ಸೂಟ್‌ಕೇಸ್‌ ಖರೀದಿ, 2 ಕೋಟಿ ದುಂದುವೆಚ್ಚ; ಕುಲಪತಿ ಸೇರಿ ಮೂವರ ವಿರುದ್ಧ ದೂರು ಸಲ್ಲಿಸಿದ ಕೆಆರ್‌ಎಸ್‌

ಬೆಂಗಳೂರು; ದಾವಣಗೆರೆ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕಗೊಳಿಸುವ ಸಂಬಂಧ ಶೋಧನಾ ಸಮಿತಿಯ ಸದಸ್ಯರಿಗೆ 10 ಸೂಟ್‌ಕೇಸ್‌ ಖರೀದಿ, ನ್ಯಾಕ್‌ ಸಮಿತಿ ಪರಿಶೀಲನೆ ಸಂದರ್ಭದಲ್ಲಿ 2 ಕೋಟಿಗೂ ಹೆಚ್ಚು ದುಂದುವೆಚ್ಚ ಮಾಡಿರುವುದೂ ಸೇರಿದಂತೆ ಇನ್ನಿತರೆ ಅಕ್ರಮಗಳನ್ನು ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಷ್ಟ್ರಸಮಿತಿಯು ಲೋಕಾಯುಕ್ತಕ್ಕೆ ದೂರು ದಾಖಲಿಸಿದೆ.

 

ವಿಶ್ವವಿದ್ಯಾಲಯದ ಕುಲಪತಿ, ಡಾ ನಾಗಸ್ವರೂಪ,, ರಿಜಿಸ್ಟ್ರಾರ್‌ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್‌ ಅವರನ್ನು ಪ್ರತಿವಾದಿಯನ್ನಾಗಿಸಿರುವ ಕೆಆರ್‌ಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಎನ್‌ ದೀಪಕ್‌ ಅವರು ದೂರಿನ ಜತೆಗೆ ಹಲವು ದಾಖಲೆಗಳನ್ನು ಒದಗಿಸಿದ್ದಾರೆ. ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಲವು ಅಕ್ರಮ, ಅವ್ಯವಹಾರಗಳ ಕುರಿತು ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯು ವರದಿ ಕೇಳಿ ನಿರ್ದೇಶನ ನೀಡಿರುವ ಬೆನ್ನಲ್ಲೇ ಲೋಕಾಯುಕ್ತಕ್ಕೆ ದಾಖಲಿಸಿರುವ ದೂರು ಮಹತ್ವ ಪಡೆದುಕೊಂಡಿದೆ.

 

 

ಶೋಧನಾ ಸಮಿತಿಯು ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲೇ ವಿಶ್ವವಿದ್ಯಾಲಯದ ಅಧಿಕಾರಿಗಳು 10 ಸೂಟ್‌ಕೇಸ್‌ಗಳನ್ನು ಖರೀದಿಸಲಾಗಿತ್ತು.

ಕುಲಪತಿ ನೇಮಕ ಪ್ರಕ್ರಿಯೆಗೆ 8 ಲಕ್ಷ ಖರ್ಚು; ಶೋಧನಾ ಸಮಿತಿ ಸದಸ್ಯರಿಗೆ 10 ಸೂಟ್‌ಕೇಸ್‌ ಖರೀದಿ

ನ್ಯಾಕ್‌ ಸಮಿತಿಯು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ 2 ಕೋಟಿ ರು.ಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿತ್ತು ಎಂದು ಸಿಂಡಿಕೇಟ್‌ ಉಪ ಸಮಿತಿಯು ವಿಚಾರಣೆಯಲ್ಲಿ ಸಾಬೀತುಪಡಿಸಿತ್ತು.

ನ್ಯಾಕ್‌ ಸಮಿತಿ ಪರಿಶೀಲನೆ ಪ್ರಕ್ರಿಯೆಗೆ 2 ಕೋಟಿಗೂ ಹೆಚ್ಚು ವೆಚ್ಚ; ವರದಿ ನೀಡಲು ನಿರ್ದೇಶನ ನೀಡಿದ ಸರ್ಕಾರ

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ, ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್‌ ಮತ್ತು ಸರ್ಕಾರದ ಗಮನಕ್ಕೆ ಬಾರದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಿಂಡಿಕೇಟ್‌ ಸದಸ್ಯರು ಸಲ್ಲಿಸಿರುವ ದೂರಿನಲ್ಲಿನ ಪ್ರತಿಯೊಂದು ಅಂಶಗಳಿಗೆ ಕಂಡಿಕೆವಾರು ಮಾಹಿತಿ/ವರದಿಯನ್ನು ಒಂದು ವಾರದೊಳಗೆ ನೀಡಬೇಕು,’ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್‌ ಎಂ ಹಿರೇಮಠ ಅವರು ಸೂಚಿಸಿದ್ದರು. ಆದರೆ ಇದುವರೆಗೂ ವರದಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

 

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಪ್ರಕ್ರಿಯೆ ವೇಳೆಯಲ್ಲಿ ವಿ ವಿ ಅಧಿಕಾರಿಗಳು 10 ಸೂಟ್‌ಕೇಸ್‌ಗಳನ್ನು ಖರೀದಿಸಿದ್ದರು. ಮತ್ತು ಶೋಧನಾ ಸಮಿತಿಯ ಖರ್ಚು ವೆಚ್ಚಗಳಿಗಾಗಿ ಸಿಂಡಿಕೇಟ್‌ ಅನುಮೋದನೆಯಿಲ್ಲದೆಯೇ ಮುಂಗಡವಾಗಿ ಎ ಸಿ ಬಿಲ್‌ನಲ್ಲಿ 5.00 ಲಕ್ಷ ರು.ಗಳನ್ನು ವಿವಿ ಅಧಿಕಾರಿಗಳು ಪಡೆದಿದ್ದರು.

 

ನ್ಯಾಕ್‌ ಸಮಿತಿ ಭೇಟಿ ಮತ್ತು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಆಗಿರುವ ವೆಚ್ಚವನ್ನು ಪರಿಶೀಲಿಸಿರುವ ಸಿಂಡಿಕೇಟ್‌ ಉಪ ಸಮಿತಿ ಸದಸ್ಯರುಗಳು ವೆಚ್ಚಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಿಲ್ಲ ಎಂಬುದನ್ನೂ ಸಿಂಡಿಕೇಟ್‌ ಉಪ ಸಮಿತಿ ಸದಸ್ಯರು ಪತ್ತೆ ಹಚ್ಚಿದ್ದರು.

 

8ನೇ ಘಟಿಕೋತ್ಸವಕ್ಕೆ ಶಾಮೀಯಾನಕ್ಕೆ ಹೆಚ್ಚುವರಿಯಾಗಿ 5,86,548 ರು., ಊಟೋಪಚಾರಕ್ಕೆಂದು 1,87, 030 ರು. ವೆಚ್ಚ ಮಾಡಲಾಗಿದೆ. 9ನೇ ಘಟಿಕೋತ್ಸವಕ್ಕೆ ಸಂಬಂಧಿಸಿದಂತೆ ಶಾಮೀಯಾನಕ್ಕೆ 6,39,029 ರು., ಊಟೋಪಚಾರಕ್ಕೆಂದು 3,98,899 ರು.ಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ ಎಂದು ಸಿಂಡಿಕೇಟ್‌ ಉಪ ಸಮಿತಿ ಸದಸ್ಯರುಗಳು ಬಹಿರಂಗಗೊಳಿಸಿದ್ದರು.

 

ಇದಲ್ಲದೇ ಸರ್ಕಾರದ ಜತೆ ಸಮಾಲೋಚನೆ ನಡೆಸದೆಯೇ 10 ಬೋಧಕೇತರ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು 2022ರ ಸೆ.19ರಂದು ಪ್ರಕಟಿಸಲಾಗಿತ್ತು. ಈ ಹುದ್ದೆಗಳಿಗೆ 2016,2017, 2018ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತಲ್ಲದೇ ಈಗಾಗಲೇ ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಯೂ ನಡೆಸಲಾಗಿದೆ. ಅರ್ಹತಾ ಪಟ್ಟಿ ಸಿದ್ಧಗೊಂಡಿದ್ದರೂ ಇನ್ನೂ ಪ್ರಕಟಿಸಿಲ್ಲ ಎಂದು ಸಿಂಡಿಕೇಟ್‌ ಸದಸ್ಯರುಗಳು ದೂರಿನಲ್ಲಿ ಉಲ್ಲೇಖಿಸಿದ್ದರು.

the fil favicon

SUPPORT THE FILE

Latest News

Related Posts