡ ವಿಧಿಸಿ ನೋಟೀಸ್‌ ಜಾರಿ ಮಾಡಿದ್ದು ಕಟ್ಟಡ ಕಲ್ಲುಗಣಿ ಗುತ್ತಿಗೆದಾರರು ಭಾಗಶಃ ದಂಡ ಪಾವತಿಸಿದಲ್ಲಿ ಆ ಪ್ರಮಾಣ ಮತ್ತು ಮೊತ್ತವನ್ನು ಪರಿಶೀಲಿಸಿಕೊಂಡು ಉಳಿಕೆ ಪ್ರಮಾಣವನ್ನು ಒಟಿಎಸ್ ಅಡಿಯಲ್ಲಿ ಪರಿಗಣಿಸಿ ಕ್ರಮ ವಹಿಸಬೇಕು ಎಂದು ಸೂಚಿಸಿದೆ.

 

 

ನೋಟೀಸ್‌ ಜಾರಿ ಮಾಡಲು ಅನುಸರಿಸುವ ವಿಧಾನಗಳೇನು?

 

ಕೆಎಸ್‌ಆರ್‍‌ಎಸ್‌ಎಸಿ ಸಂಸ್ಥೆಯು ಡಿಜಿಪಿಎಸ್‌ ಮತ್ತು ಡ್ರೋಣ್ ಸರ್ವೆ ವರದಿ ಅಥವಾ ಇತರೆ ತಂತ್ರಾಂಶವನ್ನು ಅಳವಡಿಸಿಕೊಂಡು ವರದಿ ಸಲ್ಲಿಸಬೇಕು. ಈ ವರದಿ ಸ್ವೀಕೃತವಾದ ನಂತರ ಕ್ರಮ ಜರುಗಿಸಿ 45 ದಿನಗಳ ಒಳಗೆ ಕಲ್ಲು ಗಣಿ ಗುತ್ತಿಗೆದಾರರಿಗೆ ನೋಟೀಸ್ ಜಾರಿಯಾಗಲಿದೆ. ನೋಟೀಸ್‌ ಜಾರಿಯಾದ 6 ತಿಂಗಳೊಳಗೆ  ದಂಡದ ಮೊತ್ತವನ್ನು  ಪಾವತಿಸಬೇಕು. ಒಟಿಎಸ್‌ ವ್ಯಾಪ್ತಿಯಡಿ ಸಂಪೂರ್ಣವಾಗಿ 4 ಕಂತುಗಳಲ್ಲಿ ಅಂದರೆ 45 ದಿನಗಳಿಗೆ ಒಂದು ಕಂತಿನಂತೆ ಪಾವತಿಸಬೇಕು.

 

 

ಹಣ ಪಾವತಿಸದಿದ್ದಲ್ಲಿ ಅಥವಾ ಭಾಗಶಃ ಹಣ ಪಾವತಿಸಿರುವ ಪ್ರಕರಣಗಳನ್ನು ನಿಯಮ 44 -ಎ (1)(ಇ) ಅಡಿ ಕ್ರಮವಹಿಸಬೇಕು. ಇದರ ಪ್ರಕಾರ ಕಲ್ಲು ಗಣಿ ಗುತ್ತಿಗೆಯನ್ನು ರದ್ದುಪಡಿಸುವುದರ ಜೊತೆಗೆ ಕಲ್ಲುಗಣಿ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಬೇಕು. ದಂಡ ಪಾವತಿಸದೇ ಇದ್ದಲ್ಲಿ ನಿಯಮ 44 (4) ರಂತೆ ದಂಡ ವಿಧಿಸಿ ಆರ್‍‌ಆರ್‍‌ಸಿರಂತೆ ವಸೂಲಿಗೆ ಕ್ರಮ ವಹಿಸಬೇಕು. ಹಾಗೆಯೇ ನಿಯಮ 43(ಎ) ರ ಷೆಡ್ಯೂಲ್ 1(ಸಿ) ರಂತೆ ದಂಡ ವಿಧಿಸಿ ಆರ್‍‌ಆರ್‍‌ಸಿಯಂತೆ ವಸೂಲಾತಿಗೆ ಕ್ರಮ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿರುವುದು ತಿಳಿದು ಬಂದಿದೆ.

 

 

ಒಟಿಎಸ್‌ ಯೋಜನೆಯಡಿ ರಾಜಧನ/ದಂಡವನ್ನು ಪಾವತಿಸಿ, ಬೇಬಾಕಿ ಪ್ರಮಾಣ ಪತ್ರ ಸಲ್ಲಿಸದ ಹೊರತು ಕಲ್ಲು  ಗಣಿ ಗುತ್ತಿಗೆ, ಲೈಸೆನ್ಸ್‌ನ್ನು ಕಂಪನಿ, ಸಂಸ್ಥೆ, ವ್ಯಕ್ತಿ, ಅವಿಭಕ್ತ ಕುಟುಂಬದ ಸದಸ್ಯರ ಹೆಸರಿನಲ್ಲಿ ಉಪಖನಿಜ ಗುತ್ತಿಗೆ ಪರವಾನಗಿ ಕೋರಿ ಸಲ್ಲಿಸಿರುವ ಮತ್ತು ಸಲ್ಲಿಸುವ ಅರ್ಜಿಗಳನ್ನು ಮಂಜೂರಾತಿಗೆ ಪರಿಗಣಿಸಲು ಹೊಸ ನಿಯಮಗಳ ಪ್ರಕಾರ ಅವಕಾಶವಿಲ್ಲ.

 

 

ಹಾಗೆಯೇ ಒಟಿಎಸ್‌ ಯೋಜನೆಯಡಿ ರಾಜಧನ/ದಂಡವನ್ನು ಪಾವತಿಸಿ, ಬೇಬಾಕಿ ಪ್ರಮಾಣ ಪತ್ರ ಸಲ್ಲಿಸದ ಹೊರತು ಕಲ್ಲು  ಗಣಿ ಗುತ್ತಿಗೆ, ಲೈಸೆನ್ಸ್‌ದಾರರು ಯಾವುದೇ ಉಪಖನಿಜದ ಗಣಿ ಗುತ್ತಿಗೆಗಳನ್ನು ಟೆಂಡರ್, ಹರಾಜು ಮೂಲಕ ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಬೇಕು ಎಂದೂ ಸೂಚಿಸಿದೆ.

Your generous support will help us remain independent and work without fear.

Latest News

Related Posts