ವಿದ್ಯಾರ್ಥಿ ವೇತನ; 23 ಕೋಟಿ ಹೊರೆ, ಉನ್ನತ ಶಿಕ್ಷಣ ಇಲಾಖೆಗೆ ಹಾಸ್ಟೆಲ್‌ಗಳ ಹಸ್ತಾಂತರಕ್ಕೆ ಶಿಫಾರಸ್ಸು ಬಹಿರಂಗ

ಬೆಂಗಳೂರು; ಮ್ಯಾನೇಜ್‌ಮೆಂಟ್‌ ಕೋಟಾದಡಿಯಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ವಿಚಾರದಲ್ಲಿ  ಭಾರತ ಸರ್ಕಾರವು ಕೈಗೊಂಡಿದ್ದ ನಿರ್ಧಾರದಿಂದ ಹಾಸ್ಟೆಲ್‌ ನಿರ್ವಹಣೆಗೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ಸಮಾಜ ಕಲ್ಯಾಣ ಇಲಾಖೆಯು ಏದುಸಿರು ಬಿಟ್ಟಿತ್ತು.

 

ಅಲ್ಲದೇ  ರಾಜ್ಯ ಸರ್ಕಾರವು ಈ ಸಂಬಂಧ  ನೀತಿ ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ  ವಿದ್ಯಾರ್ಥಿ ನಿಲಯಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಬೇಕು ಎಂದೂ ಶಿಫಾರಸ್ಸು ಮಾಡಿತ್ತು.

 

ಮ್ಯಾನೇಜ್‌ಮೆಂಟ್‌ ಕೋಟಾದ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾತಿ ಸಂಬಂಧ ‘ದಿ ಫೈಲ್‌’, ಆರ್‍‌ಟಿಐ ಅಡಿಯಲ್ಲಿ 260 ಪುಟಗಳ ದಾಖಲೆಗಳನ್ನು ಪಡೆದಿದೆ.

 

ಸಮಾಜ ಕಲ್ಯಾಣ ಇಲಾಖೆಯ ಪ್ರಸ್ತಾವನೆಯಲ್ಲೇನಿದೆ?

 

ಮ್ಯಾನೇಜ್‌ಮೆಂಟ್‌ ಕೋಟಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರವು ನಿಲ್ಲಿಸಿರುವ ಕಾರಣ, ಇನ್ನು ಮುಂದೆ ಶೇ. 60ರಷ್ಟು ಧನಸಹಾಯ ಬೆಂಬಲ ಸಿಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದಲೂ ಸಹ ಸ್ಥಗಿತಗೊಳಿಸಿದ್ದೇವೆ.

 

 

 

ಆದರೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರಿಂದ ವಿದ್ಯಾರ್ಥಿ ವೇತನ ನೀಡಬೇಕು ಎಂಬ ಬೇಡಿಕೆ ಹೆಚ್ಚಿದೆ.  ಹೀಗಾಗಿ ವಿದ್ಯಾರ್ಥಿ ವೇತನದ ಮೊತ್ತವು 15ರಿಂದ 18  ಕೋಟಿವರೆಗೆ ಹೆಚ್ಚಲಿದೆ. ಈ ಸಂಬಂಧ ನೀತಿಯೊಂದನ್ನು ಜಾರಿಗೊಳಿಸಬೇಕು.  ಇಲ್ಲದಿದ್ದಲ್ಲಿ  ವಿದ್ಯಾರ್ಥಿ ನಿಲಯಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಿಫಾರಸ್ಸು ಮಾಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಆರ್ಥಿಕ ಇಲಾಖೆಯ ಅಭಿಪ್ರಾಯವೇನು?

 

ಸಮಾಜ ಕಲ್ಯಾಣ ಇಲಾಖೆಯು ಸಲ್ಲಿಸಿದ್ದ ಈ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಕೂಲಂಕುಷವಾಗಿ ಪರಿಶೀಲಿಸಿತ್ತು. ಮ್ಯಾನೇಜ್‌ಮೆಂಟ್‌ ಕೋಟಾದಡಿಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಸಲು ಯಾವುದೇ ಅವಕಾಶವಿಲ್ಲ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿತ್ತು. ಅಲ್ಲದೇ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 4,254 ಅರ್ಜಿಗಳನ್ನು ಸ್ವೀಕರಿಸಿದೆ. ಇದರ ಅಂದಾಜು ವೆಚ್ಚವು ವರ್ಷಕ್ಕೆ 13ರಿಂದ 15 ಕೋಟಿ ರು ಗಳಾಗುತ್ತವೆ ಎಂದು ಹೇಳಿತ್ತು.

 

ಪಾರದರ್ಶಕತೆ ಇರಲಿಲ್ಲವೇ?

 

ಅದೇ ರೀತಿ ಮ್ಯಾನೇಜ್‌ಮೆಂಟ್‌ ಸೀಟುಗಳನ್ನು ಭರ್ತಿ ಮಾಡುವಾಗ ಅರ್ಹತೆ ಮಾನದಂಡಗಳನ್ನು ಅನುಸರಿಸಿಲ್ಲ. ಇದು ಅನಿಯಂತ್ರಿತವಾಗಿತ್ತು ಮತ್ತು ಪಾರದರ್ಶಕ ಪ್ರಕ್ರಿಯೆಗಳಿಂದ ಕೂಡಿರಲಿಲ್ಲ. ಇದರಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾ, ಎನ್‌ಆರ್‍‌ಐ ಕೋಟಾ ಮತ್ತು ಸ್ಥಳದಲ್ಲೇ ಪ್ರವೇಶವೂ  ಸೇರಿದ್ದವು.  ಹೀಗಾಗಿ ಭರ್ತಿ ಮಾಡಲಾದ ಈ ಎಲ್ಲಾ ಸೀಟುಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಹವಾಗಿಲ್ಲವೆಂದು  ಕೇಂದ್ರ ಸರ್ಕಾರವು ವಿವರಿಸಿದ್ದನ್ನು ಆರ್ಥಿಕ ಇಲಾಖೆಯು ತನ್ನ  ಟಿಪ್ಪಣಿಯಲ್ಲಿ ಉಲ್ಲೇಖಿಸಿತ್ತು.

 

 

ಭಾರೀ ಹೊರೆ ಬೀಳಲಿದೆಯೇ?

 

ಕೇಂದ್ರ ವಿದ್ಯಾರ್ಥಿವೇತನ ಮಾರ್ಗಸೂಚಿಗಳ ಅಡಿಯಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ.  ಇದನ್ನು ಸಂಪೂರ್ಣವಾಗಿ ರಾಜ್ಯ ನಿಧಿಯಿಂದ ಭರಿಸಬೇಕಾಗುತ್ತದೆ. ಆದ್ದರಿಂದ ವಾಸ್ತವದಲ್ಲಿ 23.5 ಕೋಟಿಯಷ್ಟು ಹೊರೆಯಾಗಲಿದೆ. ಅಲ್ಲದೇ ಇದು ಪ್ರತೀವರ್ಷವೂ ಹೊರೆ ಬೀಳಲಿದೆ. ಇದು ಪುನರಾವರ್ತಿತ ವೆಚ್ಚವಾಗಿರುವುದರಿಂದ, ಪ್ರತಿ ವರ್ಷ ರಾಜ್ಯ ಖಜಾನೆಯ ಮೇಲೆ ಭಾರೀ ಹೊರೆ ಬೀಳುತ್ತದೆ ಎಂದೂ ಹೇಳಿತ್ತು.

 

ವಿದ್ಯಾರ್ಥಿ ವೇತನಕ್ಕೆ ಕೇಂದ್ರ ಅಡ್ಡಿ; ನೀತಿ ರೂಪಿಸದ ರಾಜ್ಯ, 4,254 ದಲಿತ ವಿದ್ಯಾರ್ಥಿಗಳಿಗೆ ಆಗಿದೆಯೇ ವಂಚನೆ?

 

‘ಇದು ಭಾರಿ ಆರ್ಥಿಕ ಪರಿಣಾಮಗಳನ್ನು ಬೀರುವುದರಿಂದ ಈ ವಿಷಯದ ಬಗ್ಗೆ ನೀತಿ ರೂಪಿಸಲು  ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಮ್ಯಾನೇಜ್‌ಮೆಂಟ್‌ ಕೋಟಾಗೆ ವಿದ್ಯಾರ್ಥಿವೇತನವನ್ನು ಒದಗಿಸಲು ಸಂಪೂರ್ಣ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ.  ಮತ್ತು ಭಾರತ ಸರ್ಕಾರದ ಮಾರ್ಗಸೂಚಿಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ.   ಇಲ್ಲಿಯವರೆಗೆ 4,254 ಅರ್ಜಿಗಳು ಬಂದಿವೆ.   ಪ್ರಸ್ತುತ ಮತ್ತು ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಬಹುದು.ಇದಲ್ಲದೆ, ನಾವು ಈ ಪ್ರಸ್ತಾವನೆಗೆ ಒಪ್ಪಿದರೆ, ಸರ್ಕಾರವು ಪ್ರತಿ ವರ್ಷ 23.50 ಕೋಟಿ ರೂಪಾಯಿಗಳ ಪುನರಾವರ್ತಿತ ವೆಚ್ಚವನ್ನು ಭರಿಸಬೇಕಾಗುತ್ತದೆ ಮತ್ತು ಪ್ರಸ್ತುತ ವರ್ಷಕ್ಕೆ ಹೆಚ್ಚುವರಿಯಾಗಿ ಒದಗಿಸಬೇಕಾಗುತ್ತದೆ, ‘ ಎಂದು ವಿವರಿಸಿತ್ತು.

 

ಭಾರತ ಸರ್ಕಾರವು ಈಗ ವಿದ್ಯಾರ್ಥಿವೇತನದ ಮೂಲಕ ನಿರ್ವಹಣಾ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿದೆ. ವಿದ್ಯಾರ್ಥಿವೇತನವು,  ಅಗತ್ಯವಿರುವ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುವ ಬೆಂಬಲ ಎಂದು ಕೇಂದ್ರ ಸರ್ಕಾರವು ನಿರ್ಧರಿಸಿದೆ ಎಂದು ಗೊತ್ತಾಗುತ್ತದೆ.

 

‘ಏಕೆಂದರೆ, ಸಾಮಾನ್ಯವಾಗಿ ಮ್ಯಾನೇಜ್‌ಮೆಂಟ್‌  ಕೋಟಾವನ್ನು ಸರ್ಕಾರಿ / ಅರ್ಹತೆಯ ಕೋಟಾದ ಅಡಿಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ.  ಮತ್ತು ಪಾವತಿಸಬೇಕಾದ ಶುಲ್ಕಗಳು ಹೆಚ್ಚಿರುತ್ತವೆ ಎಂದು ಹೇಳಿದೆ. ಈ ನಿರ್ಧಾರವು ತಾರ್ಕಿಕತೆಯಿಂದ ಕೂಡಿದೆ,’ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್‍‌ ಅವರು ಅಭಿಪ್ರಾಯಿಸಿದ್ಸರು.

 

ಪ್ರಸ್ತಾವನೆ ಒಪ್ಪುವುದಿಲ್ಲ ಎಂದಿದ್ದ ಇಲಾಖೆ

 

ಮ್ಯಾನೇಜ್‌ಮೆಂಟ್‌ ಕೋಟಾದಡಿಯಲ್ಲಿ ಪ್ರವೇಶ ಪಡೆದಿರುವ ದಲಿತ ವಿದ್ಯಾರ್ಥಿಗಳಿಗೆ ಶೇ.100ರಷ್ಟು ವಿದ್ಯಾರ್ಥಿ ವೇತನ ನೀಡುವುದಕ್ಕೆ ಆರ್ಥಿಕ ಇಲಾಖೆಯು ಬಲವಾಗಿ ಆಕ್ಷೇಪಿಸಿತ್ತು.  ರಾಜ್ಯ ಸರ್ಕಾರವು ಅದನ್ನು ಬೆಂಬಲಿಸುವುದನ್ನು ಮುಂದುವರಿಸಲು ನಿರ್ಧರಿಸಿದರೆ, ಹೆಚ್ಚುವರಿ ಪರಿಣಾಮವು 23.50 ಕೋಟಿಗಳಾಗಿರುತ್ತದೆ. ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವ ಅಗತ್ಯವಿಲ್ಲ ಎಂದಿತ್ತು.

 

 

ಅಲ್ಲದೇ ಮ್ಯಾನೇಜ್‌ಮೆಂಟ್‌  ಕೋಟಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. ನಾವು ಭಾರತ ಸರ್ಕಾರವನ್ನು ನಾವು  ಅನುಸರಿಸಬೇಕು ಮತ್ತು ಮ್ಯಾನೇಜ್‌ಮೆಂಟ್‌  ಕೋಟಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನಿಲ್ಲಿಸಬೇಕು ಎಂದೂ ಸಹ ಶಿಫಾರಸ್ಸು  ಮಾಡಿತ್ತು.

SUPPORT THE FILE

Latest News

Related Posts