ಬೆಂಗಳೂರು; ಹೆಚ್ಚು ಬೆಲೆ ಬಾಳಲಿರುವ ಅಣ್ಣಿಪುರದಲ್ಲಿನ 2 ಎಕರೆ 3 ಗುಂಟೆ ಆಸ್ತಿ ಮೇಲೆ ವಕ್ಫ್ ಮಂಡಳಿಗಿದ್ದ ಹಕ್ಕನ್ನು ಭವರಿಲಾಲ್ ವಂಶಸ್ಥರಾದ ಪಿಸ್ತಾಬಾಯಿ ಮತ್ತು ಮಕ್ಕಳ ಪರವಾಗಿ ಬಿಟ್ಟುಕೊಟ್ಟಿದ್ದ ಪ್ರಕರಣದಲ್ಲಿ 10 ಮಂದಿ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸುವ ಪ್ರಸ್ತಾವವನ್ನು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತಿರಸ್ಕರಿಸಿತ್ತು.
ಈ ಪ್ರಕರಣದ ಕುರಿತು ಹಲವಾರು ಸಾಕ್ಷ್ಯ ಪುರಾವೆ ಮತ್ತು ವಕ್ಫ್ ಅಸ್ತಿ ಎಂದು ಸಾಬೀತುಪಡಿಸುವ ಎಲ್ಲಾ ದಾಖಲೆಗಳನ್ನು ಕಲೆಹಾಕಿ ತನಿಖೆ ನಡೆಸಿದ್ದ ಸಿಐಡಿ ತನಿಖಾಧಿಕಾರಿಗಳು, ಇದರಲ್ಲಿ ನಡೆದಿದೆ ಎನ್ನಲಾಗಿದ್ದ ಒಳಸಂಚು ಮತ್ತು ಭವರಿಲಾಲ್ ವಂಶಸ್ಥರಿಗೆ ಆಗಿರುವ ಅಕ್ರಮ ಲಾಭವನ್ನು ಸಾಬೀತುಪಡಿಸಿತ್ತು.
ಇದಕ್ಕೆ ಕಾರಣರಾಗಿದ್ದ ಆರೋಪಿತ ಮಾಜಿ ಸಚಿವ ಎ ಎಂ ಹಿಂಡಸಗೇರಿ, ಐಎಎಸ್ ಅಧಿಕಾರಿ ಸೈಯದ್ ಜಮೀರ್ ಪಾಷ ಮತ್ತು ವಕ್ಫ್ ಮಂಡಳಿ ಅಧ್ಯಕ್ಷ, ಸದಸ್ಯರ ವಿರುದ್ಧ ದೋಷಾರೋಪಣೆ ಪಟ್ಟಿಯೇ ಅಸಮರ್ಥನೀಯವಾಗಿದೆ ಎಂದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಿಲುವು ತಳೆದಿತ್ತು. ಸರ್ಕಾರದ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ವಕ್ಫ್ ಆಸ್ತಿ ದುರ್ಬಳಕೆ, ಅತಿಕ್ರಮಣ ಮತ್ತಿತರೆ ಆರೋಪಗಳ ಕುರಿತಾಗಿ ಸಮಗ್ರ ತನಿಖೆ ನಡೆಸಿದ್ದ ಉಪ ಲೋಕಾಯುಕ್ತ ಎನ್ ಆನಂದ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿಯೇ ಸಿಐಡಿ ತನಿಖಾಧಿಕಾರಿಗಳ ವರದಿ ಮತ್ತು ಸರ್ಕಾರವು ತಿರಸ್ಕರಿಸಿದ್ದ ಸಚಿವ ಸಂಪುಟದ ಅನುಮೋದನೆ ಟಿಪ್ಪಣಿಯಲ್ಲಿ ಈ ಎಲ್ಲಾ ಮಾಹಿತಿ, ವಿವರಗಳು ಒಳಗೊಂಡಿವೆ.
ಉಪ ಲೋಕಾಯುಕ್ತ ಎನ್ ಆನಂದ್ ಅವರು ಸಲ್ಲಿಸಿದ್ದ ತನಿಖಾ ವರದಿ ಮತ್ತು ದಾಖಲೆಗಳನ್ನೊಳಗೊಂಡ 27,000ಕ್ಕೂ ಹೆಚ್ಚು ಪುಟಗಳನ್ನು ‘ದಿ ಫೈಲ್’ ಆರ್ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಒಳ ಒಪ್ಪಂದ ಸಾಬೀತುಪಡಿಸಿದ್ದ ತನಿಖಾ ತಂಡ
‘ಸ್ವತ್ತಿನ ಸಂಬಂಧವಾಗಿ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಎಂ ಎ ಖಾಲಿದ್ (ಕೆಎಎಸ್ ಅಧಿಕಾರಿ), ಬೋರ್ಡ್ನ ಅಧ್ಯಕ್ಷ ಖಾಲೀದ್ ಅಹ್ಮದ್, ಸದಸ್ಯ ಎ ಎಂ ಹಿಂಡಸಗೇರಿ, ಕೆ ಎಂ ಇಬ್ರಾಹಿಂ, ಎಸ್ ಎಂ ಹೆಚ್ ಜಾಗೀರ್ದಾರ್, ಸೈಯದ್ ಜಯೀಂ ರಜಾ, ಸೈಯದ್ ಮುದೀರ್ ಆಗಾ, ಆರ್ ಅಬ್ದುಲ್ ರಿಯಾಜ್ ಖಾನ್, ಸೈಯದ್ ಜಮೀರ್ ಪಾಷ, ಸೈಯದ್ ಸದಾಕತ್ ಪಿರಾನ್ ಇವರೆಲ್ಲರೂ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸ್ವತ್ತನ್ನು ಕೇವಲ ಒಂದು ಕೋಟಿ ರುಪಾಯಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ,’ ಎಂದು ತನಿಖಾಧಿಕಾರಿಯು ಅಭಿಪ್ರಾಯಿಸಿರುವುದು ವರದಿಯಿಂದ ಗೊತ್ತಾಗಿದೆ.
ಅಕ್ರಮ ಲಾಭಕ್ಕೆ ಪುರಾವೆ ನೀಡಿದ್ದ ತನಿಖಾ ತಂಡ
ಅಲ್ಲದೆ ಭವರಿಲಾಲ್ ವಂಶಸ್ಥರಾದ ಪಿಸ್ತಾಬಾಯಿ ಹಾಗೂ ಮಕ್ಕಳು ಸುಧೀರ್ ಶೆಟ್ಟಿ ಎಂಬುವರಿಗೆ ಜಮೀನನ್ನು ಮಾರಾಟ ಮಾಡಲು ಸಾಮಾನ್ಯ ಮೊಕ್ತೆಯಾರ್ ಪತ್ರವನ್ನು ಮಾಡಿಕೊಟ್ಟಿದ್ದರು. ಇದರ ಅನ್ವಯ ಸುಧೀರ್ ಶೆಟ್ಟಿಯು ಚರೀಷ್ಮಾ ಬಿಲ್ಡರ್ಸ್ ನ ಮಿತುಲ ಸುಧೀರ ಶೆಟ್ಟಿಗೆ 15.21 ಕೋಟಿ ಗೆ ಶುದ್ಧ ಕ್ರಯ ಪತ್ರ ಮಾಡಿಕೊಟ್ಟಿದ್ದ. ವಕ್ಫ್ ಬೋರ್ಡ್ನ ಅಧಿಕಾರಿ ಮತ್ತು ಸದಸ್ಯರೆಲ್ಲರೂ ಭವರಿಲಾಲ್ನ ವಂಶಸ್ಥರಿಗೆ ಅಕ್ರಮ ಲಾಭ ಮಾಡಿಕೊಡಲು ಅನುವು ಮಾಡಿಕೊಟ್ಟಿದ್ದಾರೆ. ಮತ್ತು ಇದರಿಂದ ಸಂಸ್ಥೆಗೆ ಸಾಕಷ್ಟು ನಷ್ಟ ಉಂಟು ಮಾಡಿ ವಂಚಿಸಿದ್ದಾರೆ ಎಂದು ತನಿಖಾಧಿಕಾರಿಯು ವರದಿಯಲ್ಲಿ ವಿವರಿಸಿದ್ದರು.
‘ಈ ಎಲ್ಲಾ ಆರೋಪಿತರು ಭವರಿಲಾಲ್ ವಂಶಸ್ಥರಿಗೆ ಅಕ್ರಮ ಲಾಭ ಮಾಡಿಕೊಡುವ ಮತ್ತು ವಕ್ಫ್ ಬೋರ್ಡ್ಗೆ ನಷ್ಟ ಮಾಡಿ ಸಮಾಜಕ್ಕೆ ಮತ್ತು ವಕ್ಫ್ ಬೋರ್ಡ್ಗೆ ನಂಬಿಕೆ ದ್ರೋಹ ಎಸಗಿದ್ದಾರೆ. ಐಪಿಸಿ ಕಲಂ 409, 119, 120(ಬಿ) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿನ ಕಲಂ 13 (1) (ಸಿ)(ಡಿ) ಸ.ವಾ 13(2) ಅಡಿಯಲ್ಲಿ ದಂಡಿಸಬಹುದಾದ ಅಪರಾಧ ಎಸಗಿರುತ್ತಾರೆಂದು ತನಿಖೆಯಿಂದ ಕಂಡುಬಂದಿರುತ್ತದೆ,’ ಎಂದು ವರದಿಯಲ್ಲಿ ಅಭಿಪ್ರಾಯಿಸಿದ್ದರು.
ಹಾಗೆಯೇ ಸಿಆರ್ಪಿಸಿ ಕಲಂ 197 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಕಲಂ 19ರ ಅನ್ವಯ ಸಕ್ಷಮ ಪ್ರಾಧಿಕಾರ ಪೂರ್ವಾನುಮತಿ ಕೊಡಿಸಬೇಕು ಎಂದು ಸಿಐಡಿ ತನಿಖಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಆಧಾರಗಳಿಲ್ಲ, ಪ್ರಸ್ತಾವವೇ ಅಸಮರ್ಥನೀಯವೆಂದಿದ್ದ ಸರ್ಕಾರ
ಸಿಐಡಿ ತನಿಖಾಧಿಕಾರಿಗಳು ತನಿಖಾ ಕಾಲದಲ್ಲಿ ಸಮಗ್ರ ದಾಖಲೆಗಳು, ಸಾಕ್ಷ್ಯ ಪುರಾವೆಗಳನ್ನು ಸಂಗ್ರಹಿಸಿ ವರದಿ ನೀಡಿತ್ತು. ಆದರೆ ಸಿದ್ದರಾಮಯ್ಯ ಅವರ ಮೊದಲ ಅವಧಿಯ ಕಾಂಗ್ರೆಸ್ ಸರ್ಕಾರವು , ತನಿಖಾ ವರದಿಯಲ್ಲಿ ಸಾಕಷ್ಟು ಆಧಾರಗಳೇ ಇಲ್ಲವೆಂದು ಹೇಳಿತ್ತು. ಐಪಿಸಿ ಕಲಂ 409, 119, 120(ಬಿ) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿನ ಕಲಂ 13(1) (ಸಿ) (ಡಿ) ಸ.ವಾ 13(2) ಅಡಿಯಲ್ಲಿ ಅಭಿಯೋಜನೆಗೆ ಒಳಪಡಿಸುವ ಪ್ರಸ್ತಾವವೇ ಅಸಮರ್ಥನೀಯವಾಗಿದೆ ಎಂದು ಅಭಿಪ್ರಾಯಿಸಿತ್ತು.
ಹಾಗೆಯೇ ಇದೇ ಅಭಿಪ್ರಾಯದ ಕುರಿತು 2013ರ ಸೆ.20ರಂದು ನಡೆದಿದ್ದ ಸಚಿವ ಸಂಪುಟದಲ್ಲಿಯೂ ನಿರ್ಣಯಿಸಿತ್ತು. ತನಿಖಾಧಿಕಾರಿಯ ಮನವಿಯನ್ನು ತಿರಸ್ಕರಿಸಿತ್ತು.
ಸರ್ಕಾರವು ಅಭಿಯೋಜನೆ ಪ್ರಸ್ತಾವವನ್ನು ತಿರಸ್ಕರಿಸಿ ಹೊರಡಿಸಿದ್ದ ಆದೇಶದ ಹಿನ್ನೆಲೆಯಲ್ಲಿ ಸಿಐಡಿ ವಿಶೇಷ ವಿಚಾರಣೆ ವಿಭಾಗದ ಡಿವೈಎಸ್ಪಿ ಆರ್ ಬಿ ಬಸರಗಿ ಅವರು ನ್ಯಾಯಲಯಕ್ಕೆ ಪ್ರಕರಣವನ್ನು ಮುಕ್ತಾಯಗೊಳಿಸಲು ಅಂತಿಮ ವರದಿ ಸಲ್ಲಿಸಿದ್ದರು ಎಂಬುದು ವರದಿಯಿಂದ ಗೊತ್ತಾಗಿದೆ.
300 ಕೋಟಿ ಬೆಲೆಬಾಳುವ ಜಮೀನು, 1 ಕೋಟಿಗೆ ಪರಭಾರೆ; ವಕ್ಫ್ ಆಸ್ತಿ ದುರ್ಬಳಕೆಯ ಮತ್ತೊಂದು ಮುಖ ತೆರೆದಿಟ್ಟ ಸಿಐಡಿ
ನಬೀಷಾ ದರ್ಗಾಕ್ಕೆ ಸೇರಿದ್ದ 2 ಎಕರೆ 3 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗೆ ಕೇವಲ 1 ಕೋಟಿ ರು ಮೊತ್ತಕ್ಕೆ ಪರಭಾರೆ ಮಾಡಲಾಗಿದ್ದ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎ ಎಂ ಹಿಂಡಸಗೇರಿ ಅವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾಗಿದ್ದರು. ಇದೇ ಎ ಎಂ ಹಿಂಡಸಗೇರಿ ಅವರು ನಂತರದ ವರ್ಷಗಳಲ್ಲಿ ವಿಧಾನ ಪರಿಷತ್ಗೆ ಸದಸ್ಯರೂ ಆಗಿದ್ದರು. ಮತ್ತು ಈ ಪ್ರಕರಣದಲ್ಲಿ ದಸ್ತಗಿರಿಯಾಗಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದನ್ನು ಸ್ಮರಿಸಬಹುದು.