ಅತೀಕ್‌ಗೆ ಎರಡು ಹುದ್ದೆ; ಹಿತಾಸಕ್ತಿ ಸಂಘರ್ಷವಲ್ಲವೇ ಎಂದು ಕೇಳಿದ ರಾಜ್ಯಸಭಾ ಸದಸ್ಯ ಲಹರ್‍‌ ಸಿಂಗ್‌

ಬೆಂಗಳೂರು; ಹಿರಿಯ ಐಎಎಸ್‌ ಅಧಿಕಾರಿ ಎಲ್‌ ಕೆ ಅತೀಕ್‌ ಅವರು ಏಕಕಾಲಕ್ಕೆ ಎರಡು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹಿತಾಸಕ್ತಿ ಸಂಘರ್ಷವಾಗುವುದಿಲ್ಲವೇ ಎಂದು ರಾಜ್ಯಸಭಾ ಸದಸ್ಯ ಲಹರ್‍‌ ಸಿಂಗ್‌ ಅವರು ಪತ್ರಿಕಾ ಹೇಳಿಕೆಯಲ್ಲಿ ಕೇಳಿರುವುದು ಅಧಿಕಾರಶಾಹಿಯೊಳಗೇ ಚರ್ಚೆಗೆ ಗ್ರಾಸವಾಗಿದೆ.

 

ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಲ್‌ ಕೆ ಅತೀಕ್ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದರೇ, ಡಿ ಎನ್‌ ನರಸಿಂಹರಾಜು ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ಡಿ ಎನ್‌ ನರಸಿಂಹರಾಜು ಅವರು ಸಿದ್ದರಾಮಯ್ಯ ಅವರ  ಮೊದಲ ಅವಧಿಯಲ್ಲಿ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರಲಿಲ್ಲ.

 

ಆದರೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಹೊತ್ತಿನಲ್ಲಿ ಎಲ್‌ ಕೆ ಅತೀಕ್‌ ಅವರು ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯ ಜತೆಜತೆಯಲ್ಲಿಯೇ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

 

ಏಕಕಾಲಕ್ಕೆ ಮಹತ್ವದ ಎರಡು ಹುದ್ದೆಗಳಲ್ಲಿ ಅತೀಕ್‌ ಅವರು ಕಾರ್ಯನಿರ್ವಹಿಸುತ್ತಿರುವುದಕ್ಕೆ ಅಧಿಕಾರಿಶಾಹಿಯೊಳಗೇ ಈ ಕುರಿತು  ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯ ಲಹರ್‍‌ ಸಿಂಗ್‌ ಅವರು ಇದು ಹಿತಾಸಕ್ತಿ ಸಂಘರ್ಷವಾಗುವುದಿಲ್ಲವೇ ಎಂದು ಪತ್ರಿಕಾ ಹೇಳಿಕೆಯಲ್ಲಿ ಕೇಳಿರುವುದು ಚರ್ಚೆಯನ್ನು ವಿಸ್ತರಿಸಿದಂತಾಗಿದೆ.

 

ಏಕಕಾಲಕ್ಕೆ ಎರಡು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ ಕೆ ಅತೀಕ್‌ ಅವರ ನಿಷ್ಪಕ್ಷಪಾತ ಮತ್ತು ವಸ್ತು ನಿಷ್ಠತೆ ಬಗ್ಗೆಯೂ ಕೇಳಿದ್ದಾರೆ. ‘ಮುಖ್ಯಮಂತ್ರಿಗಳ ಕಚೇರಿಯಿಂದ ಕಳಿಸುವ ಹಣಕಾಸಿನ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಯ ಮುಖ್ಯಸ್ಥರಾಗಿ ವಸ್ತು ನಿಷ್ಠವಾಗಿ ವಿಶ್ಲೇಷಣೆ ಮಾಡಲು ಸಾಧ್ಯವೇ ಎಂದು ಪತ್ರಿಕಾ ಹೇಳಿಕೆಯಲ್ಲಿ ಕೇಳಿದ್ದಾರೆ.

 

ಅಲ್ಲದೇ ಆಸ್ತಿ ನಗದೀಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪನಿಯೊಂದನ್ನು ಸಮಾಲೋಚಕ ಸಂಸ್ಥೆಯನ್ನಾಗಿ ನೇಮಿಸಿಕೊಳ್ಳುವ ಪ್ರಸ್ತಾವನೆ ಕುರಿತೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ ಎಂದು ಇದರಿಂದಲೇ ಗೊತ್ತಾಗಿದೆ ಎಂದು ಹೇಳಿದ್ದಾರೆ.

 

ಆದಾಯದ ಮೂಲಗಳನ್ನು ವಿಸ್ತರಣೆ ಮಾಡುವ ಸಂಬಂಧ ಕರ್ನಾಟಕ ಸರ್ಕಾರವು ಉನ್ನತವಾದ ಚಿಂತನೆಗಳನ್ನು ಹೊಂದಿರುವ ಅಧಿಕಾರಿಗಳ ಅವಶ್ಯಕತೆ ಇದೆ. ಚಿರಂಜೀವಿ ಸಿಂಘ್‌, ವಿ ಬಾಲಸುಬ್ರಹ್ಮಣಿಯನ್‌, ಸುಧಾಕರ್‍‌ ರಾವ್‌, ಎಂ ಆರ್‍‌ ಶ್ರೀನಿವಾಸಮೂರ್ತಿ, ಐಎಸ್‌ಎನ್‌ ಪ್ರಸಾದ್‌ ಅಂತಹವರ ಸಲಹೆಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

 

ಆಡಳಿತ ಇಲಾಖೆಗಳ ಅಧೀನದಲ್ಲಿರುವ ಆಸ್ತಿಗಳ ನಗದೀಕರಣ, ಇಲಾಖೆಗಳ ಅಧೀನದಲ್ಲಿರುವ ಆಸ್ತಿಗಳ ವಿವರಣೆ ಮತ್ತು ಬಂಡವಾಳ ಹಿಂತೆಗೆತ ಕುರಿತು ಮಾಹಿತಿ ಒದಗಿಸಬೇಕು ಎಂದು ಸರ್ಕಾರವು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಒಂದು ತಿಂಗಳ ಹಿಂದೆಯೇ ಬರೆದಿತ್ತು.

 

ಅಲ್ಲದೇ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಡಾ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆಯೂ ನಡೆದಿತ್ತು.ಇದೇ ಸಭೆಯಲ್ಲಿಯೇ  ಆಸ್ತಿ ನಗದೀಕರಣದ ಅಡಿಯಲ್ಲಿ ಆಡಳಿತ ಇಲಾಖೆಗಳ ಆಸ್ತಿಗಳ ಸಮಗ್ರ ಪಟ್ಟಿ ಮತ್ತು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ಸಹ ಸೂಚಿಸಿತ್ತು.

ಆಸ್ತಿ ನಗದೀಕರಣವಷ್ಟೇ ಅಲ್ಲ, ಬಂಡವಾಳವೂ ಹಿಂತೆಗೆತ; ಇಲಾಖೆಗಳಿಂದ ಸಮಗ್ರ ಪಟ್ಟಿ ಕೋರಿದ್ದ ಪತ್ರ ಮುನ್ನೆಲೆಗೆ

ರಾಜ್ಯ ಕಾಂಗ್ರೆಸ್‌ ಸರ್ಕಾರವು ಆಸ್ತಿ ನಗದೀಕರಣದ ಭಾಗವಾಗಿ 25 ಸಾವಿರ ಎಕರೆ ಜಮೀನನ್ನು ವರಮಾನಕ್ಕೆ ಬಳಸಿಕೊಳ್ಳಲು ಮುಂದಾಗಿದೆ ಎಂದು ದಿನಪತ್ರಿಕೆಯೊಂದರ ವರದಿಗೆ ಮುಖ್ಯಮಂತ್ರಿ ಸಚಿವಾಲಯವು ಸ್ಪಷ್ಟನೆ ನೀಡಿರುವ ಬೆನ್ನಲ್ಲೇ ಇಲಾಖೆಗಳ ಅಧೀನದಲ್ಲಿರುವ ಆಸ್ತಿಗಳ ವಿವರಗಳು ಮತ್ತು ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿತ್ತು.

SUPPORT THE FILE

Latest News

Related Posts