ಬೆಂಗಳೂರು; ಈಜಿಪುರ ಎಲಿವೇಟೆಡ್ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಮಾಡಿದ್ದ ಅಂದಾಜಿನಲ್ಲಿಯೇ ಕಂಡುಬಂದಿದ್ದ ಹಲವು ಲೋಪಗಳನ್ನು ವಾರ್ಷಿಕ ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿದೆ.
ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ವೇಗ ನೀಡಿರುವ ಸರ್ಕಾರವು ಇದೇ 2026ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗಡುವು ನೀಡಿತ್ತು. ಆದರೆ ಈ ಗಡುವು ಮುಗಿದರೂ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಇದರ ಬೆನ್ನಲ್ಲೇ ಇದೀಗ ಈಜಿಪುರ ಎಲಿವೇಟೆಡ್ ಕಾಮಗಾರಿಯ ಅಂದಾಜಿನಲ್ಲಿಯೇ ಲೋಪಗಳು ಇದ್ದವು ಎಂಬ ಅಂಶಗಳು ವಾರ್ಷಿಕ ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿರುವುದು ಮುನ್ನೆಲೆಗೆ ಬಂದಿದೆ.
ವಾರ್ಷಿಕ ಲೆಕ್ಕ ಪರಿಶೋಧನೆ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ 2023-24ನೇ ಸಾಲಿನಲ್ಲಿ 8,80,55,000 ರು.ಗಳನ್ನು ಮೊಬೈಲೇಜೇಷನ್ ಅಡ್ವಾನ್ಸ್ ರೂಪದಲ್ಲಿ ಓಚರ್ ಮೂಲಕ ಪಾವತಿಸಿತ್ತು. ಈ ಬಗ್ಗೆ ಲೆಕ್ಕ ಪರಿಶೋಧಕರು ಈ ಕಡತವನ್ನು ಪರಿಶೀಲನೆ ವೇಳೆಯ ಹಲವು ಸಂಗತಿಗಳನ್ನು ಬೆಳಕಿಗೆ ತಂದಿರುವುದು ಗೊತ್ತಾಗಿದೆ.

ವಾರ್ಷಿಕ ಲೆಕ್ಕ ಪರಿಶೋಧನೆ ಪ್ರಕಾರ ಈಜಿಪುರ ಮೇಲ್ಸೇತುವೆ ನಿರ್ಮಾಣದ ಪೈಕಿ ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಂದಾಜನ್ನು ಪರಿಷ್ಕರಿಸಿತ್ತು. ಇದರ ಪ್ರಕಾರ ಈ ಮೊತ್ರವು 307.96 ಕೋಟಿ ರುಗೆ ಪರಿಷ್ಕರಣೆಗೊಂಡಿತ್ತು. ಪರಿಷ್ಕರಣೆಗೊಂಡಿದ್ದ ಮೊತ್ತಕ್ಕೆ ಅನುಮೋದನೆಯೂ ದೊರೆತಿತ್ತು. ಅಲ್ಲದೇ ಬಾಕಿ ಉಳಿದಿರುವ ಕಾಮಗಾರಿ ಭಾಗವನ್ನು ಪೂರ್ಣಗೊಳಿಸಲು ಆಹ್ವಾನಿಸಿದ್ದ ಟೆಂಡರ್ನಲ್ಲಿ ಭಾಘವಹಿಸಿದ್ದ ಏಕ ವ್ಯಕ್ತಿ ಟೆಂಡರ್ ಮೊತ್ತವು 176.11 ಕೋಟಿ ರು.ಗಳಿಗೆ ಬಿಎಸ್ಸಿಪಿಎಲ್ ಇನ್ಫ್ರಾಸ್ಟಕ್ಚರ್ ಲಿಮಿಟೆಡ್ಗೆ ಅನುಮೋದನೆಯನ್ನು ನೀಡಿರುವುದು ವಾರ್ಷಿಕ ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.
ಭಾಗಶಃ ಉಳಿದಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಲು ಮೂರು ಬಾರಿ ಟೆಂಡರ್ ಆಹ್ವಾನಿಸಿತ್ತು. ಆದರೆ ಸೂಕ್ತ ಗುತ್ತಿಗೆದಾರರು ದೊರಕಿರಲಿಲ್ಲ. ಈಗಾಗಲೇ ಕಾಮಗಾರಿಯು ವಿಳಂಬವಾಗಿರುವ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದ ಕಾರಣ ನಾಲ್ಕನೇ ಬಾರಿ ಆಹ್ವಾನಿಸಿದ್ದ ಟೆಂಡರ್ನಲ್ಲಿ ಅರ್ಹತೆ ಪಡೆದಿದ್ದ ಗುತ್ತಿಗೆದಾರರ ಏಕ ವ್ಯಕ್ತಿ ಟೆಂಡರ್ನ್ನು ಅಂಗೀಕರಿಸಿ ಸರ್ಕಾರದ ಅನುಮೋದನೆ ಪಡೆದಿತ್ತು.

ಭಾಗಶಃ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯವಾದ ಐಟಂಗಳನ್ನು ಪರಿಗಣಿಸಿ 2021-22ನೇ ಸಾಲಿನ ಶೆಡ್ಯೂಲ್ ದರಪಟ್ಟಿ ಮತ್ತು 2022ರ ಜುಲೈ 7ರಂದು ಹೊರಡಿಸಿದ್ದ ವಿತರಣಾ ದರಗಳನ್ನು ಪರಿಗಣಿಸಿತ್ತು. ಇದರ ಪ್ರಕಾರ 143.80 ಕೋಟಿ ರುಗಳಿಗೆ ಅಂದಾಜು ತಯಾರಿಸಿತ್ತು. ಆದರೆ ಈ ಅಂದಾಜಿನಲ್ಲಿಯೇ ಹಲವು ನ್ಯೂನತೆಗಳಿದ್ದವು ಎಂದು ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ಪತ್ತೆಯಾಗಿದೆ.

ನ್ಯೂನತೆಗಳ ವಿವರಣೆ
ಹೆಚ್ಚುವರಿ ಶೇ. 38ರಷ್ಟು ಓವರ್ ಹೆಡ್ ಚಾರ್ಜ್ಸನ್ನು ಓರ್ ಹೆಡ್ ಚಾರ್ಜ್ಸ್ ಶೆ. 9.09 ಮತ್ತು ಶೇ. 12 ರಷ್ಟು ಮಾಡಲಾಗಿತ್ತು. cast in situ box girder and segmental construction additionalities ಶೇ. 38ಷ್ಟು ಪರಿಗಣಿಸಬೇಕಾಗುತ್ತದೆ ಎಂದು ಬಿಬಿಎಂಪಿಯು ವಿವರಣೆ ನೀಡಿತ್ತು. ದರಪಟ್ಟಿ ಅನುಸಾರ ಮೇಲು ಸೇತುವೆ ಮುಖ್ಯ ಐಟಂ ಆಗಿದ್ದ ಕಾಂಕ್ರೀಟ್ನಲ್ಲೇ ಶೇ.17ರಷ್ಟು ವ್ಯತ್ಯಾಸ ಇತ್ತು. ಅನುಮೋದಿತ ಮಿತಿಯಲ್ಲಿಯೇ ಉನ್ನತ ಮಾದರಿಯಾಗಿದ್ದ ಪಿಎಸ್ಸಿ ಸೆಗ್ಮಂಟೆಲ್ ಕನ್ಸ್ಟ್ರಕ್ಷನ್ಸ್ ವಿನ್ಯಾಸದೊಂದಿಗೆ ಕಾಮಗಾರಿ ಕೈಗೊಳ್ಳಲಾಗಿತ್ತು. ಅದರಂತೆ ಕಾಂಕ್ರೀಟ್ ಐಟಂಗೆ ಶೇ. 21ರಷ್ಟು ಹೆಚ್ಚುವರಿ ಓವರ್ ಹೆಡ್ ಚಾರ್ಜ್ಸ್ ನೀಡಬೇಕಾಗಿತ್ತು ಎಂದು ವಿವರಿಸಿತ್ತು.
ಆದರೆ ಅಂದಾಜಿನ ಐಟಂ ಸಂಖ್ಯೆ 26 ಮತ್ತು 27ರಲ್ಲಿ ಟಿಎಂಟಿ ಸ್ಟೀಲ್ ಐಟಂಗೆ 2021-22ನೇ ಸಾಲಿನ ಪಿಡಬ್ಲ್ಯೂಡಿ ಎಸ್ಆರ್ 2021-22ರ ವಾಲ್ಯುಂ 3ರ ಐಟಂ ಸಂಖ್ಯೆ 13.1 ಹಾಗೂ 14.1ನ್ನು 2021-22ನೇ ಸಾ;ಇನ ಮೂರನೇ ತ್ರೈಮಾಸಿಕ ದರಗಳು ಅಂದರೇ 2022ರ ನವೆಂಬರ್ 9ರಲ್ಲಿನ ದರಗಳಂಗತೆ ಅಂದಾಜು ತಯಾರಿಸಿತ್ತು ಎಂದು ವಾರ್ಷಿಕ ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

ಇದೇ ರೀತಿಯಾಗಿ ಅಂದಾಜಿನ ಎಲ್ಲಾ ಐಟಂಗಳಿಗೆ ದರಗಳನ್ನು ಅಳವಡಿಸಿರುವುದರಿಂದ ಪಾಲಿಕೆ ನಿಧಿಗೆ ಹೆಚ್ಚಿನ ಹೊರೆಯಾಗಿದೆ. ಇದನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ವಾರ್ಷಿಕ ಲೆಕ್ಕ ಪರಿಶೋಧನೆಯು ಅಭಿಪ್ರಾಯಿಸಿದೆ.

ಈಜಿಪುರ ಮೇಲ್ಸೇತುವೆಯನ್ನು ಈ ಹಿಂದೆ ಸಿಂಪ್ಲೆಕ್ಸ್ ಲಿಮಿಟೆಡ್ನಿಂದ ನಿರ್ವಹಣೆ ಮಾಡಲಾಗಿತ್ತು. ಈ ಕಾಮಗಾರಿಯನ್ನು ಈ ಸಂಸ್ಥೆಯು ನಿರ್ವಹಿಸಿರಲಿಲ್ಲ. ಹೀಗಾಗಿ ಸರ್ಕಾರದ ಆದೇಶದಂತೆ ರದ್ದುಪಡಿಸಿತ್ತು. ಇಲಾಖೆ ನಿಯಮಾವಳಿಗಳ ಪ್ರಕಾರ ಬಾಕಿ ಕಾಮಗಾರಿಯ ಮೊತ್ತ, ದಂಡ, ಬಡ್ಡಿ ಇತ್ಯಾದಿಗಳನ್ನು ಸೇರಿಸಿ 123.31 ಕೊಟಿ ರು.ಗಳ ನಷ್ಟವನ್ನು ಅಂದಾಜಿಸಿತ್ತು. ಅದರಲ್ಲಿ ಈಗಾಗಲೇ ಮುಟ್ಟುಗೋಲು ಹಾಕಿಕೊಂಡ ಮೊತ್ತ 10.16 ಕೋಟಿ ರುಗಳು ಮತ್ತು ಪಾವತಿಸಲು ಬಾಕಿ ಇದ್ದ ಬಿಲ್ ಮೊತ್ತ 4.01 ಕೋಟಿ, ಕಾಮಗಾರಿ ಸ್ಥಳ ಮತ್ತು ಕಾಸ್ಟಿಂಗ್ ಯಾರ್ಡ್ನಲ್ಲಿ ಲಭ್ಯವಿದ್ದ ಯಂತ್ರೋಪಕರಣಗಳು, ಇತ್ಯಾದಿಗಳನ್ನು ಮೌಲ್ಯ ನಿರ್ಧಾರಕರಿಂದ ಬೆಲೆ ನಿರ್ಧರಿಸಿತ್ತು. ಇದರ ಪ್ರಕಾರ ಒಟ್ಟಾರೆ 6.23 ಕೋಟಿ ರು ಎಂದು ತೀರ್ಮಾನಿಸಿತ್ತು.
ಅದರಂತೆ ಒಟ್ಟಾರೆ 20.40 ಕೋಟಿ ರು.ಗಳನ್ನು ಮುಟ್ಟುಗೋಲು ಹಾಕಿಕೊಂಡು ಉಳಿದ ಮೊತ್ತ 102.91 ಕೋಟಿ ರು ಪಾವತಿಸಬೇಕು. ಇಲ್ಲವಾದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ಮುಖ್ಯ ಇಂಜಿನಿಯರ್ ಅವರು ಸಿಂಪ್ಲೆಕ್ಸ್ ಲಿಮಿಟೆಡ್ಗೆ ಪತ್ರ ಬರೆದಿದ್ದರು. ಆದರೆ ಈ ವರದಿ ತಯಾರಿಸುವ ಹೊತ್ತಿಗೆ ಸಿಂಪ್ಲೆಕ್ಸ್ನಿಂದ ಬಿಬಿಎಂಪಿಗೆ ಯಾವುದೇ ಉತ್ತರಗಳು ಸ್ವೀಕೃತವಾಗಿರಲಿಲ್ಲ.
ಬಳಕೆಗೆ ಯೋಗ್ಯವಾದ ಸೆಗ್ಮಂಟ್ಗಳನ್ನು ಅಂದಾಜಿನಲ್ಲಿ ಪರಿಗಣಿಸಿರಲಿಲ್ಲ. ಹೊಸ ಗುತ್ತಿಗೆ ಕರಾರಿನಂತೆ ಬಳಕೆಗೆ ಯೋಗ್ಯವಾದ ಸೆಗ್ಮಂಟ್ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೆಗ್ಮಂಟ್ಗಳನ್ನು ಗುತ್ತಿಗೆದಾರರೇ ಹೊಸದಾಗಿ ನಿರ್ಮಾಣ ಮಾಡಿ ಅಳವಡಿಸಬೇಕಿತ್ತು. ಇದಕ್ಕೆ ತಗಲುವ ವೆಚ್ಚವನ್ನೂ ಹೊಸ ಗುತ್ತಿಗೆದಾರರಾದ ಬಿಎಸ್ಸಿಪಿಎಲ್ ಇನ್ಫ್ರಾಸ್ಚಕ್ಚರ್ ಲಿಮಿಟೆಡ್ ಭರಿಸಬೇಕು ಎಂದು ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ವಿವರಿಸಿತ್ತು.
ಇನ್ನು 2021-22ನೇ ಸಾಲಿನ ಲೆಕ್ಕ ಪರಿಶೋಧನೆ ಸಮಯದಲ್ಲಿಯೂ ಸಹ ವಸೂಲಾತಿ ಮಾಡಬೇಕಾದ ಕಾಲಾವಧಿ ವಿಸ್ತರಣೆಗೆ ಸಂಬಂಧಿಸಿದಂತೆ ದಂಡದ ಮೊತ್ತ 42,79,134 ರು ಗಳನ್ನು ವಸೂಲಿ ಮಾಡಿರಲಿಲ್ಲ. ಇದನ್ನು ಹೊರತುಪಡಿಸಿ ಉಳಿದ ದಂಡದ ಮೊತ್ತವಾದ 1.31 ಕೋಟಿ ರು. ಪೈಕಿ ಈಗಾಗಲೇ ವಸೂಲು ಮಾಡಲಾದ ದಂಡದ ಮೊತ್ತವನ್ನು ಕಳೆದು ಉಳಿದ ಮೊತ್ತವನ್ನು ಸೇರಿಸಿ ಬೇಡಿಕೆ ಪತ್ರವನ್ನು ಇಟ್ಟಿತ್ತು.

ಕಾಮಗಾರಿ ಸ್ಥಳ ಮತ್ತು ಕಾಸ್ಟಿಂಗ್ ಯಾರ್ಡ್ನಲ್ಲಿ ಲಭ್ಯವಿದ್ದ ಯಂತ್ರೋಪಕರಣಗಳು, ಬಳಕೆ ಸಿದ್ಧವಾದ ಸೆಗ್ಮಂಟ್ಗಳ ಬೆಲೆ ನಿರ್ಧರಿಸಿ 4.32 ಕೋಟಿ ರು.ಗಳನ್ನು ಬಿಎಸ್ಸಿಪಿಎಲ್ ಗೆ ಹಸ್ತಾಂತರಿಸಬೇಕು ಮತ್ತು ಇದರ ಮೌಲ್ಯವನ್ನು ಮೂರು ಸಮಾನ ಕಂತುಗಳಲ್ಲಿ ಕಟಾಯಿಸಬೇಕು ಎಂದು ಸೂಚಿಸಿತ್ತು. ಇದರ ಮೊದಲ ಕಂತಾಗಿ 1.44 ಕೋಟಿ ಕಟಾಯಿಸಲಾಗಿತ್ತು . ಇದನ್ನು ಪರಿಶೀಲಿಸಬೇಕು ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ.
ಈ ಕಾಮಗಾರಿಗೆ ಇದುವರೆಗೂ ಪಾವತಿ ಮಾಡಿರುವ ಮೊತ್ತಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಇದರ ಪ್ರಕಾರ ಆದಾಯ ತೆರಿಗೆ ಸೆಕ್ಷನ್ 194 ಸಿ ಪ್ರಕಾರ ಶೇ. 2ರಷ್ಟು ಮೊತ್ತವನ್ನು ಕಟಾಯಿಸಿ ಸಕ್ಷಮ ಪ್ರಾಧಿಕಾರಕ್ಕೆ 1,70,48,534 ರು.ಗಳನ್ನು ಪಾವತಿ ಮಾಡಬೇಕಾಗಿತ್ತು. ಲೆಕ್ಕಚಾರ ಮಾಡಿರುವಂತೆ 90,64,336 ರು ಮಾತ್ರ ಕಟಾಯಿಸಿತ್ತು. ಅಂದರೇ 79,84,198 ರು.ಗಳಷ್ಟು ಕಡಿಮೆ ಕಟಾಯಿಸಿತ್ತು. ಈ ಮೊತ್ತವನ್ನು ವಸೂಲಿ ಮಾಡಬೇಕು ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

ಮತ್ತೊಂದು ಸಂಗತಿ ಎಂದರೇ ಈ ಕಾಮಗಾರಿಗೆ ಇದುವರೆಗೂ 75.08 ಕೋಟಿ ರು ಪಾವತಿ ಮಾಡಲಾಗಿತ್ತು. ಆದರೂ ಸಹ ಈ ಕಾಮಗಾರಿಯಲ್ಲಿ ಬಳಕೆ ಮಾಡಲಾದ ರಾಜಧನವನ್ನು 56,500.00 ರು ಮಾತ್ರ ಕಟಾಯಿಸಿತ್ತು. ಇದುವರೆಗಿನ ಕಾಮಗಾರಿಯಲ್ಲಿ ಬಳಕೆ ಮಾಡಿಕೊಳ್ಳಲಾದ ಉಪ ಖನಿಜಗಳ ಬಗ್ಗೆ ಲೆಕ್ಕಚಾರ ಮಾಡಿ ವಿಸ್ತೃತವಾದ ವರದಿಯನ್ನು ಗಣಿ ಭೂ ವಿಜ್ಞಾನ ಇಲಾಖೆಯಿಂದ ಪಡೆದುಕೊಳ್ಳಬೇಕು ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.
ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಐಐಎಎಸ್ಸಿ ತಂತ್ರಜ್ಞರು ನೀಡಿದ್ದ ವರದಿ ಆಧರಿಸಿ ಲೆಕ್ಕ ಪರಿಶೋಧಕರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಇದರ ಪ್ರಕಾರ ಉಳಿದಿರುವ 69 ಸೆಗ್ಮಂಟ್ಗಳಲ್ಲಿ ಕಂಡುಬಂದ ತಾಂತ್ರಿಕ ದೋಷಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಸೆಗ್ಮಂಟ್ಗಳ ಗುಣಮಟ್ಟವನ್ನು ಖಾತರಿಪಡಿಸಿಕೊಂಡ ನಂತರವೇ ಕಾಮಗಾರಿ ಸ್ಥಳಕ್ಕೆ ಸಾಗಿಸಿ ಅಳವಡಿಸುವ ಸಂದರ್ಭದಲ್ಲಿ ಎಸ್ 1 ಸೆಗ್ಮಂಟ್ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅದನ್ನು ತೆರವುಗೊಳಿಸಿದ ನಂತರ ಹೊಸ ಸೆಗ್ಮಂಟ್ ಅಳವಡಿಸಲಾಗಿದೆ ಎಂದು ತಾಂತ್ರಿಕ ವರದಿಯಲ್ಲಿ ಹೇಳಲಾಗಿತ್ತು. ಇದರಿಂದಾಗಿ ಕಳಪೆ ಕಾಮಗಾರಿ ಕೈಗೊಂಡಿರುವುದು ಕಂಡು ಬಂದಿದೆ. ಇದಕ್ಕೆ ಕಾರಣರಾದ ಸಿಂಪ್ಲೆಕ್ಸ್ ಲಿಮಿಟೆಡ್ ಮತ್ತು ಪಿಎಂಸಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

ಈಗಾಗಲೇ ವಿಧಿಸಲಾಗಿದ್ದ ಕಾಲವಿಳಂಬಕ್ಕೆ ಸಂಬಂಧಿಸಿದಂತೆ 1.33 ಕೋಟಿ ರು ಸೇರಿ ಮತ್ತಷ್ಟು ದಂಡ ವಿಧಿಸಿತ್ತು. ಇದರಿಂದಾಗಿ ಪ್ರತ್ಯೇಕವಾಗಿ ವಸೂಲಾತಿ ಮಾಡಬೇಕಾದ ಮೊತ್ತವನ್ನು ತಪ್ಪಿಸಲಾಗಿರುವುದನ್ನೂ ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ. 2011-12ನೇ ಸಾಲಿನ ಲೆಕ್ಕ ಪರಿಶೋಧನೆ ಅವಧಿಯಲ್ಲಿ ವರದಿ ಮಾಡಿದ್ದ ಪ್ರಕಾರ ವಸೂಲಾತಿ ಮಾಡಬೇಕಿದ್ದ ಕಾಲಾವಧಿ ವಿಸ್ತರಣೆಗೆ ಸಂಬಂಧಿಸಿದ 42,79,134 ರು.ಗಳನ್ನು ವಸೂಲಿ ಮಾಡಿರಲಿಲ್ಲ.

14ನೇ ಭಾಗಶಃ ಬಿಲ್ ಪಾವತಿ ಸಂದರ್ಭದಲ್ಲಿ 1,09,00,000 ರು.ಗಳನ್ನು ದಂಡವಾಗಿ ವಿಧಿಸಿ ವಸೂಲು ಮಾಡಲು ಸೂಚಿಸಿತ್ತು. ಆದರೆ ಕೇವಲ 25,00,000 ರು. ಮಾತ್ರ ವಸೂಲು ಮಾಡಲಾಗಿತ್ತು. ಇದರಿಂದಾಗಿ 84,00,000 ರು.ಗಳ ವಸೂಲಾತಿ ಮೊತ್ತವನ್ನು ತಪ್ಪಿಸಲಾಗಿದೆ. ಈ ಸಂಬಂಧ ಯಾವುದೇ ವಿವರಗಳನ್ನು ಬಿಬಿಎಂಪಿಯು ಒದಗಿಸಿಲ್ಲ. ಹೀಗಾಗಿ ಈ 8,80,55,000 ರುಗ ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ಗೊತ್ತಾಗಿದೆ.




