Friday | July 17, 2026 |

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ; ಕನಿಷ್ಟ ಭೂಮಿ ಪ್ರಮಾಣ, ಜಂಟಿ ಸ್ಥಿರ ಠೇವಣಿ 25 ಕೋಟಿ ಬದಲಿಗೆ 20 ಕೋಟಿ ರು ಇಳಿಕೆಗೆ ಚಿಂತನೆ

ಬೆಂಗಳೂರು;  ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇದ್ದ  ಕನಿಷ್ಠ ಭೂಮಿ ಅವಶ್ಯಕತೆ ತೆಗೆದುಹಾಕುವುದು ಸೇರಿದಂತೆ ಮತ್ತಿತರೆ  ಮಾನದಂಡ ಮತ್ತು ಅಗತ್ಯ ಅರ್ಹತೆಗಳನ್ನು ಸಡಿಲಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಮುಂದಾಗಿದೆ. ಇದಕ್ಕೆ  ಕೇಂದ್ರ ಸರ್ಕಾರವು  ಉನ್ನತ ಶಿಕ್ಷಣ ವಲಯದಲ್ಲಿ ಈಸ್‌ ಡೂಯಿಂಗ್ ಬ್ಯುಸಿನೆಸ್‌ ಮಾದರಿ ಪರಿಚಯಿಸುವುದರ ಭಾಗವಾಗಿ  ನೀಡಿರುವ  ಸಲಹೆಯನ್ನು ಮುಂದಿರಿಸಿಕೊಂಡಿದೆ.

ಕೇಂದ್ರ ಸರ್ಕಾರದ ಹಲವು ಸಲಹೆಗಳನ್ನು ತಿರಸ್ಕರಿಸುತ್ತಲೇ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು, ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇರುವ ನಿಯಮಗಳನ್ನು ಸಡಿಲಗೊಳಿಸುವ ಸಂಬಂಧ ಕೇಂದ್ರದ ಸಲಹೆಯನ್ನು  ತಾತ್ವಿಕವಾಗಿ ಒಪ್ಪಿಕೊಂಡಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಈ ನಡೆಯು ಶಿಕ್ಷಣ ವಲಯದಲ್ಲಿ  ಚರ್ಚೆಗೆ ಗ್ರಾಸವಾಗಿದೆ.

ವಿಶೇಷವೆಂದರೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯವಿದ್ದ ಕನಿಷ್ಟ 20 ಎಕರೆ ಇರಲು ಹಿಂದಿನ ಸಚಿವ ಡಾ ಎಂ ಸಿ ಸುಧಾಕರ್ ಅವರು ಅನುಮೋದಿಸಿದ್ದರೇ ಅಧಿಕಾರಿಗಳು ಅದನ್ನು 15 ಎಕರೆಗೆ ಕಡಿಮೆಗೊಳಿಸಬಹುದು ಎಂದು ಸಲಹೆ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ ಗೆ ಕೆಲವು ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇರುವ ಅಗತ್ಯತೆಗಳ ಕುರಿತು ಭಾರತ ಸರ್ಕಾರದ ಸಚಿವ ಸಂಪುಟದ ವಿಶೇಷ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಇರುವ ಕೆಲವು ನಿಯಂತ್ರಣಗಳನ್ನು ಸಡಿಲಿಸುವುದು, ಸುಲಭವಾಗಿ ವ್ಯವಹಾರ ನಡೆಸುವ ಕುರಿತು ಚರ್ಚೆ ನಡೆಸಲಾಗಿತ್ತು.

 

 

ಅದರಲ್ಲೂ  ವಿಶೇಷವಾಗಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿತ್ತು. ಈ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

 

ಚರ್ಚೆಯ ಸಂದರ್ಭದಲ್ಲಿ, ಉನ್ನತ ಶಿಕ್ಷಣದಲ್ಲಿ ಇನ್‌ಪುಟ್ ಆಧಾರಿತ ನಿಯಂತ್ರಣ (Input-based Regulation) ಪದ್ಧತಿಯಿಂದ ಫಲಿತಾಂಶ ಆಧಾರಿತ ನಿಯಂತ್ರಣ (Outcome-based Regulation) ಪದ್ಧತಿಗೆ ಪರಿವರ್ತನೆಯ ಅಗತ್ಯತೆ ಕುರಿತು ಚರ್ಚಿಸಲಾಗಿತ್ತು. ಚರ್ಚೆಯ ನಂತರ ವಿಶೇಷ ಕಾರ್ಯದರ್ಶಿಗಳು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಸಲಹೆಗಳನ್ನು ನೀಡಿದ್ದರು.

ಕನಿಷ್ಟ ಭೂಮಿ ಅವಶ್ಯಕತೆ ತೆಗೆದುಹಾಕುವುದು

ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಪ್ರಸ್ತುತ ನಿಗದಿಪಡಿಸಿರುವ ಕನಿಷ್ಠ ಭೂಮಿಯ ಅವಶ್ಯಕತೆಯನ್ನು ಮರುಪರಿಶೀಲಿಸಬೇಕು. ಅಗತ್ಯವಿದ್ದರೆ ಅದನ್ನು ಸಡಿಲಿಸುವುದು ಅಥವಾ ಸಂಪೂರ್ಣವಾಗಿ ತೆಗೆದುಹಾಕಬೇಕು.  ಸಮರ್ಪಕವಾದ ಶೈಕ್ಷಣಿಕ ಸೌಲಭ್ಯಗಳು, ಸಂಶೋಧನಾ ಮೂಲಸೌಕರ್ಯ, ವಿದ್ಯಾರ್ಥಿ ಬೆಂಬಲ ಸೇವೆಗಳು ಹಾಗೂ ಇತರೆ ಅಗತ್ಯ ಸೌಲಭ್ಯಗಳು ಲಭ್ಯವಿರಬೇಕು.  ಸಣ್ಣ ಅಥವಾ ಸೀಮಿತ ವಿಸ್ತೀರ್ಣದ ಕ್ಯಾಂಪಸ್‌ನಿಂದಲೂ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ಸಾಧ್ಯ ಎಂದು ಭಾರತ ಸರ್ಕಾರದ ಸಚಿವ ಸಂಪುಟವು ನಡೆಸಿದ್ದ ಸಭೆಯಲ್ಲಿ  ಅಭಿಪ್ರಾಯ ವ್ಯಕ್ತವಾಗಿತ್ತು.

ಹೆಚ್ಚುವರಿಯಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಪ್ರಸ್ತುತ ವಿಶ್ವವಿದ್ಯಾಲಯಗಳ ಮಾನ್ಯತೆಗಾಗಿ ಯಾವುದೇ ಕನಿಷ್ಠ ಭೂಮಿ ಅವಶ್ಯಕತೆಯನ್ನು ನಿಗದಿಪಡಿಸಿಲ್ಲ.  ಹಾಗೂ ಇದೇ ರೀತಿಯ ಸುಧಾರಣೆಗಳನ್ನು ಹಲವು ರಾಜ್ಯಗಳು ಸಹ ಪರಿಶೀಲಿಸುತ್ತಿವೆ ಎಂಬ ಮಾಹಿತಿಯನ್ನು ಸಭೆಯಲ್ಲಿ ತಿಳಿಸಿತ್ತು.

ಕಡ್ಡಾಯ ಎಂಡೋಮೆಂಟ್‌ ನಿಧಿ ಅವಶ್ಯಕತೆ ತೆಗೆದುಹಾಕಿ

ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಪೂರ್ವ ಷರತ್ತಾಗಿ ನಿಗದಿತ ಕನಿಷ್ಠ ಎಂಡೋಮೆಂಟ್ ನಿಧಿಯನ್ನು ಕಾಯ್ದಿರಿಸಬೇಕಿದೆ.  ಪ್ರಸ್ತುತ ಜಾರಿಯಲ್ಲಿರುವ ಈ  ನಿಯಮವನ್ನು ಮರುಪರಿಶೀಲಿಸಬೇಕು ಎಂದು ಸಲಹೆ ನೀಡಿತ್ತು.  ಪ್ರಸ್ತಾವಿತ ವಿಶ್ವವಿದ್ಯಾಲಯದ ಆರ್ಥಿಕ ಕಾರ್ಯಸಾಧ್ಯತೆ ಹಾಗೂ ದೀರ್ಘಕಾಲಿಕ ಸ್ಥಿರತೆಯನ್ನು ನಿಗದಿತ ಎಂಡೋಮೆಂಟ್ ನಿಧಿಯ ಆಧಾರದ ಬದಲಾಗಿ ಇತರ ವಸ್ತುನಿಷ್ಠ (Objective) ಮೌಲ್ಯಮಾಪನ ವ್ಯವಸ್ಥೆಗಳ ಮೂಲಕ ಪರಿಶೀಲಿಸಬಹುದು ಎಂದು ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಡಿಪಿಆರ್ (DPR) ಆಧಾರಿತ ಅನುಮೋದನಾ ವ್ಯವಸ್ಥೆಯತ್ತ ಪರಿವರ್ತನೆ

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಲ್ಲಿಸಲಾದ ಪ್ರಸ್ತಾವನೆಗಳನ್ನು, ಪ್ರಾಯೋಜಕ ಸಂಸ್ಥೆಯು (Sponsoring Body) ಸಲ್ಲಿಸುವ ಸಮಗ್ರ ವಿವರವಾದ ಯೋಜನಾ ವರದಿ (Detailed Project Report – DPR) ಆಧಾರದ ಮೇಲೆ ಪರಿಗಣಿಸಬೇಕು ಎಂದು ಸಲಹೆ ನೀಡಿತ್ತು.

ಶೈಕ್ಷಣಿಕ ದೃಷ್ಟಿಕೋನ ಹಾಗೂ ಪ್ರಸ್ತಾವಿತ ಕೋರ್ಸ್‌ಗಳು, ಆರ್ಥಿಕ ಕಾರ್ಯಸಾಧ್ಯತೆ ಮತ್ತು ದೀರ್ಘಕಾಲಿಕ ಸ್ಥಿರತೆ, ಅಧ್ಯಾಪಕರ ನೇಮಕಾತಿ ಯೋಜನೆ, ವಿದ್ಯಾರ್ಥಿ ಪ್ರವೇಶದ ಅಂದಾಜು, ಮೂಲಸೌಕರ್ಯ ಅಭಿವೃದ್ಧಿ ಯೋಜನೆ, ಸಂಶೋಧನೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆ,, ಆಡಳಿತ ವ್ಯವಸ್ಥೆ (Governance Framework), ಹಂತ ಹಂತವಾಗಿ ಅನುಷ್ಠಾನಗೊಳಿಸುವ ವೇಳಾಪಟ್ಟಿ; ಹಾಗೂ ಅನ್ವಯವಾಗುವ ಕಾನೂನು ಮತ್ತು ನಿಯಂತ್ರಣ ಸಂಬಂಧಿತ ನಿಯಮಗಳ ಪಾಲನೆಯೂ ಈ ಡಿಪಿಆರ್‍‌ಗಳಲ್ಲಿ ಒಳಗೊಂಡಿರಬೇಕು ಎಂದು ಸೂಚಿಸಿತ್ತು.

 

ಇಂತಹ ಡಿಪಿಆರ್‌ಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಲು ಸಮಗ್ರ ಮೌಲ್ಯಮಾಪನ ಚೌಕಟ್ಟು (Evaluation Framework) ಅಥವಾ ಪರಿಶೀಲನಾ ಪಟ್ಟಿಯನ್ನು (Checklist) ರೂಪಿಸುವಂತೆ ಸಹ ಸಲಹೆ ನೀಡಿತ್ತು.

ತಾತ್ವಿಕ ಅನುಮೋದನೆ

ಆರಂಭಿಕ ಹಂತದಲ್ಲೇ ಸಂಪೂರ್ಣ ಮೂಲಸೌಕರ್ಯ ನಿರ್ಮಾಣವನ್ನು ಕಡ್ಡಾಯಗೊಳಿಸುವ ಬದಲು, ಡಿಪಿಆರ್ ಹಾಗೂ ಇತರ ನಿಗದಿತ ಮಾನದಂಡಗಳ ಮೌಲ್ಯಮಾಪನದ ಆಧಾರದ ಮೇಲೆ ಸರ್ಕಾರವು ತಾತ್ವಿಕ (In-Principle) ಅನುಮೋದನೆ ನೀಡುವುದನ್ನು ಪರಿಗಣಿಸಬಹುದು ಎಂದು ಸಲಹೆ ನೀಡಿದೆ.

ಅನುಮೋದನೆ ನಂತರದ ಮೇಲ್ವಿಚಾರಣೆ- ಪರಿಶೀಲನೆ

ತಾತ್ವಿಕ ಅನುಮೋದನೆ ನೀಡಿದ ನಂತರ ಸೂಕ್ತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿದೆ.  ಅನುಷ್ಠಾನದ ಅವಧಿಯಲ್ಲಿ ನಿಯಮಿತ ಪರಿಶೀಲನೆಗಳನ್ನು ನಡೆಸಿ, ಪ್ರಾಯೋಜಕ ಸಂಸ್ಥೆಯು ಅನುಮೋದಿತ ಡಿಪಿಆರ್ ಹಾಗೂ ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದೆಯೇ ಹಾಗೂ ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ನಿರ್ಮಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಬಹುದು ಎಂದು ಸಲಹೆ ನೀಡಿದೆ.  ಅದೇ ರೀತಿ ಅಗತ್ಯ ನಿಯಮಗಳನ್ನು ತೃಪ್ತಿಕರವಾಗಿ ಪಾಲಿಸಿರುವುದು ದೃಢಪಟ್ಟ ನಂತರ ಅಂತಿಮ ಕಾರ್ಯಾಚರಣಾ ಅನುಮೋದನೆ ನೀಡಬಹುದು ಎಂದು ಹೇಳಿದೆ.

ಗುಣಮಟ್ಟದ ಮಾನದಂಡಗಳಿಗೆ ಆದ್ಯತೆ

ಶೈಕ್ಷಣಿಕ ನಿಯಂತ್ರಣವು ಕಠಿಣ ಪ್ರವೇಶ ನಿರ್ಬಂಧಗಳ ಮೇಲೆ ಕೇಂದ್ರೀಕರಿಸುವ ಬದಲು, ಶಿಕ್ಷಣದ ಫಲಿತಾಂಶಗಳು ಹಾಗೂ ಗುಣಮಟ್ಟದ ಸೂಚಕಗಳ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ಸಭೆಯಲ್ಲಿ ಒತ್ತಿ ಹೇಳಲಾಗಿದೆ. ಅಧ್ಯಾಪಕರ ಸಂಖ್ಯೆ ಹಾಗೂ ಅವರ ಅರ್ಹತೆಗಳು, ಶಿಕ್ಷಕ-ವಿದ್ಯಾರ್ಥಿ ಅನುಪಾತ, ಶೈಕ್ಷಣಿಕ ಮೂಲಸೌಕರ್ಯ, ಸಂಶೋಧನಾ ಸೌಲಭ್ಯಗಳು, ವಿದ್ಯಾರ್ಥಿ ಬೆಂಬಲ ಸೇವೆಗಳು, ಆಡಳಿತ ಮತ್ತು ಪಾರದರ್ಶಕತಾ ವ್ಯವಸ್ಥೆಗಳು ಹಾಗೂ ಕಲಿಕೆಯ ಫಲಿತಾಂಶಗಳನ್ನು ಮಾನದಂಡಗಳನ್ನು ನಿಗದಿಪಡಿಸಬೇಕು. ಅಲ್ಲದೇ  ಅನುಷ್ಠಾನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬಹುದು ಎಂದು ಸಭೆಯಲ್ಲಿ ಸಲಹೆ ನೀಡಿರುವುದು ಗೊತ್ತಾಗಿದೆ.

ಖಾಸಗಿ ವಿಶ್ವವಿದ್ಯಾಲಯಗಳಿಗಾಗಿ ಏಕರೂಪದ ಶಾಸನಾತ್ಮಕ ಚೌಕಟ್ಟು

ಪ್ರತಿ ಖಾಸಗಿ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕಾನೂನು ಜಾರಿಗೊಳಿಸುವ ಬದಲಾಗಿ, ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ, ನಿಯಂತ್ರಣ ಮತ್ತು ಕಾರ್ಯಾಚರಣೆಯನ್ನು ನಿಯಂತ್ರಿಸುವ ಸಮಗ್ರ ಛತ್ರ (Umbrella) ಶಾಸನವನ್ನು ರೂಪಿಸುವ ಸಾಧ್ಯತೆಯನ್ನು ರಾಜ್ಯ ಸರ್ಕಾರವು ಪರಿಶೀಲಿಸಬಹುದು ಎಂದು ಸಲಹೆ ನೀಡಿದೆ.  ಇಂತಹ ಚೌಕಟ್ಟಿನ ಅಡಿಯಲ್ಲಿ, ನಿಗದಿತ ಅರ್ಹತಾ ಮಾನದಂಡಗಳು ಹಾಗೂ ಡಿಪಿಆರ್ (DPR) ಮೌಲ್ಯಮಾಪನದ ಆಧಾರದ ಮೇಲೆ ಪ್ರಮಾಣೀಕೃತ (Standardized) ಪ್ರಕ್ರಿಯೆಯ ಮೂಲಕ ಅನುಮೋದನೆಗಳನ್ನು ನೀಡಬಹುದು ಎಂದು ಹೇಳಿದೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಉತ್ತೇಜನ

ಅನ್ವಯವಾಗುವ ನಿಯಂತ್ರಣಾತ್ಮಕ ನಿಯಮಗಳನ್ನು ಪಾಲಿಸುವ ಷರತ್ತಿನೊಂದಿಗೆ, ಉತ್ತಮ ಗುಣಮಟ್ಟದ ಹಾಗೂ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಲು ಅನುಕೂಲವಾಗುವ ರೀತಿಯಲ್ಲಿ ಈ ಪ್ರಸ್ತಾವಿತ ಚೌಕಟ್ಟನ್ನು ರೂಪಿಸಬಹುದು ಎಂದು ವಿಶೇಷ ಕಾರ್ಯದರ್ಶಿಗಳು ಸಲಹೆ ನೀಡಿದ್ದರು.

ನಿರೀಕ್ಷಿತ ಪ್ರಯೋಜನಗಳೇನು?

ಈ ರೀತಿಯ ಸುಧಾರಣೆಗಳಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಾಗಬಹುದು, ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಉತ್ತೇಜನ ದೊರೆಯಬಹುದು,  ಉನ್ನತ ಶಿಕ್ಷಣಕ್ಕೆ ಪ್ರವೇಶ ಹೆಚ್ಚಾಗಬಹುದು,  ಒಟ್ಟು ದಾಖಲಾತಿ ಅನುಪಾತ (Gross Enrolment Ratio – GER) ಸುಧಾರಣೆಗೆ ನೆರವಾಗಬಹುದು. ಅಲ್ಲದೇ  ಸ್ಪರ್ಧಾತ್ಮಕತೆ ಮತ್ತು ಗುಣಮಟ್ಟ ಹೆಚ್ಚಳ, ಶಿಕ್ಷಣ ಸಾಮರ್ಥ್ಯ ವಿಸ್ತರಣೆಯಿಂದ ದೀರ್ಘಾವಧಿಯಲ್ಲಿ ಶಿಕ್ಷಣದ ವೆಚ್ಚ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವ್ಯವಹಾರ ನಡೆಸುವ ಸುಲಭತೆ (Ease of Doing Business) ಸುಧಾರಿಸಬಹುದು ಎಂದು ಸಲಹೆ ನೀಡಿದೆ.

ರಾಜ್ಯ ಸರ್ಕಾರಗಳು ಎಲ್ಲಾ ಸಂಬಂಧಿತ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರದ ಪರಿಗಣನೆಗಾಗಿ ಕಾರ್ಯಯೋಜನೆ (Action Plan) ಸಿದ್ಧಪಡಿಸಬೇಕು ಎಂದು ವಿಶೇಷ ಕಾರ್ಯದರ್ಶಿಗಳು ಸಲಹೆ ನೀಡಿದರು. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ನಿಯಂತ್ರಣಾತ್ಮಕ ಸುಧಾರಣೆಗಳ ಕುರಿತು ಸಚಿವ ಸಂಪುಟ ಕಾರ್ಯಾಲಯವು  ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಜತೆ ಸಮಾಲೋಚನೆ ನಡೆಸುತ್ತಿದೆ ಎಂದು ಸಭೆಯಲ್ಲಿ ತಿಳಿಸಿತ್ತು.

‘ರಾಜ್ಯ ಸರ್ಕಾರವು ಸಭೆಯಲ್ಲಿ ಸೂಚಿಸಲಾದ ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸದಿರಲು ಅಥವಾ ಸಭೆಯಲ್ಲಿ ಚರ್ಚಿಸಲಾದ ಸುಧಾರಣಾ ಚೌಕಟ್ಟಿನಿಂದ ಯಾವುದೇ ಮಹತ್ವದ ವ್ಯತ್ಯಾಸವನ್ನು ಪ್ರಸ್ತಾಪಿಸಲು ನಿರ್ಧರಿಸಿದಲ್ಲಿ, ಅಗತ್ಯ ಅನುಮೋದನೆಗಳನ್ನು — ಅಗತ್ಯವಿದ್ದಲ್ಲಿ  ಮುಖ್ಯಮಂತ್ರಿಯವರ ಅನುಮೋದನೆ ಸೇರಿದಂತೆ — ಪಡೆದ ನಂತರ ಅದನ್ನು ಸಚಿವ ಸಂಪುಟ ಕಾರ್ಯಾಲಯಕ್ಕೆ  ತಿಳಿಸಬಹುದು,’  ಎಂದು ಸೂಚಿಸಿತ್ತು.

ರಾಜ್ಯ ಸರ್ಕಾರಗಳು ಎಲ್ಲಾ ಸಂಬಂಧಿತ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರದ ಪರಿಗಣನೆಗಾಗಿ ಕಾರ್ಯಯೋಜನೆ (Action Plan) ಸಿದ್ಧಪಡಿಸಬೇಕು ಎಂದು ವಿಶೇಷ ಕಾರ್ಯದರ್ಶಿಗಳು ಸಲಹೆ ನೀಡಿದ್ದಾರೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ನಿಯಂತ್ರಣಾತ್ಮಕ ಸುಧಾರಣೆಗಳ ಕುರಿತು ಸಚಿವ ಸಂಪುಟ ಕಾರ್ಯಾಲಯವು  ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಜತೆ ಸಮಾಲೋಚನೆ ನಡೆಸುತ್ತಿದೆ ಎಂಬುದನ್ನೂ ತಿಳಿಸಿದೆ.

ಭಾರತ ಸರ್ಕಾರದ ಸಚಿವ ಸಂಪುಟ ವಿಶೇಷ ಕಾರ್ಯದರ್ಶಿಗಳು ನೀಡಿದ್ದ ಸಲಹೆಗಳ ಕುರಿತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಕೂಡ ಅಭಿಪ್ರಾಯ ನೀಡಿದೆ.

ಉನ್ನತ ಶಿಕ್ಷಣ ಪರಿಷತ್‌ ನೀಡಿರುವ ವರದಿಯಲ್ಲೇನಿದೆ?

Hot this week

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...
Please Scan to make Your Contribution

Topics

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

Related Articles

Popular Categories

error: Content is protected !!