ಸಿಎಂ ಜಂಟಿ ಕಾರ್ಯದರ್ಶಿ ಶಿವಸ್ವಾಮಿ ವಿರುದ್ಧ ಶಿಸ್ತುಕ್ರಮ ಪ್ರಕರಣ; ಬಿಡಿಎ ಬರೆದಿದ್ದ ಪತ್ರವೇ ಸರ್ಕಾರದಲ್ಲಿಲ್ಲ

ಬೆಂಗಳೂರು; ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ನಿವೇಶನವನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಹಂಚಿಕೆ  ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈಗಿನ ಜಂಟಿ ಕಾರ್ಯದರ್ಶಿ  ಬಿ. ಶಿವಸ್ವಾಮಿ ಅವರ ವಿರುದ್ಧ  ಶಿಸ್ತುಕ್ರಮ ಜರುಗಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರು ಮೂರು ವರ್ಷದ ಹಿಂದೆ ಬರೆದಿದ್ದ ಪತ್ರವೇ  ಇಲ್ಲವೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹಿಂಬರಹ ನೀಡಿದೆ.

 

ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಶಿವಸ್ವಾಮಿ ಅವರನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದು  ಅಧಿಕಾರಿಶಾಹಿಯೊಳಗೆ ಚರ್ಚೆಗೆ ಗ್ರಾಸವಾಗಿತ್ತು. ಬಿಡಿಎ ಆಯುಕ್ತರು ಬರೆದಿದ್ದ ಪತ್ರವೇ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿಲ್ಲ ಎಂದು ಹಿಂಬರಹ ನೀಡಿರುವ ಈಗಿನ ಕಾಂಗ್ರೆಸ್‌ ಸರ್ಕಾರವು ಅದನ್ನು ಮುಚ್ಚಿಡುತ್ತಿದೆಯೇ ಎಂಬ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪ ಕಾರ್ಯದರ್ಶಿ-1 ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಬಿ ಶಿವಸ್ವಾಮಿ ಅವರ ವಿರುದ್ಧ ಕರ್ತವ್ಯ ಲೋಪ ಎಸಗಿದ್ದರು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಶಿಸ್ತುಕ್ರಮ ಜರುಗಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು 2020ರ ಜನವರಿ 1ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಕ್ರಮ ಕೈಗೊಳ್ಳಬೇಕಿದ್ದ  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇದೀಗ ಬಿಡಿಎ ಆಯುಕ್ತರ ಪತ್ರವನ್ನು ಕಸದ ಬುಟ್ಟಿಗೆ ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಆಯುಕ್ತರು ಬರೆದಿದ್ದ ಪತ್ರದಲ್ಲೇನಿತ್ತು?

 

ಬಿಡಿಎ ಎಂಪ್ಲಾಯೀಸ್‌ ವೆಲ್‌ಫೇರ್‍‌ ಅಸೋಸಿಯೇಷನ್‌ ಲಿಂಗಧೀರನಹಳ್ಳಿ ಗ್ರಾಮದಲ್ಲಿ ರಚಿಸಿದ್ದ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕೆಂದು ಸಿ ಎ ನಿವೇಶನಗಳನ್ನು ಕಾಯ್ದಿರಿಸಿತ್ತು. ಸಾರ್ವಜನಿಕ ಉದ್ದೇಶಕ್ಕೆಂದು ಮೀಸಲಿಟ್ಟ ನಿವೇಶನ ಎಂದು ತಿಳಿದಿದ್ದರೂ ಸಹ ಲಿಂಗಧೀರನಹಳ್ಳಿ ಬಡಾವಣೆಯಲ್ಲಿ ರಚಿಸಿರುವ ಸಿ ಎ ನಿವೇಶನ ಸಂಖ್ಯೆ 1/ಎ ಹಂಚಿಕೆ ಬಗ್ಗೆ ಮೇಲಾಧಿಕಾರಿಗಳಿಗೆ ಕಡತ ಸಲ್ಲಿಸಿರುತ್ತಾರೆ.

 

ಹಕ್ಕು ಬಾಧ್ಯತಾ ಸಮಿತಿಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದ್ದು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದಾಖಲಿಸಲು ಸೂಚಿಸಲಾಗಿರುತ್ತದೆ. ಈ ಕುರಿತು 2019ರ ಡಿಸೆಂಬರ್‍‌ 31ರಂದು ಶೇಷಾದ್ರಿಪುರಂ ಆರಕ್ಷಕ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿರುತ್ತದೆ.

 

 

ಈ ಹಿನ್ನೆಲೆಯಲ್ಲಿ ಬಿ ಶಿವಸ್ವಾಮಿ, ಕೆಎಎಸ್‌ (ಕಿರಿಯ ಶ್ರೇಣಿ) ಅವರು ಕರ್ತವ್ಯಲೋಪದಲ್ಲಿ ಭಾಗಿದಾರರಾಗಿದ್ದು ಅಧಿಕಾರಿಯವರ ಕೃತ್ಯದಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿರುತ್ತದೆ. ಈ ಅಧಿಕಾರಿಯವರ ವಿರುದ್ಧ ಸರ್ಕಾರದ ಮಟ್ಟದಲ್ಲಿ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಬಿಡಿಎ ಆಯುಕ್ತರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2020ರ ಜನವರಿ 1ರಂದು  ಬರೆದಿದ್ದ ಪತ್ರದಲ್ಲಿ ಕೋರಿದ್ದರು. ಈ ಕುರಿತು ‘ದಿ ಫೈಲ್‌’ 2023ರ ಜುಲೈ 10ರಂದೇ ವರದಿ ಪ್ರಕಟಿಸಿತ್ತು.

ಕರ್ತವ್ಯ ಲೋಪವೆಸಗಿ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಕೆಎಎಸ್‌ ಅಧಿಕಾರಿ, ಈಗ ಸಿಎಂ ಜಂಟಿ ಕಾರ್ಯದರ್ಶಿ

ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ಪತ್ರವು ತನ್ನಲ್ಲಿಲ್ಲ ಎಂದು 2023ರ ಆಗಸ್ಟ್‌ 1ರಂದು ‘ದಿ ಫೈಲ್‌’ಗೆ ಹಿಂಬರಹ ನೀಡಿದೆ.

 

ಹಿಂಬರಹದಲ್ಲೇನಿದೆ?

 

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ /ಆ/ಉಕಾ-1/ಸಿವಿ/763/2019-20 ದಿನಾಂಕ 01-01-2020ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಬಿ ಶಿವಸ್ವಾಮಿ ಕೆಎಎಸ್‌ ಇವರ  ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಂಬಂಧ ಬರೆದಿರುವ ಪತ್ರವನ್ನು ಆಧರಿಸಿ ಇದುವರೆಗೆ ಕೈಗೊಂಡಿರುವ ಕ್ರಮದ ಮಾಹಿತಿ ಒದಗಿಸುವಂತೆ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ತೆರೆದಿರುವ ಸಮಗ್ರ ಕಡತವನ್ನು ನೀಡುವಂತೆ ಕೋರಿರುತ್ತೀರಿ. ಈ ಸಂಬಂಧ ಪರಿಶೀಲಿಸಲಾಗಿ  ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ಈ ಶಾಖೆಯಲ್ಲಿ ಸ್ವೀಕೃತವಾಗಿರುವುದಿಲ್ಲ. ಹಾಗೂ ಸದರಿ ವಿಷಯದ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ಆಗಸ್ಟ್‌ 1ರಂದು ಹಿಂಬರಹ ನೀಡಿದೆ.

 

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಅರೋಪದಡಿಯಲ್ಲಿ ಎಸಿಬಿ ದಾಳಿಗೆ ಒಳಗಾಗಿರುವ  ಅಧಿಕಾರಿಗಳನ್ನೇ  ಉಪ ಮುಖ್ಯಮಂತ್ರಿ  ಡಿ ಕೆ ಶಿವಕುಮಾರ್‌ ಅವರಿಗೆ ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು.

ಆದಾಯಕ್ಕಿಂತ ಶೇ. 207.11ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪಿತ ಅಧಿಕಾರಿ, ಡಿಕೆಶಿಗೆ ತಾಂತ್ರಿಕ ಸಲಹೆಗಾರ

 

 

ಅದೇ ರೀತಿ ಮತ್ತೊಬ್ಬ ಕಳಂಕಿತ ಅಧಿಕಾರಿ   ಬಿ ಎಸ್‌ ಪ್ರಹ್ಲಾದ್‌ ಎಂಬುವರನ್ನು ಬಿಬಿಎಂಪಿಯ ಮಹತ್ತರ ಹುದ್ದೆಗೆ ನೇಮಿಸಲಾಗಿತ್ತು.

 

ಕಾಸಿಗಾಗಿ ಪೋಸ್ಟಿಂಗ್‌ ಆರೋಪ ಬೆನ್ನಲ್ಲೇ ಎಸಿಬಿ ದಾಳಿಗೊಳಗಾಗಿದ್ದ ಮುಖ್ಯಇಂಜಿನಿಯರ್‍‌ಗೆ ಹೊಸ ಹುದ್ದೆ

ಅಲ್ಲದೇ  ಗಣಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರಿಗೆ ಉಪ ಕಾರ್ಯದರ್ಶಿ ಹುದ್ದೆಯಲ್ಲಿರುವ  ಮಂಜುನಾಥ ಆರ್‌ ಬಳ್ಳಾರಿ ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.

 

ಅಕ್ರಮ ಗಣಿಗಾರಿಕೆಯಲ್ಲಿ ಅಕ್ರಮ ಸಂಭಾವನೆ ಪಡೆದ ಆರೋಪಿ ಅಧಿಕಾರಿ, ಈಗ ಗಣಿ ಸಚಿವರ ಆಪ್ತ ಕಾರ್ಯದರ್ಶಿ

 

ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ  ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದರು. ಲೋಕಾಯುಕ್ತ ವರದಿಯನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ತನಿಖೆ ನಡೆಸಲು ಪ್ರತ್ಯೇಕವಾಗಿ ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿತ್ತು.

 

ಆದರೀಗ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಖಾರದಪುಡಿ ಮಹೇಶ್‌ ಎಂಬಾತನಿಂದ ಅಕ್ರಮ ಸಂಭಾವನೆ ಪಡೆದ ಗುರುತರ ಆರೋಪಕ್ಕೆ ಗುರಿಯಾಗಿ ವಿಚಾರಣೆ ಎದುರಿಸುತ್ತಿರುವ ಮಂಜುನಾಥ್‌ ಆರ್‍‌ ಬಳ್ಳಾರಿ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರಿಗೆ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

the fil favicon

SUPPORT THE FILE

Latest News

Related Posts