ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್ ಅಧಿಕಾರಿ ರವೀಂದ್ರ ಕಾಶೀನಾಥ್ ಗಡಾದಿ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ದೋಷಾರೋಪಣೆ ಪಟ್ಟಿ ಸಲ್ಲಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸೂಚಿಸಿದೆ.
ರವೀಂದ್ರ ಕಾಶೀನಾಥ್ ಗಡಾದಿ ಅವರ ವಿರುದ್ಧ ಅಖಿಲ ಭಾರತ ಸೇವಾ ನಿಯಮಗಳು 1969ರ ನಿಯಮ 8(4) ರಂತೆ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕು ಎಂದು 5 ತಿಂಗಳ ಹಿಂದೆಯೇ ಸೂಚಿಸಿತ್ತು. ಆದರೆ ಪೊಲೀಸ್ ಪಡೆಗಳ ಮುಖ್ಯಸ್ಥರಾದ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ದೋಷಾರೋಪಣೆ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2ನೇ ಬಾರಿಗೆ ನೆನಪೋಲೆಯನ್ನು ಕಳಿಸಿದ್ದಾರೆ.
2026ರ ಆಗಸ್ಟ್ 29ರಂದು ಮಹಾನಿರ್ದೇಶಕರಿಗೆ ಕಳಿಸಿರುವ 2ನೇ ನೆನಪೋಲೆಯು ದಿ ಫೈಲ್ ಗೆ ಲಭ್ಯವಾಗಿದೆ.
ನೆನಪೋಲೆಯಲ್ಲೇನಿದೆ?
ಐಪಿಎಸ್ ಅಧಿಕಾರಿ ರವೀಂದ್ರ ಕಾಶಿನಾಥ್ ಗಡಾದಿ ಅವರ ವಿರುದ್ಧ ಉತ್ತರ ವಲಯ ಐಜಿಪಿ ವರದಿ ಸಲ್ಲಿಸಿದ್ದರು. ಈ ವರದಿ ಆಧಾರದ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಯವರಿಂದ ಉಂಟಾಗಿರುವ ಕರ್ತವ್ಯ ಲೋಪ ಮತ್ತು ಉಲ್ಲಂಘನೆಯಾಗಿರುವ ನಿಯಮ, ಕಾಯ್ದೆಯನ್ನು ಸ್ಪಷ್ಟವಾಗಿ ನಮೂದಿಸಿದ್ದರು. ಅಲ್ಲದೇ ಇವರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸೂಕ್ತ ಶಿಫಾರಸ್ಸು ಮಾಡಿದ್ದರು.
ಅಲ್ಲದೇ ಇಲಾಖೆ ವಿಚಾರಣೆ ಆರಂಭಿಸಲು ಅನುವಾಗುವಂತೆ ವಿರುದ್ಧ ಅಖಿಲ ಭಾರತ ಸೇವಾ ನಿಯಮಗಳು 1969ರ ನಿಯಮ 8(4) ರಂತೆ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕು ಎಂದು 2026ರ ಏಪ್ರಿಲ್ 21ರಂದು ಕೋರಿತ್ತು.

‘ಆದರೆ ಕೋರಲಾದ ಮಾಹಿತಿಯು ಇದುವರೆಗೂ ಸರ್ಕಾರದಲ್ಲಿ ಸ್ವೀಕೃತಗೊಂಡಿಲ್ಲ. ಆದ್ದರಿಂದ ರವೀಂದ್ರ ಕಾಶೀನಾಥ್ ಗಡಾದಿ ಅವರ ವಿರುದ್ಧ ಇಲಾಖೆ ವಿಚಾರಣೆ ಆರಂಭಿಸಲು ದೋಷಾರೋಪಣೆ ಪಟ್ಟಿ (ಅನುಬಂಧ-1ರಿಂದ 4) ಸಿದ್ಧಪಡಿಸಿ ಕೂಡಲೇ ಒದಗಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ನಿರ್ದೇಶಿಸಿರುವುದು,’ ತಿಳಿದು ಬಂದಿದೆ.
ಅಥಣಿ ತಾಲ್ಲೂಕಿನ ಐಗಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ತೆರೆದ ಬಾವಿಯ ನೀರನ್ನು ಬಳಸಿದ್ದಕ್ಕಾಗಿ ಕುಟುಂಬದ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಮತ್ತು ಇತರ 13 ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಒಟ್ಟು 14 ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದರಲ್ಲಿ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಮೊದಲ ಆರೋಪಿಯಾಗಿದ್ದರು ಎಂದು ತಿಳಿದು ಬಂದಿದೆ. ದಂಪತಿ ಮತ್ತು ಅವರ ಮಗನ ಮೇಲೆ ಕ್ಷುಲ್ಲಕ ಕಾರಣಗಳಿಗೆ ಹಲ್ಲೆ ನಡೆಸಿದ ಆರೋಪ ಅವರ ಮೇಲಿತ್ತು.
ಐಗಳ್ಳಿ ಗ್ರಾಮದ ನಿವಾಸಿ ನಕುಶಾ ಸೈದಪ್ಪ ಗಡಾಡೆ (37) ನೀಡಿದ ದೂರಿನ ಪ್ರಕಾರ, ಅವರ ಕುಟುಂಬವು ಗ್ರಾಮದಲ್ಲಿ ಮನೆ ನಿರ್ಮಿಸುತ್ತಿದೆ. ಕೆಲಸಕ್ಕೆ ನೀರು ಬೇಕಾಗಿತ್ತು. ಅವರು ತಮ್ಮ ಪ್ರದೇಶದ ಸಾರ್ವಜನಿಕರಿಗೆ ಉದ್ದೇಶಿಸಲಾದ ತೆರೆದ ಬಾವಿಯ ಕಲುಷಿತ ನೀರನ್ನು ಬಳಸುತ್ತಿದ್ದರು. ಆದರೆ, ಆರೋಪಿ ರವೀಂದ್ರ ಗಡಾಡಿ ಮತ್ತು ಇತರರು ಬಾವಿಯಿಂದ ನೀರನ್ನು ತರಲು ಸಾಧ್ಯವಾಗದಂತೆ ತೆರೆದ ಬಾವಿಯ ಮೇಲೆ ನೆರಳಿನ ಬಲೆ ಕಟ್ಟಿ ತೆರೆದ ಬಾವಿಯನ್ನು ಮುಚ್ಚಿದ್ದರು ಎಂಬ ಆಪಾದನೆ ಅವರ ಮೇಲಿತ್ತು.
ಆದರೆ, ಆಕೆ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿದ ನಂತರ, ಗ್ರಾಮ ಪಂಚಾಯಿತಿಯು ಶೆಡ್ ಬಲೆಯನ್ನು ತೆಗೆದು ಕುಟುಂಬಕ್ಕೆ ನೀರನ್ನು ಬಳಸಲು ಅವಕಾಶ ಮಾಡಿಕೊಟ್ಟಿತ್ತು. ಈ ವೇಳೆ ಆರೋಪಿಗಳು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಐಗಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಅಪ್ರಾಪ್ತ ಬಾಲಕಿಯ ಮದುವೆ ವಿಚಾರದಲ್ಲಿ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ವಿರುದ್ಧ ಕೋರ್ಟ್ ನಲ್ಲಿ ಅರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಅಪ್ರಾಪ್ತ ಬಾಲಕಿಗೆ ಮುಂದೆ ನಿಂತು ಮದುವೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ವಿಭಾಗದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಸೇರಿ ಒಟ್ಟು ಎಂಟು ಜನರ ವಿರುದ್ಧ ಬಾಲ್ಯ ವಿವಾಹ ಮಾಡಿರುವ ಆರೋಪದ ಮೇಲೆ ಚಾರ್ಜ್ ಶೀಟ್ ದಾಖಲಾಗಿತ್ತು.
ಬಾಲ್ಯ ವಿವಾಹ ಆರೋಪದ ಕುರಿತು ಅಥಣಿ ತಾಲೂಕಿನ ಐಗಿಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾತ್ರವಲ್ಲದೆ ಬಾಲಕಿ ಹಾಗೂ ಆಕೆಯ ಕುಟುಂಬಕ್ಕೆ ಕಿರುಕುಳ ನೀಡುರುವ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು ಎಂದು ಗೊತ್ತಾಗಿದೆ.
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಅಧಿಕಾರ ದುರುಪಯೋಗ, ಜೀವ ಬೆದರಿಕೆ, ನಿಯಮ ಉಲ್ಲಂಘನೆ, ಸುಲಿಗೆ, ಸರ್ಕಾರಿ ವಾಹನ ದುರ್ಬಳಕೆ, ಅಪ್ರಾಪ್ತ ವಯಸ್ಸಿನ ಬಾಲಕಿ ಮದುವೆ ಮಾಡಿಸಿರುವುದು, ಅಧಿಕಾರಿಗಳ ಮೂಲಕ ಭ್ರಷ್ಟಾಚಾರ ಮಾಡಿಸಿರುವುದು, ನಕಲಿ ಸಹಿ, ಒಳಸಂಚು, ಅಕ್ರಮ ಸಂಪಾದನೆ, ನಿರಂತರ ಗೈರು ಹಾಜರಿ, ಅಕ್ರಮ ಡೇಟಾ ವರ್ಗಾವಣೆ ಸೇರಿದಂತೆ ಇನ್ನಿತರೆ ಗಂಭೀರ ಮತ್ತು ಗುರುತರವಾದ ಆರೋಪಳಿಗೆ 30ಕ್ಕೂ ಹೆಚ್ಚು ಹಿರಿಯ ಐಪಿಎಸ್ ಅಧಿಕಾರಿಗಳು ಗುರಿಯಾಗಿದ್ದಾರೆ.
2023ರ ಮೇ 20ರಿಂದ ಇಲ್ಲಿಯವರೆಗೆ ವಿವಿಧ ಪ್ರಕರಣಗಳ ಕುರಿತು ದೂರುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ ಎಂದು ಸ್ವತಃ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈಚೆಗಷ್ಟೇ ಸದನಕ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು.
ಈ ಕುರಿತು ವಿಧಾನಸಭೆ ಸದಸ್ಯ ಹೆಚ್ ಟಿ ಮಂಜು ಅವರು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು 2023ರ ಮೇ 20ರಿಂದ ಇದುವರೆಗೆ ಐಪಿಎಸ್ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗಿರುವ ಭ್ರಷ್ಟಾಚಾರ, ಅಕ್ರಮ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಸಲ್ಲಿಕೆಯಾಗಿರುವ ದೂರರ್ಜಿಗಳು, ದಾಖಲಾಗಿರುವ ಪ್ರಕರಣಗಳು, ಅಧಿಕಾರಿಗಳ ವಿವರ, ಬಾಕಿ ಇರುವ ಪ್ರಕರಣಗಳ ವಿವರ, ಈ ಸಂಬಂಧ ಎಷ್ಟು ಸಂಖ್ಯೆಯ ಕಡತಗಳನ್ನು ತೆರೆಯಲಾಗಿದೆ, ಎಷ್ಟು ಕಡತಗಳನ್ನು ವಿಲೇವಾರಿ ಮಾಡಲಾಗಿದೆ, ಎಷ್ಟು ಕಡತಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ವಿವರ ಕೋರಿದ್ದರು.
ಐಪಿಎಸ್ ಅಧಿಕಾರಿಗಳ ವಿರುದ್ಧದ ಪ್ರಕರಣವೊಂದರಲ್ಲಿ ಡಿಜಿಐಜಿಪಿ ಅವರು ಸರ್ಕಾರಕ್ಕೆ ಇನ್ನೂ ವರದಿ ಸಲ್ಲಿಸಿಲ್ಲ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸದನಕ್ಕೆ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ರವೀಂದ್ರ ಕಾಶೀನಾಥ್ ಗಡಾದಿ ಅವರ ಹೆಸರೂ ಸಹ ಇತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.




