ಸಿದ್ದು ಮೊದಲ ಅವಧಿಯಲ್ಲಿ ವಿಚಾರಣೆ ಪ್ರಸ್ತಾವ ತಿರಸ್ಕೃತ, ಎರಡನೇ ಅವಧಿಯಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿಯೂ ವಜಾ

ಬೆಂಗಳೂರು; ವಕ್ಫ್‌ಗೆ ಸೇರಿದ್ದ 300 ಕೋಟಿ ಗೂ ಹೆಚ್ದು ಬೆಲೆಬಾಳುವ  2 ಎಕರೆ 3 ಗುಂಟೆ ಜಮೀನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಆಗಿರುವ ಪ್ರಕರಣದಲ್ಲಿ ಆರೋಪಿತ  ಮಾಜಿ ಸಚಿವ ಎ ಎಂ ಹಿಂಡಸಗೇರಿ, ಐಎಎಸ್‌ ಅಧಿಕಾರಿ ಸೈಯದ್‌ ಜಮೀರ್‍‌ ಪಾಷ ಮತ್ತಿತರರ ವಿರುದ್ಧ ವಿಚಾರಣೆಗೆ ಅನುಮತಿ ನಿರಾಕರಿಸಿದ್ದನ್ನು ಹೈಕೋರ್ಟ್‌ನಲ್ಲಿ  ಪ್ರಶ್ನಿಸಿದ್ದ ರಿಟ್‌ ಅರ್ಜಿಯು ಇತ್ಯರ್ಥವಾಗದ ಕಾರಣ, ಉಪ ಲೋಕಾಯುಕ್ತರು ಸಹ ಈ ಬಗ್ಗೆ ಯಾವುದೇ  ಶಿಫಾರಸ್ಸು ಕೂಡ  ಮಾಡಿರಲಿಲ್ಲ.

 

ಈ  ಅರ್ಜಿಯು ಇತ್ಯರ್ಥವಾದ ನಂತರ 2 ಎಕರೆ 3 ಗುಂಟೆ ಜಮೀನಿನ ಪರಭಾರೆ ಮತ್ತು ಆರೋಪಿತರ ವಿರುದ್ಧ ವಿಚಾರಣೆಗೆ ಅನುಮತಿ ನಿರಕಾರಿಸಿರುವ  ಪ್ರಕರಣವನ್ನು ಪರಿಶೀಲಿಸಬಹುದು ಎಂದು ಉಪ ಲೋಕಾಯುಕ್ತ ಎನ್‌ ಆನಂದ್‌ ಅವರು ವರದಿಯಲ್ಲಿ ದಾಖಲಿಸಿದ್ದರು.

 

ವಿಶೇಷವೆಂದರೇ ಸಿದ್ದರಾಮಯ್ಯ ಅವರ  ನೇತೃತ್ವದ ಮೊದಲ ಅವಧಿಯಲ್ಲಿ ಆರೋಪಿತರ ವಿರುದ್ಧ ವಿಚಾರಣೆಗೆ ಅನುಮತಿ ನಿರಾಕರಿಸಿದ್ದರೇ ಎರಡನೇ ಅವಧಿಯಲ್ಲಿ ಅಂದರೆ 2024ರಲ್ಲಿ ರಿಟ್‌ ಅರ್ಜಿಯು ಹೈಕೋರ್ಟ್‌ನಲ್ಲಿ ವಜಾಗೊಂಡಿದೆ. ಹೀಗಾಗಿ  ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಎಂದು ಆರೋಪಿತರ ವಿರುದ್ಧ ಯಾವುದೇ ಕ್ರಮವಹಿಸಲು ಅವಕಾಶವಿಲ್ಲದಂತಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

2 ಎಕರೆ 3 ಗುಂಟೆ ಜಮೀನಿನ ಪರಭಾರೆ ಪ್ರಕರಣದ ಕುರಿತು ಉಪ ಲೋಕಾಯುಕ್ತರು ದಾಖಲಾತಿಗಳನ್ನು ಪರಿಶೀಲಿಸಿದ್ದರು.

 

 

ಈ ವರದಿಯನ್ನು ಸಿದ್ಧಪಡಿಸುವ ಹೊತ್ತಿಗೆ ರಿಟ್‌ ಅರ್ಜಿಯು ಹೈಕೋರ್ಟ್‌ನಲ್ಲಿ ಪರಿಗಣನೆಗೆ ಬಾಕಿ ಇತ್ತು. ಮತ್ತು ಪ್ರಕರಣದಲ್ಲಿನ ವಾಸ್ತವಾಂಶಗಳು ಮತ್ತು ವಿವಿಧ ನ್ಯಾಯಾಂಗ ಆದೇಶಗಳನ್ನು ಗಮನಿಸಿದ್ದರು. ವಕ್ಫ್‌ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಬಿಟ್ಟುಕೊಟ್ಟು ಜಂಟಿ ಮೆಮೋ ಸಲ್ಲಿಸಲು ಕಾರಣರಾಗಿದ್ದ ವ್ಯಕ್ತಿಗಳ ವಿರುದ್ಧ ಪ್ರಾಸಿಕ್ಯೂಷನ್‌ ದಾವೆ ಹೂಡಿದ್ದರ ಹಿನ್ನೆಲೆಯಲ್ಲಿ ಈ ಪ್ರಕರಣವು ತಾರ್ಕಿಕ ತೀರ್ಮಾನಕ್ಕೆ ಬಂದಿಲ್ಲ ಎಂದು ವರದಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

 

 

 

ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ ತಮ್ಮ ಮೇಲೆ ಮೊಕದ್ದಮೆ ಹೂಡಲು ಸಾಧ್ಯವಿಲ್ಲ  ಎಂದು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ.  ರಾಜ್ಯ ಸರ್ಕಾರವು ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವುದು ಸಮರ್ಥನೀಯವಲ್ಲ ಎಂದು ನಿರ್ಧರಿಸಿದೆ. ಈ  ಸಂಗತಿಯನ್ನೂ ಎನ್‌ ಆನಂದ್‌ ಅವರು ವರದಿಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.

 

 

ವಕ್ಫ್ ಮಂಡಳಿಯು ಸಲ್ಲಿಸಲಿರುವ ರಾಜಿ ಅರ್ಜಿಯನ್ನು ಅನುಮೋದಿಸುವ ಮೊದಲು ವಕ್ಫ್ ಮಂಡಳಿಯು ಕಾನೂನು ಅಭಿಪ್ರಾಯವನ್ನು ಪಡೆದುಕೊಂಡಿದೆ ಎಂದು ಸಂಪುಟವು ಗಮನಿಸಿದೆ. ಆದ್ದರಿಂದ  ಸರ್ಕಾರವು ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವುದು ಸಮರ್ಥನೀಯವಲ್ಲದಿರಬಹುದು ಎಂದು ವರದಿಯಲ್ಲಿ ಹೇಳಿರುವುದನ್ನು ಉಪಲೋಕಾಯುಕ್ತರ ವರದಿಯಲ್ಲಿ ಪುನರುಚ್ಛರಿಸಲಾಗಿದೆ.

 

ಆರೋಪಿತರ ವಿರುದ್ಧ ವಿಚಾರಣೆಗೆ ಅನುಮತಿ ನೀಡದೇ ನಿರಾಕರಿಸಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದ ಕರ್ನಾಟಕ ಮುಸ್ಲಿಂ ಸಂಘರ್ಷ ಪರಿಷತ್‌, 2021ರಲ್ಲಿ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿತ್ತು.

 

 

ಅಲ್ಲದೇ ಈ ಸಂಬಂಧ  ಅರ್ಜಿದಾರರಿಗೆ ನೋಟಿಸ್ ನೀಡಲು ಬೇರೆ ಯಾವುದೇ ವಿಳಾಸ ಲಭ್ಯವಿರಲಿಲ್ಲ.  ಹೀಗಾಗಿ  ನೋಟಿಸ್ ನೀಡುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು  ನ್ಯಾಯಾಲಯವು ನಿಲುವು ತಳೆದಿತ್ತು.

 

 

2021 ರಲ್ಲಿ ನಿವೃತ್ತಿ ಮೆಮೊ ಸಲ್ಲಿಸಲಾಗಿದ್ದರೂ, ಪ್ರಾತಿನಿಧ್ಯಕ್ಕಾಗಿ ಯಾವುದೇ ವ್ಯವಸ್ಥೆಯನ್ನು ಮಾಡಿರಲಿಲ್ಲ.  ಈ ವಿಷಯವನ್ನು ಮುಂದುವರಿಸುವುದರಲ್ಲಿ ಯಾವುದೇ ಉದ್ದೇಶವಿರುವುದಿಲ್ಲ. ವಿಚಾರಣೆ ನಡೆಸದ ಕಾರಣ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು.

 

 

ಹೆಚ್ಚು ಬೆಲೆ ಬಾಳಲಿರುವ  ಅಣ್ಣಿಪುರದಲ್ಲಿನ 2 ಎಕರೆ 3 ಗುಂಟೆ ಆಸ್ತಿ ಮೇಲೆ   ವಕ್ಫ್‌ ಮಂಡಳಿಗಿದ್ದ  ಹಕ್ಕನ್ನು ಭವರಿಲಾಲ್‌ ವಂಶಸ್ಥರಾದ ಪಿಸ್ತಾಬಾಯಿ ಮತ್ತು ಮಕ್ಕಳ ಪರವಾಗಿ  ಬಿಟ್ಟುಕೊಟ್ಟಿದ್ದ ಪ್ರಕರಣದಲ್ಲಿ 10 ಮಂದಿ  ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸುವ ಪ್ರಸ್ತಾವವನ್ನು   ಸಿದ್ದರಾಮಯ್ಯ ಅವರ ನೇತೃತ್ವದ  ಕಾಂಗ್ರೆಸ್‌ ಸರ್ಕಾರವು  ತಿರಸ್ಕರಿಸಿತ್ತು.

 

300 ಕೋಟಿ ಬೆಲೆಯ ವಕ್ಫ್‌ ಆಸ್ತಿ ಪರಭಾರೆ; ಆರೋಪಿತರ ವಿರುದ್ಧ ವಿಚಾರಣೆಯ ಪ್ರಸ್ತಾವ ತಿರಸ್ಕರಿಸಿದ್ದ ಸಿದ್ದರಾಮಯ್ಯ

 

ವಕ್ಫ್‌ ಆಸ್ತಿ ದುರ್ಬಳಕೆ, ಅತಿಕ್ರಮಣ ಮತ್ತಿತರೆ ಆರೋಪಗಳ ಕುರಿತಾಗಿ ಸಮಗ್ರ ತನಿಖೆ ನಡೆಸಿದ್ದ ಉಪ ಲೋಕಾಯುಕ್ತ ಎನ್‌ ಆನಂದ್‌ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿಯೇ  ಸಿಐಡಿ ತನಿಖಾಧಿಕಾರಿಗಳ ವರದಿ ಮತ್ತು ಸರ್ಕಾರವು ತಿರಸ್ಕರಿಸಿದ್ದ ಸಚಿವ ಸಂಪುಟದ ಅನುಮೋದನೆ ಟಿಪ್ಪಣಿಯಲ್ಲಿ ಈ ಎಲ್ಲಾ ಮಾಹಿತಿ, ವಿವರಗಳು  ಒಳಗೊಂಡಿವೆ.

 

 

 

 

300 ಕೋಟಿ ಬೆಲೆಬಾಳುವ ಜಮೀನು, 1 ಕೋಟಿಗೆ ಪರಭಾರೆ; ವಕ್ಫ್‌ ಆಸ್ತಿ ದುರ್ಬಳಕೆಯ ಮತ್ತೊಂದು ಮುಖ ತೆರೆದಿಟ್ಟ ಸಿಐಡಿ

 

 

ನಬೀಷಾ ದರ್ಗಾಕ್ಕೆ ಸೇರಿದ್ದ  2 ಎಕರೆ 3 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗೆ  ಕೇವಲ 1 ಕೋಟಿ ರು ಮೊತ್ತಕ್ಕೆ ಪರಭಾರೆ ಮಾಡಲಾಗಿದ್ದ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಎ ಎಂ ಹಿಂಡಸಗೇರಿ ಅವರು  ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಸದಸ್ಯರಾಗಿದ್ದರು. ಇದೇ ಎ ಎಂ ಹಿಂಡಸಗೇರಿ ಅವರು ನಂತರದ ವರ್ಷಗಳಲ್ಲಿ  ವಿಧಾನ ಪರಿಷತ್‌ಗೆ  ಸದಸ್ಯರೂ ಆಗಿದ್ದರು. ಮತ್ತು ಈ ಪ್ರಕರಣದಲ್ಲಿ ದಸ್ತಗಿರಿಯಾಗಿದ್ದರು.  ನಂತರ  ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

SUPPORT THE FILE

Latest News

Related Posts