ಪತ್ರಕರ್ತರಿಗೆ ಆಮಿಷ; ಸಿಎಂಗೆ ಬರೆದ ಪತ್ರವನ್ನು ಗಡುವು ಮೀರಿದರೂ ಒದಗಿಸದೇ ಮುಚ್ಚಿಟ್ಟ ಸಚಿವಾಲಯ

ಬೆಂಗಳೂರು; ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್‌ ಪಾಗೋಜಿ ಎಂಬುವರು ದೀಪಾವಳಿ ಹಬ್ಬದ ಸೋಗಿನಲ್ಲಿ ಸ್ವೀಟ್‌ ಬಾಕ್ಸ್‌ನೊಂದಿಗೆ 1 ಲಕ್ಷ ರು. ನಗದು ನೀಡಿದ್ದನ್ನು ಖಂಡಿಸಿ ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಸಿಇಒ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಆರ್‌ಟಿಐ ಅಡಿಯಲ್ಲಿ ಗಡುವು ಮೀರಿದರೂ ಮುಖ್ಯಮಂತ್ರಿಗಳ ಸಚಿವಾಲಯವು ಒದಗಿಸಿಲ್ಲ.

 

ದೀಪಾವಳಿ ಗಿಫ್ಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಬರೆದಿದೆ ಎನ್ನಲಾದ ಪತ್ರವನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ‘ದಿ ಫೈಲ್‌’ 2022ರ ಅಕ್ಟೋಬರ್‌ 28ರಂದು ಅರ್ಜಿ ಸಲ್ಲಿಸಿತ್ತು. ಅರ್ಜಿ ಸಲ್ಲಿಸಿದ  30 ದಿನಗಳಾದರೂ ಪತ್ರವನ್ನೂ ಒದಗಿಸಿಲ್ಲ ಮತ್ತು ಈ ಸಂಬಂಧ ಯಾವುದೇ ಹಿಂಬರಹವನ್ನೂ ನೀಡಿಲ್ಲ.

 

ಅರ್ಜಿ ಸಲ್ಲಿಸಿದ ದಿನಾಂಕದಿಂದ ಒಂದು ತಿಂಗಳ ಒಳಗೇ ಮಾಹಿತಿ ಇಲ್ಲವೇ ಮಾಹಿತಿ ಸಂಬಂಧ ಹಿಂಬರಹವನ್ನು ಒದಗಿಸಬೇಕು. ಆದರೆ ಮುಖ್ಯಮಂತ್ರಿಗಳ ಸಚಿವಾಲಯವು ಮಾಹಿತಿ ನೀಡುವಲ್ಲಿ ವಿಫಲವಾಗಿದೆ.

 

ಆರ್‌ಟಿಐ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿ ಪ್ರತಿ

 

ಆದರೆ ದೀಪಾವಳಿ ಗಿಫ್ಟ್‌ ಕುರಿತಾಗಿ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಸಂಸ್ಥೆಯು ಬರೆದಿದೆ ಎನ್ನಲಾದ ಪತ್ರದ ಕುರಿತು ಯಾವುದೇ ಮಾಹಿತಿ ಒದಗಿಸದಿರುವುದು ಸರ್ಕಾರವು ಪತ್ರವನ್ನು ಮುಚ್ಚಿಡುತ್ತಿದೆಯೇ ಎಂಬ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

 

ಪೆಂಡಿಂಗ್‌ ಇಡಲು ಸೂಚನೆ?

 

ಈ ಕುರಿತು ‘ದಿ ಫೈಲ್‌’ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸಿರುವ ಅರ್ಜಿಯನ್ನು ಮೇಲಾಧಿಕಾರಿಗಳು ಪೆಂಡಿಂಗ್‌ ಇಡಲು ಹೇಳಿದ್ದಾರೆ,’ ಎಂದು ಸೂಚಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ನೀಡಿದ ಸಂದರ್ಭದಲ್ಲಿ ನಗದು ಹಣ ನೀಡಲಾಗಿತ್ತು ಎಂಬ ಸುದ್ದಿಯನ್ನು ಪೀಪಲ್ ಮೀಡಿಯಾ ಹೊರಗೆಡವಿತ್ತು. ಇದು ಮಾಧ್ಯಮ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಸಂದರ್ಭದಲ್ಲೇ ಪ್ರಜಾವಾಣಿ ಮುಖ್ಯ ವರದಿಗಾರ ವೈ ಗ ಜಗದೀಶ್‌ ಎಂಬುವರು ವಾಟ್ಸಾಪ್‌ ಗ್ರೂಪ್‌ವೊಂದರಲ್ಲಿ ನೀಡಿದ್ದರು ಎನ್ನಲಾದ ಸ್ಪಷ್ಟೀಕರಣವನ್ನು ಆಧರಿಸಿ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು.

 

ಸ್ಪಷ್ಟೀಕರಣದಲ್ಲಿ ಏನಿತ್ತು?

 

‘ದುಡ್ಡು ಕಳಿಸಿದ್ದು ಹೌದು. ಆದರೆ ದುಡ್ಡು ಎಷ್ಟಿತ್ತೆಂದು ನಾನು ನೋಡಿಲ್ಲ. ದುಡ್ಡಿರುವುದು ಗಮನಕ್ಕೆ ಬಂದ ಕೂಡಲೇ ತಲುಪಿಸಿದವರಿಗೆ ವಾಪಸ್‌ ಮಾಡಲಾಗಿದೆ. ಅದರ ಬಗ್ಗೆ ಸಿಇಓ ಕೇಳಿದ ನಂತರ ನಾನು ವಾಪಸ್‌ ಮಾಡಿದೆನೆಂಬುದು ನಿಜವಲ್ಲ. ಸಿಇಓ ಮತ್ತು ಸಂಪಾದಕರಿಗೆ ಎಲ್ಲ ಮಾಹಿತಿ ನೀಡಲಾಗಿದೆ. ಸಿಎಂಗೂ ಲಿಖಿತ ಪತ್ರ ಬರೆದು ಗಂಭೀರವಾಗಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಅವರು ಸಾರಿ ಕೇಳಿಯೂ ಆಗಿದೆ,’ ಎಂದು ಪ್ರೆಸ್‌ಕ್ಲಬ್‌ ಕೂಟ ಹೆಸರಿನಲ್ಲಿರುವ ವಾಟ್ಸಾಪ್‌ ಗ್ರೂಪ್‌ವೊಂದರಲ್ಲಿ ವೈ ಗ ಜಗದೀಶ್‌ ಅವರ ಸ್ಪಷ್ಟನೆ ಎಂದು ಹಿರಿಯ ಪತ್ರಕರ್ತರೊಬ್ಬರು ಕಳಿಸಿದ್ದರು.

 

ಈ ಸ್ಪಷ್ಟನೆಯಲ್ಲಿಯೂ ಯಾರಿಗೆ ಹಣ ವಾಪಸ್‌ ಮಾಡಲಾಗಿದೆ ಎಂಬ ಮಾಹಿತಿ ಇರಲಿಲ್ಲ. ಸಿಇಒ ಮತ್ತು ಸಂಪಾದಕರಿಗೆ ಮಾಹಿತಿ ನೀಡಲಾಗಿದೆ ಎಂಬ ಮಾಹಿತಿಯು ಸ್ಪಷ್ಟನೆಯಲ್ಲಿದ್ದರೂ ಸಂಸ್ಥೆಯ ಸಿಇಒ ಮತ್ತು ಸಂಪಾದಕರೂ ಇದುವರೆಗೂ ಖಚಿತಪಡಿಸಿಲ್ಲ. ವೈ ಗ ಜಗದೀಶ್‌ ಅವರು ನೀಡಿದ್ದಾರೆ ಎನ್ನಲಾದ ಸ್ಪಷ್ಟೀಕರಣದ ಸ್ಕ್ರೀನ್‌ ಶಾಟ್‌ನ್ನೂ ಲಗತ್ತಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌ ಲೋಕಾಯುಕ್ತ ಪೊಲೀಸ್‌ ಎಸ್ಪಿ ತುಳಸಿಗೇರಿ ಅವರಿಗೆ   ಈಗಾಗಲೇ ದೂರು ಸಲ್ಲಿಸಿದೆ.

 

ದೂರಿನಲ್ಲೇನಿತ್ತು?

 

ರಾಜ್ಯದ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ಮುಖ್ಯಮಂತ್ರಿ ಕಚೇರಿಯು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಅವರ ಮೂಲಕ ನಗದು ಹಣವನ್ನು ನೀಡಲಾಗಿದೆ. ವಿಶ್ವಸನೀಯ ಮೂಲಗಳ ಪ್ರಕಾರ ಡೆಕ್ಕನ್‌ ಹೆರಾಲ್ಡ್‌ನ ಮುಖ್ಯ ವರದಿಗಾರ ಭರತ್‌ ಜೋಷಿ ಅವರಿಗೆ ತಲುಪಿಸಿದ್ದ ಸ್ವೀಟ್‌ ಬಾಕ್ಸ್‌ನಲ್ಲಿಯೇ 1 ಲಕ್ಷ ರು. ನಗದನ್ನು ತಲುಪಿಸಲಾಗಿತ್ತು. ಇದು ಅವರ ಗಮನಕ್ಕೆ ಬಂದ ನಂತರ ಡೆಕ್ಕನ್‌ ಹೆರಾಲ್ಡ್‌ನ ಸಂಪಾದಕರು ಮತ್ತು ಸಿಇಒ ಅವರ ಗಮನಕ್ಕೆ ತಂದು ಅವರ ಸೂಚನೆಯಂತೆ ಹಣವನ್ನು ಹಿಂದಿರುಗಿಸಿದ್ದಾರೆ.

 

ಅಲ್ಲದೇ ಪ್ರಜಾವಾಣಿಯ ಮುಖ್ಯ ವರದಿಗಾರ ವೈ ಗ ಜಗದೀಶ್‌ ಎಂಬುವರಿಗೂ ಹಣ ತಲುಪಿಸಲಾಗಿತ್ತು. ಈ ಬಗ್ಗೆ ಖುದ್ದು ವೈ ಗ ಜಗದೀಶ್‌ ಅವರೇ ಹಣ ಪಡೆದಿದ್ದನ್ನು ಖಚಿತಪಡಿಸಿ ಒಪ್ಪಿಕೊಂಡಿದ್ದರು. ಇವರೂ ಸಹ ಸಂಸ್ಥೆಯ ಸಿಇಒ ಮತ್ತು ಸಂಪಾದಕರ ಗಮನಕ್ಕೆ ತಂದು ಹಣವನ್ನು ಹಿಂದಿರುಗಿಸಿದ್ದರು. ಅಲ್ಲದೇ ವೈ ಗ ಜಗದೀಶ್‌ ಅವರೇ ಒಪ್ಪಿಕೊಂಡಿರುವಂತೆ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಸಂಸ್ಥೆಯಿಂದ ಖಂಡನಾ ಪತ್ರವನ್ನು ಬರೆಯಲಾಗಿದೆ. ಮತ್ತು ಇದಕ್ಕೆ ಮುಖ್ಯಮಂತ್ರಿ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ.

 

ಮುಖ್ಯಮಂತ್ರಿ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ, ಕೆಟ್ಟ ಆಡಳಿತದ ಕುರಿತು ಪತ್ರಿಕೆಯಲ್ಲಿ ಪ್ರಕಟಿಸದಂತೆ ಹಣ ನೀಡಲಾಗಿದೆ ಎಂಬುದಕ್ಕೆ ಪುಷ್ಠಿ ನೀಡಿದಂತಾಗಿದೆ. ಮುಖ್ಯಮಂತ್ರಿ ಕಚೇರಿಯೇ ನೇರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿರುವುದು ಅನೈತಿಕವಾದದ್ದಾಗಿದೆ. ಅಲ್ಲದೇ ಮಾಧ್ಯಮ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ಸರ್ಕಾರದ ಪರವಾಗಿ ಇರುವಂತೆ ನೋಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ವಿವರಿಸಿತ್ತು.

 

ಈ ಪ್ರಕರಣವನ್ನು ಬೆನ್ನೆತ್ತಿರುವ ಜನಾಧಿಕಾರ ಸಂಘರ್ಷ ಪರಿಷತ್‌, ಲಂಚಮುಕ್ತ ಕರ್ನಾಟಕ ವೇದಿಕೆ ಮತ್ತು ನೈಜಹೋರಾಟಗಾರರ ವೇದಿಕೆಯು ಈಗಾಗಲೇ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದೂರು ದಾಖಲಿಸಿದೆ. ದೂರು ದಾಖಲಿಸಿ ತಿಂಗಳಾಗಿದ್ದರೂ ಯಾರೊಬ್ಬರ ಮೇಲೂ ಎಫ್‌ಐಆರ್‌ ದಾಖಲಿಸಿಲ್ಲ. ಪ್ರಕರಣ ಸಂಬಂಧ ಜನಾಧಿಕಾರ ಸಂಘರ್ಷ ಪರಿಷತ್‌ ಮತ್ತಷ್ಟು ಸಾಕ್ಷ್ಯಗಳನ್ನು ಒದಗಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts