ಬೆಂಗಳೂರು; ಓ ಎಫ್ ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಸರ್ಕಾರವು ನಿಗದಿಪಡಿಸಿದ್ದ ಶುಲ್ಕವನ್ನು ರಾಜ್ಯದ ಹಲವು ಗ್ರಾಮ ಪಂಚಾಯ್ತಿಗಳು ವಸೂಲು ಮಾಡಿಲ್ಲ. ರಿಲೆಯನ್ಸ್ ಸಮೂಹದ ಜಿಯೋ ಸಂಸ್ಥೆ ಸೇರಿದಂತೆ ಹಲವು ಕಂಪನಿಗಳಿಂದ ನಿಗದಿತ ಶುಲ್ಕವನ್ನು ವಸೂಲು ಮಾಡದೇ ಉದಾರತೆ ತೋರಿರುವುದು ಇದೀಗ ಬಹಿರಂಗವಾಗಿದೆ.
ಅದೇ ರೀತಿ 29 ಜಿಲ್ಲೆಗಳಲ್ಲಿನ 1,830 ಪಂಚಾಯ್ತಿಗಳು ಮಾಡಿದ್ದ 356.65 ಕೋಟಿ ವೆಚ್ಚಕ್ಕೆ ಪೂರಕ ಬಿಲ್ಗಳೇ ಇಲ್ಲ. ವೆಚ್ಚ ಮಾಡಿರುವ ಬಿಲ್ಗಳನ್ನು ಲೆಕ್ಕ ಪರಿಶೋಧನೆಗೆ ವಹಿಸಿಲ್ಲ. ಹೀಗಾಗಿ ಇಷ್ಟೊಂದು ಮೊತ್ತವು ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯ (2022-23) ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ಮಾಹಿತಿ ಇವೆ.
ರಾಜ್ಯದ 2,916 ಗ್ರಾಮ ಪಂಚಾಯ್ತಿಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯ್ತಿಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ. ಹಾಗೂ ವಸೂಲಾತಿಯಲ್ಲಿ ಪಂಚಾಯ್ತಿಗಳ ನಿರ್ಲಕ್ಷ್ಯ, ಪಂಚಾಯ್ತಿಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತ, ಶಾಸನಬದ್ಧ ತೆರಿಗೆಯಲ್ಲಿಯೇ ಕಡಿಮೆ ತೆರಿಗೆ ಕಟಾಯಿಸಿದ್ದವು.
ಮೊಬೈಲ್ ಟವರ್ ವಾರ್ಷಿಕ ತೆರಿಗೆ ವಸೂಲು ಮಾಡದೇ ಇರುವ ಪ್ರಕರಣಗಳನ್ನು ಹೊರಗೆಳೆದಿರುವ ಲೆಕ್ಕ ಪರಿಶೋಧಕರು, ಗ್ರಾಮ ಪಂಚಾಯ್ತಿಗಳು ವಸೂಲು ಮಾಡುವ ಉಪ ಕರಗಳನ್ನು ಸರ್ಕಾರಕ್ಕೆ ಜಮೆ ಮಾಡಿಲ್ಲ ಎಂಬ ಸಂಗತಿಯು ಬಹಿರಂಗಗೊಂಡಿದ್ದರ ಬೆನ್ನಲ್ಲೇ ಓಎಫ್ಸಿ ಕೇಬಲ್ ಶುಲ್ಕವನ್ನೂ ಸಹ ವಸೂಲು ಮಾಡಿಲ್ಲ ಎಂಬ ವರದಿಯನ್ನೂ ಲೆಕ್ಕ ಪರಿಶೋಧಕರು ಬಿಡುಗಡೆ ಮಾಡಿರುವುದು ಮುನ್ನೆಲೆಗೆ ಬಂದಿದೆ.
ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಆಪ್ಟಿಕಲ್ ಫೈಬರ್ ಕೇಬಲ್ಗಳನ್ನ ಅಳವಡಿಸಲು ರಸ್ತೆ ಅಗೆತ ಮಾಡಲು ಶುಲ್ಕ ವಸೂಲು ಮಾಡಬೇಕು ಎಂದು 2016ರಲ್ಲೇ ಸುತ್ತೋಲೆ ಹೊರಡಿಸಿತ್ತು. ಪ್ರಕರಣ 199ರಂತೆ ಗ್ರಾಮ ಪಂಚಾಯ್ತಿಗಳು ತೆರಿಗೆ ಮತ್ತು ಶುಲ್ಕವನ್ನು ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದಂತೆ ಮತ್ತು ನಿಯಮಗಳ ಪ್ರಕಾರ ಯಾವುದೇ ಇತರೆ ಶುಲ್ಕಗಳನ್ನು ವಿಧಿಸಿ ವಸೂಲು ಮಾಡಲು ಅವಕಾಶ ಕಲ್ಪಿಸಿತ್ತು.
ಗ್ರಾಮ ಪಂಚಾಯ್ತಿಗಳು ಓಎಫ್ಸಿ ಕೇಬಲ್ ದರಗಳು ಮತ್ತು ಶುಲ್ಕಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಬೇಕು. ಮತ್ತು ವಸೂಲು ಮಾಡುವುದು ಸಹ ಪಂಚಾಯ್ತಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ ಶುಲ್ಕ ನಿಗದಿ ಮತ್ತು ವಸೂಲು ಮಾಡುವಲ್ಲಿ ಹಲವು ನ್ಯೂನತೆಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.
ಪ್ರತಿ ವರ್ಷ ತಮ್ಮ ವ್ಯಾಪ್ತಿಯಲ್ಲಿ ಓಎಫ್ಸಿ ಕೇಬಲ್ ಅಳವಡಿಕೆಯ ಬಗ್ಗೆ ಗ್ರಾಮ ಪಂಚಾಯ್ತಿಯು ತಮ್ಮ ಸಿಬ್ಬಂದಿಯಿಂದ ಸಮೀಕ್ಷೆ ಮಾಡಿಸಿಲ್ಲ. ಒಎಫ್ಸಿ ಕೇಬಲ್ ಅಳವಡಿಕೆಗೆ ಗ್ರಾಮ ಪಂಚಾಯ್ತಿಗಳ ಅನುಮತಿ ಇಲ್ಲದೆಯೇ ಅಳವಡಿಸಲಾಗಿತ್ತು. ಮತ್ತು ಕೇಬಲ್ ಅಳವಡಿಕೆ ದರಗಳನ್ನು ವಸೂಲು ಮಾಡಿರಲಿಲ್ಲ. ಹಾಗೂ ಪ್ರತೀ ವರ್ಷ ನವೀಕರಣವನ್ನೂ ಮಾಡಿರಲಿಲ್ಲ.
ಈ ಸಂಬಂಧ ಡಿಸಿಬಿ ವಹಿಯನ್ನೂ ಸಹ ಸಮರ್ಪಕವಾಗಿ ಮತ್ತು ನಿಯಮಿತವಾಗಿ ನಿರ್ವಹಿಸಿರಲಿಲ್ಲ. ಹೀಗಾಗಿ ಅಂಕಿ ಅಂಶಗಳ ಕೊರತೆಯಿಂದಾಗಿ ಪಂಚಾಯ್ತಿಗೆ ಬರಬೇಕಿದ್ದ ವರಮಾನ ನಷ್ಟವಾಗಿದೆ.
ರಾಜ್ಯದ 6 ಜಿಲ್ಲೆಗಳ 16 ಗ್ರಾಮ ಪಂಚಾಯ್ತಿಗಳು ಓಎಫ್ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಕಂಪನಿಗಳಿಂದ ಕೇಬಲ್ ಶುಲ್ಕವನ್ನು ವಸೂಲು ಮಾಡಿಲ್ಲ. ಇದರ ಮೊತ್ತ 33.26 ಲಕ್ಷ ರು. ನಷ್ಟಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಜಿಯೋ ಸಂಸ್ಥೆ ಮೇಲೆ ಉದಾರತೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮುಂಡಗದೊರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಟೆಲಿಸೋನಿಕ್ ಸಂಸ್ಥೆಯು 1,710 ಮೀ ಮತ್ತು ಜಿಯೋ ಸಂಸ್ಥೆಯು 550 ಮೀಟರ್ ಸೇರಿ ಒಟ್ಟು 2,260 ಮೀಟರ್ ಉದ್ದ ಕೇಬಲ್ ಅಳವಡಿಸಿತ್ತು. ನಿಗದಿಪಡಿಸಿದ್ದ ದರಗಳ ಪ್ರಕಾರ ಈ ಸಂಸ್ಥೆಗಳಿಮದ 14,56,570 ರು.ಗಳನ್ನು ವಸೂಲಿ ಮಾಡಬೇಕಿತ್ತು. ಆದರೆ ಈ ಪಂಚಾಯ್ತಿಯು ಕೇವಲ 11,86,500 ರು.ಗಳನ್ನು ಮಾತ್ರ ವಸೂಲು ಮಾಡಿತ್ತು. ಇನ್ನುಳಿದ 2.70 ಲಕ್ಷ ರು.ಗಳನ್ನು ವಸೂಲು ಮಾಡಿರಲಿಲ್ಲ. ಇದು ಪಂಚಾಯ್ತಿಗೆ ಆಗಿರುವ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
356.65 ಕೋಟಿ ವೆಚ್ಚಕ್ಕೆ ಪೂರಕ ಬಿಲ್ಗಳೇ ಇಲ್ಲ
ಅದೇ ರೀತಿ 29 ಜಿಲ್ಲೆಗಳಲ್ಲಿನ 1,830 ಪಂಚಾಯ್ತಿಗಳು ವೆಚ್ಚಗಳಿಗೆ ಪೂರಕವಾದ ಬಿಲ್ಗಳನ್ನೂ ಸಹ ಲೆಕ್ಕ ಪರಿಶೋಧನೆಗೆ ಒದಗಿಸಿರಲಿಲ್ಲ. ಒಂದೊಮ್ಮೆ ಲೆಕ್ಕ ಪರಿಶೋಧನೆಗೆ ಬಿಲ್ಗಳನ್ನು ಹಾಜರುಪಡಿಸದೇ ಇದ್ದಲ್ಲಿ ಅಂತಹ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪವೆಂದು ಪರಿಗಣಿಸಲಾಗುತ್ತದೆ. ಮತ್ತು ಶಿಸ್ತು ಕ್ರಮ, ಸೇವಾ ಬಡ್ತಿ ತಡೆಯುವುದು ಮತ್ತು ಸಿವಿಲ್, ಕ್ರಿಮಿನಲ್ ಮೊಕದ್ದಮೆಯನ್ನೂ ಸಹ ಹೂಡಲು ಅವಕಾಶವಿದೆ. ಅದೇ ರೀತಿ ಆಡಿಟ್ ಕೈಪಿಡಿ ನಿಯಮ 537ರ ಪ್ರಕಾರ ಇದನ್ನು ಹಣ ದುರುಪಯೋಗವೆಂದೂ ಸಹ ಪರಿಗಣಿಸಬಹುದು.
ಈ 1,830 ಪಂಚಾಯ್ತಿಗಳು ಮಾಡಿದ್ದ 356.65 ಕೋಟಿ ರು ವೆಚ್ಚಕ್ಕೆ ಪೂರಕವಾದ ಬಿಲ್ಗಳನ್ನೇ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿರಲಿಲ್ಲ.
ಜಿಲ್ಲಾವಾರು ಪಟ್ಟಿ
ಬಾಗಲಕೋಟೆಯ 105 ಪಂಚಾಯ್ತಿಗಳು ಮಾಡಿದ್ದ 2,58, 85,959 ರು.ಗಳ ವೆಚ್ಚಕ್ಕೆ ಪೂರಕ ಬಿಲ್ಗಳನ್ನು ಒದಗಿಸಿಲ್ಲ. ಬೆಂಗಳೂರಿನ 27 ಪಂಚಾಯ್ತಿಗಳಲ್ಲಿ 4,37, 94,527 ರು., ಬೆಳಗಾವಿಯ 193 ಪಂಚಾಯ್ತಿಗಳಲ್ಲಿ 27, 97, 63, 881 ರು., ಬಳ್ಳಾರಿಯ 91 ಪಂಚಾಯ್ತಿಗಳಲ್ಲಿ 1,90, 65,057 ರು., ಬೀದರ್ನ 72 ಪಂಚಾಯ್ತಿಗಳಲ್ಲಿ 3,79, 28, 215 ರು., ಚಾಮರಾಜನಗರದ 32 ಪಂಚಾಯ್ತಿಗಳಲ್ಲಿ 11,08, 43, 714 ರು., ಚಿಕ್ಕಬಳ್ಳಾಪುರದ 28 ಪಂಚಾಯ್ತಿಗಳಲ್ಲಿ 93,07, 1,483 ರು., ಚಿಕ್ಕಮಗಳೂರಿನ 17 ಪಂಚಾಯ್ತಿಗಳಲ್ಲಿ 2, 06, 39, 398 ರು., ಚಿತ್ರದುರ್ಗದ 13 ಪಂಚಾಯ್ತಿಗಳಲ್ಲಿ 12, 65, 68,803, ರು., ದಕ್ಷಿಣ ಕನ್ನಡದ 4 ಪಂಚಾಯ್ತಿಗಳಲ್ಲಿ 95, 209 ರು., ದಾವಣಗೆರೆಯ 49 ಪಂಚಾಯ್ತಿಗಳಲ್ಲಿ 16, 51, 54, 014 ರು., ಧಾರವಾಡದ 73 ಪಂಚಾಯ್ತಿಗಳಲ್ಲಿ 7, 42, 96, 344 ರು., ಗಳ ವೆಚ್ಚಕ್ಕೆ ಪೂರಕ ಬಿಲ್ಗಳನ್ನು ಒದಗಿಸಿರಲಿಲ್ಲ.
ಗದಗ್ನ 63 ಪಂಚಾಯ್ತಿಗಳಲ್ಲಿ 7, 83, 32,862 ರು., ಹಾಸನದ 13 ಪಂಚಾಯ್ತಿಗಳಲ್ಲಿ 14, 76, 68, 704 ರು., ಹಾವೇರಿಯ 50 ಪಂಚಾಯ್ತಿಗಳಲ್ಲಿ 6, 90, 32,168 ರು., ಕಲ್ಬುರ್ಗಿಯ 105 ಪಂಚಾಯ್ತಿಗಳಲ್ಲಿ 57, 83, 65, 433 ರು., ಕೊಡಗಿನ 4 ಪಂಚಾಯ್ತಿಗಳಲ್ಲಿ 27, 47, 256 ರು., ಕೋಲಾರದ 6 ಪಂಚಾಯ್ತಿಗಳಲ್ಲಿ 19, 60, 27,431 ರು., ಕೊಪ್ಪಳದ 78 ಪಂಚಾಯ್ತಿಗಳಲ್ಲಿ 19, 60, 27,431 ರು., ಮಂಡ್ಯದ 48 ಪಂಚಾಯ್ತಿಗಳಲ್ಲಿ 4,78,32,691 ರು., ಮೈಸೂರಿನ 21 ಪಂಚಾಯ್ತಿಗಳಲ್ಲಿ 5,60, 19,887 ರು., ವೆಚ್ಚಕ್ಕೆ ಪೂರಕ ಬಿಲ್ಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ.
ರಾಯಚೂರಿನ 179 ಪಂಚಾಯ್ತಿಗಳಲ್ಲಿ 27,87, 09,115 ರು., ಶಿವಮೊಗ್ಗದ 8 ಪಂಚಾಯ್ತಿಗಳಲ್ಲಿ 65, 70, 276 ರು., ತುಮಕೂರಿನ 100 ಪಂಚಾಯ್ತಿಗಳಲ್ಲಿ 37, 19, 17,570 ರು., ಉಡುಪಿಯ 2 ಪಂಚಾಯ್ತಿಗಳಲ್ಲಿ 1,81, 820 ರು., ಉತ್ತರ ಕನ್ನಡದ 13 ಪಂಚಾಯ್ತಿಗಳಲ್ಲಿ 2,21,6,499 ರು., ವಿಜಯನಗರದ 92 ಪಂಚಾಯ್ತಿಗಳಲ್ಲಿ 14, 98, 37,649 ರು., ವಿಜಯಪುರದ 189 ಪಂಚಾಯ್ತಿಗಳಲ್ಲಿ 10,36, 27,821 ರು., ಯಾದಗಿರಿಯ 100 ಪಂಚಾಯ್ತಿಗಳಲ್ಲಿ 44, 51,68,497 ರು.ಗಳ ವೆಚ್ಚಕ್ಕೆ ಪೂರಕ ಬಿಲ್ಗಳನ್ನು ಪಿಡಿಓಗಳು ನೀಡಿರಲಿಲ್ಲ.
2021-22ರಲ್ಲಿಯೂ ಇಂತಹದ್ದೇ ಹಲವು ಲೋಪಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದರು.
ಗ್ರಾಮ ಪಂಚಾಯ್ತಿಗಳಲ್ಲಿ ಲೆಕ್ಕಪರಿಶೋಧನೆ; 251.99 ಕೋಟಿ ರು. ಜಮೆ-ವೆಚ್ಚಕ್ಕೆ ದಾಖಲೆಗಳೇ ಇಲ್ಲ
ಅದೇ ರೀತಿ 355 ಪಂಚಾಯ್ತಿಗಳಲ್ಲಿ ಮ್ಯುಟೇಷನ್ ರಿಜಿಸ್ಟರ್ಗಳನ್ನು ನಿರ್ವಹಿಸಿರಲಿಲ್ಲ.
ಮ್ಯುಟೇಷನ್ ರಿಜಿಸ್ಟರ್ ನಿರ್ವಹಿಸದ 335 ಪಂಚಾಯ್ತಿಗಳು; ಲೆಕ್ಕ ಪರಿಶೋಧನೆ ವರದಿ
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇರಲಿಲ್ಲ.
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇಲ್ಲ; ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ
342 ಪಂಚಾಯ್ತಿಗಳಲ್ಲಿ ವಾರ್ಡ್, ಗ್ರಾಮ ಸಭೆಯೂ ನಡೆದಿರಲಿಲ್ಲ.
342 ಪಂಚಾಯ್ತಿಗಳಲ್ಲಿ ನಡೆಯದ ವಾರ್ಡ್, ಗ್ರಾಮ ಸಭೆ; ಸಾರ್ವಜನಿಕ ಸಹಭಾಗಿತ್ವದ ಕೊರತೆ ಬಹಿರಂಗ
274 ಪಂಚಾಯ್ತಿಗಳಲ್ಲಿ ನರೇಗಾ ಕಾಮಗಾರಿ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿರಲಿಲ್ಲ.
ನರೇಗಾ ಕಾಮಗಾರಿ; ಸಾಮಾಜಿಕ ಲೆಕ್ಕಪರಿಶೋಧನೆಯನ್ನೇ ನಡೆಸದ 274 ಪಂಚಾಯ್ತಿಗಳು
ಅಲ್ಲದೇ ಅಂತಹ ಪಿಡಿಓ ವಿರುದ್ಧ ಶಿಸ್ತು ಕ್ರಮ, ಸೇವಾ ಬಡ್ತಿ ತಡೆಯುವುದು, ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಹಾಗೆಯೇ ಮೈಸೂರು ಆಡಿಟ್ ಮ್ಯಾನ್ಯುಯಲ್ ನಿಯಮ 537ರ ಅನುಸಾರ ಹಣ ದುರುಪಯೋಗವಾಗಿದೆಂದು ಸಹ ಪರಿಗಣಿಸಬಹುದು ಎಂದು 2021-22ನೇ ಸಾಲಿನ ವರದಿಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.