Tuesday | July 7, 2026 |

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದ ವಿದ್ಯುತ್ ಪರಿವರ್ತಕಗಳನ್ನು ನೇರವಾಗಿ ಖರೀದಿಸಲು ಕೆಟಿಪಿಪಿ ಕಾಯ್ದೆಯಡಿಯಲ್ಲಿ ವಿನಾಯಿತಿ ನೀಡಲು ನಿರ್ದೇಶನ ನೀಡಬೇಕು ಎಂದು ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ್ ಪಟ್ಟಣ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.

ಈ ಪತ್ರದ ಮೇಲೆಯೇ  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಆರ್ಥಿಕ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು  ಒಕ್ಕಣೆ ಹಾಕಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ ನೇರವಾಗಿ  ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ  ಮೂರ್ನಾಲ್ಕು ಬಾರಿ  ವಿದ್ಯುತ್‌ ಪರಿವರ್ತಕಗಳನ್ನು ನೇರವಾಗಿ  ಖರೀದಿಸಿರುವ ಬೆನ್ನಲ್ಲೇ ಇದೀಗ ಅಶೋಕ್ ಪಟ್ಟಣ್ ಅವರೂ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿ ಪರವಾಗಿ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಿದ್ದಾರ್ಥ ಹೊಸಮನಿ ಎಂಬುವರು ಅಶೋಕ್‌ ಎಂ ಪಟ್ಟಣ್‌ ಅವರಿಗೆ ವಿಳಾಸಿಸಿ ಬರೆದಿದ್ದ ಪತ್ರವನ್ನಾಧರಿಸಿ ಅಶೋಕ್‌ ಪಟ್ಟಣ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಸಿದ್ದಾರ್ಥ ಹೊಸಮನಿ ಎಂಬುವರು ಯಾರು, ಎಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಯಾವ ಮಾಹಿತಿಯೂ ಸದ್ಯಕ್ಕೆ ಲಭ್ಯವಿಲ್ಲ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ ಆರ್‍‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

ಅಶೋಕ್ ಪಟ್ಟಣ್ ಅವರ ಪತ್ರದಲ್ಲೇನಿದೆ?

ಸರ್ಕಾರಿ ಸ್ವಾಮ್ಯದ ವಿದ್ಯುತ್ ಪರಿವರ್ತಕ ತಯಾರಿಕ ಸಂಸ್ಥೆಯಾದ ಕೆ ಇ ಎಲ್ ಸಂಸ್ಥೆಯು ಸರ್ಕಾರದ ಅಂಗ ಸಂಸ್ಥೆಯಾಗಿದದು, ಅತ್ಯುತ್ತಮ ಗುಣಮಟ್ಟದ ಪರಿವರ್ತಕಗಳನ್ನು ಪೂರೈಸುತ್ತಾ ಬಂದಿರುತ್ತದೆ. ಅವರು ತಯಾರಿಸುವ ಪರಿವರ್ತಕಗಳ ಕುರಿತು ಈಗಾಗಲೇ ಬೆಸ್ಕಾಂ, ಹೆಸ್ಕಾಂ ಮತ್ತು ಮೆಸ್ಕಾಂ ವಿದ್ಯುತ್‌ ಸರಬರಾಜು ಕಂಪನಿಯ ಮನವಿಯ ಮೇರೆಗೆ ಇಂಧನ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಂದ ಹಣಕಾಸು ಇಲಾಖೆಗೆ ಶಿಫಾರಸ್ಸು (ಕಡತ ಸಂಖ್ಯೆ; ಎನರ್ಜಿ 800 ಇಇಬಿ 2025 ಕಂಪ್ಯೂಟರ್ ನಂಬರ್ 1949793) ಮಾಡಲಾಗಿದೆ ಎಂದು ಗಮನಸೆಳೆದಿರುವುದು ಪತ್ರದಿಂದ ಗೊತ್ತಾಗಿದೆ.

ಈ ಕಡತವು ಹಣಕಾಸು ಇಲಾಖೆಯಲ್ಲಿರುತ್ತದೆ. ಖಾಸಗಿ ಕಂಪನಿಗಳು ತಯಾರಿಸಿದ ಪರಿವರ್ತಕಗಳ ಬಗ್ಗೆ ಹಲವಾರು ತಕರಾರುಗಳು ಬಂದಿರುತ್ತವೆ. ಆದರೆ ಕೆ ಇ ಎಲ್‌ ಸಂಸ್ಥೆಯಿಂದ ತಯಾರಿಸಿ ಪೂರೈಸಿರುವ ಪರಿವರ್ತಕಗಳಲ್ಲಿ ಯಾವುದೇ ತಕರಾರು ಬಂದಿರುವುದಿಲ್ಲ. ಕಳೆದ ವರ್ಷವೂ ಸದರಿ ಕಂಪನಿಯಿಂದ ನೇರವಾಗಿ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ಕೆಟಿಪಿಪಿ ಕಾಯ್ದೆಯಡಿಯಲ್ಲಿ ಪರವಾನಗಿ ನೀಡಿರುತ್ತದೆ. ಇದೇ ಮಾದರಿಯಲ್ಲಿ ಈ ವರ್ಷವೂ ಸಹ ಪರಿವರ್ತಕಗಳನ್ನು ತಯಾರಿಸಲು ಸರ್ಕಾರದಿಂದ ವಿನಾಯಿತಿ ನೀಡಲು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಶೋಕ್ ಪಟ್ಟಣ್ ಅವರು ಮುಖ್ಯ ಕಾರ್ಯದರ್ಶಿಗಳನ್ನು ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

ಇದೇ ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ವಿನಾಯಿತಿ ನೀಡಬೇಕು ಎಂದು ಸಿದ್ಧಾರ್ಥ ಹೊಸಮನಿ ಎಂಬುವರು ಅಶೋಕ್ ಎಂ ಪಟ್ಟಣ್‌ ಅವರಿಗೆ ಪತ್ರ ಬರೆದಿದ್ದರು.

ಈ ಪತ್ರದಲ್ಲಿದ್ದ ಅಂಶಗಳನ್ನೇ ಅಶೋಕ್ ಎಂ ಪಟ್ಟಣ್‌ ಅವರು ಯಥಾವತ್ತಾಗಿ ಬಳಸಿಕೊಂಡಿರುವುದು ಪತ್ರದಿಂದ ಗೊತ್ತಾಗಿದೆ.

ವಿಶೇಷವೆಂದರೇ ಸಿದ್ಧಾರ್ಥ ಹೊಸಮನಿ ಎಂಬುವರು 2025ರ ಡಿಸೆಂಬರ್‍‌ 11ರಂದು ಕೋರಿಕೆ ಸಲ್ಲಿಸಿದ್ದ ದಿನದಂದೇ ಅಶೋಕ್‌ ಪಟ್ಟಣ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದು ತಿಳಿದು ಬಂದಿದೆ.

ಕರ್ನಾಟಕ ಸರ್ಕಾರದ ಸ್ವಾಮ್ಯದಲ್ಲಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆಯು ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ಪರಿವರ್ತಕಗಳನ್ನು ದಶಕಗಳಿಂದಲೂ ಪೂರೈಸುತ್ತ ಬಂದಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಕವಿಕಾಕ್ಕೆ 4 ಜಿ ವಿನಾಯಿತಿ ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ  ಬಂದ ನಂತರ ಪ್ರತೀ ವರ್ಷವೂ ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ನೇರವಾಗಿ ಪರಿವರ್ತಕಗಳನ್ನು ಖರೀದಿಸಲು  4 ಜಿ ವಿನಾಯಿತಿ ನೀಡಿತ್ತು.

ಹುಬ್ಬಳ್ಳಿಯಲ್ಲಿರುವ ಎನ್‌ಜಿಎಫ್‌, ಬೆಂಗಳೂರಿನಲ್ಲಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆಯನ್ನು ಬದಿಗೊತ್ತಿ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ ವಿದ್ಯುತ್‌ ಪರಿವರ್ತಕಗಳನ್ನು  ಖರೀದಿಸುತ್ತಿರುವ ಇಂಧನ ಇಲಾಖೆಯು ಇದಕ್ಕೆ ಯಾವುದೇ ಸಮರ್ಥನೆಗಳನ್ನೂ ಒದಗಿಸಿಲ್ಲ.

 

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

2019-20ನೇ ಸಾಲಿನಲ್ಲಿ ಅಗತ್ಯವಿದ್ದ ವಿವಿಧ ಸಾಮರ್ಥ್ಯದ ವಿದ್ಯುತ್ ವಿತರಣಾ ಪರಿವರ್ತಕಗಳನ್ನು 78.45 ಕೋಟಿ ರು ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದ ನೇರವಾಗಿ ಖರೀದಿಸಲು 2019ರ ಮೇ 13ರಲ್ಲೇ 4 ಜಿ ವಿನಾಯಿತಿ ನೀಡಿತ್ತು.

ಅದೇ ರೀತಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಸಂಸ್ಥೆಗಳು 2023-24ನೇ ಸಾಲಿಗಾಗಿ 4,500 ಪರಿವರ್ತಕಗಳನ್ನು 69.76 ಕೋಟಿ ರು ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದ ನೇರವಾಗಿ ಖರೀದಿಸಲು   2024ರ ಮಾರ್ಚ್‌ 16ರಂದು 4 ಜಿ ವಿನಾಯಿತಿ ನೀಡಿತ್ತು.

ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ಅವಶ್ಯಕವಿರುವ 2,000 ವಿದ್ಯುತ್ ಪರಿವರ್ತಕಗಳನ್ನು 32.16 ಕೋಟಿ ರು ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದ ನೇರವಾಗಿ ಖರೀದಿಸಲು  2025ರ ಸೆಪ್ಟಂಬರ್ 2ರಂದು 4 ಜಿ ವಿನಾಯಿತಿ ನೀಡಿತ್ತು.

ಕೇರಳ ಸರ್ಕಾರಿ ಕಂಪನಿಗೆ 180.37 ಕೋಟಿ

2019ರಿಂದ 2025ರ ಸೆಪ್ಟಂಬರ್‍‌ವರೆಗೆ ಒಟ್ಟಾರೆ 180.37 ಕೋಟಿ ರು ವೆಚ್ಚದಲ್ಲಿ 6,500ಕ್ಕೂ ಹೆಚ್ಚು ಪರಿವರ್ತಕಗಳನ್ನು ಕೇರಳ ಎಲೆಕ್ಟ್ರಿಕಲ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ ನೇರವಾಗಿ ಖರೀದಿಸಿದೆ.  ಆರ್ಥಿಕ ಇಲಾಖೆಯು, 2025-26ನೇ ಸಾಲಿನಲ್ಲಿ 174 ಕೋಟಿ ರು ಮೊತ್ತದದಲ್ಲಿ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌ ಕಂಪನಿಯಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು   4 ಜಿ ವಿನಾಯಿತಿ ನೀಡಲು ತಕರಾರು ಎತ್ತಿದೆ.

ಈ ಹಿಂದಿನ ಮೂರು ವರ್ಷಗಳಲ್ಲಿ ಕೆಇಎಲ್‌ಗೆ  4 ಜಿ ವಿನಾಯಿತಿ ನೀಡಿದ್ದ ಆರ್ಥಿಕ ಇಲಾಖೆಯು  2025-26ರಲ್ಲಿ ಕೆಇಎಲ್‌ಗೆ 4 ಜಿ ವಿನಾಯಿತಿ ನೀಡಲು ಆಕ್ಷೇಪ ಎತ್ತಿರುವುದು ಅದರ ದ್ವಿಮುಖ ನೀತಿಗೆ ಕೈಗನ್ನಡಿ ಹಿಡಿದಂತಾಗಿದೆ.

ಬೆಂಗಳೂರಿನ ಯಲಹಂಕದ ಕೋಗಿಲು ಸಮೀಪ ಅಕ್ರಮ ಕಟ್ಟಡಗಳ ನೆಲಸಮ ವಿಚಾರದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಲ್ಲಿನ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಮಧ್ಯೆ ಪ್ರವೇಶಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ 174.73 ಕೋಟಿ ರು ಮೊತ್ತದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ಖರೀದಿಸಲು ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ಗೆ 4 ಜಿ ವಿನಾಯಿತಿ ನೀಡುವ ಪ್ರಸ್ತಾವವು ಮುನ್ನೆಲೆಗೆ ಬಂದಿತ್ತು. ಅಲ್ಲದೇ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿತ್ತು.

 

ಕೇರಳ ಸರ್ಕಾರಿ ಕಂಪನಿಯಿಂದ ಟ್ರಾನ್ಸ್‌ಫಾರ್ಮ್‌ರ್‍‌ಗಳ ಖರೀದಿ; 174.73 ಕೋಟಿ ರು ಮೊತ್ತಕ್ಕೆ 4 (ಜಿ) ಪ್ರಸ್ತಾವ

 

2025-26ನೇ ಸಾಲಿನಲ್ಲಿ ಎಸ್ಕಾಂಗಳಿಗೆ ವಿದ್ಯುತ್‌ ಪರಿವರ್ತಕಗಳನ್ನು ನೇರವಾಗಿ ಕೇರಳ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜನಿಯರಿಂಗ್‌ ಲಿಮಿಟೆಡ್‌ನಿಂದಲೇ ಖರೀದಿಸಲು ಗೆ 4 ಜಿ ವಿನಾಯಿತಿ ಕೋರಿರುವುದನ್ನು ಸ್ಮರಿಸಬಹುದು. ಈ ಕುರಿತು ದಿ ಫೈಲ್ 2026ರ ಜನವರಿ 8ರಂದು ವರದಿ ಪ್ರಕಟಿಸಿತ್ತು.

Hot this week

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...
Please Scan to make Your Contribution

Topics

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

Related Articles

Popular Categories

error: Content is protected !!