Monday | July 6, 2026 |

ಮದ್ಯ ಪರವಾನಗಿಗೆ ಲಂಚ; ಲೋಕಾಯುಕ್ತದಲ್ಲಿ ತನಿಖೆ ಜಾರಿಯಲ್ಲಿದ್ದರೂ ಮುಕ್ತಾಯಗೊಳಿಸಲು ಪರಿಶೀಲನೆ

ಬೆಂಗಳೂರು;  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ಮದ್ಯದಂಗಡಿ ಪರವಾನಗಿ ನೀಡಲು ಅಬಕಾರಿ ಸಚಿವರಾಗಿದ್ದ ಕೆ ಗೋಪಾಲಯ್ಯ ಅವರು ಅಧಿಕಾರಿಗಳ ಮೂಲಕ ಅಕ್ರಮ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಿತ ಪ್ರಕರಣವೊಂದನ್ನು ಹಾಲಿ ಕಾಂಗ್ರೆಸ್‌ ಸರ್ಕಾರವು ಮುಕ್ತಾಯಗೊಳಿಸಲು ಮುಂದಾಗಿದೆ.

 

ಈ ಪ್ರಕರಣವು ಲೋಕಾಯುಕ್ತರ ಹಂತದಲ್ಲಿ ತನಿಖೆ ಜಾರಿಯಲ್ಲಿದ್ದರೂ ಸಹ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟವಾಗಿರುವ ಉಲ್ಲೇಖಗಳಿಲ್ಲ ಎಂಬುದನ್ನು ಮುಂದಿರಿಸಿಕೊಂಡು ಇಡೀ ಪ್ರಕರಣವನ್ನು  ಮುಕ್ತಾಯಗೊಳಿಸುವ ಬಗ್ಗೆ ಪರಿಶೀಲಿಸುತ್ತಿದೆ.

 

ಈ ಬಗ್ಗೆ ಹಾಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು 2024ರ ಡಿಸೆಂಬರ್ 12ರಂದು ವಿಧಾನ ಪರಿಷತ್ ನಲ್ಲಿ ಸದಸ್ಯ ಗೋವಿಂದರಾಜು ಅವರಿಗೆ  ಲಿಖಿತ ಉತ್ತರ ಒದಗಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಈ ಪ್ರಕರಣದ ಕುರಿತು ‘ದಿ ಫೈಲ್’ 2021ರ ಜೂನ್‌ 22ರಂದೇ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟವಾಗಿದ್ದರ ಬೆನ್ನಲ್ಲೇ ಕರ್ನಾಟಕ ರಾಷ್ಟ್ರಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಿಖಿತ ದೂರನ್ನೂ ಸಲ್ಲಿಸಿದ್ದರು. ಈ ದೂರರ್ಜಿ ಸಂಬಂಧ ಲೋಕಾಯುಕ್ತರ ಹಂತದಲ್ಲಿ ಇನ್ನೂ ತನಿಖೆ ಜಾರಿಯಲ್ಲಿದೆ ಎಂದು ಗೊತ್ತಾಗಿದೆ.

 

ಪ್ರಕರಣದ ವಿವರ

 

ಕೋವಿಡ್‌ ಸಂಕಷ್ಟದ ಕಾಲದಲ್ಲೂ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು ಜಿಲ್ಲೆಗಳಲ್ಲಿರುವ ಮದ್ಯದ ಅಂಗಡಿಗಳಿಂದ ಹಣ ವಸೂಲಿ ಮಾಡಲು ಸಚಿವರು ನಿರ್ದೇಶಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.   ರಾಜ್ಯದ ಚಾಮರಾಜನಗರ, ದಾವಣಗೆರೆ ಜಿಲ್ಲೆಯಿಂದಲೂ ಅಲ್ಲಿನ ಅಬಕಾರಿ ಅಧಿಕಾರಿಗಳು ಮದ್ಯದ ಅಂಗಡಿಗಳಿಂದ ಹಣ ವಸೂಲಿ ಮಾಡಿ ಸಚಿವರಿಗೆ ತಲುಪಿಸಿದ್ದಾರೆ ಎಂದು ಅಧಿಕಾರಿಗಳಿಬ್ಬರು ನಡೆಸಿದ್ದ  ಸಂಭಾಷಣೆ ತುಣುಕು ಬಯಲಾಗಿತ್ತು.

 

ಅಬಕಾರಿ ಸಚಿವರಿಗೆ 5ಲಕ್ಷ ರುಪಾಯಿ ಮಾಮೂಲಿ ಕೊಡಬೇಕು ಎನ್ನುವ ಅಬಕಾರಿ ಅಧಿಕಾರಿಗಳಿಬ್ಬರ ನಡುವೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯ ಆಡಿಯೋ ಸಂಚಲನ ಮೂಡಿಸಿತ್ತು.  ಈ ಪ್ರಕರಣ ಸಂಬಂಧ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.

 

ಈ ಪ್ರಕರಣದಲ್ಲಿ  ಕೊಪ್ಪಳ ಜಿಲ್ಲೆಯ ಅಂದಿನ ಉಪ ಆಯುಕ್ತರಾದ ಸಿ ಸೆಲೀನಾ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅನ್ವಯ ಪ್ರಕರಣ (ಅಪರಾಧ ಸಂಖ್ಯೆ; 05/2022) ದಾಖಲಿಸಿಕೊಂಡಿದ್ದರು.

 

ಈ ಆರೋಪಕ್ಕೆ ಸಂಬಂಧಿಸಿದಂತೆ ಸೆಲಿನಾ ಅವರನ್ನು ಅಮಾನತುಗೊಳಿಸಿ 2022ರಲ್ಲೇ ಆದೇಶ ಹೊರಡಿಸಿತ್ತು. ಅವರ ಲೀನ್‌ನ್ನು ಜಾನ್‌ ಡಿಸ್ಟಲಿರೀಸ್ ಗೆ ವರ್ಗಾಯಿಸಿತ್ತು. ಈ ಆದೇಶವನ್ನು ಸೆಲೀನಾ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದರು. ಕೆಎಟಿಯು ಸರ್ಕಾರದ ಆದೇಶವನ್ನು ವಜಾಗೊಳಿಸಿತ್ತು. ಸದ್ಯ ಈ ಪ್ರಕರಣವು ಲೋಕಾಯುಕ್ತರ ಹಂತದಲ್ಲಿ ತನಿಖೆ ಜಾರಿಯಲ್ಲಿದೆ. ಈ ಮಧ್ಯೆ ಆರೋಪಿತ ಅಧಿಕಾರಿ ಸಿ ಸೆಲೀನಾ ಅವರು 2024ರ ಜುಲೈ 13ರಂದು ಮರಣ ಹೊಂದಿದ್ದರು.

 

 

‘ಇವರ ಮೇಲಿನ ಪ್ರಕರಣಗಳಲ್ಲಿ ಸರ್ಕಾರಕ್ಕೆ ಯಾವುದೇ ಯಾವುದೇ  ಆರ್ಥಿಕ ನಷ್ಟ ಆಗಿರುವ ಬಗ್ಗೆ ಉಲ್ಲೇಖಗಳಿಲ್ಲದೇ ಇರುವುದರಿಂದ ಇವರ ವಿರುದ್ಧದ ಮೇಲಿನ ಪ್ರಕರಣಗಳನ್ನು ಮುಕ್ತಾಯಗೊಳಿಸುವ ಬಗ್ಗೆ ಪರಿಶೀಲನೆಯಲ್ಲಿದೆ,’ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ವಿಧಾನಪರಿಷತ್‌ಗೆ ಉತ್ತರ ಒದಗಿಸಿದ್ದಾರೆ.

 

 

ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದೆ ಎನ್ನಲಾಗಿರುವ 10 ನಿಮಿಷದ ಸಂಭಾಷಣೆಯ ತುಣುಕಿನಲ್ಲಿ ಕೊಪ್ಪಳ ಜಿಲ್ಲೆಯಿಂದ 5 ಲಕ್ಷ ಸಂಗ್ರಹಿಸಿ ಕೊಡಲು ಸೂಚಿಸಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿದೆ. ಅಲ್ಲದೆ ಮಂಜುನಾಥ್‌, ನಾಗರಾಜಪ್ಪ, ರಮೇಶ್‌, ಶಿವಪ್ರಸಾದ್‌ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿತ್ತಲ್ಲದೇ  ಕೊಪ್ಪಳ ಜಿಲ್ಲೆಯ ಇಕ್ಬಾಲ್‌ ಅನ್ಸಾರಿ ಎಂಬುವರ ಹೆಸರೂ ಸಹ  ಪ್ರಸ್ತಾಪವಾಗಿತ್ತು.

 

 

ಸಚಿವರ ಮನೆಯಲ್ಲೇ ನಡೆದಿತ್ತೇ ಸಭೆ?

 

ಅಂದಿನ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರ ಮನೆಯಲ್ಲಿ ಅಬಕಾರಿ ಜಿಲ್ಲಾ ಅಧಿಕಾರಿಗಳು, ಜಂಟಿ ಆಯುಕ್ತರುಗಳ ಸಭೆ ನಡೆದಿತ್ತು ಎಂಬುದು ಮಹಿಳಾ ಅಧಿಕಾರಿಯೊಬ್ಬರ ಆಡಿಯೋ ತುಣುಕಿನಿಂದ ಗೊತ್ತಾಗಿತ್ತು.

 

ಸಚಿವರ ಮನೆಯಲ್ಲಿ ಸಭೆ ನಡೆಯುವ ಮುನ್ನ ವಿಕಾಸಸೌಧದಲ್ಲಿ ಅಬಕಾರಿ ಇಲಾಖೆಯ ಜಂಟಿ ಆಯುಕ್ತರು, ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಅಂದಿನ ಸಚಿವ ಗೋಪಾಲಯ್ಯ ಅವರು ಕೆಲ ಜಿಲ್ಲೆಗಳ ಅಬಕಾರಿ ನಿರೀಕ್ಷಕರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಿಸಿದ್ದರು. ಅದೇ ದಿನ ಸಂಜೆ ಸಚಿವರ ಮನೆಯಲ್ಲಿ ಆಯ್ದ ಜಂಟಿ ಆಯುಕ್ತರು ಮತ್ತು ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಂಜುನಾಥ್‌, ಕುಮಾರ್‌, ನಾಗರಾಜಪ್ಪ ಎಂಬ ಅಧಿಕಾರಿಗಳು ಹಾಜರಾಗಿದ್ದರು ಎಂಬುದು ಆಡಿಯೋ ತುಣುಕಿನಿಂದ ತಿಳಿದು ಬಂದಿತ್ತು.

 

‘ರಮೇಶ್‌ ಬಗ್ಗೆ ಸಾಹೇಬ್ರು ಬಹಳ ಹುಷಾರಾಗಿದಾರೆ. ಕೆಟ್ಟದಾಗಿದಾರೆ. ನಾನು ಓಪನ್‌ ಆಗಿ ಹೇಳ್ದೆ. ಕೊಡೋಕೆ ರೆಡಿ ಇದ್ರು. ಒಪ್ಪಿದ್ರು. ಬೇರೆಯವರು ಹೆಂಗೆ ಮಾಡ್ತಾರೆ ಹಂಗೆ ಮಾಡೋಣ ಅಂದ್ರು. ಡಿಸಿ ಮೂರು ಜನ್ರ ಮೇಲೆ ಸಿಟ್ಟಾಗಿದಾರೆ. ರಮೇಶ್‌ ಮೇಲಂತೂ ಸಖತ್‌ ಸಿಟ್ಟಾಗಿದಾರೆ. ದಾವಣಗೆರೆ ಡಿಸಿ ಶಿವಪ್ರಸಾದ್‌ ಇದ್ರು. ಸುಮತಿ ರೆಡಿ ಇದ್ರು. ರಮೇಶ್‌ ದಾರಿ ತಪ್ಪಿಸುತ್ತಿದ್ದಾರೆ,’ ಎಂದು ಸಂಭಾಷಿಸಿದ್ದರು.

 

ಹಣ ವಸೂಲಿಗೆ ಸಚಿವ ಗೋಪಾಲಯ್ಯ ನಿವಾಸದಲ್ಲಿ ನಡೆದಿತ್ತೇ ಸಭೆ?; ಆಡಿಯೋ ಬಹಿರಂಗ

 

‘ಗ್ರೀನ್‌ ಸಿಗ್ನಲ್‌ ಕೊಟ್ರೆ ತಂದ್‌ ಕೊಡ್ತೀನಿ’ ‘ನಾನೇನು ಮಾಡ್ಲಿ. ಗಂಗಾವತಿ ಇನ್‌ಫಂಕ್ಷನ್‌ ಆಗಿದೆ. ವರದಿ ಕೊಡಿ. ಅಮೌಂಟ್‌ ಕಲೆಕ್ಟ್‌ ಆಗಿದೆಯೇ’ ಎಂದು ಮಹಿಳಾ ಅಧಿಕಾರಿಯ ಪ್ರಶ್ನೆಗೆ ಮತ್ತೊಬ್ಬ ಅಧಿಕಾರಿಯು ‘ ನಾಳೆನೇ ತಂದ್‌ ಕೊಡ್ತೀನಿ. ಗ್ರೀನ್‌ ಸಿಗ್ನಲ್‌ ಕೊಟ್ಟರೆ,’ ಎಂದು ಉತ್ತರಿಸಿದ್ದಾರೆ. ಹಾಗೆಯೇ ‘ ಇಕ್ಬಾಲ್‌ ಅನ್ಸಾರಿ ಅವರು ಒಂದ್‌ ರೂಪಾಯಿನೂ ಕೊಟ್ಟಿಲ್ಲ ಅವ್ರು.,’ ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ. ಆನಂತರ ‘ಮೇಡಂ ತಾವು ಗ್ರೀನ್‌ ಸಿಗ್ನಲ್‌ ಕೊಟ್ಟರೆ ಕಲೆಕ್ಟ್‌ ಮಾಡ್ತೀನಿ,’ ಎಂದು ಸಂಭಾಷಿಸಿದ್ದರು.

 

1.50 ಕೋಟಿ ಲಂಚದ ಆರೋಪ; ಸಚಿವ ಗೋಪಾಲಯ್ಯ ವಿರುದ್ಧ ಎಸಿಬಿಗೆ ದೂರು

 

 

ಮಿನಿಸ್ಟರ್‌ದು ಏನ್‌ ಮಾಡಿದ್ರಿ?

 

 

ಕೊಪ್ಪಳ ಜಿಲ್ಲೆಯ ಪ್ರತಿ ತಾಲೂಕಿನಲ್ಲಿರುವ ಮದ್ಯದ ಅಂಗಡಿಗಳಿಂದ ಹಣ ಸಂಗ್ರಹ ಮಾಡಿಕೊಡಬೇಕು ಎಂಬ ವಿಚಾರವೂ ಆಡಿಯೋ ತುಣುಕಿನಲ್ಲಿ ಪ್ರಸ್ತಾಪವಾಗಿದೆ. ‘ಮಿನಿಸ್ಟರ್‌ದು ಏನ್‌ ಮಾಡಿದ್ರಿ… ನೀವು ಶಾಪ್‌ಗಳಿಂದ ಆ ಮೇಲೆ ಕಲೆಕ್ಷನ್‌ ಮಾಡ್ರಿ. ನೀವು ಕೈಯಿಂದ ಕೊಟ್ಟು ಶಾಪ್‌ನೋರ ಹತ್ರ ಆ ಮೇಲೆ ಕೇಳ್ರಿ. ಬೆಳಗಾಂ, ಗುಲ್ಬರ್ಗಾದವರು ಬಂದಿದ್ರು. ಅವರನ್ನು ಕೇಳಿ. ನೀವು ಅವರು ಟಾರ್ಗೇಟ್‌ ಆಗ್ತೀರಿ. ನಾನೇನು ಕೊಟ್ಟು ಕೈ ತೊಳ್ಕೋತ್ತೀನಿ, ಆ ಮೇಲೆ ನಿಮ್‌ ಸ್ಟೋರಿಗಳು ಹೊರಗ್‌ ಬರ್ತಾವೆ. ನಾನೇನು ಮಾಡಕ್ಕಾಗಲ್ಲ,’ಎಂದು ಮಹಿಳಾ ಅಧಿಕಾರಿ ಮಾತನಾಡಿದ್ದರು.

 

 

ಕೊಪ್ಪಳದಿಂದ 5 ಲಕ್ಷ ಕೇಳಿದ್ದರೇ?

 

 

ಕೊಪ್ಪಳ ಜಿಲ್ಲೆಯ ಅಧಿಕಾರಿಗಳಿಂದ 5 ಲಕ್ಷ ವಸೂಲು ಮಾಡಲು ಸೂಚಿಸಲಾಗಿದೆ ಎಂಬ ಮಾತುಗಳು ಆಡಿಯೋದಲ್ಲಿವೆ. ‘ಜೆಸಿ ಫೋನ್‌ ಮಾಡಿದ್ರು. ವಾಯ್ಸ್‌ ಕಾಲ್‌ನಲ್ಲಿ. ಕೊಪ್ಪಳದಿಂದ 5 ಲಕ್ಷ ಕೇಳಿದ್ರಲ್ಲ. ಇನ್ಸ್‌ಪೆಕ್ಟರ್‌ಗಳಿಂದ ಕಲೆಕ್ಟ್‌ ಮಾಡ್ಲಿಕ್ಕೆ ಹೇಳಿದ್ರು. 2.5 ಲಕ್ಷ ತಲುಪಿಸ್ಬೇಕು ಅಂತ ಹೇಳಿದ್ರು. ಯಾವ್‌ ತರಹ 2.5 ಲಕ್ಷ ಕೊಡ್ಬೇಕು ಅಂತ ಜೆಸಿಗೆ ಕಾಲ್‌ ಮಾಡಿ ಕನ್ಫರ್ಮ್‌ ಮಾಡ್ಕೊಳ್ಳಿ. ಚಾಮರಾಜನಗರ ಡಿಸಿ ಕೊಟ್ಟಿದಾರೆ. ಬಳ್ಳಾರಿ, ಶಿವಪ್ರಸಾದ್‌ ಹೆಂಗ್‌ ಕೊಟ್ಟಿದಾರೆ ನೋಡಿ,’ ಎಂದು ಸಂಭಾಷಿಸಿದ್ದರು.

 

ಒಂದು ವೇಳೆ ಮಾಮೂಲಿ ಮುಟ್ಟಿಸದಿದ್ದರೆ ಕ್ರಮಕ್ಕೆ ಮುಂದಾಗಲಾಗುವುದು ಎನ್ನುವ ಮಾತುಗಳು ನಾನಾ ಜಿಲ್ಲೆಯ ಅಧಿಕಾರಿಗಳ ಹೆಸರು ಹಾಗೂ ಅಬಕಾರಿ ಇಲಾಖೆಯ ಮೇಲಾಧಿಕಾರಿಗಳ ಹೆಸರು ಆಡಿಯೋದಲ್ಲಿ ಪ್ರಸ್ತಾಪವಾಗಿದೆ. ಹಣ ನೀಡುವ ಬಗ್ಗೆ ಪದೇ ಪದೇ ಚರ್ಚೆಯಾಗಿದೆ. ಮಹಿಳಾ ಅಧಿಕಾರಿಯೊಬ್ಬರು ತಮಗೆ ಮೇಲಾಧಿಕಾರಿಗಳಿಂದ ಹಣ ನೀಡಲು ಒತ್ತಡ ಇದೆ. ತಾಲೂಕುವಾರು ಅಧಿಕಾರಿಗಳು ಅರ್ಥ ಮಾಡಿಕೊಂಡು ಅಲ್ಲಿಗೆ ತಲುಪಿಸಲು ಹಣದ ವ್ಯವಸ್ಥೆ ಮಾಡಿಕೊಡಬೇಕೆನ್ನುವ ಮಾತುಗಳು ಆಡಿಯೋದಲ್ಲಿದ್ದವು. 

Hot this week

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಸಿಎಂ, ಡಿಸಿಎಂ ಸೇರಿ ಐವರು ಸಚಿವರ ವಸತಿಗೃಹ ನವೀಕರಣ, ದುರಸ್ತಿ, ಪೀಠೋಪಕರಣ, ಗೃಹಪಯೋಗಿ ವಸ್ತುಗಳ ಖರೀದಿ; 3 ವರ್ಷದಲ್ಲಿ 19.01 ಕೋಟಿ ರು ವೆಚ್ಚ

ಬೆಂಗಳೂರು; ಸರ್ಕಾರಿ ಶಾಲೆ, ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಇರುವ ಕೊಠಡಿಗಳ...
Please Scan to make Your Contribution

Topics

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

Related Articles

Popular Categories

error: Content is protected !!