300 ಕೋಟಿ ಬೆಲೆಬಾಳುವ ಜಮೀನು, 1 ಕೋಟಿಗೆ ಪರಭಾರೆ; ವಕ್ಫ್‌ ಆಸ್ತಿ ದುರ್ಬಳಕೆಯ ಮತ್ತೊಂದು ಮುಖ ತೆರೆದಿಟ್ಟ ಸಿಐಡಿ

ಬೆಂಗಳೂರು;  ಪ್ರಸಕ್ತ ಮಾರುಕಟ್ಟೆಯಲ್ಲಿ  ಅಂದಾಜು 300ರಿಂದ 350 ಕೋಟಿ ರು ಬೆಲೆಬಾಳಲಿರುವ  ನಬೀಷಾ ದರ್ಗಾಕ್ಕೆ ಸೇರಿದ್ದ  2 ಎಕರೆ 3 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗೆ  ಕೇವಲ 1 ಕೋಟಿ ರು ಮೊತ್ತಕ್ಕೆ ಪರಭಾರೆ ಮಾಡಲಾಗಿತ್ತು.

 

ಈ ಪ್ರಕ್ರಿಯೆಯಲ್ಲಿ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಸಿಇಒ, ಅಧ್ಯಕ್ಷರು ಮತ್ತು ಸದಸ್ಯರು ಒಳಸಂಚು ರೂಪಿಸಿದ್ದರು ಎಂದು ಸಿಐಡಿ ತನಿಖಾ ತಂಡವು ನ್ಯಾಯಾಲಯಕ್ಕೆ ತನಿಖಾ ವರದಿಯನ್ನೂ ಸಲ್ಲಿಸಿತ್ತು.

 

ಈ ಎಲ್ಲಾ ದಾಖಲಾತಿಗಳನ್ನು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

2 ಎಕರೆ 3 ಗುಂಟೆ ಜಮೀನು, ನಬೀಷಾ ದರ್ಗಾಕ್ಕೆ ಸೇರಿದೆ ಎಂದು ಹಲವಾರು ದಾಖಲಾತಿಗಳು ಇದ್ದರೂ ಸಹ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಅಂದಿನ ಸಿಇಓ, ಅಧ್ಯಕ್ಷರು ಮತ್ತು ಸದಸ್ಯರು  ಖಾಸಗಿ ವ್ಯಕ್ತಿ ಭವರಿಲಾಲ್‌  ಎಂಬುವರಿಗೆ 1 ಕೋಟಿ ರುಗೆ  ಪರಭಾರೆ ಮಾಡಿರುವುದನ್ನು ಸಿಐಡಿ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದರು.

 

ಈ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಎ ಎಂ ಹಿಂಡಸಗೇರಿ ಅವರು  ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಸದಸ್ಯರಾಗಿದ್ದರು. ಇದೇ ಎ ಎಂ ಹಿಂಡಸಗೇರಿ ಅವರು ನಂತರದ ವರ್ಷಗಳಲ್ಲಿ  ವಿಧಾನ ಪರಿಷತ್‌ಗೆ  ಸದಸ್ಯರೂ ಆಗಿದ್ದರು. ಮತ್ತು ಈ ಪ್ರಕರಣದಲ್ಲಿ ದಸ್ತಗಿರಿಯಾಗಿದ್ದರು.  ನಂತರ  ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

 

ವಿಶೇಷವೆಂದರೇ ನಬೀಷಾ ದರ್ಗಾದ  2 ಎಕರೆ 3 ಗುಂಟೆಯನ್ನು ಅತ್ಯಂತ ಕನಿಷ್ಠ ಮೊತ್ತವಾಗಿರುವ 1 ಕೋಟಿ ರು ಗೆ  ಬರೆಸಿಕೊಂಡಿದ್ದ  ಭವರಿಲಾಲ್‌ ಕುಟುಂಬವು ಈ ಜಮೀನನ್ನು ಮಾರಾಟ ಮಾಡಲು  ಚರೀಷ್ಮಾ ಬಿಲ್ಡರ್ಸ್‌ನ  ಸುಧೀರ್ ಶೆಟ್ಟಿ ಎಂಬುವರಿಗೆ ಸಾಮಾನ್ಯ ಮೊಕ್ತೆಯಾರ್ ಪತ್ರವನ್ನು ಮಾಡಿಕೊಟ್ಟಿತ್ತು. ನಂತರದ ದಿನಗಳಲ್ಲಿ ಇದೇ ಚರೀಷ್ಮಾ ಬಿಲ್ಡರ್ಸ್‌ನ ಸುಧೀರ್‍‌ ಶೆಟ್ಟಿ ಎಂಬುವರು, ಚರೀಷ್ಮಾ ಬಿಲ್ಡರ್ಸ್‌ನ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಮಿತುಲ್ ಸುಧೀರ್‍‌ ಶೆಟ್ಟಿ ಅವರಿಗೆ 15.21 ಕೋಟಿಗೆ ಶುದ್ಧ ಕ್ರಯಪತ್ರ ಮಾಡಿಕೊಟ್ಟಿದ್ದರು.

 

ನಬೀಷಾ ದರ್ಗಾಕ್ಕೆ ಸೇರಿರುವ 2 ಎಕರೆ 3 ಗುಂಟೆ ಜಮೀನು ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ವ್ಯಾಪ್ತಿಯಲ್ಲಿದೆ. ಹೊಸೂರು ರಸ್ತೆಯಲ್ಲಿಲ್ಲೇ ಅತೀ ಹೆಚ್ಚಿನ ಮಾರ್ಗಸೂಚಿ ಬೆಲೆ ಇದೆ. ಬಿಬಿಎಂಪಿ ವ್ತಾಪ್ತಿಯಲ್ಲಿರುವ  ಕಾರಣ ಈ ಜಮೀನನ್ನು ಚದರ ಮೀಟರ್‌ ಲೆಕ್ಕದಲ್ಲಿ ಬೆಲೆ ನಿಗದಿಪಡಿಸಿದೆ.

 

8,400.3 ಚದುರ ಮೀಟರ್‍‌ ಹೊಂದಿರುವ 2 ಎಕರೆ 3 ಗುಂಟೆ ಜಮೀನಿಗೆ  ಸರ್ಕಾರವೇ ನಿಗದಿಪಡಿಸಿರುವಂತೆ   ಒಂದು ಚದುರ ಮೀಟರ್‍‌ಗೆ ಸರ್ಕಾರಿ  ಮಾರ್ಗದರ್ಶಿ ಬೆಲೆ 1,98,900 ರು. ಇದೆ. ಇದರ ಪ್ರಕಾರ 2 ಎಕರೆ 3 ಗುಂಟೆ ಜಮೀನಿಗೆ (8,400.3 ಚದುರ ಮೀಟರ್‍‌) ಮಾರ್ಗದರ್ಶಿ ಬೆಲೆ 167 ಕೋಟಿ ರು ಆಗಿದೆ.  ಮಾರುಕಟ್ಟೆ ದರದ ಪ್ರಕಾರ ಮೂರು ಪಟ್ಟು ದರವನ್ನು ಲೆಕ್ಕಹಾಕಿದಲ್ಲಿ ಈ ಜಮೀನು,   ಅಂದಾಜು 300ರಿಂದ 350 ಕೋಟಿ ರು ಬೆಲೆಬಾಳಲಿದೆ ಎಂದು ಹೇಳಲಾಗಿದೆ.

 

ಬೆಂಗಳೂರಿನ ಅಣ್ಣೀಪುರ ಗ್ರಾಮದ (ಹಾಲಿ ಲಾಲ್‌ಬಾಗ್‌ ಪ್ರದೇಶ)ದ ಸರ್ವೆ ನಂಬರ್‍‌ 18ರಲ್ಲಿದ್ದ 5 ಎಕರೆ 5 ಗುಂಟೆ  ನಬೀಷಾ ದರ್ಗಾಕ್ಕೆ  ಸೇರಿದ್ದ  ಜಮೀನಿತ್ತು. ಈ ಪೈಕಿ  2 ಎಕರೆ 3 ಗುಂಟೆ ಜಮೀನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಆಗಿತ್ತು. ಈ   ಪ್ರಕ್ರಿಯೆಯಲ್ಲಿ  ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್‌ ಅಧ್ಯಕ್ಷರು, ಸದಸ್ಯರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಒಳಸಂಚು ನಡೆಸಿದ್ದರು ಎಂದು  ಸಿಐಡಿ ತನಿಖಾ ತಂಡವು ದಾಖಲೆಗಳ ಸಮೇತ ರುಜುವಾತುಪಡಿಸಿರುವುದು ಗೊತ್ತಾಗಿದೆ.

 

ವಕ್ಫ್‌ ಭೂಮಿ ಕಬಳಿಕೆಗೆ ಸಂಬಂಧಿಸಿದಂತೆ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಅಂತಿಮ ವರದಿಯೂ ಸಹ  ಉಪ ಲೋಕಾಯುಕ್ತ ನ್ಯಾಯಮೂರ್ತಿ ಎನ್‌ ಆನಂದ್‌ ಅವರು ಸಲ್ಲಿಸಿರುವ ತನಿಖಾ ವರದಿಯಲ್ಲಿ  ಒಳಗೊಂಡಿದೆ.  ನಬೀಷಾ ದರ್ಗಾದ ಜಮೀನು ಪರಭಾರೆ ಆಗಿರುವುದರ ಕುರಿತು ಸಿಐಡಿ ತನಿಖಾಧಿಕಾರಿಗಳು  ವಿಸ್ತೃತವಾಗಿ ದಾಖಲಿಸಿದ್ದಾರೆ.

 

ಖಾಸಗಿ ವ್ಯಕ್ತಿ  ಭವರಿಲಾಲ್‌ರ ಕಾನೂನುಬದ್ಧ ವಂಶಸ್ಥರಿಂದ ಚೆಕ್‌ ಮೂಲಕ 1 ಕೋಟಿ  ಪಡೆದುಕೊಂಡಿದ್ದರು.  ಇದರಿಂದ ಬಹುಕೋಟಿ ರುಪಾಯಿ ಬೆಲೆಬಾಳುವ ಬಡಾ ಮಕಾನ್‌ ಆಸ್ತಿ ಕೇವಲ ಒಂದು ಕೋಟಿಗೆ ಖಾಸಗಿ ವ್ಯಕ್ತಿಗೆ ಪರಭಾರೆಯಾಗಿತ್ತು.  ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಧ್ಯಕ್ಷರು,  ಸದಸ್ಯರು, ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿದ್ದ ಐಎಎಸ್‌ ಅಧಿಕಾರಿಯೊಬ್ಬರು ಪರಭಾರೆಗೆ ಹೇಗೆಲ್ಲಾ  ಅವಕಾಶ ಕಲ್ಪಿಸಿದ್ದರು ಎಂಬ ಸಂಗತಿಯನ್ನು ಸಿಐಡಿ ತನಿಖಾಧಿಕಾರಿಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 

 

 

2 ಎಕರೆ 3 ಗುಂಟೆ ಜಮೀನು, ನಬೀಷಾ ದರ್ಗಾಕ್ಕೆ ಸೇರಿದೆ ಎಂದು ಹಲವಾರು  ದಾಖಲೆಗಳು ಇದ್ದರೂ ಸಹ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ಕಾನೂನು ತಜ್ಞರ ಸಲಹೆ ಪಡೆಯಲಿಲ್ಲ. ಮತ್ತು ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡದೆಯೇ ವಿವೇಚನಾ ರಹಿತವಾಗಿ ಕ್ರಮ ಕೈಗೊಂಡಿದ್ದರು.

 

ಹೀಗಾಗಿ ಬೆಲೆಬಾಳುವ 2 ಎಕರೆ 3 ಗುಂಟೆ ಜಮೀನು, ಖಾಸಗಿ ವ್ಯಕ್ತಿಯಾಗಿರುವ ಭವರಿಲಾಲ್‌ ಕುಟುಂಬದವರಿಗೆ ಪರಭಾರೆಯಾಗಿದೆ. ಸಿಐಡಿಯು ಸರ್ಕಾರಕ್ಕೆ ಈ ವರದಿಯನ್ನು ನೀಡುವ ಹೊತ್ತಿನಲ್ಲಿ ಇದರ ಬೆಲೆಯು 20 ಕೋಟಿಗೂ ಹೆಚ್ಚು ಇತ್ತು ಎಂದು ಉಲ್ಲೇಖಿಸಿದೆ.  ಆದರೆ ಇದೇ ಜಮೀನಿನ ಪ್ರಸಕ್ತ ಮಾರುಕಟ್ಟೆ ಬೆಲೆಯಲ್ಲಿ ಅಂದಾಜು 300ರಿಂದ 350 ಕೋಟಿ ರು ಹೆಚ್ಚು ಇದೆ ಎಂದು ಗೊತ್ತಾಗಿದೆ.

 

ಈ ಕೃತ್ಯದಲ್ಲಿ ಕೆಎಎಸ್‌ ಅಧಿಕಾರಿ ಎಂ ಎ ಖಾಲಿದ್‌, ವಕ್ಫ್‌ಬೋರ್ಡ್‌ನ ಅಧ್ಯಕ್ಷರಾಗಿದ್ದ  ಖಾಲಿದ್‌ ಅಹಮದ್‌, ವಕ್ಫ್‌ ಬೋರ್ಡ್‌ನ ಸದಸ್ಯ ಎಂ ಎಂ ಹಿಂಡಸಗೇರಿ, ಕೆ ಎಂ ಇಬ್ರಾಹಿಂ, ಎಸ್‌ ಎಂ ಹೆಚ್‌ ಜಾಗೀರ್‍‌ದಾರ್‍‌, ಸೈಯದ್‌ ಜಯೀಂ ರಜಾ, ಸೈಯದ್‌ ಮುದೀರ್‍‌ ಆಗಾ, ಆರ್‍‌ ಅಬ್ದುಲ್‌ ರಿಯಾಜ್‌ ಖಾನ್‌, ಐಎಎಸ್‌ ಅಧಿಕಾರಿಯಾದ ಸೈಯದ್‌ ಜಮೀರ್‍‌ ಪಾಷ, ಸೈಯದ್‌ ಸದಾಕತ್‌ ಪಿರಾನ್‌ ಎಲ್ಲರೂ ಹೊಣೆಗಾರರಾಗಿದ್ದಾರೆ ಎಂದು ಸಿಐಡಿ ತನಿಖಾ ವರದಿಯಲ್ಲಿ ಗುರುತಿಸಿರುವುದು ತಿಳಿದು ಬಂದಿದೆ.

 

ಸರ್ಕಾರದಿಂದಲೇ ದೂರು 

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯೇ ನೇರವಾಗಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ 2009ರಲ್ಲೇ   ದೂರು ಸಲ್ಲಿಸಿದ್ದರು. ಈ ಅವಧಿಯಲ್ಲಿ ಬಿಜೆಪಿ ಸರ್ಕಾರವಿತ್ತು. ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು.  ಈ ದೂರಿನಲ್ಲಿ 2 ಎಕರೆ 3 ಗುಂಟೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನೂ ಇಲಾಖೆಯ ಅಧೀನ ಕಾರ್ಯದರ್ಶಿಯು  ನೀಡಿದ್ದರು.

 

 

‘ಸರ್ಕಾರಿ ಅಧಿಕಾರಿಗಳಾದ ವಕ್ಫ್‌ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾನೂನು ಸಲಹೆಗಾರರೂ ಸಹ ಈ ಕೃತ್ಯದಲ್ಲಿ  ಭಾಗಿಯಾಗಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು,’  ಎಂದು ಇಲಾಖೆಯ ಅಧೀನ ಕಾರ್ಯದರ್ಶಿಯು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (ಮೊ.ಸಂ 265/09, ಕಲಂ 409, 120(ಬಿ) ಐಪಿಸಿ)  ದಾಖಲಿಸಿದ್ದರು. ಹಾಗೆಯೇ ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ 2012ರ ಮಾರ್ಚ್‌ 7ರಂದು  ವಹಿಸಲಾಗಿತ್ತು.

 

ದಾಖಲೆಗಳಲ್ಲೇನಿದೆ?

 

ಹಿಂದಿನ ಅಣ್ಣಿಪುರ  (ಹಾಲಿ ಲಾಲ್‌ಬಾಗ್‌ ಪ್ರದೇಶ)  ಗ್ರಾಮದ  ಸರ್ವೆ ನಂಬರ್‍‌ 18ರಲ್ಲಿ ಮೂಲ 5 ಎಕರೆ 5 ಗುಂಟೆ ಜಮೀನಿದೆ. ಅದರಲ್ಲಿ 10 ಗುಂಟೆ ಸರ್ಕಾರದ ಖರಾಬ್ ಜಮೀನಾಗಿದೆ. ಉಳಿದ 4 ಎಕರೆ 36 ಗುಂಟೆ ಜಮೀನು ನಬೀಷಾ ದರ್ಗಾಕ್ಕೆ ಸೇರಿದ್ದಾಗಿದೆ. ಈ ಜಮೀನಿನ ಪೈಕಿ 2 ಎಕರೆ 33 ಗುಂಟೆ ಜಮೀನನ್ನು ತೋಟಗಾರಿಕೆ ಇಲಾಖೆಯುವರು ಅನಧಿಕೃತವಾಗಿ ಆಕ್ರಮಿಸಿಕೊಂಡು ಅದರಲ್ಲಿ ಬಟಾನಿಕಲ್‌ ಗಾರ್ಡನ್‌, ಖಾಯಂ ಹಾಪ್‌ಕಾಮ್ಸ್‌ ಕಚೇರಿ ಕಟ್ಟಡಗಳನ್ನು ಹೊಂದಿವೆ.  2 ಎಕರೆ 3 ಗುಂಟೆ ಜಮೀನು ನಬೀಷಾ ದರ್ಗಾಕ್ಕೆ ಸೇರಿರುತ್ತದೆ ಎಂದು 1965ರಲ್ಲಿ ಮೈಸೂರು ಸ್ಟೇಟ್‌ ಬೋರ್ಡ್‌ ಆಫ್‌ ವಕ್ಫ್‌ ಬೆಂಗಳೂರು ಇದರ ದಾಖಲಾತಿ ಪ್ರಕಾರ ಜಮೀನು ನಬೀಷಾ ದರ್ಗಾಕ್ಕೆ ಸೇರಿರುತ್ತದೆ ಎಂದು ದಾಖಲೆಗಳಲ್ಲಿ ಸ್ಪಷ್ಟವಾಗಿ  ಹೇಳಲಾಗಿದೆ.

 

ಅಲ್ಲದೇ  ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಲ್ಲಿ 2 ಎಕರೆ 3 ಗುಂಟೆ ಜಮೀನು ಹಜರತ್‌ ಅತಾವುಲ್ಲಾ ಷಾ ಮತ್ತು ನಬೀಷಾ ದರ್ಗಾ (ಬಡಾ ಮಕಾನ್‌)ಗೆ ಸೇರಿದ್ದಾಗಿರುತ್ತದೆ ಎಂದು ಹೇಳಿತ್ತು. ಹಾಗೆಯೇ  1972-73ರ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್‍‌ ಕಚೇರಿಯಲ್ಲಿನ ಹಕ್ಕು ದಾಖಲಾತಿಗಳ ಪ್ರಕಾರವೂ ಸಹ 2 ಎಕರೆ 3 ಗುಂಟೆ ಜಮೀನು ನಬೀಷಾ ದರ್ಗಾಕ್ಕೆ ಸೇರಿದೆ ಎಂದು ಹೇಳಿತ್ತು.  ಬೆಂಗಳೂರು ಎಂಡೋಮೆಂಟ್‌ ದಾಖಲಾತಿಯಲ್ಲಿಯೂ ಸಹ ನಬೀಷಾ ದರ್ಗಾಕ್ಕೆ ಸೇರಿದ ಜಮೀನು ಎಂದು ನಮೂದಾಗಿತ್ತು.  ಕರ್ನಾಟಕ ರಾಜ್ಯ ಮುಜುರಾಯಿ ಇಲಾಖೆಯೂ ಸಹ ವಕ್ಫ್‌ ಮಂಡಳಿಗೆ ವಹಿಸಿಕೊಟ್ಟ ಆಸ್ತಿ ಪಟ್ಟಿಯಲ್ಲಿಯೂ ಸಹ ಅಣ್ಣೀಪುರ ಗ್ರಾಮ ಸರ್ವೆ ನಂಬರ್‍‌ 18ರಲ್ಲಿನ 2 ಎಕರೆ 3 ಗುಂಟೆ ಜಮೀನು ನಬೀಷಾ ದರ್ಗಾಕ್ಕೆ ಸೇರಿದೆ ಎಂದು ಹೇಳಿತ್ತು.

 

ಅದೇ ರೀತಿ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯು 1985ರ ಜೂನ್‌ 22ರಂದು ಹೊರಡಿಸಿದ್ದ ಅಧಿಸೂಚನೆ ಪ್ರಕಾರ ನಿಖರವಾಗಿ ಅಣ್ಣೀಪುರ ಸರ್ವೆ ನಂಬರ್‍‌ 18ರಲ್ಲಿ 2 ಎಕರೆ 3 ಗುಂಟೆ ಜಮೀನು ದೇವದಾಯ ಇನಾಮು ನಬೀಷಾ ದರ್ಗಾಕ್ಕೆ ಸೇರಿದ್ದೆಂದು ನಮೂದಿಸಿದೆ. ಕ್ವಿಟ್‌ರೆಂಟ್‌ ರಿಜಿಸ್ಟರ್‍‌ನಲ್ಲಿ ಮೈಸೂರು ರೆವಿನ್ಯೂ ಅಪಿಲೇಟ್‌ ಟ್ರಿಬ್ಯೂನಲ್‌ ಅಂದಿನ ಮಹಾರಾಜರು ಅತಾವುಲ್ಲಾ ಷಾ ದರ್ಗಾಕ್ಕೆ ಇನಾಮ್‌ ಆಗಿ ಕೊಟ್ಟಿರುವುದಾಗಿ ಎಲ್ಲಾ ದಾಖಲಾತಿಗಳಿದ್ದವು.

 

‘ಆದರೂ ಸಹ ಕರ್ನಾಟಕ ವಕ್ಫ್‌ ಮಂಡಳಿಯ ಅಧ್ಯಕ್ಷರು ಹಾಗೂ ಸಭೆಯಲ್ಲಿ ಹಾಜರಿದ್ದ ಸದಸ್ಯರು ಹೆಚ್ಚಿನ ಕಾನೂನು ತಜ್ಞರ ಸಲಹೆ ಪಡೆಯದೇ ಮತ್ತು ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡದೇ ವಿವೇಚನರಹಿತವಾಗಿ ಕ್ರಮ ಕೈಗೊಂಡ ಕಾರಣ ಬೆಲೆ ಬಾಳುವ 2 ಎಕರೆ 3 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿ ಭವರಿಲಾಲ್‌ ಕುಟುಂಬದವರಿಗೆ ಪರಭಾರೆಯಾಗಿರುತ್ತದೆ,’ ಎಂದು ಸಿಐಡಿ ತನಿಖಾ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಸಿಐಡಿ  ತನಿಖೆಯ ಸಾರಾಂಶ

 

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಣ್ಣೀಪುರ ಗ್ರಾಮ ಸರ್ವೆ ನಂಬರ್‍‌ 18ರಲ್ಲಿನ ಆಸ್ತಿ 2 ಎಕರೆ 3 ಗುಂಟೆ ಜಮೀನು ಹರಜತ್ ಅತಾವುಲ್ಲಾ ಷಾ ಮತ್ತು ಹರಜತ್‌ ನಬೀಷಾ ದರ್ಗಾಗೆ ಸೇರಿದೆ. ಚೆಲಿ ಸಾಹೇಬ್‌ ಅವರು ಬಡಾಮಕಾನ್‌ನ ಸಜ್ಜಾದೇ ಆಗಿದ್ದಾರೆ. ಅತಾವುಲ್ಲಾ ಷಾ ದರ್ಗಾಕ್ಕೆ ಇನಾಂ ಆಗಿ 1812ರಲ್ಲಿ ಅಂದಿನ ಮೈಸೂರು ಮಹಾರಾಜರು ನೀರೂಪದ ಮುಖೇನ ಎಂದು ನಮೂದಾಗಿದೆ. ಆದರೆ ಈ ಸಂಬಂಧ ಇನಾಂ ಪತ್ರವಾಗಲೀ, ಮಹಾರಾಜರ ನೀರೂಪವಾಗಲೀ ಲಭ್ಯವಾಗಿರುವುದಿಲ್ಲ ಎಂದು ತನಿಖೆಯ ಸಾರಾಂಶದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ವಿವಿಧ ದಾಖಲೆಗಳಿಂದ ಅಣ್ಣೀಪುರ ಗ್ರಾಮದ ಸರ್ವೆ ನಂಬರ್ 18ರಲ್ಲಿನ 2 ಎಕರೆ 3 ಗುಂಟೆ ಆಸ್ತಿ ಹಜರತ್‌ ಅತಾವುಲ್ಲಾ ಷಾ ಮತ್ತು ಹಜರತ್‌ ನಬೀಷಾ ದರ್ಗಾ (ಬಡಾ ಮಕಾನ್‌)ಗೆ ನಿಸ್ಸಂದೇಹಾವಾಗಿ ಸೇರಿದೆ ಎಂಬ ಅಂಶ ಸಾಬೀತಾಗಿದೆ. ಕರ್ನಾಟಕ ವಕ್ಫ್‌ ಬೋರ್ಡ್‌ನ ಸಂಸ್ಥೆಯಾದ ಬಡಾಮಕಾನ್‌ನ ಆಸ್ತಿಯನ್ನು ರಕ್ಷಿಸುವುದು ವಕ್ಫ್‌ಬೋರ್ಡ್‌ನ ಎಲ್ಲಾ ಸದಸ್ಯರ ಮತ್ತು ಅಧಿಕಾರಿಗಳ ಕಾನೂನುಬದ್ಧ ಕರ್ತವ್ಯವಾಗಿರುತ್ತದೆ  ಎಂದು ವಿವರಿಸಿರುವುದು ಗೊತ್ತಾಗಿದೆ.

 

ಪ್ರತಿವಾದಿಯಾಗದಿದ್ದರೂ ಸೇರ್ಪಡೆ ಅರ್ಜಿ ಸಲ್ಲಿಸಿದ್ದೇಕೆ?

 

‘ಆದರೆ ಕರ್ನಾಟಕ ವಕ್ಫ್‌ ಬೋರ್ಡ್‌ನ ಈ ಅಸ್ತಿಯನ್ನು ರಕ್ಷಿಸುವಲ್ಲಿ ವಿಫಲವಾಗಿತ್ತು.  ಖಾಸಗಿ ವ್ಯಕ್ತಿಯಾದ ಭವರಿಲಾಲ್‌ರ ಕಾನೂನುಬದ್ಧ ವಂಶಸ್ಥರೊಡನೆ ಉಚ್ಛ ನ್ಯಾಯಾಲಯದಲ್ಲಿ ರಿಟ್‌ (ಅರ್ಜಿ ಸಂಖ್ಯೆ 18272/05, 24014/05) ರಲ್ಲಿ ಪಿಸ್ತಾಬಾಯಿ ಮತ್ತು ಇತರರು ಹಾಕಿದ್ದ ದಾವೆಯಲ್ಲಿ ಕರ್ನಾಟಕ ವಕ್ಫ್‌ ಬೋರ್ಡ್‌ನವರು ತಮ್ಮನ್ನು ಪ್ರತಿವಾದಿಯನ್ನಾಗಿ ಮಾಡಿರಲಿಲ್ಲ. ಆದರೂ  ಸಹ ಈ ರಿಟ್‌ ಅರ್ಜಿಗೆ  ಬೋರ್ಡ್‌ನವರು ಸೇರ್ಪಡೆ ಅರ್ಜಿ ಸಲ್ಲಿಸಿದ್ದರು.

 

 

ಈ ಪ್ರಕರಣದಲ್ಲಿ ಪಾರ್ಟಿಯಾಗಿ ಜಂಟಿ ರಾಜೀ ಅರ್ಜಿ ಸಲ್ಲಿಸಿದ್ದರು.  ಬಡಾಮಕಾನ್‌ ಆಸ್ತಿಯಾದ ಅಣ್ಣೀಪುರ ಗ್ರಾಮದ ಸರ್ವೆ ನಂಬರ್‍‌ 18ರಲ್ಲಿನ 2 ಎಕರೆ 3 ಗುಂಟೆ ಜಮೀನಿನ ಮೇಲೆ ವಕ್ಫ್‌ ಬೋರ್ಡ್‌ಗೆ ಯಾವುದೇ ಹಕ್ಕು ಒಡೆತನ ಮತ್ತು ಹಿತಾಸಕ್ತಿ ಇಲ್ಲವೆಂದು ರಾಜೀ ಅರ್ಜಿಗಳಲ್ಲಿ ಬರೆದುಕೊಂಡಿದ್ದರು,’ ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

 

 

 

ಈ ಜಂಟಿ ಮೆಮೋವನ್ನು ಉಚ್ಛನ್ಯಾಯಾಲಯವು  ರಿಟ್‌ ಅರ್ಜಿಗಳಲ್ಲಿ ಸ್ವೀಕರಿಸಿತ್ತು. ತನ್ನ ಅಂತಿಮ ಆದೇಶವನ್ನು ರಾಜೀ ಅರ್ಜಿ ಅನ್ವಯ ನೀಡಿತ್ತು. ಈ ಸಂಬಂಧ ಕರ್ನಾಟಕ ವಕ್ಫ್‌ ಬೋರ್ಡ್‌ನವರು ತಮ್ಮ ಸಂಸ್ಥೆಯಾದ ಬಡಾ ಮಕಾನ್‌ಗೆ ಒಂದು ಕೋಟಿ ರುಪಾಯಿ ಅನುದಾನವನ್ನು  ಖಾಸಗಿ ವ್ಯಕ್ತಿ  ಭವರಿಲಾಲ್‌ರ ಕಾನೂನುಬದ್ಧ ವಂಶಸ್ಥರಿಂದ ಚೆಕ್‌ ಮೂಲಕ ಪಡೆದುಕೊಂಡಿರುವುದನ್ನು ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ.

 

ಚೆಕ್‌ ಮೂಲಕ 1 ಕೋಟಿ 

 

‘ಇದರಿಂದ ಬಹುಕೋಟಿ ರುಪಾಯಿ ಬೆಲೆಬಾಳುವ ಬಡಾ ಮಕಾನ್‌ ಆಸ್ತಿ ಕೇವಲ ಒಂದು ಕೋಟಿಗೆ ಖಾಸಗಿ ವ್ಯಕ್ತಿಗೆ ಪರಭಾರೆಯಾಗಲು ಅವಕಾಶ ಕಲ್ಪಿಸಿರುತ್ತಾರೆ. ಒಂದು ಕೋಟಿ ರುಪಾಯಿಯನ್ನು ವಕ್ಫ್‌ ಬೋರ್ಡ್‌ನ ಸಂಸ್ಥೆಯಾದ ಬಡಾಮಕಾನ್‌ಗೆ ಅಧಿಕೃತವಾಗಿ ಚೆಕ್‌ ಮೂಲಕ ನೀಡಿದ್ದು, ಇದು ವಕ್ಫ್‌ ಬೋರ್ಡ್‌ನವರೇ ಸದರಿ ಅಸ್ತಿಗೆ ಮಾಲೀಕರೆಂದು ಭವರಿಲಾಲ್‌ನ ಕಾನೂನುಬದ್ಧ ವಂಶಸ್ಥರು ಎಂದು ಒಪ್ಪಿಕೊಂಡಂತೆ ಆಗಿರುತ್ತದೆ,’ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್‌ನ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಬೋರ್ಡ್‌ನ ಆಸ್ತಿಯನ್ನು ರಕ್ಷಿಸಬೇಕಾಗಿತ್ತು.  ಆದರೆ ವಕ್ಫ್‌ಬೋರ್ಡ್‌ಗೆ ಸಂಬಂಧಪಟ್ಟ ಆಸ್ತಿ ರಕ್ಷಿಸದೇ ಕೃತ್ರಿಮವಾಗಿ ನಡೆದುಕೊಂಡು ಬೋರ್ಡ್‌ನ ನಿಯಮ, ವಿಧಿ, ವಿದಾನ ಹಾಗೂ ಬೈಲಾಗಳ ಉಲ್ಲಂಘನೆ ಮಾಡಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಅಂದಿನ ಸಿಇಓ ಎಂ ಎ ಖಾಲಿದ್‌ ಅವರು ವಕ್ಫ್‌ ಬೋರ್ಡ್‌ನ ಸಿಇಒ ಆಗಿ ಬರುವ ಮುಂಚೆ ಅದೇ ಬಡಾಮಕಾನ್‌ನ ಆಡಳಿತಾಧಿಕಾರಿಯಾಗಿದ್ದರು.  2006ರ ಅಕ್ಟೋಬರ್‍‌ 25ರಂದು ಮೊದಲ ಬಾರಿಗೆ ಅಣ್ಣೀಪುರ ಗ್ರಾಮ ಸರ್ವೆ ನಂಬರ್‍‌ 18ರ 2 ಎಕರೆ 3 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಯೊಡನೆ ರಾಜಿ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಪ್ರಥಮ ಬಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.   2006ರ ಡಿಸೆಂಬರ್‍‌ 2ರಂದು ನಡೆದ ಬೋರ್ಡ್‌ನ 8ನೇ ಸಭೆಯಲ್ಲಿ ಚರ್ಚೆ ನಡೆದಿತ್ತು. ನಂತರ  ಆ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

 

ತಿರಸ್ಕೃತವಾಗಿದ್ದ ಪ್ರಸ್ತಾವನೆ ಮರು ಮಂಡಿಸಿದ್ದ ಸಿಇಓ

 

ಬಡಾಮಕಾನ್‌ನ ಆಡಳಿತಾಧಿಕಾರಿಯಾಗಿದ್ದ   ಎಂ ಎ ಖಾಲಿದ್‌ ಅವರೇ ನಂತರದ ದಿನಗಳಲ್ಲಿ  ಕರ್ನಾಟಕ ವಕ್ಫ್‌ ಬೋರ್ಡ್ನಗೆ ಸಿಇಓ ಆಗಿ ನೇಮಕವಾಗಿದ್ದರು.   ಪುನಃ ಇದೇ ಜಮೀನು ವಿಷಯವಾಗಿ ಮುಂದುವರೆದಿದ್ದರು. ಬಡಾಮಕಾನ್‌ನ ಎಸ್ಟೇಟ್‌ ಅಫೀಸರ್‍‌  ಅಬ್ದುಲ್‌  ರಹೀಂ ಅವರ ಕಡೆಯಿಂದ 2ನೇ ಬಾರಿಗೆ ಆಂಗ್ಲ ಭಾಷೆಯಲ್ಲಿ ಪ್ರಸ್ತಾವನೆಯನ್ನು ಸಿಇಓ ಅವರೇ ಬರೆಯಿಸಿದ್ದರು. ಮತ್ತು  ಅವರಿಗೆ ಅದನ್ನು ತಿಳಿಸದೇ ಸತ್ಯವನ್ನು ಮರೆ ಮಾಚಿ ರಾಜಿ ಜಾಯಿಂಟ್‌ ಮೆಮೋಗೆ ಸಹಿ ಪಡೆದುಕೊಂಡಿದ್ದರು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

 

2007ರ ನವೆಂಬರ್‍‌ 15ರಂದು ನಡೆದ ವಕ್ಫ್‌ ಬೋರ್ಡ್‌ನ 14ನೇ ಸಭೆಯ ಮುಂದೆ ಮಂಡಿಸಿ ಅದನ್ನು ಅಂಗೀಕರಿಸಲು ಕಾರಣಕರ್ತರಾಗಿದ್ದರು. ಇದರಿಂದ ಮೇಲ್ನೋಟಕ್ಕೆ ಸಿಇಒ ಎಂ ಎ ಖಾಲಿದ್ ಅವರು ಎಡವಿರುವುದು ಕಂಡುಬರುತ್ತದೆ. ಇದರಿಂದ ಸಿಇಓ ಅವರು  ಮೊದಲನೇ ಸಲದ ಪ್ರಸ್ತಾವನೆ ತಿರಸ್ಕೃತಗೊಂಡರೂ ಸಹ ತಾವೇ 2ನೇ ಸಲ ಸಿಇಓ ಆಗಿ ಬಂದು ಪ್ರಸ್ತಾವನೆ ಮುಂದುವರೆಸಿ ಬೋರ್ಡ್‌ನ ಮುಂದಿಟ್ಟು ಅಂಗೀಕರಿಸಲು ಯಶಸ್ವಿಯಾಗಿದ್ದರು ಎಂದು ತನಿಖೆಯ ಸಾರಾಂಶದಲ್ಲಿ ಹೇಳಲಾಗಿದೆ.

 

ಒಳಸಂಚು ರೂಪಿಸಿದ್ದರೇ ಅಧ್ಯಕ್ಷರು?

 

‘ಅಧ್ಯಕ್ಷರು ಮತ್ತು ಸದಸ್ಯರು ಒಳಸಂಚು ರೂಪಿಸಿರುವುದು ಕಂಡು ಬರುತ್ತದೆ. ಎಂ ಎ ಖಾಲಿದ್‌ ಅವರ ವಿರುದ್ಧ ಪ್ರಾದೇಶಿಕ ಆಯುಕ್ತರು ಕ್ರಮಬದ್ಧವಾಗಿ ಇಲಾಖೆ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆಯಲ್ಲಿ ಆಪಾದಿತ ಅಧಿಕಾರಿ ಎಂ ಎ ಖಾಲಿದ್‌ ಅವರು ವಕ್ಫ್‌ ಬೋರ್ಡ್‌ನ ಸಿಇಒ ಆಗಿ ಅಣ್ಣೀಪುರ ಗ್ರಾಮದ ಸರ್ವೆ ನಂಬರ್‍‌ 18ರಲ್ಲಿನ 2 ಎಕರೆ 3 ಗುಂಟೆ ಜಮೀನಿನ ಬಗ್ಗೆ  ಕೈಗೊಂಡ ಕ್ರಮದ ತಪ್ಪೆಂದು  ರುಜುವಾತು ಆಗಿರುತ್ತದೆ,’ ಎಂದು  ವರದಿಯಲ್ಲಿ ಹೇಳಿರುವ ಸಿಐಡಿ ತನಿಖಾಧಿಕಾರಿಗಳು ಈ   ಬಗ್ಗೆ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯನ್ನು ಮುಂದಿರಿಸಿರುವುದು ತಿಳಿದು ಬಂದಿದೆ.

 

ಅದೇ ರೀತಿ 14ನೇ ಬೋರ್ಡ್‌ ಮೀಟಿಂಗ್‌ನಲ್ಲಿ  ಹಾಜರಿದ್ದ ಬೋರ್ಡ್‌ನ ಅಧ್ಯಕ್ಷ ಖಾಲೀದ್‌ ಅಹ್ಮದ್‌ ಅವರು ಅಂಗೀಕರಿಸಲ್ಪಟ್ಟ ರಾಜಿ ಜಂಟಿ ಮೆಮೋ ಹಾಕುವ ವಿಷಯವನ್ನು ಹಾಜರಿದ್ದ ಎಲ್ಲಾ ಸದಸ್ಯರು ಮತ್ತು ಅಧ್ಯಕ್ಷರು ದೃಢೀಕರಿಸಿದ್ದರು.   ಇಲ್ಲಿ ಸರ್ಕಾರದ ನಾಮನಿರ್ದೇಶಿತ ಸದಸ್ಯರಾದ  ಐಎಎಸ್‌ ಜಮೀರ್‍‌ ಪಾಷ  ಹಾಗೂ ಸೈಯದ್‌  ಸದಾಕತ್‌ ಪಿರಾನ್‌ ಅವರು ಈ ನಿರ್ಣಾಯಕ ಸಭೆಯಲ್ಲಿ ಯಾವುದೇ ಪ್ರತಿರೋಧ ವ್ಯಕ್ತಪಡಿಸದೇ  ಬೋರ್ಡ್‌ ನಿರ್ಣಯಗಳಿಗೆ ಅವರು ಸಹಿ ಹಾಕಿ ರಾಜಿಗೆ ಕಾರಣಕರ್ತರಾಗಿರುತ್ತಾರೆ. 14ನೇ ಬೋರ್ಡ್‌ ಮೀಟಿಂಗ್‌ನಲ್ಲಿ ಕಾರಣಾಂತರದಿಂದ ಗೈರುಹಾಜರಾಗಿದ್ದ ಸದಸ್ಯ ಅಬ್ದುಲ್‌ ರಿಯಾಜ್‌ ಖಾನ್‌ ಮತ್ತು ಮುದೀರ್‍‌ ಆಗಾ ಅವರು 15ನೇ ಬೋರ್ಡ್‌ ಸಭೆಯಲ್ಲಿ ಹಾಜರಿದ್ದು ಹಿಂದಿನ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಅಂಗೀಕರಿಸಿ ಸಹಿ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ವರದಿಯಲ್ಲಿ ವಿವರಿಸಿದ್ದಾರೆ.

 

 

‘ಈ ರೀತಿ ಭವರಿಲಾಲ್‌ ಕಾನೂನುಬದ್ಧ ವಂಶಸ್ಥರಾದ ಪತ್ನಿ ಹಾಗೂ ಮಕ್ಕಳೊಡನೆ ವಕ್ಫ್‌ ಬೋರ್ಡ್‌ನ ಅಧಿಕಾರಿಗಳು, ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರೂ ಶಾಮೀಲಾಗಿರುವುದು ಮತ್ತು ಬೋರ್ಡ್‌ನವರನ್ನು ಪ್ರತಿವಾದಿಯನ್ನಾಗಿ ಮಾಡದೇ ಇದ್ದರೂ ಕರ್ನಾಟಕ ಉಚ್ಛ  ನ್ಯಾಯಾಲಯದ ರಿಟ್‌ ಅರ್ಜಿಯಲ್ಲಿ ತಾವೇ ಖುದ್ದು ನ್ಯಾಯಾಲಯದಲ್ಲಿ ಸೇರ್ಪಡೆ ಅರ್ಜಿ ಹಾಕಿಕೊಂಡಿದ್ದಾರೆ. ವಕ್ಫ್‌ ಬೋರ್ಡ್‌ನ ಆಸ್ತಿಯನ್ನು ತಮ್ಮದೆಂದು ಖಾಸಗಿ ವ್ಯಕ್ತಿಗಳು ಮೊಕದ್ದಮೆ ಹೂಡಿದ್ದರೂ ಬೋರ್ಡ್‌ನವರು ವಿರೋಧ ವ್ಯಕ್ತಪಡಿಸದೇ ಕನಿಷ್ಠ ಬೆಲೆಯಾದ ಒಂದು ಕೋಟಿ ರುಪಾಯಿಗೆ ಬಡಾಮಕಾನ್‌ ಆಸ್ತಿಗೆ ರಾಜಿ ಮಾಡಿಕೊಂಡಿದ್ದಾರೆ,’ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಪಡೆದಿದ್ದು 1 ಕೋಟಿಗೆ, ಕ್ರಯ ಮಾಡಿಕೊಟ್ಟಿದ್ದು 15.21 ಕೋಟಿಗೆ

 

ಭವರಿಲಾಲ್‌ ಅವರ ವಂಶಸ್ಥರಾದ ಪಿಸ್ತಾಬಾಯಿ ಹಾಗೂ ಮಕ್ಕಳು ಸುಧೀರ್‍‌ ಶೆಟ್ಟಿ ಎಂಬುವರಿಗೆ ಈ ಜಮೀನನ್ನು ಮಾರಾಟ ಮಾಡಲು ಸಾಮಾನ್ಯ ಮೊಕ್ತೆಯಾರ್‍‌ ಪತ್ರವನ್ನು ಮಾಡಿಕೊಟ್ಟಿದ್ದರು.  ನಂತರದ ದಿನಗಳಲ್ಲಿ ಇದೇ ಚರೀಷ್ಮಾ ಬಿಲ್ಡರ್ಸ್‌ನ ಸುಧೀರ್‍‌ ಶೆಟ್ಟಿ ಎಂಬುವರು, ಚರೀಷ್ಮಾ ಬಿಲ್ಡರ್ಸ್‌ನ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಮಿತುಲ್ ಸುಧೀರ್‍‌ ಶೆಟ್ಟಿ ಅವರಿಗೆ 15.21 ಕೋಟಿಗೆ ಶುದ್ಧ ಕ್ರಯಪತ್ರ ಮಾಡಿಕೊಟ್ಟಿದ್ದರು.

 

 

 

ಇದರ  ಬೆಲೆ ಸರ್ಕಾರದ ಲೆಕ್ಕದಂತೆ  ಸುಮಾರು 15 ಕೋಟಿ ರುಪಾಯಿಗೂ ಹೆಚ್ಚಿದೆ.  ಆದರೆ ಈಗಿನ ಮಾರುಕಟ್ಟೆ ಬೆಲೆ 3-4 ಪಟ್ಟಿಗಿಂತ ಮಿಗಿಲಾಗಿದೆ. ಇದರಿಂದ ಬೋರ್ಡ್‌ ಗೆ  ಅತೀ ಹೆಚ್ಚಿನ ನಷ್ಟ ಉಂಟಾಗಿದೆ. ಕರ್ನಾಟಕ ವಕ್ಫ್‌ ಬೋರ್ಡ್‌ನ ಅಧಿಕಾರಿಗಳು, ಅಧ್ಯಕ್ಷರು ಮತ್ತು ಎಲ್ಲಾ  ಸದಸ್ಯರು ಖಾಸಗಿ ವ್ಯಕ್ತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬೋರ್ಡ್‌ಗೆ ನಷ್ಟ ಉಂಟು ಮಾಡಿದ್ದಾರೆ. ಇದರ ಬದಲು ನ್ಯಾಯಾಲಯದಲ್ಲಿ ಬೋರ್ಡ್‌ನವರು ಹೋರಾಟ ಮಾಡಿದ್ದರೇ ಈ ಆಸ್ತಿಯನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದು ಸಿಐಡಿ ತನಿಖಾಧಿಕಾರಿಗಳು 2013ರಲ್ಲಿ ಸಲ್ಲಿಸಿದ್ದ  ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

 

ಈ ಕೃತ್ಯದಲ್ಲಿ ಕೆಎಎಸ್‌ ಅಧಿಕಾರಿ ಎಂ ಎ ಖಾಲಿದ್‌, ವಕ್ಫ್‌ಬೋರ್ಡ್‌ನ ಅಧ್ಯಕ್ಷ ಖಾಲಿದ್‌ ಅಹಮದ್‌, ವಕ್ಫ್‌ ಬೋರ್ಡ್‌ನ ಸದಸ್ಯ ಎಂ ಎಂ ಹಿಂಡಸಗೇರಿ, ಕೆ ಎಂ ಇಬ್ರಾಹಿಂ, ಎಸ್‌ ಎಂ ಹೆಚ್‌ ಜಾಗೀರ್‍‌ದಾರ್‍‌, ಸೈಯದ್‌ ಜಯೀಂ ರಜಾ, ಸೈಯದ್‌ ಮುದೀರ್‍‌ ಆಗಾ, ಆರ್‍‌ ಅಬ್ದುಲ್‌ ರಿಯಾಜ್‌ ಖಾನ್‌, ಐಎಎಸ್‌ ಅಧಿಕಾರಿಯಾದ ಸೈಯದ್‌ ಜಮೀರ್‍‌ ಪಾಷ, ಸೈಯದ್‌ ಸದಾಕತ್‌ ಪಿರಾನ್‌ ಎಲ್ಲರೂ ಹೊಣೆಗಾರರಾಗಿದ್ದಾರೆ ಎಂದು ರುಜುವಾತು ಪಡಿಸಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts