ಕೋಮು ದ್ವೇಷ ; ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲೇ 43 ಕೇಸು ಹಿಂಪಡೆದಿತ್ತು ಬಿಜೆಪಿ ಸರ್ಕಾರ

ಬೆಂಗಳೂರು; ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ದಾಂಧಲೆ, ಗಲಭೆ ಎಬ್ಬಿಸುವ ಮೂಲಕ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟವುಂಟು ಮಾಡಿ ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿರುವ ಹಲವು ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ವಿಚಾರಣೆಯಿಂದಲೇ ಹಿಂಪಡೆದುಕೊಳ್ಳುವ ಪರಿಪಾಠವನ್ನು ಬಿಜೆಪಿ ಸರ್ಕಾರವೂ ಚಾಚೂ ತಪ್ಪದೆ ಮುಂದುವರೆಸಿದೆ.

‘ನಿಮ್ಮ ಮೇಲೆ ಯಾವುದೇ ಕ್ರಿಮಿನಲ್‌ ಕೇಸ್‌ ಹಾಕಿದ್ರೂ ಎಲ್ಲವನ್ನೂ ತೆಗೆದು ಹಾಕುತ್ತೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ವಿಶ್ವ ಹಿಂದೂ ಪರಿಷತ್‌ ಮುಖಂಡರಿಗೆ ನೀಡಿರುವ ಭರವಸೆ ಮಾತುಗಳು ವೈರಲ್‌ ಆಗಿರುವ ಬೆನ್ನಲ್ಲೇ ಪ್ರಚೋದನಾಕಾರಿ ಭಾಷಣ, ಕೋಮು ದ್ವೇಷ ಹಬ್ಬಿಸಲು ಯತ್ನ, ಟಿಪ್ಪು ಜಯಂತಿ ಸಂದರ್ಭದಲ್ಲಿ ನಡೆದ ಗಲಭೆ, ಪರೇಶ್‌ ಮೇಸ್ತಾ ಪ್ರಕರಣ ಸೇರಿದಂತೆ ಹಿಂಪಡೆದುಕೊಂಡಿದ್ದ ಹಲವು ಗಂಭೀರ ಪ್ರಕರಣಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

ಪೊಲೀಸ್‌ ಇಲಾಖೆ ಸೂಚಿಸಿದ್ದ ಅಸಮ್ಮತಿಯನ್ನು ಬದಿಗೆ ಸರಿಸಿದ್ದ ಬಿಜೆಪಿ ಸರ್ಕಾರ ಈ ಎಲ್ಲಾ 43 ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂಪಡೆದುಕೊಂಡಿತ್ತು. ಅಭಿಯೋಜನೆಯಿಂದ ಪ್ರಕರಣಗಳನ್ನು ಹಿಂಪಡೆದುಕೊಂಡಿದ್ದ ಸರ್ಕಾರದ ನಿರ್ಧಾರದಿಂದ ಹಲವು ಗಂಭೀರ ಆರೋಪಗಳಿಗೆ ಗುರಿಯಾಗಿದ್ದ ಆರೋಪಿಗಳಿಗೆ ಕುಮ್ಮಕ್ಕು ಕೊಟ್ಟಂತಾಗಿತ್ತು.

ಬಿಜೆಪಿ ಶಾಸಕರು ಸಲ್ಲಿಸಿದ್ದ ಪ್ರಸ್ತಾವನೆ, ಮನವಿಗಳಿಗೆ ಮನ್ನಣೆ ನೀಡಿರುವ ಗೃಹ ಇಲಾಖೆ, ತನಿಖೆಯಲ್ಲಿರುವ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆದುಕೊಂಡಿತ್ತು. ಕೇವಲ ಬಿಜೆಪಿ ಸರ್ಕಾರ ಮಾತ್ರವಲ್ಲ ಹಿಂದಿನ ಸರ್ಕಾರಗಳು ಹಲವು ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆದುಕೊಂಡಿರುವ ನಿದರ್ಶನಗಳ ಸಂಖ್ಯೆ ಸಾಕಷ್ಟಿವೆ.

ಕೆಲ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆಯುವ ಸಂಬಂಧ ‘ಪ್ರಕರಣಗಳಲ್ಲಿ ವ್ಯತ್ಯಾಸವಿದೆ’ ಎಂದು ಪೊಲೀಸ್‌ ಮಹಾನಿರ್ದೇಶಕರು ಅಭಿಪ್ರಾಯ ನೀಡಿದ್ದರೂ ಅಂತಹ ಪ್ರಕರಣಗಳನ್ನೂ ರಾಜ್ಯ ಬಿಜೆಪಿ ಸರ್ಕಾರ ವಿಚಾರಣೆಯಿಂದ ಹಿಂಪಡೆದಿರುವುದು ದಾಖಲೆಯಿಂದ ತಿಳಿದು ಬಂದಿದೆ. ಈ ಕುರಿತಾದ ದಾಖಲೆಗಳನ್ನಾಧರಿಸಿ ‘ದಿ ಫೈಲ್‌’ ಮಾರ್ಚ್‌ 14ರಂದೇ  ವರದಿ ಪ್ರಕಟಿಸಿತ್ತು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 4 ತಿಂಗಳಲ್ಲಿ ಒಟ್ಟು 43 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದವು. ಕೆಲವು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ತನಿಖೆ ಮುಂದುವರೆಯುತ್ತಿರುವ ಮಧ್ಯೆಯೇ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆದಿತ್ತು.

ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವ ಪ್ರಸ್ತಾವನೆಗಳ ಪೈಕಿ ಮಂಗಳೂರಿನ ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ ಪ್ರಕರಣವೂ ಸೇರಿದೆ. ಇನ್ನುಳಿದಂತೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರ ವಿರುದ್ಧದ ಪ್ರಕರಣಗಳೂ ಇದ್ದವು.

ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವವರ ಪೈಕಿ ಬಿಜೆಪಿ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

ಸಚಿವ ಸಿ ಟಿ ರವಿ, ಪ್ರಭು ಬಿ ಚವ್ಹಾಣ, ಕೆ ಜಿ ಬೋಪಯ್ಯ, ಸುನೀಲ್ ಬಿ ನಾಯ್ಕ, ಸಿ ಎಂ ಉದಾಸಿ, ರೂಪಾಲಿ ನಾಯ್ಕ, ಡಿ ವೇದವ್ಯಾಸ ಕಾಮತ್, ಕಳಕಪ್ಪ ಜಿ ಬಂಡಿ, ಅರಗ ಜ್ಞಾನೇಂದ್ರ, ನೆಹರು ಓಲೆಕಾರ, ಹರೀಶ್ ಪೂಂಜಾ, ಎ ಎಸ್ ಜಯರಾಮ್, ಕರಡಿ ಸಂಗಣ್ಣ, ಪರಣ್ಣ ಈಶ್ವರಪ್ಪ ಮುನವಳ್ಳಿ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಯು ಬಿ ಬಣಕಾರ, ಅರವಿಂದ ಚಂದ್ರಕಾಂತ ಬೆಲ್ಲದ ಸೇರಿದಂತೆ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯಲು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ಗೊತ್ತಾಗಿದೆ.

ವಿಧಾನಪರಿಷತ್ ಸದಸ್ಯ ರವಿಕುಮಾರ್ ಮತ್ತು ಎಸ್ ಅಂಗಾರ ಅವರು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಸಂಚಾಲಕ ಜಗದೀಶ್ ಕಾರಂತ ವಿರುದ್ಧದ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆಯಬೇಕು ಎಂದು 2019ರ ಅಕ್ಟೋಬರ್ 30ರಂದು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂಬ ಅಂಶ ದಾಖಲೆಯಿಂದ ತಿಳಿದು ಬಂದಿದೆ.

ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ 2019ರ ನವೆಂಬರ್ 26, ಡಿಸೆಂಬರ್ 6 ಮತ್ತು 12ರಂದು ಪೊಲೀಸ್ ಇಲಾಖೆ ತನ್ನ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಿತ್ತು.

ಜಗದೀಶ್ ಕಾರಂತ್ ವಿರುದ್ಧ ಪುತ್ತೂರಿನಲ್ಲಿ ಕಳೆದ ವರ್ಷ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಕೋಮು ಗಲಭೆ ನಡೆಸುವುದಾಗಿ ಪ್ರಚೋದನಕಾರಿ ಭಾಷಣ ಮಾಡಿ ಬೆದರಿಕೆ ಹಾಕಿದ್ದ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.

ಜಗದೀಶ್ ಕಾರಂತ್ ವಿರುದ್ಧ ವಿವಿಧ ಧರ್ಮದ ಜನರ ನಡುವೆ ದ್ವೇಷ ಬಿತ್ತುವಂತಹ ಭಾಷಣ ಮಾಡಿರುವುದು (ಐಪಿಸಿ ಸೆಕ್ಷನ್ 505(1)ಸಿ ), ಕೋಮು ದ್ವೇಷ ಹಬ್ಬಿಸಲು ಯತ್ನಿಸಿರುವುದು, ಜನಾಂಗ, ಧರ್ಮ, ಜಾತಿ ಆಧಾರದಲ್ಲಿ ಜನರ ನಡುವೆ ದ್ವೇಷ ಬಿತ್ತಲು ಯತ್ನ (ಐಪಿಸಿ ಸೆಕ್ಷನ್ 505(2) ಭಾಷಣ, ಸಂಜ್ಞೆ ಅಥವಾ ದೃಶ್ಯಾವಳಿಗಳ ಮೂಲಕ ಕೋಮು ದ್ವೇಷ ಹಬ್ಬಿಸಲು ಯತ್ನಿಸಿರುವುದು (ಐಪಿಸಿ ಸೆಕ್ಷನ್ 153(ಎ) ಮತ್ತು ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಚಿವ ಸಿ ಟಿ ರವಿ ಅವರು ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯಬೇಕು ಎಂದು 2019ರ ಸೆ.9ರಂದು ಪತ್ರ ಬರೆದಿದ್ದರು.

ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರು ದತ್ತಪೀಠ ಜಯಂತಿ ಮತ್ತಿತರ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರ ಪ್ರತಿಭಟನೆ ಸಂದರ್ಭದಲ್ಲಿ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಸಿ ಟಿ ರವಿ, 2019ರ ಸೆ. 26ರಂದು ಪತ್ರ ಬರೆದಿದ್ದರು.

ಬಿಜೆಪಿಯ ಮತ್ತೊಬ್ಬ ಶಾಸಕ ಸುನೀಲ್ ಬಿ ನಾಯ್ಕ ಅವರು ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಹಾಗೂ ಇತರರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯಬೇಕು ಎಂದು 2019ರ ಆಗಸ್ಟ್ 14ರಂದು ಬರೆದಿದ್ದ ಪತ್ರಕ್ಕೆ 2019ರ ಡಿಸೆಂಬರ್ 3ರಂದು ಡಿಜಿ,ಐಜಿಪಿ ಅವರ ಅಭಿಪ್ರಾಯವು ಸರ್ಕಾರಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ.

2017ರ ಡಿಸೆಂಬರ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪರೇಶ್ ಮೇಸ್ತಾ ಎಂಬ ಯುವಕನ ಸಾವಿನ ಪ್ರಕರಣದಲ್ಲಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣವನ್ನು ಹಿಂಪಡೆಯುವ ಕುರಿತು ಶಾಸಕಿ ರೂಪಾಲಿನಾಯ್ಕ ಅವರು 2019ರ ಜುಲೈ 29ರಂದು ಗೃಹ ಇಲಾಖೆಗೆ ಪತ್ರ ಬರೆದಿದ್ದರು.

ಆದರೆ ‘ಪ್ರಕರಣಗಳ ವ್ಯತ್ಯಾಸವಿದೆ,’ ಎಂದು ಡಿಜಿ ಮತ್ತು ಐಜಿಪಿ ಅವರು ಒಳಾಡಳಿತ ಇಲಾಖೆಗೆ ಅಭಿಪ್ರಾಯವನ್ನು ರವಾನಿಸಿದ್ದರು. ಪ್ರಕರಣಗಳಲ್ಲಿ ವ್ಯತ್ಯಾಸವಿದ್ದರೂ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆದಿತ್ತು.

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಶಾಲಾ ಬಾಲಕಿ ಕು.ನಂದಿತ ಸಾವಿನ ಕುರಿತು ತನಿಖೆಗೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅವರು 2019ರ ಸೆ.9ರಂದು ಪತ್ರ ಬರೆದಿದ್ದರು. ಈ ಪ್ರಕರಣ ಸಂಬಂಧ ಡಿಜಿ, ಐಜಿಪಿ ಅವರು ಯಾವುದೇ ಅಭಿಪ್ರಾಯವನ್ನು ನೀಡಿರಲಿಲ್ಲ ಎಂದು ಗೊತ್ತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಗೋರಕ್ಷಕರ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಶಾಸಕ ಹರೀಶ್ ಪೂಂಜಾ ಅವರು 2019ರ ಅಕ್ಟೋಬರ್ 17ರಂದು ಪತ್ರ ಬರೆದಿದ್ದರೆ, ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು 2019ರ ಅಕ್ಟೋಬರ್ 19ರಂದು, ಹಿರೆಕೆರೂರು ಮತ್ತು ಹಂಸಭಾವಿಯಲ್ಲಿ ದಾಖಲಾಗಿದ್ದ ಗಣೇಶ ಹಬ್ಬದ ಸಂದರ್ಭದಲ್ಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಬಿಜೆಪಿಯ ಮಾಜಿ ಶಾಸಕ ಯು ಬಿ ಬಣಕಾರ ಅವರು 2019ರ ಅಕ್ಟೋಬರ್ 17ರಂದು ಪತ್ರ ಬರೆದಿದ್ದರು.

ಇನ್ನು ಟಿಪ್ಪು ಜಯಂತಿ ಆಚರಣೆ ಸಂಬಂಧ 2015ರಿಂದ 2018ರವರೆಗೆ ದಾಖಲಾದ ಅಪರಾಧ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಶಾಸಕ ಕೆ ಜಿ ಬೋಪಯ್ಯ ಅವರು ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ‘ಪ್ರಕರಣಗಳ ವ್ಯತ್ಯಾಸವಿದೆ,’ ಎಂದು 2019ರ ಅಕ್ಟೋಬರ್ 21ರಂದು ಅಭಿಪ್ರಾಯ ನೀಡಿದ್ದರು.

‘ಮಂಗಳೂರಿನಲ್ಲಿ ಕೋಮು ದಳ್ಳುರಿ ಹೆಚ್ಚಾಗಿ ಜನ ಜೀವನ ನಲುಗಿ ಹೋಗಿತ್ತು. ಈ ಗಲಭೆಗಳಿಗೆ ರಾಜ್ಯ ಸರ್ಕಾರದ ಧೋರಣೆಗಳೇ ಕಾರಣ. ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವ ಸರ್ಕಾರ ಅವರ ಮೇಲೆ ಈ ಮೊದಲು ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದೆ. ಇದರಿಂದ ಪಿಎಫ್ಐ, ಎಸ್ ಡಿಪಿಐ ನಂತಹ ಸಂಘಟನೆಗಳು ರಾಜ್ಯಾದ್ಯಂತ ಕೋಮುಗಲಭೆಗಳನ್ನು ಸೃಷ್ಟಿಸುತ್ತಿದೆ,’ ಎಂದು ಬಿಜೆಪಿ ಆರೋಪಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts