ಬೆಂಗಳೂರು : ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕೊಪ್ಪಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಬರೋಬ್ಬರಿ 4.95 ಕೋಟಿಯಷ್ಟು ವೆಚ್ಚವಾಗಿದೆ. ವಿಶೇಷವೆಂದರೇ ಈ ವೆಚ್ಚವನ್ನು ಭರಿಸಲು ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಂಚಿಕೆಯಾಗಿರುವ ಅನುದಾನದ ಬುಟ್ಟಿಗೆ ‘ಕೈ’ ಹಾಕಿದೆ.
ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಿಗೂ ಅಭಿವೃದ್ಧಿ ಮರೀಚಿಕೆಯಾಗಿದೆ. ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಘೋಷಣೆ ಮಾಡಿದ್ದ ಕೋಟ್ಯಂತರ ಅನುದಾನವು ಕಾಗದದಲ್ಲಷ್ಟೇ ಉಳಿದಿದೆ. ಅಲ್ಲದೇ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆಂದು ಮೀಸಲಿಟ್ಟಿದ್ದ ಅನುದಾನವನ್ನೂ ನಿಯಮಿತವಾಗಿ ಬಿಡುಗಡೆಯಾಗಿಲ್ಲ. ಆದರೆ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಮಾವೇಶಕ್ಕೆ ಇದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಟ್ಯಂತರ ರುಪಾಯಿಗಳಷ್ಟು ಖರ್ಚಾಗುತ್ತಿದೆ. ಈ ಬಗ್ಗೆ ಪ್ರತಿಪಕ್ಷಗಳೂ ಸಹ ಆಕ್ಷೇಪ ವ್ಯಕ್ತಪಡಿಸಿದ್ದವು.
ಇದರ ಬೆನ್ನಲ್ಲೇ ಕೊಪ್ಪಳದಲ್ಲಿ 2025ರ ಅಕ್ಟೋಬರ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ತಗುಲಿರುವ 4.95 ಕೋಟಿಯಷ್ಟು ವೆಚ್ಚವನ್ನು ಹಿಂದುಳಿದ ವರ್ಗಗಳಡಿಯಲ್ಲಿರುವ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಕ್ಕೆ ನಿಗದಿಪಡಿಸಿದ್ದ ಅನುದಾನವನ್ನು ಖರ್ಚು ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಸಚಿವರಾಗಿರುವ ಆರ್ಥಿಕ ಇಲಾಖೆಯು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 11 ನಿಗಮಗಳ ಪೈಕಿ 8 ನಿಗಮಗಳಿಗೆ 2 ವರ್ಷವಾದರೂ ಅಧ್ಯಕ್ಷರೇ ನೇಮಕಗೊಂಡಿರಲಿಲ್ಲ. ಇದರಿಂದಾಗಿ ನಿಗಮಗಳ ವಿವಿಧ ಯೋಜನೆಗಳು ಸರಿಯಾಗಿ ಜಾರಿಯಾಗದೆ, ಕಳೆದ ಆರ್ಥಿಕ ಸಾಲಿನಲ್ಲಿ 72.55 ಕೋಟಿ ರು. ಅನುದಾನ ಬಳಕೆಯಾಗದೆ ಉಳಿದಿತ್ತು. ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲ.
ಈ ಮಧ್ಯೆ ಕೊಪ್ಪಳದ ಕಾರ್ಯಕ್ರಮಕ್ಕೆ 4.95 ಕೋಟಿಯನ್ನು ವಿವಿಧ ನಿಗಮಗಳಿಗೆ ಹಂಚಿಕೆ ಮಾಡಿರುವ ಅನುದಾನದಲ್ಲಿ ಬಿಡುಗಡೆಗೆ ಬಾಕಿ ಇರುವ ಮೊತ್ತದಲ್ಲಿಯೇ ಬಿಡುಗಡೆ ಮಾಡಬೇಕು ಎಂದು ಆರ್ಥಿಕ ಇಲಾಖೆಯು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಿದೆ.
2026ರ ಫೆಬ್ರುವರಿ 6ರಂದು ಆರ್ಥಿಕ ಇಲಾಖೆಯು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಆರ್ಥಿಕ ಇಲಾಖೆಯ ಸೂಚನೆಯಲ್ಲೇನಿದೆ?
ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. 2025 ಅಕ್ಟೋಬರ್ 6ರಂದು ಕೊಪ್ಪಳ ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಕಾರ್ಯಕ್ರಮಕ್ಕಾಗಿ ಭರಿಸಲಾಗಿರುವ ವೆಚ್ಚ 4,95,30,156 ರು . ಗಳನ್ನು 2025-26ನೇ ಸಾಲಿನ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಕ್ಕೆ (ಲೆಕ್ಕ ಶೀರ್ಷಿಕೆ- 2225-03-001-05) ಅಡಿ ವಿವಿಧ ನಿಗಮಗಳಿಗೆ ಹಂಚಿಕೆ ಮಾಡಿರುವ ಅನುದಾನದಲ್ಲಿ ಬಿಡುಗಡೆಗೆ ಬಾಕಿ ಇರುವ ಮೊತ್ತದಲ್ಲಿ ಬಿಡುಗಡೆ ಮಾಡಲು ಕ್ರಮ ವಹಿಸಬೇಕು ಎಂದು ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಿದೆ.

ಕೊಪ್ಪಳದ ಹೊಸಪೇಟೆ ರಸ್ತೆಯ ಅಗಡಿ ಲೇ ಔಟ್ನಲ್ಲಿ ವಿಧಾನಸೌಧ ಮಾದರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು. 2025ರ ಅಕ್ಟೋಬರ್ 6ರಂದು ನಡೆದಿದ್ದ ಈ ಕಾರ್ಯಕ್ರಮದಲ್ಲಿ ಅಂದಾಜು 2,000 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ₹2005 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 34 ವಸತಿ ನಿಲಯಗಳು ಹಾಗೂ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಕ್ಕೆ 2 ವಸತಿ ನಿಲಯಗಳ ಶಂಕುಸ್ಥಾಪನೆ ನೆರವೇರಿಸಿದ್ದರು.

ತಳಕಲ್ನಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ, ಕುಕನೂರು, ಯಲಬುರ್ಗಾ, ಕನಕಗಿರಿ ತಾಲೂಕು ಕೇಂದ್ರಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ, ಕೊಪ್ಪಳ ಕಿಮ್ಸ್ ಆಸ್ಪತ್ರೆಯ ಉದ್ಘಾಟನೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ, ಗಂಗಾವತಿ ತಾಲೂಕಿನ 27 ಕೆರೆ ತುಂಬಿಸುವ ಯೋಜನೆಗೆ ಭೂಮಿಪೂಜೆ, ಕನಕಗಿರಿ ತಾಲೂಕಿನ ಶಿರವಾರದಲ್ಲಿ ಹೈಟೆಕ್ ತೋಟಗಾರಿಕಾ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿದಂತೆ ಹತ್ತು ಹಲವು ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು.
ಬೃಹತ್ ಪ್ರಮಾಣದಲ್ಲಿ ಕೃಷಿ, ತೋಟಗಾರಿಕಾ ಹಾಗೂ ಇನ್ನಿತರ ಸಲಕರಣೆ ಮತ್ತು ಯಂತ್ರಗಳನ್ನು ವೇದಿಕೆಯ ಪಕ್ಕದಲ್ಲಿ ಇಡಲಾಗಿದ್ದು, ಈ ಸವಲತ್ತು ವಿತರಣೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ ಸೇರಿದಂತೆ ಹತ್ತಾರು ಸಚಿವರು ಭಾಗಿಯಾಗಿದ್ದರು.

‘ಕೊಪ್ಪಳಕ್ಕೆ ನಾನು ಆಗಮಿಸಿದರೆ ಇಲ್ಲಿನ ಜನರು ಅಪಾರ ಪ್ರೀತಿ-ಗೌರವವನ್ನು ಕೊಡುತ್ತಾರೆ.ನಾನು ಮೈಸೂರು ಜಿಲ್ಲೆಗೆ ಹೋದಾಗ ಎಷ್ಟು ಸಂತೋಷವಾಗುತ್ತದೆಯೋ, ಅಷ್ಟೇ ಸಂತೋಷ ಕೊಪ್ಪಳಕ್ಕೆ ಬಂದಾಗ ಆಗುತ್ತದೆ,’ ಎಂದು ಸಿದ್ದರಾಮಯ್ಯ ಹೇಳಿದ್ದನ್ನು ಸ್ಮರಿಸಬಹುದು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 11 ನಿಗಮಗಳ ಪೈಕಿ 8 ನಿಗಮಗಳಿಗೆ 2 ವರ್ಷವಾದರೂ ಅಧ್ಯಕ್ಷರೇ ನೇಮಕಗೊಂಡಿಲ್ಲ. ಇದರಿಂದಾಗಿ ನಿಗಮಗಳ ವಿವಿಧ ಯೋಜನೆಗಳು ಸರಿಯಾಗಿ ಜಾರಿಯಾಗದೆ, ಕಳೆದ ಆರ್ಥಿಕ ಸಾಲಿನಲ್ಲಿ 72.55 ಕೋಟಿ ರು. ಅನುದಾನ ಬಳಕೆಯಾಗದೆ ಉಳಿದಿತ್ತು.
2024-25ನೇ ಸಾಲಿನಲ್ಲಿ ಈ ಎಂಟು ನಿಗಮಗಳಿಗೆ ಒಟ್ಟು 172 ಕೋಟಿ ರು. ಅನುದಾನ ನೀಡಲಾಗಿತ್ತು. ಇದರಲ್ಲಿ ವಿವಿಧ ಯೋಜನೆಗಳಿಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ 72.55 ರು. ಉಳಿಕೆಯಾಗಿದೆ. ಅಧ್ಯಕ್ಷರಿಲ್ಲದೇ ಇರುವುದರಿಂದ ಫಲಾನುಭವಿಗಳ ಆಯ್ಕೆ ಸರಿಯಾಗಿ ನಡೆಯದೇ ಅನುದಾನ ಸಂಪೂರ್ಣವಾಗಿ ಬಳಕೆಯಾಗಿರಲಿಲ್ಲ.

ಇಲಾಖೆಯಡಿ ಬರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಮಾತ್ರ ಅಧ್ಯಕ್ಷರು ನೇಮಕಗೊಂಡಿದ್ದಾರೆ. ಉಳಿದ 8 ನಿಗಮಗಳ ಅಧ್ಯಕ್ಷರು ನೇಮಕಗೊಳ್ಳದೇ ಇರುವುದರಿಂದ ಇಲಾಖಾ ಸಚಿವರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈ ನಿಗಮಗಳಿಗೆ ಅಧ್ಯಕ್ಷರನ್ನು ನೇಮಿಸಿರಲಿಲ್ಲ.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಅತಿ ಹೆಚ್ಚು ಎಂದರೆ 43.41 ಕೋಟಿ ರು. ಅನುದಾನ ಉಳಿಕೆಯಾಗಿತ್ತು. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ 5.95 ಕೋಟಿ ರು. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ 5.65 ಕೋಟಿ ರು., ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ 6.16 ಕೋಟಿ ರು., ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಲ್ಲಿ 8.78 ಕೋಟಿ ರು., ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ 2.56 ಕೋಟಿ ರು., ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದಲ್ಲಿ ಅತಿ ಕಡಿಮೆ ಎಂದರೆ 3.01 ಲಕ್ಷ ರು. ಉಳಿಕೆಯಾಗಿತ್ತು.

ಹೊಸದಾಗಿ ಆರಂಭಗೊಂಡಿರುವ ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮದಲ್ಲಿ 2024-25ನೇ ಸಾಲಿನಲ್ಲಿ ವಿವಿಧ ಆರು ಯೋಜನೆಗಳಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 1,425 ಅರ್ಜಿಗಳು ಬಂದಿದ್ದವು. ಇದರಲ್ಲಿ ಒಟ್ಟು 742 ಫಲಾನುಭವಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಡಿಬಿಟಿ ಕಾರ್ಯವು ನಡೆಯುತ್ತಿದೆ. ಉಳಿದ ಫಲಾನುಭವಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಕ್ರಮವಹಿಸಲಾಗಿದೆ ಎಂದು ಸಚಿವರು ಉತ್ತರದಲ್ಲಿ ವಿವರಿಸಿದ್ದರು.

ಶಿರಾದಲ್ಲಿ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ಅಂದರೆ 2020ರ ಸೆಪ್ಟೆಂಬರ್ 28 ರಂದು ಆಗಿನ ಬಿಜೆಪಿ ಸರ್ಕಾರ ಈ ನಿಗಮ ರಚಿಸಿತ್ತು. ಆದರೆ ಹೆಸರಿನ ವಿವಾದದಿಂದಾಗಿ ಈ ನಿಗಮ ಕಾರ್ಯಾರಂಭಿಸಿರಲಿಲ್ಲ. 2024-25ನೇ ಸಾಲಿನಲ್ಲಿಯೇ ಮೊದಲ ಬಾರಿಗೆ ಈ ನಿಗದಡಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆರು ಯೋಜನೆಗಳಿಗೆ ಒಟ್ಟು 45 ಕೋಟಿ ರು. ಅನುದಾನ ಒದಗಿಸಲಾಗಿತ್ತು.
ಬಳಕೆಯಾಗದ ʻಗಂಗಾ ಕಲ್ಯಾಣʼದ ಅನುದಾನ
ಬಹುತೇಕವಾಗಿ ಎಲ್ಲ ನಿಗಮಗಳಲ್ಲಿಯೂ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿಲ್ಲಿ ನಿಗದಿಪಡಿಸಿದ ಅನುದಾನದಲ್ಲಿ ಹೆಚ್ಚು ಹಣ ಉಳಿದಿದೆ. ʻಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮʼದಲ್ಲಿಯಂತೂ ಕೊಟ್ಟ ಅನುದಾನದಲ್ಲಿ ಒಂದು ರು. ಕೂಡ ಖರ್ಚಾಗಿಲ್ಲ. 2024-25ನೇ ಸಾಲಿನಲ್ಲಿ ಈ ಯೋಜನೆಗೆ 5.37 ಕೋಟಿ ರು. ನೀಡಲಾಗಿತ್ತು. ಅಷ್ಟೂ ಅನುದಾನ ಉಳಿಕೆಯಾಗಿತ್ತು.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯನ್ನು ʻಜೀಜಾವು ಜಲ ಭಾಗ್ಯ ಯೋಜನೆʼ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗಿತ್ತು. ಇದಕ್ಕಾಗಿ ಅತ್ಯಂತ ಹೆಚ್ಚು ಅಂದರೆ 28.62 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ ಖರ್ಚಾಗಿದ್ದು ಮಾತ್ರ 11.25 ಲಕ್ಷ ರು. ಹೀಗಾಗಿ 28.50 ಕೋಟಿ ರು. ಅನುದಾನ ಹಾಗೆಯೇ ಉಳಿಕೆಯಾಗಿತ್ತು.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 5.15 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 2.59 ಕೋಟಿ ಮಾತ್ರ ಖರ್ಚಾಗಿದೆ. ಹೀಗಾಗಿ 2.55 ಕೋಟಿ ರು. ಅನುದಾನ ಉಳಿಕೆಯಾಗಿದೆ. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 2 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 45 ಲಕ್ಷ ಮಾತ್ರ ಖರ್ಚಾಗಿದ್ದು, 1.55 ಕೋಟಿ ರು. ಅನುದಾನ ಉಳಿಕೆಯಾಗಿತ್ತು.
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಗೆ 7.54 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 5.18 ಕೋಟಿ ರು. ಖರ್ಚಾಗಿದೆ. 2.36 ಕೋಟಿ ರು. ಅನುದಾನ ಉಳಿಕೆಯಾಗಿದೆ. ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಯನ್ನು 2024-25ನೇ ಸಾಲಿನಲ್ಲಿ ಜಾರಿಗೇ ತಂದಿರಲಿಲ್ಲ. ಹೀಗಾಗಿ ಅನುದಾನವನ್ನು ಕೂಡ ನಿಗದಿಪಡಿಸಿರಲಾಗಿರಲಿಲ್ಲ.
ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮ ಮಾತ್ರ ಈ ಯೋಜನೆಯಡಿ ನಿಗದಿಯಾಗಿದ್ದ ಅನುದಾನದಲ್ಲಿ ಹೆಚ್ಚಿನ ಪಾಲು ಬಳಸಿಕೊಂಡಿದೆ. ಒಟ್ಟು 20.52 ಲಕ್ಷ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 20.26 ಲಕ್ಷ ರು. ಅನುದಾನ ಬಳಕೆಯಾಗಿದೆ. ಕೇವಲ 26 ಸಾವಿರ ರು. ಮಾತ್ರ ಉಳಿಕೆಯಾಗಿದೆ. ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಗೆ 13 ಕೋಟಿ ರು. ನಿಗದಿಪಡಿಸಲಾಗಿತ್ತು. ಆದರೆ ಇನ್ನೂ ಹಂಚಿಕೆ ನಡೆಯುತ್ತಿರುವುದರಿಂದ ಉಳಿದ ಹಣದ ಮಾಹಿತಿ ಲಭ್ಯವಾಗಿರಲಿಲ್ಲ.
ಯಾವ ಯೋಜನೆಗಳಲ್ಲಿ ಉಳಿಕೆ?
ಕರ್ನಾಟಕ ವಿಶ್ವ ಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ಯೋಜನೆಗೆ 1.21 ಕೋಟಿ ಅನುದಾನ ನೀಡಲಾಗಿತ್ತು. ಇದರಲ್ಲಿ 36 ಲಕ್ಷ ಉಳಿಕೆಯಾಗಿದೆ. ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 2.95 ಕೋಟಿ ರು. ಅನುದಾನದಲ್ಲಿ 82 ಲಕ್ಷ ಉಳಿಕೆಯಾಗಿದೆ. ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 29 ಲಕ್ಷ ರು.ಗಳೂ ಉಳಿಕೆಯಾಗಿತ್ತು.

ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ 95.82 ಲಕ್ಷ ಅನುದಾನದಲ್ಲಿ 22.49 ಲಕ್ಷ ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 2.13 ಕೋಟಿ ರು.ಗಳಲ್ಲಿ 1.71. ಕೋಟಿ ರು. ಉಳಿಕೆಯಾಗಿದೆ. ಈ ನಿಗಮದ ಏಳು ಯೋಜನೆಗಳಿಗೆ ಒಟ್ಟು 13.68 ಕೋಟಿ ಅನುದಾನ ನೀಡಿತ್ತು.
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 1.68 ಕೋಟಿ ರು. ಅನುದಾನದಲ್ಲಿ 28 ಲಕ್ಷ ಉಳಿದಿತ್ತು. ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 42 ಲಕ್ಷವೂ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ 1.32 ಕೋಟಿ ರು. ಅನುದಾನದಲ್ಲಿ 88 ಲಕ್ಷ ರು. ಉಳಿಕೆಯಾಗಿದೆ. ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 1.98 ಕೋಟಿ ರು. ಅನುದಾನದಲ್ಲಿ 1.29 ಕೋಟಿ ರು. ಉಳಿಕೆಯಾಗಿತ್ತು.

ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 1.26 ಕೋಟಿ ರು.ಗಳಲ್ಲಿ 93 ಲಕ್ಷ ರು. ಉಳಿಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 40 ಲಕ್ಷ ರು.ಗಳಲ್ಲಿ 30 ಲಕ್ಷ ರು. ಉಳಿಕೆಯಾಗಿದೆ. ಈ ನಿಗಮದ ಏಳು ಯೋಜನೆಗಳಿಗೆ ಒಟ್ಟು 9.06 ಕೋಟಿ ರು. ಅನುದಾನ ನೀಡಲಾಗಿತ್ತು.
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 4.98 ಕೋಟಿ ರು. ಅನುದಾನದಲ್ಲಿ 1.10 ಕೋಟಿ ರು. ಉಳಿಕೆಯಾಗಿದೆ. ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 71 ಲಕ್ಷ ರು ಅನುದಾನದಲ್ಲಿ 11 ಲಕ್ಷ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ1.42 ಕೋಟಿ ರು. ಅನುದಾನದಲ್ಲಿ 82 ಲಕ್ಷ ರು. ಉಳಿಕೆಯಾಗಿತ್ತು.

ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 50 ಲಕ್ಷ ರು. ಅನುದಾನದಲ್ಲಿ 7.09 ಲಕ್ಷ ರು. ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 5.34 ಕೋಟಿ ರು.ಗಳಲ್ಲಿ 5.34 ಕೋಟಿ ರು.ಗಳೂ ಸಂಪೂರ್ಣವಾಗಿ ಬಳಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 170 ಲಕ್ಷ ರು.ಗಳಲ್ಲಿ 170 ಲಕ್ಷ ರು.ಗಳೂ ಉಳಿಕೆಯಾಗಿದೆ. ಈ ನಿಗಮದ ಏಳು ಯೋಜನೆಗಳಿಗೆ ಒಟ್ಟು 22.19 ಕೋಟಿ ರು. ಅನುದಾನ ನೀಡಲಾಗಿತ್ತು.
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 4.98 ಕೋಟಿ ರು. ಅನುದಾನದಲ್ಲಿ 82 ಲಕ್ಷ ರು. ಉಳಿಕೆಯಾಗಿತ್ತು. ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 71 ಲಕ್ಷ ರು. ಅನುದಾನದಲ್ಲಿ 9 ಲಕ್ಷ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ1.42 ಕೋಟಿ ರು. ಅನುದಾನದಲ್ಲಿ 97.70 ಲಕ್ಷ ರು. ಉಳಿಕೆಯಾಗಿತ್ತು.

ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 48 ಲಕ್ಷ ರು. ಅನುದಾನದಲ್ಲಿ 7.24 ಲಕ್ಷ ರು. ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 5.34 ಕೋಟಿ ರು.ಗಳಲ್ಲಿ 85 ಲಕ್ಷ ರು. ಉಳಿಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 60 ಲಕ್ಷ ರು.ಗಳಲ್ಲಿ 60 ಲಕ್ಷ ರು.ಗಳೂ ಉಳಿಕೆಯಾಗಿದೆ. ಈ ನಿಗಮದ ಏಳು ಯೋಜನೆಗಳಿಗೆ ಒಟ್ಟು 18.90 ಕೋಟಿ ರು. ಅನುದಾನ ನೀಡಲಾಗಿತ್ತು.
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 4.98 ಕೋಟಿ ರು. ಅನುದಾನದಲ್ಲಿ 1.24 ಕೋಟಿ ರು. ಉಳಿಕೆಯಾಗಿದೆ. ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 36 ಲಕ್ಷ ರು. ಅನುದಾನದಲ್ಲಿ8 ಲಕ್ಷ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ71 ಲಕ್ಷ ರು. ಅನುದಾನದಲ್ಲಿ 35 ಲಕ್ಷ ರು. ಉಳಿದಿತ್ತು.

ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 40 ಲಕ್ಷ ರು. ಅನುದಾನದಲ್ಲಿ 8.25 ಲಕ್ಷ ರು. ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 1.08 ಕೋಟಿ ರು.ಗಳಲ್ಲಿ 21 ಲಕ್ಷ ರು. ಉಳಿಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 60 ಲಕ್ಷ ರು.ಗಳಲ್ಲಿ 60 ಲಕ್ಷ ರು.ಗಳೂ ಉಳಿಕೆಯಾಗಿದೆ. ಈ ನಿಗಮದ 6 ಯೋಜನೆಗಳಿಗೆ ಒಟ್ಟು 8.13 ಕೋಟಿ ರು. ಅನುದಾನ ನೀಡಲಾಗಿತ್ತು.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆಗೆ 5 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 3.60 ಕೋಟಿ ರು. ಖರ್ಚು ಮಾಡಿದ್ದು, 1.40 ಕೋಟಿ ರು. ಉಳಿಕೆಯಾಗಿದೆ. ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 48 ಲಕ್ಷ ರು. ಅನುದಾನದಲ್ಲಿ47 ಲಕ್ಷ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ2 ಕೋಟಿ ರು. ಅನುದಾನದಲ್ಲಿ 48 ಲಕ್ಷ ರು. ಉಳಿಕೆಯಾಗಿತ್ತು.

ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ1.70 ಕೋಟಿ ರು. ಅನುದಾನದಲ್ಲಿ ಸಂಪೂರ್ಣ ಹಣ ಬಳಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 9 ಕೋಟಿ ರು.ಗಳಲ್ಲಿ 8.01 ಕೋಟಿ ರು. ಉಳಿಕೆಯಾಗಿತ್ತು.
ರಾಜಶ್ರೀ ಶಾಹುಮಹಾರಾಜ ವಿದೇಶಿ ಸಾಲ ಯೋಜನೆಗೆ (ನವೀನ) 80 ಲಕ್ಷ ರು. ಅನುದಾನ ನಿಗದಿಪಡಿಸಲಾಗಿದ್ದು, 65 ಲಕ್ಷ ರು.ಉಳಿಕೆಯಾಗಿದೆ. ರಾಜಶ್ರೀ ಶಾಹುಮಹಾರಾಜ ವಿದೇಶಿ ಸಾಲ ಯೋಜನೆಗೆ (ನವೀಕರಣ) 20 ಲಕ್ಷ ರು. ನಿಗದಿಪಡಿಸಲಾಗಿದ್ದು, ಈ ಹಣ ಸಂಪೂರ್ಣವಾಗಿ ಬಳಕೆಯಾಗಿದೆ. ಮರಾಠ ಮಿಲ್ಟ್ರೀ ಹೋಟೆಲ್ ಯೋಜನೆಗೆ 4 ಕೋಟಿ ರು. ನಿಗದಿಪಡಿಸಲಾಗಿದ್ದು, 3.90 ಕೋಟಿ ರು. ಉಳಿಕೆಯಾಗಿದೆ. ಅಮೃತ ಮುನ್ನಡೆ ಯೋಜನೆಗೆ 14.35 ಲಕ್ಷ ರು. ನಿಗದಿಪಡಿಸಲಾಗಿದ್ದು, ಈ ಅನುದಾನವೂ ಸಂಪೂರ್ಣವಾಗಿ ಬಳಕೆಯಾಗಿದೆ. ಈ ನಿಗಮದಡಿ ಒಟ್ಟು 10 ಯೋಜನೆಗಳು ಜಾರಿಗೆ ಬಂದಿದ್ದು, 51.94 ಕೋಟಿ ರು. ಅನುದಾನ ಒದಗಿಸಲಾಗಿತ್ತು.
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 10 ಲಕ್ಷ ರು. ಅನುದಾನದಲ್ಲಿ ಸಂಪೂರ್ಣ ಬಳಕೆಯಾಗಿದೆ. ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 1 ಲಕ್ಷ ರು. ಅನುದಾನದಲ್ಲಿ 18 ಸಾವಿರ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ 3 ಲಕ್ಷ ರು. ಅನುದಾನದಲ್ಲಿ 27 ಸಾವಿರ ರು. ಉಳಿಕೆಯಾಗಿತ್ತು.

ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 6.58 ಲಕ್ಷ ರು. ಅನುದಾನದಲ್ಲಿ 1.48 ಲಕ್ಷ ರು. ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 7.44 ಲಕ್ಷ ರು.ಗಳಲ್ಲಿ 69 ಸಾವಿರ ರು. ಉಳಿಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 4.10 ಲಕ್ಷ ರು.ಗಳಲ್ಲಿ 1.60 ಲಕ್ಷ ರು.ಗಳೂ ಬಳಕೆಯಾಗಿದೆ. ಕೌಶಾಲಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ನಿಗದಿಪಡಿಸಿದ್ದ 1.48 ಲಕ್ಷ ರು.ಗಳಲ್ಲಿ 13 ಸಾವಿರ ರು. ಉಳಿಕೆಯಾಗಿದೆ. ಈ ನಿಗಮದ 9 ಯೋಜನೆಗಳಿಗೆ ಒಟ್ಟು 54.12 ಲಕ್ಷ ರು. ಅನುದಾನ ನೀಡಲಾಗಿತ್ತು.
ಅಧ್ಯಕ್ಷರಿದ್ದರೂ ಖರ್ಚಾಗಿರಲಿಲ್ಲ ಅನುದಾನ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಎನ್.ಜಿ. ಕೀರ್ತಿ ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಈ ನಿಗಮದಲ್ಲಿ ಒಟ್ಟು 9 ಯೋಜನೆಗಳನ್ನು ಜಾರಿಗೆ ತರಲಾಗಿದ್ದು, 88.34 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 14.26 ಕೋಟಿ ರು. ಅನುದಾನ ಉಳಿಕೆಯಾಗಿತ್ತು.

ಹೊಲಿಗೆ ಯಂತ್ರ ವಿತರಣೆ ಯೋಜನೆಗೆ ನಿಗದಿಪಡಿಸಲಾಗಿದ್ದ 8 ಕೋಟಿ ರು. ಅನುದಾನದಲ್ಲಿ ಅಷ್ಟೂ ಅನುದಾನ ಉಳಿಕೆಯಾಗಿತ್ತು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು 2024ರ ನವೆಂಬರ್ನಲ್ಲಿ ನೇಮಕ ಮಾಡಲಾಗಿದೆ. ಈ ನಿಗಮಕ್ಕೆ 2024-25ನೇ ಸಾಲಿನಲ್ಲಿ ಏಳು ಯೋಜನೆಗಳಿಗಾಗಿ 12.04 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 2 ಕೋಟಿ ರು. ಅನುದಾನ ಬಳಕೆಯಾಗದೆ ಉಳಿದಿತ್ತು.

ಸ್ವಾವಲಂಬಿ ಸಾರಥಿ ಯೋಜನೆಗೆ ಮತ್ತು ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ ನಿಗದಿಪಡಿಸಿದ್ದ ಅನುದಾನ ಮಾತ್ರ ಸಂಪೂರ್ಣವಾಗಿ ಬಳಕೆಯಾಗಿತ್ತು.
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ವಿಜಯಾನಂದ ಎಸ್ ಕಾಶಪ್ಪನವರ್ ಅವರನ್ನು 2024ರ ಫೆಬ್ರವರಿಯಲ್ಲಿಯೇ ನೇಮಕ ಮಾಡಲಾಗಿದೆ. ಈ ನಿಗಮದ ಮೂಲಕ 10 ಯೋಜನೆಗಳು ಜಾರಿಗೆ ಬಂದಿದ್ದು, ಒಟ್ಟು 94.85 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ21.78 ಕೋಟಿ ರು. ಅನುದಾನ ಬಳಕೆಯಾಗದೆ ಉಳಿದಿತ್ತು.

ಸ್ವಾವಲಂಬಿ ಸಾರಥಿ ಯೋಜನೆಗೆ 29.58 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ21.12 ಕೋಟಿ ಖರ್ಚಾಗಿದೆ. 8.46 ಕೋಟಿ ರು. ಅನುದಾನ ಉಳಿದಿತ್ತು. ಜೀವಜಲ ಯೋಜನೆಗೆ 33.01 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ5.93 ಕೋಟಿ ರು. ಉಳಿಕೆಯಾಗಿತ್ತು.
ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ವೃತ್ತಿಪರ, ತಾಂತ್ರಿಕ, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ಗಳಿಗೆ ಶಿಕ್ಷಣ ಸಾಲ ಸೌಲಭ್ಯವನ್ನು ಒದಗಿಸುವ ಯೋಜನೆಯಾದ ʻಬಸವ ಬೆಳಗುʼ ಯೋಜನೆಗೆ 9.92 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 3.93 ಕೋಟಿ ರು. ಅನುದಾನ ಉಳಿಕೆಯಾಗಿದೆ. ಇದೇ ನವೀಕರಣ ಯೋಜನೆಗೆ 10 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಅದರಲ್ಲಿಯೂ 94 ಲಕ್ಷ ರು. ಅನುದಾನ ಉಳಿಕೆಯಾಗಿತ್ತು.
ಹಿಂದುಳಿದ ವರ್ಗಗಳ 8 ನಿಗಮಗಳಿಗೆ ಅಧ್ಯಕ್ಷರೇ ಇಲ್ಲ; ಆದರೂ ಅಧ್ಯಕ್ಷರ ಸಿಬ್ಬಂದಿ ವೇತನಕ್ಕೆಂದು 40.74 ಲಕ್ಷ ಖರ್ಚು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ 8 ನಿಗಮಗಳಿಗೆ ಅಧ್ಯಕ್ಷರೇ ನೇಮಕಗೊಂಡಿಲ್ಲದಿದ್ದರೂ ಕಳೆದ ಆರ್ಥಿಕ ಸಾಲಿನಲ್ಲಿ ಅಧ್ಯಕ್ಷರ ಸಿಬ್ಬಂದಿ ವೇತನವೆಂದು 40.74 ಲಕ್ಷ ರು. ಖರ್ಚು ಮಾಡಲಾಗಿತ್ತು. ಈ ಕುರಿತು ʻದಿ ಫೈಲ್ʼ ವಿವರವಾದ ವರದಿ ಪ್ರಕಟಿಸಿತ್ತು.









