ಬೆಂಗಳೂರು; ಸಮೀಕ್ಷೆ ನಡೆಸಿರುವ ಭೌಗೋಳಿಕ ಸ್ಥಳಗಳು, ದಾಖಲೆಗಳ ಸುರಕ್ಷತೆ ಮತ್ತು ಗೌಪ್ಯತೆ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪತ್ರ ಬರೆಯಬೇಕು ಎಂದು ಖಾಸಗಿ ಸಂಸ್ಥೆಯಾಗಿರುವ ಎಂ 2 ಎಂ ಮೀಡಿಯಾ ನೆಟ್ವರ್ಕ್ ಎಲ್ಎಲ್ಪಿಯು ಪತ್ರ ಬರೆದು 9 ತಿಂಗಳಾದರೂ ಸರ್ಕಾರವು ಇದುವರೆಗೂ ಯಾವುದೇ ಪತ್ರ ಬರೆದಿಲ್ಲ. ಸಮೀಕ್ಷೆಯೊಂದಿಗೆ ಸಂಗ್ರಹಿಸಿದ್ದ ಜಿಪಿಎಸ್ ಸೇರಿದಂತೆ ಮತ್ತಿತರೆ ಗೌಪ್ಯ ದಾಖಲೆಗಳು, ಮಾಹಿತಿಗಳು, ಕಳೆದ ಒಂದು ವರ್ಷದಿಂದಲೂ ಖಾಸಗಿ ಕಂಪನಿ ವಶದಲ್ಲೇ ಇವೆ.
ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಸಮೀಕ್ಷೆ ನಡೆಸಲು ಸಾರಿಗೆ ಇಲಾಖೆಯು ಎಂ 2 ಎಂ ಮೀಡಿಯಾ ನೆಟ್ವರ್ಕ್ ಎಲ್ಎಲ್ಪಿಗೆ 25.00 ಲಕ್ಷ ರು.ಗಳನ್ನು ಬಿಡುಗಡೆ ಮಾಡುವುದರಲ್ಲಿ ತೋರಿಸಿದ್ದ ಆಸಕ್ತಿಯನ್ನು, ಸಮೀಕ್ಷೆ ವರದಿಯೊಂದಿಗೆ ಸಲ್ಲಿಸದೇ ಇರುವ ದಾಖಲೆಗಳನ್ನು ಎಂ 2 ಎಂ ನಿಂದ ಪಡೆಯಲು ನಿರಾಸಕ್ತಿ ವಹಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿವರ್ಗವು ಕರ್ತವ್ಯ ಲೋಪ ಎಸಗಿದೆ ಎಂಬ ಬಲವಾದ ಆರೋಪವೂ ಕೇಳಿ ಬಂದಿದೆ.
ಗ್ಯಾರಂಟಿ ಯೋಜನೆ ಕುರಿತು ಸಮೀಕ್ಷೆ, ಅಧ್ಯಯನ, ಮೌಲ್ಯಮಾಪನ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿರುವ ಕುರಿತು ವಿಧಾನ ಪರಿಷತ್ನಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಮಧ್ಯೆ ಬಿರುಸಿನ ಚರ್ಚೆ ನಡೆದಿತ್ತು. ಈ ಬೆಳವಣಿಗೆ ಮಧ್ಯೆಯೇ ಸಮೀಕ್ಷೆಗೆ ಸಂಬಂಧಿಸಿದಂತೆ ಜಿಪಿಎಸ್ ಸೇರಿದಂತೆ ಮತ್ತಿತರೆ ದಾಖಲೆಗಳನ್ನು ಪಡೆಯುವುದರಲ್ಲಿ ಸಾರಿಗೆ ಇಲಾಖೆಯು ವಹಿಸಿರುವ ನಿರ್ಲಕ್ಷ್ಯವು ಮುನ್ನೆಲೆಗೆ ಬಂದಿದೆ.
ಈ ಕುರಿತು ‘ದಿ ಫೈಲ್’ ಆರ್ಟಿಐ ಅಡಿಯಲ್ಲಿ ಕೋರಿದ್ದ ಮಾಹಿತಿಗೆ ಸಾರಿಗೆ ಇಲಾಖೆಯು84 ಪುಟಗಳ ಮಾಹಿತಿ ಒಳಗೊಂಡ ಕಡತ ಒದಗಿಸಿದೆ. ಎಂ 2 ಎಂ ಮೀಡಿಯಾ ನೆಟ್ವರ್ಕ್ ಪ್ರೈವೈಟ್ ಲಿಮಿಟೆಡ್ ಬರೆದಿದ್ದ ಪತ್ರಕ್ಕೆ ಪೂರಕವಾಗಿ ಸಾರಿಗೆ ಇಲಾಖೆಯು ಪತ್ರ ಬರೆದಿರುವ ಕುರಿತು ಯಾವುದೇ ದಾಖಲೆಗಳು ಕಡತದಲ್ಲಿ ಕಂಡು ಬಂದಿಲ್ಲ.
ಶಕ್ತಿ ಯೋಜನೆ ಕುರಿತು ಸಮೀಕ್ಷೆ ನಡೆಸಲು ಎಂ 2 ಎಂ ಮೀಡಿಯಾ ಪ್ರೈವೈಟ್ ಲಿಮಿಟೆಡ್ಗೆ ಸಾರಿಗೆ ಇಲಾಖೆಯು 2023ರ ಸೆ.20ರಂದು ಆದೇಶ ಹೊರಡಿಸಿತ್ತು. ಅಲ್ಲದೇ 25.00 ಲಕ್ಷ ರು.ಗಳ ಅನುದಾನವನ್ನು ಬಿಡುಗಡೆ ಮಾಡಲು ಇದೇ ಆದೇಶದಲ್ಲಿಯೇ ಕೆಎಸ್ಆರ್ಟಿಸಿಗೆ ಸೂಚಿಸಿತ್ತು.
ಇದಾದ ನಂತರ 2024ರ ಜನವರಿ 22ರಂದು ಅಂತಿಮ ಸಮೀಕ್ಷಾ ವರದಿಯನ್ನು ಕೆಎಸ್ಆರ್ಟಿಸಿಗೆ ನೀಡಿತ್ತು. ಈ ವರದಿಯನ್ನು ಪರಿಶೀಲಿಸಿದ್ದ ಸರ್ಕಾರವು ಎಂ 2 ಎಂ ಮೀಡಿಯಾ ಪ್ರೈವೈಟ್ ಲಿಮಿಟೆಡ್ 2023ರ ಆಗಸ್ಟ್ 31ರಂದು ನೀಡಿದ್ದ ಪತ್ರದಂತೆ ಎಲ್ಲಾ ಅಂಶಗಳನ್ನು ಒಳಗೊಂಡ ಸಮೀಕ್ಷೆ ನಡೆಸಿ ವರದಿ ನೀಡಿದೆಯೇ, ಇಲ್ಲದಿದ್ದಲ್ಲಿ ಈ ಕುರಿತು ಪರಿಶೀಲಿಸಿ ಎಲ್ಲಾ ಅಂಶಗಳನ್ನು ಒಳಗೊಂಡ ವರದಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಾರಿಗೆ ಇಲಾಖೆಯು ಸರ್ಕಾರದ ಕಾರ್ಯದರ್ಶಿಯು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ 2024ರ ಮೇ 13ರಂದು ಪತ್ರ ಬರೆದಿದ್ದರು.
ಈ ಪತ್ರದಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಎಂ 2 ಎಂ ಮೀಡಿಯಾ ಪ್ರೈವೈಟ್ ಲಿಮಿಟೆಡ್ಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಉತ್ತರಿಸಿದ್ದ ಕಂಪನಿಯು 2024ರ ಜೂನ್ 24ರಂದು ಪತ್ರ ಬರೆದಿತ್ತು. ಸಮೀಕ್ಷೆ ನಡೆಸಿರುವ ಭೌಗೋಳಿಕ ಸ್ಥಳಗಳು, ದಾಖಲೆಗಳ ಸುರಕ್ಷತೆ ಮತ್ತು ಗೌಪ್ಯತೆ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪತ್ರ ಬರೆಯಬೇಕು ಎಂದೂ ಈ ಕಂಪನಿಯು ಸರ್ಕಾರದಿಂದಲೇ ಬಯಸಿತ್ತು.
ಈ ಕುರಿತು ಸಾರಿಗೆ ಇಲಾಖೆಯಲ್ಲಿ 2025ರ ಜನವರಿ 23ರವರೆಗೂ ಚರ್ಚೆಯಾಗಿದೆ. ಜಿಪಿಎಸ್ ಸೇರಿದಂತೆ ಮತ್ತಿತರೆ ದತ್ತಾಂಶ ಹಾಗೂ ದಾಖಲೆಗಳ ಗೌಪ್ಯತೆ ಕಾಯ್ದುಕೊಳ್ಳುವ ಕುರಿತು ಪ್ರತ್ಯೇಕವಾಗಿ ಪತ್ರ ಬರೆಯುವ ಕುರಿತು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್ ವಿ ಪ್ರಸಾದ್ ಅವರೊಂದಿಗೆ ಅಧಿಕಾರಿಗಳ ಮಧ್ಯೆ ಚರ್ಚೆಯಾಗಿದೆ. ಆದರೆ ಈ ಸಂಬಂಧ ಸರ್ಕಾರವು ಪ್ರತ್ಯೇಕ ಪತ್ರ ಬರೆದಿರುವುದು ಕಡತದಲ್ಲಿ ಕಂಡು ಬಂದಿಲ್ಲ.
2025ರ ಜನವರಿ 23ರಂದು ಈ ಕಡತವನ್ನು ಮುಕ್ತಾಯಗೊಳಿಸಿರುವುದು ತಿಳಿದು ಬಂದಿದೆ.
ಈ ಪತ್ರವು ತಲುಪಿ 9 ತಿಂಗಳಾಗಿದ್ದರೂ ಸಹ ಸಾರಿಗೆ ಇಲಾಖೆಯಾಗಲೀ, ಕೆಎಸ್ಆರ್ಟಿಸಿಯಾಗಲೀ ಇದುವರೆಗೂ ಎಂ 2 ಎಂ ಮೀಡಿಯಾ ಪ್ರೈವೈಟ್ ಲಿಮಿಟೆಡ್ಗೆ ಪ್ರತ್ಯೇಕ ಪತ್ರವನ್ನೇ ಬರೆದಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
‘ಸಮೀಕ್ಷೆ ನಡೆಸಲು ಸರ್ಕಾರವೇ 25.00 ಲಕ್ಷ ರು. ಹಣ ಬಿಡುಗಡೆ ಮಾಡಿದೆ. ಇದೇ ಹಣದಿಂದಲೇ ಎಂ 2 ಎಂ ಮೀಡಿಯಾ ಪ್ರೈವೈಟ್ ಲಿಮಿಟೆಡ್ ಸಮೀಕ್ಷೆಯನ್ನೂ ನಡೆಸಿದೆ. ಈ ಸಂಸ್ಥೆ ತನ್ನ ಪತ್ರದಲ್ಲಿ ಮೊದಲೇ ಹೇಳಿದಂತೆ ಜಿಪಿಎಸ್ ಸೇರಿದಂತೆ ಮತ್ತಿತರೆ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಸಬೇಕಿತ್ತು. ಈ ಯಾವ ದಾಖಲೆಗಳಿಲ್ಲದೆಯೇ ಅಂತಿಮ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಸ್ವೀಕರಿಸಿದ್ದ ಸಕ್ಷಮ ಪ್ರಾಧಿಕಾರವೂ ಸಹ ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಿಲ್ಲ. ಕೆಎಸ್ಆರ್ಟಿಸಿ ಎಂ ಡಿಯು ಪತ್ರ ಬರೆದ ನಂತರ ಸರ್ಕಾರದಿಂದಲೇ ಪ್ರತ್ಯೇಕ ಪತ್ರ ನೀಡಬೇಕು ಎಂದು ಎಂ 2 ಎಂ ಮೀಡಿಯಾ ಪ್ರೈ ಲಿ ಪತ್ರ ಬರೆದಿರುವುದು ಸರಿಯಲ್ಲ. ಸರ್ಕಾರದ ಹಣದಿಂದಲೇ ಸಮೀಕ್ಷೆ ನಡೆಸಿ ಸಂಗ್ರಹಿಸಿರುವ ಎಲ್ಲಾ ಬಗೆಯ ದಾಖಲೆಗಳು ಸರ್ಕಾರದ ಆಸ್ತಿ,’ ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು.
ಶಕ್ತಿ ಯೋಜನೆ ಸೇರಿದಂತೆ ನಾಲ್ಕು ಗ್ಯಾರಂಟಿಗಳನ್ನು 1 ಕೋಟಿ ರು ವೆಚ್ಚದಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಎಂ2ಎಂ ಮೀಡಿಯಾ ನೆಟ್ವರ್ಕ್ ಈ ಸಂಬಂಧ ಜಿಪಿಎಸ್ ದಾಖಲೆ ಮತ್ತು ವಿಧಾನಸಭೆ ಕ್ಷೇತ್ರವಾರು ಫೋಟೋ ಪ್ರತಿಗಳನ್ನು ಒದಗಿಸಲಾಗುವುದು ಎಂದು ಎಂ 2 ಎಂ ಕಂಪನಿಯು ತನ್ನ ಪತ್ರದಲ್ಲಿ ಹೇಳಿತ್ತು. ಆದರೆ ಈ ದಾಖಲೆಗಳ ಸಲ್ಲಿಕೆಗೆ ಸಂಬಂಧಿಸಿದಂತೆ ‘ಗೌಪ್ಯತೆ’ ವಿಷಯ ಕುರಿತು ಆರಂಭಿಕ ಪ್ರಸ್ತಾವದಲ್ಲಿ ಉಲ್ಲೇಖಿಸಿರಲಿಲ್ಲ ಮತ್ತು ಪ್ರಸ್ತಾಪವನ್ನೂ ಮಾಡಿರಲಿಲ್ಲ.
ಕೋಟಿ ವೆಚ್ಚದಲ್ಲಿ ಸಮೀಕ್ಷೆ; ಗೌಪ್ಯತೆಗೆ ಖಾತ್ರಿ ನೀಡಿದರಷ್ಟೇ ಭೌಗೋಳಿಕ ಸ್ಥಳ, ದಾಖಲೆಗಳ ಸಲ್ಲಿಕೆ, ಪತ್ರ ಮುನ್ನೆಲೆಗೆ
ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿರುವ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಎಂ2ಎಂ ಮೀಡಿಯಾ ನೆಟ್ವರ್ಕ್ ಸಂಸ್ಥೆಯು ಈ ಸಂಬಂಧ ಜಿಪಿಎಸ್ ದಾಖಲೆ, ವಿಧಾನಸಭಾ ಕ್ಷೇತ್ರವಾರು ಫೋಟೋಗಳ ಪ್ರತಿಗಳನ್ನು ಸಲ್ಲಿಸಿಲ್ಲ ಎಂಬುದು ಆರ್ಟಿಐ ದಾಖಲೆಗಳಿಂದ ಬಹಿರಂಗವಾಗಿತ್ತು.
ಶಕ್ತಿ ಯೋಜನೆಯೂ ಸೇರಿದಂತೆ ಇನ್ನಿತರೆ ಗ್ಯಾರಂಟಿ ಯೋಜನೆಗಳನ್ನು ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್ವರ್ಕ್ ಸಂಸ್ಥೆಯು 2023ರ ಆಗಸ್ಟ್ 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಸಮೀಕ್ಷೆಯನ್ನು ವೈಜ್ಞಾನಿಕ ಮಾದರಿಗಳಡಿಯಲ್ಲಿ ನಡೆಸಲಾಗುವುದು ಎಂದು ಸಂಸ್ಥೆಯ ಡಾ ಎಚ್ ವಿ ವಾಸು ಅವರು ತಮ್ಮ ಪ್ರಸ್ತಾವನೆಯಲ್ಲಿ ಹೇಳಿದ್ದರು.
ಎಂ2ಎಂ ಕಂಪನಿಯು ಸರ್ಕಾರಕ್ಕೆ ಸಲ್ಲಿಸಿರುವ ಸಮೀಕ್ಷಾ ಯೋಜನೆಯ ಪ್ರಸ್ತಾವನೆಯ 1ರಿಂದ 5ವರೆಗಿನ ಕ್ರಮಾಂಕದಲ್ಲಿ ವಿವರಿಸಿರುವಂತೆ ದತ್ತಾಂಶ ಸಂಗ್ರಹಣೆಗಾಗಿ ಆಧುನಿಕ ತಂತ್ರಜ್ಞಾನ ವಿಧಾನಗಳನ್ನು ಬಳಸುವುದಾಗಿ ಹೇಳಲಾಗಿತ್ತು. ಸಮೀಕ್ಷಾ ವರದಿಯನ್ನು ನೀಡುವಾಗ ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆಯೋ ಅವುಗಳ ಜಿಪಿಎಸ್ ಲೊಕೇಷನ್ ಡಾಟಾ ಹಾಗೂ ಛಾಯಾಚಿತ್ರಗಳ ದಾಖಲೆ ಸಹಿತದ ವರದಿ ನೀಡುವುದಾಗಿ ಹೇಳಿತ್ತು.
ಶಕ್ತಿ ಯೋಜನೆ ಸಮೀಕ್ಷೆ; ಜಿಪಿಎಸ್ ದಾಖಲೆಗಳಿಲ್ಲ, ವಿಧಾನಸಭಾ ಕ್ಷೇತ್ರವಾರು ಫೋಟೋಗಳೂ ಇಲ್ಲ
ತನ್ನ ಸಮೀಕ್ಷಾ ವರದಿಯ ಅಧಿಕೃತತೆ ಹಾಗೂ ಪ್ರಾಮಾಣಿಕತೆಯನ್ನು ನಿರೂಪಿಸಲು ತಾನು ಈ ಪೂರಕ ದಾಖಲೆಗಳನ್ನು ಒದಗಿಸುವುದಾಗಿ ಈ ಎಂ2ಎಂ ಕಂಪನಿಯು ತಿಳಿಸಿತ್ತು. ಆದರೀಗ ಸಾರಿಗೆ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಈ ಸಮೀಕ್ಷೆಗೆ ಅಧಿಕೃತತೆ, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಬಗೆಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು.
ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಯಾರ ಅಭಿಪ್ರಾಯವನ್ನೂ ಪಡೆಯದೇ ನೇರವಾಗಿ 4(ಜಿ) ವಿನಾಯಿತಿಗೆ ಕಡತ ಸಿದ್ಧಪಡಿಸಿ ಎಂದು ನಿರ್ದೇಶಿಸಿ ಒಕ್ಕಣೆ ಹಾಕಿದ್ದು ಆರ್ಟಿಐ ದಾಖಲೆಗಳಿಂದ ಬಹಿರಂಗಗೊಂಡಿತ್ತು.
ಕೋಟಿ ರು.ವೆಚ್ಚದ ಸಮೀಕ್ಷೆ; ಇಲಾಖೆಗಳ ಪ್ರಸ್ತಾವನೆಯಿಲ್ಲ, ಅಭಿಪ್ರಾಯವೂ ಇಲ್ಲ, ನೇರ ಮಾರ್ಗದಲ್ಲೇ 4(ಜಿ)
ಸಮೀಕ್ಷೆಗೆ 4(ಜಿ) ವಿನಾಯಿತಿ ನೀಡುವ ಮುನ್ನ ಆಡಳಿತ ಇಲಾಖೆಗಳ ಅಭಿಪ್ರಾಯವನ್ನೂ ಕೋರಿರುವ ಬಗ್ಗೆ ಯಾವ ದಾಖಲೆಗಳೂ ಆರ್ಥಿಕ ಇಲಾಖೆಯ ಕಡತದಲ್ಲಿ ಕಂಡುಬಂದಿಲ್ಲ. ಪ್ರಸ್ತಾವನೆಯನ್ನು ಆಡಳಿತ ಇಲಾಖೆಗಳಿಂದ ತರಿಸಿಕೊಳ್ಳದೇ ನೇರವಾಗಿ ತಮ್ಮ ಹಂತದಲ್ಲೇ 4(ಜಿ) ವಿನಾಯಿತಿ ನೀಡಿರುವುದು ಅಧಿಕಾರಿಗಳು ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್ವರ್ಕ್ ಕಂಪನಿಯ ಈದಿನ.ಕಾಮ್ ವೆಬ್ಸೈಟ್ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಗ್ಯಾರಂಟಿಗಳ ಕುರಿತಾಗಿ ಐಸೆಕ್, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್ವರ್ಕ್ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.
ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್ವರ್ಕ್ ಕಂಪನಿ; ದಾಖಲೆ ಬಹಿರಂಗ
ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ. ಮಾರ್ಗಸೂಚಿಗಳ ಸಂಬಂಧ ಆಗಸ್ಟ್ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು.
ಅಲ್ಲದೇ ಎಂ2ಎಂ ಮೀಡಿಯಾ ನೆಟ್ವರ್ಕ್ ಗೆ ಸಮೀಕ್ಷೆ ನಡೆಸಲು 25 ಲಕ್ಷ ರು ಪಾವತಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಸಂಬಂಧ ಮಾಡಿಕೊಂಡಿರುವ ಒಪ್ಪಂದ, ಷರತ್ತುಗಳ ಕುರಿತು ದಾಖಲೆಗಳನ್ನು ಬಹಿರಂಗಪಡಿಸಿರಲಿಲ್ಲ.
ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್ಆರ್ಟಿಸಿ
ಹೀಗಿದ್ದರೂ ಸಹ ಗ್ಯಾರಂಟಿಗಳು ಯಶಸ್ಸು ಕಂಡಿವೆ ಎಂದು ಎಂ2ಎಂ ಮೀಡಿಯಾ ನೆಟ್ವರ್ಕ್ ಕಂಪನಿಯು ಜುಲೈನಲ್ಲಿಯೇ ಬಿಡುಗಡೆಗೊಳಿಸಿರುವ ಸಮೀಕ್ಷೆ ವರದಿಯು ಸಂಶಯಗಳಿಗೆ ದಾರಿಮಾಡಿಕೊಟ್ಟಿರುವುದನ್ನು ಸ್ಮರಿಸಬಹುದು.