Wednesday | May 20, 2026 |

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ ಕೈಗೊಂಡ ಹಲವು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ಕೋಟ್ಯಂತರ ರುಪಾಯಿ ಮೊತ್ತವನ್ನು ಪಾವತಿಸಲು ಶೇ. 12ರಿಂದ ಶೇ. 13ರಷ್ಟು  ಕಮಿಷನ್‌ಗಾಗಿ ಮಧ್ಯವರ್ತಿಗಳು ಬೇಡಿಕೆ ಇಡುತ್ತಿದ್ದಾರೆ. ಅಲ್ಲದೆ ಹಲವು ಗುತ್ತಿಗೆದಾರರು ಬಾಕಿ ಮೊತ್ತಕ್ಕಾಗಿ ನ್ಯಾಯಾಲಯದ ಕದ ತಟ್ಟಿದ್ದಾರೆ. ನ್ಯಾಯಾಲಯವು ಗುತ್ತಿಗೆದಾರರ ಪರ ತೀರ್ಪು ನೀಡಿದ್ದರೂ ಸಹ ನಗರಾಭಿವೃದ್ಧಿ ಇಲಾಖೆಯು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡ ಸತಾಯಿಸುತ್ತಿರುವ ಪ್ರಕರಣಗಳು ಇದೀಗ ಬಹಿರಂಗವಾಗಿವೆ.

ಈ ಯೋಜನೆಯಡಿಯಲ್ಲಿ ಬಾಕಿ ಇದ್ದ ಒಟ್ಟಾರೆ ಮೊತ್ತದ ಪೈಕಿ  200.00 ಕೋಟಿ ರು.ಗಳನ್ನು  2026ರ ಮಾರ್ಚ್‌ 27ರಂದು ಸರ್ಕಾರವು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಈ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲು ಮಧ್ಯವರ್ತಿಗಳು ಕಮಿಷನ್‌ಗಾಗಿ ಬೇಡಿಕೆ ಇರಿಸಿರುವುದು ಮುನ್ನೆಲೆಗೆ ಬಂದಿದೆ.

ಈಚೆಗಷ್ಟೇ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಕಮಿಷನ್‌ಗಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಗುರುತರವಾದ ಆರೋಪ ಮಾಡಿತ್ತು. ಆದರೆ ಈ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್‌ ಅವರು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಈ ಬೆಳವಣಿಗೆ ನಡೆದ ನಂತರವೂ ಅಂದರೇ 2026ರ ಏಪ್ರಿಲ್‌ 1ರಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಸಚಿವ ಬೈರತಿ ಸುರೇಶ್‌ ಅವರಿಗೆ ಬರೆದಿರುವ ಮತ್ತೊಂದು ಪತ್ರವು, ಪ್ರತಿಪಕ್ಷಗಳಿಗೆ ಅಸ್ತ್ರವೊಂದನ್ನು ನೀಡಿದಂತಾಗಿದೆ.

ಈ ಪತ್ರದಲ್ಲಿಯೂ ಸಹ ಬಾಕಿ ಮೊತ್ತ ಬಿಡುಗಡೆ ಮಾಡಿಸಿಕೊಳ್ಳಲು ಗುತ್ತಿಗೆದಾರರಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಆಪಾದನೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಸಚಿವ ಬೈರತಿ ಸುರೇಶ್‌ ಅವರಿಗೆ ಸಲ್ಲಿಸಿರುವ ದೂರಿನ ಪ್ರತಿ ಮತ್ತು ಗುತ್ತಿಗೆದಾರರು ನ್ಯಾಯಾಲಯದ ಕದ ತಟ್ಟಿರುವ ಸಂಬಂಧ ಹಲವು ದಾಖಲೆಗಳು ”ದಿ ಫೈಲ್‌’ಗೆ ಲಭ್ಯವಾಗಿವೆ.

ಗುತ್ತಿಗೆದಾರರ ಸಂಘದ ಪತ್ರದಲ್ಲೇನಿದೆ?

‘ಮಹಾತ್ಮಗಾಂಧಿ  ನಗರ ವಿಕಾಸ ಯೋಜನೆ-1ರ ಅಡಿಯಲ್ಲಿ ಕಾಮಗಾರಿ ಕೈಗೊಂಡ ಹಲವಾರು ಗುತ್ತಿಗೆದಾರರು ರಾಜ್ಯ ಸಂಘಕ್ಕೆ ಬಂದು ನಗರಾಭಿವೃದ್ಧಿ ಇಲಾಖೆಯಲ್ಲಿ ಈಗಾಗಲೇ ಹಲವಾರು ಮಧ್ಯವರ್ತಿಗಳು ಗುತ್ತಿಗೆದಾರರಿಗೆ ದೂರವಾಣಿ ಮೂಲಕ ತಮ್ಮ ತಮ್ಮ ಬಾಕಿ ಹಣವನ್ನು ಬಿಡುಗಡೆ ಮಾಡಿಸಿಕೊಡುತ್ತೇವೆ. ಶೇ. 12ರಿಂದ ಶೇ.13ರಷ್ಟು ಕಮಿಷನ್ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಈ ಸಂಬಂಧ 30 ಮಂದಿ ಗುತ್ತಿಗೆದಾರರು ಸಂಘಕ್ಕೆ ಲಿಖಿತ ದೂರು ನೀಡಿದ್ದಾರೆ,’  ಎಂದು ಸಂಘದ ಅಧ್ಯಕ್ಷ ಆರ್ ಮಂಜುನಾಥ್‌ ಅವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

‘ಮಧ್ಯವರ್ತಿಗಳಿಗೆ ಆಸ್ಪದ ಕೊಡದೇ ಜೇಷ್ಠತೆ ಆಧಾರದ ಮೇಲೆ ಹಣ ಬಿಡುಗಡೆ ಮಾಡಬೇಕು. ಈ ಸಂಬಂಧ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಲು ತುರ್ತಾಗಿ ಸಭೆ ಕರೆಯಬೇಕು,’ ಎಂದು ಸಂಘದ ಅಧ್ಯಕ್ಷರು ಒತ್ತಾಯಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯು 2019-20ರಲ್ಲಿ ಅನುಷ್ಠಾನಗೊಂಡಿತ್ತು. ಈ ಯೋಜನೆಗಾಗಿ 1,325 ಕೋಟಿ ರು ಅನುದಾನವನ್ನು ಮೀಸಲಿರಿಸಿದೆ. ರಾಜ್ಯದ ಮೈಸೂರು, ಕಲ್ಬುರ್ಗಿ, ಹುಬ್ಬಳ್ಳಿ ಧಾರವಾಡ, ಮಂಗಳೂರು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ವಿಜಯಪುರ, ತುಮಕೂರು ಮತ್ತು  ಶಿವಮೊಗ್ಗ ಮಹಾನಗರಪಾಲಿಕೆಗಳಲ್ಲಿ 2019-20ರಿಂದ 2022-23ರವರೆಗೆ ಒಟ್ಟು ನಾಲ್ಕು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಂಡಿದೆ.

 

 

ಈ ಯೋಜನೆಯನ್ನು ಶೇ. 50ರಷ್ಟು ರಾಜ್ಯ ಸರ್ಕಾರದ ಅನುದಾನ ಮತ್ತು ಉಳಿದ ಶೇ. 50ರಷ್ಟು ಮೊತ್ತವನ್ನು ಕೆಯುಐಡಿಎಫ್‌ಸಿ ಕ್ರೋಢೀಕರಿಸಿದ ನಿಧಿ ಸಂಸ್ಥೆ ಮೂಲಕ ಸಾಲ ಪಡೆದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಆದೇಶಿಸಿತ್ತು. 10 ಮಹಾನಗರ ಪಾಲಿಕೆಗಳಿಗೆ ಅನುಮೋದಿಸಿದ್ದ 1,325 ಕೊಟಿ ರುಗ.ಳ ಪೈಕಿ ಶೇ. 50ರಷ್ಟು ಅನುದಾನದ ಮೊತ್ತವಾದ 662.50 ಕೋಟಿ ರುಪಾಯಿಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಉಳಿದ ಶೇ. 50ರಷ್ಟು ಸಾಲದ ಮೊತ್ತವಾದ 662.50 ಕೋಟಿ ರು.ಗಳನ್ನು ಆರ್‍‌ಬಿಐ ಮಾರ್ಗಸೂಚಿಯಂತೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕೆಯುಐಡಿಎಫ್‌ಸಿ ಹೇಳಿತ್ತು. ಹೀಗಾಗಿ ಯುಐಡಿಎಫ್‌ ಮುಖಾಂತರ ಸಾಲವನ್ನು ಪಡೆಯಬೇಕು. ಆದರೆ ಯುಐಡಿಎಫ್‌ ನಿಧಿಯಡಿ ಬಳ್ಳಾರಿ ಮಹಾನಗರಪಾಲಿಕೆಗೆ 428 ಕೋಟಿ ರುಪಾಯಿಗಳ ಸಾಲವು ಮಂಜೂರಾಗಿತ್ತು.

ರಾಜ್ಯದ 10 ಮಹಾನಗರಪಾಲಿಕೆಗಳಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 2025ರ ಜನವರಿ ಅಂತ್ಯಕ್ಕೆ 728 ಕಾಮಗಾರಿಗಳು ಅನುಮೋದನೆಯಾಗಿದ್ದವು. 347 ಕಾಮಗಾರಿಗಳು ಪೂರ್ಣಗೊಂಡಿದ್ದವು. ಜನವರಿ 2025ರ ಅಂತ್ಯಕ್ಕೆ  381 ಕಾಮಗಾರಿಗಳು ಪ್ರಗತಿಯಲ್ಲಿದ್ದವು.

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಬಾಕಿ ಇರುವ 658.22 ಕೋಟಿ ರುಪಾಯಿಗಳನ್ನು ಸಾಲದ ಮೊತ್ತವನ್ನು 2024-25ನೇ ಸಾಲಿನ ಆಯವ್ಯಯದಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಬೇಕು ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದರು.

662.50 ಕೋಟಿ ರು ಬಿಡುಗಡೆ

ರಾಜ್ಯದ ತುಮಕೂರು, ದಾವಣಗೆರೆ, ಶಿವಮೊಗ್ಗ, ಮಂಗಳೂರು ಮಹಾನಗರಪಾಲಿಕೆಗೆ ತಲಾ 125 ಕೋಟಿ ರು ಹಂಚಿಕೆಯಾಗಿತ್ತು.  ಹುಬ್ಬಳ್ಳಿ ಧಾರವಾಡ, ಕಲ್ಬುರ್ಗಿ, ಮೈಸೂರು ಮಹಾನಗರ ಪಾಲಿಕೆಗೆ ತಲಾ 150 ಕೋಟಿ, ವಿಜಯಪುರ, ಬೆಳಗಾವಿ, ಬಳ್ಳಾರಿಗೆ ತಲಾ 125 ಕೋಟಿ ರು ಸೇರಿ ಒಟ್ಟಾರೆ 1,325 ಕೋಟಿ ರು ಹಂಚಿಕೆಯಾಗಿತ್ತು.

 

 

ಈ ಪೈಕಿ 2025ರ ಜನವರಿ ಅಂತ್ಯಕ್ಕೆ ಈ ಯೋಜನೆಯಡಿ ತುಮಕೂರು ಮತ್ತು ದಾವಣಗೆರೆ ಮಹಾನಗರಪಾಲಿಕೆಗೆ ತಲಾ 82.50 ಕೋಟಿ, ಶಿವಮೊಗ್ಗ ಮಹಾನಗರಪಾಲಿಕೆಗೆ 57.50 ಕೋಟಿ, ಮಂಗಳೂರು ಮಹಾನಗರಪಾಲಿಕೆಗೆ 46.14 ಕೋಟಿ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಗೆ 35.50 ಕೋಟಿ, ಮೈಸೂರು ಮಹಾನಗರಪಾಲಿಕೆಗೆ 99.37 ಕೋಟಿ, ವಿಜಯಪುರ ಮಹಾನಗರಪಾಲಿಕೆಗೆ 78.00 ಕೋಟಿ, ಬೆಳಗಾವಿ ಮಹಾನಗರಪಾಲಿಕೆಗೆ 83.00 ಕೋಟಿ, ಬಳ್ಳಾರಿ ನಗರಪಾಲಿಕೆಗೆ 32.49 ಕೋಟಿ ರು ಬಿಡುಗಡೆಯಾಗಿತ್ತು.

662.50 ಕೋಟಿ ಬಾಕಿ

ಒಟ್ಟು ಅನುದಾನದಲ್ಲಿ 662.50 ಕೋಟಿ ರು ಬಿಡುಗಡೆಗೆ ಬಾಕಿ ಇರಿಸಿಕೊಂಡಿತ್ತು. ತುಮಕೂರು ನಗರಪಾಲಿಕಗೆ 42.50 ಕೋಟಿ, ದಾವಣಗೆರೆ ನಗರಪಾಲಿಕೆಗೆ 39.50 ಕೋಟಿ, ಶಿವಮೊಗ್ಗ ನಗರಪಾಲಿಕೆಗೆ 67.50 ಕೋಟಿ, ಮಂಗಳೂರು ಮಹಾನಗರಪಾಲಿಕೆಗೆ 103.86 ಕೋಟಿ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಗೆ 89.50 ಕೋಟಿ, ಕಲ್ಬುರ್ಗಿ ಮಹಾನಗರಪಾಲಿಕೆಗೆ 62.50 ಕೋಟಿ, ಮೈಸೂರಿಗೆ 25.63 ಕೋಟಿ, ವಿಜಯಪುರಕ್ಕೆ 72.00 ಕೋಟಿ, ಬೆಳಗಾವಿಗೆ 67.00 ಕೋಟಿ, ಬಳ್ಳಾರಿಗೆ 92.51 ಕೋಟಿ ರುಪಾಯಿ ಬಾಕಿ ಇತ್ತು.  ಒಟ್ಟು 10 ನಗರಪಾಲಿಕೆಗಳು 385.08 ಕೋಟಿ ರು ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಬೇಡಿಕೆ ಇರಿಸಿದ್ದವು.

 

 

2025-26ನೇ ಸಾಲಿನಲ್ಲಿಯೂ ಈ ಯೋಜನೆಯಡಿ ಹಣ ಬಿಡುಗಡೆಗೆ ಬಾಕಿ ಇತ್ತು. ಹುಬ್ಬಳ್ಳಿ ಮತ್ತು ಧಾರವಾಡ ಹಾಗೂ ಮೈಸೂರು ನಗರಪಾಲಿಕೆಗೆ 25.70 ಕೋಟಿ ರು ಅನುದಾನ ಬಿಡುಗಡೆ ಮಾಡಲು ಪೌರಾಡಳಿತ ನಿರ್ದೇಶನಾಲಯವು ಸರ್ಕಾರಕ್ಕೆ ಪತ್ರ ಬರೆದಿತ್ತು.

 

 

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಕಾಮಗಾರಿ ನಿರ್ವಹಿಸಿದ್ದ  ಮಂಗಳೂರು ಮೂಲದ ಅನ್ವರ್ ಸಾದತ್ ಎಂಬುವರಿಗೆ ಮಂಗಳೂರು ಮಹಾನಗರಪಾಲಿಕೆಯು ಹಣ ಪಾವತಿಸಿರಲಿಲ್ಲ. ಈ ಮಧ್ಯೆ ಅನ್ವರ್ ಸಾದತ್‌ ಅವರು  ತಮಗೆ ಬಾಕಿ ಬರಬೇಕಿರುವ 9.50 ಕೋಟಿ ರು ಗಳನ್ನು ಪಾವತಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ (ರಿಟ್ ಅರ್ಜಿ ಸಂಖ್ಯೆ; 20545/2024)  ಸಲ್ಲಿಸಿದ್ದರು.

 

 

ಈ ಅರ್ಜಿಗೆ ಸಂಬಂಧಿಸಿದಂತೆ ಕ್ರಮವಹಿಸಲು ಮುಂದಾಗಿದ್ದ  ನಗರಾಭಿವೃದ್ಧಿ ಇಲಾಖೆಯು ಆರ್ಥಿಕ ಇಲಾಖೆಯ ಅಭಿಪ್ರಾಯ ಕೋರಿತ್ತು.

 

 

 

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಜೇಷ್ಠತೆ ಕಾಮಗಾರಿಗಳ ಹಿರಿತನ, ಲಭ್ಯವಿರುವ ನಿಧಿಗಳು ಮತ್ತು ಹಂಚಿಕೆಯ ಆದ್ಯತೆಯನ್ನು ಪರಿಗಣಿಸದೆ ಮೊತ್ತವನ್ನು ಬಿಡುಗಡೆ ಮಾಡುವುದು ವಿವೇಚನೆಯಲ್ಲ. ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಎಂದು 2025ರ ಜುಲೈ 1ರಂದೇ ಅಭಿಪ್ರಾಯಿಸಿತ್ತು. ಅನ್ವರ್ ಸಾದತ್ ಅವರ ಅರ್ಜಿಯ ವಿಚಾರಣೆ ನಡೆಸಿದ್ದ  ಹೈಕೋರ್ಟ್‌, ಅರ್ಜಿದಾರರಿಗೆ ಬಾಕಿ ಮೊತ್ತವನ್ನು 3 ತಿಂಗಳ ಒಳಗೇ ಪಾವತಿಸಲು ಕ್ರಮವಹಿಸಬೇಕು ಎಂದು  2025ರ ಜುಲೈ 16ರಂದು ತೀರ್ಪು ನೀಡಿತ್ತು.

 

 

ಹೈಕೋರ್ಟ್‌ ನಿರ್ದೇಶನ ಪಾಲಿಸುವ ಸಂಬಂಧ ಮಂಗಳೂರು ಮಹಾನಗರಪಾಲಿಕೆಯು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2025ರ ಮೇ 14ರಂದು ಪತ್ರ ಬರೆದಿದ್ದರು.

 

ಈ ಮಧ್ಯೆ ಅನ್ವರ್ ಸಾದತ್ ಅವರು  2025ರ ಜುಲೈ 30, ಸೆ.29 ಮತ್ತು ಅಕ್ಟೋಬರ್‍‌ 9ರಂದು ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಈ ಯೋಜನೆಯಡಿ ಮಂಗಳೂರು ನಗರಪಾಲಿಕೆಗೆ ಹಂಚಿಕೆಯಾಗಿದ್ದ 125 ಕೋಟಿ ರುಪಾಯಿನಲ್ಲಿ ನಗರಾಭಿವೃದ್ಧಿ ಇಲಾಖೆಯು ಕೇವಲ 35.50 ಕೋಟಿ ರುಪಾಯಿ ಮಾತ್ರ  ಬಿಡುಗಡೆ ಮಾಡಿತ್ತು. ಇದರಲ್ಲಿ ಅನ್ವರ್ ಸಾದತ್ ಅವರಿಗೆ 1.04 ಕೋಟಿಯಷ್ಟೇ ಪಾವತಿಸಿತ್ತು. ಆದರೆ ಮಂಗಳೂರು ಮಹಾನಗರಪಾಲಿಕೆ ಬಳಿ ಇನ್ನಿತರೆ ಸಂಪನ್ಮೂಲಗಳಲ್ಲಿ 16.14 ಕೋಟಿಯಷ್ಟೇ ಇತ್ತು .

 

 

ಹೀಗಾಗಿ ಅನ್ವರ್ ಸಾದತ್ ಎಂಬುವರಿಗೆ 9.50 ಕೋಟಿ ರು ಬಾಕಿ ಪಾವತಿಸಲು ಮಾರ್ಗದರ್ಶನ ಮಾಡಬೇಕು ಎಂದು  ಮಂಗಳೂರು ನಗರಪಾಲಿಕೆಯ ಆಯುಕ್ತರು ಪತ್ರದಲ್ಲಿ ಕೋರಿದ್ದರು. ಆದರೂ ಸಹ ಅನ್ವರ್ ಸಾದತ್ ಎಂಬುವರಿಗೆ ಬಾಕಿ ಹಣ ಬಿಡುಗಡೆಯಾಗಿರಲಿಲ್ಲ.  ಹೀಗಾಗಿ ಅವರು ಹೈಕೋರ್ಟ್‌ನಲ್ಲಿ ನಿಂದನಾ ಅರ್ಜಿ (ಸಂಖ್ಯೆ; 1567/2025) ದಾಖಲಿಸಿದ್ದರು.

 

 

ಈ ಅರ್ಜಿಯು  2026ರ ಏಪ್ರಿಲ್ 9ರಂದು ವಿಚಾರಣೆಗೆ ಬರಲಿದೆ.

 

 

ಈ ನಿಂದನಾ ಅರ್ಜಿಯನ್ನು ಇತ್ಯರ್ಥಗೊಳಿಸುವ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2026ರ ಮಾರ್ಚ್‌ 9ರಂದು ಪೌರಾಡಳಿತ ನಿರ್ದೇಶನಾಲಯದ ಮುಖ್ಯ ಇಂಜಿನಿಯರ್‍‌ಗೆ ಪತ್ರ ಬರೆದಿದ್ದಾರೆ.

 

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆಕ್ಷೇಪಣೆ ಹೇಳಿಕೆ ದಾಖಲಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

Hot this week

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...
Please Scan to make Your Contribution

Topics

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

Related Articles

Popular Categories

error: Content is protected !!