ಫೇಕ್‌ ನ್ಯೂಸ್‌ ಪೋಸ್ಟರ್‍‌; ಸಿಎಂ ಮಾಧ್ಯಮ ಸಲಹೆಗಾರ, ವಾರ್ತಾಧಿಕಾರಿ ಕಚೇರಿಯಲ್ಲಿಯೂ ಮಾಹಿತಿಯಿಲ್ಲ

ಬೆಂಗಳೂರು; ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿ ಕಮಿಷನ್‌ಗಾಗಿ ಬೇಡಿಕೆ ಇರಿಸಲಾಗಿತ್ತು ಎಂದು ಆಂದೋಲನ ಪತ್ರಿಕೆಯ ವಿಶೇ‍ಷ ವರದಿಯನ್ನೇ  ಮುಖ್ಯಮಂತ್ರಿಗಳ ಅಧಿಕೃತ ಹೆಸರಿನಲ್ಲಿರುವ ಫೇಸ್‌ಬುಕ್‌, ಟ್ವಿಟರ್‍‌ ಖಾತೆಯಲ್ಲಿ ಇದೊಂದು ಫೇಕ್‌ ನ್ಯೂಸ್‌ ಎಂದು  ಹಂಚಿಕೊಂಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

 

ಆದರೇ ಫೇಕ್‌ ನ್ಯೂಸ್‌ ಎಂದು ನಿರ್ಣಯಿಸಿದ್ದು ಯಾರು ಎಂಬ ಕುರಿತು  ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರ  ಮಾಧ್ಯಮ ಸಲಹೆಗಾರರ ಕಚೇರಿ ಮತ್ತು ಮುಖ್ಯಮಂತ್ರಿಗಳ ವಾರ್ತಾಧಿಕಾರಿಯವರ ಕಚೇರಿಯಲ್ಲಿಯೂ ಯಾವ ಮಾಹಿತಿಯೂ ಇಲ್ಲ.

 

ಇದೇ ವಿಷಯಕ್ಕೆ ಸಂಬಂಧಿಸಿದಂತೆ  ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯು ಇದೀಗ ಈ ಸಂಬಂಧ ಯಾವುದೇ ಸಭೆ ನಡೆಸಿಲ್ಲ ಮತ್ತು ಯಾವುದೇ ಮಾಹಿತಿಯೂ ಇಲ್ಲವೆಂದು ಅಧಿಕೃತವಾಗಿ ಉತ್ತರ ಒದಗಿಸಿತ್ತು. ಇದರ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಕಚೇರಿಯಲ್ಲಿಯೂ ಯಾವ ಮಾಹಿತಿಯೂ ಇಲ್ಲ, ಈ ಸಂಬಂಧ ಕಡತವನ್ನೂ ತೆರೆದಿಲ್ಲ, ಯಾವುದೇ ಪತ್ರ ವ್ಯವಹಾರವನ್ನೂ ಮಾಡಿಲ್ಲ ಎಂದು ನೀಡಿರುವ ಉತ್ತರವು ಚರ್ಚೆಗೆ ಗ್ರಾಸವಾಗಿದೆ.

 

ಕಮಿಷನ್‌ ಕೇಳಿದ್ದಾರೆ ಎಂಬ ಆರೋಪ ಕುರಿತಾದ ವರದಿಯು ಪ್ರಕಟಗೊಳ್ಳುತ್ತಿದ್ದಂತೆ ಪ್ರತಿಪಕ್ಷವು ಗಂಭೀರವಾಗಿ ಟೀಕಿಸಿತ್ತು.  ಈ ವಿಚಾರದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲಾಗದ ಸರ್ಕಾರವು ತಕ್ಷಣವೇ ಇದೊಂದು ಫೇಕ್‌ ನ್ಯೂಸ್‌ ಎಂದು ಕೆಲವೇ ಗಂಟೆಗಳಲ್ಲಿ ತನ್ನದೇ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು. ಅಲ್ಲದೇ ಮುಖ್ಯಮಂತ್ರಿಗಳ ಹೆಸರಿನಲ್ಲಿರುವ ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಇದನ್ನು ಹಂಚಿಕೊಂಡಿತ್ತು.

 

ಆದರೆ ಆಂದೋಲನ ವರದಿಯನ್ನು ಫೇಕ್‌ ನ್ಯೂಸ್‌ ಎಂದು ನಿರ್ಣಯಿಸಿದ್ದು ಹೇಗೆ, ಈ ಕುರಿತು ಚರ್ಚೆ ನಡೆಸಿದ್ದು ಯಾರು ಎಂಬುದು ಸೇರಿದಂತೆ ಇನ್ನಿತರೆ ವಿಚಾರಗಳನ್ನು ಸರ್ಕಾರವು ಗೌಪ್ಯವಾಗಿರಿಸಿದೆ. ಹೀಗಾಗಿ ಆಂದೋಲನ ವರದಿಯನ್ನು ಫೇಕ್‌ ನ್ಯೂಸ್‌ ಎಂದು ಹಂಚಿಕೊಂಡಿದ್ದು ಯಾರು ಎಂಬ ಪ್ರಶ್ನೆ ಈಗಲೂ  ನಿಗೂಢವಾಗಿಯೇ ಉಳಿದಿದೆ.

 

ಈ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿತ್ತು. ಇದನ್ನು 2023ರ ನವೆಂಬರ್‍‌ 28ರಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರ ಕಚೇರಿಯ ಆಪ್ತ ಕಾರ್ಯದರ್ಶಿಗಳಿಗೆ ರವಾನಿಸಿತ್ತು.

 

ಮುಖ್ಯಮಂತ್ರಿಗಳ ಸಚಿವಾಲಯವು ರವಾನಿಸಿದ್ದ ಪತ್ರಕ್ಕೆ ಮಾಧ್ಯಮ ಸಲಹೆಗಾರರ ಆಪ್ತ ಕಾರ್ಯದರ್ಶಿಗಳು ವರದಿ ನೀಡಿದ್ದರು. ಇದನ್ನಾಧರಿಸಿ   ಮುಖ್ಯಮಂತ್ರಿಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಉಮಾದೇವಿ ಕೆ ಅವರು 2023ರ ಡಿಸೆಂಬರ್‍‌ 1ರಂದು ಮಾಹಿತಿ ಒದಗಿಸಿದ್ದಾರೆ.

 

‘ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಅಧಿಕೃತ ಹೆಸರಿನಲ್ಲಿರುವ ಫೇಸ್‌ಬುಕ್‌ ಹಾಗೂ ಟ್ವಿಟರ್‍‌ ಖಾತೆಗಳಲ್ಲಿ ಪಂ. ರಾಜೀವ್‌ ತಾರಾನಾಥ್‌ರಿಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ಹಾಗೂ ಇತರೆ ಮಾಹಿತಿ ನೀಡಲು ಕೋರಿರುತ್ತೀರಿ. ಈ ಅರ್ಜಿಯನ್ನು ಪರಿಶೀಲಿಸಲಾಯಿತು. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರ ಆಪ್ತ ಕಾರ್ಯದರ್ಶಿಗಳ ವರದಿಯಂತೆ ಕೋರಿರುವ ಮಾಹಿತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರ ಕಚೇರಿಯಲ್ಲಿ ಯಾವುದೇ ಕಡತ ತೆರೆದಿರುವುದಿಲ್ಲ ಹಾಗೂ ಯಾವುದೇ ಪತ್ರ ವ್ಯವಹಾರವನ್ನೂ ನಡೆಸಿರುವುದಿಲ್ಲ ಎಂದು ತಿಳಿಸಿರುತ್ತಾರೆ,’ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಅವರು 2023ರ ಡಿಸೆಂಬರ್‍‌ 1ರಂದು ಮಾಹಿತಿ ಒದಗಿಸಿದ್ದಾರೆ.

 

ಅದೇ ರೀತಿ ಮುಖ್ಯಮಂತ್ರಿಗಳ ವಾರ್ತಾಧಿಕಾರಿಯವರ ಕಚೇರಿಯಲ್ಲಿಯೂ ಯಾವುದೇ ಕಡತ ತೆರೆದಿಲ್ಲ ಮತ್ತು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನೂ ನಡೆಸಿಲ್ಲ ಎಂಬ ಮಾಹಿತಿ ಒದಗಿಸಿದೆ.

 

ಆಂದೋಲನ ಪತ್ರಿಕೆಯ ವರದಿಯು ಫೇಕ್‌ ನ್ಯೂಸ್‌ ಎಂದು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿತ್ತು. ಇಲಾಖೆಯು ಸಹ  ಈ ಸಂಬಂಧ ಯಾವುದೇ ಸಭೆ, ಮಾಹಿತಿ ಇಲ್ಲವೆಂದು ಹೇಳಿತ್ತು. ಇದು  ಮೇಲ್ನೋಟಕ್ಕೆ ಸರ್ಕಾರದ ಅಧಿಕೃತ ಲಾಂಛನ ಮತ್ತು ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣವು ದುರ್ಬಳಕೆ ಆಗಿತ್ತು ಎಂದು ಕಂಡುಬಂದಿತ್ತು.

ಆಂದೋಲನ ವರದಿ ಫೇಕ್‌ ನ್ಯೂಸ್‌ ಪೋಸ್ಟರ್‌; ಮಾಹಿತಿಯೇ ಇಲ್ಲವೆಂದ ಇಲಾಖೆ, ಲಾಂಛನ ದುರ್ಬಳಕೆಯಾಗಿದ್ದರೂ ಮೌನ

 

ಈ ಕುರಿತು ‘ದಿ ಫೈಲ್‌’ ಮುಖ್ಯಮಂತ್ರಿ ಸಚಿವಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಆರ್‌ಟಿಐ ಅಡಿಯಲ್ಲಿ 2023ರ ಅಕ್ಟೋಬರ್‌ 16 ಮತ್ತು 17ರಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಉತ್ತರಿಸಿದ್ದ  ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಸಂಬಂಧ ಯಾವುದೇ ಸಭೆ ನಡೆದಿಲ್ಲ, ಕಡತವನ್ನೂ ತೆರೆದಿಲ್ಲ ಎಂದು ಉತ್ತರಿಸಿತ್ತು.

 

ಕಮಿಷನ್‌ಗೆ ಬೇಡಿಕೆ ಇರಿಸಿದ್ದು ರಾಜ್ಯ ಸರ್ಕಾರವನ್ನು ತೀವ್ರ ಮುಜುಗರದಲ್ಲಿ ಸಿಲುಕಿಸಿತ್ತು. ಇದರಿಂದ ತಪ್ಪಿಸಿಕೊಳ್ಳಲು ಆಂದೋಲನ ಪತ್ರಿಕೆಯ ವರದಿಯೇ ಫೇಕ್‌ ನ್ಯೂಸ್‌ ಎಂದು ತನ್ನದೇ ಇಲಾಖೆ, ಮುಖ್ಯಮಂತ್ರಿ ಹೆಸರಿನಲ್ಲಿರುವ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ  ಪೋಸ್ಟರ್‌ ಹರಿಯಬಿಟ್ಟಿತ್ತು. ಆದರೀಗ ಇದರ ಮಾಹಿತಿಯೇ ತನಗಿಲ್ಲ ಎಂದು ಮುಖ್ಯಮಂತ್ರಿಗಳ ವಾರ್ತಾಧಿಕಾರಿ, ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಇದೀಗ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಕಚೇರಿಯೂ ನುಣುಚಿಕೊಳ್ಳುತ್ತಿರುವುದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ.

 

ತನ್ನದೇ ಇಲಾಖೆಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಹರಿಯಬಿಟ್ಟಿದ್ದರೂ ಈ ಸಂಬಂಧ ಯಾವುದೆ ಮಾಹಿತಿ ಇಲ್ಲವೆಂದು ಹೇಳುತ್ತಿರುವ ಇಲಾಖೆಯು, ತನ್ನದೇ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಪ್ರಕಟಿಸಿರುವವರ ವಿರುದ್ಧ ಸೈಬರ್‌ ಠಾಣೆಗೇಕೆ ದೂರನ್ನು ಸಲ್ಲಿಸಲಿಲ್ಲ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.

 

ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯೇ ಈ ಸಂಬಂಧ ಯಾವುದೇ ಸಭೆಗಳನ್ನು ನಡೆಸಿಲ್ಲ, ಮಾಹಿತಿಯೂ ತನಗಿಲ್ಲ ಎಂದು ನೀಡಿರುವ ಮಾಹಿತಿಯು, ಸರ್ಕಾರದ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣವನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿದ್ದರೇ ಎಂದು ಎದ್ದಿದ್ದ ಅನುಮಾನಗಳನ್ನು ಸರ್ಕಾರವು ನೀಡಿರುವ ಉತ್ತರವು ಮತ್ತಷ್ಟು ಬಲಪಡಿಸಿವೆ.

 

ದಸರಾ ಸಂದರ್ಭದಲ್ಲಿ ಕಾರ್ಯಕ್ರಮ ನೀಡಲು ಸರ್ಕಾರದ ಅಧಿಕಾರಿಗಳು ರಾಜೀವ್‌ ತಾರಾನಾಥ್‌ ಅವರ ಬಳಿ ಕಮಿಷನ್‌ಗೆ ಬೇಡಿಕೆ ಇರಿಸಿದ್ದರು ಎಂದು ಆಂದೋಲನ ಪತ್ರಿಕೆಯು ವರದಿ ಪ್ರಕಟಿಸಿದ್ದರ ಬೆನ್ನಲ್ಲೇ ಕರ್ನಾಟಕ ಸರ್ಕಾರದ ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಇದೊಂದು ಫೇಕ್‌ ನ್ಯೂಸ್‌ ಎಂಬ ಪೋಸ್ಟರ್‌ನ್ನು ಪ್ರಕಟಿಸಿತ್ತು. ಇದು ಮಾಧ್ಯಮ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

 

‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಂದೋಲನ ದಿನಪತ್ರಿಕೆಯ ಫೇಕ್‌ ನ್ಯೂಸ್‌ ಕುರಿತಂತೆ ಯಾವುದೇ ಕಡತವನ್ನು ತೆರೆದಿರುವುದಿಲ್ಲ, ಯಾವುದೇ ಸಭೆ, ನಡವಳಿಗಳ ಮಾಹಿತಿ ಇರುವುದಿಲ್ಲ,’ ಎಂದು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಎಂ ಕೆ ಕಿರಣ್‌ ಅವರು 2023ರ ನವೆಂಬರ್‌ 9ರಂದು ಉತ್ತರಿಸಿದ್ದಾರೆ.

 

ಅದೇ ರೀತಿ ಮುಖ್ಯಮಂತ್ರಿಯವರ ವಾರ್ತಾಧಿಕಾರಿ ಕಚೇರಿಯಲ್ಲಿಯೂ ಯಾವುದೇ ಕಡತವನ್ನು ತೆರೆದಿಲ್ಲ. ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನೂ ನಡೆಸಿಲ್ಲ ಎಂದು ಮುಖ್ಯಮಂತ್ರಿಗಳ ಸಚಿವಾಲಯವು ಮಾಹಿತಿ ಒದಗಿಸಿದೆ.

 

ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯಮಂತ್ರಿಗಳ ಸಚಿವಾಲಯವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಕಚೇರಿಗೂ ರವಾನಿಸಿತ್ತು. ಆದರೆ ಇದುವರೆಗೂ ಮಾಧ್ಯಮ ಸಲಹೆಗಾರರ ಕಚೇರಿಯಿಂದ ಯಾವುದೇ ಮಾಹಿತಿಯೂ ಬಂದಿಲ್ಲ.

 

ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದೆ. ಹೀಗಿರುವಾಗ ಆಂದೋಲನ ದಿನಪತ್ರಿಕೆಯ ವರದಿಯನ್ನು ಸುಳ್ಳು ಸುದ್ದಿ ಎಂದು ತನ್ನದೇ ಇಲಾಖೆಗೆ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಫೇಕ್‌ ನ್ಯೂಸ್‌ ಎಂದು ಪೋಸ್ಟರ್‌ ಪ್ರಕಟಿಸಿದ್ದು ಯಾರು ಎಂಬ ಬಗ್ಗೆ ಮಾಹಿತಿಯೇ ಇಲ್ಲ ಮಾಧ್ಯಮ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

 

‘ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿಯಲ್ಲಿ ದಸರಾ ಕಾರ್ಯಕ್ರಮ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವ ಯಾರೇ ಆಗಿದ್ದರೂ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ,’ ಎಂದು ಇದೇ ಸಂದರ್ಭದಲ್ಲಿ ಸಚಿವ  ಎಚ್.ಸಿ.ಮಹದೇವಪ್ಪ ಹೇಳಿದ್ದರು.

the fil favicon

SUPPORT THE FILE

Latest News

Related Posts