ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗ ಆರೋಪ; ಅಧಿಕಾರಿಗಳ ಸಮಿತಿ ರಚನೆ, ವರದಿಗೆ ಸೂಚನೆ

ಬೆಂಗಳೂರು; ಅರಣ್ಯ, ಜೀವಿಶಾಸ್ತ್ರ ಇಲಾಖೆಯ ಹಿರಿಯ ಅಧಿಕಾರಿಗಳು ಕಮಿಷನ್‌ಗಾಗಿ  ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್‌ ಮಾಡಿದ್ದಾರೆ. ಇದಕ್ಕಾಗಿ ತಂತ್ರಾಂಶವನ್ನೇ ದುರುಪಯೋಗಪಡಿಸಿಕೊಳ್ಳಲಾಗಿದೆ   ಎಂಬ ಆಪಾದನೆ ಕುರಿತಂತೆ ‘ದಿ ಫೈಲ್‌’ ವರದಿ ಮಾಡಿದ ಬೆನ್ನಲ್ಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ  ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಇಡೀ ಪ್ರಕರಣದ ಕುರಿತು ವರದಿ ನೀಡಲು ಇಬ್ಬರು ಹಿರಿಯ ಐಎಫ್‌ಎಸ್‌ ಅಧಿಕಾರಿಗಳ ಸಮಿತಿ ರಚಿಸಿ ಟಿಪ್ಪಣಿ ಹೊರಡಿಸಿದ್ದಾರೆ.

 

ತಮಗೆ ಬೇಕಾದ ಅಧಿಕಾರಿ, ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುದ್ದೆಗಳನ್ನು ಬ್ಲಾಕ್‌ ಮಾಡುವ ಮೂಲಕ ಬೇರೆ ಯಾವ ಅಧಿಕಾರಿ, ನೌಕರರೂ ಆ ಹುದ್ದೆಗಳಿಗೆ ಅರ್ಜಿಯನ್ನೇ ಸಲ್ಲಿಸದಂತೆ ಜಾಲ ಹೆಣೆಯಲಾಗಿದೆ ಎಂದು ಅಧಿಕಾರಿ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೇ ತಂತ್ರಾಂಶವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಗುರುತರವಾದ ಆಪಾದನೆ ಮಾಡಿದ್ದರು. ಈ ಕುರಿತು ‘ದಿ ಫೈಲ್‌’ ವರದಿಯನ್ನು ಪ್ರಕಟಿಸಿತ್ತು.

 

ಇದನ್ನಾಧರಿಸಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಸ್ವಜಿತ್‌ ಮಿಶ್ರ ಮತ್ತು ಮತ್ತು ಅನಿಲ್‌ ಕುಮಾರ್‍‌ ರತನ್‌ ಅವರ  ನೇತೃತ್ವದಲ್ಲಿ ಸಮಿತಿ ರಚಿಸಲು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ 2023ರ ಜುಲೈ 14ರಂದು ಟಿಪ್ಪಣಿ ಹೊರಡಿಸಿದ್ದಾರೆ.

 

ಟಿಪ್ಪಣಿಯಲ್ಲೇನಿದೆ?

 

ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗಪಡಿಸಿಕೊಂಡ ಅಧಿಕಾರಿಗಳು ಎಂಬ ಶೀರ್ಷಿಕೆಯಲ್ಲಿ ಸುದೀರ್ಘವಾದ ಸುದ್ದಿ ಪ್ರಕಟವಾಗಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಇದನ್ನು ನಾನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ.

 

ಕರ್ನಾಟಕ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ವೃಂದಗಳಾದ ಉಪ ವಲಯ ಅರಣ್ಯಾಧಿಕಾರಿ, ಮೋಜಣಿದಾರ, ಅರಣ್ಯ ರಕ್ಷಕ ಮತ್ತು ಅರಣ್ಯ ವೀಕ್ಷಕ ವೃಂದದಲ್ಲಿನ ಎಲ್ಲಾ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗಳನ್ನು ಕರ್ನಾಟಕ ರಾಜ್ಯ ನಾಘರಿಕ ಸೇವೆಗಳು ಅಧಿನಿಯಮ 2016ರ ಅನ್ವಯ ಕೌನ್ಸಲಿಂಗ್‌ ಮೂಲಕವೇ ಸ್ಥಳ ನಿಯುಕ್ತಿಗೊಳಿಸಲಾಗುತ್ತಿದೆ.

 

ಇದಕ್ಕೆ ಬಳಸಲಾಗುವ ತಂತ್ರಾಂಶದಲ್ಲಿಯೇ ಬ್ಲಾಕ್‌ ಮಾಡಿ ಕೆಲವು ಅಧಿಕಾರಿ, ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುದ್ದೆಗಳನ್ನು ಬ್ಲಾಕ್‌ ಮಾಡುವ ಮೂಲಕ ಬೇರೆ ಯಾವ ಅಧಿಕಾರಿ ಮತ್ತು ನೌಕರರಿಗೆ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸದಂತೆ ಜಾಲ ಹೆಣೆಯಲಾಗುತ್ತಿದೆ ಎಂಬ ಆರೋಪವು ಗಂಭೀರ ಸ್ವರೂಪದ್ದಾಗಿದ್ದು ಇದು ಅಕ್ಷ್ಯಮ್ಯ ಅಪರಾಧವಾಗಿರುತ್ತದೆ ಎಂದು ಸಚಿವ ಖಂಡ್ರೆ ಅವರು ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

 

‘ಈಗಾಗಲೇ ಉಭಯ ಸದನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ನಿರಂತರ ಆರೋಪಗಳನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ನಾನು ಪ್ರತಿನಿಧಿಸುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ವಹಿಸಲು ಸ್ಪಷ್ಟ ಎಚ್ಚರಿಕೆಯನ್ನು ನೀಡುತ್ತಿದ್ದೇನೆ,’ ಎಂದು ಟಿಪ್ಪಣಿಯಲ್ಲಿ ಪ್ರಸ್ತಾಪಿಸಿದ್ದಾರೆ.

 

ಅರಣ್ಯ , ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಲ್ಲಿ ಕೌನ್ಸಲಿಂಗ್‌ ಮೂಲಕ ಪಾರದರ್ಶಕವಾಗಿ ಕಾರ್ಯನಿರ್ವಹಣೆಯಾಗಬೇಕಿದ್ದು ಅಧಿಕಾರಿ, ನೌಕರ ಸ್ನೇಹಿ ಕೌನ್ಸಲಿಂಗ್‌ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಇಲಾಖೆ ನಿಯಮಗಳ ಅನ್ವಯ ಅಗತ್ಯ ಕ್ರಮ ಕೈಗೊಳ್ಳಲು ತಕ್ಷಣವೇ ಸಮಿತಿ ರಚಿಸಬೇಕು ಮತ್ತು ಪೂರ್ಣವಾದ ವರದಿಯನ್ನು ನೀಡಬೇಕು ಎಂದು ಟಿಪ್ಪಣಿಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.

 

 

ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಅರಣ್ಯ ವೀಕ್ಷಕರು, ಗಸ್ತು ಅರಣ್ಯ ಪಾಲಕ, ಉಪ ವಲಯ ಅರಣ್ಯಾಧಿಕಾರಿ  ಹುದ್ದೆಗಳನ್ನು ಬ್ಲಾಕ್‌ ಮಾಡಿದ್ದಾರೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗವು ವರ್ಗಾವಣೆ, ಕೌನ್ಸಲಿಂಗ್‌ ತಂತ್ರಾಂಶದ ಮೇಲ್ವಿಚಾರಣೆ ನಡೆಸುತ್ತದೆ. ಆದರೆ ಈ ತಂತ್ರಾಂಶವನ್ನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಪಾರದರ್ಶಕ ವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಈ ಕುರಿತು ‘ದಿ ಫೈಲ್‌’ 2023ರ ಜುಲೈ 14ರಂದು ವರದಿ ಪ್ರಕಟಿಸಿತ್ತು.

 

ಲಂಚ; ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗಪಡಿಸಿಕೊಂಡ ಅಧಿಕಾರಿಗಳು?

 

ಅರಣ್ಯ ವೀಕ್ಷಕರಿಗೆ 50 ಸಾವಿರ, ಗಸ್ತು ಅರಣ್ಯ ಪಾಲಕರಿಗೆ 50 ಸಾವಿರದಿಂದ 1 ಲಕ್ಷ ರು., ಉಪ ವಲಯ ಅರಣ್ಯಾಧಿಕಾರಿಗಳಿಗೆ 1ರಿಂದ 2 ಲಕ್ಷ ರು. ಲಂಚ ನೀಡಬೇಕು. ಲಂಚ ನೀಡಿದ ಸಿಬ್ಬಂದಿಗಳಿಗೆ ಅನುಕೂಲವಾಗುವ ಹಾಗೇ ಹುದ್ದೆಗಳನ್ನು ಬ್ಲಾಕ್‌ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ, ಶಿವಮೊಗ್ಗ, ಕೆನರಾ ವೃತ್ತವೂ ಸೇರಿದಂತೆ ಬಹುತೇಕ ಅರಣ್ಯ ವೃತ್ತಗಳಲ್ಲಿ ಹುದ್ದೆಗಳನ್ನು ಬ್ಲಾಕ್‌ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು.

 

ಹಿರಿಯ ಐಎಫ್‌ಎಸ್‌ ಅಧಿಕಾರಿಗಳು ಇಂತಹದ್ದೊಂದು ಜಾಲ ಹೆಣೆದಿರುವುದು  ಸಚಿವ ಈಶ್ವರ ಖಂಡ್ರೆ ಅವರಿಗೆ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿತ್ತು.

 

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ಅಧಿನಿಯಮ 2016 ಮತ್ತು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ನಿಯಮ 2019 ರ ನಿಯಮದಡಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆ ಮಾಡುತ್ತಿದೆ. ಈ ಕಾಯಿದೆಯಲ್ಲಿ ಸುಮಾರು ಲೋಪದೋಷಗಳಿವೆ. ಅಲ್ಲದೇ ಅತೀ ಹೆಚ್ಚು ಸಿಬ್ಬಂದಿಗಳ ವಿರೋಧದ ನಡುವೆಯೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಜಾರಿಗೊಳಿಸುತ್ತಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಂತಾಗಿತ್ತು.

 

ಲೋಪ ದೋಷಗಳ ಪಟ್ಟಿ

 

ಕೆ ಸಿ ಎಸ್ ಆರ್ ನಿಯಮ 32 ರಡಿ ಮುಂಬಡ್ತಿ ಹೊಂದಿರುವ ಸಿಬ್ಬಂದಿಗಳಿಗೆ ವರ್ಗಾವಣೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

 

ಅಂತರ್ ವೃತ್ತ ವರ್ಗಾವಣೆಯನ್ನು ನೇರ ನೇಮಕಾತಿ ಹೊಂದಿದ ಸಿಬ್ಬಂದಿಗಳಿಗೆ ಮಾತ್ರವೇ ಅನುಮತಿಸಲಾಗಿದ್ದು ಬಡ್ತಿ ಹೊಂದಿದ ಸಿಬ್ಬಂದಿಗಳಿಗೆ ಅಂತರ ವೃತ್ತ ವರ್ಗಾವಣೆ ಅವಕಾಶ ನೀಡಿಲ್ಲ.

 

ಸರ್ಕಾರಿ ನೌಕರರ ಪತಿ ಪತ್ನಿ ಪ್ರಕರಣದಡಿ ಸೂಕ್ತ ಆದ್ಯತೆ ನೀಡಿಲ್ಲ.

 

ಈ ಕಾಯ್ದೆಯಲ್ಲಿ ಸಿಬ್ಬಂದಿಗಳಿಗೆ 58 ವರ್ಷಗಳವರೆಗೆ ಅವರ ಮಾತೃ ತಾಲೂಕಿನಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿಲ್ಲ.

 

ಕರ್ನಾಟಕ ರಾಜ್ಯ ಸರ್ಕಾರದ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ.

 

ಈ ಕಾಯ್ದೆ ಕೇವಲ ಮುಂಚೂಣಿ ಸಿಬ್ಬಂದಿಗಳಿಗೆ ಮಾತ್ರ ಅನ್ವಯ( ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಮತ್ತು ಅರಣ್ಯ ವೀಕ್ಷಕರು )

 

ಈ ಕಾಯ್ದೆಯಲ್ಲಿ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ ಮತ್ತು ನಿಯೋಜನೆಗೆ ಅವಕಾಶ ಕಲ್ಪಿಸಿಲ್ಲ.

 

ಸದರಿ ಕಾಯ್ದೆಯಲ್ಲಿ ವರ್ಗಾವಣೆಗೆ ಅಂಕಗಳನ್ನು ನಿಗದಿಪಡಿಸಿರುವುದು ಅವೈಜ್ಞಾನಿ.

 

ಅನಿಯಮಿತ ವರ್ಗಾವಣೆಗೆ ಅವಕಾಶ ನೀಡಿದ್ದು ವರ್ಗಾವಣೆ ತಿರಿಸ್ಕರಿಸಲು ಅವಕಾಶ ನೀಡಿಲ್ಲ.

 

ಒಂದೇ ಕೇಂದ್ರ ಸ್ಥಾನದಲ್ಲಿ ಬೇರೆ ಬೇರೆ ಪ್ರವರ್ಗ ಹುದ್ದೆಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿಲ್ಲ.

 

ವರ್ಗಾವಣೆಯನ್ನು ರೋಟೇಶನ್ ಆಧಾರದಲ್ಲಿ ಜಾರಿಗೊಳಿಸಲು ಅಧಿಸೂಚಿಸಿದ್ದು ವರ್ಗಾವಣೆ ಜಾರಿಗೊಳಿಸಲು ಅಸಾಧ್ಯವಾಗಿದೆ ( ಎಲ್ಲಾ ವೃತ್ತಗಳಲ್ಲಿ ಎಬಿಸಿ ಹುದ್ದೆಗಳ ಸಂಖ್ಯೆಗಳು ಏಕ ಪ್ರಕಾರವಾಗಿ ಹಂಚಿಕೆಯಾಗಿರುವುದಿಲ್ಲ)

 

ಈ ಕಾಯ್ದೆಯಲ್ಲಿ ಅರಣ್ಯ ಸಂಚಾರಿದಳ, ಸಿಟಿ ಚೆಕ್ಕಿಂಗ್, ಸಾ ಮಿಲ್ ಶಾಖೆಗಳಲ್ಲಿ ಮೂಲ ಜಿಲ್ಲೆಯವರು ಕರ್ತವ್ಯ ನಿರ್ವಹಿಸುವುದಕ್ಕೆ ಅವಕಾಶವಿಲ್ಲ.

 

ಈ ಕಾಯ್ದೆಯ ಪ್ರಕಾರ ಹೊಸದಾಗಿ ನೇಮಕಗೊಂಡ ಹಾಗೂ ಮುಂಬಡ್ತಿ ಹೊಂದಿದ ಸಿಬ್ಬಂದಿಗಳನ್ನು ಪ್ರವರ್ಗ A ಗೆ ನೇಮಿಸಲು ಅಧಿಸೂಚಿಸಿದ್ದು ತಪ್ಪಾದ ಕ್ರಮವಾಗಿದೆ.

 

ಜೇಷ್ಠತೆ ನಿರ್ದೇಶನದಲ್ಲಿ ನಿರ್ದಿಷ್ಟವಾದ ಮಾನದಂಡವಿಲ್ಲ.

 

ವಿಶೇಷ ನೇಮಕಾತಿಗಳಾಡಿ ಆಯ್ಕೆಯಾದ ಸಿಬ್ಬಂದಿಗಳಿಗೆ ಕೌನ್ಸಿಲಿಂಗ್ ದಿಂದ ವಿನಾಯತಿ ನೀಡಿಲ್ಲ.

 

ನೇರ ನೇಮಕಗೊಂಡ ಸಿಬ್ಬಂದಿಗಳಿಗೆ ಮಾತ್ರ ಅಂತರ್ ವೃತ್ತ ವರ್ಗಾವಣೆ ಗಳಿಗೆ ಅವಕಾಶ ಮಾಡಿಕೊಟ್ಟಿದ್ದು ರಾಜ್ಯದಲ್ಲಿ ಚಾಲ್ತಿ ಇರುವ ಕರ್ನಾಟಕ ನಾಗರೀಕ ಸೇವಾ 1977ರ ನಿಯಮಗಳಿಗೆ ವಿರುದ್ಧ. ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ವರ್ಗಾವಣೆ ವಿನಾಯಿತಿ ನೀಡಿಲ್ಲ ಎಂದು ಹೇಳಲಾಗಿತ್ತು.

 

 

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ( ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ಅಧಿನಿಯಮ 2016 ಮತ್ತು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ( ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ನಿಯಮ 2019 ರ ನಿಯಮ ದಡಿ ಮುಖಾಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆ ಮಾಡಲಾಗುತ್ತಿದೆ. ಈ ಕಾಯಿದೆಯಲ್ಲಿ ಸುಮಾರು ಲೋಪ ದೋಷಗಳು ಇದ್ದರೂ ಮತ್ತು ಅತೀ ಹೆಚ್ಚು ಸಿಬ್ಬಂದಿಗಳ ವಿರೋಧದ ನಡುವೆ ಶತಾಯಗತಾಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಜಾರಿಗೊಳಿಸುತ್ತಿರುವುದು ಅನುಮಾನಕ್ಕೆ ಮುಂಚೂಣಿ ಸಿಬ್ಬಂದಿಗಳಿಗೆ ವಂಚನೆ ಮಾಡಿದಂತೆ ಎಂದು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದರು.

the fil favicon

SUPPORT THE FILE

Latest News

Related Posts