ಸಿಎಂ ಮುಖ್ಯ ಸಲಹೆಗಾರನ ಮಾಹಿತಿ, ಮಾಹಿತಿ ಹಕ್ಕು ವ್ಯಾಪ್ತಿಗೆ ಒಳಪಡುವುದಿಲ್ಲವೆಂದ ಕಚೇರಿ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯ ಸಲಹೆಗಾರ ಸುನೀಲ್‌ ಕುನಗೋಲು ಅವರು ನೀಡಿರುವ ಸಲಹೆ, ಪಡೆಯುತ್ತಿರುವ ವೇತನ ಸೇರಿದಂತೆ ಇತ್ಯಾದಿ ಮಾಹಿತಿಗಳು,  ಮಾಹಿತಿ ಹಕ್ಕು ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹಿಂಬರಹ ನೀಡಿದೆ.

 

ವಿಶೇಷವೆಂದರೇ ಒಂದೂವರೆ ವರ್ಷದ ಹಿಂದೆ ಸುನೀಲ್‌ ಕುನುಗೋಲು ಅವರ ಕಚೇರಿಯು ಇದೇ ಮಾಹಿತಿಯನ್ನು ಆರ್‍‌ಟಿಐ ಅಡಿಯಲ್ಲಿ ಒದಗಿಸಿತ್ತು. ಆದರೀಗ 2025ರಲ್ಲಿ ಮಾಹಿತಿ ಒದಗಿಸುವ ಸಂಬಂಧ ಯೂ ಟರ್ನ್ ಹೊಡೆದಿದೆ.

 

ಸುನೀಲ್‌ ಕುನಗೋಲು ಅವರು ಪಡೆದಿರುವ ವೇತನ, ಸಲಹೆ ಮತ್ತು ಪ್ರಯಾಣ ಭತ್ಯೆ ಸೇರಿದಂತೆ ಮತ್ತಿತರ ಮಾಹಿತಿಗಳು ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ್‌ 2 (ಎಫ್‌) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು 2025ರ ಜನವರಿ 21ರಂದು ಒದಗಿಸಿದೆ.

 

ಮತ್ತೊಂದು ವಿಶೇಷವೆಂದರೇ ಈ ಮಾಹಿತಿಯನ್ನು ಕೋರಿ 2024ರ ಅಕ್ಟೋಬರ್‍‌ 22ರಂದು ‘ದಿ ಫೈಲ್‌’  ಅರ್ಜಿ ಸಲ್ಲಿಸಿತ್ತು. ಆದರೆ ಈ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮದ ಸೆಕ್ಷನ್‌ 2(ಎಫ್‌) ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಒಂದು ಸಾಲಿನ ಹಿಂಬರಹವನ್ನು   60 ದಿನಗಳ ನಂತರ ಅರ್ಜಿದಾರರಿಗೆ ಒದಗಿಸಿದೆ.

 

ಸೆಕ್ಷನ್‌ 2 (ಎಫ್‌) ನಲ್ಲೇನಿದೆ?

 

ಮಾಹಿತಿ ಎಂದರೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರೆ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರದಿಂದ ಪಡೆಯಬಹುದಾದ ದಾಖಲೆಗಳು, ದಸ್ತಾವೇಜುಗಳು, ಮೆಮೋಗಳು, ಇ-ಮೇಲ್‌ಗಳು, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಹೇಳಿಕೆಗಳು, ಸುತ್ತೋಲೆಗಳು, ಆದೇಶಗಳು, ಲಾಗ್‌ ಪುಸ್ತಕಗಳು, ಕರಾರುಗಳು, ವರದಿಗಳು, ಕಾಗದಪತ್ರಗಳು, ನಮೂನೆಗಳು, ಮಾದರಿಗಳು ಯಾವುದೇ ವಿದ್ಯುನ್ಮಾನ ರೂಪದಲ್ಲಿ ಹೊಂದಿರುವ ದತ್ತಾಂಶ ಮತ್ತು ಯಾವುದೇ ಖಾಸಗಿ ನಿಕಾಯಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡಂತೆ ಯಾವುದೇ ರೂಪದಲ್ಲಿರುವ ಯಾವುದೇ ವಿಷಯ ಎಂದು ಅರ್ಥ ಎಂದು ಕಾಯ್ದೆಯಲ್ಲಿ ವಿವರಿಸಿದೆ.

 

 

ಕಾಯ್ದೆಯಲ್ಲಿ ವಿವರಿಸಿರುವ ಪ್ರಕಾರ ಸಲಹೆಗಳು ಸಹ ಮಾಹಿತಿ ಎಂದು ಹೇಳಲಾಗಿದೆ. ಆದರೆ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರ ಕಚೇರಿಯು ‘ದಿ ಫೈಲ್‌’ ಕೋರಿದ್ದ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ್‌ 2(ಎಫ್‌) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನೀಡಿರುವ ಹಿಂಬರಹವು ಸಾಕಷ್ಟು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

 

 

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಸೇರಿದಂತೆ ಇನ್ನಿತರೆ ಆರೋಪಗಳಲ್ಲಿ ಸಿಲುಕಿದ್ದಾರೆ. ಆದರೂ ಈ ಸಂದರ್ಭದಲ್ಲಿ ಮುಖ್ಯ ಸಲಹೆಗಾರ ಸುನೀಲ್‌ ಕುನಗೋಲು ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಷ್ಟೇ ಏಕೆ ಮುಖ್ಯ ಸಲಹೆಗಾರರಾಗಿ ನೇಮಕವಾದ ದಿನದಿಂದಲೂ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕಚೇರಿಗೂ ಭೇಟಿಯನ್ನೂ ಕೊಟ್ಟಿಲ್ಲ!. ಆದರೆ ಕಚೇರಿಯಲ್ಲಿ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

 

ಹಿಂದೆ ನೀಡಿದ್ದ ಮಾಹಿತಿಯಲ್ಲೇನಿತ್ತು?

 

ಕಾಂಗ್ರೆಸ್‌ನ ಚುನಾವಣಾ ತಂತ್ರಗಾರ ಎಂದೇ ಬಿಂಬಿಸಿಕೊಂಡಿರುವ ಸುನೀಲ್ ಕನುಗೋಲು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಸಲಹೆಗಾರರಾಗಿ ನೇಮಕವಾದ ನಂತರ ಒಂದೇ ಒಂದು ಸಭೆಗಳನ್ನು ನಡೆಸಿಲ್ಲ. ಆದರೆ ವಿಷಯಾಧರಿತವಾಗಿ ಮೌಖಿಕ ಸಲಹೆಗಳನ್ನು ನೀಡಿದ್ದಾರೆ ಎಂದು ಅವರ ಕಚೇರಿಯು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿತ್ತು.

 

ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಡೆಸಿದ್ದ ಹೋರಾಟ, ತಂತ್ರಗಾರಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದು ಬಿಂಬಿಸಿಕೊಂಡಿದ್ದ ಸುನೀಲ್‌ ಕುನುಗೋಳು ಅವರನ್ನು ಮುಖ್ಯಮಂತ್ರಿಗಳಿಗೆ ಮುಖ್ಯ ಸಲಹೆಗಾರರಾಗಿ ನೇಮಕ ಮಾಡಿದ್ದರೂ ಒಂದೇ ಒಂದು ಸಭೆಯನ್ನೂ ನಡೆಸಿರಲಿಲ್ಲ ಎಂದು ನೀಡಿದ್ದ ಮಾಹಿತಿಯು ಚರ್ಚೆಗೆ ಗ್ರಾಸವಾಗಿತ್ತು.

 

ವಿಷಯಾಧರಿತವಾಗಿ ಮೌಖಿಕ ಸಲಹೆಗಳನ್ನು ನೀಡಿದ್ದಾರೆ ಎಂದು ಮಾಹಿತಿ ಒದಗಿಸಿರುವ ವಿಶೇಷ ಕರ್ತವ್ಯಾಧಿಕಾರಿಯು ಅದರ ವಿವರಗಳನ್ನು ಒದಗಿಸಿರಲಿಲ್ಲ. ಹಾಗೆಯೇ ಸುನೀಲ್‌ ಕುನಗೋಳು ಅವರು ಮುಖ್ಯಮಂತ್ರಿಯವರಿಗೆ ಮುಖ್ಯ ಸಲಹೆಗಾರರಾಗಿ ನೇಮಕವಾದ ದಿನದಿಂದ ಇದುವರೆಗೂ ಯಾವುದೇ ಸಭೆಗಳನ್ನು ಏರ್ಪಡಿಸಿಲ್ಲ ಎಂದು ಆರ್‌ಟಿಐನಲ್ಲಿ ಮಾಹಿತಿ ಒದಗಿಸಿತ್ತು.

 

ಅದೇ ರೀತಿ ಸುನೀಲ್‌ ಕುನಗೋಳು ಅವರು ಮುಖ್ಯ ಸಲಹೆಗಾರರಾಗಿ ನೇಮಕವಾದ ದಿನದಿಂದ ಇದುವರೆಗೂ ಯಾವುದೇ ವೇತನ ಹಾಗೂ ಪ್ರಯಾಣ ಭತ್ಯೆಯನ್ನೂ ಪಡೆದಿಲ್ಲ ಎಂದು ಉತ್ತರ ಒದಗಿಸಿತ್ತು.

ಒಂದೇ ಒಂದು ಸಭೆ ನಡೆಸದ ಸಿಎಂ ಮುಖ್ಯ ಸಲಹೆಗಾರ, ನೀಡಿದ್ದು ಮೌಖಿಕ ಸಲಹೆಯಷ್ಟೇ

ಸುನೀಲ್‌ ಕುನುಗೋಲು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿತ್ತು. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಡೆಸಿದ್ದ ಹೋರಾಟ, ತಂತ್ರಗಾರಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದು ಹೇಳಲಾಗಿತ್ತು. ಹೀಗಾಗಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೊಠಡಿ ಮತ್ತು ಅವರಿಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು.

 

ರಾಜಕೀಯ ಕಾರ್ಯದರ್ಶಿ, ಕಾನೂನು, ಮುಖ್ಯ ಸಲಹೆಗಾರರ ನೇಮಕ; ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗುವುದೇ?

 

2024ರ ಲೋಕಸಭೆ ಚುನಾವಣೆಗೆ ಅವರ ನೆರವು ಪಡೆಯಲು ಪಕ್ಷದ ರಾಜ್ಯ ಘಟಕ ನಿರ್ಧರಿಸಿತ್ತು. ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷವು ಇದರ ಜವಾಬ್ದಾರಿಯನ್ನು ಸುನೀಲ್‌ ಕುನುಗೋಳು ಅವರಿಗೆ ವಹಿಸಿತ್ತು.

ವೇತನ, ಪ್ರಯಾಣ, ಭತ್ಯೆ ವಿವರ ಮುಚ್ಚಿಟ್ಟ ಸಿಎಂ ಮಾಧ್ಯಮ ಸಲಹೆಗಾರ; ವಿವರಗಳೇನು ವೈಯಕ್ತಿಕ ಮಾಹಿತಿಯೇ?

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಸಾಧನೆ ಮಾಡಿದ ನಂತರ ರಾಜ್ಯದಲ್ಲಿ ಗೆಲುವಿನ ಗತಿಯನ್ನು ಕಾಯ್ದುಕೊಳ್ಳಲು ಉತ್ಸುಕವಾಗಿದೆ. ಬಳ್ಳಾರಿ ಮೂಲದ ಕನುಗೋಳು ಕಾಂಗ್ರೆಸ್ ಪಕ್ಷದ ಮುಖ್ಯ ಚುನಾವಣಾ ತಂತ್ರಗಾರ ಎಂದು ಗುರುತಿಸಲ್ಪಟ್ಟಿದ್ದರು. ಕನುಗೋಲು ಅವರನ್ನು ಸಿಎಂ ಸಲಹೆಗಾರರನ್ನಾಗಿ ನೇಮಿಸಿರುವುದು ಕೂಡ ಆ ಪ್ರಯತ್ನದ ಭಾಗವೇ ಎನ್ನಲಾಗಿತ್ತು.

ಸಿಎಂ ಸಲಹೆಗಾರರ ಹುದ್ದೆಗೆ ಶಾಸಕರ ನೇಮಕ; ಅನರ್ಹತೆ ನಿವಾರಣೆಗೆ ವಿಧೇಯಕಕ್ಕೇ ತಿದ್ದುಪಡಿ!

ಸುನಿಲ್ ಕನುಗೋಲು ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಿಸಿರುವುದಕ್ಕೆ ಪಕ್ಷದ ಯಶಸ್ಸಿನಲ್ಲಿ ಅವರ ಪಾತ್ರದ ಮಹತ್ವ ಮತ್ತು ರಾಜಕೀಯ ತಂತ್ರಗಾರಿಕೆಯಲ್ಲಿ ಅವರ ಪರಿಣತಿಯನ್ನು ಸೂಚಿಸುತ್ತದೆ. ಪರಿಣಾಮಕಾರಿ ನಿರ್ಧಾರ ಮತ್ತು ಆಡಳಿತವನ್ನು ಮಾಡಲು ಮುಖ್ಯ ಸಲಹೆಗಾರರಾಗಿ, ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಲಿದ್ದಾರೆ ಎಂದು ಹೇಳಲಾಗಿತ್ತು.

SUPPORT THE FILE

Latest News

Related Posts