ಬೆಂಗಳೂರು; ರಾಜ್ಯಸಭೆ ಸದಸ್ಯ ಡಾ ಡಿ ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ನೀಡಿರುವ ದೂರರ್ಜಿಗಳ್ನು ಹಿಂಪಡೆಯುವಂತೆ ದೂರುದಾರರ ಮೇಲೆಯೇ ಪೊಲೀಸರು ಒತ್ತಡ ಹೇರುತ್ತಿದ್ದಾರೆ!
ಅಲ್ಲದೇ ಕಳೆದ ಒಂದು ವರ್ಷದಿಂದಲೂ ಸಲ್ಲಿಸಿರುವ ದೂರರ್ಜಿಗಳನ್ನಾಧರಿಸಿ ಪೊಲೀಸರು ಎಫ್ಐಆರ್ ಕೂಡ ದಾಖಲಿಸುತ್ತಿಲ್ಲ. ಬದಲಿಗೆ ವಿಪರೀತ ಬಡ್ಡಿಯಿಂದ ರೋಸಿ ದೂರಿರುವ ದೂರುದಾರರನ್ನೇ ಪೊಲೀಸರು ಠಾಣೆಗೆ ಕರೆಸುತ್ತಿದ್ದಾರೆ. ಮತ್ತು ಸಾಲ ಮರು ಪಾವತಿ ಮಾಡಿಸಲು ಮಧ್ಯಸ್ಥಿಕೆ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲಗಾರರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸುವ ಸಲುವಾಗಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರವು ಅನುಸರಿಸುತ್ತಿರುವ ವಿಳಂಬದ ಬೆನ್ನಲ್ಲೇ ದೂರರ್ಜಿಗಳನ್ನು ಹಿಂಪಡೆಯಬೇಕು ಎಂದು ದೂರುದಾರರ ಮೇಲೆ ಒತ್ತಡ ಹೇರುತ್ತಿರುವುದು ಮತ್ತು ದೂರುದಾರರ ಆತಂಕದ ಮಾತುಗಳು ಮುನ್ನೆಲೆಗೆ ಬಂದಿವೆ.
ಹಾಗೆಯೇ ಸಾಲ ಮರು ಪಾವತಿಸುವ ಸಂಬಂಧ ದೂರರ್ಜಿ ಮೇಲೆಯೇ ದೂರರ್ಜಿದಾರರಿಂದ ಮುಚ್ಚಳಿಕೆ ರೀತಿ ಬರೆಸಿಕೊಳ್ಳಲಾಗುತ್ತಿದೆ. ಮತ್ತು ಬಲವಂತವಾಗಿ ಪೊಲೀಸರು ಸಹಿ ಮಾಡಿಸುತ್ತಿದ್ದಾರೆ ಎಂಬ ಆಪಾದನೆಗಳು ಸಹ ಕೇಳಿ ಬಂದಿವೆ.
ಸಾಲ ಮರು ಪಾವತಿಸುವ ಸಂಬಂಧ ಸಂಘದ ಪ್ರತಿನಿಧಿಗಳು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿರುವ ದೂರುದಾರರು, ರಾತ್ರಿ ಹೊತ್ತಲ್ಲಿಯೂ ಠಾಣೆಗೆ ತೆರಳಿ ದೂರರ್ಜಿ ಸಲ್ಲಿಸಿರುವುದು ಸಹ ಗೊತ್ತಾಗಿದೆ.
ಅದೇ ರೀತಿ ಸಂಘದ ಪ್ರತಿನಿಧಿ, ಸಿಬ್ಬಂದಿಯ ವಿರುದ್ಧ ಕಿರುಕುಳ, ದೌರ್ಜನ್ಯ, ಬೆದರಿಕೆಯಂತಹ ಆರೋಪಗಳಿದ್ದರೂ ಸಹ ‘ಮಿಸಲೇನಿಯಸ್’, ‘ನಾನ್ ಕಾಗ್ನಿಜಬಲ್’ ‘ಇತರೆ’ ಅರ್ಜಿಗಳ ನಮೂನೆಯಡಿಯಲ್ಲಿ ಪೊಲೀಸರು ದೂರನ್ನು ದಾಖಲಿಸಿಕೊಂಡಿರುವುದು ತಿಳಿದು ಬಂದಿದೆ.
ರಾಜ್ಯದ ವಿವಿಧ ಠಾಣೆಗಳಲ್ಲಿ ದೂರರ್ಜಿ ಸಲ್ಲಿಸಿರುವ ದೂರುದಾರರನ್ನು ‘ದಿ ಫೈಲ್’ ಸಂಪರ್ಕಿಸಿತು. ಕೊಡಗು, ಉಡುಪಿ, ಕಾರ್ಕಳ, ಶುಂಟಿಕೊಪ್ಪ ಸೇರಿದಂತೆ ಹಲವು ದೂರುದಾರರು ‘ದಿ ಫೈಲ್’ ಪ್ರತಿನಿಧಿಯೊಂದಿಗೆ ಆತಂಕ, ದುಗುಡವನ್ನು ವ್ಯಕ್ತಪಡಿಸಿದರು.
‘ಸಾಲ ಕಟ್ಟಬೇಕು ಅಂತ ಹೇಳಿದ್ರು. ಇದ್ರಿಂದ ರಾತ್ರಿನೇ ಹೋಗಿ ದೂರು ಕೊಟ್ವಿ. ಪೊಲೀಸರು ಸಂಘದವರನ್ನು ಕರೆಸಿದ್ರು. ಸೂಪರ್ ವೈಜರ್ ಬಂದಿದ್ರು. ದುಡ್ಡ ಕಟ್ಟಬೇಕಲ್ಲಮ್ಮ ಅಂತ ಪೊಲೀಸರು ಹೇಳಿದ್ರು. ಕಷ್ಟ ಆಗುತ್ತೆ ಅಂತ ನಾವು ಹೇಳಿದ್ವಿ. ಅವ್ರು ಒಂದ್ ಅರ್ಜಿ ಬರೆಸಿಕೊಂಡ್ರು, ಸೈನ್ ಮಾಡಿ ಅಂದ್ರು ಸೈನ್ ಮಾಡ್ದೆ. ಟೆನ್ಷನ್ನಲ್ಲಿ ಆ ಆರ್ಜಿಯಲ್ಲಿ ಏನಿತ್ತು ಅನ್ನೋದನ್ನು ನಾನ್ ಓದ್ಲಿಲ್ಲ,’ ಎಂದು ಕೊಡಗಿನ ಜಯಂತಿ ಅವರು ‘ದಿ ಫೈಲ್’ ಪ್ರತಿನಿಧಿಯೊಂದಿಗೆ ಆತಂಕದಿಂದಲೇ ಪ್ರತಿಕ್ರಿಯಿಸಿದರು.
ದೂರರ್ಜಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಜಯಂತಿ ಅವರು ಎಸ್ಕೆಡಿಆರ್ಡಿಪಿ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಹಾಗೂ ಇತರೆ ಸಂಘದಿಂದ ಸಾಲ ಪಡೆದಿದ್ದಾರೆ. ಸಂಘದ ಸಿಬ್ಬಂದಿಗಳು ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ತೊಂದರೆ ಕೊಟ್ಟವರನ್ನು ವಿಚಾರಣೆ ಮಾಡಿ ರಕ್ಷಣೆ ನೀಡಬೇಕು ಎಂದು ದೂರರ್ಜಿಯಲ್ಲಿ ಕೋರಿರುವುದು ಗೊತ್ತಾಗಿದೆ.
‘ಸಂಘದ ವಿರುದ್ಧ ಕಂಪ್ಲೇಟ್ ಕೊಟ್ಟಿದ್ದೀವಿ. ಆದ್ರೆ ಎಫ್ಐಆರ್ ಆಗಿಲ್ಲ. ಕಂಪ್ಲೇಟ್ ವಾಪಸ್ ತಗೊಳ್ಳಿಕೆ ಪೊಲೀಸ್ರು ಸ್ಟೇಷನ್ಗೆ ಬರ್ಲಿಕ್ಕೆ ಹೇಳ್ತಿದಾರೆ. ಬಡ್ಡಿ ಎಲ್ಲ ಜಾಸ್ತಿ, ಪಿಆರ್ಕೆ ಬಾಂಡ್ ಕೊಟ್ಟಿಲ್ಲ. ತುಂಬಾ ಸಾಲ ಅಂತಾ ಹೇಳ್ತಾರೆ. 3 ವರ್ಷ ಆದ್ರೂ ಸಾಲ ಮುಗಿದಿಲ್ಲ. ಕಿರುಕುಳ ಇದೆ. ಸ್ಲಿಪ್ ತಗೊಂಡ್ ಬನ್ನಿ, ಕಂಪ್ಲೇಟ್ ವಾಪಸ್ ತಗಳ್ರಿ ಅಂತ ಹೇಳ್ತಾರೆ,’ ಎನ್ನುತ್ತಾರೆ ಉಡುಪಿಯ ಕುಕ್ಕಂದೂರು ಕಾರ್ಕಳದ ಶಶಿಕಲಾ.
ಶಶಿಕಲಾ ಅವರು 2024ರ ಡಿಸೆಂಬರ್ 27ರಂಂದೇ ಈ ಬಗ್ಗೆ ಕಾರ್ಕಳ ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ‘ಎಸ್ಕೆಡಿಆರ್ಡಿಪಿ ಟ್ರಸ್ಟ್ನಿಂದ 1 ಲಕ್ಷ ಸಾಲ ಪಡೆದಿದ್ದು, ಪ್ರತಿ ವಾರ 1,520 ರು. ಪಾವತಿ ಮಾಡುತ್ತಿದ್ದು ಪ್ರಸ್ತುತ 1 ವರ್ಷದಿಂದ ಸಾಲದ ಹಣ ಪಾವತಿಸದೇ ಇದ್ದು ನಿಯಮ ಮೀರಿ ಬಡ್ಡಿ ವಿಧಿಸಿ ಪ್ರತಿವಾರ ಪ್ರಜ್ಞಾ ಹಾಗೂ ಎಂಟು ಹತ್ತು ಜನ ಮನೆ ಬಳಿಗೆ ಬಂದು ಹಣ ಪಾವತಿಸುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ,’ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಉಡುಪಿಯ ವಿಮಲಾ ಎಂಬುವರು 2025ರ ಜನವರಿ 12ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
‘ಎಸ್ಕೆಡಿಆರ್ಡಿಪಿ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಯವರು ಸಾಲದ ಬಗ್ಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ,’ ಎಂದು ದೂರಿದ್ದರು. ಆದರೆ ಇದುವರೆಗೂ ಆಪಾದಿತರ ವಿರುದ್ಧ ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ ಎಂದು ವಿಮಲಾ ಅವರು ‘ದಿ ಫೈಲ್’ ಪ್ರತಿನಿಧಿಗೆ ಮಾಹಿತಿ ನೀಡಿದರು.
ಕೃಷ್ಣ ರೈ ಎಂಬುವರು ಕಡಬ ಪೊಲೀಸ್ ಠಾಣೆಗೆ 2024ರ ಡಿಸೆಂಬರ್ 24ರಂದು ದೂರರ್ಜಿ ಸಲ್ಲಿಸಿದ್ದರು. ಎಸ್ಕೆಡಿಆರ್ಡಿಪಿ ಅಧ್ಯಕ್ಷ ಅನಿಲ್ ಕುಮಾರ್, ಸಂಘದ ಇತರೆ ಸದಸ್ಯರು ಮತ್ತು ಸಿಬ್ಬಂದಿಯವರು ಆರ್ಬಿಐ ನಿಯಮಾವಳಿಗಳನ್ನು ಪಾಲಿಸದೇ ವ್ಯವಹಾರ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಬಡ್ಡಿ ದಂಧೆ, ಮೀಟರ್ ಬಡ್ಡಿ, ಬೆದರಿಕೆ ಆರೋಪ; ಧರ್ಮಸ್ಥಳ ಸಂಘದ ವೀರೇಂದ್ರ ಹೆಗ್ಗಡೆ ಸೇರಿ ಹಲವರ ವಿರುದ್ಧ ದೂರು
ಆದರೆ 2 ತಿಂಗಳಾದರೂ ಈ ಸಂಬಂಧ ಯಾವುದೇ ಎಫ್ಐಆರ್ನ್ನೂ ಕೂಡ ದಾಖಲಿಸಿಲ್ಲ ಎಂದ ಕೃಷ್ಣ ರೈ ಅವರು ‘ದಿ ಫೈಲ್’ಗೆ ತಿಳಿಸಿದರು.
ದೂರರ್ಜಿಗಳ ಕುರಿತು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.