ಬೆಂಗಳೂರು; ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ವಿಧಿಸುವ ಸಂದರ್ಭದಲ್ಲಿ ದಾಖಲೆಗಳನ್ನು ತಪ್ಪು ವರ್ಗೀಕರಣ ಮಾಡುತ್ತಿರುವುದರಿಂದಾಗಿಯೇ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿನಷ್ಟು ತೆರಿಗೆ ಸೋರಿಕೆಯಾಗುತ್ತಿದೆ ಎಂದು ಪ್ರಧಾನ ಮಹಾಲೇಖಪಾಲರು ಬಹಿರಂಗಗೊಳಿಸಿದ್ದಾರೆ.
ಕರ್ನಾಟಕ ಮುದ್ರಾಂಕ ಅಧಿನಿಯಮ 1957 ರ ಪರಿಚ್ಛೇದ 3 ನ್ನು ಉಲ್ಲಂಘಿಸಿರುವ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪ್ರಧಾನ ಮಹಾಲೇಖಪಾಲರು, ನೋಂದಣಿಯ ದಸ್ತಾವೇಜುಗಳು, ನೋಂದಣಿ ಶುಲ್ಕ, ತಿಳಿವಳಿಕೆ ಪತ್ರ, ಮಾರಾಟ ಒಪ್ಪಂದಗಳಿಗೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯಚಟುವಟಿಕೆಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.
2025ರ ಆಗಸ್ಟ್ನಲ್ಲಿ ನಡೆದ ಕರ್ನಾಟಕ ವಿಧಾನಮಂಡಲದಲ್ಲಿ ನಡೆದ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ನೋಂದಣಿ ಮುದ್ರಾಂಕ ಇಲಾಖೆಯಲ್ಲಿನ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ, ತೆರಿಗೆ ಸೋರಿಕೆ ಪ್ರಕರಣಗಳನ್ನು ವಿವರಿಸಿದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈಚೆಗಷ್ಟೇ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ದಿಢೀರ್ ತಪಾಸಣೆ ನಡೆಸಿದ್ದರು. ಈ ವೇಳೆಯಲ್ಲಿ ಹಲವಾರು ಲೋಪಗಳನ್ನು ಪತ್ತೆ ಹಚ್ಚಿದ್ದರು. ಇದರ ಬೆನ್ನಲ್ಲೇ ಸಿಎಜಿಯು ಸಹ ಸಬ್ ರಿಜಿಸ್ಟ್ರಾರ್ ಕಚೇರಿಗಳ ಕಾರ್ಯವೈಖರಿ ಮತ್ತು ದಾಖಲೆಗಳ ವರ್ಗೀಕರಣದಲ್ಲಾಗಿರುವ ಲೋಪಗಳನ್ನು ಬಹಿರಂಗಪಡಿಸಿದೆ.
2019ರ ಜೂನ್ ಮತ್ತು 2022ರ ಜನವರಿ ಮಧ್ಯೆ ಬೆಂಗಳೂರಿನ ಮಹದೇವಪುರ, ನೆಲಮಂಗಲ, ಶ್ರೀರಾಂಪುರದಲ್ಲಿರುವ ಉಪ ನೋಂದಣಿ ಅಧಿಕಾರಿಗಳ ಕಚೇರಿಗಳನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸಿತ್ತು. ಈ ವೇಳೆ 167 ದಾಖಲೆಗಳನ್ನು ಲೆಕ್ಕ ಪರಿಶೋಧನೆ ತಂಡವು ಪರಿಶೀಲನೆ ನಡೆಸಿತ್ತು. ಅದರಲ್ಲೂ ವಿಶೇಷವಾಗಿ ಮಾರಾಟ ಒಪ್ಪಂದ ಮತ್ತು ಎಂದು ವರ್ಗೀಕರಿಸಲಾಗಿದ್ದ ಜಂಟಿ ಅಭಿವೃದ್ದಿ ಒಪ್ಪಂದಗಳನ್ನು ತಪಾಸಣೆಗೆ ಒಳಪಡಿಸಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ.
ಮಹದೇವಪುರ ಮತ್ತು ನೆಲಮಂಗಲದ ಉಪ ನೋಂದಣಿ ಕಚೇರಿಗಳ ಲೆಕ್ಕ ಪರಿಶೋಧನೆಯ ಸಮಯದಲ್ಲಿ ಪ್ರತಿ ಕಚೇರಿಯಲ್ಲಿ ಜಂಟಿ ಅಭಿವೃದ್ದಿ ಒಪ್ಪಂದಗಳನ್ನು ಸ್ವಾಧೀನವಿಲ್ಲದೇ ಮಾರಾಟ ಒಪ್ಪಂದವಾಗಿ ನೋಂದಾಯಿಸಿರುವ ಪ್ರಕರಣಗಳನ್ನು ಪತ್ತೆ ಹಚ್ಚಿದೆ.
ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ವೃತ್ತಾಂತಗಳನ್ನು ವಿಶ್ಲೇಷಣೆ ಮಾಡಿದೆ. ಮಾಲೀಕರಿಗೆ ಸೂಪರ್ ಬಿಲ್ಟ್ ಅಪ್ ಪ್ರದೇಶದ ಶೇ.40ರಷ್ಟು ಹಂಚಿಕೆಯೊಂದಿಗೆ ಬಹುಮಹಡಿ ವಸತಿ ಕಟ್ಟಡವನ್ನು ನಿರ್ಮಿಸಲು ಒಪ್ಪಂದವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಅಭಿವೃದ್ಧಿ ವಿಧಾನಗಳನ್ನೂ ಸಹ ದಾಖಲೆಗಳಲ್ಲಿ ವಿವರಿಸಲಾಗಿದೆ.
ಎರಡನೇ ಪ್ರಕರಣದಲ್ಲಿಯೂ ಸಹ ಭೂಮಿಯನ್ನು ವಸತಿ ನಿವೇಶನಗಳ ವಿನ್ಯಾಸವಾಗಿ ಅಭಿವೃದ್ದಿಪಡಿಸಲು ಒಪ್ಪಿಕೊಂಡಿವೆ. ಮತ್ತು ಅಭಿವೃದ್ಧಿ ವಿಧಾನಗಳನ್ನು ವಿವರಿಸಿದೆ. ಅಭಿವೃದ್ಧಿ ಹೊಂದಿದ ನಿವೇಶನಗಳ ಪ್ರತಿ ಚದರ ಅಡಿಗೆ ಮಾಲೀಕರು ಪಾಲು 1,008 ರು ಎಂದು ಹೇಳಿದೆ.
ಈ ಎರಡೂ ಪ್ರಕರಣಗಳಲ್ಲಿ ಭೂಮಿಯ ಅಭಿವೃದ್ಧಿ ಮತ್ತು ಅವುಗಳನಂತರದ ಹಂಚಿಕೆಯ ವಿಧಾನಗಳನ್ನು ದಾಖಲೆಗಳಲ್ಲಿ ತರಲಾಗಿದೆ. ಆದರೂ ಉಪ ನೋಂದಣಾಧಿಕಾರಿಗಳು ಕರ್ನಾಟಕ ಮುದ್ರಾಂಕ ಅಧಿನಿಯಮ ಕಲಂ 5 (ಇ) (ii) ಅಡಿಯಲ್ಲಿ ಮತ್ತು ನೋಂದಣಿ ಅಧಿನಿಯಮ ಕಲಂ 1ರ ಟಿಪ್ಪಣಿ 7ರ ಷರತ್ತು (ಎ) ಅಡಿಯಲ್ಲಿ ತಪ್ಪಾಗಿ ವರ್ಗೀಕರಿಸಿದ್ದನ್ನು ಸಿಎಜಿಯು ಲೆಕ್ಕ ಪರಿಶೋಧನೆ ವೇಳೆ ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.
ಉಪ ನೊಂದಣಾಧಿಕಾರಿಗಳ ಈ ಕ್ರಮದಿಂದಾಗಿ ಮೊದಲ ಪ್ರಕರಣದಲ್ಲಿ ಕ್ರಮವಾಗಿ 9.20 ಲಕ್ಷ ಮತ್ತು 4.60 ಲಕ್ಷ ರು. ಬದಲಿಗೆ 500 ರು (ಮುದ್ರಾಂಕ ಸುಂಕ) ಮತ್ತು 200 ರು (ನೋಂದಣಿ ಶುಲ್ಕ) ವಿಧಿಸಲಾಗಿತ್ತು. ಮತ್ತು ಎರಡನೇ ಪ್ರಕರಣದಲ್ಲಿ ಕ್ರಮವಾಗಿ 89.61 ಲಕ್ಷ ಮತ್ತು 44.80 ಲಕ್ಷದ ಬದಲಿಗೆ 20,000 ರು ಮುದ್ರಾಂಕ ಸುಂಕ ಮತ್ತು 200 ರು ನೋಂದಣಿ ಶುಲ್ಕವನ್ನು ವಿಧಿಸಲಾಗಿತ್ತು.
‘ಹೀಗಾಗಿ ಮುದ್ರಾಂಕದ ಅಧಿನಿಯಮದ ಕಲಂ 5 (ಎಫ್) ಮತ್ತು ನೋಂದಣಿ ಅಧಿನಿಯಮದ ಕಲಂ III (ಎ) ಅಡಿಯಲ್ಲಿ ಈ ದಾಖಲೆಗಳನ್ನು ಸರಿಯಾಗಿ ವರ್ಗೀಕರಿಸುವ ಬದಲು ತಪ್ಪಾಗಿ ವರ್ಗೀಕರಿಸಲಾಗಿತ್ತು.ಇದರಿಂದಾಗಿ 1.48 ಕೋಟಿ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ಕಡಿಮೆ ತೆರಿಗೆಗೆ ಕಾರಣವಾಯಿತು,’ ಎಂದು ಸಿಎಜಿಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಶ್ರೀರಾಂಪುರ ಉಪ ನೋಂದಣಿ ಕಚೇರಿಯಲ್ಲಿ ಲೆಕ್ಕ ಪರಿಶೋಧನೆ ನಡೆಸಿದ್ದ ಪ್ರಧಾನ ಮಹಾಲೇಖಪಾಲರು ಒಬ್ಬ ಮಾರಾಟಗಾರ ಆರು ಖರೀದಿದಾರರ ಪರವಾಗಿ ಆರು ಮಾರಾಟ ಒಪ್ಪಂದಗಳನ್ನು ಮಾಡಿಕೊಂಡಿರುವುದನ್ನು ಪತ್ತೆ ಹಚ್ಚಿದೆ. ಅದರಲ್ಲಿ ಆರು ವಿಭಿನ್ನ ಭೂಮಿಯನ್ನು ಮಾರಾಟಗಾರರ ಮಾಲೀಕತ್ವಕ್ಕೆ ವರ್ಗಾಯಿಸಲು ಒಪ್ಪಿಕೊಂಡಿತ್ತು. ಈ ಮಾರಾಟ ಒಪ್ಪಂದಗಳೊಂದಿಗೆ ಖರೀದಿದಾರರಿಗೆ ಅವರ ಭೂ ಭಾಗಗಳಿಗೆ ನೀಡಲಾಗಿದ್ದ 6 ವ್ಯವಹಾರಾಧಿಕಾರದ ದಾಖಲೆಗಳನ್ನೂ ಸಹ ನೀಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಿದೆ.
ಈ ಪ್ರಕರಣದಲ್ಲಿಯೂ ಸಹ ದಾಖಲೆಗಳನ್ನು ತಪ್ಪಾಗಿ ವರ್ಗೀಕರಣ ಮಾಡಲಾಗಿದೆ. ಇದರಿಂದಾಗಿ 10.36 ಲಕ್ಷದಷ್ಟು ನೋಂದಣಿ ಶುಲ್ಕದ ಕೊರತೆಯುಂಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಚಿಕ್ಕಮಗಳೂರು, ಕಡೂರು, ಸಿಂಧನೂರು, ಶ್ರೀರಂಗಪಟ್ಟಣ, ವರ್ತೂರು ಮತ್ತು ಯಲಹಂಕದ ಉಪ ನೋಂದಣಿ ಕಚೇರಿಗಳು ವಿಶೇಷ ಸೂಚನೆಯನ್ನು ಪಾಲಿಸಿಲ್ಲ. ಹೀಗಾಗಿ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಿತ್ತು.
ರಾಜ್ಯದಲ್ಲಿ ನೆಲೆಗೊಂಡಿರುವ ಆಸ್ತಿಗಳಿಗೆ ಮಾರುಕಟ್ಟೆ ಮೌಲ್ಯಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಕೇಂದ್ರ ಮೌಲ್ಯಮಾಪನ ಸಮಿತಿಯು ನಿಗದಿಪಡಿಸುತ್ತದೆ. ಇದು ಪ್ರತಿ ಉಪ ನೋಂದಣಾಧಿಕಾರಿಗಳ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿನ ಆಸ್ತಿಗಳ ಸಾಮಾನ್ಯ ದರಗಳನ್ನು ನಿಗದಿಪಡಿಸಿದೆ.
ಪುರಸಭೆ ಮಿತಿಯ ಹೊರಗೆ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾದ ಭೂಮಿಗೆ ಸಂಬಂಧಿಸಿದಂತೆ ಪ್ರತಿ ಎಕರೆಗೆ ನಿಗದಿಪಡಿಸಿದ ಮೌಲ್ಯದ ಶೇ.65ರಷ್ಟು ಹೆಚ್ಚಳ, ಪುರಸಭೆ ಮಿತಿಯಲ್ಲಿರುವ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾದ ಭೂಮಿಗೆ ಸಂಬಂಧಿಸಿದಂತೆ ಪ್ರತಿ ಚದರ ಮೀಟರ್ಗೆ ನಿಗದಿಪಡಿಸಿದ ಮೌಲ್ಯದ ದ ಶೇ.40ರಷ್ಟು ಹೆಚ್ಚಳ ಎಂದು ದರ ನಿಗದಿಪಡಿಸಿತ್ತು.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಆಸ್ತಿಗೆ ಸಂಬಂಧಿಸಿದಂತೆ 2018ರ ಡಿಸೆಂಬರ್ 31ರವರೆಗೆ ಸಾಮಾನ್ಯ ದರಗಳಲ್ಲಿ ಶೇ.25ರಷ್ಟು ಹೆಚ್ಚಳ, ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಆಸ್ತಿಗೆ ಸಂಬಂಧಿಸಿದಂತೆ ಸಾಮಾನ್ಯ ದರಗಳಲ್ಲಿ ಶೇ. 50ರಷ್ಟು ಹೆಚ್ಚಳ, ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುವ ಆಸ್ತಿಗೆ ಸಂಬಂಧಿಸಿದಂತೆ ಸಾಮಾನ್ಯ ದರಗಳಲ್ಲಿ ಶೇ.40ರಷ್ಟು ಹೆಚ್ಚಳ ಎಂದು ದರ ನಿಗದಿಪಡಿಸಿತ್ತು.
ಚಿಕ್ಕಮಗಳೂರು, ಕಡೂರು, ಸಿಂಧನೂರು, ಶ್ರೀರಂಗಪಟ್ಟಣ, ವರ್ತೂರು ಮತ್ತು ಯಲಹಂಕದ ಉಪ ನೋಂದಣಿ ಕಚೇರಿಗಳಲ್ಲಿ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾದ ಆದರೆ ಇನ್ನೂ ಅಭಿವೃದ್ಧಿಯಾಗದ ಭೂಮಿಯನ್ನು ವರ್ಗಾಯಿಸಲಾಗುತ್ತಿತ್ತು. ಈ ಮೂರರಲ್ಲಿ ಎರಡು ಪ್ರಕರಣಗಳಲ್ಲಿ ಭೂಮಿಗಳು ಪುರಸಭೆಯ ಮಿತಿಯೊಳಗೆ ಇದ್ದವು. ಮತ್ತು ಉಳಿದ ಒಂದು ಪ್ರಕರಣದಲ್ಲಿ ಪುರಸಭೆಯ ಮಿತಿಯ ಹೊರಗೆ ಇತ್ತು.
ಮಾರ್ಗಸೂಚಿಗಳ ವಿಶೇಷ ಸೂಚನೆ ಪ್ರಕಾರ ಪುರಸಭೆಯ ಮಿತಿಯ ಹೊರಗೆ ಇರುವ ಭೂಮಿಗೆ ಸಾಮಾನ್ಯ ಕೃಷಿ ದರಗಳನ್ನು ಶೇ.65ರಷ್ಟು ಹೆಚ್ಚಿಸಬೇಕಾಗಿತ್ತು. ಮತ್ತು ಪುರಸಭೆ ಮಿತಿಯೊಳಗೆ ಇರುವ ಭೂಮಿಗೆ, ವರ್ಗಾಯಿಸಲಾಗುವ ಆಸ್ತಿಯ ಮೌಲ್ಯವನ್ನು ಅಂದಾಜು ಮಾಡಲು ಕೃಷಿ ದರಗಳನ್ನು ಶೇ.65ರಷ್ಟು ಅಥವಾ ಜಾಗದ ದರಗಳು ಶೇ. 40ರಷ್ಟು ಇವುಗಳಲ್ಲಿ ಹೆಚ್ಚಿನದನ್ನು ಬಳಸಿ ಮೌಲ್ಯಮಾಪನ ಮಾಡಬೇಕಾಗಿತ್ತು.
ವರ್ಗಾಯಿಸಲಾಗಿದ್ದ ಆಸ್ತಿಗಳು ರಾಜ್ಯ ಹೆದ್ದಾರಿ ಅಥವಾ ವರ್ತುಲ ರಸ್ತೆಗೆ ಹೊಂದಿಕೊಂಡಂತೆ ಇದ್ದ ಮೂರು ಪ್ರಕರಣಗಳನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ಇದಕ್ಕಾಗಿ ಸಾಮಾನ್ಯ ದರಗಳನ್ನು ಕ್ರಮವಾಗಿ ಶೇ.35 ಅಥವಾ 50ರಷ್ಟು ಹೆಚ್ಚಿಸಬೇಕಾಗಿತ್ತು. ಮತ್ತು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಒಂದು ಪ್ರಕರಣದಲ್ಲಿ ಆಸ್ತಿಯನ್ನು ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿತ್ತು.
ಈ ಎಲ್ಲಾ ಪ್ರಕರಣಗಳಲ್ಲಿ ಕೇಂದ್ರ ಮೌಲ್ಯ ನಿರ್ಧಾರ ಸಮಿತಿಯ ವಿಶೇಷ ಸೂಚನೆಗಳನ್ನು ಪಾಲಿಸಿರಲಿಲ್ಲ. ದಾಖಲಾತಿಗಳ ಆಧಾರಕ ವರ್ಗಾಯಿಸಲಾದ ಆಸ್ತಿಗಳ ಮೌಲ್ಯವು ಕಡಿಮೆ ಪ್ರಮಾಣದಲ್ಲಿ ನಿರ್ಧಾರವಾಗಿತ್ತು. ಹೀಗಾಗಿ 1.13 ಕೋಟಿ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ಕಡಿಮೆ ಸಂಗ್ರಹಕ್ಕೆ ಕಾರಣವಾಯಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಇನ್ನೂ ಮೂರು ಪ್ರಕರಣಗಳಲ್ಲಿ ಮಾರಾಟ ಒಪ್ಪಂದಗಳನ್ನು ಒಂದೇ ದಿನದಲ್ಲಿ ಕಾರ್ಯಗತಗೊಳಿಸಿತ್ತು. ಒಂದೇ ದಿನ, ಒಂದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಲಾಗಿತ್ತು. ಆದರೆ ಸಂಬಂಧಿತ ಮಾರಾಟ ಒಪ್ಪಂದಗಳಲ್ಲಿ ವ್ಯವಹಾರಾಧಿಕಾರ ಪತ್ರ ಕಾರ್ಯಗತಗೊಳಿಸಿರುವ ಬಗ್ಗೆ ಉಲ್ಲೇಖಿಸಲಿಲ್ಲ. ಹಾಗೆಯೇ ಉಪ ನೋಂದಣಾಧಿಕಾರಿಗಳು ಕೂಡಾ ಮಾರಾಟ ಒಪ್ಪಂದಗಳೊಂದಿಗೆ ಅಧಿಕಾರ ಪತ್ರದ ಅಸ್ತಿತ್ವವನ್ನು ಪರಿಗಣಿಸಲಿಲ್ಲ. ಇದು ಕಲಂ 5(ಇ) (ii) ನಿಯಮ ಉಲ್ಲಂಘನೆಗೆ ದಾರಿಮಾಡಿಕೊಟ್ಟಿತು. ಇದರಿಂದಾಗಿ 28.47 ಲಕ್ಷ ಮೌಲ್ಯದ ಮುದ್ರಾಂಕ ಸುಂಕವು ಕಡಿಮೆ ಸಂಗ್ರಹವಾಗಿತ್ತು ಎಂದು ವರದಿಯಲ್ಲಿ ಹೇಳಿದೆ.
ಬಹುತೇಕ ಪ್ರಕರಣಗಳಲ್ಲಿ 4.5 ಲಕ್ಷದಿಂದ 15.00 ಲಕ್ಷದವರೆಗಿನ ಮೊತ್ತವನ್ನು ಮಾರಾಟಗಾರರಿಗೆ ಮುಂಗಡವಾಗಿ ವರ್ಗಾಯಿಸಲಾಗಿತ್ತು. ಈ ಎಲ್ಲಾ ಮಾರಾಟ ಒಪ್ಪಂದಗಳ ನಂತರ ನಂತರದ ದಿನಾಂಕಗಳಲ್ಲಿ ಮಾರಾಟ ಪತ್ರಗಳನ್ನು ನೋಂದಾಯಿಸಲಾಗಿತ್ತು. ಆದರೆ ಮಾರಾಟ ಒಪ್ಪಂದಗಳಲ್ಲಿ ವರ್ಗಾಯಿಸಲಾಗಿದ್ದ ಮುಂಗಡ ಮೊತ್ತವನ್ನು ಮಾರಾಟ ಪತ್ರದ ಪರಿಗಣನೆಯ ಭಾಗವಾಗಿ ಸೇರಿಸಿರಲಿಲ್ಲ. ಇದರ ಪರಿಣಾಮ 2.71 ಲಕ್ಷ ಕಡಿಮೆ ವಸೂಲಾಗಿತ್ತು.
ಬೊಮ್ಮನಹಳ್ಳಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 32,250 ಚದರ ಅಡಿ ಅಳತೆಯ ಸ್ಥಿರ ಆಸ್ತಿಯನ್ನು ವರ್ಗಾಯಿಸಿರುವ ಪ್ರಕರಣದಲ್ಲಿಯೂ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕದ ಕೊರತೆಯು 36.98 ಲಕ್ಷದಷ್ಟಿದೆ. ಈ ಪ್ರಕರಣದಲ್ಲಿ 43,651 ಚದರ ಅಡಿ ಅಳತೆಯ ಕಟ್ಟಡವಿದೆ ಎಂದು ತೋರಿಸಲಾಗಿತ್ತು. ಆದರೂ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನ ವಿಧಿಸುವ ಉದ್ದೇಶಕ್ಕಾಗಿ ಅಂದಾಜಿನ ಸಮಯದಲ್ಲಿ ಭೂಮಿಯ ಮೌಲ್ಯವನ್ನು ಮಾತ್ರ ಪರಿಗಣಿಸಲಾಗಿದೆ. ಕಟ್ಟಡದ ಮೌಲ್ಯ 5.60 ಕೋಟಿ ಆಗಿತ್ತು. ಇದರ ಪರಿಣಾಮ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕದ ಕೊರತೆ 36.98 ಲಕ್ಷ ಅಗಿತ್ತು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ರಾಜಾಜಿನಗರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿಯೂ ಸಹ ಕಂಪನಿಗಳ ವಿಲೀನಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸುಂಕಗಳನ್ನು ವಿಧಿಸರಲಿಲ್ಲ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ಆಯಾ ಕಂಪನಿಗಳ ಸ್ಥಿರ ಆಸ್ತಿಗಳನ್ನು ಹೊಂದಿರುವ ನ್ಯಾಯ ವ್ಯಾಪ್ತಿಯ ಜಿಲ್ಲಾ ನೋಂದಣಾಧಿಕಾರಿಗಳಿಗೆ ಉಲ್ಲೇಖಿಸಿತ್ತು. ಜಿಲ್ಲಾ ನೋಂದಣಾಧಿಕಾರಿಗಳು ಷೇರುಗಳ ಮೌಲ್ಯವನ್ನು ಸ್ಥಿರ ಆಸ್ತಿಗಳ ಮೌಲ್ಯದೊಂದಿಗೆ ಹೋಲಿಸಿದಾಗ ವಿಲೀನದ ದಾಖಲೆಗಳಲ್ಲಿ ಹೇಳಿರುವಂತೆ ಮುಖಬೆಲೆಯಲ್ಲಿ ಷೇರುಗಳ ಮೌಲ್ಯವನ್ನು ನಿರ್ಣಯಿಸಿರುವುದನ್ನು ಲೆಕ್ಕ ಪರಿಶೋಧಕರು ಗಮನಿಸಿರುವುದು ಗೊತ್ತಾಗಿದೆ.
ಜಿಲ್ಲಾ ನೋಂದಣಾಧಿಕಾರಿಗಳ ಮೌಲ್ಯಮಾಪನದ ಪ್ರಕಾರ ಸ್ಥಿರ ಆಸ್ತಿಗಳ ಮೌಲ್ಯವು ವಿನಿಮಯವಾದ ಷೇರುಗಳ ಮೌಲ್ಯಕ್ಕಿಂತ ಹೆಚ್ಚಾಗಿದೆ. ಜಿಲ್ಲಾ ನೋಂದಣಾಧಿಕಾರಿಗಳು ಸ್ಥಿರ ಆಸ್ತಿಗಳ ಮೌಲ್ಯದ ಆಧಾರದ ಮೇಲೆ ದಾಖಲೆಯನ್ನು 439.17 ಕೋಟಿಗೆ ಮೌಲ್ಯಮಾಪನ ಮಾಡಿದರು. ಮತ್ತು 13.17 ಕೋಟಿ ಮುದ್ರಾಂಕ ಸುಂಕವನ್ನು ವಿಧಿಸಿದ್ದರು.
ಆದರೂ ಈ ಮೂರು ಪ್ರಕರಣಗಳಲ್ಲಿ ವರ್ಗಾವಣೆದಾರ ಕಂಪನಿಯಿಂದ ಸ್ವೀಕರಿಸಿಕೊಳ್ಳುವ ಕಂಪನಿಗೆ ಸ್ಥಿರ ಆಸ್ತಿಯ ವರ್ಗಾವಣೆಯಾಗಿತ್ತು. ಆದರೂ ಸಂಬಂಧಪಟ್ಟ ಜಿಲ್ಲಾ ನೋಂದಣಾಧಿಕಾರಿಗಳು ಹೆಚ್ಚುವರಿ ಮುದ್ರಾಂಕ ಸುಂಕವನ್ನು ವಿಧಿಸುವುದನ್ನು ಕಡೆಗಣಿಸಿದ್ದರು.