ಸಕ್ಕರೆ ಕಾರ್ಖಾನೆ; 2,544.66 ಕೋಟಿ ನಷ್ಟ, ಮಾರ್ಕೇಟಿಂಗ್‌ ಕಂಪನಿಗಳಿಂದ ಎಥನಾಲ್‌ ಬಿಲ್‌ 354.31 ಕೋಟಿ ಬಾಕಿ

ಬೆಂಗಳೂರು; ರಾಜ್ಯದ ಸಹಕಾರಿ ಸ್ವಾಮ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು 2024ರ ಮಾರ್ಚ್‌ 31ರ ಅಂತ್ಯಕ್ಕೆ ಒಟ್ಟಾರೆ 2,544.66 ಕೋಟಿ ರುಪಾಯಿ  ಕ್ರೋಢೀಕೃತ ನಷ್ಟವನ್ನು ಅನುಭವಿಸಿದೆ. ಅಲ್ಲದೇ ಸಹಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳೂ ನಷ್ಟದಲ್ಲಿರುವುದು ರಾಜ್ಯ ಸರ್ಕಾರದ ಗಮನಕ್ಕೂ ಬಂದಿದೆ.

 

ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಕಬ್ಬು ಬೆಳೆಗಾರರಿಗೆ 38 ಕೋಟಿ ರುಪಾಯಿಗಳನ್ನು ಪಾವತಿಸಲು ಬಾಕಿ ಇರಿಸಿಕೊಂಡಿರುವುದು ಮತ್ತು ಬಾಕಿ ಹಣವನ್ನು ನೀಡಬೇಕು ಎಂದು ಕಬ್ಬು ಬೆಳೆಗಾರರು ಹೋರಾಟಕ್ಕಿಳಿದಿರುವ ನಡುವೆಯೇ ಸಹಕಾರಿ ಸಕ್ಕರೆ ಕಾರ್ಖಾನೆಗಳು ಅನುಭವಿಸಿರುವ ಕ್ರೋಢೀಕೃತ ನಷ್ಟದ ಅಂಕಿ ಸಂಖ್ಯೆಗಳು ಮುನ್ನೆಲೆಗೆ ಬಂದಿವೆ.

 

2025ರ ಮಾರ್ಚ್‌ 14ರಂದು ನಡೆದಿದ್ದ ರಾಜ್ಯ ವಿಧಾನಸಭೆಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

 

ಅದೇ ರೀತಿ ವಿದ್ಯುತ್‌ ಸರಬರಾಜು ಕಂಪನಿ ಮತ್ತು ಮಾರ್ಕೇಟಿಂಗ್‌ ಕಂಪನಿಗಳಿಂದ ವಿದ್ಯುತ್‌ ಬಿಲ್‌ ಹಾಗೂ ಎಥನಾಲ್‌ ಬಾಕಿ ಮೊತ್ತವೇ 354.31 ಕೋಟಿಯಷ್ಟಿದೆ.

 

ರಾಜ್ಯದಲ್ಲಿ ಒಟ್ಟಾರೆ 99 ನೋಂದಾಯಿತ ಸಕ್ಕರೆ ಕಾರ್ಖಾನೆಗಳ ಪೈಕಿ 79 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿರುತ್ತವೆ. ಸಹಕಾರಿ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟ ಮತ್ತು ಇತರೆ ಆಡಳಿತಾತ್ಮಕ ಕಾರಣಗಳಿಂದಾಗಿ 2,544.66 ಕ್ರೋಢೀಕೃತ ನಷ್ಟವನ್ನು ಅನುಭವಿಸಿದೆ ಎಂದು ಸಚಿವ ಶಿವಾನಂದ ಪಾಟೀಲ್‌ ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

 

 

ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳ ಪಟ್ಟಿ

 

ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯು 97.03 ಕೋಟಿ, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ 80.99 ಕೋಟಿ. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ 231.995 ಕೋಟಿ, ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ 239.38 ಕೋಟಿ ರು ಕ್ರೋಢೀಕೃತ ನಷ್ಟವನ್ನು ಅನುಭವಿಸಿದೆ.

 

 

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ 61.16 ಕೋಟಿ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ 74.80 ಕೋಟಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ 136.48 ಕೋಟಿ, ದಿ ಮಾರ್ಕಂಡೇಯಾ ಸಹಕಾರಿ ಸಕ್ಕರೆ ಕಾರ್ಖಾನೆ 143.67 ಕೋಟಿ, ಮಹಾತ್ಮಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ 470.34 ಕೋಟಿ, ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆ 724.80 ಕೋಟಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 99.00 ಕೋಟಿ, ಭೀಮಾಶಂಕರ್ ಸಹಕಾರಿ ಸಕ್ಕರೆ ಕಾರ್ಖಾನೆ 185.02 ಕೋಟಿ ರು ನಷ್ಟ ಅನುಭವಿಸಿದೆ.

 

ಅದೇ ರೀತಿ 5 ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆಗಾರರಿಗೆ ಒಟ್ಟಾರೆ 38.33 ಕೋಟಿ ರು.ಗಳನ್ನು ಪಾವತಿಸಲು ಬಾಕಿ ಇರಿಸಿಕೊಂಡಿದೆ.

 

 

ಪ್ರಕಾಶ್‌ ಖಂಡ್ರೆ ಅವರ ಒಡೆತನದಲ್ಲಿರುವ ಬಾಲ್ಕೇಶ್ವರ ಶುಗರ್ಸ್ ಲಿಮಿಟೆಡ್‌ 3.73 ಕೋಟಿ, ಬಸವರಾಜ ಬಾಳೆಕುಂದರಗಿ ಮಾಲೀಕತ್ವದಲ್ಲಿರುವ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ- 5.63 ಕೋಟಿ, ಎಸ್‌ ಮನೋಜ್‌ ಕುಮಾರ್‍‌ ಒಡೆತನದಲ್ಲಿರುವ ಬಸವೇಶ್ವರ ಶುಗರ್ಸ್‌ ಲಿಮಿಟೆಡ್‌ 6.23 ಕೋಟಿ, ಕುಮಾರ ಚಂದ್ರಕಾಂತ್ ದೇಸಾಯಿ ಅವರ ಮಾಲೀಕತ್ವದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯು 8.49 ಕೋಟಿ, ಆನಂದ ನ್ಯಾಮಗೌಡ ಒಡೆತನದ ಜಮಖಂಡಿ ಶುಗರ್ಸ್‌ ಲಿಮಿಟೆಡ್‌ 14.74 ಕೋಟಿ ರು ಸೇರಿದಂತೆ ಒಟ್ಟಾರೆ 38.82 ಕೋಟಿ ರು.ಗಳನ್ನು ಬೆಳೆಗಾರರಿಗೆ ಪಾವತಿಸಲು ಬಾಕಿ ಇರಿಸಿಕೊಂಡಿದೆ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ವಿದ್ಯುತ್‌ ಸರಬರಾಜು ಮಾಡುವ ಕಂಪನಿಗಳು ಮತ್ತು ಮಾರ್ಕೇಟಿಂಗ್‌ ಕಂಪನಿಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಒಟ್ಟಾರೆ 603.74 ಕೋಟಿ ರು ಗಳು ಬಾಕಿ ಬರಬೇಕಿದೆ.

 

 

ವಿದ್ಯುತ್ ಸರಬರಾಜು ಮಾಡುವ ಕಂಪನಿಗಳಿಂದ, 249.43 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಇದ್ದರೇ ಮಾರ್ಕೇಟಿಂಗ್‌ ಕಂಪನಿಗಳಿಂದ ಎಥನಾಲ್‌ ಬಿಲ್‌ ಬಾಕಿ ಮೊತ್ತ 354.31 ಕೋಟಿ ಬರಬೇಕಿದೆ.

 

ಇದರಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಒಡೆತನದಲ್ಲಿರುವ ಸತೀಶ್‌ ಶುಗರ್ಸ್‌, ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಕುಟುಂಬ ಸದಸ್ಯರಿರುವ ಶ್ಯಾಮನೂರ್ ಶುಗರ್ಸ್‌, ದಾವಣಗೆರೆ ಶುಗರ್ಸ್‌, ಬೀಳಗಿ ಶುಗರ್ಸ್‌, ಸೌಭಾಗ್ಯಲಕ್ಷ್ಮಿ ಶುಗರ್ಸ್‌ ಕಂಪನಿಗಳೂ ಸಹ ಇವೆ.

 

 

2024-25ನೇ ಹಂಗಾಮಿನಲ್ಲಿ ಒಟ್ಟು 79 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯ ನಿರ್ವಹಿಸಿದೆ. 521.67 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆದಿದೆ. ಕಾರ್ಖಾನೆಗಳು ನುರಿಸಿರುವ ಕಬ್ಬಿಗೆ 19,898.65 ಕೋಟಿ ರು.ಗಳ ಮೊತ್ತವನ್ನು ಪಾವತಿಸಬೇಕಿತ್ತು. ಈವರೆಗೆ 20,645.91 ಕೋಟಿ ರು.ಗಳನ್ನು ಪಾವತಿಸಿವೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ.

 

 

ಹಾಗೆಯೇ ಕೆಲವು ಕಾರ್ಖಾನೆಗಳು ಎಫ್‌ಆರ್‍‌ಪಿ ದರಕ್ಕೂ ಮೇಲ್ಪಟ್ಟು ಕಬ್ಬಿನ ಬಿಲ್‌ನ್ನು ಪಾವತಿಸಿದೆ. 41.83 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿ ಶೇ. 8.02ರಷ್ಟು ಇಳುವರಿ ಪಡೆದಿದೆ.

 

2022-23ನೇ ಹಂಗಾಮಿನಲ್ಲಿ ಎಥನಾಲ್‌ ಘಟಕಗಳನ್ನು ಹೊಂದಿರುವ ಸಕ್ಕರೆ ಕಾರ್ಖಾನೆಗಳು ಪ್ರತಿ ಮೆಟ್ರಿಕ್ ಟನ್‌ ಗೆ ಎಫ್‌ಆರ್‍‌ಪಿ ದರಕ್ಕೂ ಮೇಲ್ಪಟ್ಟು ಹೆಚ್ಚುವರಿ 150 ರು.ನಂತೆ ಮತ್ತು ಎಥನಾಲ್‌ ಘಟಕಗಳನ್ನು ಹೊಂದಿಲ್ಲದ ಸಕ್ಕರೆ ಕಾರ್ಖಾನೆಗಳು ಎಫ್‌ಆರ್‍‌ಪಿ ದರಕ್ಕೂ ಮೇಲ್ಪಟ್ಟು ಹೆಚ್ಚುವರಿ 100 ರು ನಂತೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪಾವತಿಸಬೇಕು ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯವು 3 ವರ್ಷದ ಕೆಳಗೇ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ನಿರ್ದೇಶಿಸಿತ್ತು.

 

ಈ ಆದೇಶಗಳನ್ನು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟವು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದವು. (ರಿಟ್‌ ಅರ್ಜಿ ಸಂಖ್ಯೆ; 23741/2022) ಈ ಅರ್ಜಿಗಳನ್ನು ಹೈಕೋರ್ಟ್‌ ಪುರಸ್ಕರಿಸಿತ್ತು ಅಲ್ಲದೇ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳಿಂದ ಅದಾಯ ಪ್ರಾಪ್ತಿ ಅಂಕಿ ಅಂಶಗಳನ್ನು ಕ್ರೋಢೀಕರಿಸಿ ಕರ್ನಾಟಕ ಕಬ್ಬು (ಸರಬರಾಜು ನಿಯಂತ್ರಣ ) ತಿದ್ದುಪಡಿ ಅಧಿನಿಯಮ 2014 ಕಲಂ 4 (ಸಿ) ಅನ್ವಯ ತಜ್ಞರ ಸಮಿತಿ ಮುಂದೆ ಮಂಡಿಸಲು ಆದೇಶಿಸಿತ್ತು.

 

ಈ ಆದೇಶದಂತೆ ರಾಜ್ಯದ 74 ಸಕ್ಕರೆ ಕಾರ್ಖಾನೆಗಳ ಆದಾಯ ಪ್ರಾಪ್ತಿಗಳ ಅಂಕಿ ಅಂಶಗಳನ್ನು ಕ್ರೋಢೀಕರಿಸಿ ವಿಶ್ಲೇಷಿಸಿತ್ತು. ಇದರಲ್ಲಿ ವಾಸ್ತವಿಕವಾಗಿ ಸಕ್ಕರೆ, ಬಗಾಸೆ, ಕಾಕಂಬಿ ಮತ್ತು ಪ್ರೆಸ್‌ಮಡ್‌ ಗಳ ಮಾರಾಟದಿಂದ ವಾಸ್ತವವಾಗಿ ಪ್ರಾಪ್ತವಾಗಿರುವ ಆದಾಯಗಳ ವಿವರಗಳನ್ನು ಕ್ರೋಢೀಕರಿಸಿ ಪ್ರತಿ  ಕಾರ್ಖಾನೆಗೆ ಪ್ರಾಪ್ತವಾಗಿರುವ ಒಟ್ಟು ಆದಾಯದ ಶೇ. 70ರಷ್ಟು ಆದಾಯವನ್ನು ಕಬ್ಬಿನ ದರ ಎಂದು  ಪರಿಗಣಿಸಿತ್ತು.

 

ಕೇಂದ್ರ ಸರ್ಕಾರವು ಘೋಷಿಸಿದ್ದ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗೆ ಈ ದರವನ್ನು ಹೋಲಿಸಿ ಪರಿಶೀಲಿಸಿತ್ತು. ಇದರ ಪ್ರಕಾರ ಐದು ಸಕ್ಕರೆ ಕಾರ್ಖಾನೆಗಳು ಮಾತ್ರ ಎಫ್‌ಆರ್‍‌ಪಿ ಬೆಲೆಗಿಂತ ಹೆಚ್ಚಿಗೆ ನೀಡಲು ಅವಕಾಶವಿತ್ತು.

 

ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆಯು 253 ರು, ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್‌ 119 ರು, ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯು 53 ರು., ಕೇದಾರನಾಥ ಶುಗರ್ಸ್‌ ಆಗ್ರೋ ಪ್ರಾಡಕ್ಟ್‌ 21 ರು ಮತ್ತು ಕೋರಮಂಡಲ್‌ ಶುಗರ್ಸ್‌ ಲಿಮಿಟೆಡ್‌ 8 ರು.ಗಳನ್ನು ಹೆಚ್ಚುವರಿಯಾಗಿ ನೀಡಲು ಅವಕಾಶವಿತ್ತು.

 

ಅದೇ ರೀತಿ 2022-23ನೇ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಸಲ್ಲಿಸುವ ಆರ್‍‌ ಟಿ (8) ಸಿಯಲ್ಲಿ ದಾಖಲಿಸಿದಂತೆ ನೇರವಾಗಿ ಕಬ್ಬಿನ ಜ್ಯೂಸ್‌ನಿಂದ ಎಥನಾಲ್‌ ಉತ್ಪಾದಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಆದಾಯ ಪ್ರಾಪ್ತಿ ಹಾಗೂ ಕಾರ್ಖಾನೆಗಳು ಎಥನಾಲ್‌ ಘಟಕಗಳಿಗೆ ಪೂರೈಸಿದ ಸಿರಪ್, ಬಿ ಹೆವಿ , ಸಿ ಹೆವಿ ಕಾಕಂಬಿಯ ಮಾಹಿತಿಯನ್ನೂ ರಾಜ್ಯ ಕಾರ್ಖಾನೆಗಳಿಂದ ಮಾಹಿತಿ ಪಡೆದು ಆದಾಯವನ್ನು ಮರು ಪರಿಶೀಲಿಸಿತ್ತು. ಒಟ್ಟು 74 ಸಕ್ಕರೆ ಕಾರ್ಖಾನೆಗಳ ಆದಾಯ ಪ್ರಾಪ್ತಿಗಳನ್ನು ಪುನರ್ ಪರಿಶೀಲಿಸಿದಾಗ 12 ಸಕ್ಕರೆ ಕಾರ್ಖಾನೆಗಳು ಎಫ್‌ಆರ್‍‌ಪಿ ಬೆಲೆಗಿಂತ ಹೆಚ್ಚಿಗೆ ನೀಡಲು ಅವಕಾಶವಿತ್ತು.

 

 

ಈ 12 ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ  ಎಫ್‌ಆರ್‍‌ಪಿ ಬೆಲೆಗಿಂತ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಿತ್ತು.  ಜೆಮ್‌ ಶುಗರ್ಸ್‌  7.91 ಕೋಟಿ ರು., ಗೋದಾವರಿ ಬಯೋ ರಿಫೈನರೀಸ್‌ 5.03 ಕೋಟಿ, ಮೈಲಾರ ಶುಗರ್ಸ್‌ 1.56 ಕೋಟಿ,  ಶಾಮನೂರು ಶುಗಶ್‌ 0, ದಾವಣಗೆರೆ ಶುಗರ್ಸ್‌  2.8 ಕೋಟಿ, ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆ 4.43 ಕೋಟಿ, ಜಿ ಎಂ ಶುಗರ್ಸ್‌ 0.32 ಕೋಟಿ, ಕೋರಮಂಡಲ್‌ ಶುಗರ್ಸ್‌ ಕಂಪನಿಯು 2.04 ಕೋಟಿ ಸೇರಿ ಒಟ್ಟಾರೆ 25.46 ಕೋಟಿ ರುಪಾಯಿಗಳನ್ನು ರೈತರಿಗೆ ಹೆಚ್ಚುವರಿಯಾಗಿ ಪಾವತಿಸಬೇಕಿತ್ತು.

Your generous support will help us remain independent and work without fear.

Latest News

Related Posts