ಬೆಂಗಳೂರು; 2019ರಲ್ಲೇ ಗ್ರಾಮ ಪಂಚಾಯ್ತಿಗಳಲ್ಲಿ ಶಿಕ್ಷಣ ಉಪ ಕರ ವಿಧಿಸುವುದನ್ನು ಸ್ಥಗಿತಗೊಂಡಿದ್ದರೂ ಸಹ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ 2022-23ರಲ್ಲಿ 171.82 ಕೋಟಿ ರು.ಗಳನ್ನು ವಸೂಲು ಮಾಡಲಾಗಿತ್ತು.
ಮತ್ತೊಂದು ವಿಶೇಷವೆಂದರೇ ವಸೂಲಾಗಿದ್ದ 171.82 ಕೋಟಿ ರು ನಲ್ಲಿ ಕೇವಲ 54.31 ಕೋಟಿ ರು ಮಾತ್ರ ಸರ್ಕಾರಕ್ಕೆ ಜಮೆ ಮಾಡಿದ್ದ ಪಂಚಾಯ್ತಿಗಳು 117.51 ಕೋಟಿ ರು.ಗಳನ್ನು ಸರ್ಕಾರಕ್ಕೆ ಜಮೆಯನ್ನೇ ಮಾಡಿರಲಿಲ್ಲ.
ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಆರೋಗ್ಯ, ಗ್ರಂಥಾಲಯ, ಭಿಕ್ಷುಕರ ಕರ, ಅಭಿವೃದ್ಧಿ ಕರ, ಶಿಕ್ಷಣ ಕರ ವಸೂಲಾಗಿರುವ 769.79 ಕೋಟಿ ರು ಗಳನ್ನು ಸರ್ಕಾರಕ್ಕೆ ಜಮೆ ಮಾಡಿಲ್ಲ.
ಅದೇ ರೀತಿ 1,119 ಗ್ರಾಮ ಪಂಚಾಯ್ತಿಗಳು ವಸೂಲು ಮಾಡಿದ್ದ 6.02 ಕೋಟಿಯಷ್ಟು ಆಂತರಿಕ ಆದಾಯದ ಮೊತ್ತವನ್ನು ಗ್ರಾಮ ಪಂಚಾಯ್ತಿ ನಿಧಿಗೆ ಜಮೆ ಮಾಡಿಲ್ಲ. ಅದೇ ರೀತಿ ಬ್ಯಾಂಕ್ ಖಾತೆಯಿಂದ 3.06 ಕೋಟಿ ರು ಡ್ರಾ ಮಾಡಿರುವ ಹಲವು ಗ್ರಾಮ ಪಂಚಾಯ್ತಿಗಳು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆಯಾಗಿರಲಿಲ್ಲ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯ (2022-23) ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ಮಾಹಿತಿ ಇವೆ.
ರಾಜ್ಯದ 2,916 ಗ್ರಾಮ ಪಂಚಾಯ್ತಿಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯ್ತಿಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ. ಹಾಗೂ ವಸೂಲಾತಿಯಲ್ಲಿ ಪಂಚಾಯ್ತಿಗಳ ನಿರ್ಲಕ್ಷ್ಯ, ಪಂಚಾಯ್ತಿಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತ, ಶಾಸನಬದ್ಧ ತೆರಿಗೆಯಲ್ಲಿಯೇ ಕಡಿಮೆ ತೆರಿಗೆ ಕಟಾಯಿಸಿರುವುದು ಮೊಬೈಲ್ ಟವರ್ ವಾರ್ಷಿಕ ತೆರಿಗೆ ವಸೂಲು ಮಾಡದೇ ಇರುವ ಪ್ರಕರಣಗಳನ್ನು ಹೊರಗೆಳೆದಿರುವ ಲೆಕ್ಕ ಪರಿಶೋಧಕರು, ಗ್ರಾಮ ಪಂಚಾಯ್ತಿಗಳು ವಸೂಲು ಮಾಡುವ ಉಪ ಕರಗಳನ್ನು ಸರ್ಕಾರಕ್ಕೆ ಜಮೆ ಮಾಡಿಲ್ಲ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ.
ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮ 1993ರ ಪ್ರಕರಣ 199ರ ಪ್ರಕಾರ ಗ್ರಾಮ ಪಂಚಾಯ್ತಿಗಳು ಭೂಮಿ, ಕಟ್ಟಡಗಳ ಮೇಲೆ ವಿಧಿಸುವ ತೆರಿಗೆಯ ಮೇಲೆ ಶೇ. 15ರಷ್ಟು ಆರೋಗ್ಯ ಕರ, ಶೇ. 06ರಷ್ಟು ಗ್ರಂಥಾಲಯ ಕರ, ಶೆ. 03ರಷ್ಟು ಭಿಕ್ಷುಕರ ಕರವನ್ನು ವಸೂಲು ಮಾಡಬೇಕು. ಮತ್ತು ವಸೂಲಾತಿಯಾದ ಈ ತೆರಿಗೆಯ ಮೊತ್ತವನ್ನು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ವಿಳಂಬವಿಲ್ಲದೇ ಪಾವತಿಸಬೇಕು.
2019ರ ಮಾರ್ಚ್ 19ರಂದು ಹೊರಡಿಸಿದ್ದ ಸುತ್ತೋಲೆ ಪ್ರಕಾರ ಶಿಕ್ಷಣ ಉಪಕರವನ್ನು ವಿಧಿಸುವುದನ್ನು ಸ್ಥಗಿತಗೊಳಿಸಿದೆ. ಭೂಮಿ, ಕಟ್ಟಡಗಳ ಮೇಲೆ ವಿಧಿಸುವ ತೆರಿಗೆಯ ಮೇಲೆ ಪ್ರತಿ ಒಂದು ರೂಪಾಯಿಗೆ 10 ಪೈಸೆಯವರೆಗೆ ಶಿಕ್ಷಣ ಉಪ ಕರವನ್ನು ವಿಧಿಸಿ ವಸೂಲು ಮಾಡಲು ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಅವಕಾಶವಿಲ್ಲ. ಆದರೂ ಸಹ 2022-23ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಲ್ಲಿ ಗ್ರಾಮ ಪಂಚಾಯ್ತಿಗಳು ಶಿಕ್ಷಣ ಉಪ ಕರವನ್ನು ವಸೂಲು ಮಾಡಿದ್ದವು.
ಆರೋಗ್ಯ ಹಾಗೂ ಭಿಕ್ಷುಕರ ಉಪ ಕರಗಳಲ್ಲಿ ಶೇ.10ರಷ್ಟನ್ನು ಗ್ರಾಮ ಪಂಚಾಯ್ತಿಗಳು ಉಪಯೋಗಿಸಿಕೊಂಡು ಇನ್ನುಳಿದ ಉಪ ಕರಗಳ ಮೊತ್ತವನ್ನು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಬೇಕು. ಆದರೆ ಬಹುತೇಕ ಗ್ರಾಮ ಪಂಚಾಯ್ತಿಗಳು ಉಪಕರಗಳ ಮೊತ್ತಗಳನ್ನು ಸರ್ಕಾರದ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡುತ್ತಿಲ್ಲ. ಹಿಂದಿನ ಸಾಲಿನಿಂದಲೂ ಪಂಚಾಯ್ತಿ ನಿಧಿಯಲ್ಲೇ ಉಳಿಸಿಕೊಂಡಿವೆ. ಮತ್ತು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡದಿರುವ ಪ್ರಕರಣಗಳನ್ನೂ ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ಗೊತ್ತಾಗಿದೆ.
ರಾಜ್ಯದ 7 ಜಿಲ್ಲೆಗಳಲ್ಲಿನ 222 ಪಂಚಾಯ್ತಿಗಳು ಬ್ಯಾಂಕ್ ಖಾತೆಯಿಂದ 3.06 ಕೋಟಿ ಮೊತ್ತವನ್ನು ಡ್ರಾ ಮಾಡಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಿಲ್ಲ.
ಜಮೆ ಆಗಿದ್ದೆಷ್ಟು?
392.22 ಕೋಟಿ ರು ಮೊತ್ತದ ಆರೋಗ್ಯ ಕರ, 4.14 ಕೋಟಿ ಆಭಿವೃದ್ಧಿ ಕರ, 171.82 ಕೋಟಿ ಶಿಕ್ಷಣ ಕರ 163.02 ಕೋಟಿ , ಗ್ರಂಥಾಲಯ ಕರ, 61.06 ಕೋಟಿ ರು ಭಿಕ್ಷುಕರ ಕರ ಸೇರಿದಂತೆ ಒಟ್ಟಾರೆ 731.2 ಕೋಟಿ ರು.ಗಳನ್ನು ವಸೂಲು ಮಾಡಿತ್ತು. ಇದರಲ್ಲಿ ಆರಂಭಿಕ ಶಿಲ್ಕೂ ಸಹ ಒಳಗೊಂಡಿತ್ತು. ಈ ಪೈಕಿ ಸರ್ಕಾರಕ್ಕೆ 18.38 ಕೋಟಿ ರು ಜಮೆ ಮಾಡಿತ್ತು.
ಜಮೆ ಮಾಡಬೇಕಿದ್ದೆಷ್ಟು?
ವಸೂಲು ಮಾಡಿದ್ದ ಆರೋಗ್ಯ ಕರ ಮೊತ್ತ 392.22 ಕೋಟಿ ರು.ನಲ್ಲಿ ಕೇವಲ 8.84 ಕೋಟಿ ಮಾತ್ರ ಸರ್ಕಾರಕ್ಕೆ ಜಮೆ ಮಾಡಿತ್ತು. ಇನ್ನು ಸರ್ಕಾರಕ್ಕೆ 383.38 ಕೋಟಿ ರು ಜಮೆ ಮಾಡಿರಲಿಲ್ಲ. ಅದೇ ರೀತಿ 4.14 ಕೋಟಿ ರು ಮೊತ್ತದ ಅಭಿವೃದ್ಧಿ ಕರ ವಸೂಲು ಮಾಡಿದ್ದರೂ ಸಹ ಒಂದೇ ಒಂದು ಪೈಸೆಯನ್ನು ಜಮೆ ಮಾಡಿರಲಿಲ್ಲ. ಶಿಕ್ಷಣ ಕರವೆಂದು 171.82 ಕೋಟಿ ರು ವಸೂಲು ಮಾಡಿದ್ದರೂ ಸಹ ಕೇವಲ 54.31 ಕೋಟಿ ರು.ಗಳನ್ನಷ್ಟೇ ಸರ್ಕಾರಕ್ಕೆ ಜಮೆ ಮಾಡಿತ್ತು. 117.51 ಕೋಟಿ ರು. ಗಳನ್ನು ಜಮೆ ಮಾಡಿರಲಿಲ್ಲ.
ಅದೇ ರೀತಿ 163.02 ಕೋಟಿ ರುಗಳನ್ನು ಗ್ರಂಥಾಲಯ ಕರ ರೂಪದಲ್ಲಿ ವಸೂಲು ಮಾಡಿತ್ತಾದರೂ ಈ ಪೈಕಿ ಸರ್ಕಾರಕ್ಕೆ ಜಮೆ ಮಾಡಿದ್ದು ಕೇವಲ 2.40 ಕೋಟಿಯನ್ನಷ್ಟೇ. 160.61 ಕೋಟಿ ರು ಗಳನ್ನು ಸರ್ಕಾರಕ್ಕೆ ಜಮೆ ಮಾಡಿರಲಿಲ್ಲ. ಭಿಕ್ಷುಕರ ಕರ ರೂದಪಲ್ಲಿ 61.06 ಕೋಟಿ ರು ವಸೂಲು ಮಾಡಿದ್ದರೂ ಸಹ ಸರ್ಕಾರಕ್ಕೆ 6.58 ಕೋಟಿ ಮಾತ್ರ ಜಮೆ ಮಾಡಿತ್ತು. ಇನ್ನುಳಿದ 54.47 ಕೋಟಿ ರು.ಗಳನ್ನು ಸರ್ಕಾರಕ್ಕೆ ಜಮೆಯಾಗಿರಲಿಲ್ಲ.
ಒಟ್ಟಾರೆಯಾಗಿ ಸರ್ಕಾರಕ್ಕೆ 769.73 ಕೋಟಿ ರು.ಗಳನ್ನು ಸರ್ಕಾರಕ್ಕೆ ಜಮೆಯನ್ನೇ ಮಾಡಿರಲಿಲ್ಲ.
2021-22ರಲ್ಲಿಯೂ ಇಂತಹದ್ದೇ ಹಲವು ಲೋಪಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದರು.
ಗ್ರಾಮ ಪಂಚಾಯ್ತಿಗಳಲ್ಲಿ ಲೆಕ್ಕಪರಿಶೋಧನೆ; 251.99 ಕೋಟಿ ರು. ಜಮೆ-ವೆಚ್ಚಕ್ಕೆ ದಾಖಲೆಗಳೇ ಇಲ್ಲ
ಅದೇ ರೀತಿ 355 ಪಂಚಾಯ್ತಿಗಳಲ್ಲಿ ಮ್ಯುಟೇಷನ್ ರಿಜಿಸ್ಟರ್ಗಳನ್ನು ನಿರ್ವಹಿಸಿರಲಿಲ್ಲ.
ಮ್ಯುಟೇಷನ್ ರಿಜಿಸ್ಟರ್ ನಿರ್ವಹಿಸದ 335 ಪಂಚಾಯ್ತಿಗಳು; ಲೆಕ್ಕ ಪರಿಶೋಧನೆ ವರದಿ
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇರಲಿಲ್ಲ.
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇಲ್ಲ; ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ
342 ಪಂಚಾಯ್ತಿಗಳಲ್ಲಿ ವಾರ್ಡ್, ಗ್ರಾಮ ಸಭೆಯೂ ನಡೆದಿರಲಿಲ್ಲ.
342 ಪಂಚಾಯ್ತಿಗಳಲ್ಲಿ ನಡೆಯದ ವಾರ್ಡ್, ಗ್ರಾಮ ಸಭೆ; ಸಾರ್ವಜನಿಕ ಸಹಭಾಗಿತ್ವದ ಕೊರತೆ ಬಹಿರಂಗ
274 ಪಂಚಾಯ್ತಿಗಳಲ್ಲಿ ನರೇಗಾ ಕಾಮಗಾರಿ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿರಲಿಲ್ಲ.
ನರೇಗಾ ಕಾಮಗಾರಿ; ಸಾಮಾಜಿಕ ಲೆಕ್ಕಪರಿಶೋಧನೆಯನ್ನೇ ನಡೆಸದ 274 ಪಂಚಾಯ್ತಿಗಳು
ಅಲ್ಲದೇ ಅಂತಹ ಪಿಡಿಓ ವಿರುದ್ಧ ಶಿಸ್ತು ಕ್ರಮ, ಸೇವಾ ಬಡ್ತಿ ತಡೆಯುವುದು, ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಹಾಗೆಯೇ ಮೈಸೂರು ಆಡಿಟ್ ಮ್ಯಾನ್ಯುಯಲ್ ನಿಯಮ 537ರ ಅನುಸಾರ ಹಣ ದುರುಪಯೋಗವಾಗಿದೆಂದು ಸಹ ಪರಿಗಣಿಸಬಹುದು ಎಂದು 2021-22ನೇ ಸಾಲಿನ ವರದಿಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.