ದಲಿತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಲ್ಯಾಪ್‌ಟಾಪ್‌, ಫೆಲೋಶಿಪ್‌, ಭೋಜನಾ ವೆಚ್ಚಕ್ಕೆ ಅನುದಾನದ ಕೊರತೆ

ಬೆಂಗಳೂರು; ಶಿವಮೊಗ್ಗ, ಧಾರವಾಡ, ಬೆಂಗಳೂರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ, ಗಿರಿಜನ ಉಪ ಯೋಜನೆಯಡಿಯಲ್ಲಿ ಅನುದಾನ ಕೊರತೆಯಾಗಿದೆ. ಈ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ  ಸಮುದಾಯದ ವಿದ್ಯಾರ್ಥಿಗಳು ಪಿಎಚ್‌ಡಿ  ಶಿಷ್ಯ ವೇತನ, ಫೆಲೋಶಿಪ್‌, ಲ್ಯಾಪ್‌ಟಾಪ್‌ ಸೇರಿದಂತೆ ಇನ್ನಿತರೆ ಸೌಲಭ್ಯಗಳಿಂದ ವಂಚಿತರಾಗಿರುವುದು  ಇದೀಗ ಬಹಿರಂಗವಾಗಿದೆ.

 

ಎಸ್‌ಸಿಸಿಪಿ ಮತ್ತು ಎಸ್‌ಟಿಪಿ ಯೋಜನೆಯಡಿಯಲ್ಲಿನ ಲಭ್ಯವಿದ್ದ 11 ಸಾವಿರ ಕೋಟಿ ರು.ಗಳನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಮಾರ್ಗಪಲ್ಲಟ ಮಾಡಿರುವುದು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಕೃಷಿ, ತೋಟಗಾರಿಕೆ ವಿಶ್ವ ವಿದ್ಯಾಲಯಗಳಿಗೆ ಈ ಯೋಜನೆಯಡಿಯಲ್ಲಿ ಅನುದಾನ ಕೊರತೆಯಾಗಿರುವುದು ಮುನ್ನೆಲೆಗೆ ಬಂದಿದೆ.

 

ಅನುದಾನ ಕೊರತೆಯಾಗಿರುವ ಕಾರಣ ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ದೊರೆತಿಲ್ಲ. ಪ್ರತಿ ತಿಂಗಳೂ ನೀಡುವ 10 ಸಾವಿರ ರು.ಗಳ ಫೆಲೋಶಿಪ್‌ ದೊರೆತಿಲ್ಲ. ಹೆಚ್ಚುವರಿ ವಸತಿ, ಬೋಜನಾ ವೆಚ್ಚ, ಶೈಕ್ಷಣಿಕ ಶುಲ್ಕ ವಿನಾಯಿತಿ ಇನ್ನಿತರೆ ಸೌಲಭ್ಯಗಳಿಂದ ದಲಿತ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಹೀಗಾಗಿ ಈ ಬೇಡಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಮೂರು ಕೃಷಿ ವಿಶ್ವವಿದ್ಯಾಲಯಗಳಿಗೆ 14.59 ಕೋಟಿ ರು. ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಬೇಕು ಎಂದು ವಿಶ್ವವಿದ್ಯಾಲಯಗಳು  ಸರ್ಕಾರದ ಮೆಟ್ಟಿಲೇರಿವೆ.

 

ಆದರೂ ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಮತ್ತು ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ ಅವರು ಇದುವರೆಗೂ ಈ ಕುರಿತು ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿಲ್ಲ ಎಂದು ಗೊತ್ತಾಗಿದೆ.

 

ಈ ಕುರಿತು ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ವಿ ಅನ್ಬುಕುಮಾರ್‍‌ ಅವರು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್‌ ಪಿ ಮಣಿವಣ್ಣನ್‌ ಅವರಿಗೆ 2023ರ ಅಕ್ಟೋಬರ್‍‌ 18ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು, ಧಾರವಾಡ ಮತ್ತು ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯಗಳಿಗೆ ನೀಡಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಕಡಿಮೆಯಾಗಿದೆ. ಹೀಗಾಗಿ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ವಿಶ್ವವಿದ್ಯಾಲಯಗಳು ಸರ್ಕಾರಕ್ಕೆ ಅರೆ ಸರ್ಕಾರಿ ಪತ್ರ ಬರೆದಿದ್ದವು. ಈ ಪತ್ರವನ್ನಾಧರಿಸಿ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅನ್ಬುಕುಮಾರ್‍‌ ಅವರು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಪಿ ಮಣಿವಣ್ಣನ್‌ ಅವರಿಗೆ ಪತ್ರ ಬರೆದಿರುವುದು ತಿಳಿದು ಬಂದಿದೆ.

 

ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್‌ ಅವರು ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅನ್ಬುಕುಮಾರ್‍‌ ಅವರೊಂದಿಗೆ 2023ರ ನವೆಂಬರ್‍‌ 3ರಂದು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಪತ್ರದಲ್ಲೇನಿದೆ?

 

ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಇತರೆ ಕ್ರಿಯಾ ಯೋಜನೆಗಳನ್ನು ಆದ್ಯತೆ ಮೇಲೆ ಪೂರೈಸಲು 2020-21, 2021-22, 2022-23 ಮತ್ತು 2023-24ನೇ ಸಾಲಿನಲ್ಲಿ ಒದಗಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡಲಾಗಿದೆ. ಆದರೆ ಅನುದಾನದ ಕೊರತೆಯಿಂದ ಪಿಎಚ್‌ಡಿ ಶಿಷ್ಯ ವೇತನ ನೀಡಲು ಸಾಧ್ಯವಾಗಿರುವುದಿಲ್ಲ.

 

ಹೆಚ್ಚುವರಿ ಅನುದಾನವನ್ನು ಒದಗಿಸಿದಲ್ಲಿ ದಲಿತ ಪಿಎಚ್‌ಡಿ ವಿದ್ಯಾರ್ಥಿಗಳು ಕೋರಿರುವಂತೆ ಫೆಲೋಶಿಫ್‌ ಪಾವತಿಸಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಏಳಿಗೆಗೆ ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಎಸ್‌ಎಸ್‌ಪಿ, ಟಿಎಸ್‌ಪಿ ಅಡಿಯ ಎಲ್ಲಾ ಕ್ರಿಯಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಕೃಷಿ ವಿಶ್ವವಿದ್ಯಾಲಯಗಳಿಗೆ ಎಸ್‌ಎಸ್‌ಪಿ, ಟಿಎಸ್‌ಪಿ ಅಡಿಯಲ್ಲಿ 2023-24ನೇ ಸಾಲಿನಲ್ಲಿ 1459.27 ಲಕ್ಷ ರು.ಗಳ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ವಿ ಅನ್ಬುಕುಮಾರ್‍‌ ಅವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಕೃಷಿ ವಿಜ್ಞಾನಳ ವಿಶ್ವವಿದ್ಯಾಲಯಗಳ 2023-24ನೇ ಸಾಲಿನ ಆಯವ್ಯಯದಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣದ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ 86.00 ಲಕ್ಷ ಹಾಗೂ 35.00 ಲಕ್ಷ ಸೇರಿ ಒಟ್ಟು 121.00 ಲಕ್ಷ ರು. ಹಂಚಿಕೆ ಮಾಡಲಾಗಿತ್ತು.

 

ಇದರಲ್ಲಿ 2ನೇ ಕಂತಿನ ಅನುದಾನವೂ ಕೃಷಿ ವಿಶ್ವವಿದ್ಯಾಲಯಗಳಿಗೆ ಬಿಡುಗಡೆ ಮಾಡಲಾಗಿತ್ತು. ಈ ಅನುದಾನವನ್ನು ಕೃಷಿ ವಿಶ್ವವಿದ್ಯಾಲಯಗಳು ಸಂಪೂರ್ಣವಾಗಿ ವೆಚ್ಚ ಮಾಡಿತ್ತು.ಹೀಗಾಗಿ ಪ್ರಸ್ತಕ ಸಾಲಿನಲ್ಲಿ ಬಿಡುಗಡೆಗೆ ಬಾಕಿ ಇರುವ 3ನೇ ಕಂತಿನ ಅನುದಾನವನ್ನು ಹೊರತುಪಡಿಸಿ ಇನ್ನೂ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ ಎಂಬುದು ತಿಳಿದು ಬಂದಿದೆ.

 

ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ವರ್ಷದಿಂದಲೂ ಬಾಕಿ;ಬಡಮಕ್ಕಳ ಶಿಷ್ಯ ವೇತನಕ್ಕೂ ಹಣವಿಲ್ಲವೇ?

/

 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಎಸ್‌ಸಿಎಸ್‌ಪಿ ಟಿಎಸ್‌ಪಿ ಅಡಿಯಲ್ಲಿ 318.28 ಲಕ್ಷ ರು. ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದೆ. ಈ ವಿಶ್ವವಿದ್ಯಾಲಯದಲ್ಲಿ ಸುಮಾರು 582 ಪರಿಶಿಷ್ಟ ಮತ್ತು 136 ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಹೆಚ್ಚುವರಿ ವಸತಿ, ಭೋಜನಾ ವೆಚ್ಚ, ಶೈಕ್ಷಣಿಕ ಶುಲ್ಕ ವಿನಾಯಿತಿ, ಲ್ಯಾಪ್‌ ಟ್ಯಾಪ್‌, ರೆಫರೆನ್ಸ್‌ ಪುಸ್ತಕಗಳೂ, ಪಿಹೆಚ್‌ಡಿ ವಿದ್ಯಾರ್ಥಿಗಳ ಫೆಲೋಶಿಪ್‌, ಶೈಕ್ಷಣಿಕ ಪ್ರವಾಸ ಭತ್ಯೆ ಮತ್ತು ಇನ್ನಿತರೆ ವೆಚ್ಚಗಳನ್ನು ಭರಿಸಲು 318.28 ಲಕ್ಷ ರು.ಗಳ ಹೆಚ್ಚುವರಿ ಅನುದಾನದ ಅವಶ್ಯಕತೆ ಇರುವುದು ಗೊತ್ತಾಗಿದೆ.

 

ಧಾರವಾಡ ಕೃಷಿ ವಿಶ್ವವಿದ್ಯಾಲಯವು 435.55 ಲಕ್ಷ ರು.ಗಳನ್ನು ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇರಿಸಿದೆ. ಈ ವಿಶ್ವವಿದ್ಯಾಲಯವೂ ಸಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ನೀಡುವ ಪ್ರತಿ ತಿಂಗಳು ಸಹಾಯಧನ , ಗ್ರಂಥಾಲಯ ಪುಸ್ತಕ ಹಾಗೂ ಗಣಕೀಕರಣ ವೆಚ್ಚವನ್ನು ಭರಿಸಲು 453.55 ಲಕ್ಷ ರು.ಗಳ ಹೆಚ್ಚುವರಿ ಬೇಡಿಕೆಗಾಗಿ ಮಂಡಿಸಿರುವುದು ತಿಳಿದು ಬಂದಿದೆ.

 

ಕೆಳದಿ ಶಿವಪ್ಪನಾಯಕ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯವೂ ಸಹ 687.44 ಲಕ್ಷ ರು.ಗಳ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇರಿಸಿದೆ. ಈ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಶೈಕ್ಷಣಿಕ ಪ್ರವಾಸ, ವಿದೇಶ ಪ್ರವಾಸ, ಕೋಚಿಂಗ್‌ ಕ್ಲಾಸ್‌, ಸೆಮಿನಾರ್‍‌, ಕೌಶಲ್ಯಾಭಿವೃದ್ಧಿ, ಸಂಶೋಧನಾ ಪ್ರಬಂಧ ತಯಾರಿಸಲು ಸಹಾಯ ಧನ ನೀಡಲು ಎಸ್‌ಸಿಎಸ್‌ಪಿ ಅಡಿಯಲ್ಲಿ 469.34 ಲಕ್ಷ ರು., ಟಿಎಸ್‌ಪಿ ಅಡಿಯಲ್ಲಿ 218.10 ಲಕ್ಷ ರು.ಗಳ ಬೇಡಿಕೆಯನ್ನು ಇರಿಸಿರುವುದು ಗೊತ್ತಾಗಿದೆ.

 

 

‘ಇದಕ್ಕೊಂದು ಸದ್ಯದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಆರ್ಥಿಕ ಇಲಾಖೆ ಜತೆ ಮುಂದಿನ ವಾರದಲ್ಲಿ ಜಂಟಿ ಸಭೆ ನಡೆಸುವ ಬಗ್ಗೆಯೂ ಚರ್ಚಿಸಲಾಗಿದೆ,’ ಎಂದು ಮಣಿವಣ್ಣನ್‌ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

the fil favicon

SUPPORT THE FILE

Latest News

Related Posts