ಹೆಚ್‌ಡಿಕೆ ಸಹಿ ಫೋರ್ಜರಿ ಪ್ರಕರಣ; ವಿಚಾರಣೆಯಿಲ್ಲದೆಯೇ ಐಎಎಸ್‌ ರಾಕೇಶ್‌ಸಿಂಗ್‌ ವಿರುದ್ಧ ದೂರರ್ಜಿ ಮುಕ್ತಾಯ

ಬೆಂಗಳೂರು; ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರ ಸಹಿ ಫೋರ್ಜರಿ ಆಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರೇರಾ ಹಾಲಿ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರ ವಿರುದ್ಧದ ದೂರನ್ನು ಲೋಕಾಯುಕ್ತ ಸಂಸ್ಥೆಯು ಯಾವುದೇ ವಿಚಾರಣೆಯಿಲ್ಲದೆಯೇ ಏಕಾಏಕೀ ಮುಕ್ತಾಯಗೊಳಿಸಿರುವುದು ಇದೀಗ ಬಹಿರಂಗವಾಗಿದೆ.

 

ರೇರಾದ ಹಾಲಿ ಅಧ್ಯಕ್ಷ ಹಾಗೂ ಹಿರಿಯ ಐಎಎಸ್‌ ಅಧಿಕಾರಿ ರಾಕೇಶ್‌ ಸಿಂಗ್‌ (ನಿವೃತ್ತ) ಅವರು ಹೆಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಾರ್ಯದರ್ಶಿಯಾಗಿದ್ದರು. ಆ ಅವಧಿಯಲ್ಲಿಯೇ ಹೆಚ್‌ ಡಿ ಕುಮಾರಸ್ವಾಮಿ ಅವರ ಸಹಿ ಫೋರ್ಜರಿ ಮಾಡಿ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಸ್ವತಃ ಹೆಚ್‌ ಡಿ ಕುಮಾರಸ್ವಾಮಿ ಅವರೇ ತಮ್ಮ ಸಹಿ ಫೋರ್ಜರಿಯಾಗಿದೆ ಎಂದು ಹೇಳಿಕೆ ನೀಡಿದ್ದರು.

 

ಈ ಹೇಳಿಕೆ ಆಧರಿಸಿ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಅವರು ಲೋಕಾಯುಕ್ತಕ್ಕೆ 2024ರ ಸೆ.20ರಂದು ಸಹಿ ಮತ್ತು ಕೈ ಬರವಣಿಗೆಯ ಮಾದರಿಗಳ ಸಮೇತ   ದೂರು ಸಲ್ಲಿಸಿದ್ದರು. ಈ ದೂರನ್ನು ಸ್ವೀಕರಿಸಿದ್ದ ಲೋಕಾಯುಕ್ತ ಸಂಸ್ಥೆಯು ಪ್ರಾಥಮಿಕ ಪರಿಶೀಲನೆಯಲ್ಲಿಯೇ ದೂರನ್ನು 2025ರ ಸೆ.3ರಂದೇ  ಮುಕ್ತಾಯಗೊಳಿಸಿದೆ.  ಈ ಕುರಿತು ದೂರುದಾರ ರವಿಕುಮಾರ್‍‌ ಕಂಚನಹಳ್ಳಿ  ಅವರಿಗೆ 2025ರ ಸೆ. 19ರಂದು ಹಿಂಬರಹವನ್ನೂ ನೀಡಿದೆ.

 

ಈ ಹಿಂಬರಹ ಮತ್ತು  ಮುಕ್ತಾಯಗೊಳಿಸಿರುವ ಪ್ರಾಥಮಿಕ ಪರಿಶೀಲನೆ ಟಿಪ್ಪಣಿಯೂ  ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

 

 

 

 

ಸಾಯಿ ವೆಂಕಟೇಶ್ವರ ಮಿನರಲ್ಸ್‌ ಪ್ರಕರಣದ ಕುರಿತಾಗಿ ಲೋಕಾಯುಕ್ತ ವಿಶೇಷ ತನಿಖಾ ತಂಡವು ಸಲ್ಲಿಸಿರುವ ವರದಿಯು ರಾಜ್ಯಪಾಲರ ಬಳಿ ತೀರ್ಮಾನಕ್ಕೆ ಬಾಕಿ ಇದೆ. ಹಾಗಾಗಿ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಅವರು ನೀಡಿರುವ ದೂರಿನಲ್ಲಿರುವ ವಿಷಯವನ್ನು ಮತ್ತೊಮ್ಮೆ ತನಿಖೆ ನಡೆಸಲು ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶವಿಲ್ಲ.

 

 

 

ರಾಜ್ಯಪಾಲರ ಬಳಿ ಈ ವಿಷಯವು ಇನ್ನೂ ಇತ್ಯರ್ಥವಾಗದೇ ಬಾಕಿ ಇರುವ ಈ ಸಂದರ್ಭದಲ್ಲಿ ಕಡತದಲ್ಲಿರುವ ಕೆಲವು ಬರವಣಿಗೆಗಳು ಫೋರ್ಜರಿ ಆಗಿರುತ್ತದೆ ಮತ್ತು ಅದರಲ್ಲಿ ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಹಿ ನಕಲು ಆಗಿರುತ್ತದೆಯೇ,  ಬರವಣಿಗೆ ಅವರದ್ದೇ, ಇಲ್ಲ ಎನ್ನುವ ವಿಷಯವು ವಿಭಿನ್ನವಾಗಿದೆ. ಹೀಗಾಗಿ ಈ ದೂರಿನಲ್ಲಿ ತನಿಖೆ ಮಾಡಲು ಬರುವುದಿಲ್ಲ.  ಆದ್ದರಿಂದ  ಈ ದೂರನ್ನು ಮುಕ್ತಾಯಗೊಳಿಸಬಹುದು ಎಂದು ಲೋಕಾಯುಕ್ತ ಸಂಸ್ಥೆಯ ಹೆಚ್ಚುವರಿ ನಿಬಂಧಕರು ಲೋಕಾಯುಕ್ತರಿಗೆ ವರದಿ ಸಲ್ಲಿಸಿದ್ದರು.

 

ಹೆಚ್ಚುವರಿ ನಿಬಂಧಕರು ಸಲ್ಲಿಸಿದ್ದ ವರದಿಯನ್ನು ಲೋಕಾಯುಕ್ತ ಬಿ ಎಸ್‌ ಪಾಟೀಲ್ ಅವು 2025ರ ಸೆ.3ರಂದು ಅನುಮೋದಿಸಿರುವುದು ಗೊತ್ತಾಗಿದೆ.

 

ಈ ದೂರನ್ನು ವಿಲೇ ಅಥವಾ ಮುಕ್ತಾಯಗೊಳಿಸುವ ಮುನ್ನ ದೂರುದಾರನಾದ ರವಿಕುಮಾರ್‍‌ ಕಂಚನಹಳ್ಳಿ ಅವರಿಂದ  ಯಾವುದೇ ಸ್ಪಷ್ಟೀಕರಣ, ದಾಖಲಾತಿ, ವಿಚಾರಣೆಯನ್ನೇ ನಡೆಸಿಲ್ಲ. ಅಲ್ಲದೇ  ಹೆಚ್‌ ಡಿ ಕುಮಾರಸ್ವಾಮಿ ಅವರನ್ನು ಈ ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ದೂರುದಾರ ಕೋರಿದ್ದರೂ ಸಹ ಸಾಕ್ಷಿಯನ್ನಾಗಿ ಪರಿಗಣಿಸಿಲ್ಲ ಎಂದು ಗೊತ್ತಾಗಿದೆ.

 

ದೂರುದಾರನಿಂದ ದಾಖಲೆ ಪಡೆಯದೆ, ವಿಚಾರಣೆ ನಡೆಸದೇ ಲೋಕಾಯುಕ್ತರು ಏಕಾಏಕೀ ಈ ದೂರನ್ನು ಮುಕ್ತಾಯಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಈ ಕುರಿತು ದೂರುದಾರ ರವಿಕುಮಾರ್‍‌ ಕಂಚನಹಳ್ಳಿ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

‘ಸಹಿ ಪೋರ್ಜರಿ ಮಾಡಿರುವ ಬಗ್ಗೆ ದೂರು ನೀಡಿದ್ದೆ. ಗಣಿ ಗುತ್ತಿಗೆಯಲ್ಲಿನ ಅಕ್ರಮದ ಬಗ್ಗೆ ದೂರಿನಲ್ಲಿ  ಪ್ರಸ್ತಾಪ ಮಾಡಿಲ್ಲ. ಎಸ್‌ಐಟಿ ವರದಿಯೇ ಬೇರೆ, ನಾನು ಮಾಡಿರುವ ಆರೋಪವೇ ಬೇರೆ. ಆದರೂ ರಾಕೇಶ್‌ ಸಿಂಗ್‌ ಮತ್ತು ಹೆಚ್‌ ಡಿ ಕುಮಾರಸ್ವಾಮಿ ಅವರನ್ನು ವಿಚಾರಣೆಗೊಳಪಡಿಸದೇ ದೂರರ್ಜಿಯನ್ನು ಮುಕ್ತಾಯಗೊಳಿಸಿದ್ದಾರೆ. ಇದನ್ನು ನಾನು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇನೆ,’ ಎಂದು ಪ್ರತಿಕ್ರಿಯೆ ನೀಡಿದರು.

 

ವರ್ಷದಿಂದ ನೆನೆಗುದಿಗೆ ಬಿದ್ದಿತ್ತು

 

ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅಕ್ರಮವಾಗಿ ಗಣಿ ಗುತ್ತಿಗೆ ಪ್ರಕರಣದಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಅವರ ಸಹಿ ಫೋರ್ಜರಿ ಮಾಡಿರುವ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ದೂರರ್ಜಿಯನ್ನು  ಲೋಕಾಯುಕ್ತ ಸಂಸ್ಥೆಯು ಒಂದು ವರ್ಷದಿಂದಲೂ ಕಣ್ಣೆತ್ತಿಯೂ ನೋಡಿರಲಿಲ್ಲ.

 

ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್‍‌ ಎಂಬುವರು  ಲೋಕಾಯುಕ್ತರಿಗೆ 2024ರ ಸೆ 20ರಂದು ಸಲ್ಲಿಸಿದ್ದ ದೂರರ್ಜಿಯ ಸ್ಥಿತಿಗತಿಯ ಮೇಲೆ ದಿ ಫೈಲ್‌,  ಲೋಕಾಯುಕ್ತ ವೆಬ್‌ಸೈಟ್‌ ಮೇಲೆ 2025ರ ಸೆ.9ರಂದೇ  ಕಣ್ಣಾಡಿಸಿತ್ತು. ಆ ವೇಳೆಯಲ್ಲಿ  ಈ ದೂರರ್ಜಿಯು   ಅಪರ ನಿಬಂಧಕರ (18) ಕಚೇರಿಯಲ್ಲೇ ಇತ್ತು.

 

 

 

ಈ ದೂರರ್ಜಿ ಆಧರಿಸಿ ಪ್ರತಿವಾದಿ ರಾಕೇಶ್‌ ಸಿಂಗ್‌ ಅವರಿಂದ ಸ್ಪಷ್ಟೀಕರಣ ಕೋರಿ  ಯಾವುದೇ ನೋಟೀಸ್‌ನ್ನೂ ಜಾರಿಗೊಳಿಸಿರಲಿಲ್ಲ.

 

 

ಆದರೆ ಇದೇ ದೂರಿನ ಸ್ಥಿತಿಗತಿ ಕುರಿತು ‘ದಿ ಫೈಲ್‌’, 2025ರ ಸೆ.27ರಂದು ಪುನಃ ಪರಿಶೀಲಿಸಿತು. ಆಗ ಈ ದೂರರ್ಜಿ ಮುಕ್ತಾಯಗೊಳಿಸಿರುವುದು ಗೊತ್ತಾಗಿದೆ. ಲೋಕಾಯುಕ್ತ ವೆಬ್‌ ಸೈಟ್‌ ಮತ್ತು ಪ್ರಾಥಮಿಕ ಪರಿಶೀಲನೆ ಟಿಪ್ಪಣಿ ಪ್ರಕಾರ ಈ ದೂರರ್ಜಿಯು  ಸೆ.3ರಂದೇ ಮುಕ್ತಾಯಗೊಂಡಿದೆ. ನಿಜಕ್ಕೂ ಸೆ.3ರಂದೇ ಈ ದೂರರ್ಜಿ ಮುಕ್ತಾಯಗೊಂಡಿದ್ದಲ್ಲಿ ಸೆ.9ರಂದು ಲೋಕಾಯುಕ್ತ ವೆಬ್‌ ಸೈಟ್‌ನಲ್ಲಿಯೇ ಇದರ ಮಾಹಿತಿಯನ್ನು ಅಳವಡಿಸಬೇಕಿತ್ತು. ಆದರೆ ಸೆ.9ರಂದು ಈ ಕುರಿತಾದ ಯಾವುದೇ ಮಾಹಿತಿಯೂ ವೆಬ್‌ ಸೈಟ್‌ನಲ್ಲಿ ಇರಲಿಲ್ಲ.

 

ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್‍‌  ಅವರು ದೂರರ್ಜಿಯಲ್ಲಿ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಮಂಜೂರಾತಿಗೆ ಸಂಬಂಧಿಸಿದ ಕಡತದ ಟಿಪ್ಪಣಿ ಹಾಳೆಯಲ್ಲಿನ ಕೈ ಬರವಣಿಗೆ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್‌ಸಿಂಗ್‌ ಅವರ ಕೈ ಬರವಣಿಗೆಯನ್ನು ಹೋಲಿಕೆ ಮಾಡಿ ವಿವರಿಸಿದ್ದರು.

 

ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಕೇಶ್‌ ಸಿಂಗ್‌ ಅವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲೇ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಮಂಜೂರಾತಿಗೆ ಸಂಬಂಧಿಸಿದ ಕಡತದಲ್ಲಿ ಕುಮಾರಸ್ವಾಮಿ ಅವರ ಸಹಿ ಮತ್ತು ಕೈ ಬರವಣಿಗೆಯನ್ನು ತಿದ್ದಲಾಗಿದೆ ಎಂದು ದೂರರ್ಜಿಯಲ್ಲಿ ಆಪಾದಿಸಿದ್ದರು.

 

ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಮಂಜೂರಾತಿಯ ಕಡತದಲ್ಲಿನ ಟಿಪ್ಪಣಿ ಹಾಳೆಗಳಲ್ಲಿನ ಕೈ ಬರವಣಿಗೆಯು, ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್‌ ಸಿಂಗ್‌ ಅವರ ಕೈ ಬರವಣಿಗೆಯೊಂದಿಗೆ ಹೋಲುತ್ತದೆ ಮತ್ತು ಅದಕ್ಕೆ ಸಾಮಿಪ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಪುರಾವೆಗಳನ್ನು ಒದಗಿಸಿದ್ದರು.

 

ಹೆಚ್‌ಡಿಕೆ ಸಹಿ ಫೋರ್ಜರಿ; ರೇರಾ ಅಧ್ಯಕ್ಷ ರಾಕೇಶ್‌ಸಿಂಗ್‌ರಿಗೆ ವರ್ಷ ಕಳೆದರೂ ಜಾರಿಯಾಗದ ನೋಟೀಸ್‌, ತೆವಳಿದ ತನಿಖೆ

 

ಸಾಮಾಜಿಕ ಕಾರ್ಯಕರ್ತ ರವಿಕುಮಾರ್‍‌ ಕಂಚನಹಳ್ಳಿ   ಸಲ್ಲಿಸಿರುವ ದೂರರ್ಜಿ ಮತ್ತು ಕೈ ಬರವಣಿಗೆಗೆ ಸಂಬಂಧಿಸಿದಂತೆ  ಟಿಪ್ಪಣಿಯ ಹಾಳೆಗಳನ್ನು ಲೋಕಾಯುಕ್ತರಿಗೆ ಸಲ್ಲಿಸಿದ್ದರು.

 

 

 

 

 

 

ಅಲ್ಲದೇ ‘ಸಾಯಿ ವೆಂಕಟೇಶ್ವರ ದಾಖಲೆಯಲ್ಲಿರುವುದು ನನ್ನ ಸಹಿಯೇ ಅಲ್ಲ ಮತ್ತು ಆ ಕಂಪನಿಗೆ ಭೂಮಿಯನ್ನೇ ಕೊಟ್ಟಿಲ್ಲ, ಯಾರೆಲ್ಲಾ ಮೋಸ ಮಾಡಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ತಿದ್ದಲಾಗಿರುವ ಆದೇಶ ಪತ್ರದ ದಾಖಲೆಯನ್ನು ಪರಿಶೀಲನೆ ಮಾಡಲು ಕೇವಲ ನನ್ನ ಸಹಿಯನ್ನಷ್ಟೇ ಅಲ್ಲ, ನನ್ನ ಕೈ ಬರಹವನ್ನು ತೆಗೆದುಕೊಂಡು ಹೋಗಿದ್ದಾರೆ. ಎಲ್ಲಿ ಬೇಕಾದರೂ ತನಿಖೆ ಮಾಡಲಿ ಮತ್ತು ಯಾವ ಪ್ರಯೋಗಾಲಯದಿಂದಲಾದರೂ ವರದಿ ಪಡೆಯಬಹುದು,’ ಎಂದು ಸವಾಲು ಹಾಕಿದ್ದರು.

 

 

ಆದರೆ ಈ ಸಂಬಂಧ ಹೆಚ್‌ ಡಿ ಕುಮಾರಸ್ವಾಮಿ ಅವರು ದೂರನ್ನೇ ದಾಖಲಿಸಿರಲಿಲ್ಲ.

 

ಈ ಕುರಿತು ದೂರನ್ನೇಕೆ ದಾಖಲಿಸಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಸಹ ಹೆಚ್‌ ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದರು. ಈ ಬೆಳವಣಿಗೆಗಳ ನಡುವೆಯೇ ರಾಕೇಶ್‌ ಸಿಂಗ್‌ ಅವರದ್ದು ಎನ್ನಲಾಗಿರುವ 2021 ರಲ್ಲಿನ ನಗರಾಭಿವೃದ್ಧಿ ಇಲಾಖೆಯ ಕಡತದ  ಹಾಳೆಗಳಲ್ಲಿನ  ಕೈ ಬರವಣಿಗೆಯ ಮಾದರಿ ಪುಟಗಳು ರಾಜ್ಯಪಾಲರ ಕಚೇರಿ ಸೇರಿರುವುದು ಕುತೂಹಲ ಮೂಡಿಸಿದ್ದವು.

 

 

 

ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲೇನಿತ್ತು?

 

ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಲೋಕಾಯುಕ್ತ ಎಸ್‌ಐಟಿಯು ಹಾಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಸ್ತಾವನೆ ತಮ್ಮ ಮುಂದಿದೆ.

 

 

ಎಸ್‌ಐಟಿಯು ಸಲ್ಲಿಸಿರುವ ಪ್ರಸ್ತಾವನೆ ಮತ್ತು ಕಡತಗಳಲ್ಲಿನ ದಾಖಲೆಗಳ ಬಗ್ಗೆ ಹೆಚ್‌ ಡಿ ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದರು.  ಇಲಾಖೆ ಮತ್ತು ಎಸ್‌ಐಟಿಯು ತಮ್ಮ ಮುಂದಿರಿಸಿರುವ ಕಡತಗಳ ಪುಟಗಳಲ್ಲಿನ ಕೈ ಬರವಣಿಗೆ ಕುರಿತು ಹೆಚ್‌ ಡಿ ಕುಮಾರಸ್ವಾಮಿ ಅವರು ಶಂಕೆ ವ್ಯಕ್ತಪಡಿಸಿದ್ದರು. ಅದು ತಮ್ಮ ಸಹಿಯೇ ಅಲ್ಲ, ತಮ್ಮ ಸಹಿ ಮತ್ತು ಕೈ ಬರವಣಿಗೆಯೂ ಪೋರ್ಜರಿ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿಯೇ ಹೇಳಿಕೆ ನೀಡಿದ್ದಾರೆ. ಆದರೆ ಇದುವರೆಗೂ ಕುಮಾರಸ್ವಾಮಿ ಅವರು ತಮ್ಮ ಸಹಿ ಮತ್ತು ಕೈ ಬರವಣಿಗೆಯು ಪೋರ್ಜರಿ ಆಗಿದೆ ಎಂದು ಎಲ್ಲಿಯೂ ದೂರು ದಾಖಲಿಸಿಲ್ಲ ಎಂದು ದೂರರ್ಜಿಯಲ್ಲಿ ವಿವರಿಸಲಾಗಿತ್ತು.

 

‘ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತನಾದ ನಾನು ಕೂಡ ಒಂದಷ್ಟು ದಾಖಲೆಗಳನ್ನು ಕಲೆ ಹಾಕಿದ್ದೇನೆ. ಕುಮಾರಸ್ವಾಮಿ ಅವರು ಹೇಳಿರುವ ಪ್ರಕಾರ ಕೈ ಬರವಣಿಗೆ ಮತ್ತು ಸಹಿ ಪೋರ್ಜರಿ ಆಗಿದೆ ಎಂಬುದಕ್ಕೆ ಪುರಾವೆಗಳನ್ನೂ  ಒದಗಿಸುತ್ತಿದ್ದೇನೆ,’ ಎಂದು ದೂರಿನಲ್ಲಿ ಹೇಳಿದ್ದರು.

 

 

 

ಕುಮಾರಸ್ವಾಮಿ ಅವರು ಹೇಳುತ್ತಿರುವ ಕೈ ಬರವಣಿಗೆ ಮತ್ತು ಸಹಿ ತಿದ್ದಿರುವುದು ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಕಾರ್ಯದರ್ಶಿ ಆಗಿದ್ದ ರಾಕೇಶ್‌ ಸಿಂಗ್‌ ಅವರದ್ದು ಎಂಬುದಕ್ಕೆ ಪುರಾವೆಗಳನ್ನು ಇಲ್ಲಿ ನೀಡಿದ್ದೇನೆ.

 

‘ರಾಕೇಶ್‌ ಸಿಂಗ್‌ ಅವರು ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಮೂರ್ನಾಲ್ಕು ಇಲಾಖೆಗಳಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಕಡತಗಳಲ್ಲಿನ ಟಿಪ್ಪಣಿ ಹಾಳೆಗಳಲ್ಲಿ ರಾಕೇಶ್‌ ಸಿಂಗ್‌ ಅವರ ಕೈ ಬರವಣಿಗೆಯು, ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಸಂಬಂಧಿತ ಕಡತದ ಟಿಪ್ಪಣಿ ಹಾಳೆಯಲ್ಲಿನ ಬರವಣಿಗೆಗೆ ಸಾಮ್ಯತೆ ಕಂಡು ಬರುತ್ತಿದೆ. ಮೇಲ್ನೋಟಕ್ಕೆ ಈ ಕೈ ಬರವಣಿಗೆಯು ರಾಕೇಶ್‌ ಸಿಂಗ್‌ ಅವರದ್ದೇ ಎಂದು ಕಂಡು ಬರುತ್ತಿರುವ ಕಾರಣ ಅವರನ್ನು ವಿಚಾರಣೆಗೊಳಪಡಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಕೋರಿದ್ದರು.

 

 

ನಗರಾಭಿವೃದ್ಧಿ ಇಲಾಖೆಯಲ್ಲಿನ 2021ರಲ್ಲಿನ  ಕಡತಗಳಲ್ಲಿನ ಈ ಟಿಪ್ಪಣಿ ಹಾಳೆಗಳಲ್ಲಿನ ಕೈ ಬರವಣಿಗೆ ಮತ್ತು ಸಾಯಿ ವೆಂಕಟೇಶ್ವರ ಮಿನರಲ್ಸ್‌ ನ ಕೈ ಬರವಣಿಗೆ ಮತ್ತು ಸಹಿಯ ಟಿಪ್ಪಣಿ ಹಾಳೆಗಳನ್ನು ಅದರ ಕೆಲ ಮಾದರಿಗಳನ್ನು ರವಿಕುಮಾರ್‍‌ ಅವರು ಒದಗಿಸಿದ್ದಾರೆ. ಇವುಗಳನ್ನು   ಫೋರೆನ್ಸಿಕ್‌ ಅಥವಾ ಎಫ್‌ಎಸ್‌ಎಲ್‌ ಪರೀಕ್ಷೆಗೊಳಪಡಿಸಬೇಕು ಎಂದು  ಕೋರಿದ್ದರು.

 

 

‘ನಮಗೆ ಸಿಕ್ಕಿರುವ ಪ್ರಾಥಮಿಕ ಸಾಕ್ಷ್ಯಗಳನ್ನಷ್ಟೇ ನಿಮಗೆ ನೀಡಿದ್ದೇವೆ. ಇದನ್ನು ಆಧಾರವಾಗಿರಿಸಿಕೊಂಡು ಮುಂದಿನ ತನಿಖೆ ನಡೆಸಿದರೆ ಇನ್ನಷ್ಟು ಸತ್ಯಾಂಶಗಳು ಹೊರಬರಲಿವೆ. ತಾವುಗಳು ದಯವಿಟ್ಟು ಈ ದೂರರ್ಜಿಯನ್ನು ಪರಿಗಣಿಸಿ ರೇರಾ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರನ್ನು ತನಿಖೆಗೊಳಪಡಿಸಬೇಕು ಮತ್ತು ಈ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಅವರಿಂದಲೂ ಕಾನೂನುಬದ್ಧವಾಗಿ ಹೇಳಿಕೆ ಪಡೆಯಬೇಕು,’ ಎಂದು ಮನವಿ ಮಾಡಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts