ಕಳೆದ 2 ವರ್ಷದಲ್ಲಿ 2,329 ರೈತರ ಆತ್ಮಹತ್ಯೆ; ಹಾವೇರಿ, ಮೈಸೂರು, ಕಲ್ಬುರ್ಗಿ, ಬೆಳಗಾವಿಯಲ್ಲಿ ಹೆಚ್ಚು

ಬೆಂಗಳೂರು; ಪಿಎಂ ಕಿಸಾನ್‌, ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳು ಜಾರಿಗೊಂಡ ನಂತರವೂ ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ ಒಟ್ಟಾರೆ 2,329 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸದನಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಉತ್ತರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯದಲ್ಲಿ 2022-23ರಲ್ಲಿ 922, 2023-24ರಲ್ಲಿ 1,061, 2024-25ರಲ್ಲಿ 346 ಸೇರಿದಂತೆ ಒಟ್ಟಾರೆ 2,329 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಅಂಕಿ ಅಂಶಗಳನ್ನುಒದಗಿಸಿರುವುದು ಗೊತ್ತಾಗಿದೆ.

 

 

2022-23ರಲ್ಲಿ 922 ಪ್ರಕರಣಗಳಲ್ಲೂ ಪರಿಹಾರ ಧನ ವಿತರಿಸಿದೆ. ಅದೇ ರೀತಿ 2023-24ರಲ್ಲಿ 1,052  ಪ್ರಕರಣಗಳಲ್ಲಿ  ಪರಿಹಾರ ಧನ ವಿತರಿಸಿದೆ. 2024-25ರಲ್ಲಿ 346 ಪ್ರಕರಣಗಳಲ್ಲಿ 335 ಪ್ರಕರಣಗಳಲ್ಲಿ ಪರಿಹಾರ ಧನ ವಿತರಿಸಿದೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

 

2022-23, 2023-24,2024-25ರ ಈ ಮೂರೂ ವರ್ಷಗಳಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2022-23ರಲ್ಲಿ 104, 2023-24ರಲ್ಲಿ 104, 2024025ರ ಡಿಸೆಂಬರ್‍‌ 9ರ ಅಂತ್ಯಕ್ಕೆ 46 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

 

ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ 2022-23ರಲ್ಲಿ 72, 2023-24ರಲ್ಲಿ 67, 2024-25ರಲ್ಲಿ 27 ಮಂದಿ  ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲ್ಬುರ್ಗಿಯಲ್ಲಿ 2022-23ರಲ್ಲಿ 55, 2023-24ರಲ್ಲಿ 65, 2024-25ರಲ್ಲಿ 19, ಬೆಳಗಾವಿಯಲ್ಲಿ 2022-23ರಲ್ಲಿ 75, 2023-24ರಲ್ಲಿ 94, 2024-25ರಲ್ಲಿ 32, ಯಾದಗಿರಿಯಲ್ಲಿ 2022-23ರಲ್ಲಿ 50, 2023-24ರಲ್ಲಿ 65, 2024-25ರಲ್ಲಿ 20, ಧಾರವಾಡದಲ್ಲಿ 2022-23ರಲ್ಲಿ 63, 2023-24ರಲ್ಲಿ 76, 2024-25ರಲ್ಲಿ 9, ಶಿವಮೊಗ್ಗದಲ್ಲಿ 2022-23ರಲ್ಲಿ 43, 2023-24ರಲ್ಲಿ 50, 2024-25ರಲ್ಲಿ 32 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರ  ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ದೇಶದಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 16,854 ಮತ್ತು ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 3,573 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಒಟ್ಟು ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ ಕರ್ನಾಟಕವು ಎರಡನೇ ಸ್ಥಾನದಲ್ಲಿತ್ತು.

 

ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಟ್ಟು ರೈತರ ಪೈಕಿ ಕಳೆದ ಮೂರು ವರ್ಷಗಳಲ್ಲಿ ಕೇವಲ 462 ರೈತರಿಗೆ ಮಾತ್ರ ಪರಿಹಾರ ಒದಗಿಸಿದೆ. ಬಿಹಾರ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಶೂನ್ಯ ವರದಿಯಾಗಿತ್ತು.

 

ರಾಜ್ಯಸಭೆ ಸದಸ್ಯ ಅನಿಲ್‌ ದೇಸಾಯಿ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು 2023ರ ಫೆ.10ರಂದು ಅಂಕಿ ಅಂಶಗಳನ್ನು ಒದಗಿಸಿದ್ದರು.

 

ಕೌಟುಂಬಿಕ ಕಾರಣ, ಅನಾರೋಗ್ಯ, ಮಾದಕ, ಕುಡಿತ, ವೈವಾಹಿಕ, ಪ್ರೇಮ ಪ್ರಕರಣ, ದಿವಾಳಿ, ನಿರುದ್ಯೋಗ, ಪರೀಕ್ಷೆಯಲ್ಲಿ ಅನುತ್ತೀರ್ಣ, ಬಡತನ ಮತ್ತು ವೃತ್ತಿಯಲ್ಲಿ ಏರಿಳಿತಗಳು ರೈತರ ಆತ್ಮಹತ್ಯೆಗೆ ಕಾರಣ ಎಂದು ಎಡಿಎಸ್‌ಐ ವರದಿಯನ್ನಾಧರಿಸಿ ಕೇಂದ್ರ ಕೃಷಿ ಸಚಿವಾಲಯವು ಅಂಕಿ ಅಂಶಗಳನ್ನು ರಾಜ್ಯಸಭೆಗೆ ಮಂಡಿಸಿತ್ತು.

 

2019ರಲ್ಲಿ ಪಿಎಂ ಕಿಸಾನ್‌ ಯೋಜನೆ ಜಾರಿಗೊಂಡಿದ್ದ ವರ್ಷದಲ್ಲೇ ದೇಶದಾದ್ಯಂತ 5,957 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ರಾಜ್ಯಸಭೆಗೆ ಮಂಡಿಸಿರುವ ಉತ್ತರದಿಂದ ತಿಳಿದು ಬಂದಿದೆ.

 

ರೈತರ ಅದಾಯ ಬೆಂಬಲಿಸಲು ಪಿಎಂ ಕಿಸಾನ್‌ ಯೋಜನೆಯ ಅನ್ವಯ ಪ್ರತಿ ರೈತನಿಗೆ ಪ್ರತಿ ವರ್ಷ 6,000 ರು.ನಂತೆ ಒಟ್ಟು ಮೂರು ಕಂತುಗಳಲ್ಲಿ ನೀಡಲಾಗಿತ್ತು.  ದೇಶದ ಒಟ್ಟು 11 ಕೋಟಿ ರೈತರಿಗೆ 2.24 ಲಕ್ಷ ಕೋಟಿ ರು.ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದೆ.

 

ಪಿಎಂ ಕಿಸಾನ್‌ ಜಾರಿಗೊಂಡ ನಂತರವೂ ದೇಶದಲ್ಲಿ 16,854, ಕರ್ನಾಟಕದಲ್ಲಿ 3,573 ರೈತರ ಆತ್ಮಹತ್ಯೆ

 

ರಾಜ್ಯಸಭೆಗೆ ಮಂಡಿಸಲಾಗಿರುವ ಅಂಕಿ ಅಂಶದ ಉತ್ತರದ ಪ್ರಕಾರ ಕರ್ನಾಟಕದಲ್ಲಿ 2019ರಲ್ಲಿ 1,331, 2020ರಲ್ಲಿ 1,072, 2021ರಲ್ಲಿ 1,170 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ರಾಜ್ಯಸಭೆಗೆ ನೀಡಿರುವ ಉತ್ತರದ ಪ್ರಕಾರ 2019-20ರಲ್ಲಿ 1,091, 2020-21ರಲ್ಲಿ 855, 2021-22ರಲ್ಲಿ 915 ರೈತರು ಸೇರಿದಂತೆ ಒಟ್ಟಾರೆ 2,861 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಸರ್ಕಾರದ ಅವಧಿಯಲ್ಲಿ 8,245 ರೈತರ ಆತ್ಮಹತ್ಯೆ; ಅಂಕಿ ಅಂಶ ಬಿಡುಗಡೆ

 

ಕೇಂದ್ರ ಕೃಷಿ ಇಲಾಖೆಯು 2019, 2020 ಮತ್ತು 2021ರ ಅಂಕಿ ಅಂಶಗಳನ್ನಷ್ಟೇ ರಾಜ್ಯಸಭೆಗೆ ನೀಡಿದೆ. ಕರ್ನಾಟಕದ ಕೃಷಿ ಇಲಾಖೆಯು 2019-20, 2020-21, 2021-22ರ ಅಂಕಿ ಅಂಶಗಳನ್ನು ಒದಗಿಸಿದೆ.

 

ರಾಜ್ಯಸಭೆ ಸದಸ್ಯ ಅನಿಲ್‌ ದೇಸಾಯಿ ಅವರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕೃಷಿ ಸಚಿವಾಲಯ

 

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ನೀಡಿದ್ದ  ಉತ್ತರದ ಪ್ರಕಾರ 2019-20ರಿಂದ 2021-22ರಲ್ಲಿ ಒಟ್ಟು 2,861 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳ ಪೈಕಿ 2,377 ರೈತರ ಆತ್ಮಹತ್ಯೆಗಳನ್ನಷ್ಟೇ ಒಪ್ಪಿಕೊಂಡಿದೆ. ಈ ಪೈಕಿ ಕೇವಲ 462 ರೈತರಿಗೆ ಮಾತ್ರ ಪರಿಹಾರ ಒದಗಿಸಿದೆ. 462 ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಿರಸ್ಕರಿಸಿದೆ. ಇನ್ನು 22 ಪ್ರಕರಣಗಳು ನಿರ್ಧರಿಸಲು ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ರಾಜ್ಯಸಭೆಗೆ ನೀಡಿರುವ ಉತ್ತರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯಸಭೆಗೆ ಕರ್ನಾಟಕ ಕೃಷಿ ಇಲಾಖೆ ನೀಡಿರುವ ಉತ್ತರದ ಪ್ರತಿ

 

ಕಳೆದ ನಾಲ್ಕು  ವರ್ಷಗಳಲ್ಲಿ ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ತ್ರಿಪುರ, ಜಾರ್ಖಂಡ್‌, ಬಿಹಾರ್‌, ಒಡಿಶಾ, ಗೋವಾ, ಉತ್ತರಾಖಂಡ, ದೆಹಲಿ, ಲಕ್ಷದ್ವೀಪ, ಪುದುಚೇರಿಯಲ್ಲಿ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ.

 

ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕು  ವರ್ಷಗಳಲ್ಲಿ ಒಟ್ಟು 7,887 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಂಧ್ರ ಪ್ರದೇಶದಲ್ಲಿ 1,673, ಅಸ್ಸಾಂನಲ್ಲಿ 191, ಛತ್ತೀಸ್‌ಗಡ್‌ನಲ್ಲಿ 531, ಗುಜರಾತ್‌ 8, ಹಿಮಾಚಲಪ್ರದೇಶದಲ್ಲಿ 31, ಕೇರಳದಲ್ಲಿ 113, ಮಧ್ಯಪ್ರದೇಶದಲ್ಲಿ 494, ಮಣಿಪುರದಲ್ಲಿ 1, ಮೇಘಾಲಯದಲ್ಲಿ 7, ಮಿಜೋರಾಂನಲ್ಲಿ 26, ನಾಗಾಲ್ಯಾಂಡ್‌ನಲ್ಲಿ 1, ಪಂಜಾಬ್‌ನಲ್ಲಿ 584, ರಾಜಸ್ಥಾನದಲ್ಲಿ 2, ಸಿಕ್ಕೀಂನಲ್ಲಿ 14, ತಮಿಳುನಾಡಿನಲ್ಲಿ 146, ತೆಲಂಗಾಣದಲ್ಲಿ 1,309, ಉತ್ತರ ಪ್ರದೇಶದಲ್ಲಿ 208, ಅಂಡೋಮನ್ ನಿಕೋಬಾರ್‌ ದ್ವೀಪದಲ್ಲಿ 13, ಜಮ್ಮುಕಾಶ್ಮೀರದಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು.

 

ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿಯಲ್ಲಿ ಕಳೆದ 6 ವರ್ಷಗಳಲ್ಲಿ 38 ಕೋಟಿ ರೈತರು ಅರ್ಜಿ ಸಲ್ಲಿಸಿದ್ದರು. 1,30,015 ಕೋಟಿ ಕ್ಲೈಮ್‌ಗಳ ಪೈಕಿ 25,252 ಕೋಟಿ ರು. ಗಳನ್ನು ರೈತರಿಗೆ ನೀಡಲಾಗಿದೆ ಎಂದು ಮಾಹಿತಿ ಒದಗಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts