ಪಿಂಚಣಿಗಳ ನಿರ್ದೇಶನಾಲಯದಲ್ಲಿ 2 ಸಾವಿರ ಕೋಟಿ ಅನುದಾನವಿದ್ದರೂ ಪರಿಶಿಷ್ಟರಿಗೆ ವೇತನವಿಲ್ಲ

ಬೆಂಗಳೂರು; ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ, ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ, ರೈತ ವಿಧವಾ ವೇತನ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಒದಗಿಸುವ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಲ್ಲಿ ಒಂದು ಸಾವಿರದಿಂದ 2 ಸಾವಿರ ಕೋಟಿ ಅನುದಾನವಿದ್ದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಬೇಕಾಗಿರುವ ವೇತನವನ್ನೇ ನೀಡುತ್ತಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಸಾಮಾಜಿಕ ಭದ್ರತೆ ಯೋಜನೆಗೆ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಎರಡೆರಡು ಪಿಂಚಣಿ ಪಾವತಿ ಮಾಡುತ್ತಿರುವುದು ಮತ್ತು ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ 11 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮಾರ್ಗಪಲ್ಲಟಗೊಳಿಸಿರುವುದರ ಬೆನ್ನಲ್ಲೇ  ಇದೇ ನಿರ್ದೇಶನಾಲಯದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವೇತನವನ್ನೇ ನೀಡುತ್ತಿಲ್ಲ ಎಂಬ ವಿಚಾರವು  ಮುನ್ನೆಲೆಗೆ ಬಂದಿದೆ.

 

ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರ ಅಧ್ಯಕ್ಷತೆಯಲ್ಲಿ 2023ರ ಜುಲೈ 28ರಂದು ನಡೆದ ಕೆಡಿಪಿ ಪೂರ್ವಭಾವಿ ಸಭೆಯಲ್ಲಿ ಈ ಸಂಗತಿಯು ಚರ್ಚೆಗೆ ಬಂದಿದೆ ಎಂದು ಗೊತ್ತಾಗಿದೆ. ಪೂರ್ವಭಾವಿ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಲ್ಲಿ ಒಂದು ಸಾವಿರದಿಂದ 2 ಸಾವಿರ ಕೋಟಿ ಅನುದಾನವಿದ್ದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಬೇಕಾಗಿರುವ ವೇತನವನ್ನು ನೀಡುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಸಾಮಾನ್ಯವಾಗಿ ಹೆಚ್ಚಿನವರು ಬಡವರಾಗಿದ್ದು ಸರ್ಕಾರದ ಸೌಲಭ್ಯಗಳು ಫಲಾನುಭವಿಗಳಿಗೆ ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೇ ತಲುಪಬೇಕು. ಗಣಕ ಯಂತ್ರದಲ್ಲಿ ಆರ್‍‌ ಡಿ ಸಂಖ್ಯೆ ಹಾಕಿದರೆ ಡೇಟಾ ಸಿಗುತ್ತದೆ. ಅದರೂ ಯಾಕೆ ನೀಡಲಾಗುತ್ತಿಲ್ಲ,’ ಎಂದು ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ನಿರ್ದೇಶನಾಲಯದ ಅಧಿಕಾರಿಗಳನ್ನು ಪ್ರಶ್ನಿಸಿರುವುದು ಪೂರ್ವಭಾವಿ ಸಭೆಯ ನಡವಳಿಯಿಂದ ಗೊತ್ತಾಗಿದೆ.

 

2023ರ ಜುಲೈ 28ರಂದು ನಡೆದ ಸಭೆಯ ನಡವಳಿ ಪ್ರತಿ

 

ಗರಿಷ್ಠ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದಿರುವ 5 ಲಕ್ಞ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ನಿರ್ದೇಶನಾಲಯದ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರಾದರೂ ನಿಗದಿತ ಫಲಿತಾಂಶ ಬರುವಂತೆ ಗಣಕ ಯಂತ್ರದಲ್ಲಿರುವ ಮಾಹಿತಿ ಬಳಸಿಕೊಂಡು ಆದ್ಯತೆ ಮೇರೆಗೆ ಅರ್ಜಿಗಳನ್ನು ವಿಲೇವಾರಿ ಮಾಡಿ ವಾರದೊಳಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಸಲ್ಲಿಸಬೇಕು ಎಂದು ಸೂಚಿಸಿದರು ಎಂದು ತಿಳಿದು ಬಂದಿದೆ.

 

ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್‍‌ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸುವ ಸಂಬಂಧ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು 2023ರ ಮೇ 24 ಮತ್ತು 25ರಂದು ನಡೆಸಿದ ವಿಡಿಯೋ ಸಂವಾದದಲ್ಲಿ ನಕಲಿ ಆಧಾರ್‌ ಸೀಡಿಂಗ್‌ ಪ್ರಕರಣಗಳ ಈ ವಿಚಾರವು ಪ್ರಸ್ತಾಪವಾಗಿತ್ತು.

ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್‍‌ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು 2023ರ ಜೂನ್‌ 2ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿತ್ತು.

 

‘ರಾಜ್ಯದಲ್ಲಿ 39,689 ಡ್ಯೂಪ್ಲಿಕೇಟ್‌ ಆಧಾರ್ ಪ್ರಕರಣಗಳಿವೆ. ಈ ಪ್ರಕರಣಗಳ ಸಂಬಂಧ ಜಿಲ್ಲೆಗಳಲ್ಲಿ ಪರಿಶೀಲಿಸಿ ಒಬ್ಬ ಫಲಾನುಭವಿ ಎರಡೆರಡು ಪಿಂಚಣಿ ಪಡೆಯುತ್ತಿದ್ದಲ್ಲಿ ಸರಿಯಾದ ಮಾಹಿತಿಯುಳ್ಳ ಪ್ರಕರಣವನ್ನು ಉಳಿಸಿಕೊಂಡು ಇನ್ನೊಂದು ಪ್ರಕರಣವನ್ನು ರದ್ದುಪಡಿಸಬೇಕು. ಒಂದೇ ಆಧಾರ್‍‌ ಸಂಖ್ಯೆಯನ್ನು ಒಬ್ಬರು ಹಾಗೂ ಅದಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಜೋಡಣೆಯಾಗಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಫಲಾನುಭವಿಗಳ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ ಸರಿಯಾದ ಆಧಾರ್‍‌ ಮಾಹಿತಿಯನ್ನು ಫಲಾನುಭವಿಗೆ ಜೋಡಣೆ ಮಾಡಬೇಕು,’ ಎಂದು ಪತ್ರದಲ್ಲಿ ನಿರ್ದೇಶಿಸಿತ್ತು.

 

ನಿರ್ದೇಶನಾಲಯದ ನಿರ್ದೇಶಕರು ಬರೆದಿರುವ ಪತ್ರದ ಪ್ರಕಾರ ಫಲಾನುಭವಿಗಳಿಗೆ ಎರಡೆರಡು ಪಿಂಚಣಿ ಪಾವತಿಯಾಗುತ್ತಿರುವ ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆಯೇ ಎಂಬ ಅನುಮಾನಗಳಿಗೂ ದಾರಿಮಾಡಿಕೊಟ್ಟಂತಾಗಿತ್ತು.

 

‘ರಾಜ್ಯದಲ್ಲಿ ಇನ್ನೂ 69,745 ಪ್ರಕರಣಗಳು ಆಧಾರ್‍‌ ಸೀಡಿಂಗ್‌ಗೆ ಬಾಕಿ ಇವೆ. ಈ ಕುರಿತು ಕೂಡಲೇ ಪರಿಶೀಲಿಸಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರಿಗೆ ಪಟ್ಟಿಯನ್ನು ಒದಗಿಸಿ ಅರ್ಹ ಫಲಾನುಭವಿಗಳಿಂದ ಬಾಕಿ ಇರುವ ಪ್ರಕರಣಗಳ ಆಧಾರ್‍‌ ಮಾಹಿತಿಯನ್ನು ಸಂಗ್ರಹಿಸಿ ಬ್ಯಾಂಕ್‌ಗಳ ಸಮನ್ವಯದೊಂದಿಗೆ ಎನ್‌ಪಿಸಿಐ ಮ್ಯಾಪಿಂಗ್‌ಗೆ ಕ್ರಮ ವಹಿಸಬೇಕು,’ ಎಂದು ಇದೇ ಪತ್ರದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು.

 

ರಾಜ್ಯದಲ್ಲಿ 33,327 ಪ್ರಕರಣಗಳಲ್ಲಿ ಪಿಂಚಣಿಯನ್ನು ಇಎಂಒ ಮೂಲಕ ಪಡೆಯುತ್ತಿದ್ದ ಕಾರಣ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಪರಿಶೀಲಿಸಿ ಅಂಚೆ ಇಲಾಖೆಯ ಸಮನ್ವಯದೊಂದಿಗೆ ಅಂಚೆ ಉಳಿತಾಯ ಖಾತೆ ಅಥವಾ ಬ್ಯಾಂಕ್‌ ಖಾತೆ ತೆರೆದು ಬ್ಯಾಂಕ್‌ ಸಮನ್ವಯದೊಂದಿಗೆ ಎನ್‌ಪಿಸಿಐ ಮ್ಯಾಪಿಂಗ್‌ಗೆ ಕ್ರಮ ವಹಿಸಬೇಕು ಎಂದು ನಿರ್ದೇಶಿಸಿದ್ದರು.

36,689 ನಕಲಿ ಆಧಾರ್‌ ಪ್ರಕರಣ ಪತ್ತೆ; ಸಾಮಾಜಿಕ ಭದ್ರತೆ ಪಿಂಚಣಿ ಪಾವತಿಯಲ್ಲೂ ಅಕ್ರಮ?

ಪಿಂಚಣಿ ಯೋಜನೆಯನ್ನು ಇದೀಗ ನೇರ ಹಣ ಸಂದಾಯ ಯೋಜನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನು ಈ ಯೋಜನೆಯಡಿ ಪ್ರಾಯೋಗಿಕ ಜಿಲ್ಲೆಗಳನ್ನಾಗಿ ಪರಿಗಣಿಸಿ, ಮೊದಲನೆ ಹಂತದಲ್ಲಿ ಈ ಜಿಲ್ಲೆಗಳಲ್ಲಿ ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್‍‌ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಿದ್ದರು.

 

ನೇರ ಹಣ ಸಂದಾಯ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಎನ್‌ಪಿಸಿಐ ಸೀಡಿಂಗ್‌ ಸ್ಟೇಟಸ್‌, ಹೆಸರು ಹೊಂದಾಣಿಕೆಯಾಗದ ಪ್ರಕರಣಗಳಲ್ಲಿ ಪ್ರಾಥಮಿಕ ಹಂತದ ಕಾರ್ಯಗಳನ್ನು ನಿರ್ದೇಶನಾಲಯದ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣಗಳನ್ನು ಎನ್‌ ಪಿಸಿಐನಲ್ಲಿ2016ರ ಹಿಂದಿನ ಸೀಡಿಂಗ್ ಪ್ರಕರಣಗಳು, ಎನ್‌ಪಿಸಿಐ ಸೀಡಿಂಗ್‌ ಬಾಕಿ ಇರುವ ಪ್ರಕರಣಗಳು, ಡ್ಯೂಪ್ಲಿಕೇಟ್‌ ಆಧಾರ್‍‌ ಪ್ರಕರಣಗಳು ಎಂದು ವರ್ಗೀಕರಿಸಲಾಗಿತ್ತು.

 

‘ಜೂನ್‌ 2023ರಿಂದಲೇ ಮಾಸಿಕ ಪಿಂಚಣಿ ಯೋಜನೆಯನ್ನು ಆಧಾರ್ ಆಧರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಿರುವುದರಿಂದ ಆಧಾರ್‍‌ ಸಂಗ್ರಹಣೆ ಕಾರ್ಯಕ್ಕೆ ಆದ್ಯತೆ ನೀಡಿ ಪೂರ್ಣಗೊಳಿಸಬೇಕು. ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿರುವ ಉಡುಪಿ,ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಡವರು ಅಂಚೆ ಇಲಾಖೆ ಹಾಗೂ ಲೀಡ್‌ ಬ್ಯಾಂಕ್‌ ನೊಂದಿಗೆ ತುರ್ತಾಗಿ ಸಭೆ ನಡೆಸಿ ಪ್ರಗತಿ ಸಾಧಿಸಬೇಕು,’ ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು.

 

ಆಧಾರ್‌, ಪಾನ್‌ ಲಿಂಕ್‌ ಮಾಡುವ ಸಮಸ್ಯೆಯಿಂದಾಗಿ ಬೆಂಗಳೂರು ನಗರವೊಂದರಲ್ಲೇ ಸುಮಾರು 300 ಹಿರಿಯ ನಾಗರಿಕರು ಹಲವು ತಿಂಗಳಿಂದ ಪಿಂಚಣಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಏಳು ವಾರ್ಡ್‌ಗಳಲ್ಲಿ ಸ್ಲಂ ಮಹಿಳಾ ಸಂಘಟನೆ ಯೊಂದು ನಡೆಸಿದ್ದ ಸಮೀಕ್ಷೆ ತಿಳಿಸಿತ್ತು.

 

ಈ ಪೈಕಿ ಶೇ.90 ರಷ್ಟು ನಾಗರಿಕರು ಪರಿಶಿಷ್ಟ ಸಮುದಾಯಗಳಿಗೆ ಸೇರಿದ್ದಾರೆ. ಅವರಲ್ಲಿ ವಯಸ್ಸಾದವರು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರು ಇದ್ದಾರೆ. ಹಲವರು ಹಣಕಾಸಿನ ಸಮಸ್ಯೆಯಿಂದಾಗಿ ಔಷಧಗಳನ್ನು ಕೊಳ್ಳುವುದನ್ನು ನಿಲ್ಲಿಸಿದ್ದಾರೆ ಎಂದೂ ಸಮೀಕ್ಷೆಯಿಂದ ತಿಳಿದು ಬಂದಿತ್ತು.

 

ಅದೇ ರೀತಿ ಹಲವರಿಗೆ ಸರಿಯಾಗಿ ಪಿಂಚಣಿ ಬರುತ್ತಿಲ್ಲ. ಪಿಪಿಒ (ಪೆನ್ಷನ್‌ ಪೇಮಂಡ್‌ ಆರ್ಡರ್‌) ಐಡಿ ಮತ್ತು ಬ್ಯಾಂಕ್‌ ಖಾತೆಗೆ ಪಾನ್‌ ನಂಬರ್‌, ಆಧಾರ್‌ ಜೋಡಣೆಯಾಗದಿರುವುದೇ ಪಿಂಚಣಿ ಸ್ಥಗಿತಗೊಳ್ಳಲು ಪ್ರಮುಖ ಕಾರಣವಾಗಿದೆ ಎಂಬುದು ಸಮೀಕ್ಷೆಯು ಬಹಿರಂಗಪಡಿಸಿತ್ತು.

 

ಹಲವರು ಆಧಾರ್‌ ಕಾರ್ಡ್‌ ಪಡೆಯುವಾಗ ನೀಡಿದ ಮೊಬೈಲ್‌ ಸಂಖ್ಯೆಯನ್ನು ಈಗ ಹೊಂದಿಲ್ಲ. ಹೀಗಾಗಿ ಒಟಿಪಿ ಮೂಲಕ ವೆರಿಫಿಕೇಶನ್‌ ಪೂರ್ಣಗೊಳ್ಳದೆ ಹಲವರ ಪಿಂಚಣಿ ಸ್ಥಗಿತಗೊಂಡಿತ್ತು. ಆಧಾರ್‌ ಜತೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ ಇಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾನಾ ಸೇವೆ, ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್‌ ಪಡೆಯಲು ಕೂಡ ತೊಂದರೆಯಾಗಿತ್ತು ಎಂಬುದನ್ನು ಸಮೀಕ್ಷೆಯು ಹೊರಗೆಡವಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts