ಲಕ್ಷ್ಮಿ ಮಿನರಲ್ಸ್‌ ಸೇರಿ 5 ಗಣಿ ಗುತ್ತಿಗೆಗಳಿಗೆ 200 ಹೆಕ್ಟೇರ್‌ ಅರಣ್ಯೇತರ ಜಮೀನು; ಸಿಎಂ, ಪ್ರಲ್ಹಾದ ಜೋಷಿ ಒತ್ತಡ

Photo credit;basavarajbommai official twitter account

ಬೆಂಗಳೂರು; ಸರ್ಕಾರಿ ಸಿ ಮತ್ತು ಡಿ ಮತ್ತಿತರ ಜಮೀನುಗಳನ್ನು ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡುವುದು ಮತ್ತು ಪ್ರಸ್ತಾಪಿಸುವುದನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರವು ತಡೆಹಿಡಿದಿದ್ದ ನೀತಿಯನ್ನು  ಪುನರ್‌ ಪರಿಶೀಲಿಸಲು ಮುಂದಾಗಿದ್ದ ರಾಜ್ಯ ಬಿಜೆಪಿ ಸರ್ಕಾರವು ವೀರಭದ್ರಪ್ಪ ಸಂಗಪ್ಪ ಸೇರಿದಂತೆ ಒಟ್ಟು  5 ಗಣಿ ಗುತ್ತಿಗೆಗಳಿಗೆ ಕೋಲಾರ ಜಿಲ್ಲೆಯಲ್ಲಿ 200 ಹೆಕ್ಟೇರ್‌ ಅರಣ್ಯೇತರ ಜಮೀನು ನೀಡಲು ಕಂದಾಯ ಇಲಾಖೆ ಮೇಲೆ ಒತ್ತಡ ಹೇರಿದೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಷಿ ಅವರು ಭಾಗವಹಿಸಿದ್ದ ಸಭೆಯಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ನೀತಿಯನ್ನು ಪುನರ್‌ ಪರಿಶೀಲಿಸಲು ನಿರ್ಣಯ ಕೈಗೊಂಡಿರುವ ಬೆನ್ನಲ್ಲೇ 5 ಗಣಿ ಕಂಪನಿಗಳ ಹೆಸರು ಕೂಡ ಬಹಿರಂಗವಾಗಿದೆ. ಈ ಕುರಿತು ‘ದಿ ಫೈಲ್‌’ಗೆ ದಾಖಲೆಯೊಂದು ಲಭ್ಯವಾಗಿದೆ.

 

ಕೋಲಾರ ಜಿಲ್ಲೆ ಕೋಲಾರ ತಾಲೂಕು ಕಸಬಾ ಹೋಬಳಿಯ ಅಂತರಗಂಗೆ ಹಾಗೂ ವಕ್ಕಲೇರಿ ಹೋಬಳಿ ಸುತ್ತಮುತ್ತಲಿನ ಜಮೀನುಗಳ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಅರಣ್ಯೇತರ ಜಮೀನನ್ನು ಪರಿಹಾರಾತ್ಮಕ ಜಮೀನನ್ನಾಗಿ ನೀಡಿದ್ದನ್ನು ಕಂದಾಯ ಇಲಾಖೆಯು ರದ್ದುಪಡಿಸಿತ್ತು. ಆದರೀಗ ರಾಜ್ಯ ಬಿಜೆಪಿ ಸರ್ಕಾರವು 5 ಗಣಿ ಗುತ್ತಿಗೆಗಳಿಗೆ 200 ಹೆಕ್ಟೇರ್‌ ಅರಣ್ಯೇತರ ಜಮೀನು ನೀಡಲು ಮುಂದಾಗಿದೆ.

 

ಲಕ್ಷ್ಮಿ ಮಿನರಲ್ಸ್‌ (ಎಂ ಎಲ್‌ ನಂ 2551) ಗೆ 24.51 ಹೆಕ್ಟೇರ್‌, ವೀರಭದ್ರಪ್ಪ ಸಂಗಪ್ಪ (ಎಂಎಲ್‌ ನಂ 2160)3.373 ಹೆಕ್ಟೇರ್‌, ಬಾಲಸುಬ್ಬಶೆಟ್ಟಿ ಅಂಡ್‌ ಸನ್‌ (ಎಂ ಎಲ್‌ ನಂ 2502-3.14 ಹೆ, ನದೀಮ್‌ ಮಿನರಲ್ಸ್‌ (ಎಂ ಎಲ್‌ ನಂ 2526) 12.81 ಹೆಕ್ಟೇರ್‌, ಎಂ ಶ್ರೀನಿವಾಸಲು (ಎಂ ಎಲ್‌ ನಂ 2552) 134.00 ಹೆಕ್ಟೇರ್‌ ವಿಸ್ತೀರ್ಣದ ಅರಣ್ಯೇತರ ಜಮೀನನ್ನು ಪರಿಹಾರಾತ್ಮಕ ಅರಣ್ಯ ಜಮೀನು ನೀಡಲು ಕಂದಾಯ ಇಲಾಖೆಗೆ ಅರಣ್ಯ ಇಲಾಖೆಯು ಸೂಚಿಸಿತ್ತು. ಆದರೆ ಇದುವರೆಗೂ ಅರಣ್ಯೇತರ ಜಮೀನುಗಳನ್ನು ಪರಿಹಾರಾತ್ಮಕ ಅರಣ್ಯ ಜಮೀನ್ನನಾಗಿ ಗುರುತಿಸಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆ ಮೇಲೆ ಒತ್ತಡ ಮುಂದುವರೆಸಿದೆ ಎಂದು ಗೊತ್ತಾಗಿದೆ.

 

ಸರ್ಕಾರಿ ಮೂಲಭೂತ ಸೌಕರ್ಯಗಳಿಗಾಗಿ ರಾಜ್ಯದ ವಿವಿಧೆಡೆ ಅರಣ್ಯ ಪ್ರದೇಶವನ್ನು ಪಡೆದಿದ್ದರ ಬದಲಿಗೆ ಪ್ರತಿ ಕಂದಾಯ ವಿಭಾಗಕ್ಕೆ ಒಂದೊಂದೆಡೆ 500 ಎಕರೆ ಜಮೀನನ್ನು ಕಾಯ್ದಿರಿಸಲು ಮುಂದಾಗಿತ್ತು. ರಾಜ್ಯ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಪಿ ರವಿಕುಮಾರ್‌ ಅವರು ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದರು.  ಲ್ಯಾಂಡ್ ಬ್ಯಾಂಕ್‌ ಹೆಸರನಲ್ಲಿ 1 ಸಾವಿರ ಎಕರೆಯನ್ನು ಗುರುತಿಸಲು ಕಂದಾಯ ಇಲಾಖೆಗೆ ಅರಣ್ಯ ಇಲಾಖೆಯು ಪತ್ರ ಬರೆದಿತ್ತು.

 

2016ರಲ್ಲಿ ಹೊರಡಿಸಿದ್ದ ಆದೇಶದಲ್ಲೇನಿತ್ತು?

 

ಲಭ್ಯವಿರುವ ಸರ್ಕಾರಿ ಸಿ ಮತ್ತು ಡಿ ಮತ್ತಿತರ ಜಮೀನುಗಳನ್ನು ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡುವುದು ಮತ್ತು ಪ್ರಸ್ತಾಪಿಸುವುದನ್ನು ತಕ್ಷಣದಿಂದ ನಿಲ್ಲಿಸಲು ಸೂಚಿಸಿದೆ. ಖಾಸಗಿ ವ್ಯಕ್ತಿಗಳು ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಇರತಕ್ಕಂತ ಅಥವಾ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಹ ಮಾನವ ವನ್ಯಜೀವಿ ಸಂಘರ್ಷವಿರುವ ಖಾಸಗಿ ಜಮೀನುಗಳನ್ನು ಮಾತ್ರ ಗುರುತಿಸಿ ಖರೀದಿಸಿ ಸರ್ಕಾರಕ್ಕೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡಬೇಕು,’ ಎಂದು ಅರಣ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಲ್‌ ಶಾರದ ಅವರು ಆದೇಶ ಹೊರಡಿಸಿದ್ದರು.

 

ಖಾಸಗಿ ಸಂಸ್ಥೆಗಳು ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಸರ್ಕಾರಿ ಜಮೀನುಗಳನ್ನು ಪರಿಭಾವಿಸುವುದರಿಂದ ಸರ್ಕಾರಿ ಉದ್ದೇಶಗಳಿಗೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡಲು ಜಮೀನುಗಳು ಲಭ್ಯವಿಲ್ಲದಂತಾಗುವ ಸಂಭವವಿರುತ್ತೆ. ಈ ಹಿನ್ನೆಲೆಯಲ್ಲಿ ಲಭ್ಯವಿರುವ ಸಿ ಮತ್ತು ಡಿ ಜಮೀನುಗಳನ್ನು ಸರ್ಕಾರಿ ಉದ್ದೇಶಗಳಿಗೆ ಅಂದರೆ ನೀರಾವರಿ, ಕುಡಿಯುವ ನೀರು, ವಿದ್ಯುದ್ದೀಕರಣ, ರಸ್ತೆ, ಸರ್ಕಾರಿ ಕಟ್ಟಡಗಳು, ಆಸ್ಪತ್ರೆಗಳು, ಮುಂತಾದ ಯೋಜನೆಗಳಿಗೆ ಮಂಜೂರು ಮಾಡಲು ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಅರಣ್ಯ ವಿಮೋಚನೆ ಸಂದರ್ಭದಲ್ಲಿ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡಲು ಕಾಯ್ದಿರಿಸಿಕೊಳ್ಳುವುದು ಸೂಕ್ತ ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರವು ಹೇಳಿತ್ತು.

 

2022ರಲ್ಲಿ ಕಂದಾಯ ಇಲಾಖೆಗೆ ಬರೆದ ಪತ್ರದಲ್ಲೇನಿದೆ?

 

‘ಸರ್ಕಾರಿ ಸಿ ಮತ್ತು ಡಿ ಮತ್ತಿತರ ಜಮೀನುಗಳನ್ನು ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡುವುದನ್ನು ಅಥವಾ ಪ್ರಸ್ತಾಪಿಸುವುದನ್ನು ತಡೆಹಿಡಿರುವ ನೀತಿಯನ್ನು ಪುನರ್‌ ಪರಿಶೀಲಿಸಬೇಕಾಗಿರುತ್ತದೆ. ಈ ಸಂಬಂಧ ರಾಜ್ಯದಲ್ಲಿ ಒಂದು ಅಥವಾ ಇತರೆ ಕಡೆಗಳಲ್ಲಿ ಸುಮಾರು 1 ಸಾವಿರ ಎಕರೆ ಅರಣ್ಯ ಜಮೀನನ್ನು   ಗುರುತಿಸಿ ಪರಿಹಾರಾತ್ಮ ಅರಣ್ಯ ಜಮೀನು ಮಂಜೂರಾತಿಗಾಗಿ ಒಂದು ಲ್ಯಾಂಡ್‌ ಬ್ಯಾಂಕ್‌ ರಚಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ಪತ್ರದಲ್ಲಿ ಕೋರಿದ್ದರು. ಈ ಕುರಿತು ‘ದಿ ಫೈಲ್‌’ 2023ರ ಜನವರಿ 25ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಖಾಸಗಿ ಸಂಸ್ಥೆಗಳಿಗೆ 1,000 ಎಕರೆ ಪರಿಹಾರಾತ್ಮಕ ಅರಣ್ಯ ಜಮೀನು; ತಡೆಹಿಡಿದಿದ್ದ ನೀತಿ ಪುನರ್‌ ಪರಿಶೀಲನೆ

 

ಲಭ್ಯವಿರುವ ಸರ್ಕಾರಿ ಸಿ ಮತ್ತು ಡಿ ಮತ್ತಿತರ ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಥವಾ ವ್ಯಕ್ತಿಗಳಿಗೆ ಪರಿಹಾರಾತ್ಮಕ ಅರಣ್ಯೀಕರಕ್ಕೆ ನೀಡುವುದು ಮತ್ತು ಪ್ರಸ್ತಾಪಿಸುವುದಕ್ಕೆ ಅವಕಾಶವಿಲ್ಲ. ಆದರೆ ಕಂದಾಯ ಇಲಾಖೆಯಿಂದ ಈ ಮೊದಲು ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಜಮೀನನ್ನು ನೀಡಿದ್ದರೂ ಸಹ ನಂತರ ರದ್ದುಪಡಿಸಿದ ಸಂದರ್ಭಗಳಲ್ಲಿನ ಪ್ರಕರಣಗಳಿಗೆ ಇದರಿಂದ ವಿನಾಯಿತಿ ನೀಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

 

 

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅರಣ್ಯ (ಸಂರಕ್ಷಣೆ) ಕಾಯ್ದೆ 1980ರ ಅಡಿ ಅರಣ್ಯೇತರ ಉದ್ದೇಶಗಳಿಗೆ (ಸಾರ್ವಜನಿಕ ಹಾಗೂ ಖಾಸಗಿ ಉದ್ದೇಶಿತ) 48 ಪ್ರಕರಣಗಳಿಗೆ ಸಂಬಂಧಿಸಿದಂತೆ 746.1368 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಬಳಸಲು ಪೂರ್ವಾನುಮೋದನೆ ನೀಡಲಾಗಿತ್ತು. ಅದೇ ರೀತಿ 2016ರ ಆಗಸ್ಟ್ 31ರಂದು ಹೊರಡಿಸಿದ್ದ ಆದೇಶದಲ್ಲಿನ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 170.691 ಹೆಕ್ಟೇರ್‌ ಕಂದಾಯ ಭೂಮಿಯನ್ನು ಪರ್ಯಾಯವಾಗಿ ಅರಣ್ಯ ಇಲಾಖೆಗೆ ಪಡೆದಿದೆ.

the fil favicon

SUPPORT THE FILE

Latest News

Related Posts