ಬೆಂಗಳೂರು; ಮನೆ, ಭೂಮಿ ಮೇಲಿನ ತೆರಿಗೆ, ಜಾಹೀರಾತು, ಹೋರ್ಡಿಂಗ್ಸ್, ಮೊಬೈಲ್ ಟವರ್, ಸೋಲಾರ್ ಪಾರ್ಕ್ ತೆರಿಗೆ ಸಂಬಂಧ 1,710.39 ಕೋಟಿ ರು ಬೇಡಿಕೆ ಪೈಕಿ 567.81 ಕೋಟಿ ರು ಮಾತ್ರ ವಸೂಲಿ ಮಾಡಿರುವ ರಾಜ್ಯದ ಬಹುತೇಕ ಗ್ರಾಮ ಪಂಚಾಯ್ತಿಗಳು, ವಸೂಲಿಗೆ 1,142.60 ಕೋಟಿ ರು ಬಾಕಿ ಉಳಿಸಿಕೊಂಡಿರುವುದನ್ನು ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಹಿರಂಗಪಡಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ 2,916 ಗ್ರಾಮ ಪಂಚಾಯ್ತಿಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯ್ತಿಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ ಮತ್ತು ವಸೂಲಾತಿಯಲ್ಲಿ ಪಂಚಾಯ್ತಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದ್ದರ ಬೆನ್ನಲ್ಲೇ ಪಂಚಾಯ್ತಿಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪತ್ತೆ ಹಚ್ಚಿದೆ.
ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಆಸ್ತಿ ತೆರಿಗೆ ಸೇರಿದಂತೆ ಇನ್ನಿತರೆ ತೆರಿಗೆಗಳು ಆದಾಯದ ಮೂಲವಾಗಿವೆ. 1,142.60 ಕೋಟಿ ರು ಪಂಚಾಯ್ತಿಗಳಿಗೆ ಬರಬೇಕಿದ್ದ ಆದಾಯವಾಗಿದ್ದರೂ ಅಗಾಧ ಪ್ರಮಾಣದ ಮೊತ್ತವನ್ನು ವಸೂಲಿ ಮಾಡದೇ ಆದಾಯವು ಕೈ ತಪ್ಪಿದಂತಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ರಾಜ್ ಅಧಿನಿಯಮ 1963ರ ಪ್ರಕರಣ 199ರ ಅನ್ವಯ ತೆರಿಗೆಗಳನ್ನು ವಿಧಿಸಲು ಅವಕಾಶವಿದೆ. ಹಾಗೂ ಪ್ರಕರಣ 199 (ಎ) ಅನ್ವಯ ಗ್ರಾಮ ಪಂಚಾಯ್ತಿಗಳು ವಿಧಿಸಬಹುದಾದ ತೆರಿಗೆಗಳು ಮತ್ತು ದರಗಳನ್ನು, ಕಟ್ಟಡಗಳು ಮತ್ತು ಕೃಷಿಯೇತರ ಭೂಮಿಗಳ ಸಂಬಂಧದಲ್ಲಿ ಕನಿಷ್ಠ 2 ವರ್ಷಕ್ಕೊಮ್ಮೆ ಪರಿಷ್ಕರಣೆಗೆ ಅವಕಾಶವಿದೆ. ಇದರಿಂದ ಗ್ರಾಮ ಪಂಚಾಯ್ತಿಗಳು ತಮ್ಮ ಸ್ವಂತ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ.
ಕರ್ನಾಟಕ ಪಂಚಾಯತ್ರಾಜ್ (ಗ್ರಾಮ ಪಂಚಾಯ್ತಿಗಳ ಅಯವ್ಯಯ ಮತ್ತು ಲೆಕ್ಕಪತ್ರಗಳು ) 2006ರನಿಯಮ 33 ಮತ್ತು 34ರಂತೆ ಗ್ರಾಮ ಪಂಚಾಯ್ತಿಗಳು ವಿಧಿಸುವ ವಿವಿಧ ತೆರಿಗೆಗಳ ಕುರಿತು ಬೇಡಿಕೆ, ವಸೂಲಾತಿ, ಬಾಕಿ ವಹಿಗಳನ್ನು ನಿರ್ವಹಿಸಬೇಕು.
ಆದರೆ ‘ಬಹಳಷ್ಟು ಗ್ರಾಮ ಪಂಚಾಯ್ತಿಗಳು ಈ ಕಾಯ್ದೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಹಾಗೂ ಬಹುತೇಕ ಪಂಚಾಯ್ತಿಗಳು ಈ ವಹಿಗಳನ್ನೂ ನಿರ್ವಹಿಸಿಲ್ಲ. ಈ ರೀತಿ ಬೇಡಿಕೆ, ವಸೂಲಾತಿ, ಬಾಕಿ ವಹಿಗಳನ್ನು ನಿರ್ವಹಿಸದಿದ್ದಲ್ಲಿ ಮತ್ತು ಸಂಸ್ಥೆವಾರು ಬಾಕಿ ಪಟ್ಟಿಯನ್ನು ತಯಾರಿಸದಿದ್ದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಬರುವ ಆದಾಯವು ಕೈ ತಪ್ಪುವ ಸಾಧ್ಯತೆ ಇರುತ್ತದೆ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
2022-23ನೇ ಸಾಲಿನಲ್ಲಿ ಕೈಗೊಂಡಿದ್ದ ಲೆಕ್ಕ ಪರಿಶೋಧನೆ ಪ್ರಕಾರ 5,952 ಗ್ರಾಮ ಪಂಚಾಯ್ತಿಗಳ ಒಟ್ಟು ಬೇಡಿಕೆ, ವಸೂಲಾತಿ ಮತ್ತು ಬಾಕಿ ಮೊತ್ತವು 17,104 ಕೋಟಿ ರು ನಷ್ಟಿತ್ತು. ಈ ಪೈಕಿ ಕೇವಲ 567.81 ಕೋಟಿ ರು ಮಾತ್ರ ವಸೂಲಾಗಿತ್ತು. ವಸೂಲಿಗೆ 1,147 ಕೋಟಿಯಷ್ಟು ಬಾಕಿ ಇತ್ತು ಎಂಬುದು ಪಟ್ಟಿಯಿಂದ ಗೊತ್ತಾಗಿದೆ.
ಇದರಲ್ಲಿ ಮನೆ ಮೇಲಿನ ತೆರಿಗೆ ರೂಪದಲ್ಲಿ 1619.10 ಕೋಟಿ ರು ಭೂಮಿ ಮೇಲಿನ ತೆರಿಗೆ ರೂಪದಲ್ಲಿ 28.79 ಕೋಟಿ ರು., ಜಾಹೀರಾತು ಮತ್ತು ಹೋರ್ಡಿಂಗ್ಸ್ಗಳಿಂದ 13.99 ಕೋಟಿ ರು., ಮೊಬೈಲ್ ಟವರ್ ಗಳ ತೆರಿಗೆ 33.92 ಕೋಟಿ , ಗಾಳಿ ಯಂತ್ರ ತೆರಿಗೆ 4.56 ಕೋಟಿ ರು., ಸೋಲಾರ್ ಪಾರ್ಕ್ ತೆರಿಗೆ 10.03 ಕೋಟಿ ರು ಒಳಗೊಂಡಿತ್ತು.
ಮನೆ ಮೇಲಿನ ತೆರಿಗೆ ಬೇಡಿಕೆ ಪೈಕಿ 537.71 ಕೋಟಿ ರು ಮಾತ್ರ ವಸೂಲಿ ಮಾಡಿದೆ. ಭೂಮಿ ಮೇಲಿನ ತೆರಿಗೆ ಪೈಕಿ 12.08 ಕೋಟಿ ರು., ಜಾಹೀರಾತು ಹೋರ್ಡಿಂಗ್ಸ್ ಮೇಲಿನ ತೆರಿಗೆಯಲ್ಲಿ ಕೇವಲ 2.90 ಕೋಟಿ ರು., ಮೊಬೈಲ್ ಟವರ್ ಮೇಲಿನ ತೆರಿಗೆಯಲ್ಲಿ 9.10 ಕೋಟಿ ರು., ಗಾಳಿ ಯಂತ್ರ ತೆರಿಗೆ 1.90 ಕೋಟಿ ರು., ಸೋಲಾರ್ ಪಾರ್ಕ್ ತೆರಿಗೆಯಲ್ಲಿ 4.09 ಕೋಟಿ ರು ಸೇರಿ ಒಟ್ಟಾರೆ 567 ಕೋಟಿ ರು ಮಾತ್ರ ವಸೂಲಾಗಿರುವುದು ತಿಳಿದು ಬಂದಿದೆ.
ಈ ಪಟ್ಟಿಯ ಪ್ರಕಾರ ಆರಂಭಿಕ ಶಿಲ್ಕಿನೊಂದಿಗೆ ವರ್ಷದ ಬೇಡಿಕೆಯನ್ನೊಳಗೊಂಡ ಶೇ. 33ರಷ್ಟುತೆರಿಗೆ ಆದಾಯವನ್ನು ಮತ್ತು ಶೇ. 36ರಷ್ಟು ತೆರಿಗೆಯೇತರ ಆದಾಯ ಮೊತ್ತ ವಸೂಲಿಸಿದೆ. ಇದರ ಪ್ರಕಾರ ಶೆ. 67ರಷ್ಟು ತೆರಿಗೆ ಆದಾಯ ಮತ್ತು ಶೇ. 64ರಷ್ಟು ತೆರಿಗೆಯೇತರ ಆದಾಯದ ಮೊತ್ತವನ್ನು ವಸೂಲಿ ಮಾಡಲು ಬಾಕಿ ಉಳಿಸಿಕೊಂಡಿವೆ. ಇದರಿಂದಾಗಿ ಪಂಚಾಯ್ತಿಗಳು ತಮ್ಮ ಸ್ವಂತ ಆದಾಯದ ಮೂಲಗಳನ್ನು ಸಮರ್ಪಕವಾಗಿ ವಸೂಲು ಮಾಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
‘ಇದರಿಂದಾಗಿ ಗ್ರಾಮ ಪಂಚಾಯ್ತಿಗಳ ಸುಸ್ಥಿರ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಮತ್ತು ಸಂಪೂರ್ಣವಾಗಿ ಸರ್ಕಾರದ ಅನುದಾನದ ಮೇಲೆಯೇ ಅವಲಂಬಿತವಾಗಬೇಕಾಗಿರುತ್ತದೆ,’ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
ಗ್ರಾಮ ಪಂಚಾಯ್ತಿಯ ಆಸ್ತಿಗಳಿಗೂ ಹಾಗೂ ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿಕೊಂಡಿರುವ ಆಸ್ತಿಗಳಿಗೂ ವ್ಯತ್ಯಾಸ ಕಂಡು ಬಂದಿದೆ. ಹಾಗೂ ಕಾಲಕಾಲಕ್ಕೆ ರಿಜಿಸ್ಟರ್ನಲ್ಲಿ ನಮೂದಿಸದ ಕಾರಣ ಗ್ರಾಮ ಪಂಚಾಯ್ತಿಗಳಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟಾಗುತ್ತಿದೆ.
‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳನ್ನೂ ಪಂಚ ತಂತ್ರ ತಂತ್ರಾಂಶದಲ್ಲಿ ಅಳವಡಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಸಂಪೂರ್ಣವಾಗಿ ತೆರಿಗೆ ವಸೂಲಿ ಮಾಡಿದರೆ ಗ್ರಾಮ ಪಂಚಾಯ್ತಿಗಳ ಆರ್ಥಿಕ ನಷ್ವವನ್ನು ತಪ್ಪಿಸಬಹುದಾಗಿದೆ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಶಿಫಾರಸ್ಸಾಗಿರುವುದು ಗೊತ್ತಾಗಿದೆ.
2021-22ರಲ್ಲಿಯೂ 147 ಪಂಚಾಯ್ತಿಗಳು ದಾಖಲೆ ನಿರ್ವಹಣೆಯಲ್ಲಿ ಮತ್ತು ಲೆಕ್ಕ ಪರಿಶೋಧನೆಗೆ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದವು. ಅದೇ ರೀತಿ ಲೆಕ್ಕಪರಿಶೋಧನೆಗೆ 251.99 ಕೋಟಿ ರು.ಗಳ ಜಮೆ ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿರಲಿಲ್ಲ ಎಂಬುದನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪತ್ತೆ ಹಚ್ಚಿತ್ತು.
ಗ್ರಾಮ ಪಂಚಾಯ್ತಿಗಳಲ್ಲಿ ಲೆಕ್ಕಪರಿಶೋಧನೆ; 251.99 ಕೋಟಿ ರು. ಜಮೆ-ವೆಚ್ಚಕ್ಕೆ ದಾಖಲೆಗಳೇ ಇಲ್ಲ
ಅದೇ ರೀತಿ 355 ಪಂಚಾಯ್ತಿಗಳಲ್ಲಿ ಮ್ಯುಟೇಷನ್ ರಿಜಿಸ್ಟರ್ಗಳನ್ನು ನಿರ್ವಹಿಸಿರಲಿಲ್ಲ.
ಮ್ಯುಟೇಷನ್ ರಿಜಿಸ್ಟರ್ ನಿರ್ವಹಿಸದ 335 ಪಂಚಾಯ್ತಿಗಳು; ಲೆಕ್ಕ ಪರಿಶೋಧನೆ ವರದಿ
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇರಲಿಲ್ಲ.
179 ಪಂಚಾಯ್ತಿಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳೇ ಇಲ್ಲ; ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ
342 ಪಂಚಾಯ್ತಿಗಳಲ್ಲಿ ವಾರ್ಡ್, ಗ್ರಾಮ ಸಭೆಯೂ ನಡೆದಿರಲಿಲ್ಲ.
342 ಪಂಚಾಯ್ತಿಗಳಲ್ಲಿ ನಡೆಯದ ವಾರ್ಡ್, ಗ್ರಾಮ ಸಭೆ; ಸಾರ್ವಜನಿಕ ಸಹಭಾಗಿತ್ವದ ಕೊರತೆ ಬಹಿರಂಗ
274 ಪಂಚಾಯ್ತಿಗಳಲ್ಲಿ ನರೇಗಾ ಕಾಮಗಾರಿ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿರಲಿಲ್ಲ.
ನರೇಗಾ ಕಾಮಗಾರಿ; ಸಾಮಾಜಿಕ ಲೆಕ್ಕಪರಿಶೋಧನೆಯನ್ನೇ ನಡೆಸದ 274 ಪಂಚಾಯ್ತಿಗಳು
ಅಲ್ಲದೇ ಅಂತಹ ಪಿಡಿಓ ವಿರುದ್ಧ ಶಿಸ್ತು ಕ್ರಮ, ಸೇವಾ ಬಡ್ತಿ ತಡೆಯುವುದು, ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಹಾಗೆಯೇ ಮೈಸೂರು ಆಡಿಟ್ ಮ್ಯಾನ್ಯುಯಲ್ ನಿಯಮ 537ರ ಅನುಸಾರ ಹಣ ದುರುಪಯೋಗವಾಗಿದೆಂದು ಸಹ ಪರಿಗಣಿಸಬಹುದು ಎಂದು 2021-22ನೇ ಸಾಲಿನ ವರದಿಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.