ರಚನೆಯಾಗದ ಪ್ರಾಧಿಕಾರ; ನಗರಸಭೆಗೆ ಸೇರಿದ 34.32 ಎಕರೆ ಸರ್ಕಾರಕ್ಕೆ ವರ್ಗಾವಣೆ, ಡಿಸಿ ಸುಪರ್ದಿಗೆ ನಿರ್ಣಯ!

ಬೆಂಗಳೂರು; ಗದಗ ಬೆಟಗೇರಿ ನಗರಸಭೆ ಸುಪರ್ದಿಯಲ್ಲಿನ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ ಒಟ್ಟಾರೆ 34.32 ಎಕರೆ ವಿಸ್ತೀರ್ಣದ ಹಳೇ ಕಾಟನ್‌ ಮಾರ್ಕೆಟ್‌ ಆಸ್ತಿಯನ್ನು ಗದಗ ಜಿಲ್ಲಾಧಿಕಾರಿಯವರ ಸುಪರ್ದಿಯಲ್ಲಿರಿಸಲು ಸರ್ಕಾರವು ನಿರ್ಣಯಿಸಿರುವುದು ಇದೀಗ ಬಹಿರಂಗವಾಗಿದೆ.

 

ಗದಗ ಬೆಟಗೇರಿ  ವ್ಯಾಪಾರ, ಸಾಂಸ್ಕೃತಿಕ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರದ ವಿಧೇಯಕಕ್ಕೆ ಅಂಕಿತ ಹಾಕಲು ಮತ್ತೊಮ್ಮೆ ರಾಜ್ಯಪಾಲರಿಗೆ ಕಳಿಸಿರುವ ಬೆನ್ನಲ್ಲೇ ಇದೀಗ ವಿವಾದಿತ ಆಸ್ತಿಯ ನಿರ್ವಹಣೆಯನ್ನು   ಗದಗ ಜಿಲ್ಲಾಧಿಕಾರಿಯವರ ಸುಪರ್ದಿಯಲ್ಲಿರಿಸಲು ನಿರ್ಣಯಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಗದಗ ಬೆಟಗೇರ ವ್ಯಾಪಾರ, ಸಾಂಸ್ಕೃತಿಕ, ವಸ್ತು ಪ್ರದರ್ಶನ ಕೇಂದ್ರ ಪ್ರಾಧಿಕಾರ ಸ್ಥಾಪಿಸುವ ಸಂಬಂಧ ರಾಜ್ಯಪಾಲರು ಹಲವು ಬಾರಿ ಸ್ಪಷ್ಟೀಕರಣ ಕೇಳಿದ್ದರು. ಇದಕ್ಕೆ ಪೂರಕವಾಗಿ ಮಾಹಿತಿ ಮತ್ತು ಸ್ಪಷ್ಟೀಕರಣ ಒದಗಿಸಿದ್ದರು. ಆದರೂ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿರಲಿಲ್ಲ. ಸ್ಪಷ್ಟೀಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌ ಅವರೊಂದಿಗೆ ಎರಡೂ ಇಲಾಖೆಗಳ ಅಧಿಕಾರಿಗಳು ಚರ್ಚಿಸಿದ್ದರು.

 

ಈ ಮಧ್ಯೆ ಪ್ರಾಧಿಕಾರ ಸ್ಥಾಪಿಸುವ ಸಂಬಂಧ ಸಚಿವ ಸಂಪುಟಕ್ಕೆ ಸುದೀರ್ಘವಾದ ಟಿಪ್ಪಣಿಯನ್ನು ನಗರಾಭಿವೃದ್ಧಿ ಇಲಾಖೆಯು ಮಂಡಿಸಿತ್ತು.

 

 

ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಟಿಪ್ಪಣಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಟಿಪ್ಪಣಿಯಲ್ಲೇನಿದೆ?

 

ಗದಗ ಬೆಟಗೇರಿ ವ್ಯಾಪಾರ, ಸಾಂಸ್ಕೃತಿಕ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ ಈವರೆವಿಗೂ ರಚನೆಯಾಗದಿರುವುದರಿಂದ ಗದಗ ಬೆಟಗೇರಿ ನಗರಸಭೆ ಸುಪರ್ದಿಯಲ್ಲಿರುವ ಸಿಟಿ ಸರ್ವೆ ನಂಬರ್‍‌ 3782, 3783, 3786, 3796 ಮತ್ತು 3797ರಲ್ಲಿನ ಸಾರ್ವಜನಿಕ ರಸ್ತೆಗಳನ್ನು ಒಳಗೊಂಡಂತೆ ಒಟ್ಟು 34.32 ಎಕರೆ ಹಳೇ ಕಾಟನ್‌ ಮಾರ್ಕೇಟ್‌ ಆಸ್ತಿಯನ್ನು ಸರ್ಕಾರಿ ಆದೇಶ ಹೊರಡಿಸುವ ಮೂಲಕ ಸರ್ಕಾರಕ್ಕೆ ವರ್ಗಾಯಿಸಿಕೊಂಡು ಪ್ರಾಧಿಕಾರ ರಚನೆ ಆಗುವವರೆಗೂ ಈ ಆಸ್ತಿಯ ನಿರ್ವಹಣೆಯನ್ನು ಗದಗ ಜಿಲ್ಲಾಧಿಕಾರಿಯವರ ಸುಪರ್ದಿಯಲ್ಲಿರಿಸುವ ನಿರ್ಣಯಕ್ಕೆ ಅನುಮೋದನೆ ಕೋರಿರುವುದು ಗೊತ್ತಾಗಿದೆ.

 

ಅದೇ ರೀತಿ ಇದೇ ಆಸ್ತಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸುವ ಮೂಲಕ ಸರ್ಕಾರಕ್ಕೆ ವರ್ಗಾಯಿಸಿಕೊಂಡ ಈ ಆಸ್ತಿಯನ್ನು ಗದಗ ಬೆಟಗೇರಿ ವ್ಯಾಪಾರ ಸಾಂಸ್ಕೃತಿಕ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ರಚನೆಯಾಧ ನಂತರ ಆ ಪ್ರಾಧಿಕಾರಕ್ಕೆ ವರ್ಗಾಯಿಸಲು ಕೈಗೊಂಡಿರುವ ನಿರ್ಣಯಕ್ಕೆ ಅನುಮೋದನೆ ನೀಡಬೇಕು ಎಂದು ಟಿಪ್ಪಣಿಯಲ್ಲಿ ನಗರಾಭಿವೃದ್ಧಿ ಇಲಾಖೆಯು ಕೋರಿರುವುದು ತಿಳಿದು ಬಂದಿದೆ.

 

 

ಈ ಪ್ರಾಧಿಕಾರದ ವಿಧೇಯಕದಲ್ಲಿ ಪ್ರಸ್ತಾವಿಸಿರುವ ಹಲವು ಅಂಶಗಳು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಲಿದೆ ಮತ್ತು ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಿದಂತಾಗುತ್ತದೆ. ಈ  ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಿಸಿರುವುದು ಎಂದು ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋಟ್‌ ಅವರು ಅಭಿಪ್ರಾಯಿಸಿದ್ದರು.

 

ಗದಗ ಬೆಟಗೇರಿ ಪ್ರಾಧಿಕಾರ ವಿಧೇಯಕ; ಅಧಿಕಾರ ಮೊಟಕು, ಪ್ರಜಾಪ್ರಭುತ್ವ ದುರ್ಬಲ, ರಾಜ್ಯಪಾಲರ ಆತಂಕ

 

 

ಈ ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ವಿಧೇಯಕ (ತಿದ್ದುಪಡಿ) 2024 ಕ್ಕೆ ರಾಜ್ಯಪಾಲರು ನೀಡಿದ್ದ ತಡೆಯು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಶೀತಲ ಸಮರಕ್ಕೆ ಕಾರಣವಾಗಿತ್ತು. 2023 ರಲ್ಲಿ ಮಂಡಿಸಿದ್ದ ವಿಧೇಯಕಕ್ಕೆ ತಿದ್ದುಪಡಿ ಮಾಡಿ ಮತ್ತೊಮ್ಮೆ ರಾಜ್ಯಪಾಲರ ಅಂಕಿತಕ್ಕೆ ಸರ್ಕಾರವು ಕಳುಹಿಸಿತ್ತು. ರಾಜ್ಯಪಾಲರು ಎರಡನೆ ಬಾರಿಯೂ ತಿದ್ದುಪಡಿಗೆ ಅಂಕಿತ ಹಾಕದೇ ವಾಪಸ್‌ ಕಳಿಸಿದ್ದರು.

 

ತಿದ್ದುಪಡಿ ವಿಧೇಯಕದಲ್ಲೇನಿದೆ?

 

ತಿದ್ದುಪಡಿ ವಿಧೇಯಕವನ್ನು ಸುಗ್ರೀವಾಜ್ಞೆ ರೂಪದಲ್ಲಿ ಹೊರಡಿಸುವ ಸಂಬಂಧ ಪ್ರಕರಣ 3ಕ್ಕೆ ತಿದ್ದುಪಡಿ ತರಲಾಗಿತ್ತು.

 

‘ನಗರಸಭೆಯ ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಗದಗ ಎಂಬ ಪದಗಳ ಬದಲಾಗಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು, ಗದಗ,’ ಎಂಬ ಮಾರ್ಪಾಡಿನೊಂದಿಗೆ ಸಚಿವ ಸಂಪುಟ ಕಂಡಿಕೆ -7ರಲ್ಲಿ ಒಳಗೊಂಡಿರುವ ಪ್ರಸ್ತಾವನೆಗಳನ್ನು 2024ರ ನವೆಂಬರ್ 1ರಂದು ಸಚಿವ ಸಂಪುಟವು ಅನುಮೋದಿಸಿತ್ತು.

 

ಇದನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು ಅವಲೋಕಿಸಿದ್ದರು.

 

ಅವಲೋಕನದಲ್ಲೇನಿತ್ತು?

 

ಮಸೂದೆಯಲ್ಲಿ ಪ್ರಸ್ತಾಪಿಸಲಾದ ಆಸ್ತಿ 1894 ರಿಂದ ನಗರ ಪುರಸಭೆಯ ಮಾಲೀಕತ್ವದಲ್ಲಿದೆ. ಮತ್ತು ಮಾಲೀಕರ ಒಪ್ಪಿಗೆಯಿಲ್ಲದೆ, ನಗರ-ಪುರಸಭೆಯು ಅವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಕಾನೂನುಬದ್ಧವಾಗಿ ಸರಿಯಾಗಿಲ್ಲ. ಪ್ರಸ್ತಾವಿತ ಹೊಸ ಘಟಕಕ್ಕಾಗಿ ನಗರ-ಪುರಸಭೆಯೊಂದಿಗೆ ಸಮಾಲೋಚಿಸಿ ನಗರ ಪುರಸಭೆಯ ಒಪ್ಪಿಗೆಯನ್ನು ಪಡೆದಿದ್ದರೆ ಉತ್ತಮವಾಗಿತ್ತು.

 

ಇಲ್ಲದಿದ್ದರೆ ಅದು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ, ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದು ಆರಂಭದಲ್ಲೇ ಸರ್ಕಾರಕ್ಕೆ ತಿಳಿಸಿದ್ದರು.

 

 

ಆದಾಗ್ಯೂ, ಕರ್ನಾಟಕ ರಾಜ್ಯ ವಿಧಾನಮಂಡಲದ ಅಧಿವೇಶನವು ಡಿಸೆಂಬರ್ 9, 2024 ರಿಂದ ನಿಗದಿಯಾಗಿದೆ. ಮತ್ತು ಈ ಕುರಿತು ಅಧಿಸೂಚನೆಯನ್ನು 2024ರ ನವೆಂಬರ್‍‌ 19ರಂದು (ಡಿಪಿಎಎಲ್ 02 ಸಂವ್ಯಾಶಾವ 2024) ಹೊರಡಿಸಲಾಗಿದೆ. ಇದರ ನಡುವೆ ಸುಗ್ರೀವಾಜ್ಞೆ ಹೊರಡಿಸುವುದು ಕಾರ್ಯಸಾಧುವಲ್ಲ ಎಂದು ಹೇಳಿದ್ದರು.

 

‘ಆದ್ದರಿಂದ ರಾಜ್ಯ ಸರ್ಕಾರಕ್ಕೆ ನಾನು ಸಲಹೆ ನೀಡುವುದೇನೆಂದರೆ, ಹಿಂದಿನ ಮಸೂದೆಯನ್ನು ಹಿಂತೆಗೆದುಕೊಂಡು, ರಾಜ್ಯ ವಿಧಾನಮಂಡಲದ ಎರಡೂ ಸದನಗಳು ಅಂಗೀಕರಿಸಿದ, ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಲಾದ ಎಲ್ಲಾ ತಿದ್ದುಪಡಿಗಳನ್ನು ಒಳಗೊಂಡ ಮತ್ತು ನನ್ನ ಹಿಂದಿನ ಟಿಪ್ಪಣಿಯಲ್ಲಿ ಪ್ರಸ್ತಾಪಿಸಲಾದ ಎಲ್ಲಾ ವಿಷಯಗಳನ್ನು ಪರಿಗಣಿಸಿ, ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲು ಮತ್ತು ನಗರ ಪುರಸಭೆಯ ಹಿತಾಸಕ್ತಿಗಾಗಿ, ನನ್ನ ಮುಂದೆ ಒಂದು ಹೊಸ ಮಸೂದೆಯನ್ನು ಮಂಡಿಸುವುದು ಉತ್ತಮ,’ ಎಂದು ಟಿಪ್ಪಣಿಯಲ್ಲಿ (ಕಂಡಿಕೆ 192/142) ಅಭಿಪ್ರಾಯಿಸಿದ್ದರು ಎಂಬುದು ಗೊತ್ತಾಗಿದೆ.

 

ರಾಜ್ಯಪಾಲರ ಅಭಿಪ್ರಾಯದಂತೆ ಸರ್ಕಾರವು ವಿಧೇಯಕವನ್ನು ಹಿಂಪಡೆಯುವ ಮೊದಲು ಸಚಿವ ಸಂಪುಟದ ಅನುಮೋದನೆ ಪಡೆಯಲು ಮುಂದಾಗಿತ್ತು. ಅನುಮೋದನೆ ನಂತರ ವಿಧೇಯಕ ಮತ್ತು ಅಧ್ಯಾದೇಶ ಇವೆರಡನ್ನೂ ಸಂಯೋಜನೆಗೊಳಿಸಿ ಒಂದು ಹೊಸ ವಿಧೇಯಕ ತಯಾರಿಸಲು ಯೋಚಿಸಿತ್ತು.

 

ಇದಕ್ಕೂ ಸಹ ಸಚಿವ ಸಂಪುಟದ ಅನುಮೋದನೆ ಪಡೆಯಲು ಮತ್ತು ಈ ವಿಧೇಯಕದಲ್ಲಿ ಪ್ರಸ್ತಾಪಿಸಿರುವ ಗದಗ-ಬೆಟಗೇರಿ ನಗರಸಭೆಯ (ಸಿಎಂಸಿ) ವ್ಯಾಪ್ತಿಯಲ್ಲಿನ ಸರ್ವೆ ನಂಬರ್‍‌ 3782, 3786, 3796 ಮತ್ತು 3797ರಲ್ಲಿನ ಒಟ್ಟು 34.32 ಎಕರೆ ವಿಸ್ತೀರ್ಣದ ಭೂ ಪ್ರದೇಶವನ್ನು ಸರ್ಕಾರದ ಹಸ್ತಾಂತರಕ್ಕೆ ಸಹಮತಿ ಪಡೆಯಲು ಅನುಮೋದಿಸಿತ್ತು.

 

ಪೌರಾಯುಕ್ತರು ತೆಗೆದುಕೊಂಡಿದ್ದ ನಿರ್ಣಯದಲ್ಲೇನಿತ್ತು?

 

ಈ ಕುರಿತು ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರು 2025ರ ಫೆ.11ರಂದು ನಿರ್ಣಯ ಕೈಗೊಂಡಿದ್ದರು.

 

 

 

‘ಗದಗ ಬೆಟಗೇರಿ ನಗರಸಭೆಯ ಸಿಟಿ ಸರ್ವೆ ನಂಬರ್‍‌ 3782, 3783, 3786, 3796 ಮತ್ತು 3797ಗಳ ಸಾರ್ವಜನಿಕ ರಸ್ತೆಗಳನ್ನು ಒಳಗೊಂಡಂತೆ ಒಟ್ಟು 34.32 ಎಕರೆ ಹಳೇ ಕಾಟನ್‌ ಮಾರ್ಕೇಟ್‌ ಆಸ್ತಿಯನ್ನು ಒಂದು ಆದರ್ಶ ನಗರವಾಗಿಸುವ ಉದ್ದೇಶದಿಂದ ಈ ಆಸ್ತಿಯ ಲೀಸ್‌ ಅವಧಿ ಮುಕ್ತಾಯಗೊಂಡು ನಗರಸಭೆಯ ಸುಪರ್ದಿಯಲ್ಲಿರುವುದರಿಂದ ಗದಗ ಬೆಟಗೇರಿ ವ್ಯಾಪಾರ, ಸಾಂಸ್ಕೃತಿಕ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರದ ವಿಧೇಯಕ 2024ಕ್ಕೆ ಈ ಆಸ್ತಿಯನ್ನು ಉದ್ದೇಶಿತ ಯೋಜನೆಗಳಿಗೆ ಅನುಷ್ಠಾನಗೊಳಿಸಲು ಹಸ್ತಾಂತರಿಸುವುದು ಸೂಕ್ತವೆಂದು ಸಹಮತಿಸಿ ಕರ್ನಾಟಕ ಪುರಸಭೆಗಳ ಅಧಿನಿಯಮ 1954ರ ಕಲಂ 72ರ ಅನ್ವಯ ಆಸ್ತಿ ಹಸ್ತಾಂತರ ಪೂರ್ವದಲ್ಲಿ ಸರ್ಕಾರದ ಮಂಜೂರಾತಿಯನ್ನು ಪಡೆಯಬೇಕಾಗಿರುತ್ತದೆ,’ ಎಂದು ನಿರ್ಣಯ ಕೈಗೊಂಡಿದ್ದರು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ಇದಕ್ಕೆ ಕಾನೂನು ಇಲಾಖೆಯೂ 2025ರ ಮಾರ್ಚ್‌ 27ರಂದು ತನ್ನ ಅಭಿಪ್ರಾಯ (ಲಾ ಅಭಿಪ್ರಾಯ 255/2025, UDD 18 TMD 2023 (PART-5) ನೀಡಿತ್ತು.

 

ಕಾನೂನು ಇಲಾಖೆಯ ಅಭಿಪ್ರಾಯವೇನು?

 

ಭೂ ಸ್ವಾಧೀನ ಮಾಡುವುದು ಪ್ರಾಧಿಕಾರದ ಸ್ಥಾಪನೆಗೆ ಸಂಬಂಧಿಸಿದ ಪೂರಕ ಅಂಶವೇ ಹೊರತು ಪ್ರಾಧಿಕಾಋದ ಸ್ಥಾಪನೆಗೆ ಅವಲಂಬಿತವಲ್ಲ. ಆದ್ದರಿಂದ ಕರ್ನಾಟಕ ಮುನಿಸಿಪಲ್‌ ಕಾಯ್ದೆ 1964ರ ಕಲಂ 81(3) ಅನ್ವಯ ಸರ್ಕಾರಕ್ಕೆ ನಗರಸಭೆಯ ಜಾಗವನ್ನು ಸರ್ಕಾರದ ಆದೇಶವನ್ನು ಕಾಲಕಾಲಕ್ಕೆ ಹೊರಡಿಸುವ ಮೂಲಕ ಸರ್ಕಾರಕ್ಕೆ ವರ್ಗಾಯಿಸಿಕೊಳ್ಳಲು ಅವಕಾಶವಿರುತ್ತದೆ. ಮತ್ತು ಅದೇ ರೀತಿ ಸೂಕ್ತ ಕಾನೂನು ಕ್ರಮ ಅನುಸರಿಸಿ ಪ್ರಾಧಿಕಾರಕ್ಕೆ ಹಸ್ತಾಂತರಿಸಬಹುದಾಗಿರುತ್ತದೆ,’ ಎಂದು ಅಭಿಪ್ರಾಯಿಸಿತ್ತು.

 

 

ಇದೇ ಅಭಿಪ್ರಾಯವನ್ನು ಯೋಜನಾ ಇಲಾಖೆಯೂ ಸಹ ಸಹಮತಿಸಿತ್ತು.

 

ಇದಾದ ನಂತರ ಸರ್ಕಾರವು  2024ರ ಸೆ.9ರಂದು ಸ್ಪಷ್ಟೀಕರಣಗಳೊಂದಿಗೆ ಕಡತವನ್ನು ರಾಜ್ಯಪಾಲರಿಗೆ ಸಲ್ಲಿಸಿತ್ತು.
ಈ ಸ್ಪಷ್ಟೀಕರಣವನ್ನು ಅವಲೋಕಿಸಿದ್ದ ರಾಜ್ಯಪಾಲರು 2024ರ ಸೆ.30ರಂದು ಮತ್ತಷ್ಟು ಸ್ಪಷ್ಟೀಕರಣ ಕೋರಿ ಕಡತವನ್ನು ಹಿಂದಿರುಗಿಸಿದ್ದರು.

 

ರಾಜ್ಯಪಾಲರ ಹೊಸ ಅವಲೋಕನದಲ್ಲೇನಿತ್ತು?

 

ಹೊಸ ಪ್ರಾಧಿಕಾರದಲ್ಲಿ ಪ್ರಸ್ತಾವಿತ ಸಮಿತಿಯನ್ನು ಅಧ್ಯಕ್ಷರು, ಉಪಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಮತ್ತು ನಗರ ಪುರಸಭೆಯ ಎಲ್ಲಾ ಸಮಿತಿಗಳ ಅಧ್ಯಕ್ಷರನ್ನು ಸೇರಿಸಿಕೊಂಡು ವಿಸ್ತರಿಸಿದರೆ ಉತ್ತಮ. ಇದು ಈ ಸಂಸ್ಥೆಯನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗಿಸುತ್ತದೆ. ಆದ್ದರಿಂದ ಪ್ರಸ್ತಾವಿತ ಮಸೂದೆಯನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಈ ಮಾರ್ಗದಲ್ಲಿ ಯೋಚಿಸುತ್ತದೆಯೇ ಎಂದು ಕೇಳಿದ್ದರು.

 

 

ರಾಜ್ಯ ಸರ್ಕಾರ ಇದಕ್ಕೆ ಒಪ್ಪಿದರೆ ಮತ್ತು ವಿಸ್ತೃತ ಸಮಿತಿಯು ಮಸೂದೆಯಲ್ಲಿ ಪ್ರಸ್ತಾಪಿಸಲಾದ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಧಿಕಾರ ನೀಡಿದರೆ, ಹೊಸ ಪ್ರಸ್ತಾವಿತ ಸಂಸ್ಥೆ ಮತ್ತು ಅಸ್ತಿತ್ವದಲ್ಲಿರುವ ಸಿಎಂಸಿ ನಡುವೆ ಸಾಮರಸ್ಯವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದರು.

SUPPORT THE FILE

Latest News

Related Posts