8,000 ಎಕರೆ ಅರಣ್ಯ ಪ್ರದೇಶ ಕಣ್ಮರೆ;ತನಿಖೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಸಮಿತಿ ರಚನೆ, ಹೈಕೋರ್ಟ್‌ಗೆ ಪತ್ರ

ಬೆಂಗಳೂರು; ಕರ್ನಾಟಕ ಅರಣ್ಯ ಅಭಿವೃದ್ಧಿ  ನಿಗಮಕ್ಕೆ ಹಸ್ತಾಂತರಿಸಿದ್ದ ಅರಣ್ಯ ಪ್ರದೇಶಗಳಲ್ಲಿ  8,000 ಎಕರೆ ಅರಣ್ಯ ಪ್ರದೇಶ ಕಾಣೆಯಾಗಿರುವುದೂ ಸೇರಿದಂತೆ  ಅರಣ್ಯ ಪ್ರದೇಶಗಳ ಒತ್ತುವರಿ,  ಯೋಜನೆಗಳ ವಿಫಲತೆ,  ಅಕ್ರಮಗಳು ಮತ್ತಿತರೆ ದೂರುಗಳ ಕುರಿತು ತಮ್ಮ ಹಂತದಲ್ಲೇ ವಿಚಾರಣೆ ನಡೆಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಹಂತದಲ್ಲೇ ಕ್ಲೀನ್‌ ಚಿಟ್‌ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ಹೀಗಾಗಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ  ದೂರುಗಳ ನೈಜತೆ ಮತ್ತು ವಾಸ್ತವತೆ ತಿಳಿಯುವ ನಿಟ್ಟಿನಲ್ಲಿ  ನಿವೃತ್ತ ಜಿಲ್ಲಾ  ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆಗೆ ಮುಂದಾಗಿರುವ  ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ನಿವೃತ್ತ ಜಿಲ್ಲಾ ನ್ಯಾಯಾಧೀಶರರಗಳ ಹೆಸರು ಮತ್ತು ವಿಳಾಸಗಳ ಪಟ್ಟಿಯನ್ನು ಒದಗಿಸಬೇಕು ಎಂದು  ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‍‌ ಜನರಲ್‌ ಅವರಿಗೆ ಬರೆದಿರುವ ಪತ್ರವು ಮಹತ್ವ ಪಡೆದುಕೊಂಡಿದೆ.

 

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಅರಣ್ಯ ಇಲಾಖೆಯಿಂದ ಹಸ್ತಾಂತರಿಸಿರುವ ಅರಣ್ಯ ಪ್ರದೇಶಗಳ ಪರಭಾರೆ, ನಿಗಮದ ಯೋಜನೆ ಅನುಷ್ಠಾನ ವಿಫಲ, ಅಧಿಕಾರಿ, ನೌಕರರಿಂದ ಅಕ್ರಮಗಳು, ನೌಕರರ ನೇಮಕಾತಿಯಲ್ಲಿ ಅಕ್ರಮ ಸೇರಿದಂತೆ ಮತ್ತಿತರೆ ಆಪಾದನೆಗಳ ಕುರಿತು ಈ ಹಿಂದೆ ನಿಗಮದಲ್ಲಿ ಸೇವೆ ಸಲ್ಲಿಸಿ ವಜಾಗೊಂಡಿರುವ ನೌಕರ  ಎಂ ಪಾಪೇಗೌಡ ಅವರು ನಿಗಮಕ್ಕೆ  ದೂರು ಸಲ್ಲಿಸಿದ್ದರು. ಈ ದೂರುಗಳಲ್ಲಿ ನಿಗಮಕ್ಕೆ ಗೇಣಿ ಗುತ್ತಿಗೆ ಮೇಲೆ ಸರ್ಕಾರದ ಆದೇಶದ ಮೇರೆಗೆ ಹಸ್ತಾಂತರಿಸಿರುವ ಪರಿಭಾವಿತ ಅರಣ್ಯ ಭೂಮಿ ಅನಧಿಕೃತ ಹಂಚಿಕೆ, ಪರಭಾರೆ, ಒತ್ತುವರಿಗೆ ಅವಕಾಶ ಇನ್ನಿತರೆ ಆಪಾದನೆಗಳ ವ್ಯಾಪ್ತಿಯು ಕರ್ನಾಟಕ ಅರಣ್ಯ ಇಲಾಖೆ, ಮೋಜಣಿ ಇಲಾಖೆ, ಕಂದಾಯ ಇಲಾಖೆ ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತಗಳಿಗೆ ಸಂಬಂಧಿಸಿದ್ದವು. ಈ ಪ್ರಕರಣಗಳಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಕ್ಲೀನ್‌ ಚಿಟ್‌ ನೀಡಿದ್ದರು.

 

ಆದರೆ ದೂರುದಾರ ಪಾಪೇಗೌಡ ಅವರು ಈ ಪ್ರಕರಣಗಳಲ್ಲಿ ಸತ್ಯ ಹೊರಬರಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಸರ್ಕಾರಕ್ಕೆ ಸರಣಿ ರೂಪದಲ್ಲಿ ಮನವಿಗಳನ್ನು ಸಲ್ಲಿಸಿದ್ದರು. ಹೀಗಾಗಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‍‌ ಜನರಲ್‌ ಅವರಿಗೆ 2023ರ ಜೂನ್‌ 14ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆದ್ದರಿಂದ ಅಂತಹ ಎಲ್ಲಾ ದೂರುಗಳ ಕುರಿತು ವಿಚಾರಣೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಒಂದು ಸಮಿತಿ ರಚಿಸಲು ಸರ್ಕಾರವು ಸಕ್ಷಮ ಪ್ರಾಧಿಕಾರವಾಗಿರುತ್ತದೆ. ಆದರೆ ನಿಗಮದ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳ ಕುರಿತು ವಿಚಾರಣೆ ನಡೆಸಲು ನಿಗಮವು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಬಹುದು ಎಂದು ನಿಗಮದ ಕಾನೂನು ಸಲಹೆಗಾರರು ಅಭಿಪ್ರಾಯಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ದೂರುಗಳ ನೈಜತೆ ಮತ್ತು ವಾಸ್ತವತೆ ತಿಳಿಯುವ ಸಲುವಾಗಿ ಕೂಲಂಕುಶ ಮತ್ತು ನಿಷ್ಪಕ್ಷಪಾತ ವಿಚಾರಣೆ ನಡೆಸಿ ಸತ್ಯ ಹೊರಬರಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನೇಮಕ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು 2023ರ ಮಾರ್ಚ್‌ 17ರಂದೇ ನಿಗಮಕ್ಕೆ   ಪತ್ರ ಬರೆದಿದ್ದರು. ಇದೀಗ ನಿಗಮವು 2 ತಿಂಗಳ ನಂತರ ಸಮಿತಿ ರಚಿಸಲು ಮುಂದಾಗಿದ್ದು ನಿವೃತ್ತ ನ್ಯಾಯಾಧೀಶರ ಪಟ್ಟಿ ಒದಗಿಸಲು ಹೈಕೋರ್ಟ್‌ ರಿಜಿಸ್ಟ್ರಾರ್‍‌ ಅವರಿಗೆ ಪತ್ರ ಬರೆದಿದೆ.

 

 

ಕರ್ನಾಟಕ ಅರಣ್ಯ ಇಲಾಖೆಯಿಂದ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರವಾಗಿರುವ ಹೆಕ್ಟೇರ್‌ಗಟ್ಟಲೇ ಅರಣ್ಯ ಪ್ರದೇಶಗಳು ಸದ್ದಿಲ್ಲದೇ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಆರೋಪಗಳು ಕೇಳಿ ಬಂದಿದ್ದವು.  ಪರಿಭಾವಿತ ಅರಣ್ಯ ಪ್ರದೇಶ ಎಂದು ತಿಳಿದಿದ್ದರೂ ಕೂಡ ಈ ಭೂಮಿಯು ಗೋಮಾಳ ಎಂದು ಅಧಿಕಾರಿಗಳು ವರದಿಗಳನ್ನು ನೀಡಿದ್ದರು.  ಈ ಕುರಿತು ಸರ್ಕಾರಕ್ಕೆ ಹಲವು ಬಾರಿ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದರೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು  ನಿರ್ಲಕ್ಷ್ಯವಹಿಸಿತ್ತು. ಹೀಗಾಗಿ ಪಾಪೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದರು. ಈ ಮನವಿ ಆಧರಿಸಿ ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಡಾ ವೆಂಕಟೇಶಯ್ಯ ಅವರು ಅರಣ್ಯ, ಪರಿಸರ ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ 2023ರ ಜೂನ್‌ 5ರಂದು ಪತ್ರಮುಖೇನ ನಿರ್ದೇಶಿಸಿದ್ದರು.

 

 

ಇಂತಹ ಪ್ರಕರಣಗಳನ್ನು ಬೆನ್ನೆತ್ತಿರುವ ಎಂ ಪಾಪೇಗೌಡ ಅವರು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ಮೂಲಕ ವಿಚಾರಣೆ ನಡೆಸಬೇಕು ಎಂದು ಪದೇಪದೇ ಸರ್ಕಾರಕ್ಕೆ ಪತ್ರ ಬರೆದಿದ್ದರಿಂದಾಗಿ ಅನಿವಾರ್ಯವಾಗಿ ನಿಗಮವು  ಅರಣ್ಯ ಪ್ರದೇಶಗಳ ಪರಭಾರೆ, ನೆಡುತೋಪುಗಳ ಕಣ್ಮರೆ ಸೇರಿದಂತೆ ವಿವಿಧ ರೀತಿಯ ಅಕ್ರಮಗಳ ಕುರಿತು ಸಲ್ಲಿಕೆಯಾಗಿರುವ ದೂರಿನ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಿವೃತ್ತ ನ್ಯಾಯಾಧೀಶರರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ 2022ರ ನವೆಂಬರ್‌ 16ರಂದು ಪತ್ರ ಬರೆದಿದ್ದರು.  ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಚಿಕ್ಕಮಗಳೂರು ವಿಭಾಗದ ಬ್ಯಾಗಡಿಹಳ್ಳಿ ಸರ್ವೆನಂಬರ್‌ 32ರಲ್ಲಿನ ನಿಗಮಕ್ಕೆ ಹಸ್ತಾಂತರಿಸಿರುವ 192.00 ಎಕರೆ ಒಟ್ಟು ವಿಸ್ತೀರ್ಣದಲ್ಲಿ 52. ಎಕರೆ ವಿಸ್ತೀರ್ಣದ ಭೂಮಿಯನ್ನು ತಲಾ 4 ಎಕರೆಯಂತೆ ಒಟ್ಟು 13 ಮಂದಿಗೆ ಹಂಚಿಕೆ ಮಾಡಲಾಗಿದೆ. ಇದು ಪರಿಭಾವಿತ ಅರಣ್ಯ ಪ್ರದೇಶ ಎಂದು ತಿಳಿದಿದ್ದರೂ ಕೂಡ ಈ ಭೂಮಿಯು ಗೋಮಾಳ ಎಂದು ವರದಿ ನೀಡಲಾಗಿದೆ. ಮತ್ತು ಈ ಪ್ರದೇಶದಲ್ಲಿ ಮರಗಳನ್ನು ಬೆಳೆಸುವುದರಲ್ಲಿ ಅಕ್ರಮ ನಡೆದಿದೆ ಎಂದು ಅರಣ್ಯ ಅಭಿವೃದ್ದಿ ನಿಗಮದ ನೌಕರರಾಗಿದ್ದ ಪಾಪೇಗೌಡ ಅವರು ದೂರಿನಲ್ಲಿ ವಿವರಿಸಿದ್ದರು.

 

ಅದೇ ರೀತಿ ಬೆಂಗಳೂರು ವಿಭಾಗ ಮತ್ತು ಕೋಲಾರ ಪ್ರಾಂತೀಯ ವಿಭಾಗ ವ್ಯಾಪ್ತಿಯ ಶ್ರೀನಿವಾಸಪುರ ಘಟಕದಲ್ಲಿನ ಕದರೀಪುರ ಸರ್ವೆ ನಂಬರ್‌ 270.42 ಹೆಕ್ಟೇರ್‌ ವಿಸ್ತೀರ್ಣದ ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದೆ. ಕದರೀಪುರ ನೆಡುತೋಪಿನ ಬದಿಗಿರಿರುವ ಮದನಹಳ್ಳಿ ಗ್ರಾಮದ ಸರ್ವೆ ನಂಬರ್‌ 124 ಮತ್ತು 125ರಲ್ಲಿ ನಿಗಮದ ವತಿಯಿಂದ ಬೆಳೆಸಲಾಗಿರುವ ನೆಡುತೋಪಿನಲ್ಲಿ 50 ಎಕರೆ ವಿಸ್ತೀರ್ಣ ಪ್ರದೇಶ ಒತ್ತುವರಿಯಾಗಿದೆ ಎಂದು ಸರ್ಕಾರ ಮತ್ತು ಹಿಂದಿನ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ  ಗಮನಕ್ಕೆ ತಂದಿದ್ದರು.

 

ನಿಗಮಕ್ಕೆ ಹಸ್ತಾಂತರಿಸಿರುವ ಅರಣ್ಯ ಪ್ರದೇಶಗಳಲ್ಲಿ 8,000 ಎಕರೆ ಅರಣ್ಯ ಪ್ರದೇಶ ಕಾಣೆಯಾಗಿದೆ ಎಂದು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ತಪಾಸಣೆ ನಡೆಸಿದ ಸಿಎಜಿ ವರದಿಯಲ್ಲಿ ಸೇರಿಸಲಾಗಿದೆ. ಇದರ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದರು. ಈ ಕುರಿತು ‘ದಿ ಫೈಲ್‌’ 2022ರ ಡಿಸೆಂಬರ್‍‌ 3ರಂದು ವರದಿ ಪ್ರಕಟಿಸಿತ್ತು.

 

ಖಾಸಗಿ ವ್ಯಕ್ತಿಗಳಿಗೆ ಅರಣ್ಯ ಪ್ರದೇಶ ಪರಭಾರೆ ಪ್ರಕರಣ; ಡೀಮ್ಡ್‌ ಅರಣ್ಯವಾಗಿದ್ದರೂ ಗೋಮಾಳವೆಂದು ವರದಿ

 

‘ಈ ಎಲ್ಲಾ ಪ್ರಕರಣಗಳಲ್ಲಿ ನೈಜತೆ ಮತ್ತು ವಾಸ್ತವತೆಯನ್ನು ತಿಳಿಯುವ ಸಲುವಾಗಿ ಕೂಲಂಕುಷ ಮತ್ತು ನಿಷ್ಪಕ್ಷಪಾತ ವಿಚಾರಣೆ ನಡೆಸಿ ಸತ್ಯ ಹೊರಬರಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಒಂದು ಸಮಿತಿಯನ್ನು ನೇಮಕ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು,’ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅರಣ್ಯ ಪಡೆಯ ಮುಖ್ಯಸ್ಥರೂ ಅಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಪತ್ರದಲ್ಲಿ ಕೋರಿದ್ದರು.

the fil favicon

SUPPORT THE FILE

Latest News

Related Posts