ಚರ್ಚ್‌, ಜೈನ ಸಮುದಾಯ ಭವನಗಳ ನೋಂದಣಿ ಪಟ್ಟಿ ಒದಗಿಸದ ಸರ್ಕಾರ; 5 ವರ್ಷದಲ್ಲಿ 336 ಕೋಟಿ ರು. ವೆಚ್ಚ

ಬೆಂಗಳೂರು; ರಾಜ್ಯದಲ್ಲಿ  ಚರ್ಚ್‌, ಜೈನ ಮಂದಿರ, ಬಸದಿ, ಸಮುದಾಯ ಭವನಗಳ ನೋಂದಣಿಯಾಗಿರುವ ಪಟ್ಟಿ ಕೋರಿ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಬದಲಿಗೆ ಚರ್ಚ್‌, ಮಸೀದಿ, ಮದರಸಗಳು, ಜೈನ ಸಮುದಾಯ ಭವನ ಮತ್ತು ದುರಸ್ತಿ, ನವೀಕರಣಕ್ಕಾಗಿ ಮಾಡಿರುವ ವೆಚ್ಚದ ಪಟ್ಟಿಯನ್ನಷ್ಟೇ ಒದಗಿಸಿದೆ.

 

ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡದಿರುವ ಹಿಂದೂ ದೇವಸ್ಥಾನಗಳನ್ನು ಕಡ್ಡಾಯವಾಗಿ ನೋಂದಣಿ ಮಾಡುವುದು ಮತ್ತು ದೇವಾಲಯಗಳ ಆಸ್ತಿ, ಪಾಸ್ತಿ, ಚಿನ್ನಾಭರಣವೂ ಸೇರಿದಂತೆ ಒಟ್ಟು ಸಂಪನ್ಮೂಲಗಳನ್ನು ದಾಖಲಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪತ್ರ ಬರೆದಿದ್ದರ ಬೆನ್ನಲ್ಲೇ ಮಸೀದಿ, ಚರ್ಚ್‌, ಮದರಸ, ಜೈನ ಸಮುದಾಯ ಭವನಗಳ ನೋಂದಾವಣೆ ಆಗಿರುವ ಮತ್ತು ನೋಂದಾವಣೆ ಆಗದಿರುವ ಪಟ್ಟಿಯನ್ನು ಒದಗಿಸದಿರುವುದು ಮುನ್ನೆಲೆಗೆ ಬಂದಿದೆ.

 

ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಅವರು ಚರ್ಚ್‌, ಮಸೀದಿ, ಮದರಸ, ಜೈನ ಸಮುದಾಯದ ಧಾರ್ಮಿಕ ಕೇಂದ್ರಗಳು ನೋಂದಾವಣೆ ಮತ್ತು ಈ ಕೇಂದ್ರಗಳಿಗೆ ಬಿಡುಗಡೆ ಮಾಡಿರುವ ಅನುದಾನ, ವೆಚ್ಚದ ಕುರಿತು ಮಾಹಿತಿ ಕೋರಿದ್ದರು.

 

ಈ ಮಾಹಿತಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶನಾಲಯವು ನೋಂದಣಿ ಆಗಿರುವ ಪಟ್ಟಿಯನ್ನು ಒದಗಿಸಿಲ್ಲ. ಬದಲಿಗೆ ಈ ಧಾರ್ಮಿಕ ಕೇಂದ್ರಗಳಿಗೆ, ಸಮುದಾಯ ಭವನಗಳಿಗೆ ಬಿಡುಗಡೆ ಮಾಡಿರುವ ಅನುದಾನ ಮತ್ತು ವೆಚ್ಚದ ವಿವರವನ್ನು ನೀಡಿದೆ.

 

2018-19ರಿಂದ 2023-24ನೇ ಸಾಲಿನವರೆಗೆ ಮಸೀದಿ, ಚರ್ಚ್‌, ಜೈನ ಸಮುದಾಯ ಭವನಗಳು ಮತ್ತು ದುರಸ್ತಿ, ನವೀಕರಣಕ್ಕಾಗಿ ಒಟ್ಟಾರೆ 336.67 ಕೋಟಿ ರು.ಗಳನ್ನು ಬಿಡುಗಡೆ ಮಾಡಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

ಮುಸ್ಲಿಂ ಸಮುದಾಯದ ಸಮುದಾಯ ಭವನಗಳಿಗೆ 2018-19ರಿಂದ 2023-24ನೇ ಸಾಲಿನವರೆಗೆ 33.84 ಕೋಟಿ ರು., ಒದಗಿಸಿದೆ.

 

ಮಸೀದಿ, ಮದರಸಗಳ ನೋಂದಾವಣೆ ಬಗ್ಗೆ ಮಾಹಿತಿ ಒದಗಿಸಲು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ ಅರ್ಜಿಯನ್ನು ವರ್ಗಾಯಿಸಿದೆ. ಈ ಕುರಿತು ಇಲಾಖೆ ಅಧಿಕಾರಿಗಳು ಸಚಿವ ಜಮೀರ್‍‌ ಅಹ್ಮದ್‌ ಖಾನ್‌ ಅವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

 

ಚರ್ಚ್‌, ಸಮುದಾಯ ಭವನಗಳಿಗೆ 87.28 ಕೋಟಿ ರು., ಚರ್ಚ್‌, ಸಮದಾಯ ಭವನಗಳ ದುರಸ್ತಿ, ನವೀಕರಣಕ್ಕಾಗಿ 101.32 ಕೋಟಿ ರು.,

 

 

ಜೈನ ಸಮುದಾಯ ಭವನ, ಬಸದಿ, ಮಂದಿರಗಳಿಗೆ 49.28 ,ಕೋಟಿ ರು., ಇವುಗಳ ದುರಸ್ತಿ ಹಾಗೂ ನವೀಕರಣಕ್ಕಾಗಿ 64.93 ಕೋಟಿ ರು. ಸೇರಿ ಒಟ್ಟಾರೆ 336.67 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶನಾಲಯವು ಉತ್ತರ ಒದಗಿಸಿದೆ.

 

ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸೆಕ್ಷನ್‌ 53ರ ಪ್ರಕಾರ ದೇವಸ್ಥಾನಗಳು ತಮ್ಮ ಆಸ್ತಿಪಾಸ್ತಿ, ಚಿನ್ನಾಭರಣಗಳನ್ನು ದಾಖಲಿಸುವ ಸಂಬಂಧ ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಅವರು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ 2023ರ ಸೆ.30ರಂದು ಪತ್ರ ಬರೆದಿದ್ದರು.

 

ಈ ಪತ್ರವನ್ನಾಧರಿಸಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಮುಜರಾಯಿ) ಗೆ  ನಿರ್ದೇಶನ ನೀಡಿರುವ ಸಚಿವರ ಕಚೇರಿಯಿಂದ 2023ರ ಅಕ್ಟೋಬರ್‍‌ 27ರಂದು ಪತ್ರವನ್ನು ಬರೆದಿತ್ತು.

ಹಿಂದೂ ದೇವಸ್ಥಾನಗಳ ಕಡ್ಡಾಯ ನೋಂದಣಿ, ಆಸ್ತಿ, ಪಾಸ್ತಿ, ಚಿನ್ನಾಭರಣ ದಾಖಲು; ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ

2023ರ ಸೆ.30ರಂದು ಮನವಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳ ಕುರಿತು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ 2023ರ ಅಕ್ಟೋಬರ್‍‌ 5ರಂದೇ ಪತ್ರ ಬರೆಯಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರ ಆಪ್ತ ಕಾರ್ಯದರ್ಶಿ ಕೆ ಎಸ್‌ ಜಗದೀಶ್‌ ರೆಡ್ಡಿ ಅವರು ಹಿಂಬರಹ ನೀಡಿದ್ದಾರೆ.

 

ಹಿಂದಿನ ಬಿಜೆಪಿ ಸರ್ಕಾರವು ಕರ್ನಾಟಕದ ಚರ್ಚ್ಗಳ ಮೇಲೆ ಗೂಢಚಾರಿಕೆ ಮಾಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಗುಪ್ತಚರ ಇಲಾಖೆಯಿಂದಲೇ ನೇರವಾಗಿ ಕಾರ್ಯಾಚರಣೆ ಮಾಡಲಾಗಿತ್ತು.

ಕರ್ನಾಟಕದ ಚರ್ಚ್‌ಗಳ ಮೇಲೆ ಗೂಢಚಾರಿಕೆ; ಗುಪ್ತಚರ ಇಲಾಖೆಯಿಂದ ಕಾರ್ಯಾಚರಣೆ

 

ಆದರೆ ಚರ್ಚ್‌ಗಳ ಗೂಢಚಾರಿಕೆ ಕುರಿತು ಒಳಾಡಳಿತ ಇಲಾಖೆಯಲ್ಲಿ ಮಾಹಿತಿಯೇ ಇರಲಿಲ್ಲ.

ಚರ್ಚ್‌ಗಳ ಮೇಲೆ ಗೂಢಚಾರಿಕೆ; ಒಳಾಡಳಿತ ಇಲಾಖೆಯಲ್ಲಿ ಮಾಹಿತಿಯೇ ಲಭ್ಯವಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮ 2002ರ ಸೆಕ್ಷನ್‌ 53ರಂತೆ ಇದುವರೆಗೂ ನೋಂದಣಿ ಆಗಿರುವುದಿಲ್ಲ ಎಂದು ಧಾರ್ಮಿಕ ದತ್ತಿ ತಹಶೀಲ್ದಾರ್‍‌ ಅವರು ಮಾಹಿತಿ ಒದಗಿಸಿದ್ದರು.

ಧರ್ಮಸ್ಥಳ ದೇಗುಲ ನೋಂದಣಿಯಾಗಿಲ್ಲವೆಂದ ಸರ್ಕಾರ; ಧರ್ಮಾದಾಯ ದತ್ತಿ ಅಧಿನಿಯಮ ಉಲ್ಲಂಘನೆ?

 

ಬಹುತೇಕ ಮಂದಿಗೆ ಸುಪ್ರೀಂ ಕೋರ್ಟ್‍ನ ಆದೇಶದಲ್ಲೇನಿದೆ ಮತ್ತು ಧಾರ್ಮಿಕ ದತ್ತಿ ಕಾಯ್ದೆಯಲ್ಲೇನಿದೆ ಎಂಬ ಮಾಹಿತಿ ಇಲ್ಲ. ಈ ವಿವರಗಳನ್ನು ದಾಖಲೆ ಸಹಿತ ಮುಂದಿಡಲಾಗಿದೆ. ಆದರೂ ವೀರೇಂದ್ರ ಹೆಗ್ಗಡೆಯವರಾಗಲೀ, ಅವರ ಅಧಿಕೃತ ಪ್ರತಿನಿಧಿಯಾಗಲೀ ಪ್ರತಿಕ್ರಿಯಿಸಿಲ್ಲ ಎಂದು ಟ್ರಸ್ಟ್ ಆರೋಪಿಸಿತ್ತು.

 

‘ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳು ರಾಜ್ಯ ಸರ್ಕಾರದ ಕಾನೂನು ಕಟ್ಟಳೆಗಳ ನಿಯಮದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಈ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಮಾಹಿತಿಯು ಸರ್ಕಾರದಲ್ಲಿ ಇರಬೇಕು. ಇದರ ಮೇಲ್ವಿಚಾರಣೆಯನ್ನು ಸರ್ಕಾರ ಆಗಾಗ ಪರಿಶೀಲಿಸುತ್ತಿದ್ದಲ್ಲಿ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಧಾರ್ಮಿಕ ಭಾವನೆಗಳು ನೆಲೆಯೂರುತ್ತದೆ. ಇಲ್ಲದೆ ಇದ್ದಲ್ಲಿ  ಧರ್ಮ ಧರ್ಮಗಳ ನಡುವಿನ ತಾರತಮ್ಯಕ್ಕೆ ಸರ್ಕಾರ ಹೊಣೆ ಯಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ತತಕ್ಷಣ ಮಸೀದಿ, ಚರ್ಚ್, ಜೈ ಮಂದಿರ ಹಾಗೂ ಹಿಂದೂ ದೇವಸ್ಥಾನಗಳ ನೋಂದಾವಣೆಯನ್ನು ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳು ತಕ್ಷಣ ನೋಂದಾವಣೆ ಮಾಡುವಂತೆ ಧಾರ್ಮಿಕ ಕೇಂದ್ರಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು,’ ಎನ್ನುತ್ತಾರೆ ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌.

the fil favicon

SUPPORT THE FILE

Latest News

Related Posts