ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್ಡಬ್ಲ್ಯೂಎಂಎಲ್ ಯೋಜಿಸಿದ್ದ ಟೆಂಡರ್ ಪ್ಯಾಕೇಜ್ಗಳನ್ನು ಪರಿಶೀಲನೆ ಮಾಡಲು ಅರಣ್ಯ ಮತ್ತು ಜೀವಿಶಾಸ್ತ್ರ ಪರಿಸರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ನಿಗದಿತ ಅವಧಿಯೊಳಗೆ ಅಂದರೇ 7 ದಿನದೊಳಗೆ ವರದಿ ನೀಡುವಲ್ಲಿ ವಿಫಲವಾಗಿದೆ.
ಈ ಪ್ರಕರಣದ ಬಗ್ಗೆ ದಿ ಫೈಲ್ ಸರಣಿ ವರದಿಗಳನ್ನು ಪ್ರಕಟಿಸಿದ ನಂತರ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪ ದೋಷಗಳ ಬಗ್ಗೆ ದನಿ ಎತ್ತಿದ್ದರು. ಈ ಟೆಂಡರ್ ಪ್ರಕ್ರಿಯೆಯಲ್ಲಯೇ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಹಾಗೆಯೇ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಗೂ ಸಹ ಪತ್ರವನ್ನು ಬರೆದಿದ್ದರು. ಹೀಗಾಗಿ ಸಮಿತಿ ಮೇಲೆ ಸಾರ್ವಜನಿಕ ಮತ್ತು ರಾಜಕೀಯವಾಗಿಯೂ ಒತ್ತಡವಿತ್ತು.
ಈ ಮಧ್ಯೆಯೇ ಸಮಿತಿಯು ನಿಗದಿತ ಅವಧಿಯಲ್ಲಿ ಸರ್ಕಾರಕ್ಕೆ ವರದಿ ನೀಡದೇ ನಿಗದಿತಪಡಿಸಿದ್ದ ಕಾಲಾವಕಾಶವನ್ನು ವಿಸ್ತರಿಸಲು ಸರ್ಕಾರವನ್ನು ಕೋರಿತ್ತು. ಈ ಕೋರಿಕೆಯನ್ನು ಪರಿಗಣಿಸಿದ್ದ ಸರ್ಕಾರವು 15 ದಿನಗಳ ಕಾಲಾವಕಾಶ ನೀಡಿದೆ. ಈ ಸಂಬಂಧ 2026ರ ಜೂನ್ 17ರಂದು ಆದೇಶ (ಸರ್ಕಾರದ ಆದೇಶ ಸಂಖ್ಯೆ; ನಅಇ 335 ಎಂ ಎನ್ ವೈ 2026 (ಇ) ಹೊರಡಿಸಿದೆ.
ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಬೆನ್ನಲ್ಲೇ ಸಮಿತಿಗೆ ಕಾಲಾವಕಾಶ ನೀಡಿ ವಿಸ್ತರಿಸಿ ಹೊರಡಿಸಿರುವ ಆದೇಶವು ಮುನ್ನೆಲೆಗೆ ಬಂದಿದೆ.
ಈ ಆದೇಶದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಮತ್ತೊಂದು ವಿಶೇಷವೆಂದರೇ 2026ರ ಜೂನ್ 4ರಂದು ರಚಿಸಿದ್ದ ಸಮಿತಿಯಲ್ಲಿ ಸದಸ್ಯ ಕಾರ್ಯದರ್ಶಿಯಾಗಿದ್ದ ಜಿಬಿಎನ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರನ್ನು ಕೈ ಬಿಟ್ಟಿದೆ. ಆದರೆ ಮಹೇಶ್ವರರಾವ್ ಅವರು ಈ ಸಮಿತಿಯು ಬಯಸುವ ಎಲ್ಲಾ ದಾಖಲೆ, ಮಾಹಿತಿ ಮತ್ತು ಪೂರ್ಣ ವಿವರಗಳನ್ನು ಮಂಡಿಸುವ ಜವಾಬ್ದಾರಿಯನ್ನು ವಹಿಸಿದೆ.
‘ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಸಂಸ್ಥೆಗೆ ಮಹೇಶ್ವರರಾವ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಅವರು ಸಮಿತಿಯ ಮುಂದೆ ಮಂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮಹೇಶ್ವರರಾವ್ ಅವರನ್ನು ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟು ಈ ಸಮಿತಿಗೆ ಬಿಎಸ್ಡಬ್ಲ್ಯೂಎಂಎಲ್ ಪರವಾಗಿ ಪ್ರಕರಣದ ಪೂರ್ಣ ವಿವರಗಳನ್ನು ಮಂಡಿಸುವ ಜವಾಬ್ದಾರಿಯನ್ನು ವಹಿಸುವುದು ಹೆಚ್ಚು ಸೂಕ್ತವಾಗಿದೆ,’ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಇದರ ಪ್ರಕಾರ ಸಮಿತಿಯ ಅಧ್ಯಕ್ಷರಾಗಿ ಅಂಜುಂ ಪರ್ವೆಜ್ ಅವರು ಮುಂದುವರೆಯಲಿದ್ದಾರೆ. ಉಳಿದಂತೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಅವರು ಸದಸ್ಯರಾಗಿ ಮುಂದುವರೆಯಲಿದ್ದಾರೆ.
ಈ ಹಗರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಟೆಂಡರ್ ಪರಿಶೀಲಿಸಲು ರಚಿಸಿದ್ದ ಸಮಿತಿಗೆ ಕೇವಲ 7 ದಿನ ಗಡುವು ಕೊಟ್ಟಿತ್ತು.
ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಧೀರಜ್ ಮುನಿರಾಜು ಅವರು ಸಹ ಪತ್ರ ಬರೆದಿದ್ದರು. ಆದರೆ ಅಶೋಕ್ ಅವರು ತುಟಿ ಬಿಚ್ಚಿರಲಿಲ್ಲ.
ಈ ವರದಿ ಪ್ರಕಟವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ರಾಜ್ಯ ಸರ್ಕಾರದ ಮೇಲೆ 10,000 ಕೋಟಿ ರುಪಾಯಿ ಕಿಕ್ ಬ್ಯಾಕ್ ಆರೋಪ ಹೊರಿಸಿದ್ದರು.
ಟೆಂಡರ್ ಪ್ರಕ್ರಿಯೆಯಲ್ಲಿಯೇ ನಡೆದಿದೆ ಎನ್ನಲಾಗಿರುವ ಲೋಪ, ಅಕ್ರಮಗಳ ಕುರಿತು ದಿ ಫೈಲ್ ದಾಖಲೆಗಳ ಸಮೇತ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಇದೇ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿಯ ಶಾಸಕ ಧೀರಜ್ ಮುನಿರಾಜು ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಆದರೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕಸ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ಮತ್ತು ಜನಸಾಮಾನ್ಯರ ಮೇಲೆ ತೆರಿಗೆ ವಿಧಿಸಲಾಗುತ್ತಿದೆ ಎಂದು ಹೇಳಿ ಕೈ ತೊಳೆದುಕೊಂಡಿದ್ದರು. ಈ ಹಗರಣದ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕಸದ ಹೆಸರಲ್ಲಿ ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಅಬ್ಬರಿಸಿದ್ದರು.
’36 ಸಾವಿರ ಕೋಟಿ ಲೂಟಿ ಮಾಡಿರೋ ದಾಖಲೆ ಬಿಡುಗಡೆ ಮಾಡ್ತಿದ್ದೇವೆ. ದೇಶದಲ್ಲಿ ಕಸದಲ್ಲೇ ಇಷ್ಟು ದೊಡ್ಡ ಹಗರಣ ನಡೆದಿರುವ ರಾಜ್ಯ ಸರ್ಕಾರ ನಮ್ಮದು. ದೆಹಲಿ ಕಂಪನಿಗೆ ಟೆಂಡರ್ ನೀಡಲಾಗಿದೆ. ಹೈಕಮಾಂಡ್ ಕಪ್ಪದ ಟೆಂಡರ್ ಇದು. 28 ಎಂಎಲ್ ಎ 5 ಎಂಪಿಗಳ ವ್ಯಾಪ್ತಿಗೆ ಬರೋ ಕಸದ ಹಗರಣ ಇದು,’ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿದ್ದನ್ನು ಸ್ಮರಿಸಬಹುದು.
ಸಮಗ್ರ ಘನ ತ್ಯಾಜ್ಯ ವಿಲೇವಾರಿ ಕುರಿತು ‘ದಿ ಫೈಲ್’ ಕಳೆದ ಹಲವು ದಿನಗಳಿಂದಲೂ ದಾಖಲೆ ಸಹಿತ ಸರಣಿ ವರದಿಗಳನ್ನು ಪ್ರಕಟಿಸಿರುವುದನ್ನು ಸ್ಮರಿಸಬಹುದು.




